ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ರಾಷ್ಟ್ರಪತಿಯವರು ಭೋಪಾಲ್ ನ ಮಹಿಳಾ ಸ್ವಸಹಾಯ ಗುಂಪುಗಳ ಸಮ್ಮೇಳನದಲ್ಲಿ ಭಾಗಿಯಾದರು.


ಆರ್ಥಿಕ ಸ್ವಾವಲಂಬನೆಯು ಮಹಿಳೆಯರ ಸಬಲೀಕರಣದ ಪರಿಣಾಮಕಾರಿ ವಿಧಾನವಾಗಿದೆ: ರಾಷ್ಟ್ರಪತಿ ಮುರ್ಮು

Posted On: 16 NOV 2022 1:45PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 16, 2022) ಭೋಪಾಲ್ ನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಭಾರತವನ್ನು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಮಹಿಳೆಯರ ಅತಿ ಹೆಚ್ಚಿನ ಭಾಗವಹಿಸುವಿಕೆ ಅತ್ಯಗತ್ಯ. ಮಹಿಳೆಯರು ಮುಕ್ತವಾಗಿ ಮತ್ತು ನಿರ್ಭೀತರಾಗಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ  ಎಂದು ಹೇಳಿದರು. 

ಮಹಿಳೆಯರು ಪರಸ್ಪರ ಪ್ರೇರೇಪಿಸಬೇಕು, ಪರಸ್ಪರ ಸಹಾಯ ಮಾಡಬೇಕು, ಪರಸ್ಪರರ ಹಕ್ಕುಗಳಿಗಾಗಿ ಒಟ್ಟಾಗಿ ಧ್ವನಿ ಎತ್ತಬೇಕು ಮತ್ತು ಪ್ರಗತಿಯ ಹಾದಿಯಲ್ಲಿ ಒಟ್ಟಾಗಿ ಮುನ್ನಡೆಯಬೇಕು ಎಂದು ರಾಷ್ಟ್ರಪತಿಯವರು ಒತ್ತಾಯಿಸಿದರು. ಮಹಿಳೆಯರನ್ನು ಒಗ್ಗೂಡಿಸಲು ಮತ್ತು ಪ್ರಗತಿಯ ವಿವಿಧ ದಿಕ್ಕುಗಳಲ್ಲಿ ಮುನ್ನಡೆಸಲು ಮಹಿಳಾ ಸ್ವಸಹಾಯ ಗುಂಪುಗಳು ಉತ್ತಮ ವೇದಿಕೆಗಳಾಗಿವೆ ಎಂದು ಅವರು ಹೇಳಿದರು. ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಸಮಾಜದ ಪ್ರಗತಿಯ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆರ್ಥಿಕ ಸ್ವಾವಲಂಬನೆಯು ಮಹಿಳೆಯರ ಸಬಲೀಕರಣದ ಪರಿಣಾಮಕಾರಿ ಸಾಧನವಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆ ಪರಸ್ಪರ ಪೂರಕವಾಗಿದೆ. ಸ್ವಸಹಾಯ ಗುಂಪುಗಳು ಮಹಿಳೆಯರ ಸ್ವಾವಲಂಬನೆಯಲ್ಲಿ ಪರಿಣಾಮಕಾರಿಯಾಗಿ ಕೊಡುಗೆ ನೀಡಬಹುದು. ಮಧ್ಯಪ್ರದೇಶದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳು ಸಕ್ರಿಯವಾಗಿವೆ ಎಂದು ಅವರು ಗಮನಿಸಿದರು. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಆರ್ಥಿಕತೆ, ಸಮಾಜ ಮತ್ತು ದೇಶವನ್ನು ಬಲಪಡಿಸುತ್ತದೆ. ಮಹಿಳಾ ಸ್ವಸಹಾಯ ಸಂಘಗಳನ್ನು ಜನಾಂದೋಲನವನ್ನಾಗಿ ಮಾಡುವ ಚಿಂತನೆ ಶ್ಲಾಘನೀಯ ಎಂದು ಹೇಳಿದರು. 

 ಮಹಿಳೆಯರು ಗರಿಷ್ಠ ಸ್ವಸಹಾಯ ಗುಂಪುಗಳನ್ನು ಮುನ್ನಡೆಸುತ್ತಿದ್ದಾರೆ ಜತೆಗೆ ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ರಾಷ್ಟ್ರಪತಿಯವರು ಹೇಳಿದರು. ಬುಡಕಟ್ಟು ಮಹಿಳೆಯರು ತಯಾರಿಸಿದ ಉತ್ಪನ್ನಗಳು ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಟಿಆರ್ಐಎಫ್ಇಡಿ) ಮೂಲಕ ಗ್ರಾಹಕರನ್ನು ತಲುಪುತ್ತಿರುವುದನ್ನು ಗಮನಿಸಿ ಅವರು ಸಂತಸ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಸ್ವಂತ ಜೀವನೋಪಾಯವನ್ನು ಗಳಿಸುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವತ್ತ ಸಾಗುತ್ತಿದ್ದಾರೆ. ಇದರಿಂದ ಗ್ರಾಮೀಣ ಕುಟುಂಬಗಳ ಜೀವನ ಮಟ್ಟ ಸುಧಾರಿಸುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿ ನಮ್ಮ ದೇಶದ ಮಹಿಳೆಯರ ಪ್ರಗತಿಯಲ್ಲಿ ಅಡಗಿದೆ ಎಂದು ಹೇಳಿದ ರಾಷ್ಟ್ರಪತಿಯವರು   ಮಹಿಳೆಯರ ಕೊಡುಗೆಯೊಂದಿಗೆ ಭಾರತವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಯವರು ಇಂದು ಬೆಳಗ್ಗೆ ಭೋಪಾಲ್ನಲ್ಲಿರುವ ಮಧ್ಯಪ್ರದೇಶ ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ವಸ್ತುಸಂಗ್ರಹಾಲಯವು ಬುಡಕಟ್ಟು ಸಂಸ್ಕೃತಿ, ಸಂಪ್ರದಾಯಗಳು, ಪದ್ಧತಿಗಳು, ವರ್ಣಚಿತ್ರಗಳು ಮತ್ತು ಪ್ರದೇಶದ ಬುಡಕಟ್ಟುಗಳ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.

http://ರಾಷ್ಟ್ರಪತಿಯವರ ಹಿಂದಿ ಭಾಷಣಕ್ಕೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ

*****



(Release ID: 1876460) Visitor Counter : 161