ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕ್ಷಿಪ್ರಗತಿಯಲ್ಲಿ ಭಾರತೀಯ ಆಹಾರ ನಿಗಮ – ಎಫ್ ಸಿ ಐ ಗೆ ಹೊಸ ರೂಪ : ಎಫ್ ಸಿ ಐ 59ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಶ್ರೀ ಪಿಯೂಷ್ ಗೋಯಲ್
ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಕಠಿಣ ಕ್ರಮ : ಶ್ರೀ ಗೋಯಲ್
ಭ್ರಷ್ಟಾಚಾರದ ವಿರುದ್ಧ ಶೂನ್ಯ ಸೈರಣೆಗೆ ಎಫ್ ಸಿ ಐ ನಿಂದ ನೀತಿ : ಶ್ರೀ ಗೋಯಲ್
ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ : ಶ್ರೀ ಗೋಯಲ್
ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ” ವಿಶ್ವದ ಬೃಹತ್ ಆಹಾರ ಪೂರೈಕೆ ಸರಪಳಿ ಕ್ರಮಕ್ಕೆ ಶ್ರೀ ಗೋಯಲ್ ಮೆಚ್ಚುಗೆ
Posted On:
14 JAN 2023 4:52PM by PIB Bengaluru
ದೇಶದ ರೈತರಿಗೆ ಮತ್ತು ಬಡವರಿಗೆ ನಿರಂತವಾಗಿ ನೆರವು ನೀಡುವುದನ್ನು ಮುಂದುವರಿಸುವಂತಾಗಲು ಭಾರತೀಯ ಆಹಾರ ನಿಗಮ (ಎಫ್ ಸಿ ಐ)ಗೆ ಹೊಸ ರೂಪ ಕೊಡುವ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಮಾಡಬೇಕಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ, ಜವಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಎಫ್ ಸಿ ಐನ 59 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಅವರು, ಎಫ್ ಸಿ ಐ ನ ಮತ್ತು ಕೇಂದ್ರ ಗೋದಾಮು ನಿಗಮ (ಸಿಡಬ್ಲ್ಯುಸಿ) ನ ರೂಪಾಂತರ ಪ್ರಕ್ರಿಯೆಯ ಬಗ್ಗೆ ನಿಗಾವಹಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಸಹಕರಿಸದ ಅಥವಾ ಪ್ರಕ್ರಿಯೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಹ ಸಚಿವರು ಸೂಚಿಸಿದರು.
ಎಫ್ ಸಿ ಐ ನ ಪ್ರಸ್ತುತ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಬಗ್ಗೆ ಮಾತನಾಡಿದ ಶ್ರೀ ಗೋಯಲ್ ಅವರು, ಇದು ಸಂಸ್ಥೆಗೆ ಎಚ್ಚರಿಕೆಯ ಕರೆ ಗಂಟೆ ಎಂದು ಹೇಳಿದರು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರಕ್ಕೆ ಎಫ್ ಸಿ ಐ ಶೂನ್ಯ ಸೈರಣೆ ಹೊಂದಿರಲಿದೆ ಎಂದು ಸಚಿವರು ಹೇಳಿದರು.
ಅಕ್ರಮದ ಬಗ್ಗೆ ಮಾಹಿತಿ ನೀಡುವವರಿಗೆ ಪಾರಿತೋಷಕ ನೀಡಲು ವ್ಯವಸ್ಥಿತ ಕ್ರಮ ರೂಪಿಸುವಂತೆಯೂ ಶ್ರೀ ಗೋಯಲ್ ಕಾರ್ಯದರ್ಶಿಗಳಿಗೆ ಸೂಚನೆ ನೀಡದರು. ಭ್ರಷ್ಟಾಚಾರದ ಯಾವುದೇ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಅವರು ಎಫ್ ಸಿ ಐ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ನೀಡಿದರು.
ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಎಫ್ ಸಿ ಐ ಕೈಗೊಂಡಿದ್ದು ವಿಶ್ವದ ಬೃಹತ್ ಆಹಾರ ಪೂರೈಕೆ ಸರಪಳಿ ವ್ಯವಸ್ಥೆಗೆ ಸಚಿವ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಲಿಲ್ಲ ಎಂದು ಅವರು ಹೇಳಿದರು.
ಆಹಾರ ಭದ್ರತೆ, ಆರ್ಥಿಕ ಪರಿಸ್ಥಿತಿ ಬಲವರ್ಧನೆ, ಹಣದುಬ್ಬರ ನಿಯಂತ್ರಣ ಮತ್ತಿತರ ವಲಯಗಳಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಈ ವರ್ಷದ ಅಕ್ಕಿ ಖರೀದಿ ಅಂಕಿಅಂಶಗಳು ಉತ್ತಮವಾಗಿದ್ದು, ಅದೇ ರೀತಿ ಮುಂಬರುವ ಋತುಮಾನದಲ್ಲಿ ಗೋಧಿ ಖರೀದಿಯನ್ನು ಎದುರು ನೋಡುತ್ತಿರುವುದಾಗಿಯೂ ಶ್ರೀ ಗೋಯಲ್ ಹೇಳಿದರು.
ಸಮಾರಂಭದಲ್ಲಿ ವರ್ಚುಯಲ್ ಮಾಧ್ಯಮದ ಮೂಲಕ ಭಾಗಿಯಾದ ಮಾನ್ಯ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಅವರು, ಸಾಂಕ್ರಾಮಿಕದ ಅವಧಿಯಲ್ಲಿ ದೇಶದ ಎಲ್ಲ ಭಾಗಗಳಿಗೂ, ಸಾಕಷ್ಟು ಆಹಾರ ಧಾನ್ಯ ಪೂರೈಕೆ ಖಾತರಿಪಡಿಸಲು ಎಫ್ ಸಿ ಐ ಕೈಗೊಂಡಿದ್ದ ಮಹತ್ವದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಅವರ ಮುನ್ನೋಟದೊಂದಿಗೆ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ ದುರ್ಬಲ ವರ್ಗದ ಹಸಿವು ನೀಗಿಸಿದ ಕ್ರಮವನ್ನು ಅವರು ಶ್ಲಾಘಿಸಿದರು.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಶ್ರೀ ಸಂಜೀವ್ ಛೋಪ್ರಾ ಸಮಾರಂಭದಲ್ಲಿ ಉಪಸ್ಥಿತರಿದ್ದರು ಮತ್ತು ಜನರಿಗೆ ಸಮರ್ಥ ಮತ್ತು ಪಾರದರ್ಶಕ ಸೇವೆ ಒದಗಿಸುವಂತಾಗಲು ಭ್ರಷ್ಟಾಚಾರ ನಿರ್ಮೂಲನಾ ವ್ಯವಸ್ಥೆ ಖಾತರಿಪಡಿಸುವಂತೆ ಎಫ್ ಸಿ ಐ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಶೋಕ್ ಕೆ ಕೆ ಮೀನಾ ಅವರಿಗೆ ಸೂಚನೆ ನೀಡಿದರು.
(Release ID: 1891276)
Visitor Counter : 198