ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮುಖ್ಯ ಕಾರ್ಯದರ್ಶಿಗಳ 2ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನ ಮಂತ್ರಿಗಳ ಭಾಷಣ


ʼಮಹತ್ವಾಕಾಂಕ್ಷಿ ಬ್ಲಾಕ್‌ ಕಾರ್ಯಕ್ರಮʼಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳು; ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮವನ್ನು ಬ್ಲಾಕ್‌ ಹಂತದಲ್ಲಿ ಅನುಸರಿಸಲು ರಾಜ್ಯಗಳಿಗೆ ಸೂಚನೆ

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ದೇಶವು ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಹಾಗೂ ಒಳಗೊಳ್ಳುವಿಕೆ ಎಂಬ ನಾಲ್ಕು ಆಧಾರಸ್ತಂಭಗಳತ್ತ ಗಮನ ಕೇಂದ್ರೀಕರಿಸಿದೆ: ಪ್ರಧಾನ ಮಂತ್ರಿಗಳು

ಜಾಗತಿಕ ಪೂರೈಕೆ ಸರಪಳಿ ವ್ಯವಸ್ಥೆಯಲ್ಲಿ ಸ್ಥಿರತೆ ತರಲು ಇಡೀ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ: ಪ್ರಧಾನ ಮಂತ್ರಿಗಳು

ಎಂಎಸ್‌ಎಂಇಗಳನ್ನು ಜಾಗತಿಕ ಚಾಂಪಿಯನ್‌ಗಳನ್ನಾಗಿ ಮಾಡಲು ಹಾಗೂ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಿಸಲು ಕ್ರಮ ವಹಿಸಬೇಕು: ಪ್ರಧಾನ ಮಂತ್ರಿಗಳ ಕರೆ

ಸ್ವ- ಪ್ರಮಾಣೀಕರಣ, ಯಾಂತ್ರೀಕೃತ  (ಡೀಮ್ಡ್‌) ಅನುಮೋದನೆಗಳು ಹಾಗೂ ವಿಧಾನಗಳ ಪ್ರಮಾಣೀಕರಣದತ್ತ ಮುಂದುವರಿಯಬೇಕು: ಪ್ರಧಾನ ಮಂತ್ರಿಗಳು

ಸೈಬರ್‌ ಸುರಕ್ಷತೆಯ ಬಲವರ್ಧನೆಗೆ ಒತ್ತು ನೀಡುವ ಜತೆಗೆ ಭೌತಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳ ಕುರಿತಂತೆಯೂ ಚರ್ಚಿಸಿದ ಪ್ರಧಾನ ಮಂತ್ರಿಗಳು

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಹಾಗೂ ಸಿರಿಧಾನ್ಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿನ ಪ್ರಯತ್ನಗಳ ಮಹತ್ವದ ಬಗ್ಗೆಯೂ ಸಮಾಲೋಚಿಸಿದ ಪ್ರಧಾನ ಮಂತ್ರಿಗಳು

Posted On: 07 JAN 2023 9:54PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಹೊಸದಿಲ್ಲಿಯಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ 2022ರ ಜೂನ್‌ನಲ್ಲಿ ನಡೆದ ಸಮ್ಮೇಳನದ ನಂತರ ರಾಷ್ಟ್ರವು ಸಾಧಿಸಿದ ಅಭಿವೃದ್ಧಿಯ ಮೈಲುಗಲ್ಲುಗಳನ್ನು ನೆನಪಿಸಿದ ಪ್ರಧಾನ ಮಂತ್ರಿಗಳು, ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವುದು, ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿರುವುದು, ಹೊಸ ನವೋದ್ಯೋಗಗಳ ವ್ಯಾಪಕ ನೋಂದಣಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆ, ರಾಷ್ಟ್ರೀಯ ಸಾಗಣೆ (ಲಾಜಿಸ್ಟಿಕ್‌) ನೀತಿ ಜಾರಿ, ರಾಷ್ಟ್ರೀಯ ಹಸಿರು ಜಲಜನಕ (ಗ್ರೀನ್‌ ಹೈಡ್ರೋಜನ್‌) ಮಿಷನ್‌ಗೆ ಅನುಮೋದನೆ ಸೇರಿದಂತೆ ಇತರೆ ಮೈಲುಗಲ್ಲುಗಳನ್ನುಉಲ್ಲೇಖಿಸಿ ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಒಟ್ಟಿಗೆ ಕೆಲಸ ಮಾಡುವ ಜತೆಗೆ ಪ್ರಗತಿಯ ವೇಗ ಹೆಚ್ಚಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ದೇಶವು ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಹಾಗೂ ಒಳಗೊಳ್ಳುವಿಕೆ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಗಮನ ಕೇಂದ್ರೀಕರಿಸಿದೆ ಎಂದ ಪ್ರಧಾನ ಮಂತ್ರಿಗಳು, ಇಂದು ಇಡೀ ಜಗತ್ತು ಭಾರತದ ಮೇಲೆ ಅಮಿತ ವಿಶ್ವಾಸವಿಟ್ಟಿರುವುದು ಮಾತ್ರವಲ್ಲದೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಥಿರತೆ ತರುವ ರಾಷ್ಟ್ರವಾಗಿ ಭಾರತವನ್ನು ಕಾಣುತ್ತಿವೆ. ರಾಜ್ಯಗಳು ಇದರ ನೇತೃತ್ವ ವಹಿಸಿಕೊಂಡು ಭಾರತದ ಮೊಟ್ಟ ಮೊದಲ ಗುಣಮಟ್ಟದ ಹಾಗೂ ಸಕಾಲಿಕ ನಿರ್ಧಾರಗಳನ್ನು ಕೈಗೊಂಡರಷ್ಟೇ ಇದರ ಪ್ರಯೋಜನವನ್ನು ಭಾರತವು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯಗಳು ಅಭಿವೃದ್ಧಿಪರ ಆಡಳಿತ, ವ್ಯಾಪಾರ- ವಹಿವಾಟಿಗೆ ಸುಗಮ ವ್ಯವಸ್ಥೆ, ಸುಗಮ ಜೀವನ ನಿರ್ವಹಣೆಗೆ ಪೂರಕ ವ್ಯವಸ್ಥೆ ಹಾಗೂ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.

ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿಯವರು ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದಡಿ ದೇಶದ ಹಲವು ಮಹತ್ವಾಕಾಂಕ್ಷಿ ಜಿಲ್ಲೆಗಳು ಯಶಸ್ಸು ಸಾಧಿಸಿವೆ ಎಂದು ಒತ್ತಿ ಹೇಳಿದರು. ಮಹತ್ವಾಕಾಂಕ್ಷಿ ಜಿಲ್ಲಾ ಮಾದರಿಯನ್ನು ಮಹತ್ವಾಕಾಂಕ್ಷಿ ಬ್ಲಾಕ್‌ ಕಾರ್ಯಕ್ರಮದಡಿ ಇನ್ನು ಮುಂದೆ ಬ್ಲಾಕ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದ ಪ್ರಧಾನ ಮಂತ್ರಿಗಳು ಸಭೆಯಲ್ಲಿರುವ ಅಧಿಕಾರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಮಹತ್ವಾಕಾಂಕ್ಷಿ ಬ್ಲಾಕ್ ಕಾರ್ಯಕ್ರಮವನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಸೂಚಿಸಿದರು.

ಎಂಎಸ್‌ಎಂಇಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು, ಎಂಎಸ್‌ಎಂಇಗಳನ್ನು ಇನ್ನಷ್ಟು ಔಪಚಾರಿಕಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಎಂಎಸ್‌ಎಂಇಗಳನ್ನು ಜಾಗತಿಕ ಮಟ್ಟದಲ್ಲಿ ಸ್ಮರ್ಧಾತ್ಮಕವಾಗಿಸಬೇಕಾದರೆ ನಾವು ಹಣಕಾಸು, ತಂತ್ರಜ್ಞಾನ, ಮಾರುಕಟ್ಟೆ ಹಾಗೂ ಕೌಶಲ್ಯ ವ್ಯವಸ್ಥೆ ಸಿಗುವಂತೆ ಮಾಡಬೇಕಾಗುತ್ತದೆ. ಗವರ್ನಮೆಂಟ್‌ ಇ ಮಾರ್ಕೆಟ್‌ಪ್ಲೇಸ್‌ (ಜಿಇಎಂ) ಪೋರ್ಟಲ್‌ ವ್ಯಾಪ್ತಿಗೆ ಹೆಚ್ಚು ಹೆಚ್ಚು ಎಂಎಸ್‌ಎಂಇಗಳನ್ನು ತರಬೇಕಿದೆ. ಎಂಎಸ್‌ಎಂಇಗಳನ್ನು ಜಾಗತಿಕ ಮಟ್ಟದಲ್ಲಿ ಚಾಂಪಿಯನ್‌ಗಳನ್ನಾಗಿ ಮಾಡಲು ಹಾಗೂ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು. ಎಂಎಸ್‌ಎಂಇಗಳ ಅಭಿವೃದ್ಧಿಯಲ್ಲಿ ಕ್ಲಸ್ಟರ್‌ ವಿಧಾನದ ಯಶಸ್ಸಿನ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಎಂಎಸ್‌ಎಂಇ ಕ್ಲಸ್ಟರ್‌ಗಳು ಹಾಗೂ ಸ್ವಸಹಾಯ ಗುಂಪುಗಳನ್ನು ಜೋಡಿಸುವ ಮೂಲಕ ವಿಶಿಷ್ಠ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಬಹುದಾಗಿದೆ. ಹಾಗೆಯೇ ಅವುಗಳಿಗೆ ಜಿಇ ಟ್ಯಾಗಿಂಗ್‌ ನೋಂದಣಿ ಪಡೆಯುವ ಜತೆಗೆ ಅದನ್ನು ʼಒಂದು ಜಿಲ್ಲೆ ಒಂದು ಉತ್ಪನ್ನʼ ಪರಿಕಲ್ಪನೆಯೊಂದಿಗೂ ಸಂಯೋಜಿಸಬಹುದಾಗಿದೆ. ಇದು ಸ್ಥಳೀಯವಾಗಿಯೇ ಅತ್ಯುತ್ತಮ ಉತ್ಪನ್ನಗಳನ್ನು ಪಡೆಯುವ ಆಶಯವನ್ನೂ ಸಾಕಾರಗೊಳಿಸಲಿದೆ. ರಾಜ್ಯಗಳು ತಮ್ಮ ಅತ್ಯುತ್ತಮ ಸ್ಥಳೀಯ ಉತ್ಪನ್ನಗಳನ್ನು ಗುರುತಿಸುವ ಜತೆಗೆ ಅವುಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಂತೆ ಪ್ರಯತ್ನ ನಡೆಸಬೇಕು ಎಂದ ಪ್ರಧಾನ ಮಂತ್ರಿಗಳು ಏಕತಾ ಪ್ರತಿಮೆ ಪ್ರದೇಶದಲ್ಲಿನ ಏಕತಾ ಮಾಲ್‌ನ ಉದಾಹರಣೆ ನೀಡಿದರು.

ದೇಶವು ಒಮ್ಮೆ ಮಿತಿಮೀರಿದ ನಿಯಂತ್ರಣ ಮತ್ತು ನಿರ್ಬಂಧಗಳ ಹೊರೆಯಿಂದ ಅನುಭವಿಸಿದ ತೊಂದರೆ, ಸವಾಲುಗಳನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಸಾವಿರಾರು ಪರಿಹಾರ ಅನುಕ್ರಮಗಳ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿ ಹೊಸ ಸುಧಾರಣೆ ತರಲಾಯಿತು ಎಂದರು. ಸ್ವಾತಂತ್ರ್ಯಾ ನಂತರದಿಂದಲೂ ಜಾರಿಯಲ್ಲಿರುವಂತಹ ಕೆಲ ಹಳೆಯ ಕಾನೂನುಗಳಿಗೂ ಅಂತ್ಯ ಹಾಡಬೇಕಿದೆ ಎಂದು ಹೇಳಿದರು.

ಒಂದೇ ದಾಖಲೆಯನ್ನು ಸರಕಾರದ ನಾನಾ ಇಲಾಖೆಗಳು ಹೇಗೆ ಕೇಳುತ್ತವೆ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ನಾವು ಸ್ವಯಂ ಪ್ರಮಾಣೀಕರಣ, ಸ್ವಯಂ ಅನುಮೋದನೆಗಳು (ಡೀಮ್ಡ್‌) ಹಾಗೂ ವಿಧಾನಗಳ ಪ್ರಮಾಣೀಕರಣದತ್ತ ಕಾರ್ಯಪ್ರವೃತ್ತವಾಗುವುದು ಇಂದಿನ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಭೌತಿಕ ಹಾಗೂ ಸಾಮಾಜಿಕ ಮೂಲಸೌಕರ್ಯ ಎರಡನ್ನೂ ಉತ್ತಮಗೊಳಿಸುವಲ್ಲಿ ದೇಶ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿಗಳು, ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಬಗ್ಗೆಯೂ ಪ್ರಸ್ತಾಪಿಸಿದರು. ದತ್ತಾಂಶ ಸುರಕ್ಷತೆ ಹಾಗೂ ಅಗತ್ಯ ಸೇವೆಗಳ ತಡೆರಹಿತ ಪೂರೈಕೆಗೆ ಸುರಕ್ಷಿತ ತಾಂತ್ರಿಕ ಮೂಲಸೌಕರ್ಯ ಕಲ್ಪಿಸುವಲ್ಲಿನ ಸವಾಲುಗಳ ಬಗ್ಗೆಯೂ ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ರಾಜ್ಯಗಳು ಸದೃಢ ಸೈಬರ್‌ ಸುರಕ್ಷತಾ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಭವಿಷ್ಯ ಸುರಕ್ಷತೆಗೆ ವಿಮೆ ಎಂಬಂತೆ ಪರಿಗಣಿಸಬೇಕು ಎಂದು ಹೇಳಿದರು. ಹಾಗೆಯೇ, ಸೈಬರ್‌ ಭದ್ರತಾ ಆಡಿಟ್‌ ನಿರ್ವಹಣಾ ವ್ಯವಸ್ಥೆ ಹಾಗೂ ಬಿಕ್ಕಟ್ಟು ನಿರ್ವಹಣಾ ಸೂತ್ರಗಳ ಅಭಿವೃದ್ಧಿ ಕುರಿತಂತೆಯೂ ಪ್ರಧಾನ ಮಂತ್ರಿಗಳು ಸಭೆಯಲ್ಲಿ ಚರ್ಚಿಸಿದರು.

ದೇಶದ ಕರಾವಳಿ ಭಾಗಗಳ ಅಭಿವೃದ್ಧಿ ಬಗ್ಗೆಯೂ ಸಮಾಲೋಚಿಸಿದ ಪ್ರಧಾನ ಮಂತ್ರಿಗಳು, ದೇಶದ ವಿಶಾಲವಾದ ವಿಶೇಷ ಆರ್ಥಿಕ ವಲಯವು ಸಂಪನ್ಮೂಲಗಳೊಂದಿಗೆ ಸುಸಜ್ಜಿತವಾಗಿರುವ ಜತೆಗೆ ದೇಶಕ್ಕೆ ವಿಫುಲ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ಹೇಳಿದರು. ಆರ್ಥಿಕತೆ ಕುರಿತಂತೆ ವ್ಯಾಪಕ ಅರಿವು ಮೂಡಿಸಬೇಕಾದ ಅಗತ್ಯವಿದ್ದು, 
ಮಿಷನ್ ಲೈಫ್ (ಪರಿಸರಸ್ನೇಹಿ ಜೀವನಶೈಲಿ) ಹಾಗೂ ಅದನ್ನು ಮುಂದುವರಿಸುವಲ್ಲಿ ರಾಜ್ಯಗಳು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

ಭಾರತದ ಉಪಕ್ರಮದ ಪರಿಣಾಮವಾಗಿ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿದೆ ಎಂಬುದನ್ನು ನೆನಪಿಸಿದ  ಪ್ರಧಾನಮಂತ್ರಿಗಳು, ಸಿರಿಧಾನ್ಯಗಳು ಕೇವಲ ಸ್ಮಾರ್ಟ್ ಆಹಾರ ಮಾತ್ರವಲ್ಲದೆ, ಪರಿಸರ ಸ್ನೇಹಿ ಜತೆಗೆ ಭವಿಷ್ಯದ ಸುಸ್ಥಿರ ಆಹಾರವಾಗಿ ಹೊರಹೊಮ್ಮಬಹುದಾಗಿದೆ. ಸಿರಿಧಾನ್ಯ  ಉತ್ಪನ್ನಗಳ ಸಂಸ್ಕರಣೆ, ಪ್ಯಾಕೇಜಿಂಗ್‌, ಮಾರುಕಟ್ಟೆ ವ್ಯವಸ್ಥೆ, ಬ್ರಾಂಡಿಂಗ್‌ ಇತರೆ ಅಂಶಗಳಿಗೆ ಸಂಬಂಧಪಟ್ಟಂತೆ ರಾಜ್ಯಗಳು ಸಂಶೋಧನೆಗೆ ಒತ್ತು ನೀಡಬೇಕು ಹಾಗೂ ಸಿರಿಧಾನ್ಯಗಳನ್ನು ಮೌಲ್ಯವರ್ಧನೆಗೆ ಉತ್ತೇಜನ ನೀಡಬೇಕು. ಪ್ರಮುಖ ಸಾರ್ವಜನಿಕ ಸ್ಥಳಗಳು ಹಾಗೂ ದೇಶಾದ್ಯಂತ ರಾಜ್ಯ ಸರಕಾರಗಳ ಕಚೇರಿಗಳ ಬಳಿ ʼಸಿರಿಧಾನ್ಯ ಕೆಫೆʼ (ಮಿಲ್ಲೆಟ್‌ ಕೆಫೆ) ಸ್ಥಾಪನೆಗೆ ಒತ್ತು ನೀಡಬೇಕು. ಜಿ20 ಶೃಂಗಸಭೆಯ ಭಾಗವಾಗಿ ರಾಜ್ಯಗಳಲ್ಲಿ ನಡೆಯುವ ಸಭೆಗಳಲ್ಲೂ ಸಿರಿಧಾನ್ಯಗಳನ್ನು ಪ್ರದರ್ಶಿಸಬಹುದು ಎಂದು ಸಲಹೆ ನೀಡಿದರು.

ರಾಜ್ಯಗಳಲ್ಲಿ ಜಿ20 ಶೃಂಗದ ಭಾಗವಾಗಿ ನಡೆಯುವ ಸಭೆಗಳ ಸಿದ್ಧತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಸಾಮಾನ್ಯ ಜನರನ್ನೂ ಇದರಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದರು. ಸಾಮಾನ್ಯರ ಸಂಪರ್ಕ ಸಾಧನೆಗಾಗಿ ಸೃಜನಶೀಲ ಕ್ರಮಗಳನ್ನು ಕೈಗೊಳ್ಳಬೇಕು. ಜಿ20 ಶೃಂಗದ ಪೂರಕ ಸಭೆಗಳ ಸಿದ್ಧತೆಗೆಂದೇ ಮೀಸಲಾದ ಒಂದು ತಂಡವನ್ನು ರಚಿಸಿಕೊಳ್ಳುವುದು ಸೂಕ್ತ. ಹಾಗೆಯೇ ಮಾದಕ ವಸ್ತುಗಳು, ಅಂತಾರಾಷ್ಟ್ರೀಯ ಅಪರಾಧಗಳು, ಭಯೋತ್ಪಾದನೆ ಹಾಗೂ ವಿದೇಶಿ ನೆಲದಲ್ಲಿ ಸೃಷ್ಟಿಯಾಗುವ ಸುಳ್ಳು ಮಾಹಿತಿಗಳ ಬಗ್ಗೆಯೂ ರಾಜ್ಯಗಳು ಎಚ್ಚರದಿಂದಿರಬೇಕು ಎಂದು ಎಚ್ಚರಿಸಿದರು.

ಅಧಿಕಾರಶಾಹಿಯ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದ ಪ್ರಧಾನ ಮಂತ್ರಿಗಳು, ಮಿಷನ್‌ ಕರ್ಮಯೋಗಿಗೆ ಚಾಲನೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದರು.  ರಾಜ್ಯ ಸರಕಾರಗಳು ತಮ್ಮ ತರಬೇತಿ ಮೂಲಸೌಕರ್ಯ ವ್ಯವಸ್ಥೆಯ ಪರಿಶೀಲನೆ ಜತೆಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಬಗ್ಗೆಯೂ ಚಿಂತಿಸಬೇಕು ಎಂದು ಪ್ರಧಾನ ಮಂತ್ರಿಗಳು ಸಲಹೆ ನೀಡಿದರು.

ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ ಸುಗಮವಾಗಿ ನಡೆಯಲು ನಾನಾ ಹಂತಗಳಲ್ಲಿ ಸುಮಾರು 4000 ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಅಂದರೆ ಈ ಸಮ್ಮೇಳನಕ್ಕಾಗಿ ಸುಮಾರು 1.15 ಲಕ್ಷ ಮಾನವ ಗಂಟೆಗಳ ವಿನಿಯೋಗವಾಗಿದೆ. ಹಾಗಾಗಿ ಇದರ ಪ್ರತಿಫಲಗಳು ತಳಮಟ್ಟದಿಂದ ಪ್ರತಿಬಿಂಬಿತವಾಗಲು ಶುರುವಾಗಬೇಕು. ಸಮ್ಮೇಳನದಿಂದ ಹೊರಹೊಮ್ಮುವ ಸಲಹೆಗಳ ಆಧಾರದ ಮೇಲೆ ರಾಜ್ಯಗಳು ಕ್ರಿಯಾ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ನೀತಿ ಆಯೋಗವು ರಾಜ್ಯಗಳ ನಡುವೆ ಆರೋಗ್ಯಕರ ಪೈಪೋಟಿ ಸೃಷ್ಟಿಸಬೇಕು ಎಂದು ಸಲಹೆ ನೀಡುವ ಮೂಲಕ ಮಾತಿಗೆ ವಿರಾಮ ಹೇಳಿದರು.



(Release ID: 1889580) Visitor Counter : 133