ಪ್ರಧಾನ ಮಂತ್ರಿಯವರ ಕಛೇರಿ

ರೋಜ್ಗಾರ್ ಮೇಳದಡಿ ಹೊಸದಾಗಿ ಸೇರ್ಪಡೆಯಾದವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಮಂತ್ರಿ


ಹೊಸದಾಗಿ ನೇಮಕಗೊಂಡವರಿಗೆ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್ - ಆನ್ ಲೈನ್ ಓರಿಯೆಂಟೇಶನ್ ಕೋರ್ಸ್ ಅನ್ನು ಪ್ರಾರಂಭಿಸುತ್ತದೆ

" ರೋಜ್ಗಾರ್ ಮೇಳವು ಯುವಕರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ವೇಗವರ್ಧಕವನ್ನಾಗಿ ಮಾಡುವ ನಮ್ಮ ಪ್ರಯತ್ನವಾಗಿದೆ "

" ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ಸರ್ಕಾರವು ಮಿಷನ್ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ "

" ರಾಷ್ಟ್ರ ನಿರ್ಮಾಣಕ್ಕಾಗಿ ಯುವಜನರ ಪ್ರತಿಭೆ ಮತ್ತು ಶಕ್ತಿಯನ್ನು ಬಳಸಿಕೊಳ್ಳುವುದು ಕೇಂದ್ರ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ "

"' ಕರ್ಮಯೋಗಿ ಭಾರತ್ ' ತಂತ್ರಜ್ಞಾನ ವೇದಿಕೆಯು ಕೌಶಲ್ಯವನ್ನು ಹೆಚ್ಚಿಸಲು ದೊಡ್ಡ ಸಹಾಯ ಮಾಡುತ್ತದೆ "

"ವಿಶ್ವದಾದ್ಯಂತದ ತಜ್ಞರು ಭಾರತದ ಬೆಳವಣಿಗೆಯ ಪಥದ ಬಗ್ಗೆ ಆಶಾವಾದಿಗಳಾಗಿದ್ದಾರೆ "

" ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೊಸ ಉದ್ಯೋಗಗಳ ಸಾಧ್ಯತೆ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಅವಕಾಶಗಳು ತಮ್ಮದೇ ಆದ ನಗರಗಳು ಮತ್ತು ಹಳ್ಳಿಗಳಲ್ಲಿ ಯುವಕರಿಗೆ ಲಭಿಸುತ್ತಿವೆ " 

"ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಹಾದಿಯಲ್ಲಿರುವ ಸಹೋದ್ಯೋಗಿಗಳು ಮತ್ತು ಸಹ-ಪ್ರಯಾಣಿಕರು "

Posted On: 22 NOV 2022 11:42AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರೋಜ್ಗಾರ್ ಮೇಳದಡಿ ಹೊಸದಾಗಿ ಸೇರ್ಪಡೆಯಾದವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರ ಪಾಲ್ಗೊಳ್ಳುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವಲ್ಲಿ ರೋಜ್ಗಾರ್ ಮೇಳವು ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ ಹಿಂದೆ ಅಕ್ಟೋಬರ್ ನಲ್ಲಿ, ರೋಜ್ಗಾರ್ ಮೇಳದ ಅಡಿಯಲ್ಲಿ ಹೊಸದಾಗಿ ನೇಮಕಗೊಂಡವರಿಗೆ 75,000 ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿತ್ತು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ 45 ಕ್ಕೂ ಹೆಚ್ಚು ನಗರಗಳಲ್ಲಿ 71,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದ್ದು, ಇದು ಅನೇಕ ಕುಟುಂಬಗಳಿಗೆ ಸಂತೋಷದ ಹೊಸ ಶಕೆಗೆ ಕಾರಣವಾಗಲಿದೆ ಎಂದರು. ಧನ್‌ ತೇರಸ್ ದಿನದಂದು ಕೇಂದ್ರ ಸರ್ಕಾರವು ಯುವಕರಿಗೆ 75,000 ನೇಮಕಾತಿ ಪತ್ರಗಳನ್ನು ವಿತರಿಸಿತ್ತು ಎಂದು ಅವರು ನೆನಪಿಸಿಕೊಂಡರು. " ದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಮಿಷನ್ ಮೋಡ್ ನಲ್ಲಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇಂದಿನ ರೋಜ್ಗಾರ್ ಮೇಳ ಸಾಕ್ಷಿಯಾಗಿದೆ " ಎಂದು ಪ್ರಧಾನಮಂತ್ರಿ ಹೇಳಿದರು.

ಒಂದು ತಿಂಗಳ ಹಿಂದೆ ರೋಜ್ಗಾರ್ ಮೇಳದ ಪ್ರಾರಂಭವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಹಲವಾರು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ಕಾಲಕಾಲಕ್ಕೆ ಇಂತಹ ರೋಜ್ಗಾರ್ ಮೇಳಗಳನ್ನು ಆಯೋಜಿಸುತ್ತಲೇ ಇರುತ್ತವೆ ಎಂದು ಹೇಳಿದರು. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ ಮತ್ತು ಚಂಡೀಗಢದಲ್ಲಿ ಸಾವಿರಾರು ಯುವಕರಿಗೆ ಆಯಾ ಸರ್ಕಾರಗಳು ನೇಮಕಾತಿ ಪತ್ರಗಳನ್ನು ಒದಗಿಸಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಗೋವಾ ಮತ್ತು ತ್ರಿಪುರಾ ಕೂಡ ಇದೇ ರೀತಿಯ ರೋಜ್ಗಾರ್ ಮೇಳಗಳನ್ನು ಕೆಲವೇ ದಿನಗಳಲ್ಲಿ ಆಯೋಜಿಸುತ್ತಿವೆ ಎಂದು ಅವರು ಹೇಳಿದರು. ಈ ಅದ್ಭುತ ಸಾಧನೆಗಾಗಿ ಡಬಲ್ ಇಂಜಿನ್ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಭಾರತದ ಯುವಕರನ್ನು ಸಶಕ್ತಗೊಳಿಸಲು ಕಾಲಕಾಲಕ್ಕೆ ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಯುವಜನರು ದೇಶದ ಅತಿದೊಡ್ಡ ಶಕ್ತಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರ ಪ್ರತಿಭೆ ಮತ್ತು ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರವು ಅತ್ಯುನ್ನತ ಆದ್ಯತೆ ಹೊಂದಿದೆ ಎಂದರು. ಅವರು ಹೊಸ ಸರ್ಕಾರಿ ನೌಕರರನ್ನು ಸ್ವಾಗತಿಸಿದರು ಮತ್ತು ಅಭಿನಂದಿಸಿದರು. ಅವರು ಈ ಮಹತ್ವದ ಜವಾಬ್ದಾರಿಯನ್ನು ಬಹಳ ವಿಶೇಷ ಕಾಲಾವಧಿಯಲ್ಲಿ ಅಂದರೆ ಅಮೃತ್ ಕಾಲ್ ನಲ್ಲಿ ವಹಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಅವರಿಗೆ ನೆನಪಿಸಿದರು. ಅಮೃತ್ ಕಾಲ್ ನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೇಶದ ಸಂಕಲ್ಪದಲ್ಲಿ ಅವರ ಪಾತ್ರವನ್ನು ಪ್ರಧಾನಮಂತ್ರಿ ಬಿಂಬಿಸಿದರು. ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ಅವರು ತಮ್ಮ ಪಾತ್ರ ಮತ್ತು ಕರ್ತವ್ಯಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಮರ್ಥ್ಯ-ನಿರ್ಮಾಣದ ಬಗ್ಗೆ ನಿರಂತರವಾಗಿ ಗಮನ ಹರಿಸಬೇಕು ಎಂದು ಅವರು ಅವರನ್ನು ಕೋರಿದರು.

ಇಂದು ಆರಂಭಿಸಲಾಗಿರುವ ಕರ್ಮಯೋಗಿ ಭಾರತ್ ತಂತ್ರಜ್ಞಾನ ವೇದಿಕೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಸರ್ಕಾರಿ ಅಧಿಕಾರಿಗಳಿಗೆ ಅನೇಕ ಆನ್ ಲೈನ್ ಕೋರ್ಸ್ ಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕರ್ಮಯೋಗಿ ಪ್ರಾರಂಭ ಎಂಬ ಸರ್ಕಾರಿ ನೌಕರರಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಕೋರ್ಸ್ ಅನ್ನು ಅವರು ಒತ್ತಿ ಹೇಳಿದರು ಮತ್ತು ಹೊಸದಾಗಿ ನೇಮಕಗೊಂಡವರು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಒತ್ತಾಯಿಸಿದರು. ಇದರ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು ಅವರ ಕೌಶಲ್ಯಾಭಿವೃದ್ಧಿಗೆ ಉತ್ತಮ ಮೂಲವಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಯುವಕರಿಗೆ ಸೃಷ್ಟಿಯಾದ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ಈ ಕಠಿಣ ಸಮಯದಲ್ಲೂ ವಿಶ್ವದಾದ್ಯಂತದ ತಜ್ಞರು ಭಾರತದ ಬೆಳವಣಿಗೆಯ ಪಥದ ಬಗ್ಗೆ ಆಶಾವಾದಿಗಳಾಗಿದ್ದಾರೆ ಎಂದು ಹೇಳಿದ ಅವರು, ತಜ್ಞರ ಪ್ರಕಾರ, ಭಾರತವು ಸೇವಾ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಮಾರ್ಪಟ್ಟಿದೆ ಮತ್ತು ಶೀಘ್ರದಲ್ಲೇ ಅದು ವಿಶ್ವದ ಉತ್ಪಾದನಾ ಕೇಂದ್ರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಿಎಲ್ಐನಂತಹ ಉಪಕ್ರಮಗಳು ಇದರಲ್ಲಿ ದೊಡ್ಡ ಪಾತ್ರ ವಹಿಸುತ್ತವೆ, ಆದರೆ ದೇಶದ ಯುವಕರು ಮತ್ತು ನುರಿತ ಮಾನವ ಸಂಪನ್ಮೂಲವೇ ಇದಕ್ಕೆ ಮುಖ್ಯ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಿಎಲ್ಐ ಯೋಜನೆಯು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ನರೇಂದ್ರ ಮೋದಿ ಅವರು ಮಾಹಿತಿ ನೀಡಿದರು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಮತ್ತು ಸ್ಥಳೀಯ, ಜಾಗತಿಕ ಟೇಕಿಂಗ್ ನಂತಹ ಅಭಿಯಾನಗಳು ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. " ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೊಸ ಉದ್ಯೋಗಗಳ ಸಾಧ್ಯತೆ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಅವಕಾಶಗಳು ತಮ್ಮದೇ ಆದ ನಗರಗಳು ಮತ್ತು ಹಳ್ಳಿಗಳಲ್ಲಿ ಯುವಕರಿಗೆ ಹೊರಹೊಮ್ಮುತ್ತಿವೆ. ಇದು ಯುವಕರಿಗೆ ವಲಸೆಯ ಅನಿವಾರ್ಯತೆಯನ್ನು ಕಡಿಮೆ ಮಾಡಿದೆ ಮತ್ತು ಅವರು ತಮ್ಮ ಪ್ರದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ವಹಿಸಲು ಸಮರ್ಥರಾಗಿದ್ದಾರೆ," ಎಂದು ಅವರು ಹೇಳಿದರು.

ಸ್ಟಾರ್ಟ್ ಅಪ್ ಅಥವಾ ನವೋದ್ಯಮದಿಂದ ಸ್ವಯಂ ಉದ್ಯೋಗ ಮತ್ತು ಬಾಹ್ಯಾಕಾಶದಿಂದ ಡ್ರೋನ್ ವರೆಗಿನ ವಲಯಗಳಲ್ಲಿ ಕ್ರಮಗಳು ಸೃಷ್ಟಿಸಿರುವ ಹೊಸ ಅವಕಾಶಗಳ ಕುರಿತು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. 80,000 ಸ್ಟಾರ್ಟ್ಅಪ್ ಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಯುವಕರಿಗೆ ಅವಕಾಶವನ್ನು ಒದಗಿಸುತ್ತಿವೆ. ಸ್ವಾಮಿತ್ವ ಯೋಜನೆ ಮತ್ತು ರಕ್ಷಣಾ ವಲಯದಲ್ಲಿ ಔಷಧ, ಕೀಟನಾಶಕ ಮತ್ತು ಮ್ಯಾಪಿಂಗ್ ನಲ್ಲಿ ಡ್ರೋನ್ ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಯುವಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ ಭಾರತದಲ್ಲಿ ಖಾಸಗಿ ವಲಯವು ಭಾರತದ ಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಉಡಾವಣೆ ಮಾಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಆ ಮೂಲಕ ಭಾರತದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರ್ಧಾರವನ್ನು ಶ್ಲಾಘಿಸಿದರು. ಮಂಜೂರಾದ 35 ಕೋಟಿ ಮತ್ತು ಮುದ್ರಾ ಸಾಲಗಳ ಉದಾಹರಣೆಯನ್ನೂ ಅವರು ನೀಡಿದರು. ಸಂಶೋಧನೆ ಮತ್ತು ನಾವಿನ್ಯದತ್ತ ಮುನ್ನುಗ್ಗುತ್ತಿರುವ ಉತ್ತೇಜನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಇದು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಾರಣವಾಯಿತು ಎಂದು ಗಮನಸೆಳೆದರು.

ತಮಗೆ ಒದಗಿಸಲಾಗುವ ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ನೇಮಕಗೊಂಡವರನ್ನು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ಈ ನೇಮಕಾತಿ ಪತ್ರಗಳು ಅವರಿಗೆ ಬೆಳವಣಿಗೆಯ ಜಗತ್ತನ್ನು ತೆರೆಯುವ ಪ್ರವೇಶ ಬಿಂದು ಮಾತ್ರ ಎಂದು ಅವರು ಪ್ರತಿಪಾದಿಸಿದರು ಮತ್ತು ಅನುಭವದಿಂದ ಮತ್ತು ಅವರ ಹಿರಿಯರಿಂದ ಕಲಿಯುವ ಮೂಲಕ ಅರ್ಹ ಅಭ್ಯರ್ಥಿಗಳಾಗುವಂತೆ ಒತ್ತಾಯಿಸಿದರು. ತಮ್ಮ ಕಲಿಕೆಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಮಾತು ಮುಗಿಸಿದರು ಮತ್ತು ಆತ್ಮದಲ್ಲಿರುವ ವಿದ್ಯಾರ್ಥಿಯನ್ನು ಎಂದಿಗೂ ಸಾಯಲು ಬಿಡಬಾರದು ಎಂದು ಹೇಳಿದರು. ಹೊಸದನ್ನು ಕಲಿಯುವ ಅವಕಾಶವನ್ನು ತಾವು ಎಂದಿಗೂ ಬಿಡುವುದಿಲ್ಲ ಎಂದು ಶ್ರೀ ನರೇಂದ್ರ ಮೋದಿ ನುಡಿದರು. ಆನ್ ಲೈನ್ ತರಬೇತಿಯ ತಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಕರ್ಮಯೋಗಿ ಭಾರತ್ ವೇದಿಕೆಯನ್ನು ಸುಧಾರಿಸಲು ರಚನಾತ್ಮಕ ಪ್ರತಿಕ್ರಿಯೆಯನ್ನು ಒದಗಿಸುವಂತೆ ನೇಮಕಗೊಂಡವರಿಗೆ ಪ್ರಧಾನಮಂತ್ರಿ ಅವರು ಸೂಚಿಸಿದರು. " ನಾವು ಈಗಾಗಲೇ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಹಾದಿಯಲ್ಲಿದ್ದೇವೆ. ಈ ದೂರದೃಷ್ಟಿಯೊಂದಿಗೆ ಮುಂದುವರಿಯುವ ಸಂಕಲ್ಪವನ್ನು ತೆಗೆದುಕೊಳ್ಳೋಣ ", ಎಂದು ಪ್ರಧಾನಮಂತ್ರಿ ಅವರು ಮಾತು ಮುಕ್ತಾಯಗೊಳಿಸಿದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನ ಮಂತ್ರಿ ಅವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್ಗಾರ್ ಮೇಳವು ಒಂದು ಹೆಜ್ಜೆಯಾಗಿದೆ. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರ ಪಾಲ್ಗೊಳ್ಳುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವಲ್ಲಿ ರೋಜ್ಗಾರ್ ಮೇಳವು ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ ಹಿಂದೆ ಅಕ್ಟೋಬರ್ ನಲ್ಲಿ, ರೋಜ್ಗಾರ್ ಮೇಳದ ಅಡಿಯಲ್ಲಿ ಹೊಸದಾಗಿ ನೇಮಕಗೊಂಡವರಿಗೆ 75,000 ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿತ್ತು.

ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳ ಭೌತಿಕ ಪ್ರತಿಗಳನ್ನು ದೇಶಾದ್ಯಂತ 45 ಸ್ಥಳಗಳಲ್ಲಿ (ಗುಜರಾತ್ ಮತ್ತು ಹಿಮಾಚಲ ಪ್ರದೇಶವನ್ನು ಹೊರತುಪಡಿಸಿ) ಹಸ್ತಾಂತರಿಸಲಾಗುವುದು. ಈ ಹಿಂದೆ ಭರ್ತಿಯಾಗಿದ್ದ ಹುದ್ದೆಗಳಲ್ಲದೆ, ಶಿಕ್ಷಕರು, ಉಪನ್ಯಾಸಕರು, ನರ್ಸ್ ಗಳು, ನರ್ಸಿಂಗ್ ಅಧಿಕಾರಿಗಳು, ವೈದ್ಯರು, ಔಷಧಿಕಾರರು, ರೇಡಿಯೋಗ್ರಾಫರ್ ಗಳು ಮತ್ತು ಇತರ ತಾಂತ್ರಿಕ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಗೃಹ ವ್ಯವಹಾರಗಳ ಸಚಿವಾಲಯವು ಗಮನಾರ್ಹ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಪ್ರಧಾನಮಂತ್ರಿ ಅವರು ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್ ಗೂ ಚಾಲನೆ ನೀಡಿದರು. ಈ ಮಾಡ್ಯೂಲ್ ಎಂಬುದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲ ನೇಮಕಾತಿಗಳಿಗೆ ಆನ್ ಲೈನ್ ಓರಿಯೆಂಟೇಶನ್ ಕೋರ್ಸ್ ಆಗಿದೆ. ಇದು ಸರ್ಕಾರಿ ನೌಕರರಿಗೆ ನೀತಿಸಂಹಿತೆ, ಕೆಲಸದ ಸ್ಥಳದ ನೈತಿಕತೆ ಮತ್ತು ಸಮಗ್ರತೆ, ಮಾನವ ಸಂಪನ್ಮೂಲ ನೀತಿಗಳು ಮತ್ತು ಇತರ ಪ್ರಯೋಜನಗಳು ಮತ್ತು ಭತ್ಯೆಗಳನ್ನು ಒಳಗೊಂಡಿರುತ್ತದೆ. ಇದು ನೀತಿಗಳಿಗೆ ಒಗ್ಗಿಕೊಳ್ಳಲು ಮತ್ತು ಹೊಸ ಪಾತ್ರಗಳಿಗೆ ಸರಾಗವಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಅವರು ತಮ್ಮ ಜ್ಞಾನ, ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು igotkarmayogi.gov.in ವೇದಿಕೆಯಲ್ಲಿ ಇತರ ಕೋರ್ಸ್ ಗಳನ್ನು ಅನ್ವೇಷಿಸುವ ಅವಕಾಶವನ್ನು ಸಹ ಒದಗಿಸುತ್ತದೆ.

*****



(Release ID: 1877973) Visitor Counter : 179