ಇಂಧನ ಸಚಿವಾಲಯ

ಉದಯಪುರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರ ಸಮಾವೇಶ    


ನಡೆದ ಚರ್ಚೆಗಳು

• ವಿತರಣಾ ವಲಯದ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸುಸ್ಥಿರತೆ,

• ವಿದ್ಯುತ್ ವ್ಯವಸ್ಥೆಗಳ ಆಧುನೀಕರಣ ಮತ್ತು ಉನ್ನತೀಕರಣ,

• ಹೂಡಿಕೆಯ ಅಗತ್ಯತೆ ಮತ್ತು ವಿದ್ಯುತ್ ವಲಯದ ಸುಧಾರಣೆಗಳು ಸೇರಿದಂತೆ 24x7 ವಿದ್ಯುತ್ ಪೂರೈಕೆಯನ್ನು
ಖಚಿತಪಡಿಸಿಕೊಳ್ಳಲು ವಿದ್ಯುತ್ ವ್ಯವಸ್ಥೆಗಳ ಅಭಿವೃದ್ಧಿ

Posted On: 15 OCT 2022 4:39PM by PIB Bengaluru

2022ರ ಅಕ್ಟೋಬರ್ 14  ಮತ್ತು 15ರಂದು ರಾಜಸ್ಥಾನದ ಉದಯಪುರದಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರ ಸಮಾವೇಶ ನಡೆಯಿತು. ಕೇಂದ್ರ ವಿದ್ಯುತ್‌ ಹಾಗೂ ಹೊಸ ಮತ್ತು ನವೀಕರಸಿಬಹುದಾದ ಇಂಧನ ಸಚಿವರಾದ ಶ್ರೀ ಆರ್.ಕೆ. ಸಿಂಗ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್, ಉಪ ಮುಖ್ಯಮಂತ್ರಿ/ ಇಂಧನ/ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.   

 

https://static.pib.gov.in/WriteReadData/userfiles/image/WhatsAppImage2022-10-15at4.38.23PM5UQE.jpeg

ಸಮಾವೇಶದ ಸಂದರ್ಭದಲ್ಲಿ, ವಿತರಣಾ ವಲಯದ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸುಸ್ಥಿರತೆ; ವಿದ್ಯುತ್ ವ್ಯವಸ್ಥೆಗಳ ಆಧುನೀಕರಣ ಮತ್ತು ಉನ್ನತೀಕರಣ ಹಾಗೂ ಹೂಡಿಕೆಯ ಅಗತ್ಯ; ವಿದ್ಯುತ್ ವಲಯದ ಸುಧಾರಣೆಗಳು ಸೇರಿದಂತೆ 24X7 ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ವಿದ್ಯುತ್ ವ್ಯವಸ್ಥೆಗಳ ಅಭಿವೃದ್ಧಿ ಕುರಿತು ವಿಸ್ತೃತ ಚರ್ಚೆಗಳನ್ನು ನಡೆಸಲಾಯಿತು. ರಾಜ್ಯಗಳು ಈ ಪ್ರತಿಯೊಂದು ಸಂಬಂಧಿತ ವಿಷಯಗಳ ಬಗ್ಗೆ ತಮ್ಮ ಚಿಂತನೆ ಮತ್ತು ಸಲಹೆಗಳನ್ನು ಒದಗಿಸಿದವು. 

 

https://static.pib.gov.in/WriteReadData/userfiles/image/WhatsAppImage2022-10-15at4.38.23PM(1)7GLV.jpeg

ವಿದ್ಯುತ್ ವಲಯದ ಮೌಲ್ಯ ಸರಪಳಿಯಾದ್ಯಂತ ಆರ್ಥಿಕ ಮತ್ತು ಕಾರ್ಯಾಚರಣೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿತರಣಾ ವಲಯದ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ, ಒಟ್ಟಾರೆ ತಾಂತ್ರಿಕ ಮತ್ತು ವಾಣಿಜ್ಯ (ಎಟಿ & ಸಿ) ನಷ್ಟಗಳನ್ನು ಕಡಿಮೆ ಮಾಡುವತ್ತ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಒತ್ತು ನೀಡಲಾಯಿತು. ವೆಚ್ಚವನ್ನು ಸರಿದೂಗಿಸುವ ಮಾದರಿಯಲ್ಲಿ ಶುಲ್ಕಗಳನ್ನು ಖಚಿತಪಡಿಸಿಕೊಳ್ಳುವುದು, ಸಬ್ಸಿಡಿಯ ಲೆಕ್ಕಾಚಾರ ಮತ್ತು ರಾಜ್ಯ ಸರಕಾರಗಳಿಂದ ಸಬ್ಸಿಡಿಯ ಸಕಾಲಿಕ ಪಾವತಿ, ರಾಜ್ಯ ಸರಕಾರದ ಇಲಾಖೆಗಳಿಂದ ಬಾಕಿ ಪಾವತಿ ಮತ್ತು ʻವಿದ್ಯುಚ್ಛಕ್ತಿ (ಲೇಟ್ ಪೇಮೆಂಟ್ ಸರ್ಚಾರ್ಜ್ ಮತ್ತು ಸಂಬಂಧಿತ) ನಿಯಮಗಳು-2022ರʼ(ಎಲ್ಪಿಎಸ್ ನಿಯಮಗಳು)  ಅನುಸರಣೆ,  ಉತ್ಪಾದಕ ಕಂಪನಿಗಳಿಗೆ ಸಕಾಲದಲ್ಲಿ ಬಾಕಿ ಪಾವತಿ ಇತ್ಯಾದಿಗಳ ಬಗ್ಗೆಯೂ ಒತ್ತಿ ಹೇಳಲಾಯಿತು. ʻಎಟಿ &ಸಿʼ ನಷ್ಟಗಳನ್ನು ಕಡಿಮೆ ಮಾಡಲು, ಗ್ರಾಹಕರಿಗೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಮತ್ತು ಇಂಧನ ಲೆಕ್ಕಪತ್ರ ವ್ಯವಸ್ಥೆಗಳನ್ನು ಸ್ಥಾಪಿಸಲು ʻಸಿಸ್ಟಮ್ ಮೀಟರಿಂಗ್ʼ ಅನ್ನು ತ್ವರಿತಗೊಳಿಸಲು ಸಹಮತ ವ್ಯಕ್ತವಾಯಿತು. ವಿವಿಧ ವರ್ಗದ ಗ್ರಾಹಕರಿಗೆ ನೈಜ ಇಂಧನ ಬಳಕೆಯ ಆಧಾರದ ಮೇಲೆ ಪ್ರತಿ ಯೂನಿಟ್ ಆಧಾರದ ಮೇಲೆ ಮಾತ್ರ ಸಬ್ಸಿಡಿಯನ್ನು ಒದಗಿಸಲು ಸಹ ಸಮ್ಮತಿಸಲಾಯಿತು. ಒಟ್ಟಾರೆಯಾಗಿ ವಿದ್ಯುತ್ ವ್ಯವಸ್ಥೆಗಳ ಕಾರ್ಯಸಾಧ್ಯತೆಯನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿರುವ ಬಗ್ಗೆ ಚರ್ಚೆಗಳಲ್ಲಿ ಗಮನ ಸೆಳೆಯಲಾಯಿತು.
  
ಹೆಚ್ಚಿನ ರಾಜ್ಯಗಳು ತಮ್ಮ ವಿತರಣಾ ಕಂಪನಿಗಳ (ಡಿಸ್ಕಾಮ್) ಆರ್ಥಿಕ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ʻಪರಿಷ್ಕೃತ ವಿತರಣಾ ವಲಯ ಯೋಜನೆʼ (ಆರ್‌ಡಿಎಸ್‌ಎಸ್‌) ಅಡಿಯಲ್ಲಿ ತಮ್ಮ ಕ್ರಿಯಾ ಯೋಜನೆಯನ್ನು ಈಗಾಗಲೇ ಸಲ್ಲಿಸಿವೆ. 

ಈ ಎಲ್ಲಾ ಪ್ರಯತ್ನಗಳು ಮತ್ತು ನೀತಿಗಳು ವಿದ್ಯುತ್ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವತ್ತ ಗಮನ ಹರಿಸಲಿವೆ. 

ಹವಾಮಾನ ಬದಲಾವಣೆಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರದ ಬದ್ಧತೆಯ ಪ್ರಕಾರ 2070ರ ವೇಳೆಗೆ ನಿವ್ವಳ ಶೂನ್ಯದ ಗುರಿಯನ್ನು ಸಾಧಿಸಲು ಮತ್ತು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಸ್ಥಾಪಿತ ಸಾಮರ್ಥ್ಯ  ತಲುಪಲು ನವೀಕರಿಸಬಹುದಾದ ಇಂಧನ ನಿಯೋಜನೆಯು ಅತ್ಯಂತ ಮಹತ್ವವಾಗಿದೆ. 

ಚರ್ಚೆಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿನ ಸಾಧನೆಗಳನ್ನು ಎತ್ತಿ ತೋರಿಸಲಾಯಿತು. ನವೀಕರಿಸಬಹುದಾದ ಇಂಧನ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಗತ್ಯವಾದ ನೀತಿ, ನಿಯಂತ್ರಣ ಮತ್ತು ಸಾಂಸ್ಥಿಕ ಮಧ್ಯಸ್ಥಿಕೆಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಯಿತು ಮತ್ತು ಭಾರತ ಸರಕಾರದ ಪಳೆಯುಳಿಕೆಯೇತರ ಸ್ಥಾಪಿತ ಸಾಮರ್ಥ್ಯದ ಉದ್ದೇಶಗಳನ್ನು ಸಾಧಿಸಲು ರಾಜ್ಯಗಳು ಬೆಂಬಲಿಸಬೇಕು ಎಂದು ಪ್ರತಿಪಾದಿಸಲಾಯಿತು. ವಿವಿಧ ಪ್ರೋತ್ಸಾಹಕ ಕ್ರಮಗಳ ಮೂಲಕ ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ರಚಿಸುವ ಬಗ್ಗೆ ಒತ್ತಿ ಹೇಳಲಾಯಿತು. 
 
ಒಟ್ಟಾರೆ 40 ಗಿಗಾವ್ಯಾಟ್ ಗುರಿಯನ್ನು ತಲುಪುವುದನ್ನು ಖಾತರಿಪಡಿಸಲು ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ತ್ವರಿತವಾಗಿ ನಿಯೋಜಿಸಲು ರಾಜ್ಯಗಳು ಪ್ರಯತ್ನಿಸಬೇಕು ಎಂದು ಒತ್ತಾಯಿಸಲಾಯಿತು.

ʻಪಿಎಂ ಕುಸುಮ್ʼ ಯೋಜನೆಯಡಿ ಸೌರೀಕರಣವನ್ನು ವೇಗಗೊಳಿಸಲು ರಾಜ್ಯಗಳನ್ನು ಉತ್ತೇಜಿಸಲಾಯಿತು. 
ಭವಿಷ್ಯದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ʻಬಿ.ಇ.ಎಸ್.ಎಸ್.ʼ ಮತ್ತು ʻಪಂಪ್ಡ್ ಸ್ಟೋರೇಜ್ ಹೈಡ್ರೋ ಯೋಜನೆʼಗಳು ಸೇರಿದಂತೆ ಇಂಧನ ಸಂಗ್ರಹಣೆಯ ಅನುಷ್ಠಾನವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು. ʻಗ್ರೀನ್ ಹೈಡ್ರೋಜನ್ʼ, ʻಆಫ್ ಶೋರ್ ವಿಂಡ್ʼ, ʻಆಫ್ ಗ್ರಿಡ್ʼ ಮತ್ತು ʻವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನʼ (ಡಿಆರ್‌ಇ) ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಲಾಯಿತು. 

ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಖಾತರಿಪಡಿಸಲು ದಿನದ 24 ಗಂಟೆಯೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಕಾಯ್ದುಕೊಳ್ಳುವುದು ನಿರ್ಣಾಯಕವಾಗಿದೆ. ದೇಶದಲ್ಲಿ ವಿದ್ಯುತ್ ಬೇಡಿಕೆ ಮುಂದಿನ ದಶಕದಲ್ಲಿ ದ್ವಿಗುಣಗೊಳ್ಳಲಿದ್ದು, ಅಂತಹ ಬೇಡಿಕೆಯನ್ನು ಪೂರೈಸಲು ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಲಯದಲ್ಲಿ 50 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಅಗತ್ಯ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.  ಆದ್ದರಿಂದ ಈ ಹೂಡಿಕೆಗಳಿಗೆ ಅನೇಕ ಮೂಲಗಳಿಂದ ಧನಸಹಾಯವನ್ನು ಪಡೆಯುವುದು ಅತ್ಯಗತ್ಯ ಎಂದು ಪ್ರತಿಪಾದಿಸಲಾಯಿತು. 

ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಖಾಸಗಿ ವಲಯದ ಪರಿಣಾಮಕಾರಿ ಭಾಗವಹಿಸುವಿಕೆಗಾಗಿ ದೇಶದಲ್ಲಿ ಸುಗಮ ವ್ಯಾಪಾರ ವಾತಾವರಣ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸಾಗುತ್ತಿರುವ ಭಾರತ ಸರಕಾರವು ʻಎಲ್‌ಪಿಎಸ್ ನಿಯಮಗಳು-2022, ʻವಿದ್ಯುತ್ (ಕಾನೂನಿನ ಬದಲಾವಣೆಯಿಂದಾಗಿ ಸಕಾಲದಲ್ಲಿ ವೆಚ್ಚಗಳ ವಸೂಲಾತಿ) ನಿಯಮಗಳು 2021ʼ, ʻವಿದ್ಯುಚ್ಛಕ್ತಿ (ಹಸಿರು ಇಂಧನ ಮುಕ್ತ ಪ್ರವೇಶದ ಮೂಲಕ ನವೀಕರಿಸಬಹುದಾದ ಇಂಧನಗಳ ಉತ್ತೇಜನ) ನಿಯಮಗಳು-2022ʼ, ವಿದ್ಯುತ್ ಮಾರುಕಟ್ಟೆಗಳಲ್ಲಿ ʻಆರ್‌ಟಿಎಂʼ, ʻಜಿಟಿಎಎಂʼ ಮತ್ತು ʻಜಿಡಿಎಎಂʼ ಪರಿಚಯಿಸುವುದು ಮುಂತಾದ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. 
 
  ವಿದ್ಯುತ್ ಕ್ಷೇತ್ರದ ಮುಂದೆ ಇರಿಸಲಾಗಿರುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲು ಕೇಂದ್ರ ಸಚಿವರು ರಾಜ್ಯಗಳ ಸಹಕಾರವನ್ನು ಕೋರಿದರು. 

*******



(Release ID: 1868164) Visitor Counter : 108