ಬಾಹ್ಯಾಕಾಶ ವಿಭಾಗ

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯಾಗಿ ಮುಕ್ತಗೊಳಿಸಿದ ನಂತರ ಇಸ್ರೋದಲ್ಲಿ ಸುಮಾರು 60 ನವೋದ್ಯಮಗಳ ನೋಂದಣಿ: ಅವುಗಳಲ್ಲಿ ಕೆಲವು ಬಾಹ್ಯಾಕಾಶದ ಅವಶೇಷಗಳ ನಿರ್ವಹಣೆಗೆ ಸಂಬಂಧಿಸಿದ ಯೋಜನೆಗಳಿಗೆ ಸೇರಿದ್ದಾಗಿವೆ: ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್


ಬಾಹ್ಯಾಕಾಶದಲ್ಲಿನ ಅವಶೇಷಗಳ ನಿರ್ವಹಣೆ ಸೇರಿದಂತೆ ಹಲವು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಬಾಹ್ಯಾಕಾಶ ಪಾತ್ರವನ್ನು ವೃದ್ಧಿಸಲಿರುವ ಬಾಹ್ಯಾಕಾಶ ನವೋದ್ಯಮಗಳು: ಕೇಂದ್ರ ಸಚಿವರ ಡಾ.ಜಿತೇಂದ್ರ ಸಿಂಗ್ ಹೇಳಿಕೆ.


ಇಸ್ರೋ ವ್ಯವಸ್ಥೆಗೆ ಸುರಕ್ಷಿತ ಮತ್ತು ಸುಸ್ಥಿರ ಕಾರ್ಯಾಚರಣೆ (IS4OM)ಯನ್ನು ಸಚಿವರು ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿಂದು ಉದ್ಘಾಟಿಸಿದರು: ಬಾಹ್ಯಾಕಾಶ ಪರಿಸರ ಬಳಕೆದಾರರಿಗೆ ಸಮಗ್ರ ಮತ್ತು ಸಕಾಲಿಕ ಮಾಹಿತಿಯನ್ನು ಒದಗಿಸಲಿರುವ ಸೌಕರ್ಯ.


ಭಾರತೀಯ ಬಾಹ್ಯಾಕಾಶ ಸ್ವತ್ತುಗಳು, ಬಾಹ್ಯಾಕಾಶ ವಸ್ತುಗಳಿಂದ ಘರ್ಷಣೆ ಅಪಾಯಗಳ ನಿಯಂತ್ರಣ, ಬಾಹ್ಯಾಕಾಶ ಅವಶೇಷಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿ ಕಾರ್ಯತಂತ್ರದ ಕಾರ್ಯತಾಂತ್ರಿಕ ಉದ್ದೇಶ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಮಾಹಿತಿ ನೀಡಲಿರುವ IS4OM: ಡಾ.ಜಿತೇಂದ್ರ ಸಿಂಗ್

Posted On: 11 JUL 2022 6:49PM by PIB Bengaluru

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ ಸುಮಾರು 60 ನವೋದ್ಯಮಗಳು ಇಸ್ರೋದಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು ಅವುಗಳಲ್ಲಿ ಬಹುತೇಕ ಬಾಹ್ಯಾಕಾಶದಲ್ಲಿ ಅವಶೇಷಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿವೆ. ಇತರೆ ನವೋದ್ಯಮ ಪ್ರಸ್ತಾಪಗಳಲ್ಲಿ ನ್ಯಾನೊ-ಉಪಗ್ರಹ, ಉಡಾವಣಾ ವಾಹಕ, ತಳಮಟ್ಟದಲ್ಲಿನ ವ್ಯವಸ್ಥೆಗಳು ಮತ್ತು ಸಂಶೋಧನೆಗೆ ಸಂಬಂಧಿಸಿದ್ದಾಗಿವೆ.

ಈ ವಿಷಯವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆಗಾರಿಕೆ), ಭೂ ವಿಜ್ಞಾನ (ಸ್ವತಂತ್ರ ಹೊಣೆಗಾರಿಕೆ), ಪಿಎಂಒ, ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದರು. ಅವರು ಬೆಂಗಳೂರಿನಲ್ಲಿಂದು ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಕಾರ್ಯಾಚರಣೆಗಾಗಿ ಇಸ್ರೋ ಸಿಸ್ಟಮ್ (IS4OM) ಅನ್ನು ಉದ್ಘಾಟಿಸಿದ ನಂತರ ಮಾತನಾಡಿದರು.

ಕಳೆದ ತಿಂಗಳಷ್ಟೇ ಅಹಮದಾಬಾದ್‌ನಲ್ಲಿ ಇನ್-ಸ್ಪೇಸ್ ಪ್ರಧಾನ ಕಛೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳ ಶಕ್ತಿ ಮತ್ತು ಭಾರತದ ಖಾಸಗಿ ವಲಯದ ಉತ್ಸಾಹ (ಪ್ಯಾಷನ್) ಒಗ್ಗೂಡಿದರೆ ಆಕಾಶವೇ ಮಿತಿಯಾಗುತ್ತದೆ’’ ಎಂದು ಹೇಳಿದ್ದರೆಂದು ಡಾ ಜಿತೇಂದ್ರ ಸಿಂಗ್ ಅವರು ನೆನಪಿಸಿಕೊಂಡರು.

ಖಾಸಗಿ ಪಾಲುದಾರರು ಮತ್ತು ನವೀನ ನವೋದ್ಯಮಗಳ ಉತ್ಸಾಹವು ಬಾಹ್ಯಾಕಾಶ ಸಾರಿಗೆ, ಅವಶೇಷಗಳು (ಶಿಲಾಖಂಡರಾಶಿಗಳ) ನಿರ್ವಹಣೆ, ಮೂಲಸೌಕರ್ಯ ಮತ್ತು ಅಪ್ಲಿಕೇಶನ್‌ಗಳ ಕ್ಷೇತ್ರಗಳಲ್ಲಿ ಸರ್ವತೋಮುಖ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಾಹ್ಯಾಕಾಶದಲ್ಲಿ ಭಾರತದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಬಾಹ್ಯಾಕಾಶ ಇಲಾಖೆಯ ಪಾತ್ರವನ್ನು ವೃದ್ಧಿಸುತ್ತದೆ ಎಂದು ಸಚಿವರು ಪುನರುಚ್ಚರಿಸಿದರು.

IS4OM ಬಳಕೆದಾರರಿಗೆ ಬಾಹ್ಯಾಕಾಶ ಪರಿಸರದ ಸಮಗ್ರ ಮತ್ತು ಸಕಾಲಿಕ ಮಾಹಿತಿಯನ್ನು ಒದಗಿಸುವ ಮೂಲಕ ತನ್ನ ಎಸ್ ಎಸ್ ಎ (ಸ್ಪೇಸ್ ಸಿಚುಯೇಷನಲ್ ಅವೇರ್ನೆಸ್) ಗುರಿಗಳನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಈ ಬಹು ಆಯಾಮದ ಜಾಗೃತಿ ವೇದಿಕೆಯು, ಕಕ್ಷೆಯಲ್ಲಿನ ಘರ್ಷಣೆಗಳು, ವಿಘಟನೆ (ಫ್ರಾಂಗ್ಮೇಟೇಷನ್), ವಾತಾವರಣದ ಮರು ಪ್ರವೇಶ ಅಪಾಯ, ಬಾಹ್ಯಾಕಾಶ ಆಧಾರಿತ ಕಾರ್ಯತಂತ್ರದ ಮಾಹಿತಿ, ಅಪಾಯಕಾರಿ ಕ್ಷುದ್ರ ಗ್ರಹಗಳು ಮತ್ತು ಬಾಹ್ಯಾಕಾಶ ಹವಾಮಾನ ಮುನ್ಸೂಚನೆಯ ಕುರಿತು ತ್ವರಿತ, ನಿಖರ ಮತ್ತು ಪರಿಣಾಮಕಾರಿ ಮಾಹಿತಿಯನ್ನು ಒದಗಿಸುತ್ತದೆ ಎಂದು ಡಾ.ಜಿತೇಂದ್ರ ಸಿಂಗ್ ಅವರು ಹೇಳಿದರು.

ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಹ್ಯಾಕಾಶದ ಸುಸ್ಥಿರ ಬಳಕೆಯ ಪ್ರಯೋಜನ ಪಡೆಯುವಾಗ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇಂತಹ ಸಮಗ್ರ ವಿಧಾನದೊಂದಿಗೆ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಸಚಿವರು ಒತ್ತಿ ಹೇಳಿದರು.

ಕಾರ್ಯಾಚರಣಾ ನೌಕೆಗಳು ಮತ್ತು ಬಾಹ್ಯಾಕಾಶ ಅವಶೇಷಗಳ ವಸ್ತುಗಳು (ಆಬ್ಜಕ್ಟ್ಸ್) ಸೇರಿದಂತೆ ಬಾಹ್ಯಾಕಾಶ ವಸ್ತುಗಳ ಉದ್ದೇಶಪೂರ್ವಕ ಮತ್ತು ಆಕಸ್ಮಿಕ ಅಪಾಯಗಳಿಂದ ತನ್ನ ಎಲ್ಲಾ ಬಾಹ್ಯಾಕಾಶ ಆಸ್ತಿಗಳನ್ನು ರಕ್ಷಿಸಲು ಇಸ್ರೋ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ಸಾಂದರ್ಭಿಕ ಜಾಗೃತಿ ಚಟುವಟಿಕೆಗಳು ಹಲವು ಕಾರ್ಯತಾಂತ್ರಿಕ ಪರಿಣಾಮಗಳನ್ನು ಉಂಟು ಮಾಡಿವೆ. ಅವುಗಳೆಂದರೆ ಕಾರ್ಯಾಚರಣೆಯ ಬಾಹ್ಯಾಕಾಶ ನೌಕೆಗಳನ್ನು ಗುರುತಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು, ಭಾರತೀಯ ಪ್ರದೇಶದ ಮೇಲೆ ಅತಿಕ್ರಮಿಸುವುದು (ಓವರ್‌ಪಾಸ್ ಮಾಡುವುದು), ಅನುಮಾನಾಸ್ಪದ ಉದ್ದೇಶಗಳೊಂದಿಗೆ ಉದ್ದೇಶಪೂರ್ವಕ ವ್ಯೂಹ ರಚನೆಗಳು ಮತ್ತು ಭಾರತೀಯ ಪ್ರದೇಶದೊಳಗೆ ಮರು-ಪ್ರವೇಶದಂತಹ ಅನೇಕ ಕಾರ್ಯತಂತ್ರದ ಪರಿಣಾಮಗಳನ್ನು ಹೊಂದಿದೆ ಎಂದು ಸಚಿವರು ಹೇಳಿದರು.

IS4OM ಸೌಕರ್ಯವು ಭಾರತೀಯ ಬಾಹ್ಯಾಕಾಶ ಸ್ವತ್ತುಗಳನ್ನು ಸಂರಕ್ಷಿಸುವ ಎಲ್ಲಾ ಮಾಮೂಲಿ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ, ನಿರ್ದಿಷ್ಟ ಘರ್ಷಣೆ ತಪ್ಪಿಸುವ ತಂತ್ರಗಳ ಮೂಲಕ ಬಾಹ್ಯಾಕಾಶ ವಸ್ತುಗಳಿಂದ ಘರ್ಷಣೆ ಬೆದರಿಕೆಗಳನ್ನು ತಗ್ಗಿಸುತ್ತದೆ, ಕಾರ್ಯತಂತ್ರದ ಉದ್ದೇಶಗಳಿಗೆ ಅಗತ್ಯವಿರುವ ಮಾಹಿತಿ ಮತ್ತು ಬಾಹ್ಯಾಕಾಶ ಅವಶೇಷಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿಗೆ ಸಂಬಂಧಿಸಿದ ಮಾಹಿತಿ ಒದಗಿಸುತ್ತದೆ ಎಂದು ಸಚಿವರು ವಿವರಿಸಿದರು.

ಬಾಹ್ಯಾಕಾಶ ಅವಶೇಷಗಳು ಸೇರಿದಂತೆ ಬಾಹ್ಯಾಕಾಶ ವಸ್ತುಗಳನ್ನು ಪತ್ತೆ ಹಚ್ಚಲು ರಾಡಾರ್‌ಗಳು ಮತ್ತು ಆಪ್ಟಿಕಲ್ ದೂರದರ್ಶಕ (ಟೆಲಿಸ್ಕೋಪ್‌)ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಬೇಕಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ಏಕೆಂದರೆ ಅಂತಹ ತಳಮಟ್ಟದಲ್ಲಿನ ಸೆನ್ಸಾರ್ ಗಳಿಂದ ನಿಖರವಾದ ಕಕ್ಷೆಯ ಮಾಹಿತಿಯು ಯಾವುದೇ ಘರ್ಷಣೆ ಅಪಾಯಗಳನ್ನು ಮತ್ತು ಇತರ ವಸ್ತುಗಳಿಂದ ಕಾರ್ಯಾಚರಣೆಯ ಬಾಹ್ಯಾಕಾಶ ಆಸ್ತಿಗೆ ತೊಂದರೆ ಆಗುವುದನ್ನು ತಪ್ಪಿಸಲು ಮೊದಲೇ ತಿಳಿಯುವುದು ಅತ್ಯವಶ್ಯಕವಾಗುತ್ತದೆ ಎಂದರು. ಎಸ್ ಎಸ್ ಎ ವ್ಯವಸ್ಥೆಯ ಬೆನ್ನೆಲುಬು, ವೀಕ್ಷಣಾ ಸೌಲಭ್ಯಗಳ ಜಾಲವಾಗಿದ್ದು, ಅದರಲ್ಲಿ ರಾಷ್ಟ್ರವು ಇತರ ಬಾಹ್ಯಾಕಾಶ ಪ್ರಯಾಣದ ರಾಷ್ಟ್ರಗಳಿಗಿಂತ ಹಿಂದಿದೆ. ಅರ್ಥಪೂರ್ಣ ಮತ್ತು ಮೌಲ್ಯವರ್ಧಿತ ಎಸ್‌ಎಸ್‌ಎ ವ್ಯವಸ್ಥೆಯ ಅಭಿವೃದ್ಧಿ ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲು ಅಗತ್ಯವಾದ ಭಾರತೀಯ ವೀಕ್ಷಣಾ ಸೌಕರ್ಯಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

ದಿನ ನಿತ್ಯದ ಜೀವನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಎಲ್ಲದರಲ್ಲೂ ಬಳಕೆಗೆ ಅನ್ವಯಿಸಿಕೊಂಡರೆ, ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಾವಧಿಯ ಸುಸ್ಥಿರತೆ (ಎಲ್ ಟಿಎಸ್) ಬಾಹ್ಯಾಕಾಶವು ಮನುಕುಲದ ಭವಿಷ್ಯದ ಪೀಳಿಗೆಗೆ ಉಪಯುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.

ಬಾಹ್ಯಾಕಾಶದಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಕಾರ್ಯಾಚರಣೆಗಳ ಪರಿಣಾಮಕಾರಿ ನಿರ್ವಹಣೆಯು, ಬಾಹ್ಯಾಕಾಶ ವಸ್ತುಗಳು ಮತ್ತು ಬಾಹ್ಯಾಕಾಶ ಪರಿಸರದ ವೀಕ್ಷಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ಅನೇಕ ಕ್ಷೇತ್ರಗಳನ್ನು ಒಳಗೊಂಡಿರುವ ಸಮಗ್ರ ವಿಧಾನವನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಕಕ್ಷೆಯ ನಿರ್ಣಯಕ್ಕಾಗಿ ವೀಕ್ಷಣೆಗಳು, ವಸ್ತು ಗುಣಲಕ್ಷಣಗಳನ್ನು ತಿಳಿಯುವುದು ಮತ್ತು ಕ್ಯಾಟಲಾಗ್ ಮಾಡುವುದು, ಬಾಹ್ಯಾಕಾಶ ಪರಿಸರ ವಿಕಾಸದ ವಿಶ್ಲೇಷಣೆ, ಅಪಾಯದ ಮೌಲ್ಯಮಾಪನ ಮತ್ತು ನಿಯಂತ್ರಣ, ದತ್ತಾಂಶ ವಿನಿಮಯ ಮತ್ತು ಸಹಯೋಗಗಳಿಗೂ ಇದು ನೆರವಾಗಲಿದೆ ಎಂದರು.

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಶ್ರೀ ಎಸ್. ಸೋಮನಾಥ್ ಮಾತನಾಡಿ, ಬಾಹ್ಯಾಕಾಶ ಹವಾಮಾನ ಮೇಲ್ವಿಚಾರಣೆ ಮತ್ತು ಮುನ್ಸೂಚನೆಯ ಮೂಲಸೌಕರ್ಯವು ನಿರ್ಣಾಯಕ ಸೌರ ಚಟುವಟಿಕೆಗಳಿಂದ ಬಾಹ್ಯಾಕಾಶ ಆಧಾರಿತ ಹಾಗೂ ತಳಮಟ್ಟದಲ್ಲಿ ಮೂಲಸೌಕರ್ಯ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತೆಯೇ ಸಮಾನ ನೆಲೆಯಲ್ಲಿ, ಮನುಕುಲದ ಕಲ್ಯಾಣಕ್ಕೆ ಕ್ಷುದ್ರಗ್ರಹ ಪ್ರಭಾವಗಳ ಪತ್ತೆ ಮತ್ತು ನಿವಾರಿಸುವದು ಅತ್ಯಗತ್ಯ. ಬಾಹ್ಯಾಕಾಶ ಹವಾಮಾನ ಸೇವೆಗಳ ಕಡೆಗೆ IS40M ನ ದೃಷ್ಟಿ ಮತ್ತು ಗ್ರಹಗಳ ರಕ್ಷಣಾ ಉಪಕ್ರಮವು ಎಸ್ ಎಸ್ ಎಯ ಪ್ರಮುಖ ಕ್ಷೇತ್ರಗಳಾಗಿವೆ ಎಂದರು.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಆರಂಭದಿಂದಲೂ, ಬಾಹ್ಯಾಕಾಶ-ಆಧಾರಿತ ಸ್ವತ್ತುಗಳು ಸಂವಹನ, ಹವಾಮಾನ ಮತ್ತು ಸಂಪನ್ಮೂಲ-ಮೇಲ್ವಿಚಾರಣೆ, ಖಗೋಳಯಾನ ಇತ್ಯಾದಿ ಕ್ಷೇತ್ರದಲ್ಲಿ ನಿರ್ಣಾಯಕ ಸೇವೆಗಳನ್ನು ಒದಗಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆದರೂ ಸಹ ನಿರಂತರವಾಗಿ ಬೆಳೆಯುತ್ತಿರುವ ಬಾಹ್ಯಾಕಾಶ ವಸ್ತುಗಳ ಸಂಖ್ಯಯು ಕಾರ್ಯಾಚರಣೆಯ ಉಪಗ್ರಹಗಳು ಮತ್ತು ಕಕ್ಷೆಯ ಅವಶೇಷಗಳು ಮತ್ತು ಸಂಬಂಧಿತ ಘರ್ಷಣೆಯ ಅಪಾಯಗಳನ್ನು ಒಳಗೊಂಡಂತೆ ನಮ್ಮ ಹೊರ ಬಾಹ್ಯಾಕಾಶದ ಸುರಕ್ಷಿತ ಮತ್ತು ಸುಸ್ಥಿರ ಬಳಕೆಗೆ ಗಂಭೀರ ಅಪಾಯ ಉಂಟು ಮಾಡಲಿದೆ. ಭೂಮಿಯ ಕಕ್ಷೆಗಳ ಹೆಚ್ಚುತ್ತಿರುವ ದಟ್ಟಣೆಯು ಭಾರಿ ಅವಷೇಶಗಳ ನಡುವೆಯೇ ಘರ್ಷಣೆಯ ಅಪಾಯವನ್ನುಂಟುಮಾಡುತ್ತದೆ, ಇದು ಕೆಸ್ಲರ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಮತ್ತಷ್ಟು ಘರ್ಷಣೆಗಳ ಸ್ವಯಂ-ಸುಸ್ಥಿರ ಸುರಿಯುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಬಾಹ್ಯಾಕಾಶ ಅವಶೇಷಗಳ ಸಂಖ್ಯೆಯ ಸಾಂದ್ರತೆಯಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಬಹುದು, ಭವಿಷ್ಯದ ಪೀಳಿಗೆಗೆ ಹೊರ ಬಾಹ್ಯಾಕಾಶವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಕಕ್ಷೆಯಲ್ಲಿರುವ ಭಾರತೀಯ ಉಪಗ್ರಹಗಳು ಮತ್ತು ಇತರ ಸಾಧನಗಳ ರಕ್ಷಣೆಗಾಗಿ ಮತ್ತು ಬಾಹ್ಯಾಕಾಶದ ದೀರ್ಘಾವಧಿಯ ಸುಸ್ಥಿರತೆಗಾಗಿ ಬಾಹ್ಯಾಕಾಶ ಅವಶೇಷ ಬೆಳವಣಿಗೆಯನ್ನು ಒಳಗೊಂಡಿರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಇಸ್ರೋ ಸಕ್ರಿಯವಾಗಿ ಭಾಗವಹಿಸುತ್ತದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇಂಟರ್ ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋ ಆರ್ಡಿನೇಶನ್ ಕಮಿಟಿ (ಐಡಿಎಸಿ), ಐಎಎಫ್ ಸ್ಪೇಸ್ ಡೆಬ್ರಿಸ್ ವರ್ಕಿಂಗ್ ಗ್ರೂಪ್, ಐಎಎ ಸ್ಪೇಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ವರ್ಕಿಂಗ್ ಗ್ರೂಪ್, ಐಎಸ್ ಒ ಸ್ಪೇಸ್ ಡೆಬ್ರಿಸ್ ವರ್ಕಿಂಗ್ ಗ್ರೂಪ್ ಮತ್ತು UNCOPUOS ಲಾಂಗ್ ಟರ್ಮ್ ಸಸ್ಟೈನಬಿಲಿಟಿ ವರ್ಕಿಂಗ್ ಗ್ರೂಪ್ - ಎಲ್ಲಾ ಅಂತಾರಾಷ್ಟ್ರೀಯ ಸಂಸ್ಥೆಗಳ ಸಕ್ರಿಯ ಸದಸ್ಯನಾಗಿ ಇಸ್ರೋ ಬಾಹ್ಯಾಕಾಶ ಅವಶೇಷಗಳ ಅಧ್ಯಯನಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.



(Release ID: 1840841) Visitor Counter : 266