ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ಅತಿದೊಡ್ಡ ಹೆಸರಿಡದ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನಿಡುವ ಸಮಾರಂಭದಲ್ಲಿ ಭಾಗವಹಿಸಿದರು. ನೇತಾಜಿಯವರಿಗೆ ಸಮರ್ಪಿತವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಅನಾವರಣಗೊಳಿಸಿದರು


ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪೋರ್ಟ್ ಬ್ಲೇರ್ ನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಂದು ದೇಶದ ಎಲ್ಲ ತ್ರಿಶಕ್ತಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ ಏಕೆಂದರೆ ಇದಕ್ಕೂ ಮೊದಲು ವಿಶ್ವದ ಯಾವುದೇ ದೇಶವು ದ್ವೀಪಗಳಿಗೆ ಸೈನಿಕರ ಹೆಸರನ್ನು ಇಡುವ ಮೂಲಕ ಸೈನಿಕರ ಶೌರ್ಯವನ್ನು ಗೌರವಿಸಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು.

ನಮ್ಮ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಶಾಶ್ವತ ಸ್ಮರಣೆಯನ್ನು ಸೃಷ್ಟಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಯತ್ನವು ಮೂರೂ ಪಡೆಗಳಿಗೆ ಬಹಳ ಉತ್ತೇಜನಕಾರಿಯಾಗಿದೆ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಟಿಯಿಲ್ಲದ ಕೊಡುಗೆ ನೀಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯಂದು, ಸುಭಾಷ್ ಸ್ಮಾರಕವನ್ನು ಘೋಷಿಸಲಾಗಿದೆ.

ಇಂದು, 21 ದ್ವೀಪಗಳಿಗೆ ಧೈರ್ಯಶಾಲಿಗಳ ಹೆಸರನ್ನು ಇಡುವ ಮೂಲಕ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರ ಶೌರ್ಯವನ್ನು ಗೌರವಿಸಿದ್ದಾರೆ, ಇಡೀ ಭಾರತದ ಇತಿಹಾಸವನ್ನು ಬರೆಯುವಾಗಲೆಲ್ಲಾ, ಈ ಘಟನೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಗೆದುಕೊಂಡ ಈ ಎರಡೂ ನಿರ್ಧಾರಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ವಾತಂತ್ರ್ಯದ ನೆನಪುಗಳನ್ನು ಇಡೀ ದೇಶದೊಂದಿಗೆ ಸಂಪರ್ಕಿಸಲಿವೆ, ಈ ನಿರ್ಧಾರಗಳ ಮೂಲಕ ಭಾರತದ ಯುವ ಪೀಳಿಗೆಗೆ ದೇಶಭಕ್ತಿ ಮತ್ತು ಶೌರ್ಯದ ಸಂದೇಶ ಮತ್ತು ಆದರ್ಶಗಳನ್ನು ನೀಡಲಾಗುವುದು.

ಸುಭಾಷ್ ಚಂದ್ರ ಬೋಸ್ ಅವರನ್ನು ಮರೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಯಿತು, ಆದರೆ ವೀರರು ಸ್ಮರಣೆಗಾಗಿ ಯಾರನ್ನೂ ಅವಲಂಬಿಸಿಲ್ಲ, ನೆನಪು ಅವರ ಧೈರ್ಯಕ್ಕೆ ಸಂಬಂಧಿಸಿದೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಸುಬೇದಾರ್ ಮೇಜರ್ ನಿವೃತ್ತ (ಗೌರವಾನ್ವಿತ ಕ್ಯಾಪ್ಟನ್), ಯೋಗೇಂದ್ರ ಸಿಂಗ್ ಯಾದವ್, ಸುಬೇದಾರ್ ಮೇಜರ್ ಸಂಜಯ್ ಕುಮಾರ್, ನೈಬ್ ಸುಬೇದಾರ್ ಬನಾ ಸಿಂಗ್ ಮತ್ತು ಇತರ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಿದರು.

Posted On: 23 JAN 2023 5:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ 21 ಅತಿ ದೊಡ್ಡ ಹೆಸರಿಡದ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡುವ ಸಮಾರಂಭದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೇತಾಜಿಗೆ ಸಮರ್ಪಿತವಾದ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಅನಾವರಣಗೊಳಿಸಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪೋರ್ಟ್ ಬ್ಲೇರ್ ನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು. ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಸುಬೇದಾರ್ ಮೇಜರ್ ನಿವೃತ್ತ (ಗೌರವಾನ್ವಿತ ಕ್ಯಾಪ್ಟನ್) ಯೋಗೇಂದ್ರ ಸಿಂಗ್ ಯಾದವ್, ಸುಬೇದಾರ್ ಮೇಜರ್ ಸಂಜಯ್ ಕುಮಾರ್, ನೈಬ್ ಸುಬೇದಾರ್ ಬನಾ ಸಿಂಗ್ ಮತ್ತು ಇತರ ಸೈನಿಕರ ಕುಟುಂಬ ಸದಸ್ಯರನ್ನು ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ. ಕೆ. ಜೋಶಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001ZXGI.jpg

ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ ಅವರು ಇಂದು ದೇಶದ ಎಲ್ಲ ತ್ರಿಶಕ್ತಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ ಏಕೆಂದರೆ ಇದಕ್ಕೂ ಮೊದಲು ವಿಶ್ವದ ಯಾವುದೇ ದೇಶವು ದ್ವೀಪಗಳಿಗೆ ಸೈನಿಕರ ಹೆಸರನ್ನು ಇಡುವ ಮೂಲಕ ಸೈನಿಕರ ಶೌರ್ಯವನ್ನು ಗೌರವಿಸಿಲ್ಲ ಎಂದು ತಿಳಿಸಿದರು. ಇಂದು, ನಮ್ಮ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಶಾಶ್ವತ ಸ್ಮರಣೆಯನ್ನು ಸೃಷ್ಟಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವು ಮೂರೂ ಪಡೆಗಳಿಗೆ ಬಹಳ ಪ್ರೋತ್ಸಾಹದಾಯಕವಾಗಿದೆ. ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಸುಭಾಷ್ ದ್ವೀಪದಲ್ಲಿ ನೇತಾಜಿ ಅವರ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡ ಈ ಎರಡು ನಿರ್ಧಾರಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ವಾತಂತ್ರ್ಯದ ನೆನಪುಗಳನ್ನು ಇಡೀ ದೇಶದೊಂದಿಗೆ ಬೆಸೆಯಲಿವೆ ಮತ್ತು ಈ ನಿರ್ಧಾರಗಳ ಮೂಲಕ ಭಾರತದ ಯುವ ಪೀಳಿಗೆಯಲ್ಲಿ ದೇಶಭಕ್ತಿ, ಶೌರ್ಯ ಮತ್ತು ಸಾಹಸವನ್ನು ಯುಗಾಂತರಗಳವರೆಗೂ ನೆನಪಿಸಿಕೊಳ್ಳಲಾಗುವುದು ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image002E3MX.jpg

ಕೆಲವೊಮ್ಮೆ ನಮ್ಮ ಭೂಮಿಯು ಮತ್ತೆ ಮತ್ತೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತಹ ಅಂಶವನ್ನು ಹೊಂದಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 1857ರ ಕ್ರಾಂತಿಯ ನಂತರ, ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ದಯವಾಗಿ ಹಿಂಸಿಸಲು ಪ್ರಾರಂಭಿಸಿದಾಗ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಈ ಪುಣ್ಯಭೂಮಿಯಲ್ಲಿ, ನಮ್ಮ ಕ್ರಾಂತಿಕಾರಿಗಳನ್ನು ಸೆಲ್ಯುಲಾರ್ ಜೈಲಿನಲ್ಲಿ ಇರಿಸಲಾಯಿತು, ಆ ಸಮಯದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ನ ಈ ಭೂಮಿ ಸ್ವಾತಂತ್ರ್ಯ ಹೋರಾಟಗಾರರನ್ನು ತಾಯಿಯಂತೆ ಸಂತೈಸಿದೆ. ಸೆಲ್ಯುಲಾರ್ ಜೈಲು ಸ್ವಾತಂತ್ರ್ಯ ಹೋರಾಟದ ಉತ್ತಮ ಯಾತ್ರಾ ಸ್ಥಳವಾಗಿದೆ. ದೇಶವನ್ನು ಮುಕ್ತಗೊಳಿಸುವ ನೇತಾಜಿಯವರ ಪ್ರಯತ್ನಗಳಿಂದಾಗಿ, 'ಆಜಾದ್ ಹಿಂದ್ ಫೌಜ್' ದೇಶದ ಈ ಭಾಗಕ್ಕೆ ಸ್ವಾತಂತ್ರ್ಯ ನೀಡಿ ಗೌರವಿಸಿತು. ಆಗ ನೇತಾಜಿ ಈ ದ್ವೀಪದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003YVPS.jpg

ಸೆಲ್ಯುಲಾರ್ ಜೈಲಿನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈಗಾಗಲೇ ಸ್ವಾತಂತ್ರ್ಯದ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದ್ದವು. ನಂತರ ನೇತಾಜಿ ಈ ಪವಿತ್ರ ಭೂಮಿಯನ್ನು ಬಿಡುಗಡೆ ಮಾಡಿ ತ್ರಿವರ್ಣ ಧ್ವಜವನ್ನು ಹಾರಿಸಿದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ನೇತಾಜಿಯವರ ಹೆಜ್ಜೆಯನ್ನು ಅನುಸರಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶಹೀದ್ ದ್ವೀಪ, ಸ್ವರಾಜ್ ದ್ವೀಪ ಮತ್ತು ಸುಭಾಷ್ ದ್ವೀಪ ಎಂದು ಹೆಸರಿಸಿದ್ದಾರೆ. ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಮೂಲಕ ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡಿದವರ ಹೆಸರಿನಲ್ಲಿ 21 ದ್ವೀಪಗಳನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಮಕರಣ ಮಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 21 ದ್ವೀಪಗಳಿಗೆ ಈ ಧೈರ್ಯಶಾಲಿಗಳ ಹೆಸರನ್ನು ಇಡುವ ಮೂಲಕ ಅವರ ಶೌರ್ಯವನ್ನು ಗೌರವಿಸಿದ್ದಾರೆ ಎಂದು ತಿಳಿಸಿದ ಅವರು, ಇಡೀ ಭಾರತದ ಇತಿಹಾಸವನ್ನು ಬರೆದಾಗಲೆಲ್ಲಾ, ಈ ಘಟನೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂದು ಹೇಳಿದರು.

ಇಂದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಟಿಯಿಲ್ಲದ ಕೊಡುಗೆ ನೀಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯಂದು, ಸುಭಾಷ್ ಸ್ಮಾರಕವನ್ನು ಸಹ ಘೋಷಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೈನಸ್ 45 ಡಿಗ್ರಿ ತಾಪಮಾನ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಮೂಲಕ ಕೋಲ್ಕತ್ತಾದಿಂದ ಬರ್ಲಿನ್ ಗೆ 15,000 ಕಿಲೋಮೀಟರ್ ಪ್ರಯಾಣಿಸಿ ದೇಶವನ್ನು ಮುಕ್ತಗೊಳಿಸಿದರು, ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ ವೀರರು ತಮ್ಮ ಸ್ಮರಣೆಗಾಗಿ ಯಾರನ್ನೂ ಅವಲಂಬಿಸಿಲ್ಲ ಎಂದು ಹೇಳಲಾಗುತ್ತದೆ, ನೆನಪು ಅವರ ಧೈರ್ಯದೊಂದಿಗೆ ಬೆಸೆದಿದೆ. ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ, ನಮ್ಮ ದೇಶದ ಹೆಮ್ಮೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು 'ಕರ್ತವ್ಯ ಪಥ'ದಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಜನವರಿ 23ನ್ನು ಪರಾಕ್ರಮ ದಿವಸ ಎಂದು ಘೋಷಿಸಲಾಗಿದೆ ಮತ್ತು ಅದೇ ದಿನ ಸುಭಾಸ್ ಚಂದ್ರ ಬೋಸ್ ಅವರ ಸ್ಮಾರಕವಾಗಿ ಸುಭಾಸ್ ದ್ವೀಪವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಲಾಗಿದೆ, ಇದರಿಂದ ಜನರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ತಲೆಮಾರುಗಳವರೆಗೆ ನೆನೆಸಿಕೊಳ್ಳುತ್ತಾ ಗೌರವ ಸಲ್ಲಿಸಬಹುದು ಎಂದು ಗೃಹ ಸಚಿವರು ಹೇಳಿದರು. ಈ ಎರಡು ನಿರ್ಧಾರಗಳಿಗಾಗಿ ಇಡೀ ದೇಶದ ಪರವಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image004HXSD.jpg

ಸೆಲ್ಯುಲಾರ್ ಜೈಲಿನಲ್ಲಿದ್ದ ಕ್ರಾಂತಿಕಾರಿಗಳ ನೆನಪಿಗಾಗಿ ನಿರ್ಮಿಸಬೇಕಾದ ಅಮರ್ ಜ್ಯೋತಿ ಅಪೂರ್ಣವಾಗಿದೆ. ಯುಗಾಂತರಗಳವರೆಗೆ ಅವರಿಗೆ ಗೌರವ ಸಲ್ಲಿಸಲು ಇದನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಪೂರ್ಣಗೊಳಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇಂದು ಮೇಜರ್ ಸೋಮನಾಥ ಶರ್ಮಾ ಅವರಿಂದ ಹಿಡಿದು ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ ರವರವರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶದ ಈ ಕೆಚ್ಚೆದೆಯ ಸೈನಿಕರನ್ನು ಎಂದೆಂದಿಗೂ ಸ್ಮರಣೀಯವಾಗಿಸಿದ್ದಾರೆ, ಇದರಿಂದ ಅನೇಕ ತಲೆಮಾರುಗಳು ಸ್ಫೂರ್ತಿ ಪಡೆದು ದೇಶಭಕ್ತಿ ಮತ್ತು ಶೌರ್ಯದ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತವೆ ಎಂದು ತಿಳಿಸಿದರು.

ಸುಭಾಷ್ ದ್ವೀಪದಲ್ಲಿ ನೇತಾಜಿ ಸ್ಮಾರಕವನ್ನು ಇಂದು ಘೋಷಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಲ್ಲದೆ, ವಸ್ತುಸಂಗ್ರಹಾಲಯ, ರೋಪ್ ವೇ, ಲೇಸರ್ ಬೆಳಕು ಮತ್ತು ಧ್ವನಿ ಪ್ರದರ್ಶನ, ಮನರಂಜನಾ ಪಾರ್ಕ್ ಮತ್ತು ತಿನಿಸುಗಳ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಶೌರ್ಯದಿಂದ ಸ್ಫೂರ್ತಿ ಪಡೆಯಲು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮುಂದಿನ ಅನೇಕ ಪೀಳಿಗೆಗಳಿಗೆ ಸಾಧ್ಯವಾಗುವಂತೆ ಈ ಸ್ಮಾರಕವನ್ನು ಅಭಿವೃದ್ಧಿಪಡಿಸುವುದು ಭಾರತ ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ, 2015ರಿಂದ ರಕ್ಷಣಾ ಪಡೆಗಳ ಉದ್ದಾರಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಒಂದು ಶ್ರೇಣಿ ಒಂದು ಪಿಂಚಣಿ ಸಮಸ್ಯೆಯನ್ನು ಪರಿಹರಿಸಲಾಯಿತು, ಸೈನ್ಯದ ಆಡಳಿತ ರಚನೆಯಲ್ಲಿ ಐತಿಹಾಸಿಕ ಬದಲಾವಣೆಗಳನ್ನು ಮಾಡಲಾಯಿತು, ವ್ಯವಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಗಳನ್ನು ಮಾಡಲಾಯಿತು ಮತ್ತು ಎಲ್ಲಾ ಮೂರು ಪಡೆಗಳನ್ನು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ಸಂವಹನ ವ್ಯವಸ್ಥೆಯೊಂದಿಗೆ ಸಜ್ಜುಗೊಳಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇಂದು, 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲು 21 ದ್ವೀಪಗಳಿಗೆ ಅವರ ಹೆಸರನ್ನು ಇಡುವ ಮೂಲಕ ಒಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಈ ಎರಡೂ ನಿರ್ಧಾರಗಳು ಯುಗಾಂತರಗಳವರೆಗೆ ಭಾರತದ ಯುವ ಪೀಳಿಗೆಗೆ ದೇಶಭಕ್ತಿ ಮತ್ತು ಶೌರ್ಯದ ಸಂದೇಶ ಮತ್ತು ಮೌಲ್ಯಗಳನ್ನು ನೀಡುತ್ತದೆ ಎಂದು ಶ್ರೀ ಶಾ ಹೇಳಿದರು.

*****



(Release ID: 1893114) Visitor Counter : 174