ಜವಳಿ ಸಚಿವಾಲಯ

ಜವಳಿ ಉತ್ಪಾದಕರು ತಮ್ಮ ಬೇಡಿಕೆಗಳನ್ನು ಪೂರೈಸಲು ಹತ್ತಿ ಖರೀದಿಯನ್ನು ಪ್ರಾರಂಭಿಸಬೇಕು: ಶ್ರೀ ಗೋಯಲ್

Posted On: 27 OCT 2022 2:30PM by PIB Bengaluru

ಜವಳಿ ವಲಯವು ಮುಂದಿನ 5-6 ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ರಫ್ತು ಸಾಧಿಸುವ ಗುರಿಯನ್ನು ಹೊಂದಿದೆ: ಶ್ರೀ ಗೋಯಲ್
ಜವಳಿ ಉತ್ಪಾದಕರು ತಮ್ಮ ಬೇಡಿಕೆಗಳನ್ನು ಪೂರೈಸಲು ಹತ್ತಿಯನ್ನು ಖರೀದಿಸಿಟ್ಟುಕೊಳ್ಳುವುದನ್ನು  ಪ್ರಾರಂಭಿಸಬೇಕು. ಇದಲ್ಲದೆ, ಹತ್ತಿ ಉದ್ಯಮದಲ್ಲಿ ತೊಡಗಿರುವ ಎಲ್ಲರೂ ಹತ್ತಿಯನ್ನು ಹುಡುಕುವ ಮತ್ತು ಹತ್ತಿ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಭೆ ಸೇರಬೇಕು ಎಂದು ಕೇಂದ್ರ ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಹೇಳಿದ್ದಾರೆ. ಅವರು ರಫ್ತು ಉತ್ತೇಜನ ಮಂಡಳಿಗಳ ಸದಸ್ಯರೊಂದಿಗೆ ಬುಧವಾರ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಸಲಹೆ ಮಾಡಿದ್ದಾರೆ. 

ಉಡುಪು ರಫ್ತು ಉತ್ತೇಜನ ಮಂಡಳಿ (ಅಧ್ಯಕ್ಷ, ಶ್ರೀ ನರೇಂದ್ರ ಗೋಯೆಂಕಾ), ಹತ್ತಿ ಜವಳಿ ರಫ್ತು ಉತ್ತೇಜನ ಮಂಡಳಿ (ಅಧ್ಯಕ್ಷರು, ಶ್ರೀ ಸುನಿಲ್ ಪಟ್ವಾರಿ), ಕಾರ್ಪೆಟ್ ರಫ್ತು ಉತ್ತೇಜನ ಮಂಡಳಿ (ಅಧ್ಯಕ್ಷರು, ಶ್ರೀ ಉಮರ್ ಹಮೀದ್), ಕರಕುಶಲ ವಸ್ತುಗಳ ರಫ್ತು ಉತ್ತೇಜನಾ ಮಂಡಳಿ (ಕಾರ್ಯನಿರ್ವಾಹಕ ನಿರ್ದೇಶಕ, ಶ್ರೀ ಆರ್.ಕೆ.ವರ್ಮಾ) ಸೇರಿದಂತೆ ಜವಳಿ ಸಚಿವಾಲಯದ ಅಡಿಯಲ್ಲಿ ಬರುವ ಎಲ್ಲಾ 11 ರಫ್ತು ಉತ್ತೇಜನ ಮಂಡಳಿಗಳ ಹಿರಿಯ ಪ್ರತಿನಿಧಿಗಳೊಂದಿಗೆ ವರ್ಚುವಲ್ ಸಭೆಯನ್ನು ಏರ್ಪಡಿಸಲಾಗಿತ್ತು.  ಇದಲ್ಲದೆ, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಅಂದರೆ. ಕಾನ್ಫೆಡರೇಷನ್ ಆಫ್ ಇಂಡಿಯನ್ ಟೆಕ್ಸ್ ಟೈಲ್ ಇಂಡಸ್ಟ್ರಿ, ತಿರುಪ್ಪೂರು ಎಕ್ಸ್ ಪೋರ್ಟ್ಸ್ ಅಸೋಸಿಯೇಷನ್ (ತಿರುಪ್ಪೂರು ರಫ್ತುದಾರರ ಸಂಘಟನೆ)  ಮತ್ತು ಸದರ್ನ್ ಇಂಡಿಯಾ ಮಿಲ್ಸ್ ಅಸೋಸಿಯೇಷನ್ (ದಕ್ಷಿಣ ಭಾರತ ಗಿರಣಿಗಳ ಸಂಘಟನೆ)ಗಳ  ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಜವಳಿ ಕ್ಷೇತ್ರವನ್ನು ಬಲಪಡಿಸುವ ಬಗ್ಗೆ ಹೊಸ ಆಲೋಚನೆಗಳನ್ನು, ಚಿಂತನೆಗಳನ್ನು  ಚರ್ಚಿಸಲು ಎರಡು ದಿನಗಳ ಸಭೆಯನ್ನು ಆಯೋಜಿಸಬೇಕು ಎಂದು ಅವರು ಹೇಳಿದರು. ಭಾಗವಹಿಸುವವರಲ್ಲಿ ಕನಿಷ್ಟ 50%ನಷ್ಟು  ಯುವಜನರು ಇರಬೇಕು ಮತ್ತು ಸಮಗ್ರ ತೊಡಗಿಸಿಕೊಳ್ಳುವಿಕೆಗಾಗಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ (ಕ್ಯೂಸಿಐ), ವಾಣಿಜ್ಯ, ಡಿಪಿಐಐಟಿ, ಹಣಕಾಸು, ಬ್ಯಾಂಕಿಂಗ್ ರಫ್ತು ವಿಮೆಯ ಒಳಗೊಳ್ಳುವಿಕೆ ಇರಬೇಕು, ಇದರಿಂದ ವ್ಯಾಪಕವಾದ ವಿಷಯಗಳನ್ನು ಚರ್ಚಿಸಬಹುದು ಎಂದವರು ಸಲಹೆ ಮಾಡಿದರು. 

ಕಳೆದ ವರ್ಷ, ಜವಳಿ ರಫ್ತು ಸುಮಾರು 42 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಮುಂದಿನ 5-6 ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಗಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದನ್ನು ಸಾಧಿಸಿದರೆ, ಈ ಕ್ಷೇತ್ರದ ಆರ್ಥಿಕ ಮೌಲ್ಯವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆಯಾಗಿ 250 ಶತಕೋಟಿ ಅಮೆರಿಕನ್ ಡಾಲರ್ ಆಗಲಿದೆ ಎಂದು ಅವರು ಹೇಳಿದರು. 

ಶ್ರೀ ಗೋಯಲ್ ಅವರು ಇಪಿಸಿಗಳಿಗೆ  ಐಎಎಸ್ ಅಧಿಕಾರಿ ಶ್ರೀಮತಿ ರಚನಾ ಷಾ ಅವರನ್ನು ಪರಿಚಯಿಸಿದರು, ಅವರು 2022 ರ ಅಕ್ಟೋಬರ್ 31 ರಂದು ಜವಳಿ ಕಾರ್ಯದರ್ಶಿ ಶ್ರೀ ಯು.ಪಿ. ಸಿಂಗ್ ಅವರ ನಿವೃತ್ತಿಯ ನಂತರ 2022 ರ ನವೆಂಬರ್ 1, ರಂದು ಜವಳಿ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೂರತ್, ನೋಯ್ಡಾ, ತಿರುಪ್ಪೂರು-ಕೊಯಮತ್ತೂರು ಮತ್ತು ಇತರ ಜವಳಿ ಕೇಂದ್ರಗಳಿಗೆ ಶ್ರೀಮತಿ ಶಾ ಭೇಟಿ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು. ಇದಲ್ಲದೆ, ಪಿಎಂ ಮಿತ್ರಾ ಅಡಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳ ವೀಕ್ಷಣೆಗೆ  ಮತ್ತು ಕೈಗಾರಿಕೋದ್ಯಮದ ಪ್ರತಿನಿಧಿಗಳ ಪ್ರತಿಕ್ರಿಯೆಯನ್ನು ದಾಖಲಿಸಲು ಈ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು ಎಂದರು.

ಜವಳಿ ಮಿಷನ್ ಅಡಿಯಲ್ಲಿ ಹಣಕಾಸು ಲಭ್ಯವಿದೆ ಮತ್ತು ಅದನ್ನು ಹೊಸ ಯೋಜನೆಗಳಿಗೆ ಬಳಸಬೇಕು ಎಂದು ಅವರು ಹೇಳಿದರು. ಜವಳಿ ವಲಯದ ಸಾಮರ್ಥ್ಯವನ್ನು ಜಿ-20 ರಲ್ಲಿ ಪ್ರದರ್ಶಿಸಬಹುದು ಎಂದ ಅವರು ಹಣಕಾಸು ಸಚಿವರು ಇತ್ತೀಚೆಗೆ ಘೋಷಿಸಿದ ಶಾಪಿಂಗ್ ಉತ್ಸವಗಳಲ್ಲಿ ಉದ್ಯಮ ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಸಹ ಬೆಂಬಲಿಸಬಹುದು ಎಂದೂ ಹೇಳಿದರು.

*******



(Release ID: 1871289) Visitor Counter : 115