ಪ್ರಧಾನ ಮಂತ್ರಿಯವರ ಕಛೇರಿ

ಎನ್ಐಐಒ ವಿಚಾರಸಂಕಿರಣ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಭಾರತೀಯ ನೌಕಾಪಡೆಯಲ್ಲಿ ಸ್ವದೇಶಿ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ‘ಸ್ಪ್ರಿಂಟ್ ಚಾಲೆಂಜಸ್(ಪೂರ್ಣ ಸಾಮರ್ಥ್ಯದ ಸವಾಲುಗಳು)’ ಉಪಕ್ರಮ ಅನಾವರಣಗೊಳಿಸಿದ ಪ್ರಧಾನಮಂತ್ರಿ

"ಭಾರತೀಯ ರಕ್ಷಣಾ ಪಡೆಗಳಲ್ಲಿ ಸ್ವಾವಲಂಬನೆಯ ಗುರಿಯು 21ನೇ ಶತಮಾನದ ಭಾರತಕ್ಕೆ ಬಹಳ ಮುಖ್ಯ"

"ನಾವೀನ್ಯತೆ ಅಥವಾ ಹೊಸತನ ನಿರ್ಣಾಯಕ, ಆದರೆಅದು ಸ್ಥಳೀಯವಾಗಿರಬೇಕು. ಆಮದು ಮಾಡಿದ ಸರಕುಗಳು ನಾವೀನ್ಯತೆಯ ಮೂಲವಾಗಿರಲು ಸಾಧ್ಯವಿಲ್ಲ"

"ಮೊದಲ ಸ್ವದೇಶಿ ನಿರ್ಮಿತ ವೈಮಾನಿಕ ನೌಕೆಯ ನಿಯುಕ್ತಿ ಅತಿ ಶೀಘ್ರ"

"ರಾಷ್ಟ್ರೀಯ ಭದ್ರತಾ ಬೆದರಿಕೆಗಳು ವ್ಯಾಪಕವಾಗಿ ಹರಡಿವೆ ಮತ್ತು ಸಮರ ವಿಧಾನಗಳು ಸಹ ಬದಲಾಗುತ್ತಿವೆ"

"ಭಾರತವು ಜಾಗತಿಕ ಮಟ್ಟದಲ್ಲಿ ಭದ್ರವಾಗಿ ನಿಲ್ಲುತ್ತಿದ್ದಂತೆ, ತಪ್ಪು ಮಾಹಿತಿ ಮತ್ತು ಸುಳ್ಳು ಪ್ರಚಾರದ ಮೂಲಕ ನಿರಂತರ ದಾಳಿಗಳು ನಡೆಯುತ್ತಿವೆ"


"ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತರುವ ದುಷ್ಟ ಶಕ್ತಿಗಳನ್ನು ದೇಶದಲ್ಲೇ ಆಗಲಿ, ಹೊರರಾಷ್ಟ್ರಗಳಲ್ಲೇ ಆಗಲಿ, ಸಮರ್ಥವಾಗಿ ತಡೆಯಬೇಕು"

"ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ 'ಇಡೀ ಸರ್ಕಾರದ' ವಿಧಾನದಂತೆ, 'ಇಡೀ ರಾಷ್ಟ್ರ' ವಿಧಾನವು ರಾಷ್ಟ್ರ ರಕ್ಷಣೆಗೆ ಈ ಸಮಯದ ಅಗತ್ಯವಾಗಿದೆ"

Posted On: 18 JUL 2022 6:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೌಕಾಪಡೆಯ ಆವಿಷ್ಕಾರ(ಅನುಶೋಧನೆ) ಮತ್ತು ಸ್ವದೇಶೀಕರಣ ಸಂಸ್ಥೆ (ಎನ್ಐಐಒ) ಆಯೋಜಿಸಿದ್ದ 'ಸ್ವಾವಲಂಬನ್' ವಿಚಾರಸಂಕಿರಣದಲ್ಲಿ ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತೀಯ ರಕ್ಷಣಾ ಪಡೆಗಳಲ್ಲಿ ಸ್ವಾವಲಂಬನೆಯ ಗುರಿ ಸಾಧನೆಯು 21ನೇ ಶತಮಾನದಲ್ಲಿ ಭಾರತಕ್ಕೆ ಬಹಳ ಮುಖ್ಯವಾಗಿದೆ. ಸ್ವಾವಲಂಬಿ ನೌಕಾಪಡೆ ಹೊಂದುವ ಗುರಿ ಸಾಧಿಸಲು ಮೊದಲ ‘ಸ್ವಾವಲಂಬನ್(ಸ್ವಾವಲಂಬನೆ)’ ವಿಚಾರಸಂಕಿರಣ ಆಯೋಜಿಸಿರುವುದು ಈ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದರು.

ನವ ಭಾರತ ಕಟ್ಟುವ ಹೊಸ ಸಂಕಲ್ಪಗಳನ್ನು ಮಾಡುವ ಈ ಅವಧಿಯಲ್ಲಿ 75 ಸ್ವದೇಶಿ ತಂತ್ರಜ್ಞಾನಗಳನ್ನು ರಚಿಸುವ ಸಂಕಲ್ಪವು ಸಹ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಅದನ್ನು ಶೀಘ್ರದಲ್ಲೇ ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಆದರೂ ಇದು ದೇಶದ ಪಾಲಿಗೆ ಮೊದಲ ಹೆಜ್ಜೆಯಾಗಿದೆ. "ದೇಶೀಯ ತಂತ್ರಜ್ಞಾನಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲು ನಾವು ಕೆಲಸ ಮಾಡಬೇಕು. ಭಾರತವು ತನ್ನ ಸ್ವಾತಂತ್ರ್ಯದ 100ನೇ ವರ್ಷ ಆಚರಿಸುವಾಗ, ಆ ಸಮಯದಲ್ಲಿ ನಮ್ಮ ನೌಕಾಪಡೆಯು ಅಭೂತಪೂರ್ವ ಎತ್ತರದಲ್ಲಿರಬೇಕು ಎಂಬುದು ನಿಮ್ಮ ಗುರಿಯಾಗಿರಬೇಕು” ಎಂದು ಪ್ರಧಾನಿ ಹೇಳಿದರು.

ಭಾರತದ ಬೃಹತ್ ಆರ್ಥಿಕತೆಯಲ್ಲಿ ಸಾಗರಗಳು ಮತ್ತು ಕರಾವಳಿಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತೀಯ ನೌಕಾಪಡೆಯ ಪಾತ್ರವು ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ ಭಾರತೀಯ ನೌಕಾಪಡೆಯ ಸ್ವಾವಲಂಬನೆಯು ನಿರ್ಣಾಯಕ ಪ್ರಾಮುಖ್ಯತೆ ಹೊಂದಿದೆ ಎಂದು ಅವರು ಹೇಳಿದರು.

ದೇಶದ ವೈಭವದ ಸಾಗರ ಸಂಪ್ರದಾಯವನ್ನು ಸ್ಮರಿಸಿದ ಪ್ರಧಾನ ಮಂತ್ರಿ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ರಕ್ಷಣಾ ಕ್ಷೇತ್ರವು ಅತ್ಯಂತ ಬಲಿಷ್ಠವಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿ 18 ಶಸ್ತ್ರಾಸ್ತ್ರ ಕಾರ್ಖಾನೆಗಳಿದ್ದವು, ಅಲ್ಲಿ ಫಿರಂಗಿ ಬಂದೂಕುಗಳು ಸೇರಿದಂತೆ ಅನೇಕ ರೀತಿಯ ಸೇನಾ ಸಾಮಗ್ರಿ, ಉಪಕರಣಗಳನ್ನು ದೇಶದಲ್ಲಿ ತಯಾರಿಸಲಾಗುತ್ತಿತ್ತು. 2ನೇ ಮಹಾಯುದ್ಧದಲ್ಲಿ ಭಾರತವು ರಕ್ಷಣಾ ಸಾಧನಗಳ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿತ್ತು. “ನಮ್ಮ ಹೊವಿಟ್ಜರ್‌ಗಳು, ಇಶಾಪುರ ರೈಫಲ್ ಫ್ಯಾಕ್ಟರಿಯಲ್ಲಿ ತಯಾರಿಸಿದ ಮೆಷಿನ್ ಗನ್‌ಗಳನ್ನು ಅತ್ಯುತ್ತಮ ಸಮರ ಸಾಧನಗಳೆಂದೇ ಪರಿಗಣಿಸಲಾಗಿದೆ. ನಾವು ಸಾಕಷ್ಟು ಸೇನಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದ್ದೆವು. ಆದರೆ ನಂತರ ಏನಾಯಿತು? ಒಂದು ಕಾಲದಲ್ಲಿ ನಾವು ಈ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಮದುದಾರರಾಗಿದ್ದೆವಲ್ಲಾ ಎಂದು ಅವರು ಪ್ರಶ್ನಿಸಿದರು. ಮಹಾಯುದ್ಧದ ಸವಾಲನ್ನು ಬಂಡವಾಳವಾಗಿಟ್ಟುಕೊಂಡು ದೊಡ್ಡ ಶಸ್ತ್ರಾಸ್ತ್ರ ರಫ್ತುದಾರರಾಗಿ ಹೊರಹೊಮ್ಮಿದ ದೇಶಗಳಂತೆ ಭಾರತವೂ ಕೊರೊನಾ ಅವಧಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿತು. ಆರ್ಥಿಕತೆ, ಉತ್ಪಾದನೆ ಮತ್ತು ವಿಜ್ಞಾನದಲ್ಲಿ ದಾಪುಗಾಲು ಹಾಕಿತು. ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ರಕ್ಷಣಾ ಉತ್ಪಾದನೆಯ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿಯು ಸರ್ಕಾರಿ ವಲಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಅವರು ವಿಷಾದಿಸಿದರು. "ನಾವೀನ್ಯತೆ ಅಥವಾ ಹೊಸತನ ಅಥವಾ ಆವಿಷ್ಕಾರ ಅಥವಾ ಅನುಶೋಧನೆ ನಿರ್ಣಾಯಕವಾಗಿದೆ, ಅದು ಸ್ಥಳೀಯವಾಗಿರಬೇಕು. ಆಮದು ಮಾಡಿದ ಸರಕುಗಳು ನಾವೀನ್ಯತೆಯ ಮೂಲವಾಗಲಾರವು”. ಆಮದು ಮಾಡಿಕೊಳ್ಳುವ ವಸ್ತುಗಳ ಆಕರ್ಷಣೆಯ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಾದ ಅಗತ್ಯವನ್ನು ಪ್ರಧಾನ ಮಂತ್ರಿ ಒತ್ತಿ ಹೇಳಿದರು.

ಸ್ವಾವಲಂಬಿ ರಕ್ಷಣಾ ವ್ಯವಸ್ಥೆಯು ಆರ್ಥಿಕತೆಗೆ ಮತ್ತು ಕಾರ್ಯತಂತ್ರ ದೃಷ್ಟಿಕೋನದಿಂದ ನಿರ್ಣಾಯಕವಾಗಿದೆ. 2014ರ ನಂತರ ಈ ಅವಲಂಬನೆಯನ್ನು ಕಡಿಮೆ ಮಾಡಲು ದೇಶವು ಭರದ ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡಿದೆ. ನಮ್ಮ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ವಿವಿಧ ವಲಯಗಳಲ್ಲಿ ಸಂಘಟಿಸುವ ಮೂಲಕ ಸರ್ಕಾರವು ಹೊಸ ಶಕ್ತಿ ಮತ್ತು ಚೈತನ್ಯ ನೀಡಿದೆ ಎಂದು ಪ್ರಧಾನಿ ತಿಳಿಸಿದರು. ಇಂದು ನಾವು ಐಐಟಿಗಳಂತಹ ದೇಶದ ಪ್ರಮುಖ ಸಂಸ್ಥೆಗಳನ್ನು ರಕ್ಷಣಾ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಸಂಪರ್ಕಿಸುವುದನ್ನು ಖಚಿತಪಡಿಸುತ್ತಿದ್ದೇವೆ. “ಕಳೆದ ದಶಕಗಳ ಕಾರ್ಯ ವಿಧಾನದಿಂದ ಕಲಿಯುತ್ತಾ, ಇಂದು ನಾವು ಪ್ರತಿಯೊಬ್ಬರ ಪ್ರಯತ್ನಗಳ ಬಲದೊಂದಿಗೆ ಹೊಸ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಇಂದು ಖಾಸಗಿ ವಲಯ, ಶಿಕ್ಷಣ ಸಂಸ್ಥೆಗಳು, ಎಂಎಸ್‌ಎಂಇಗಳು ಮತ್ತು ಸ್ಟಾರ್ಟಪ್‌ಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಲಯ ತೆರೆದಿದ್ದೇವೆ”. ಇದು ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಯೋಜನೆಗಳಿಗೆ ಹೊಸ ವೇಗ ನೀಡಲು ಕಾರಣವಾಗಿದೆ. ಮೊದಲ ಸ್ವದೇಶಿ ನಿರ್ಮಿತ ವೈಮಾನಿಕ ನೌಕೆಯ ಕಾರ್ಯಾರಂಭ ಶೀಘ್ರದಲ್ಲೇ ನೆರವೇರಲಿದೆ ಎಂಬ ವಿಶ್ವಾಸವನ್ನು ಪ್ರಧಾನ ಮಂತ್ರಿ ವ್ಯಕ್ತಪಡಿಸಿದರು.

ಕಳೆದ 8 ವರ್ಷಗಳಲ್ಲಿ ಸರ್ಕಾರವು ರಕ್ಷಣಾ ಬಜೆಟ್ ವೆಚ್ಚವನ್ನು ಹೆಚ್ಚಿಸಿದೆ. “ಈ ಸಾಲಿನ ಬಜೆಟ್ ದೇಶದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಉಪಯುಕ್ತವಾಗಿದೆ ಎಂದು ನಾವು ಖಚಿತಪಡಿಸಿದ್ದೇವೆ. ಇಂದು ರಕ್ಷಣಾ ಸಾಮಗ್ರಿಗಳು, ಸಾಧನ ಉಪಕರಣಗಳ ಖರೀದಿಗೆ ಮೀಸಲಿಟ್ಟ ಬಜೆಟ್‌ನ ಹೆಚ್ಚಿನ ಭಾಗವನ್ನು ಭಾರತೀಯ ಕಂಪನಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳದ 300 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿರುವ ರಕ್ಷಣಾ ಪಡೆಗಳನ್ನು ಪ್ರಧಾನಿ ಅವರು ಅಭಿನಂದಿಸಿದರು.

ಕಳೆದ 4-5 ವರ್ಷಗಳಲ್ಲಿ ರಕ್ಷಣಾ ಆಮದು ಶೇ.21ರಷ್ಟು ಕಡಿಮೆಯಾಗಿದೆ. ರಕ್ಷಣಾ ಉತ್ಪನ್ನಗಳ ದೊಡ್ಡ ಅಮದುದಾರರಾಗಿದ್ದ ನಾವಿಂದು ದೊಡ್ಡ ರಫ್ತುದಾರರಾಗಿ ವೇಗವಾಗಿ ಸಾಗುತ್ತಿದ್ದೇವೆ. ಕಳೆದ ವರ್ಷ 13 ಸಾವಿರ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳ ರಫ್ತು ಮಾಡಲಾಗಿದ್ದು, ಇದರಲ್ಲಿ ಶೇ 70ಕ್ಕೂ ಹೆಚ್ಚಿನ ಪ್ರಮಾಣ ಖಾಸಗಿ ವಲಯದಿಂದ ರಫ್ತಾಗಿದೆ ಎಂದು ಪ್ರಧಾನಿ ತಿಳಿಸಿದರು.

ಈಗ ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು ವ್ಯಾಪಕವಾಗಿ ಹರಡಿವೆ. ಯುದ್ಧದ ವಿಧಾನಗಳು ಸಹ ಬದಲಾಗುತ್ತಿವೆ. ಮೊದಲು ನಾವು ನಮ್ಮ ರಕ್ಷಣೆಯನ್ನು ಭೂಮಿ, ಸಮುದ್ರ ಮತ್ತು ಆಕಾಶದವರೆಗೆ ಮಾತ್ರ ಕಲ್ಪಿಸಿಕೊಳ್ಳುತ್ತಿದ್ದೆವು. ಈಗ ಅದು ಬಾಹ್ಯಾಕಾಶದತ್ತ ಸಾಗುತ್ತಿದೆ, ಸೈಬರ್‌ ಸ್ಪೇಸ್‌ನತ್ತ ಸಾಗುತ್ತಿದೆ. ಆರ್ಥಿಕ, ಸಾಮಾಜಿಕ ಜಾಗದತ್ತ ಸಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಾವು ಭವಿಷ್ಯದ ಸವಾಲುಗಳನ್ನು ನಿರೀಕ್ಷಿಸುತ್ತಾ ಸಾಗಬೇಕು, ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವಾವಲಂಬನೆ ದೇಶಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.

ದೇಶಕ್ಕೆ ಎದುರಾಗುತ್ತಿರುವ ಹೊಸ ಅಪಾಯದ ವಿರುದ್ಧ ಪ್ರಧಾನಿ ಎಚ್ಚರಿಕೆ ನೀಡಿದರು. “ಭಾರತದ ಆತ್ಮ ವಿಶ್ವಾಸ, ನಮ್ಮ ಸ್ವಾವಲಂಬನೆಗೆ ಸವಾಲು ಹಾಕುವ ದುಷ್ಟಶಕ್ತಿಗಳ ವಿರುದ್ಧ ನಾವು ನಮ್ಮ ಸಮರ ಕಲೆವನ್ನು ತೀವ್ರಗೊಳಿಸಬೇಕಾಗಿದೆ. ನಂಬಿಕೆಯನ್ನು ಇಟ್ಟುಕೊಂಡು ಭಾರತವು ಜಾಗತಿಕ ಮಟ್ಟದಲ್ಲಿ ಭದ್ರವಾಗಿ ನೆಲೆ ನಿಲ್ಲುತ್ತಿರುವಾಗ, ತಪ್ಪು ಮಾಹಿತಿ, ಅಪಪ್ರಚಾರ ಮತ್ತು ಸುಳ್ಳು ಪ್ರಚಾರ ಇತ್ಯಾದಿಗಳ ಮೂಲಕ ನಿರಂತರ ದಾಳಿಗಳು ನಡೆಯುತ್ತಿವೆ. ದೇಶದಲ್ಲೇ ಆಗಲಿ, ಹೊರರಾಷ್ಟ್ರಗಳಲ್ಲೇ ಆಗಲಿ, ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತರುವ ದುಷ್ಟಶಕ್ತಿಗಳನ್ನು ಪ್ರತಿಯೊಂದು ಪ್ರಯತ್ನದಲ್ಲೂ ವಿಫಲಗೊಳಿಸಬೇಕಾಗಿದೆ. ರಾಷ್ಟ್ರೀಯ ರಕ್ಷಣೆಯು ಗಡಿಗಳಿಗೆ ಸೀಮಿತವಾಗಿಲ್ಲ, ಆದರೆ ಅದು ಹೆಚ್ಚು ವಿಶಾಲವಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನಿಗೂ ಇದರ ಬಗ್ಗೆ ಅರಿವು ಮೂಡಿಸುವುದು ಅಷ್ಟೇ ಅಗತ್ಯವಾಗಿದೆ. ಆದ್ದರಿಂದ "ನಾವು ಸ್ವಾವಲಂಬಿ ಭಾರತಕ್ಕಾಗಿ 'ಇಡೀ ಸರ್ಕಾರದ' ವಿಧಾನದೊಂದಿಗೆ ಮುನ್ನಡೆಯುತ್ತಿರುವಾಗ, ಅದೇ ರೀತಿ, 'ಇಡೀ ರಾಷ್ಟ್ರದ' ವಿಧಾನವು ರಾಷ್ಟ್ರದ ರಕ್ಷಣೆಗೆ ಈ ಸಮಯ ಅಗತ್ಯವಾಗಿದೆ." "ಭಾರತದ ವಿವಿಧ ಜನರ ಈ ಸಾಮೂಹಿಕ ರಾಷ್ಟ್ರೀಯ ಪ್ರಜ್ಞೆಯು ಭದ್ರತೆ ಮತ್ತು ಸಮೃದ್ಧಿಯ ಬಲವಾದ ಆಧಾರವಾಗಿದೆ" ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಎನ್ಐಐಒ ವಿಚಾರಸಂಕಿರಣ ‘ಸ್ವಾವಲಂಬನ್’

ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದೇ ಆತ್ಮನಿರ್ಭರ್ ಭಾರತದ ಪ್ರಮುಖ ಆಧಾರ ಸ್ತಂಭವಾಗಿದೆ. ಈ ಪ್ರಯತ್ನವನ್ನು ಮುಂದುವರಿಸಲು, ಪ್ರಧಾನ ಮಂತ್ರಿ ಅವರು ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯಲ್ಲಿ ಸ್ವದೇಶಿ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ಗುರಿ ಹೊಂದಿರುವ ‘ಸ್ಪ್ರಿಂಟ್ ಚಾಲೆಂಜಸ್(ಪೂರ್ಣ ಸಾಮರ್ಥ್ಯದ ಸವಾಲುಗಳು’ ಉಪಕ್ರಮವನ್ನು ಅನಾವರಣಗೊಳಿಸಿದರು. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಭಾಗವಾಗಿ, ಎನ್ಐಐಒ ಸಂಸ್ಥೆಯು ಡಿಫೆನ್ಸ್ ಇನ್ನೋವೇಶನ್ ಆರ್ಗನೈಸೇಶನ್ (ಡಿಐಒ) ಜತೆಗೂಡಿ ಕನಿಷ್ಠ 75 ಹೊಸ ಸ್ಥಳೀಯ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಭಾರತೀಯ ನೌಕಾಪಡೆಗೆ ಸೇರಿಸುವ ಗುರಿ ಹೊಂದಿವೆ. ಈ ಸಹಭಾಗಿತ್ವದ ಯೋಜನೆಗೆ ಸ್ಪ್ರಿಂಟ್ ‘ಸ್ಪ್ರಿಂಟ್ ಚಾಲೆಂಜಸ್’ (ಐಡೆಕ್ಸ್, ಎನ್ಐಐಒ ಮತ್ತು ಟಿಡಿಎಸಿ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಪೋಲ್-ವಾಲ್ಟಿಂಗ್ ಬೆಂಬಲಿಸುವುದು) ಎಂದು ಹೆಸರಿಡಲಾಗಿದೆ.

ಈ ವಿಚಾರಸಂಕಿರಣವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತೀಯ ಉದ್ಯಮ ಮತ್ತು ಶಿಕ್ಷಣವನ್ನು ತೊಡಗಿಸಿಕೊಳ್ಳುವ ಗುರಿ ಹೊಂದಿದೆ. 2 ದಿನಗಳ ವಿಚಾರಸಂಕಿರಣ (ಜುಲೈ 18-19) ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು, ಸೇವೆಗಳು ಮತ್ತು ಸರ್ಕಾರದ ಪ್ರತಿನಿಧಿಗಳು ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಲು ಮತ್ತು ರಕ್ಷಣಾ ವಲಯಕ್ಕೆ ಶಿಫಾರಸುಗಳನ್ನು ನೀಡಲು ವೇದಿಕೆ ಒದಗಿಸುತ್ತಿದೆ. ನಾವೀನ್ಯತೆ, ಸ್ವದೇಶೀಕರಣ, ಶಸ್ತ್ರಾಸ್ತ್ರ ಮತ್ತು ವೈಮಾನಿಕ ರಂಗಕ್ಕೆ ಮೀಸಲಾದ ಕಲಾಪಗಳು ನಡೆಯಲಿವೆ. ವಿಚಾರಸಂಕಿರಣದ 2ನೇ ದಿನವು ಕೇಂದ್ರ ಸರ್ಕಾರದ ಸಾಗರ್ (ಸಾಗರ ಭಆಗದ ಎಲ್ಲರಿಗೂ ಭದ್ರತೆ ಮತ್ತು ಪ್ರಗತಿ) ಉಪಕ್ರಮದ ದೃಷ್ಟಿಕೋನಕ್ಕೆ ಅನುಗುಣವಾಗಿ ಹಿಂದೂ ಮಹಾಸಾಗರ ಭಾಗದ ವ್ಯಾಪಕ ಚರ್ಚೆಗೆ ಸಾಕ್ಷಿಯಾಗಲಿದೆ.

 

 

 

**********

 

 

 

 

 

 



(Release ID: 1842510) Visitor Counter : 179