ಪ್ರಧಾನ ಮಂತ್ರಿಯವರ ಕಛೇರಿ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಲ್ಲಿ ಪ್ರಧಾನಮಂತ್ರಿಯವರು ಮುಂಬೈ-ಸೋಲಾಪುರ ವಂದೇ ಭಾರತ್ ಮತ್ತು ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್  ಗೆ ಚಾಲನೆ ನೀಡಿದರು


ರಾಷ್ಟ್ರಕ್ಕೆ ಎರಡು ರಸ್ತೆ ಯೋಜನೆಗಳ ಸಮರ್ಪಣೆ - ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರಸ್ತೆ ಮತ್ತು ಕುರಾರ್ ಅಂಡರ್ಪಾಸ್ ಯೋಜನೆ

"ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಎರಡು ವಂದೇ ಭಾರತ್ ರೈಲುಗಳು  ಚಾಲನೆಗೊಂಡಿರುವುದರಿಂದ  ರೈಲ್ವೆ ಮತ್ತು ಸಂಪರ್ಕಕ್ಕೆ ದೊಡ್ಡ ದಿನವಾಗಿದೆ"

"ಈ ವಂದೇ ಭಾರತ್ ರೈಲುಗಳು ಆರ್ಥಿಕ ಕೇಂದ್ರಗಳನ್ನು ಭಕ್ತಿಯ ಕೇಂದ್ರಗಳಿಗೆ ಸಂಪರ್ಕಿಸುತ್ತದೆ"

"ವಂದೇ ಭಾರತ್ ರೈಲು ಆಧುನಿಕ ಭಾರತದ ಭವ್ಯ ಚಿತ್ರ"

"ವಂದೇ ಭಾರತ್ ರೈಲುಗಳು ಭಾರತದ ವೇಗ ಮತ್ತು ಪ್ರಮಾಣದ ಪ್ರತಿಬಿಂಬವಾಗಿದೆ"

"ಈ ವರ್ಷದ ಬಜೆಟ್ನಿಂದ ಮಧ್ಯಮ ವರ್ಗವು ಬಲಗೊಂಡಿದೆ"

Posted On: 10 FEB 2023 4:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಲ್ಲಿ ಎರಡು ವಂದೇ ಭಾರತ್  ರೈಲುಗಳಿಗೆ ಚಾಲನೆ ನೀಡಿದರು. ಎರಡು ರೈಲುಗಳು ಮುಂಬೈ-ಸೋಲಾಪುರ ವಂದೇ ಭಾರತ್ ಮತ್ತು ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ರೈಲುಗಳು. ಅವರು ಎರಡು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು - ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರಸ್ತೆ ಮತ್ತು ಕುರಾರ್ ಅಂಡರ್ಪಾಸ್ ಯೋಜನೆ ರಸ್ತೆ  ಇವುಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಮುಂಬೈನಲ್ಲಿ ವಾಹನಗಳ ಚಲನೆಯನ್ನು ಸುಗಮಗೊಳಿಸುತ್ತವೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನ ಪ್ಲಾಟ್ಫಾರ್ಮ್ ಸಂಖ್ಯೆ. 18ಕ್ಕೆ ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ ಬಂದಾಗ ಪ್ರಧಾನಮಂತ್ರಿಯವರು ಅದನ್ನು  ಪರಿಶೀಲಿಸಿದರು. ಅವರು  ರೈಲಿನ ಸಿಬ್ಬಂದಿ ಮತ್ತು ಕೋಚ್ ನೊಳಗಿನ ಮಕ್ಕಳೊಂದಿಗೆ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ರೈಲ್ವೇಗೆ ಇದು ಒಂದು ದೊಡ್ಡ ದಿನವಾಗಿದೆ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಸುಧಾರಿತ ಸಂಪರ್ಕಕ್ಕಾಗಿ ಇದು ಮೊದಲ ಬಾರಿಗೆ ಒಂದೇ ದಿನದಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಈ ವಂದೇ ಭಾರತ್ ರೈಲುಗಳು ಮುಂಬೈ ಮತ್ತು ಪುಣೆಯಂತಹ ಆರ್ಥಿಕ ಕೇಂದ್ರಗಳನ್ನು ಶ್ರದ್ಧೆಯ ಕೇಂದ್ರಗಳಿಗೆ ಸಂಪರ್ಕಿಸುತ್ತದೆ, ಇದರಿಂದಾಗಿ ಕಾಲೇಜು, ಕಚೇರಿ, ವ್ಯಾಪಾರ, ತೀರ್ಥಯಾತ್ರೆ ಮತ್ತು ಕೃಷಿ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೆ ಅನುಕೂಲವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಹೊಸ ವಂದೇ ಭಾರತ ರೈಲುಗಳಿಂದ ಶಿರಡಿ, ನಾಸಿಕ್, ತ್ರಯಂಬಕೇಶ್ವರ, ಮತ್ತು ಪಂಚವಟಿಯಂತಹ ಪವಿತ್ರ ಸ್ಥಳಗಳಿಗೆ ಪ್ರಯಾಣಿಸಲು ಸುಲಭವಾಗುತ್ತದೆ, ಇದು ಪ್ರವಾಸೋದ್ಯಮಕ್ಕೆ ಮತ್ತು ತೀರ್ಥಯಾತ್ರೆಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. "ಪಂಢರಾಪುರ, ಸೋಲಾಪುರ, ಅಕ್ಕಲಕೋಟ್ ಮತ್ತು ತುಳಜಾಪುರದ ತೀರ್ಥಯಾತ್ರೆಗಳನ್ನು ಸೋಲಾಪುರ ವಂದೇ ಭಾರತ್ ಎಕ್ಸ್ಪ್ರೆಸ್ನೊಂದಿಗೆ ಯಾತ್ರೆಯು ಹೆಚ್ಚು ಸುಲಭವಾಗುವುದು " ಎಂದು ಅವರು ಹೇಳಿದರು.

ವಂದೇ ಭಾರತ್ ರೈಲು ಆಧುನಿಕ ಭಾರತದ ಭವ್ಯ ಚಿತ್ರವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಇದು ಭಾರತದ ವೇಗ ಮತ್ತು ಪ್ರಮಾಣದ ಪ್ರತಿಬಿಂಬವಾಗಿದೆ." ವಂದೇ ಭಾರತ್ ರೈಲುಗಳ ಸೇವೆಯ ಆರಂಭದ ವೇಗದ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಇದುವರೆಗೆ 10 ವಂದೇ ಭಾರತ್ ರೈಲುಗಳು ದೇಶದ 17 ರಾಜ್ಯಗಳ 108 ಜಿಲ್ಲೆಗಳನ್ನು ಸಂಪರ್ಕಿಸಲು ಪ್ರಾರಂಭಿಸಿವೆ ಎಂದು ತಿಳಿಸಿದರು. ಜೀವನ ಸೌಕರ್ಯವನ್ನು ಹೆಚ್ಚಿಸುವ ಅನೇಕ ಯೋಜನೆಗಳನ್ನು ಇಂದು ಪ್ರಾರಂಭಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಎಲಿವೇಟೆಡ್ ರಸ್ತೆಯು ಪೂರ್ವ ಮತ್ತು ಪಶ್ಚಿಮ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಅಂಡರ್ಪಾಸ್ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

21ನೇ ಶತಮಾನದ ಭಾರತಕ್ಕೆ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು ಏಕೆಂದರೆ ಇದು ನಾಗರಿಕರ ಜೀವನವನ್ನು ಹೆಚ್ಚು ಸುಗಮಗೊಳಿಸುತ್ತದೆ. ಈ ಚಿಂತನೆಯು ಆಧುನಿಕ ರೈಲುಗಳ ಪ್ರಾರಂಭ, ಮೆಟ್ರೋ ವಿಸ್ತರಣೆ ಮತ್ತು ಹೊಸ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಹಿಂದೆ ಇದೆ ಎಂದು ಅವರು ಗಮನಸೆಳೆದರು. ಮೊದಲ ಬಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕವಾಗಿ 10 ಲಕ್ಷ ಕೋಟಿ ಮೀಸಲಿಟ್ಟಿದ್ದರಿಂದ ಬಜೆಟ್ ಈ ಚಿಂತನೆಯನ್ನು ಬಲಪಡಿಸುತ್ತದೆ. ಇದರಲ್ಲಿ ರೈಲ್ವೇ ಪಾಲು 2.5 ಲಕ್ಷ ಕೋಟಿ ಎಂದು ಅವರು ಹೇಳಿದರು. ಮಹಾರಾಷ್ಟ್ರದ ರೈಲ್ವೇ ಬಜೆಟ್ ಕೂಡ ಅಭೂತಪೂರ್ವ ಏರಿಕೆ ಕಂಡಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಡಬಲ್ ಇಂಜಿನ್ ಸರ್ಕಾರದ ಪ್ರಯತ್ನದಿಂದ ಮಹಾರಾಷ್ಟ್ರದಲ್ಲಿ ಸಂಪರ್ಕವು ಶೀಘ್ರವಾಗಿ ಮುಂದುವರಿಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

"ಈ ಬಜೆಟ್ನಲ್ಲಿ ಮಧ್ಯಮ ವರ್ಗವನ್ನು ಬಲಪಡಿಸಲಾಗಿದೆ", ಈ ಬಾರಿಯ ಬಜೆಟ್ನಲ್ಲಿ ಸಂಬಳ ಪಡೆಯುವ ವರ್ಗ ಮತ್ತು ವ್ಯಾಪಾರ ಹೊಂದಿರುವವರ ಎರಡೂ ಅಗತ್ಯಗಳನ್ನು ಪೂರೈಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. 2014 ರ ಮೊದಲು 2 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಜನರಿಗೆ ತೆರಿಗೆ ವಿಧಿಸಲಾಗುತ್ತಿತ್ತು ಆದರೆ ಈಗಿನ ಸರ್ಕಾರವು ಅದನ್ನು ಆರಂಭದಲ್ಲಿ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಮತ್ತು ಈಗ 7 ಲಕ್ಷ ರೂಪಾಯಿಗಳಿಗೆ ಈ ವರ್ಷದ ಬಜೆಟ್ನಲ್ಲಿ ಹೆಚ್ಚಿಸಿದೆ ಎಂದು ಅವರು ಗಮನಿಸಿದರು. "ಯುಪಿಎ ಸರ್ಕಾರದಲ್ಲಿ 20% ತೆರಿಗೆ ಪಾವತಿಸಿದವರು ಇಂದು ಶೂನ್ಯ ತೆರಿಗೆ ಪಾವತಿಸುತ್ತಾರೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೊಸ ಉದ್ಯೋಗ ಹೊಂದಿರುವವರಿಗೆ ಈಗ ಹೆಚ್ಚಿನ ಉಳಿತಾಯ ಮಾಡಲು ಅವಕಾಶವಿದೆ ಎಂದು ಅವರು ಎತ್ತಿ ತೋರಿಸಿದರು.
‘ಸಬ್ಕಾ ವಿಕಾಸ್ ಸಬ್ಕಾ ಪ್ರಯಾಸ್’ಎನ್ನುವ ಮನೋಭಾವವನ್ನು ಉತ್ತೇಜಿಸುವ ಈ ಬಜೆಟ್ ಪ್ರತಿ ಕುಟುಂಬಕ್ಕೆ ಶಕ್ತಿ ನೀಡುತ್ತದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿ ಯವರು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಗವರ್ನರ್, ಶ್ರೀ ಭಗತ್ ಸಿಂಗ್ ಕೊಶ್ಯಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ, ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಕೇಂದ್ರ ರೈಲ್ವೇ ಸಚಿವ, ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ, ಶ್ರೀ ನಾರಾಯಣ ರಾಣೆ , ಕೇಂದ್ರ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠವಳೆ ಮತ್ತು ಶ್ರೀ ಕಪಿಲ್ ಮೊರೇಶ್ವರ ಪಾಟೀಲ್ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ :

ಮುಂಬೈ-ಸೋಲಾಪುರ ವಂದೇ ಭಾರತ್ ರೈಲು ಮತ್ತು ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ರೈಲು ರೈಲುಗಳಿಗೆ ಪ್ರಧಾನ ಮಂತ್ರಿಯವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಲ್ಲಿ ಚಾಲನೆ ನೀಡಿದರು.  ನವ ಭಾರತಕ್ಕಾಗಿ ಉತ್ತಮ, ಹೆಚ್ಚು ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಸಾರಿಗೆ ಮೂಲಸೌಕರ್ಯವನ್ನು ರಚಿಸುವ ಪ್ರಧಾನ ಮಂತ್ರಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

ಮುಂಬೈ-ಸೋಲಾಪುರ ವಂದೇ ಭಾರತ್ ರೈಲು ದೇಶದ  9ನೇ ವಂದೇ ಭಾರತ್ ರೈಲು ಆಗಲಿದೆ. ಹೊಸ ವಿಶ್ವದರ್ಜೆಯ ರೈಲು ಮುಂಬೈ ಮತ್ತು ಸೊಲ್ಲಾಪುರ ನಡುವೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸೋಲಾಪುರದ ಸಿದ್ಧೇಶ್ವರ, ಅಕ್ಕಲಕೋಟ, ತುಳಜಾಪುರ, ಸೋಲಾಪುರದ ಪಂಢರಪುರ ಮತ್ತು ಪುಣೆ ಬಳಿಯ ಆಳಂದಿಯಂತಹ ಪ್ರಮುಖ ಯಾತ್ರಾ ಕೇಂದ್ರಗಳಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ.

ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್, ದೇಶದ 10 ನೇ ವಂದೇ ಭಾರತ್ ರೈಲು ಮಹಾರಾಷ್ಟ್ರದ ಪ್ರಮುಖ ಯಾತ್ರಾ ಕೇಂದ್ರಗಳಾದ ನಾಸಿಕ್, ತ್ರಯಂಬಕೇಶ್ವರ, ಸಾಯಿನಗರ ಶಿರಡಿ ಮತ್ತು ಶನಿ ಸಿಂಗನಾಪುರಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆ.

ಮುಂಬೈನಲ್ಲಿ ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಪ್ರಧಾನಮಂತ್ರಿಯವರು ಸಾಂತಾಕ್ರೂಜ್ ಚೆಂಬೂರ್ ಲಿಂಕ್ ರಸ್ತೆ (ಎಸ್ ಸಿ ಎಲ್ ಆರ್) ಮತ್ತು ಕುರಾರ್ ಅಂಡರ್ಪಾಸ್ ಅನ್ನು ಲೋಕಾರ್ಪಣೆ ಮಾಡಿದರು. ಹೊಸದಾಗಿ ನಿರ್ಮಿಸಲಾದ ಎಲಿವೇಟೆಡ್ ಕಾರಿಡಾರ್ ಕುರ್ಲಾದಿಂದ ವಕೋಲಾ ಮತ್ತುಎಂಟಿಎನ್ಎಲ್ ಜಂಕ್ಷನ್, ಬಿಕೆಸಿ ಯಿಂದ ಕುರ್ಲಾದಲ್ಲಿ ಎಲ್ ಬಿ ಎಸ್ ಫ್ಲೈಓವರ್ ವರೆಗೆ ನಗರದಲ್ಲಿ ಹೆಚ್ಚು ಅಗತ್ಯವಿರುವ ಪೂರ್ವ-ಪಶ್ಚಿಮದ ಸಂಪರ್ಕವನ್ನು ಹೆಚ್ಚಿಸುತ್ತದೆ.  ಈ ರಸ್ತೆಗಳು ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯನ್ನು ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಗೆ ಸಂಪರ್ಕಿಸುತ್ತದೆ ಮತ್ತು ಪೂರ್ವ ಮತ್ತು ಪಶ್ಚಿಮ ಉಪನಗರಗಳನ್ನು ಪರಿಣಾಮಕಾರಿಯಾಗಿ ಸಂಪರ್ಕಿಸುತ್ತದೆ. ಡಬ್ಲ್ಯೂಇಎಚ್ ನ ಮಲಾಡ್ ಮತ್ತು ಕುರಾರ್ ಬದಿಗಳನ್ನು ಸಂಪರ್ಕಿಸುವ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇ (ಡಬ್ಲ್ಯೂಇಎಚ್) ನಲ್ಲಿ ವಾಹನ ದಟ್ಟಣೆಯನ್ನು ಸುಲಭಗೊಳಿಸಲು ಕುರಾರ್ ಅಂಡರ್ಪಾಸ್ ನಿರ್ಣಾಯಕವಾಗಿದೆ. ಇದು ಜನರು ಸುಲಭವಾಗಿ ರಸ್ತೆ ದಾಟಲು ಮತ್ತು ಡಬ್ಲ್ಯೂಇಎಚ್ ನಲ್ಲಿ ಭಾರೀ ದಟ್ಟಣೆಗೆ ಸಿಲುಕದೆ ವಾಹನಗಳು ಚಲಿಸಲು ಅನುವು ಮಾಡಿಕೊಡುತ್ತದೆ.

*****



(Release ID: 1898167) Visitor Counter : 141