ಪಿಎಮ್‍ಇಎಸಿ

ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಸಾಮಾಜಿಕ ಪ್ರಗತಿ ಸೂಚ್ಯಂಕ (ಎಸ್ಪಿಐ) ಬಿಡುಗಡೆ ಮಾಡಲಿದೆ ಇಎಸಿ-ಪಿಎಂ

Posted On: 15 DEC 2022 5:19PM by PIB Bengaluru

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಡಿಸೆಂಬರ್ 20, 2022 ರಂದು ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಸಂಬಂಧಿಸಿದ ಸಾಮಾಜಿಕ ಪ್ರಗತಿ ಸೂಚ್ಯಂಕವನ್ನು (ಎಸ್ಪಿಐ) ಬಿಡುಗಡೆ ಮಾಡಲಿದೆ. ಡಾ. ಅಮಿತ್ ಕಪೂರ್ ನೇತೃತ್ವದ ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟಿಟಿವ್ ನೆಸ್ ಮತ್ತು ಮೈಕೆಲ್ ಗ್ರೀನ್ ನೇತೃತ್ವದ ಸೋಶಿಯಲ್ ಪ್ರೋಗ್ರೆಸ್ ಇಂಪರೇಟಿವ್  ಈ ವರದಿಯನ್ನು ಸಿದ್ಧಪಡಿಸಿದೆ ಮತ್ತು ಭಾರತದ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯು ಈ ವರದಿಯನ್ನು ಕಡ್ಡಾಯಗೊಳಿಸಿದೆ.

ಎಸ್ಪಿಐಯು ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ದೇಶವು ಸಾಧಿಸಿದ ಸಾಮಾಜಿಕ ಪ್ರಗತಿಯ ಸಮಗ್ರ ಅಳತೆಗೋಲಾಗಿ ಕಾರ್ಯನಿರ್ವಹಿಸುವ  ಇರಾದೆಯನ್ನು ಹೊಂದಿರುವ ಒಂದು ಸಮಗ್ರ ಸಾಧನವಾಗಿದೆ. ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸಲು ನಾಗರಿಕರ ಸಾಮಾಜಿಕ ಪ್ರಗತಿಯು ಪ್ರಮುಖವಾಗಿದೆ. ಈ  ಹಿನ್ನೆಲೆಯಲ್ಲಿ, ಸೂಚ್ಯಂಕವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಸಾಂಪ್ರದಾಯಿಕ ಕ್ರಮಗಳಿಗೆ ಪೂರಕವಾಗಿರುತ್ತದೆ. ಸಮಾಜದ ಅಗತ್ಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲ ಮಾಪನ ಮಾದರಿಯ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ನಿರ್ಧಾರ ತೆಗೆದುಕೊಳ್ಳುವವರನ್ನು ಅಗತ್ಯ ಜ್ಞಾನ ಮತ್ತು ಸಾಧನಗಳೊಂದಿಗೆ ಸಜ್ಜುಗೊಳಿಸುವುದರ ಜೊತೆಗೆ, ವರದಿಗಾಗಿ ಸೂಕ್ತ ಸೂಚಕಗಳು ಮತ್ತು ಸಾಮಾಜಿಕ ಪ್ರಗತಿಯ ಕ್ರಮಗಳನ್ನು ಗುರುತಿಸಲು ತಂಡವು ವ್ಯಾಪಕವಾದ ಸಂಶೋಧನಾ ಕ್ರಮಗಳನ್ನು ಅನುಸರಿಸಿದೆ.

ಸಾಮಾಜಿಕ ಪ್ರಗತಿಯ ಮೂರು ಆಯಾಮಗಳ ಮೇಲೆ ರಾಜ್ಯಗಳು ಮತ್ತು ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಎಸ್ಪಿಐ ಮೌಲ್ಯಮಾಪನ ಮಾಡುತ್ತದೆ: ಮೂಲಭೂತ ಮಾನವ ಅಗತ್ಯಗಳು, ಯೋಗಕ್ಷೇಮದ ತಳಪಾಯಗಳು ಮತ್ತು ಅವಕಾಶಗಳನ್ನು ಅದು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಪ್ರತಿಯೊಂದು ಆಯಾಮದೊಳಗೆ  ನಾಲ್ಕು ಘಟಕಗಳಿರುತ್ತವೆ.
ಮೂಲಭೂತ ಮಾನವ ಅಗತ್ಯಗಳ ಆಯಾಮವು ಪೌಷ್ಟಿಕತೆ ಮತ್ತು ಮೂಲಭೂತ ವೈದ್ಯಕೀಯ ಆರೈಕೆ, ನೀರು ಮತ್ತು ನೈರ್ಮಲ್ಯ, ವೈಯಕ್ತಿಕ ಸುರಕ್ಷತೆ ಮತ್ತು ಆಶ್ರಯದ ದೃಷ್ಟಿಯಿಂದ ರಾಜ್ಯಗಳು ಮತ್ತು ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. 

ಫೌಂಡೇಶನ್ಸ್ ಆಫ್ ವೆಲ್ ಬೀಯಿಂಗ್ ನ (ಕ್ಷೇಮದ ತಳಪಾಯಗಳು) ಆಯಾಮವು ಮೂಲಭೂತ ಜ್ಞಾನದ ಲಭ್ಯತೆ, ಮಾಹಿತಿ ಮತ್ತು ಸಂವಹನದ ಲಭ್ಯತೆ, ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಪರಿಸರ ಗುಣಮಟ್ಟದ ಘಟಕಗಳನ್ನು ಅನ್ವಯಿಸಿ ದೇಶವು ಸಾಧಿಸಿದ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ. 

ಅವಕಾಶದ ಆಯಾಮವು ವೈಯಕ್ತಿಕ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ, ಒಳಗೊಳ್ಳುವಿಕೆ ಹಾಗು ಉನ್ನತ ಶಿಕ್ಷಣದ ಲಭ್ಯತೆಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.  

ವರದಿಯನ್ನು ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಮತ್ತು ಇಎಸಿ-ಪಿಎಂ ಅಧ್ಯಕ್ಷ ಡಾ. ಬಿಬೆಕ್ ದೇಬ್ರಾಯ್ ಅವರು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವರದಿಯ ಲೇಖಕರಾದ ಸೋಶಿಯಲ್ ಪ್ರಾಗ್ರೆಸ್ ಇಂಪರೇಟಿವ್ ನ  ಸಿಇಒ ಮೈಕೆಲ್ ಗ್ರೀನ್ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕತೆ ಸಂಸ್ಥೆಯ ಗೌರವ ಅಧ್ಯಕ್ಷ ಹಾಗು ಉಪನ್ಯಾಸಕ ಡಾ. ಅಮಿತ್ ಕಪೂರ್ ಅವರು ತಮ್ಮ  ಒಳನೋಟಗಳು ಮತ್ತು ಟಿಪ್ಪಣಿಗಳನ್ನು ಮಂಡಿಸಲಿದ್ದಾರೆ.

 ರಾಜ್ಯ ಮತ್ತು ಜಿಲ್ಲಾವಾರು ಶ್ರೇಣಿಗಳು  ಮತ್ತು ಸ್ಕೋರ್ ಕಾರ್ಡ್ ಗಳೊಂದಿಗೆ, ದೇಶದ ಎಲ್ಲಾ ಹಂತಗಳಲ್ಲಿ ಮಾಡಲಾದ ಸಾಮಾಜಿಕ ಪ್ರಗತಿಯ ಬಗ್ಗೆ ವ್ಯವಸ್ಥಿತವಾದ ನೋಟವನ್ನು ಒದಗಿಸುವ ಗುರಿಯನ್ನು ಈ ವರದಿ ಹೊಂದಿದೆ. ಈ ವರದಿಯು ನಿಗದಿಪಡಿಸಿದ ಸೂಚ್ಯಂಕದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಗಳ ಸಾಧನೆಗಳು ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ವರದಿಯು ಒಂದು ವಿಶೇಷ ವಿಭಾಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ, ಇದು ತಳಮಟ್ಟದಲ್ಲಿ ಸಾಮಾಜಿಕ ಪ್ರಗತಿಯ ಬಗ್ಗೆ ವಿಸ್ತಾರವಾದ ತಿಳುವಳಿಕೆಯನ್ನು ಒದಗಿಸುತ್ತದೆ.  ಈ ವರದಿಯು ಮುಂಬರುವ ವರ್ಷಗಳಲ್ಲಿ ಸುಸ್ಥಿರ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ನೀತಿ ನಿರೂಪಕರಿಗೆ ನಿರ್ಣಾಯಕ ಸಾಧನವಾಗಿ ಒದಗಿಬರಲಿದೆ. 

ನವದೆಹಲಿಯ ತೀನ್ ಮೂರ್ತಿ ಭವನದ ರಾಷ್ಟ್ರೀಯ ನೆಹರು ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ (ಸೆಮಿನಾರ್ ಕೊಠಡಿ) ಡಿಸೆಂಬರ್ 20, 2022 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಈ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.ಬಳಿಕ ಭೋಜನ ಇರುತ್ತದೆ. ಈ ಕಾರ್ಯಕ್ರಮದಲ್ಲಿ  ಮಾಧ್ಯಮಗಳಿಗೆ ಮುಕ್ತ ಪ್ರವೇಶವಿದೆ..

****



(Release ID: 1885041) Visitor Counter : 151


Read this release in: English , Urdu , Hindi , Marathi