ಪ್ರಧಾನ ಮಂತ್ರಿಯವರ ಕಛೇರಿ

ಎನ್‌ಸಿಸಿ ಕೆಡೆಟ್‌ಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 


"ಜೈ ಹಿಂದ್ ಮಂತ್ರವು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ"

"ಯುವಜನತೆಯೊಂದಿಗೆ ಸಂವಹನ ನಡೆಸುವುದೆಂದರೆ ನನಗೆ ಯಾವಾಗಲೂ ವಿಶೇಷವಾಗಿರುತ್ತದೆ"

"ಎನ್ ಸಿಸಿ ಮತ್ತು ಎನ್ ಎಸ್ ಎಸ್ ಗಳು ಯುವ ಪೀಳಿಗೆಯನ್ನು ರಾಷ್ಟ್ರೀಯ ಗುರಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿ, ಕಾಳಜಿಗಳ ಜೊತೆ ಬೆಸೆಯುತ್ತದೆ'' 

 'ವಿಕ್ಷಿತ್ ಭಾರತ್' ನ ದೊಡ್ಡ ಫಲಾನುಭವಿಗಳು ನೀವಾಗಲಿದ್ದು, ಅದನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿಯನ್ನು ನೀವು ಹೊಂದಿದ್ದೀರಿ

"ಭಾರತದ ಸಾಧನೆಗಳಲ್ಲಿ ಜಗತ್ತು ತನಗಾಗಿ ಹೊಸ ಭವಿಷ್ಯವನ್ನು ನೋಡುತ್ತದೆ"

“ನಿಮ್ಮ ಗುರಿಗಳನ್ನು ದೇಶದ ಗುರಿಗಳೊಂದಿಗೆ ಬೆಸೆದಾಗ ನಿಮ್ಮ ಯಶಸ್ಸಿನ ವ್ಯಾಪ್ತಿ ವಿಸ್ತಾರವಾಗುತ್ತದೆ. ನಿಮ್ಮ ಯಶಸ್ಸನ್ನು ಭಾರತದ ಯಶಸ್ಸು ಎಂದು ಜಗತ್ತು ನೋಡುತ್ತದೆ''.

"ಭಾರತದ ಯುವಕರು ಕಾಣದಿರುವ ಸಾಧ್ಯತೆಗಳನ್ನು ಹುಡುಕಬೇಕು, ಊಹಿಸಲಾಗದ ಪರಿಹಾರಗಳನ್ನು ಅನ್ವೇಷಿಸಬೇಕು"

“ನೀವು ಯುವಕರು, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿಮಗಿದು ಸರಿಯಾದ ಸಮಯ. ಹೊಸ ಆಲೋಚನೆಗಳು ಮತ್ತು ಹೊಸ ಮಾನದಂಡಗಳ ಸೃಷ್ಟಿಕರ್ತರು ನೀವು. ನವ ಭಾರತದ ಹಾದಿಯನ್ನು ಶೋಧಿಸುವವರು ನೀವು''

Posted On: 25 JAN 2023 5:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎನ್ ಸಿಸಿ ಕೆಡೆಟ್‌ಗಳು ಮತ್ತು ಎನ್ ಎಸ್ ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರೀತಿ ವೇಷವನ್ನು ಧರಿಸಿ ಅಸಂಖ್ಯ ಮಕ್ಕಳು ಪ್ರಧಾನಮಂತ್ರಿಯವರ ನಿವಾಸಕ್ಕೆ ಬಂದಿರುವುದು ಇದೇ ಮೊದಲು ಎಂದು ಹರ್ಷವ್ಯಕ್ತಪಡಿಸಿದರು. "ಜೈ ಹಿಂದ್ ಮಂತ್ರವು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಹೇಳಿದರು.

ಹಿಂದಿನ ವಾರಗಳಲ್ಲಿ ದೇಶದ ಯುವಕರೊಂದಿಗೆ ನಡೆಸಿದ್ದ ಸಂವಾದವನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿಗಳು, ತಿಂಗಳ ಹಿಂದೆ ವೀರ್ ಬಾಲ್ ದಿವಸ್ ನ್ನು ಆಚರಿಸಿರುವ ವಿಚಾರವನ್ನು ಪ್ರಸ್ತಾಪಿಸಿದರು. ವೀರ್ ಸಾಹೇಬ್ಜಾಡೆಸ್ ಅವರ ಶೌರ್ಯ, ಸಾಹಸಗಳನ್ನು ದೇಶಾದ್ಯಂತ ಆಚರಿಸಲಾಯಿತು. ಕರ್ನಾಟಕದ ಧಾರವಾಡದಲ್ಲಿ ಏರ್ಪಟ್ಟಿದ್ದ ರಾಷ್ಟ್ರೀಯ ಯುವ ಉತ್ಸವ, ಅಗ್ನಿವೀರರ ಮೊದಲ ತಂಡದ ಜೊತೆಗೆ ನಡೆಸಿದ್ದ ಸಂವಾದ, ಉತ್ತರ ಪ್ರದೇಶದ ಖೇಲ್ ಮಹಾಕುಂಭದಲ್ಲಿ ಯುವ ಕ್ರೀಡಾಪಟುಗಳು, ಸಂಸತ್ತು ಮತ್ತು ತಮ್ಮ ನಿವಾಸದಲ್ಲಿ ಮಕ್ಕಳು ಮತ್ತು ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರ ಜೊತೆ ನಡೆಸಿದ ಸಂವಾದಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಇದೇ 27 ರಂದು ವಿದ್ಯಾರ್ಥಿಗಳೊಂದಿಗೆ ನಡೆಸಲಿರುವ ಪರೀಕ್ಷಾ ಪೆ ಚರ್ಚಾ ಸಂವಾದವನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. 

ಇಂದು ಯುವಕರೊಂದಿಗೆ ನಡೆಸುತ್ತಿರುವ ಈ ಸಂವಾದದ ಪ್ರಾಮುಖ್ಯತೆಗೆ ಎರಡು ಮುಖ್ಯ ಕಾರಣಗಳನ್ನು ಪ್ರಧಾನಿ ವಿವರಿಸಿದರು. ಮೊದಲನೆಯದಾಗಿ ಈ ದೇಶದ ಯುವಜನತೆಯಲ್ಲಿರುವ ಅದಮ್ಯ ಉತ್ಸಾಹ, ಶಕ್ತಿ, ತಾಜಾತನ, ನವೀನತೆಯಿಂದಾಗಿ ಸಕಾರಾತ್ಮ ಭಾವನೆ ತಮ್ಮಲ್ಲಿ ಬೆಳೆಯುತ್ತಿದ್ದು, ಇದರಿಂದ ಹಗಲಿರುಳು ದಣಿವರಿಯದೆ ದುಡಿಯಲು ಪ್ರೇರಣೆ ಸಿಗುತ್ತದೆ ಎಂದರು. ಎರಡನೆಯದಾಗಿ, "ಈ 'ಅಮೃತ್ ಕಾಲ'ದಲ್ಲಿ ನೀವೆಲ್ಲರೂ ಕನಸುಗಳ ಆಕಾಂಕ್ಷೆಗಳನ್ನು ಪ್ರತಿನಿಧಿಸುವವರಾಗಿದ್ದು, ನೀವು 'ವಿಕ್ಷಿತ್ ಭಾರತ್' ನ ದೊಡ್ಡ ಫಲಾನುಭವಿಯಾಗಲಿದ್ದೀರಿ. ಅದನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿಯನ್ನು ನೀವು ಹೊಂದಿದ್ದೀರಿ" ಎಂದು ಪ್ರಧಾನ ಮಂತ್ರಿಗಳು ಯುವಸಮೂಹಕ್ಕೆ ಹೇಳಿದರು. 

ಸಾರ್ವಜನಿಕ ಜೀವನದ ವಿವಿಧ ಆಯಾಮಗಳಲ್ಲಿ ಯುವಕರ ಪಾತ್ರ ಹೆಚ್ಚುತ್ತಿರುವುದು ಉತ್ತೇಜನಕಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಪರಾಕ್ರಮ್ ದಿವಸ್ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಇತರ ಕಾರ್ಯಕ್ರಮಗಳಲ್ಲಿ ಯುವಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ಅವರು ಸ್ಮರಿಸಿದರು. ಇದು ಯುವಕರ ಕನಸುಗಳು ಮತ್ತು ದೇಶಕ್ಕಾಗಿ ಸಮರ್ಪಣೆಯ ಪ್ರತಿಬಿಂಬವಾಗಿದೆ ಎಂದರು. 

ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಎನ್‌ಸಿಸಿ ಕೆಡೆಟ್ ಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರ ಕೊಡುಗೆಗಳನ್ನು ಪ್ರಧಾನ ಮಂತ್ರಿಗಳು ವಿಶೇಷವಾಗಿ ಪ್ರಸ್ತಾಪಿಸಿದರು. ಅಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ದೇಶದ ಗಡಿ ಮತ್ತು ಕರಾವಳಿ ಪ್ರದೇಶಗಳು ಎದುರಿಸುತ್ತಿರುವ ಸವಾಲುಗಳಿಗೆ ಯುವಕರನ್ನು ಸಿದ್ಧಗೊಳಿಸಲು ಸರ್ಕಾರದ ಸಿದ್ಧತೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ವಿಶೇಷ ತರಬೇತಿಯನ್ನು ನೀಡುವ ದೇಶದ ಹತ್ತಾರು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದಕ್ಕೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಹಾಯ ಪಡೆಯಲಾಗುತ್ತಿದೆ ಎಂದರು.

ಈ ಕಾರ್ಯದಿಂದ ಯುವಕರನ್ನು ಭವಿಷ್ಯಕ್ಕೆ ಸಿದ್ಧಪಡಿಸುವುದು ಮಾತ್ರವಲ್ಲದೆ, ಅಗತ್ಯವಿರುವ ಸಮಯದಲ್ಲಿ ಮೊದಲ ಪ್ರತಿಸ್ಪಂದಕರಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಅವರು ಗಮನಿಸಿದರು. ದೇಶದ ಗಡಿಯ ಸಮೀಪವಿರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುತ್ತಿರುವ ವೈವಿಧ್ಯಮಯ ಗಡಿ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. "ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಉತ್ತಮ ಅವಕಾಶಗಳನ್ನು ಸೃಷ್ಟಿಸಿದ ಹಳ್ಳಿಗಳಿಗೆ ಕುಟುಂಬಗಳು ಮರಳಲು ಗಡಿ ಪ್ರದೇಶಗಳಲ್ಲಿ ಯುವಕರ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಪ್ರಧಾನಮಂತ್ರಿಗಳು ಹೇಳಿದರು.

ಕೆಡೆಟ್‌ಗಳ ಪ್ರತಿಯೊಂದು ಯಶಸ್ಸಿನ ಹಿಂದೆ ಅವರ ಪೋಷಕರು ಮತ್ತು ಕುಟುಂಬದವರ ಕೊಡುಗೆ ಇರುತ್ತದೆ. ಅದಕ್ಕೆ 'ಸಬ್ಕಾ ಸಾಥ್' ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಕಾರಣ ಎಂದು ಪ್ರಧಾನಮಂತ್ರಿ ಹೇಳಿದರು. “ನಿಮ್ಮ ಗುರಿ ಉದ್ದೇಶಗಳನ್ನು ದೇಶದ ಗುರಿಗಳೊಂದಿಗೆ ಬೆಸೆದಾಗ ನಿಮ್ಮ ಯಶಸ್ಸಿನ ವ್ಯಾಪ್ತಿ ವಿಸ್ತಾರವಾಗುತ್ತದೆ. ನಿಮ್ಮ ಯಶಸ್ಸನ್ನು ಜಗತ್ತು ಭಾರತದ ಯಶಸ್ಸಿನಂತೆ ನೋಡುತ್ತದೆ” ಎಂದು ಪ್ರಧಾನಮಂತ್ರಿ ಕಿವಿಮಾತು ಹೇಳಿದರು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಹೋಮಿ ಜಹಾಂಗೀರ್ ಬಾಬಾ ಮತ್ತು ಡಾ.ಸಿ.ವಿ.ರಾಮನ್ ಅವರಂತಹ ವಿಜ್ಞಾನಿಗಳು, ಮೇಜರ್ ಧ್ಯಾನಚಂದ್ ಮತ್ತು ಇತರ ಕ್ರೀಡಾ ವ್ಯಕ್ತಿಗಳ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಇಡೀ ಜಗತ್ತು ಅವರ ಮೈಲಿಗಲ್ಲುಗಳು ಮತ್ತು ಸಾಧನೆಗಳನ್ನು ಭಾರತದ ಯಶಸ್ಸು ಎಂದು ಪರಿಗಣಿಸುತ್ತದೆ ಎಂದು ಹೇಳಿದರು. "ಭಾರತದ ಸಾಧನೆಗಳಲ್ಲಿ ಜಗತ್ತು ತನಗಾಗಿ ಹೊಸ ಭವಿಷ್ಯವನ್ನು ನೋಡುತ್ತದೆ" ಸಬ್ಕಾ ಪ್ರಯಾಸ್ ನ ಚೈತನ್ಯದ ಶಕ್ತಿಯನ್ನು ಗಮನಿಸಿದ ಪ್ರಧಾನಮಂತ್ರಿಯವರು, ಐತಿಹಾಸಿಕ ಯಶಸ್ಸುಗಳು ಇಡೀ ಮಾನವಕುಲದ ಅಭಿವೃದ್ಧಿಯ ಮೆಟ್ಟಿಲುಗಳಾಗುತ್ತವೆ ಎಂದು ಹೇಳಿದರು.

ಯುವಜನರಿಗೆ ಅಭೂತಪೂರ್ವ ಅವಕಾಶಗಳಾಗಿರುವ ಪ್ರಸ್ತುತ ಕಾಲಮಿತಿಯ ಮತ್ತೊಂದು ವಿಶಿಷ್ಟತೆಯನ್ನು ಪ್ರಧಾನಿ ಒತ್ತಿ ಹೇಳಿದರು. ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಮತ್ತು ಮಾನವೀಯತೆಯ ಭವಿಷ್ಯದ ಮೇಲೆ ಭಾರತದ ಗಮನವು ಹೊಸ ಸ್ಫೂರ್ತಿಗಳಂತಹ ಅಭಿಯಾನಗಳನ್ನು ಅವರು ಉಲ್ಲೇಖಿಸಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್,ಮೆಶಿನ್ ಲರ್ನಿಂಗ್ ಮತ್ತು ಇತರ ಭವಿಷ್ಯದ ತಂತ್ರಜ್ಞಾನಗಳಲ್ಲಿ ದೇಶವು ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು. ಕ್ರೀಡೆ ಮತ್ತು ಇತರ ಚಟುವಟಿಕೆಗಳಿಗೆ ಜಾರಿಯಲ್ಲಿರುವ ದೃಢವಾದ ವ್ಯವಸ್ಥೆಯನ್ನು ಅವರು ಗಮನಿಸಿದರು. “ನೀವು ಇವೆಲ್ಲದರ ಭಾಗವಾಗಬೇಕು, ಕಾಣಿಸದೇ ಇರುವ ಸಾಧ್ಯತೆಗಳನ್ನು ನೀವು ಹುಡುಕಬೇಕು, ಗೋಚರವಾಗದಿರುವ ಇದುವರೆಗೆ ಕಂಡುಬರದಿರುವ ಪ್ರದೇಶಗಳನ್ನು ಶೋಧಿಸಬೇಕು, ಊಹಿಸಲು ಸಾಧ್ಯವಾಗದಿರುವ ಪರಿಹಾರಗಳನ್ನು ಕಂಡುಕೊಳ್ಳಬೇಕು'' ಎಂದರು.

ಭವಿಷ್ಯದ ಗುರಿಗಳು ಮತ್ತು ನಿರ್ಣಯಗಳು ದೇಶಕ್ಕೆ ಅತ್ಯಂತ ಮಹತ್ವವಾಗಿವೆ ಎಂದ ಪ್ರಧಾನಮಂತ್ರಿಗಳು, ವರ್ತಮಾನದ ಪ್ರಮುಖ ಆದ್ಯತೆಯ ಕ್ಷೇತ್ರಗಳಿಗೆ ಸಮಾನವಾದ ಒತ್ತು ನೀಡಬೇಕಾಗಿದೆ ಎಂದು ಹೇಳಿದರು. ದೇಶದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಯುವಜನರು ಜಾಗೃತರಾಗಬೇಕು. ಪ್ರಚಲಿತ ನಡೆಯುತ್ತಿರುವ ಅಭಿಯಾನಗಳಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ದೇಶದ ಪ್ರತಿಯೊಬ್ಬ ಯುವಕರು ಇದನ್ನು ಜೀವನ ಧ್ಯೇಯವಾಗಿ ತೆಗೆದುಕೊಳ್ಳಬೇಕು. ತಮ್ಮ ಪ್ರದೇಶ, ಗ್ರಾಮ, ಪಟ್ಟಣಗಳು ​​ಮತ್ತು ನಗರಗಳನ್ನು ಸ್ವಚ್ಛವಾಗಿಡಲು ಸಲಹೆ ನೀಡಿದರು. ಅದೇ ರೀತಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಒಂದು ಪುಸ್ತಕವನ್ನಾದರೂ ಓದುವಂತೆ ತಿಳಿಸಿದರು. ಕೆಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಕವನ, ಕಥೆ ಅಥವಾ ಬ್ಲಾಗ್ ಗಳಂತಹ ಕೆಲವು ಸೃಜನಶೀಲ ಚಟುವಟಿಕೆಯನ್ನು ಕೈಗೊಳ್ಳಲು ಮತ್ತು ಈ ಚಟುವಟಿಕೆಗಳಿಗೆ ಸ್ಪರ್ಧೆಗಳನ್ನು ನಡೆಸಲು ಶಾಲೆಗಳಲ್ಲಿ ಒತ್ತಾಯ ಮಾಡಬೇಕೆಂದು ಕೇಳಿಕೊಂಡರು. ಯುವಕರು ತಮ್ಮ ಜಿಲ್ಲೆಗಳಲ್ಲಿ ನಿರ್ಮಿಸಲಾಗುತ್ತಿರುವ ಅಮೃತ್ ಸರೋವರಗಳ ಬಳಿ ಅರಣ್ಯೀಕರಣ ಕಾರ್ಯವನ್ನು ಕೈಗೊಳ್ಳಲು ಮತ್ತು ಅವುಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ಸಲಹೆ ನೀಡಿದರು. ಯುವಕರು ಫಿಟ್ ಇಂಡಿಯಾ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಕುಟುಂಬದ ಸದಸ್ಯರ ಮನವೊಲಿಸುವಂತೆ ತಿಳಿಸಿದರು. ಪ್ರತಿ ಮನೆಯಲ್ಲೂ ಯೋಗ ಸಂಸ್ಕೃತಿಯನ್ನು ಬಿತ್ತರಿಸುವಂತೆ ತಿಳಿಸಿದರು. G-20 ಶೃಂಗಸಭೆಯ ಕುರಿತು ಯುವಜನರು ತಿಳಿದುಕೊಂಡು ತೊಡಗಿಸಿಕೊಳ್ಳಬೇಕು, ಭಾರತದ ಅಧ್ಯಕ್ಷತೆ ಬಗ್ಗೆ ಸಕ್ರಿಯ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದರು.

'ನಮ್ಮ ಪರಂಪರೆಯಲ್ಲಿ ಹೆಮ್ಮೆ' ಮತ್ತು 'ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ' ಎಂಬ ನಿರ್ಣಯವನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ನಿರ್ಣಯಗಳಲ್ಲಿ ಯುವಕರ ಪಾತ್ರವನ್ನು ಎತ್ತಿ ತೋರಿಸಿದರು. ಯುವಜನತೆ ತಮ್ಮ ಪ್ರವಾಸದಲ್ಲಿ ಪಾರಂಪರಿಕ ತಾಣಗಳನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. “ನೀವು ಚಿಕ್ಕವರು, ನಿಮ್ಮ ಭವಿಷ್ಯವನ್ನು ರೂಪಿಸುವ ಸಮಯ. ಹೊಸ ಆಲೋಚನೆಗಳು ಮತ್ತು ಹೊಸ ಮಾನದಂಡಗಳ ಸೃಷ್ಟಿಕರ್ತರು ನೀವು. ನವಭಾರತ ಪರಿಕಲ್ಪನೆಗೆ ದಾರಿ ತೋರಿಸಿ ನಡೆಸಿಕೊಂಡು ಹೋಗುವವರು ನೀವು ಎಂದು ಹೇಳಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತು ಮುಗಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್, ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡಾ, ಕೇಂದ್ರ ಇಲಾಖೆ ರಾಜ್ಯ ಸಚಿವರುಗಳಾದ ಶ್ರೀ ಅಜಯ್ ಭಟ್, ಶ್ರೀಮತಿ. ರೇಣುಕಾ ಸಿಂಗ್ ಸರೂತ ಮತ್ತು ಶ್ರೀ ನಿಶಿತ್ ಪ್ರಮಾಣಿಕ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****



(Release ID: 1893812) Visitor Counter : 130