ಬಾಹ್ಯಾಕಾಶ ವಿಭಾಗ

ಭಾರತೀಯ ಬಾಹ್ಯಾಕಾಶ ವಲಯದ ನವೋದ್ಯಮಗಳು ಶೀಘ್ರದಲ್ಲೇ ಉಪಗ್ರಹ ನಕ್ಷತ್ರಪುಂಜಗಳು ಮತ್ತು ಹೊಸ ರಾಕೆಟ್ ಗಳ ಉಡಾವಣೆಗೆ ಪ್ರಯತ್ನಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಿವೆ; ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ಇಂಡಿಯನ್ ಸ್ಪೇಸ್ ಅಸೋಸಿಯೇಷನ್, ಇಸ್ಪಾದ ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಮಾವೇಶ ಉದ್ದೇಶಿಸಿ ಸಚಿವರು ಮಾತನಾಡಿದರು

ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಾಗಿ ನ್ಯಾನೋ – ಉಪಗ್ರಹ, ಉಡಾವಣಾ ವಾಹನ, ನೆಲದ ವ್ಯವಸ್ಥೆಗಳು, ಸಂಶೋಧನೆ ಮತ್ತಿತರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ನವೋದ್ಯಮಗಳ ಸಂಖ್ಯೆ 2 ರಿಂದ 102 ಕ್ಕೆ ಏರಿಕೆಯಾಗಿವೆ; ಡಾ. ಜಿತೇಂದ್ರ ಸಿಂಗ್

ಖಾಸಗಿ ವಲಯ ಮತ್ತು ನವೋದ್ಯಮಗಳೊಂದಿಗೆ ಇಸ್ರೋ ನೇತೃತ್ವದ ಬಾಹ್ಯಾಕಾಶ ಕ್ರಾಂತಿ ದಿಗಂತದಲ್ಲಿದೆ: ಡಾ. ಜಿತೇಂದ್ರ ಸಿಂಗ್

Posted On: 10 OCT 2022 3:47PM by PIB Bengaluru

ಭಾರತೀಯ ಬಾಹ್ಯಾಕಾಶ ನವೋದ್ಯಮಗಳು ಶೀಘ್ರದಲ್ಲೇ ಉಪಗ್ರಹ ನಕ್ಷತ್ರಪುಂಜಗಳು ಮತ್ತು ಹೊಸ ರಾಕೆಟ್ ಗಳ ಉಡಾವಣೆಗೆ ಪ್ರಯತ್ನಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ [ಸ್ವತಂತ್ರ್ಯ ನಿರ್ವಹಣೆ], ಪಿಎಂಒ ಎಒಎಸ್, ಬಾಹ್ಯಾಕಾಶ ಮತ್ತು ಅಣು ಇಂಧನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.    

ದೇಶೀಯವಾಗಿ ಪಿ.ಎಸ್.ಎಲ್.ವಿಗಳನ್ನು ಎಲ್ ಅಂಡ್ ಟಿ ಮತ್ತು ಎಚ್.ಎ.ಎಲ್ ಉತ್ಪಾದಿಸುತ್ತಿದ್ದು, ಒನ್ ವೆಬ್ ಸಂಸ್ಥೆ ತನ್ನ ಉಪಗ್ರಹಗಳನ್ನು ಇಸ್ರೋ ಮತ್ತು ಎನ್.ಎಸ್.ಐ.ಎಲ್ ಮೂಲಕ ಉಡಾವಣೆ ಮಾಡಲು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.  

ಇಂಡಿಯನ್ ಸ್ಪೇಸ್ ಅಸೋಸಿಯೇಷನ್, ಇಸ್ಪಾದ ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಮಾವೇಶ ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, 2020 ರ ಜೂನ್ ನಲ್ಲಿ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಕ್ಷೇತ್ರಕ್ಕೆ ಅವಕಾಶ ಕಲ್ಪಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಕ್ರಾಂತಿಕಾರಕ ನಿರ್ಧಾರ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ಸ್ವರೂಪವನ್ನು ಬದಲಿಸಿದೆ ಎಂದರು.     

ಬಾಹ್ಯಾಕಾಶ ಕ್ಷೇತ್ರದಲ್ಲಿನ ಸುಧಾರಣೆಗಳು ನವೋದ್ಯಮಗಳ ನಾವೀನ್ಯತೆಯ ಸಾಮರ್ಥ್ಯವನ್ನು ಅನಾವರಣಗೊಳಿಸಿವೆ ಮತ್ತು ಮೂರ್ನಾಲ್ಕು ವರ್ಷಗಳ ಹಿಂದೆ ಒಂದೆರಡು ಬಾಹ್ಯಾಕಾಶ ನವೋದ್ಯಮಗಳಿದ್ದವು, ಇದೀಗ ಬಾಹ್ಯಾಕಾಶ ವಲಯದ ನಿರ್ವಹಣೆ, ನ್ಯಾನೋ ಉಪಗ್ರಹ, ಉಡಾವಣಾ ವಾಹನ, ನೆಲದ ವ್ಯವಸ್ಥೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ 102 ನವೋದ್ಯಮಗಳು ಅತ್ಯಾಧುನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿ, ಶಿಕ್ಷಣ ಮತ್ತು ಕೈಗಾರಿಕಾ ವಲಯದಲ್ಲಿ ಸಮಾನ ಪಾಲಿನ ಸಂಯೋಜನೆಯನ್ನು ಇವು ಹೊಂದಿವೆ ಹಾಗೂ ಖಾಸಗಿ ವಲಯ, ನವೋದ್ಯಮಗಳು ಇದೀಗ ಇಸ್ರೋ ನೇತೃತ್ವದಲ್ಲಿ ಮಾಡುತ್ತಿರುವ ಬಾಹ್ಯಾಕಾಶ ಕ್ರಾಂತಿ ದಿಗಂತಕ್ಕೆ ತಲುಪಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.  

ನಮ್ಮ ಯುವ ಮತ್ತು ಖಾಸಗಿ ಕೈಗಾರಿಕಾ ಉದ್ಯಮದ ಶಕ್ತಿ ಮತ್ತು ನವ ಸಾಮರ್ಥ್ಯ ಮುಂಬರುವ ದಿನಗಳಲ್ಲಿ ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಡೆತಡೆಗಳನ್ನು ನಿವಾರಿಸಿ ಮುನ್ನಡೆ ಸಾಧಿಸುತ್ತದೆ. ಭಾರತದ ಯುವ ತಂತ್ರಜ್ಞಾನ ಮಾಂತ್ರಿಕರು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಡೆತಡೆಗಳನ್ನು ನಿವಾರಿಸಿ ಬಾಹ್ಯಾಕಾಶ ವಲಯದಲ್ಲಿನ ಅಪಾರ ಅವಕಾಶಗಳನ್ನು ಪಡೆಯಲಿದ್ದಾರೆ ಎಂದು ವಿಶ‍್ವಾಸ ವ್ಯಕ್ತಪಡಿಸಿದರು.

2021 ರ ಅಕ್ಟೋಬರ್ 11 ರಂದು ಪ್ರಮುಖ ಬಾಹ್ಯಾಕಾಶ ಕೈಗಾರಿಕಾ ಸಂಘಗಳು ಮತ್ತು ಉಪಗ್ರಹ ಕಂಪೆನಿಗಳ ಸಹಯೋಗದಲ್ಲಿ ಇಂಡಿಯನ್ ಸ್ಪೇಸ್ ಅಸೋಸಿಯೇಷನ್ [ಇಸ್ಪಾ] ಆರಂಭಿಸಿದ ದಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿ, “ನಮ್ಮ ಬಾಹ್ಯಾಕಾಶ ಸುಧಾರಣಾ ವಿಧಾನಗಳು ನಾಲ್ಕು ಆಧಾರ ಸ್ತಂಭಗಳನ್ನು ಒಳಗೊಂಡಿದ್ದು, ನಾವೀನ್ಯತೆಯಲ್ಲಿ ಖಾಸಗಿ ವಲಯಕ್ಕೆ ಸ್ವಾಯತ್ತತೆ, ಸರ್ಕಾರದಿಂದ ಸಕ್ರಿಯಗೊಳಿಸುವ ಜವಾಬ್ದಾರಿ ನಿರ್ವಹಣೆ, ಯುವ ಸಮೂಹವನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸುವುದು ಮತ್ತು ಬಾಹ್ಯಾಕಾಶ ವಲಯ ಸಾಮಾನ್ಯ ಜನರ ಪ್ರಗತಿಗೆ ಸಂಪನ್ಮೂಲವನ್ನಾಗಿ ಮಾಡುವ ಗುರಿ ಹೊಂದಲಾಗಿದೆ” ಎಂದು ಹೇಳಿದ್ದರು.    

ಅತಿ ಕಡಿಮೆ ಅಂದರೆ ಒಂದು ವರ್ಷದಲ್ಲಿ ಭಾರತೀಯ ಕೈಗಾರಿಕಾ ಕ್ಷೇತ್ರದಲ್ಲಿ ಇಸ್ಪಾ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿ ಮತ್ತು ಜಾಗತಿಕ ಸಂಪರ್ಕ ಹೊಂದುವ ನಿಟ್ಟಿನಲ್ಲಿ ಅದ್ಭುತವಾಗಿ ಕೆಲಸ ಮಾಡಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.  ಇಸ್ಪಾದ ಸದಸ್ಯರು ನೀತಿ, ನಿರೂಪಣೆ ವಲಯದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಗೆ ತರಲು ಜ್ಞಾನ ಮತ್ತು ದೂರದೃಷ್ಟಿಯಿಂದ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.  

ಬಾಹ್ಯಾಕಾಶ ಆಧಾರಿತ ವಾಣಿಜ್ಯ ವಲಯದಲ್ಲಿ ಭಾರತ ಪ್ರಮುಖ ಸ್ಥಾನ ಪಡೆದುಕೊಳ‍್ಳುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಇಸ್ಪಾ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಪ್ರಮುಖ ಪಾಲುದಾರರ ನಡುವೆ ನಿಗದಿತ ಸಂವಹನಗಳಿಗೆ ಇಸ್ಪಾ ಸಂಪರ್ಕದಾರನ ಪಾತ್ರ ವಹಿಸುತ್ತಿರುವುದು ಪ್ರಮುಖ ಮತ್ತು ನಿರ್ಣಾಯಕವಾಗಿದೆ ಎಂದರು. ಸ್ವಾವಲಂಬಿ ಭಾರತ ಎಂಬ ದ್ಯೇಯ ವಾಕ್ಯವನ್ನು ಉನ್ನತ ಹಂತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಇಸ್ಪಾ ದೇಶದ ಪ್ರಮುಖ ತಾಂತ್ರಿಕ ಪ್ರಗತಿ ಮತ್ತು ಹೂಡಿಕೆಗಳಿಗೆ ನಾಂದಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಬಾಹ್ಯಾಕಾಶ ಸುಧಾರಣೆಗಳಲ್ಲಿ ಸರ್ಕಾರದ ವಿಧಾನಗಳನ್ನು ಅನುಸರಿಸಿದರೆ ಅಂತಿಮವಾಗಿ ಹೆಚ್ಚಿನ ಕೌಶಲ್ಯ ಹೊಂದಿದ ಉದ್ಯೋಗಾವಕಾಶ ಸೃಜಿಸಲು  ಸಹಕಾರಿಯಾಗಲಿದೆ ಎಂದು ಹೇಳಿದರು.  

ಇತ್ತೀಚಿನ ಜಾಗತಿಕ ಸಂಘರ್ಷಗಳ ದೃಷ್ಟಿಕೋನದ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಕಾರ್ಯತಂತ್ರದ ಪ್ರಸ್ತುತತೆ ಕುರಿತು ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಬಾಹ್ಯಾಕಾಶ ವಲಯ ಹಿಂದೆಂದಿಗಿಂತಲೂ ಇದೀಗ ದ್ವಿಬಳಕೆ ವಲಯವಾಗಿ ಅಭೂತಪೂರ್ವ ವ್ಯಾಪ್ತಿಯನ್ನು ಒದಗಿಸುವ ಮತ್ತು ಬಹುಮುಖ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ. ಅನೇಕ ರಾಷ್ಟ್ರಗಳು ಇಂದು ತನ್ನ ಸೇನೆಯ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿವೆ. ಅದರ ಸುರಕ್ಷಿತ ಮತ್ತು ಸ್ನೇಹಪರ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಅಗತ್ಯವಿದ್ದಾಗ ಎದುರಾಳಿಗಳಿಗೆ ಅದನ್ನು ನಿರಾಕರಿಸುವ ನಿರೋಧಕ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ಬೆಳವಣಿಗೆಯಾಗುತ್ತಿರುವ ಯುದ್ಧದ ಆಯಾಮದ ಶಕ್ತಿಯನ್ನು ಬಳಸಿಕೊಳ್ಳಲು ಭಾರತ ನಿರ್ಧರಿಸಿದ್ದು, ಖಾಸಗಿ ಕೈಗಾರಿಕಾ ಸಾಮರ್ಥ್ಯ ಮತ್ತು ಶಕ್ತಿಯನ್ನು ಪರಿಣಾಮಕಾರಿಯಾಗಿ ಸಶಕ್ತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಬಲವಾದ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ನಮ್ಮ ಇತರರಿಗಿಂತ ಭಾರತಕ್ಕೆ ನಿರ್ಣಾಯಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸೂಕ್ತ ಮಾರ್ಗ ರೂಪಿಸಲಾಗಿದೆ ಎಂದು ಹೇಳಿದರು.   

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ, ರಕ್ಷಣಾ ಸಚಿವಾಲಯ ಹಾಗೂ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇವುಗಳ ಅಗತ್ಯತೆಗಳನ್ನು ಪೂರೈಸಲು ಇಸ್ಪಾ ರಚನಾತ್ಮಕ ಪಾತ್ರ ವಹಿಸುತ್ತಿದೆ ಎಂದು ಸಚಿವರು ಬೆಳಕು ಚೆಲ್ಲಿದರು. ಮುಂಬರುವ ದಿನಗಳಲ್ಲಿ ಸರ್ಕಾರದ ಶಕ್ತಿ ಮತ್ತು ಸಾಮರ್ಥ್ಯವೃದ್ದಿಗಾಗಿ ಇಸ್ಪಾ ಮತ್ತಷ್ಟು ಆಳವಾದ ಬೆಂಬಲ ನೀಡಲಿದೆ ಎಂದು ಹೇಳಿದರು. ಈ ಭವ್ಯವಾದ ಕಾರ್ಯಕ್ರಮ ಆಯೋಜಿಸಲು ಇಸ್ಪಾ ಅಧ್ಯಕ್ಷರು ಮತ್ತು ಮಹಾ ನಿರ್ದೇಶಕರು ಹೆಚ್ಚಿನ ಶ್ರಮವಹಿಸಿರುವ ಬಗ್ಗೆಯೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.  

ಇದೇ ಸಂದರ್ಭದಲ್ಲಿ “ಭಾರತದಲ್ಲಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ಅಭಿವೃದ್ಧಿ: ಎಲ್ಲವನ್ನೊಳಗೊಂಡ ಅಭಿವೃದ್ಧಿಯತ್ತ” ಕುರಿತ ವಲಯವಾರು ವರದಿಯನ್ನು ಸಚಿವರು  ಇಸ್ಪಾ ಅಧ್ಯಕ್ಷ ಜಯಂತ್ ಡಿ ಪಾಟೀಲ್, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರ ಜೊತೆ ಬಿಡುಗಡೆ ಮಾಡಿದರು.

ಕೊನೆಯಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ಇಸ್ರೋ ಸಾಧನೆಗಳು ನಮಗೆ ಜಾಗತಿಕ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿಕೊಟ್ಟಿವೆ ಮತ್ತು ಇಸ್ರೋ ವಿಶ್ವದ ಅತಿ ದೊಡ್ಡ ದೂರ ಸಂವೇದಿ ಉಪಗ್ರಹಗಳ ಸಮೂಹದೊಂದಿಗೆ ಖಗೋಳ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆಯುತ್ತಿರುವುದು ಕಡಿಮೆ ಗೌರವವಲ್ಲ. ತನ್ನ ಸಾಧನೆಗಳ ಮೂಲಕ ಇಸ್ರೋ ಭಾರತಕ್ಕೆ ಹೆಮ್ಮೆ ತರುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.

*******



(Release ID: 1866674) Visitor Counter : 284