ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಫೆಬ್ರವರಿ 27ರಂದು ಕರ್ನಾಟಕಕ್ಕೆ ಭೇಟಿ


​​​​​​​ಶಿವಮೊಗ್ಗದಲ್ಲಿ 3600 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ

ಪ್ರಧಾನಮಂತ್ರಿ ಅವರಿಂದ ಬೆಳಗಾವಿಯಲ್ಲಿ ಪಿಎಂ-ಕಿಸಾನ್ ಯೋಜನೆಯಡಿ 13ನೇ ಕಂತಿನ 16,000 ಕೋಟಿ ಹಣ ಬಿಡುಗಡೆ

ಪ್ರಧಾನಿ ಅವರಿಂದ ಬೆಳಗಾವಿಯಲ್ಲಿ 2700 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ನವೀಕೃತ ಬೆಳಗಾವಿ ರೈಲು ನಿಲ್ದಾಣದ ಕಟ್ಟಡವನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

Posted On: 25 FEB 2023 1:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಫೆಬ್ರವರಿ 27ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ ಸುಮಾರು 11.45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಲಿದ್ದಾರೆ, ಆನಂತರ ಅವರು ಶಿವಮೊಗ್ಗದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸುವರು ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಬಳಿಕ ಮಧ್ಯಾಹ್ನ ಸುಮಾರು 3.15ಕ್ಕೆ ಪ್ರಧಾನಮಂತ್ರಿ ಅವರು ಬೆಳಗಾವಿಯಲ್ಲಿ ಹಲವು ಅಭಿವೃದ್ಧಿ ಉಪಕ್ರಮಗಳನ್ನು ಲೋಕಾರ್ಪಣೆಗೊಳಿಸುವರು ಮತ್ತು ಶಂಕುಸ್ಥಾಪನೆ ನೆರವೇರಿಸುವರು ಹಾಗೂ ಪಿಎಂ-ಕಿಸಾನ್ ಯೋಜನೆಯಡಿ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಶಿವಮೊಗ್ಗದಲ್ಲಿ ಪ್ರಧಾನಿ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಿಂದ ದೇಶಾದ್ಯಂತ ವೈಮಾನಿಕ ಸಂಪರ್ಕ ಸುಧಾರಣೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ. ಹೊಸ ವಿಮಾನ ನಿಲ್ದಾಣವನ್ನು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ  ಪ್ರಯಾಣಿಕರ ಟರ್ಮಿನಲ್ ಕಟ್ಟಡ ಪ್ರತಿ ಗಂಟೆಗೆ 300 ಪ್ರಯಾಣಿಕರನ್ನು ನಿರ್ವಹಿಸಲಿದೆ. ಈ ವಿಮಾನ ನಿಲ್ದಾಣ ಶಿವಮೊಗ್ಗ ಮತ್ತು ಅದರ ಸುತ್ತಮುತ್ತಲಿನ ಮಲೆನಾಡು ಭಾಗಕ್ಕೆ ಸಂಪರ್ಕವನ್ನು ಸುಧಾರಿಸಲಿದೆ.

ಪ್ರಧಾನಮಂತ್ರಿ ಅವರು, ಶಿವಮೊಗ್ಗದಲ್ಲಿ 2 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಇದರಲ್ಲಿ ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲ್ವೆ ಬೋಗಿ ಘಟಕ ಸೇರಿದೆ. ಶಿವಮೊಗ್ಗ – ರಾಣೆಬೆನ್ನೂರು ರೈಲು ಮಾರ್ಗವನ್ನು ಸುಮಾರು 990 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇದು ಮಲೆನಾಡು ಭಾಗದ ಬೆಂಗಳೂರು – ಮುಂಬೈ ಮುಖ್ಯರಸ್ತೆಗೆ ಸಂಪರ್ಕ ಒದಗಿಸಲಿದೆ. ಶಿವಮೊಗ್ಗ ನಗರದಲ್ಲಿನ ಕೋಟೆಗಂಗೂರು ರೈಲ್ವೆ ಬೋಗಿ ಘಟಕವನ್ನು 100 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಶಿವಮೊಗ್ಗದಿಂದ ಹೊಸ ರೈಲುಗಳ ಆರಂಭಕ್ಕೆ ಸಹಕಾರಿಯಾಗುವುದಲ್ಲದೆ, ಬೆಂಗಳೂರು ಮತ್ತು ಮೈಸೂರಿನಲ್ಲಿನ ನಿರ್ವಹಣಾ ಸೌಕರ್ಯದ ಮೇಲಿನ ಒತ್ತಡ ತಗ್ಗಿಸಲಿದೆ.

ಅಲ್ಲದೆ ಪ್ರಧಾನಿ ಅವರು, ಹಲವು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಅಭಿವೃದ್ಧಿ ಯೋಜನೆಗಳ ವೆಚ್ಚ ಒಟ್ಟಾರೆ 215 ಕೋಟಿ ರೂ.ಗಳಿಗೂ ಅಧಿಕವಾಗಿದ್ದು, ಇದರಲ್ಲಿ ಶಿಕಾರಿಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಗೆ ಬೈಂದೂರು -ರಾಣೆಬೆನ್ನೂರು ಸಂಪರ್ಕಿಸುವ ರಸ್ತೆಗೆ ಬೈಪಾಸ್ ರಸ್ತೆ ಅಭಿವೃದ್ಧಿ, ಮೇಗರವಳ್ಳಿಯಿಂದ ಆಗುಂಬೆವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ಅಗಲೀಕರಣ ಮತ್ತು ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 169ಕ್ಕೆ ಹೊಸ ಸೇತುವೆ ನಿರ್ಮಾಣ ಸೇರಿವೆ.

ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಜಲಜೀವನ್ ಮಿಷನ್ ಅಡಿ, 950 ಕೋಟಿ ರೂ.ಗೂ ಅಧಿಕ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಉದ್ಘಾಟಿಸುವರು ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಇದರಲ್ಲಿ ಗೌತಮಪುರ ಮತ್ತು 127 ಇತರ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಮತ್ತು 860 ಕೋಟಿ ರೂ.ಗೂ ಅಧಿಕ ಮೊತ್ತದ ಇತರ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು ಒಳಗೊಂಡಿದೆ. ಈ ನಾಲ್ಕು ಯೋಜನೆಗಳು ಜನವಸತಿಗಳಿಗೆ ಕೊಳಾಯಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಿದೆ ಮತ್ತು ಇದರಿಂದ ಒಟ್ಟಾರೆ 4.4 ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗಲಿದೆ.  

ಪ್ರಧಾನಮಂತ್ರಿ ಅವರು ಶಿವಮೊಗ್ಗ ನಗರದಲ್ಲಿ 895 ಕೋಟಿ ರೂ.ಗೂ ಅಧಿಕ ಮೊತ್ತದ 44 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಉದ್ಘಾಟಿಸುವರು. ಇದರಲ್ಲಿ 110 ಕಿ.ಮೀ. ಉದ್ದದ 8 ಸ್ಮಾರ್ಟ್ ರಸ್ತೆ ಪ್ಯಾಕೇಜ್ ಗಳು, ಏಕೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ವ್ಯವಸ್ಥೆ, ಸ್ಮಾರ್ಟ್ ಬಸ್ ನಿಲ್ದಾಣ ಯೋಜನೆ, ಆಧುನಿಕ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಶಿವಪ್ಪನಾಯಕನ ತಾಣವನ್ನು ಸಂವಾದಾತ್ಮಕ ಮ್ಯೂಸಿಯಂ ಆಗಿ ಪರಿವರ್ತಿಸುವುದು ಸೇರಿದಂತೆ ಪಾರಂಪರಿಕ ಯೋಜನೆಗಳ ಅಭಿವೃದ್ಧಿ, 90 ಓಣಿ ಮಾರ್ಗಗಳ ಅಭಿವೃದ್ಧಿ, ಉದ್ಯಾನವನಗಳ ನಿರ್ಮಾಣ ಹಾಗೂ ನದಿ ತಟದ ಅಭಿವೃದ್ಧಿ ಯೋಜನೆಗಳು ಒಳಗೊಂಡಿವೆ.  

ಬೆಳಗಾವಿಯಲ್ಲಿ ಪ್ರಧಾನಿ

ರೈತರ ಕಲ್ಯಾಣ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿ 13ನೇ ಕಂತಿನ 16,000 ಕೋಟಿ ರೂ.ಗಳನ್ನು 8 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುವರು. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷ ತಲಾ 2000 ರೂ.ನಂತೆ ಮೂರು ಸಮಾನ ಕಂತುಗಳಲ್ಲಿ 6000 ರೂ. ಧನ ಸಹಾಯ ಮಾಡಲಾಗುವುದು.

ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ನವೀಕೃತಗೊಂಡ ಬೆಳಗಾವಿ ರೈಲು ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ರೈಲು ನಿಲ್ದಾಣವನ್ನು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಕರ್ಯಗಳನ್ನು ಒದಗಿಸಲು ಸುಮಾರು 190 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಪ್ರಧಾನಿ ಅವರು, ಬೆಳಗಾವಿ ವಲಯದ ಲೋಂಡಾ – ಬೆಳಗಾವಿ – ಘಟಪ್ರಭಾ ಮಾರ್ಗದ ರೈಲು ಮಾರ್ಗ ಜೋಡಿ ಪಥವನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಯೋಜನೆಯನ್ನು 930 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜನದಟ್ಟಣೆ ಇರುವ ಮುಂಬೈ-ಪುಣೆ-ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ಸಾಮರ್ಥ್ಯವನ್ನು ವೃದ್ಧಿಸಲಿದೆ. ಇದು ಆ ಭಾಗದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ.

ಪ್ರಧಾನಮಂತ್ರಿ ಅವರು ಬೆಳಗಾವಿಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲಿರುವ 6 ಬಹುಮಾದರಿ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಇದನ್ನು 1585 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇದು 315ಕ್ಕೂ ಅಧಿಕ ಗ್ರಾಮಗಳ 808 ಲಕ್ಷ ಜನಸಂಖ್ಯೆಗೆ ಪ್ರಯೋಜನವಾಗಲಿದೆ.  

****



(Release ID: 1902325) Visitor Counter : 214