ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2023 ರ ಜನವರಿ 6 ರಂದು ವೈ 20 ಶೃಂಗಸಭೆಯ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ವೈ 20 ಶೃಂಗಸಭೆಯ ಶೀರ್ಷಿಕೆಗಳು, ಲಾಂಛನ ಮತ್ತು ಜಾಲತಾಣವನ್ನು  ಉದ್ಘಾಟಿಸಲಿದ್ದಾರೆ


ವೈ 20 ರ ಅಂಗವಾಗಿ ಕೈಗೊಳ್ಳಬೇಕಾದ ಕಾರ್ಯ  ಚಟುವಟಿಕೆಗಳು ಜಾಗತಿಕ ಯುವ ನಾಯಕತ್ವ ಮತ್ತು ಸಹಭಾಗಿತ್ವವನ್ನು ಕೇಂದ್ರೀಕರಿಸಿರುತ್ತವೆ

Posted On: 05 JAN 2023 12:26PM by PIB Bengaluru

ಮುಖ್ಯಾಂಶಗಳು: 
• ಮುಂದಿನ 8 ತಿಂಗಳುಗಳವರೆಗೆ, ಅಂತಿಮ ಯೂತ್ -20 ಶೃಂಗಸಭೆಗೆ ಪೂರ್ವಭಾವಿಯಾಗಿ, ಐದು ವೈ20 (ಯೂತ್ 20) ಶೀರ್ಷಿಕೆಗಳ ಬಗ್ಗೆ ಶೃಂಗಸಭೆಗಳು ಮತ್ತು ಭಾರತದ ವಿವಿಧ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಚರ್ಚೆಗಳು ಮತ್ತು ವಿಚಾರ ಸಂಕಿರಣಗಳು ನಡೆಯಲಿವೆ.

• ಪ್ರಪಂಚದಾದ್ಯಂತದ ಯುವ ನಾಯಕರನ್ನು ಒಟ್ಟುಗೂಡಿಸುವುದು ಮತ್ತು ಉತ್ತಮ ನಾಳೆಗಾಗಿ ಚಿಂತನೆಗಳನ್ನು ನಡೆಸುವುದು ಹಾಗು  ಕಾರ್ಯಸೂಚಿಯನ್ನು ರೂಪಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ.

ಕೇಂದ್ರ ಯುವಜನ  ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2023 ರ ಜನವರಿ 6 ರಂದು ಹೊಸದಿಲ್ಲಿಯ ಆಕಾಶವಾಣಿ ರಂಗ ಭವನದಲ್ಲಿ ವೈ 20 ಶೃಂಗಸಭೆಯ ಪೂರ್ವಭಾವೀ (ಕರ್ಟನ್ ರೈಸರ್) ಕಾರ್ಯಕ್ರಮದಲ್ಲಿ ವೈ 20 ಶೃಂಗಸಭೆಯ ಶೀರ್ಷಿಕೆಗಳು, ಲಾಂಛನ ಮತ್ತು ಜಾಲತಾಣವನ್ನು  ಅನಾವರಣಗೊಳಿಸುವರು. ಭಾರತವು ವೈ 20 ಶೃಂಗಸಭೆಯ ಆತಿಥ್ಯವನ್ನು  ವಹಿಸುತ್ತಿದೆ.

ಜನವರಿ 6 ರ ಕಾರ್ಯಕ್ರಮವನ್ನು ಎರಡು ಅಧಿವೇಶನಗಳಾಗಿ ವಿಂಗಡಿಸಲಾಗುವುದು: - ಮೊದಲ ಅಧಿವೇಶನದಲ್ಲಿ, ಲಾಂಛನ  ಅನಾವರಣ, ಜಾಲತಾಣ  ಅನಾವರಣ ಮತ್ತು ಶೀರ್ಷಿಕೆಗಳ ಅನಾವರಣವನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನೆರವೇರಿಸಲಿದ್ದಾರೆ. ಎರಡನೇ ಅಧಿವೇಶನದಲ್ಲಿ, ಗುಂಪು ಚರ್ಚೆಗಳು (ಯುವ ಸಾಧಕರು) ನಡೆಯುತ್ತವೆ. ಅದು ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ಭಾರತವು ತನ್ನ ಯುವ ಜನಸಮೂಹವನ್ನು  ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮತ್ತು ಪ್ಯಾನೆಲಿಸ್ಟ್ ಗಳ ವೈಯಕ್ತಿಕ ಯಶೋಗಾಥೆಗಳನ್ನು ಹೇಗೆ  ಚರ್ಚಿಸಬಹುದು ಎಂಬುದರ ಬಗ್ಗೆ ಕೇಂದ್ರೀಕರಣಗೊಂಡಿರುತ್ತದೆ.

ಯೂತ್ 20ರ  ಒಳಗೊಳ್ಳುವ (ಎಂಗೇಜ್ಮೆಂಟ್) ತಂಡಕ್ಕೆ ಸಂಬಂಧಿಸಿ , ವಿಶ್ವದಾದ್ಯಂತದ ಯುವ ನಾಯಕರನ್ನು ಒಟ್ಟುಗೂಡಿಸುವುದು ಮತ್ತು ಉತ್ತಮ ನಾಳೆಗಾಗಿ ಚಿಂತನೆಗಳನ್ನು ನಡೆಸಿ,  ಸಮಾಲೋಚಿಸಿ  ಆ ನಿಟ್ಟಿನಲ್ಲಿ  ಕಾರ್ಯಸೂಚಿಯನ್ನು ರೂಪಿಸುವುದರತ್ತ ಭಾರತದ ಗಮನ ಕೇಂದ್ರೀಕೃತವಾಗಿದೆ. 

ವೈ 20 ರ  ನಮ್ಮ ಅಧ್ಯಕ್ಷೀಯ ಅವಧಿಯಲ್ಲಿ  ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು ಜಾಗತಿಕ ಯುವ ನಾಯಕತ್ವ ಮತ್ತು ಪಾಲುದಾರಿಕೆಯ ಮೇಲೆ ಗಮನ ಕೇಂದ್ರೀಕರಿಸಿರುತ್ತವೆ. ಮುಂದಿನ 8 ತಿಂಗಳುಗಳ ಕಾಲ, ಅಂತಿಮ ಯೂತ್ -20 ಶೃಂಗಸಭೆಗೆ ಪೂರ್ವಭಾವಿಯಾಗಿ, ಐದು ವೈ 20 ಶೀರ್ಷಿಕೆಗಳ ಬಗ್ಗೆ ಪೂರ್ವಭಾವಿ ಶೃಂಗಗಳು ಭಾರತದ ವಿವಿಧ ರಾಜ್ಯಗಳಲ್ಲಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ  ಚರ್ಚೆಗಳು ಮತ್ತು ವಿಚಾರ ಸಂಕಿರಣಗಳೊಂದಿಗೆ  ಆಯೋಜನೆಗೊಳ್ಳಲಿವೆ. 

ಭಾರತಕ್ಕೆ ಲಭಿಸಿರುವ   ಜಿ 20ರ  ಅಧ್ಯಕ್ಷತೆಯು,  2022 ರ ಆಗಸ್ಟ್ 15 ರಂದು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಿಂದ ಪ್ರಾರಂಭವಾಗುವ 25 ವರ್ಷಗಳ ಅವಧಿಯಾದ "ಅಮೃತ್ಕಾಲ್" ನ ಆರಂಭವನ್ನು ಸಹ ಸೂಚಿಸುತ್ತದೆ. ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ಕಾಲಘಟ್ಟದಲ್ಲಿ, ಭವಿಷ್ಯವಾದಿ, ಸಮೃದ್ಧ, ಎಲ್ಲರನ್ನೂ ಒಳಗೊಳ್ಳುವ  ಮತ್ತು ಅಭಿವೃದ್ಧಿ ಹೊಂದಿದ ಸಮಾಜ ನಿರ್ಮಾಣದತ್ತ ಸಾಗುವುದರ ಆರಂಭವೂ ಇದಾಗಿದೆ.   ಇವೆಲ್ಲದರ  ಕೇಂದ್ರ ಬಿಂದುವಿನಲ್ಲಿ ಮಾನವ-ಕೇಂದ್ರಿತ ಧೋರಣೆ ಇರಲಿದೆ.

ವಸುದೈವ ಕುಟುಂಬಕಂನ ಕಲ್ಪನೆಯ ಹಿನ್ನೆಲೆಯಲ್ಲಿ  ಸರ್ವರ ಒಳಿತು ಹಾಗು  ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಭಾರತವು ಮಹತ್ವದ ಪಾತ್ರ ವಹಿಸುತ್ತಿದೆ.

*****



(Release ID: 1888901) Visitor Counter : 184