ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮಧ್ಯಪ್ರದೇಶದ ಇಂದೋರ್‌ನಲ್ಲಿ 17ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಉದ್ಘಾಟಿಸಿದ ಪ್ರಧಾನಮಂತ್ರಿ


‘ಸುರಕ್ಷಿತ್ ಜಾಯೇನ್, ಪ್ರಶಿಕ್ಷಿತ್ ಜಾಯೇನ್’ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ
'ಆಜಾದಿ ಕಾ ಅಮೃತ ಮಹೋತ್ಸವ - ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅನಿವಾಸಿ ಭಾರತೀಯರ ಕೊಡುಗೆ' ಎಂಬ ವಿಷಯದ ಕುರಿತ ಮೊಟ್ಟಮೊದಲ ಡಿಜಿಟಲ್ ಪಿಬಿಡಿ ಪ್ರದರ್ಶನ ಉದ್ಘಾಟನೆ

“ಇಂದೋರ್ ಒಂದು ನಗರ ಮತ್ತು ಒಂದು ಹಂತ. ಇದು ತನ್ನ ಪರಂಪರೆಯನ್ನು ಉಳಿಸಿಕೊಂಡು ಕಾಲಕ್ಕಿಂತ ಮುಂದೆ ಸಾಗುವ ಹಂತವಾಗಿದೆ”

"ಅಮೃತ ಕಾಲ'ದಲ್ಲಿ ಭಾರತದ ಪಯಣದಲ್ಲಿ ನಮ್ಮ ಪ್ರವಾಸಿ ಭಾರತೀಯರಿಗೆ ಮಹತ್ವದ ಸ್ಥಾನವಿದೆ"

"ಭಾರತದ ಅನನ್ಯ ಜಾಗತಿಕ ದೃಷ್ಟಿಕೋನ ಮತ್ತು ಜಾಗತಿಕ ಶ್ರೇಣಿಯಲ್ಲಿ ಅದರ ಪಾತ್ರವನ್ನು ಅಮೃತ ಕಾಲದ ಸಮಯದಲ್ಲಿ ಪ್ರವಾಸಿ ಭಾರತೀಯರು ಬಲವರ್ಧನೆಗೊಳಿಸುತ್ತಾರೆ"

"ಪ್ರವಾಸಿ ಭಾರತೀಯರಲ್ಲಿ ನಾವು ವಸುಧೈವ ಕುಟುಂಬಕಂ ಮತ್ತು ಏಕ ಭಾರತ ಶ್ರೇಷ್ಠ ಭಾರತದ ಅಸಂಖ್ಯಾತ ಚಿತ್ರಣಗಳನ್ನು ನೋಡುತ್ತೇವೆ"

"ಪ್ರವಾಸಿ ಭಾರತೀಯರು ಭಾರತದ ಶಕ್ತಿಶಾಲಿ ಮತ್ತು ಸಮರ್ಥ ಧ್ವನಿಯನ್ನು ಪ್ರತಿಧ್ವನಿಸುತ್ತಾರೆ"

 "ಜಿ-20 ಕೇವಲ ರಾಜತಾಂತ್ರಿಕ ಕಾರ್ಯಕ್ರಮವಾಗಿರದೆ, ಸಾರ್ವಜನಿಕ ಸಹಭಾಗಿತ್ವದ ಐತಿಹಾಸಿಕ ಘಟನೆಯಾಗಿ ಬದಲಾಗಬೇಕು, ಅಲ್ಲಿ ಪ್ರತಿಯೊಬ್ಬರು 'ಅತಿಥಿ ದೇವೋ ಭವ' ಎಂಬ ಮನೋಭಾವಕ್ಕೆ ಸಾಕ್ಷಿಯಾಗಬೇಕು"

"ಭಾರತೀಯ ಯುವಕರ ಕೌಶಲ್ಯ, ಮೌಲ್ಯಗಳು ಮತ್ತು ಕೆಲಸದ ನೈತಿಕತೆ ಜಾಗತಿಕ ಬೆಳವಣಿಗೆಯ ಎಂಜಿನ್ ಆಗಬಹುದು"

"ಕಳೆದ 8 ವರ್ಷಗಳಲ್ಲಿ, ಭಾರತವು ತನ್ನ ಅನಿವಾಸಿ ಭಾರತೀಯರನ್ನು ಬಲವರ್ಧನೆಗೊಳಿಸಲು ಪ್ರಯತ್ನ’’

Posted On: 09 JAN 2023 2:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ 17 ನೇ ಪ್ರವಾಸಿ ಭಾರತೀಯ ದಿನ ಸಮಾವೇಶವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು ‘ಸುರಕ್ಷಿತ್ ಜಾಯೇನ್, ಪ್ರಶಿಕ್ಷಿತ್ ಜಾಯೇನ್’ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ - ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅನಿವಾಸಿ ಭಾರತೀಯರ ಕೊಡುಗೆ’ ವಿಷಯದ ಕುರಿತು ಮೊಟ್ಟಮೊದಲ ಡಿಜಿಟಲ್ ಪಿಬಿಡಿ ಪ್ರದರ್ಶನವನ್ನು ಉದ್ಘಾಟಿಸಿದರು.

ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಸಾಗರೋತ್ತರ ಭಾರತೀಯರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಂಪರ್ಕ ಸಾಧಿಸಲು ಮತ್ತು ಅನಿವಾಸಿಗಳೊಂದಿಗೆ ಪರಸ್ಪರ ಸಂವಹನ ನಡೆಸಲು ಪ್ರಮುಖ ವೇದಿಕೆ ಒದಗಿಸುತ್ತದೆ. ಈ ಪಿಬಿಡಿ ಸಮಾವೇಶದ ಘೋಷವಾಕ್ಯ 'ಅನಿವಾಸಿ ಭಾರತೀಯರು: ಅಮೃತ್ ಕಾಲದಲ್ಲಿ ಭಾರತದ ಪ್ರಗತಿಗೆ ವಿಶ್ವಾಸಾರ್ಹ ಪಾಲುದಾರರು'’ ಎಂಬುದಾಗಿದೆ. ಸುಮಾರು 70 ಕ್ಕೂ ಅಧಿಕ ದೇಶಗಳಿಂದ 3,500 ಅನಿವಾಸಿ ಭಾರತೀಯ ಸದಸ್ಯರು ಪಿಬಿಡಿ ಸಮಾವೇಶಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ನಾಲ್ಕು ವರ್ಷಗಳ ಬಿಡುವಿನ ನಂತರ ಪ್ರವಾಸಿ ಭಾರತೀಯ ದಿನ ತನ್ನೆಲ್ಲಾ ವೈಭವದಿಂದ ನಡೆಯುತ್ತಿದೆ ಎಂದರು ಮತ್ತು ವೈಯಕ್ತಿಕ ಸಂವಹನದ ಮಹತ್ವ ಮತ್ತು ಸಂತೋಷವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ 130 ಕೋಟಿ ಭಾರತೀಯರ ಪರವಾಗಿ ಎಲ್ಲರನ್ನು ಸ್ವಾಗತಿಸಿದ ಪ್ರಧಾನಿ,  ಭಾರತದ ಹೃದಯ ಎಂದು ಕರೆಯಲ್ಪಡುವ ಮಧ್ಯಪ್ರದೇಶದ ನೆಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಮತ್ತು ನರ್ಮದೆಯ ಪವಿತ್ರ ಜಲ, ಹಸಿರು, ಬುಡಕಟ್ಟು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಇದು ಹೆಸರುವಾಸಿಯಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು, ಇತ್ತೀಚೆಗೆ ಲೋಕಾರ್ಪಣೆ ಮಾಡಿದ, ಮಹಾಕಾಲ ಮಹಾ ಲೋಕವನ್ನು ಪ್ರಸ್ತಾಪಿಸಿದರು ಮತ್ತು ಗಣ್ಯರು ಮತ್ತು ಪ್ರತಿನಿಧಿಗಳು ಆ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆಂದು ಆಶಿಸಿದರು. ಆತಿಥ್ಯ ವಹಿಸಿರುವ ಇಂದೋರ್ ನಗರದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಇಂದೋರ್ ಒಂದು ನಗರ ಮತ್ತು ಒಂದು ಹಂತವಾಗಿದೆ, "ಇದು ತನ್ನ ಪರಂಪರೆಯನ್ನು ಉಳಿಸಿಕೊಂಡು ಕಾಲಕ್ಕಿಂತ ಮುಂದೆ ಸಾಗುವ  ಹಂತವಾಗಿದೆ" ಎಂದ ಅವರು ಇಂದೋರ್‌ನ ಪಾಕಶಾಲೆಯ ಖ್ಯಾತಿ ಮತ್ತು ಸ್ವಚ್ಚತಾ ಅಭಿಯಾನದಲ್ಲಿ ಅದರ ಸಾಧನೆಯನ್ನು ಪ್ರಸ್ತಾಪಿಸಿದರು. 
 
ಭಾರತವು ಇತ್ತೀಚೆಗಷ್ಟೇ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರವಾಸಿ ಭಾರತೀಯ ದಿನ ಹಲವು ರೀತಿಯಲ್ಲಿ ವಿಶೇಷವಾಗಿದೆ ಎಂದು ಪ್ರಧಾನಿ ಹೇಳಿದರು. ವೈಭವದ ಯುಗವನ್ನು ಮತ್ತೊಮ್ಮೆ ಮುನ್ನೆಲೆಗೆ ತರುವ ಉದ್ದೇಶದಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ ಎಂಬ ವಿಷಯದ ಕುರಿತು ಮೊಟ್ಟಮೊದಲ ಡಿಜಿಟಲ್ ಪಿಬಿಡಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಅಮೃತ ಕಾಲದ ಮುಂದಿನ 25 ವರ್ಷಗಳ ಪಯಣದಲ್ಲಿ ಪ್ರವಾಸಿ ಭಾರತೀಯರ ಮಹತ್ವದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಭಾರತದ ವಿಶಿಷ್ಟ ಜಾಗತಿಕ ದೂರದೃಷ್ಟಿ ಮತ್ತು ಜಾಗತಿಕ ಶ್ರೇಣಿಯಲ್ಲಿ ಅದರ ಪಾತ್ರವನ್ನು ಅನಿವಾಸಿ ಭಾರತೀಯರು ಬಲವರ್ಧನೆಗೊಳಿಸಲಿದ್ದಾರೆ ಎಂದು ಹೇಳಿದರು.

ಇಡೀ ಜಗತ್ತನ್ನು ತನ್ನ ಸ್ವಂತ ದೇಶವೆಂದು ಪರಿಗಣಿಸುವ ಮತ್ತು ಮಾನವೀಯತೆ ನಮ್ಮ ಸಹೋದರ ಸಹೋದರಿಯರಂತೆ ಪರಿಗಣಿಸುವ ಭಾರತೀಯ ತತ್ವಶಾಸ್ತ್ರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ನಮ್ಮ ಪೂರ್ವಜರು ಭಾರತದ ಸಾಂಸ್ಕೃತಿಕ ವಿಸ್ತರಣೆಗೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು. ಇಂದಿನ ಜಗತ್ತಿನ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಭಾರತೀಯರು ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ನಡುವೆ ಜೀವಿಸುತ್ತಿರುವಾಗ ಜಗತ್ತಿನ ಎಲ್ಲಾ ಭಾಗಗಳಲ್ಲೂ ಪ್ರಯಾಣ ಮಾಡುತ್ತಿದ್ದಾರೆ ಮತ್ತು ವ್ಯಾಪಾರ ಪಾಲುದಾರಿಕೆಗಳ ಮೂಲಕ ಸಮೃದ್ಧಿಯ ಹೆಬ್ಬಾಗಿಲನ್ನು ತೆರೆಯಲು ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಪ್ರಮುಖವಾಗಿ ಉಲ್ಲೇಖಿಸಿದರು. ಜಾಗತಿಕ ನಕ್ಷೆಯಲ್ಲಿ ನಾವು ಕೋಟಿಗಟ್ಟಲೆ ಪ್ರವಾಸಿ ಭಾರತೀಯರನ್ನು ನೋಡಿದಾಗ, ಅಸಂಖ್ಯಾತ ಚಿತ್ರಗಳು ಏಕಕಾಲದಲ್ಲಿ ಹೊರಹೊಮ್ಮುತ್ತವೆ ಎಂದು ಪ್ರಧಾನಿ ತಿಳಿಸಿದರು, ಇದು 'ವಸುಧೈವ ಕುಟುಂಬಕಂ' ಚಿತ್ರಣವನ್ನು ಬಿಂಬಿಸುತ್ತದೆ ಮತ್ತು ಇಬ್ಬರು ಪ್ರವಾಸಿ ಭಾರತೀಯರು ಯಾವುದೇ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿ ಭೇಟಿಯಾದಾಗ ಏಕ ಭಾರತ ಶ್ರೇಷ್ಠ ಭಾರತ ಭಾವನೆಯು ಮುಂಚೂಣಿಗೆ ಬರುತ್ತದೆ. "ಪ್ರವಾಸಿಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ಅತ್ಯಂತ ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಶಿಸ್ತಿನ ನಾಗರಿಕರು ಎಂದು ಹೇಳಿದಾಗ ಪ್ರಜಾಪ್ರಭುತ್ವದ ತಾಯಿ ಎಂಬ ಹೆಮ್ಮೆಯ ಭಾವನೆಯು ಹಲವಾರು ಪಟ್ಟು ಹೆಚ್ಚಾಗುತ್ತದೆ" ಎಂದು ಪ್ರಧಾನಿ ಹೇಳಿದರು. ವಿಶ್ವವು ಅವರ ಕೊಡುಗೆಗಳನ್ನು ಮೌಲ್ಯಮಾಪನ ಮಾಡುವಾಗ ಶಕ್ತಿಯುತ ಮತ್ತು ಸಮರ್ಥ ಭಾರತದ ಧ್ವನಿಯನ್ನು ಪ್ರತಿಧ್ವನಿಸುವ ಪ್ರತಿಯೊಬ್ಬ ಪ್ರವಾಸಿ ಭಾರತೀಯರನ್ನು ಭಾರತದ ರಾಷ್ಟ್ರೀಯ ರಾಯಭಾರಿ ಎಂದು ಕರೆಯುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. “ನೀವು ಭಾರತದ ಪರಂಪರೆ, ಮೇಕ್ ಇನ್ ಇಂಡಿಯಾ, ಯೋಗ ಮತ್ತು ಆಯುರ್ವೇದ, ಭಾರತದ ಗುಡಿ ಕೈಗಾರಿಕೆಗಳು ಮತ್ತು ಕರಕುಶಲ ವಸ್ತುಗಳ ರಾಷ್ಟ್ರದೂತರು (ರಾಷ್ಟ್ರೀಯ ರಾಯಭಾರಿಗಳು)” , ಶ್ರೀ ನರೇಂದ್ರ ಮೋದಿ ಹೇಳಿದರು. ಮಾತು ಮುಂದುವರಿದ ಅವರು, “ಅದೇ ಸಮಯದಲ್ಲಿ, ನೀವು ಭಾರತದ ಸಿರಿಧಾನ್ಯಗಳ ಬ್ರಾಂಡ್ ಅಂಬಾಸಿಡರ್‌ಗಳೂ ಆಗಿದ್ದೀರಿ." ಎಂದರು. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ ಮತ್ತು ಕೆಲವು ಸಿರಿಧಾನ್ಯಗಳ ಉತ್ಪನ್ನಗಳನ್ನು ಮನೆಗೆ ಕೊಂಡೊಯ್ಯುವಂತೆ ಎಲ್ಲರಿಗೂ ಮನವಿ ಮಾಡಿದರು.
 
ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ವಿಶ್ವದ ಬಯಕೆಯನ್ನು ಈಡೇರಿಸುವಲ್ಲಿ ಪ್ರವಾಸಿ ಭಾರತೀಯರಿಗೆ ಮತ್ತೊಂದು ಪ್ರಮುಖ ಪಾತ್ರವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಶ್ವ ಭಾರತವನ್ನು ಬಹಳ ಕುತೂಹಲದಿಂದ ನೋಡುತ್ತಿದೆ ಎಂದು ಹೇಳಿದ ಅವರು ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಅಸಾಧಾರಣ ಸಾಧನೆಗಳನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಮೇಕ್ ಇನ್ ಇಂಡಿಯಾ ಲಸಿಕೆ ಮತ್ತು 220 ಕೋಟಿಗೂ ಅಧಿಕ ಉಚಿತ ಡೋಸ್‌ ನೀಡಿಕೆಯ ದಾಖಲೆಯ ಅಂಕಿ ಅಂಶಗಳ ಉದಾಹರಣೆ ಸಹಿತ ಪ್ರಧಾನಮಂತ್ರಿ ವಿವರಿಸಿದರು. ಸದ್ಯದ ಅಸ್ಥಿರತೆಯ ಅವಧಿಯಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಉದಯೋನ್ಮುಖವಾಗಿ ಬೆಳೆಯುತ್ತಿದೆ ಮತ್ತು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದರು. ನವೋದ್ಯಮ ಪೂರಕ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಹೆಚ್ಚುತ್ತಿರುವ ಮೇಕ್ ಇನ್ ಇಂಡಿಯಾದ ಉದಾಹರಣೆಗಳನ್ನು ನೀಡಿದರು. ತೇಜಸ್ ಯುದ್ಧ ವಿಮಾನ, ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಪರಮಾಣು ಜಲಾಂತರ್ಗಾಮಿ ಅರಿಹಂತ್ ಬಗ್ಗೆ ಉಲ್ಲೇಖಿಸಿದ ಅವರು, ಪ್ರಪಂಚದ ಜನರಿಗೆ ಭಾರತದ ಬಗ್ಗೆ ಕುತೂಹಲ ಇರುವುದು ಸಹಜ ಎಂದರು. ಭಾರತದ ನಗದು ರಹಿತ ಆರ್ಥಿಕತೆ ಮತ್ತು ಫಿನ್‌ಟೆಕ್ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು ಮತ್ತು ವಿಶ್ವದ ಶೇ. 40ರಷ್ಟು ರಿಯಲ್ ಟೈಂ ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ ಎಂದು ಹೇಳಿದರು.

ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಭಾರತವು ನೂರಾರು ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡುವ ಮೂಲಕ ಬಹು ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಅವರು ಭಾರತದ ಸಾಫ್ಟ್‌ವೇರ್ ಮತ್ತು ಡಿಜಿಟಲ್ ತಂತ್ರಜ್ಞಾನ ಉದ್ಯಮದ ಮೇಲೆ ಬೆಳಕು ಚೆಲ್ಲಿದರು ಮತ್ತು ಅದರ ಸಾಮರ್ಥ್ಯವು ಕ್ರಮೇಣ ಹೆಚ್ಚುತ್ತಿದೆ ಎಂದು ಹೇಳಿದರು. "ಭಾರತದ ಸಂದೇಶವು ಅದರ ವಿಶಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ", ದೇಶದ ಸಾಮರ್ಥ್ಯವು ಭವಿಷ್ಯದಲ್ಲಿ ಮಾತ್ರ ಉತ್ತೇಜನವನ್ನು ಪಡೆಯಲಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಯ ಬಗ್ಗೆಯೂ ತಮ್ಮ ಜ್ಞಾನವನ್ನು ಶ್ರೀಮಂತಗೊಳಿಸಬೇಕೆಂದು ಅವರು ಈ ಸಂದರ್ಭದಲ್ಲಿ ಹಾಜರಿದ್ದ ಪ್ರತಿಯೊಬ್ಬರಿಗೂ ಕರೆ ನೀಡಿದರು.

ಭಾರತವು ಈ ವರ್ಷ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು ಸುಸ್ಥಿರ ಭವಿಷ್ಯ ಸಾಧಿಸಲು ಮತ್ತು ಈ ಅನುಭವಗಳಿಂದ ಕಲಿಯಲು,  ಭಾರತದ ಹಿಂದಿನ ಅನುಭವಗಳ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸಲು ಇದೊಂದು ಜವಾಬ್ದಾರಿಯು ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಮಂತ್ರಿಯವರು ಬಲವಾಗಿ ಪ್ರತಿಪಾದಿಸಿದರು. "ಜಿ-20 ಕೇವಲ ರಾಜತಾಂತ್ರಿಕ ಕಾರ್ಯಕ್ರಮವಾಗಿರದೆ ಅದನ್ನು ಸಾರ್ವಜನಿಕ ಸಹಭಾಗಿತ್ವದ ಐತಿಹಾಸಿಕ ಸಂಗತಿಯನ್ನಾಗಿ ಪರಿವರ್ತಿಸಬೇಕು, ಅಲ್ಲಿ ಪ್ರತಿಯೊಬ್ಬರು 'ಅತಿಥಿ ದೇವೋ ಭವ' ಎಂಬ ಭಾವನೆಗೆ ಸಾಕ್ಷಿಯಾಗಬೇಕು" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ವಿವಿಧ ನಗರಗಳಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಅಂಗವಾಗಿ 200 ಕ್ಕೂ ಅಧಿಕ ಸಭೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು ಮತ್ತು ಅನೇಕ ದೇಶಗಳ ಪ್ರತಿನಿಧಿಗಳೊಂದಿಗೆ ಅರ್ಥಪೂರ್ಣ ಸಂಪರ್ಕವನ್ನು ಸ್ಥಾಪಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಭಾರತವು ಇಂದು ಕೇವಲ ಜ್ಞಾನ ಕೇಂದ್ರವಾಗದೆ ಪ್ರಪಂಚದ ಕೌಶಲ್ಯ ರಾಜಧಾನಿಯಾಗುವ ಅವಕಾಶವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಭಾರತೀಯ ಯುವಕರ ಕೌಶಲ್ಯ, ಮೌಲ್ಯಗಳು ಮತ್ತು ಕೆಲಸದ ನೈತಿಕತೆಗಳನ್ನು ಒತ್ತಿ ಹೇಳಿದರು. "ಈ ಕೌಶಲ್ಯ ಬಂಡವಾಳವು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಬಹುದು" ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಪೀಳಿಗೆಯ ಪ್ರವಾಸಿ ಭಾರತೀಯ ಯುವಕರ ಉತ್ಸಾಹವನ್ನು ಪ್ರಧಾನಿ ಉಲ್ಲೇಖಿಸಿದರು. ಯುವಕರಿಗೆ ತಮ್ಮ ದೇಶದ ಬಗ್ಗೆ ತಿಳಿಸಲು ಮತ್ತು ಅವರಿಗೆ ಭೇಟಿ ನೀಡುವ ಸಂದರ್ಭಗಳನ್ನು ಒದಗಿಸುವಂತೆ ಅವರು ಸಭೆಗೆ ಕರೆ ನೀಡಿದರು. “ಸಾಂಪ್ರದಾಯಿಕ ತಿಳಿವಳಿಕೆ ಮತ್ತು ಆಧುನಿಕ ವಿಧಾನದೊಂದಿಗೆ, ಈ ಯುವ ಪ್ರವಾಸಿಯರು ಭಾರತದ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಜಗತ್ತಿಗೆ ಹೇಳಲು ಸಾಧ್ಯವಾಗುತ್ತದೆ. ಯುವಜನರಲ್ಲಿ ಭಾರತದ ಬಗ್ಗೆ ಹೆಚ್ಚುತ್ತಿರುವ ಕುತೂಹಲದಿಂದ ಪ್ರವಾಸೋದ್ಯಮ, ಸಂಶೋಧನೆ ಮತ್ತು ಭಾರತದ ವೈಭವವನ್ನು ಹೆಚ್ಚಿಸುತ್ತದೆ” ಎಂದು ಅವರು ಹೇಳಿದರು. ಅಂತಹ ಯುವಕರು ಹಬ್ಬಗಳ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಬಹುದು ಅಥವಾ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೊಂದಿಗೆ ಸಂಬಂಧ ಹೊಂದಬಹುದು ಎಂದು ಪ್ರಧಾನಿ ಹೇಳಿದರು.

ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಮೂಲಕ ಆಯಾ ದೇಶಗಳಿಗೆ ಪ್ರವಾಸಿ ಭಾರತೀಯರ ಜೀವನ, ಹೋರಾಟ ಮತ್ತು ಕೊಡುಗೆಗಳನ್ನು ದಾಖಲಿಸಲು ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಪ್ರತಿಯೊಬ್ಬ ಭರತವಂಶಿಯು ಇಡೀ ಭಾರತವನ್ನು ತನ್ನೊಂದಿಗೆ ಒಯ್ಯುತ್ತಾನೆ ಎಂದು ಪ್ರಧಾನಿ ಹೇಳಿದರು. “ಕಳೆದ 8 ವರ್ಷಗಳಲ್ಲಿ, ಭಾರತವು ತನ್ನ ಅನಿವಾಸಿ ಭಾರತೀಯರನ್ನು ಬಲವರ್ಧನೆಗೊಳಿಸಲು ಪ್ರಯತ್ನಿಸಿದೆ. ನೀವು ಎಲ್ಲಿದ್ದರೂ ದೇಶವು ನಿಮ್ಮ ಹಿತಾಸಕ್ತಿ ಮತ್ತು ಅಶೋತ್ತರಗಳಿಗಾಗಿರುವುದು ಇಂದಿನ ಭಾರತದ ಬದ್ಧತೆಯಾಗಿದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು, ಗಯಾನ ಗಣರಾಜ್ಯದ ಅಧ್ಯಕ್ಷ ಮತ್ತು ಗೌರವಾನ್ವಿತ ವಿಶೇಷ ಅತಿಥಿಗಳಾದ ಎಚ್.ಇ. ಡಾ ಮೊಹಮದ್ ಇರ್ಫಾನ್ ಅಲಿ ಮತ್ತು, ಸುರಿನಾಮ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಘನತೆವೆತ್ತ ಶ್ರೀ ಚಂದ್ರಿಕಾ ಪರ್ಸಾದ್ ಸಂತೋಖಿ ಅವರು ಭಾಷಣ ಮತ್ತು ಸಲಹೆಗಳಿಗಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. 

ವಿಶೇಷ ಅತಿಥಿಗಳಾದ ಗಯಾನಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ ಮೊಹಮದ್ ಇರ್ಫಾನ್ ಅಲಿ ಮತ್ತು ಸುರಿನಾಮ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷ  ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯ್ ಪಟೇಲ್, ಕೇಂದ್ರ ವಿದೇಶಾಂಗ ಸಚಿವರಾದ ಶ್ರೀ ಡಾ.ಎಸ್.ಜೈಶಂಕರ್, ಸಹಾಯಕ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಶ್ರೀ ವಿ,ಮುರಳೀಧರನ್ ಮತ್ತು ಡಾ.ರಾಜಕುಮಾರ್ ರಂಜನ್ ಸಿಂಗ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ: 

ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶವು ಭಾರತ ಸರ್ಕಾರದ ಪ್ರಮುಖ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದು ಸಾಗರೋತ್ತರ ಭಾರತೀಯರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಂಪರ್ಕಿಸಲು ಮತ್ತು ಅನಿವಾಸಿ ಭಾರತೀಯರನ್ನು ಪರಸ್ಪರ ಸಂವಹನ ನಡೆಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. 17 ನೇ ಪ್ರವಾಸಿ ಭಾರತೀಯ ದಿನ ಸಮಾವೇಶವನ್ನು ಮಧ್ಯಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ 2023ರ  ಜನವರಿ 08-10ರವರೆಗೆ ಇಂದೋರ್‌ನಲ್ಲಿ ಆಯೋಜಿಸಲಾಗಿದೆ. ಈ ಪಿಬಿಡಿ ಸಮಾವೇಶದ ಘೋಷವಾಕ್ಯ "ಅನಿವಾಸಿ ಭಾರತೀಯರು: ಅಮೃತ ಕಾಲ್‌ನಲ್ಲಿ ಭಾರತದ ಪ್ರಗತಿಗೆ ವಿಶ್ವಾಸಾರ್ಹ ಪಾಲುದಾರರು" ಎಂಬುದಾಗಿದೆ. ಸುಮಾರು 70 ವಿವಿಧ ದೇಶಗಳಿಂದ 3,500 ಕ್ಕೂ ಹೆಚ್ಚು ಡಯಾಸ್ಪೊರಾ ಸದಸ್ಯರು ಪಿಬಿಡಿ ಸಮಾವೇಶಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಸುರಕ್ಷಿತ, ಕಾನೂನು, ಕ್ರಮಬದ್ಧ ಮತ್ತು ಕೌಶಲ್ಯಪೂರ್ಣ ವಲಸೆಯ ಪ್ರಾಮುಖ್ಯತೆಯನ್ನು ಬಲವಾಗಿ ಸಾರುವ ಸ್ಮರಣಾರ್ಥ ಅಂಚೆ ಚೀಟಿ ‘ಸುರಕ್ಷಿತ್ ಜಾಯೇನ್, ಪ್ರಶಿಕ್ಷಿತ್ ಜಾಯೇನ್’ ಅನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತದ ಸ್ವಾತಂತ್ರ್ಯದಲ್ಲಿ ನಮ್ಮ ಡಯಾಸ್ಪೊರಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಎತ್ತಿ ಹಿಡಿಯಲು "ಆಜಾದಿ ಕಾ ಅಮೃತ ಮಹೋತ್ಸವ - ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅನಿವಾಸಿ ಭಾರತೀಯರ ಕೊಡುಗೆ" ಎಂಬ ಕುರಿತು ಮೊಟ್ಟಮೊದಲ ಡಿಜಿಟಲ್ ಪಿಬಿಡಿ ಪ್ರದರ್ಶನವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು.

ಪಿಬಿಡಿ ಸಮಾವೇಶವು ಐದು ವಿಷಯಾಧಾರಿತ ಗೋಷ್ಠಿಗಳನ್ನು ಒಳಗೊಂಡಿದೆ-
 
• ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಅಧ್ಯಕ್ಷತೆಯಲ್ಲಿ 'ಆವಿಷ್ಕಾರಗಳು ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಅನಿವಾಸಿ ಭಾರತೀಯ ಯುವಕರ ಪಾತ್ರ' ಕುರಿತಂತೆ ಮೊದಲ ಗೋಷ್ಠಿ. 

• ಎರಡನೇ ಗೋಷ್ಠಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ “ವಿಷನ್@2047: ಅಮೃತ ಕಾಲದಲ್ಲಿ ಭಾರತೀಯ ಆರೋಗ್ಯ ಪೂರಕ ವ್ಯವಸ್ಥೆಗಳ ಉತ್ತೇಜನದಲ್ಲಿ ಅನಿವಾವಿ ಭಾರತೀಯರ ಪಾತ್ರ’’ ಎಂಬುದಾಗಿದೆ. ಅದರಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ.ರಾಜಕುಮಾರ್ ರಂಜನ್ ಸಿಂಗ್ ಸಹ ಅಧ್ಯಕ್ಷತೆ ವಹಿಸುವರು. 

• ಮೂರನೇ ಗೋಷ್ಠಿ, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಅವರ ಅಧ್ಯಕ್ಷತೆಯಲ್ಲಿ 'ಭಾರತದ ಮೃದು ಶಕ್ತಿ ಬಳಕೆ- ಕರಕುಶಲ, ಪಾಕಪದ್ಧತಿ ಮತ್ತು ಸೃಜನಶೀಲತೆಯ ಮೂಲಕ ಉತ್ತಮ ಭಾವನೆ ಮೂಡಿಸುವುದು' ಎಂಬುದಾಗಿದೆ.

• ನಾಲ್ಕನೆ ಗೋಷ್ಠಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ 'ಭಾರತೀಯ ಉದ್ಯೋಗಿಗಳ ಜಾಗತಿಕ ಚಲನಶೀಲತೆ ಸಕ್ರಿಯಗೊಳಿಸುವುದು – ಅನಿವಾಸಿ ಭಾರತೀಯ ಪಾತ್ರ' ಕುರಿತು. 

• ಐದನೇ ಗೋಷ್ಠಿ, ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 'ದೇಶದ ನಿರ್ಮಾಣಕ್ಕೆ ಎಲ್ಲರನ್ನು ಒಳಗೊಳ್ಳುವ ವಿಧಾನದಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳ ಸಾಮರ್ಥ್ಯ ಬಳಸಿಕೊಳ್ಳುವುದು' ಎಂಬು ಕುರಿತಾಗಿದೆ. 

• ಎಲ್ಲಾ ಪ್ರಮುಖ ಗೋಷ್ಠಿಗಳಲ್ಲಿ ಹೆಸರಾಂತ ಅನಿವಾಸಿ ಭಾರತೀಯ ತಜ್ಞರನ್ನು ಆಹ್ವಾನಿಸುವ ಸಂವಾದಗಳು ಒಳಗೊಂಡಿರುತ್ತವೆ.

17 ನೇ ಪಿಬಿಡಿ ಸಮಾವೇಶವು ಮಹತ್ವವನ್ನು ಹೊಂದಿದೆ, ಏಕೆಂದರೆ ಇದು ಕೋವಿಡ್ -19 ಸಾಂಕ್ರಾಮಿಕ ರೋಗದ ಕಾಣಿಸಿಕೊಂಡ ನಂತರ ನಾಲ್ಕು ವರ್ಷಗಳ ಬಿಡುವಿನ ಬಳಿಕ  ಮೊದಲ ಬಾರಿಗೆ ಭೌತಿಕವಾಗಿ  ನಡೆಯುತ್ತಿದೆ. 2021 ರಲ್ಲಿ ಕೊನೆಯ ಪಿಬಿಡಿ ಸಮಾವೇಶ ಸಾಂಕ್ರಾಮಿಕ ಸಮಯದಲ್ಲಿ ವರ್ಚುವಲ್ ರೂಪದಲ್ಲಿ ನಡೆಸಲಾಗಿತ್ತು. 

 


 

*****

 



(Release ID: 1889892) Visitor Counter : 202