ಪ್ರಧಾನ ಮಂತ್ರಿಯವರ ಕಛೇರಿ

ಮಣಿಪುರದ ಇಂಫಾಲ್‌ನಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರ 'ಚಿಂತನ ಶಿಬಿರ' ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 24 APR 2023 10:44AM by PIB Bengaluru

ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನನ್ನ ಸಚಿವ ಸಂಪುಟ ಸಹೋದ್ಯೋಗಿ ಅನುರಾಗ್ ಠಾಕೂರ್ ಜಿ, ಎಲ್ಲಾ ರಾಜ್ಯಗಳ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರೆ, ಇಲ್ಲಿ ನೆರೆದಿರುವ ಎಲ್ಲಾ ಗಣ್ಯರು, ಮಹಿಳೆಯರು ಮತ್ತು ಸಜ್ಜನರೆ,

ಈ ವರ್ಷ ಮಣಿಪುರದ ನೆಲದಲ್ಲಿ ದೇಶದ ಕ್ರೀಡಾ ಸಚಿವರ ಸಮ್ಮೇಳನದ ‘ಚಿಂತನ ಶಿಬಿರ’ ನಡೆಯುತ್ತಿರುವುದು ಸಂತಸ ತಂದಿದೆ. ಈಶಾನ್ಯದ ಹಲವು ಕ್ರೀಡಾಪಟುಗಳು ತ್ರಿವರ್ಣ ಧ್ವಜವನ್ನು ವೈಭವೀಕರಿಸಿ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ. ಈಶಾನ್ಯ ಮತ್ತು ಮಣಿಪುರ ದೇಶದ ಕ್ರೀಡಾ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಕೊಡುಗೆ ನೀಡಿವೆ. ದೇಶೀಯ ಆಟಗಳಾದ ಸಾಗೋಲ್ ಕಾಂಗ್ಜೆಯಿ, ತಂಗ್-ಟಾ, ಯುಬಿ ಲಕ್ಪಿ, ಮುಕ್ನಾ ಮತ್ತು ಹಿಯಾಂಗ್ ತನ್ನಾಬಾ ತಮ್ಮದೇ ಆದ ರೀತಿ ಬಹಳ ಆಕರ್ಷಕವಾಗಿವೆ. ಉದಾಹರಣೆಗೆ, ಮಣಿಪುರದ ಊಲಾಬಿಯಲ್ಲಿ ಕಬಡ್ಡಿಯ ಒಂದು ನೋಟವಿದೆ. ಹಿಯಾಂಗ್ ತನ್ನಬಾ ಕೇರಳದ ದೋಣಿ ಸ್ಪರ್ಧೆಗಳನ್ನು ನೆನಪಿಸುತ್ತದೆ. ಮಣಿಪುರವು ಪೋಲೊ ಕ್ರೀಡೆಯೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ. ಈಶಾನ್ಯವು ದೇಶದ ಸಾಂಸ್ಕೃತಿಕ ವೈವಿಧ್ಯತೆಗೆ ಹೊಸ ಬಣ್ಣಗಳನ್ನು ಸೇರಿಸುವಂತೆ, ಇದು ದೇಶದ ಕ್ರೀಡಾ ವೈವಿಧ್ಯತೆಗೆ ಹೊಸ ಆಯಾಮ ನೀಡುತ್ತದೆ. ದೇಶಾದ್ಯಂತ ಇರುವ ಕ್ರೀಡಾ ಸಚಿವರು ಮಣಿಪುರದಿಂದ ಬಹಳಷ್ಟು ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಮಣಿಪುರ ಜನರ ಆತ್ಮೀಯತೆ ಮತ್ತು ಆತಿಥ್ಯವು ನಿಮ್ಮ ವಾಸ್ತವ್ಯವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ ಎಂಬುದು ನನಗೆ ಖಾತ್ರಿಯಿದೆ. ಈ ‘ಚಿಂತನ ಶಿಬಿರ’ದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾ ಸಚಿವರು ಮತ್ತು ಇತರೆ ಎಲ್ಲ ಗಣ್ಯರನ್ನು ನಾನು ಸ್ವಾಗತಿಸಿ, ಅಭಿನಂದಿಸುತ್ತೇನೆ.

ಸ್ನೇಹಿತರೆ,

ಯಾವುದೇ 'ಚಿಂತನ್ ಶಿವರ್' ಧ್ಯಾನದಿಂದ ಪ್ರಾರಂಭವಾಗುತ್ತದೆ, ಚಿಂತನೆಯೊಂದಿಗೆ ಮುಂದುವರಿಯುತ್ತದೆ ಮತ್ತು ಅನುಷ್ಠಾನದೊಂದಿಗೆ ಕೊನೆಗೊಳ್ಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಪ್ರತಿಬಿಂಬದಿಂದ ಪ್ರಾರಂಭವಾಗುತ್ತದೆ, ನಂತರ ಸಾಕ್ಷಾತ್ಕಾರ ಮತ್ತು ನಂತರ ಅನುಷ್ಠಾನ ಮತ್ತು ಕ್ರಿಯೆ. ಆದ್ದರಿಂದ, ನೀವು ಭವಿಷ್ಯದ ಗುರಿಗಳನ್ನು ಚರ್ಚಿಸಬೇಕು ಮತ್ತು ಹಿಂದಿನ ಸಮ್ಮೇಳನಗಳನ್ನು ಈ ‘ಚಿಂತನ ಶಿಬಿರ’ದಲ್ಲಿ ಪರಿಶೀಲಿಸಬೇಕು. ನಾವು 2022 ರಲ್ಲಿ ಕೆವಾಡಿಯಾದಲ್ಲಿ ಭೇಟಿಯಾದಾಗ, ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ನೀವು ನೆನಪಿಸಿಕೊಳ್ಳುತ್ತೀರಿ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಯನ್ನು ಸಿದ್ಧಪಡಿಸಲು ಮತ್ತು ಕ್ರೀಡೆಯ ಸುಧಾರಣೆಗಾಗಿ ಪರಿಸರ ವ್ಯವಸ್ಥೆಯನ್ನು ರಚಿಸಲು ನಾವು ಒಪ್ಪಿಕೊಂಡಿದ್ದೇವೆ. ಕ್ರೀಡಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವೆ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಬಗ್ಗೆ ನಾವು ಮಾತನಾಡಿದ್ದೇವೆ. ಆ ನಿಟ್ಟಿನಲ್ಲಿ ಇಂಫಾಲದಲ್ಲಿ ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ನೀವು ಗಮನಿಸಬೇಕು. ಮತ್ತು ಈ ವಿಮರ್ಶೆಯನ್ನು ನೀತಿಗಳು ಮತ್ತು ಕಾರ್ಯಕ್ರಮಗಳ ಮಟ್ಟದಲ್ಲಿ ಮಾತ್ರ ಮಾಡಬಾರದು ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಬದಲಿಗೆ, ನೀವು ಮೂಲಸೌಕರ್ಯ ಅಭಿವೃದ್ಧಿ, ಕಳೆದ ಒಂದು ವರ್ಷದ ಕ್ರೀಡಾ ಸಾಧನೆಗಳನ್ನು ಪರಿಶೀಲಿಸಬೇಕು.

ಸ್ನೇಹಿತರೆ,

ಕಳೆದ 1 ವರ್ಷದಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಅಸಾಧಾರಣ ಪ್ರದರ್ಶನ ನೀಡಿರುವುದು ನಿಜ. ನಾವು ಈ ಸಾಧನೆಗಳನ್ನು ಸಂಭ್ರಮಿಸುತ್ತಿರುವಾಗ, ನಾವು ನಮ್ಮ ಆಟಗಾರರಿಗೆ ಇನ್ನಷ್ಟು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಸಹ ಯೋಚಿಸಬೇಕು. ಮುಂಬರುವ ದಿನಗಳಲ್ಲಿ, ನಿಮ್ಮ ಸಚಿವಾಲಯ ಮತ್ತು ಇಲಾಖೆಗಳ ಸಿದ್ಧತೆಗಳನ್ನು ಸ್ಕ್ವಾಷ್ ವಿಶ್ವಕಪ್, ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಯೂತ್ ಮತ್ತು ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳಂತಹ ಕ್ರೀಡಾಕೂಟಗಳಲ್ಲಿ ಪರೀಕ್ಷಿಸಲಾಗುತ್ತದೆ. ಆಟಗಾರರು ಅವರ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದಾರೆ, ಆದರೆ ಈಗ ನಮ್ಮ ಸಚಿವಾಲಯಗಳು ಕ್ರೀಡಾ ಪಂದ್ಯಾವಳಿಗಳಿಗೆ ಸಂಬಂಧಿಸಿದಂತೆ ವಿಭಿನ್ನ ವಿಧಾನದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಫುಟ್‌ಬಾಲ್ ಮತ್ತು ಹಾಕಿಯಂತಹ ಕ್ರೀಡೆಗಳಲ್ಲಿ ಮನುಷ್ಯನಿಂದ ಮನುಷ್ಯನಿಗೆ ಗುರುತು ಮಾಡುವಂತೆಯೇ, ನೀವೆಲ್ಲರೂ ಮ್ಯಾಚ್ ಟು ಮ್ಯಾಚ್ ಮಾರ್ಕಿಂಗ್ ಮಾಡಬೇಕು. ಪ್ರತಿ ಪಂದ್ಯಾವಳಿಗೆ ವಿಭಿನ್ನ ತಂತ್ರಗಳನ್ನು ರೂಪಿಸಬೇಕು. ಪ್ರತಿ ಪಂದ್ಯಾವಳಿಯ ಪ್ರಕಾರ, ನೀವು ಕ್ರೀಡಾ ಮೂಲಸೌಕರ್ಯ ಮತ್ತು ಕ್ರೀಡಾ ತರಬೇತಿಯ ಮೇಲೆ ಗಮನ ಕೇಂದ್ರೀಕರಿಸಬೇಕು. ಅಲ್ಪಾವಧಿಯ, ಮಧ್ಯಮಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಸಹ ನೀವು ನಿರ್ಧರಿಸಬೇಕು.

ಸ್ನೇಹಿತರೆ,

ಆಟಗಳಿಗೆ ಇನ್ನೂ ಒಂದು ವಿಶೇಷತೆ ಇದೆ. ಒಬ್ಬ ಆಟಗಾರ ಮಾತ್ರ ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಫಿಟ್‌ನೆಸ್ ಸಾಧಿಸಬಹುದು, ಆದರೆ ಅತ್ಯುತ್ತಮ ಪ್ರದರ್ಶನಕ್ಕಾಗಿ ನಿರಂತರವಾಗಿ ಆಡುವುದು ಸಹ ಅಗತ್ಯವಾಗಿದೆ. ಆದ್ದರಿಂದ, ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಸ್ಪರ್ಧೆಗಳು ಮತ್ತು ಕ್ರೀಡಾ ಪಂದ್ಯಾವಳಿಗಳು ನಡೆಯುವುದು ಸಹ ಅಗತ್ಯವಾಗಿದೆ. ಪರಿಣಾಮವಾಗಿ, ಆಟಗಾರರು ಬಹಳಷ್ಟು ಕಲಿಯುತ್ತಾರೆ. ಕ್ರೀಡಾ ಮಂತ್ರಿಗಳಾದ ನೀವು ಯಾವುದೇ ಕ್ರೀಡಾ ಪ್ರತಿಭೆಯನ್ನು ಕಡೆಗಣಿಸದಂತೆ ನೋಡಿಕೊಳ್ಳಬೇಕು.

 

ಸ್ನೇಹಿತರೆ,

ನಮ್ಮ ದೇಶದ ಪ್ರತಿಯೊಬ್ಬ ಪ್ರತಿಭಾವಂತ ಆಟಗಾರನಿಗೆ ಗುಣಮಟ್ಟದ ಕ್ರೀಡಾ ಮೂಲಸೌಕರ್ಯವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ಖೇಲೋ ಇಂಡಿಯಾ ಯೋಜನೆಯು ಖಂಡಿತವಾಗಿಯೂ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸಿದೆ. ಆದರೆ ಈಗ ನಾವು ಈ ಉಪಕ್ರಮವನ್ನು ಬ್ಲಾಕ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ. ಖಾಸಗಿ ವಲಯ ಸೇರಿದಂತೆ ಎಲ್ಲಾ ಪಾಲುದಾರರ ಭಾಗವಹಿಸುವಿಕೆ ಮುಖ್ಯವಾಗಿದೆ. ರಾಷ್ಟ್ರೀಯ ಯುವಜನೋತ್ಸವಕ್ಕೆ ಸಂಬಂಧಿಸಿದಂತೆಯೂ ಸಮಸ್ಯೆಗಳಿವೆ.  ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಅದಕ್ಕೆ ಹೊಸ ರೀತಿಯ ಚಿಂತನೆಯ ಅಗತ್ಯವಿದೆ. ರಾಜ್ಯಗಳಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಕೇವಲ ಔಪಚಾರಿಕ ಕಾರ್ಯಕ್ರಮವಾಗದಂತೆ ನೋಡಿಕೊಳ್ಳಬೇಕು. ಇಂತಹ ಸರ್ವಾಂಗೀಣ ಪ್ರಯತ್ನಗಳು ನಡೆದಾಗ ಮಾತ್ರ ಭಾರತವು ಪ್ರಮುಖ ಕ್ರೀಡಾ ದೇಶವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಮತ್ತು ಸ್ಥಾಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಈಶಾನ್ಯದಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಉಪಕ್ರಮಗಳು ಸಹ ನಿಮಗೆ ದೊಡ್ಡ ಸ್ಫೂರ್ತಿಯಾಗಿದೆ. 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕ್ರೀಡಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಇಂದು ಈಶಾನ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿವೆ. ಇಂಫಾಲ್‌ನ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ದೇಶದ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ. ಖೇಲೋ ಇಂಡಿಯಾ ಯೋಜನೆ ಮತ್ತು ಟಾಪ್ಸ್ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈಶಾನ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 2 ಖೇಲೋ ಇಂಡಿಯಾ ಕೇಂದ್ರಗಳು ಮತ್ತು ಪ್ರತಿ ರಾಜ್ಯದಲ್ಲಿ ಖೇಲೋ ಇಂಡಿಯಾ ಶ್ರೇಷ್ಠತೆಯ ರಾಜ್ಯ ಕೇಂದ್ರ (ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್) ಅನ್ನು ಸ್ಥಾಪಿಸಲಾಗುತ್ತಿದೆ. ಈ ಪ್ರಯತ್ನಗಳು ಕ್ರೀಡಾ ಜಗತ್ತಿನಲ್ಲಿ ನವ ಭಾರತಕ್ಕೆ ಅಡಿಪಾಯವಾಗಲಿದೆ, ದೇಶಕ್ಕೆ ಹೊಸ ಗುರುತು ನೀಡುತ್ತದೆ. ನಿಮ್ಮ ರಾಜ್ಯಗಳಲ್ಲಿಯೂ ಇಂತಹ ಪ್ರಯತ್ನಗಳನ್ನು ನೀವು ವೇಗಗೊಳಿಸಬೇಕು. ಈ ದಿಸೆಯಲ್ಲಿ ಈ ‘ಚಿಂತನ ಶಿಬಿರ’ ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಪಾರ ನಂಬಿಕೆ ನನಗಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ!

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 



(Release ID: 1921710) Visitor Counter : 104