ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ತಕ್ಷ ಣದಿಂದಲೇ ಜಾರಿಗೆ ಬರುವಂತೆ ಬೆಲೆಗಳನ್ನು 15 ರೂ.ಗಳಷ್ಟು ಕಡಿಮೆ ಮಾಡುವಂತೆ ಪ್ರಮುಖ ಖಾದ್ಯ ತೈಲ ಸಂಘಗಳಿಗೆ ಕೇಂದ್ರ ನಿರ್ದೇಶನ


ಬೆಲೆ ಕಡಿತದ ಲಾಭವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸಬೇಕು: ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ

Posted On: 08 JUL 2022 3:53PM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು 2022ರ ಜುಲೈ 6ರಂದು ನಡೆದ ಸಭೆಯಲ್ಲಿ, ಖಾದ್ಯ ತೈಲಗಳ ಎಂಆರ್‌ಪಿಯನ್ನು ತಕ್ಷ ಣದಿಂದ ಜಾರಿಗೆ ಬರುವಂತೆ 15 ರೂ.ಗಳಷ್ಟು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಖಾದ್ಯ ತೈಲ ಸಂಘಗಳಿಗೆ ನಿರ್ದೇಶನ ನೀಡಿದೆ.

 

ತಯಾರಕರು ಮತ್ತು ಸಂಸ್ಕರಣಾಕಾರರು ವಿತರಕರಿಗೆ ನೀಡುವ ಬೆಲೆಯನ್ನು ತಕ್ಷಣವೇ ಕಡಿಮೆ ಮಾಡುವ ಅಗತ್ಯವಿದೆ ಎಂದು ಕೇಂದ್ರವು ಸಲಹೆ ನೀಡಿದೆ. ಇದರಿಂದ ಬೆಲೆ ಕುಸಿತವು ಯಾವುದೇ ರೀತಿಯಲ್ಲಿ ದುರ್ಬಲಗೊಳ್ಳುವುದಿಲ್ಲ. ಉತ್ಪಾದಕರು / ಸಂಸ್ಕರಣಾಕಾರರು ವಿತರಕರಿಗೆ ಬೆಲೆಯಲ್ಲಿ ಕಡಿತವನ್ನು ಮಾಡಿದಾಗಲೆಲ್ಲಾ, ಉದ್ಯಮವು ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬಹುದು ಎಂದು ಸಹ ಒತ್ತಿ ಹೇಳಲಾಗಿದೆ. ತಮ್ಮ ಬೆಲೆಗಳನ್ನು ಕಡಿಮೆ ಮಾಡದ ಮತ್ತು ಇತರ ಬ್ರಾಂಡ್‌ಗಳಿಗಿಂತ ಅವರ ಎಂಆರ್‌ಪಿ ಹೆಚ್ಚಿರುವ ಕೆಲವು ಕಂಪನಿಗಳಿಗೆ ತಮ್ಮ ಬೆಲೆಗಳನ್ನು ಕಡಿಮೆ ಮಾಡಲು ಸೂಚಿಸಲಾಗಿದೆ.

ಆಮದು ಮಾಡಿಕೊಂಡ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಬೆಲೆಗಳು ಕೆಳಮುಖ ಪ್ರವೃತ್ತಿಯಲ್ಲಿವೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು, ಇದು ಖಾದ್ಯ ತೈಲ ಸನ್ನಿವೇಶದಲ್ಲಿ ಬಹಳ ಸಕಾರಾತ್ಮಕ ಚಿತ್ರವಾಗಿದೆ ಮತ್ತು ಆದ್ದರಿಂದ, ದೇಶೀಯ ಖಾದ್ಯ ತೈಲ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳು ಸಹ ಸಮಾನವಾಗಿ ಕುಸಿಯುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಹಾಗೆಯೇ ಈ ಬೆಲೆ ಕುಸಿತವನ್ನು ಯಾವುದೇ ಹಿಂಜರಿಕೆಯಿಲ್ಲದೆ ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸಬೇಕು. ಬೆಲೆ ದತ್ತಾಂಶ ಸಂಗ್ರಹಣೆ, ಖಾದ್ಯ ತೈಲಗಳ ಮೇಲಿನ ನಿಯಂತ್ರಣ ಆದೇಶ ಮತ್ತು ಖಾದ್ಯ ತೈಲಗಳ ಪ್ಯಾಕೇಜಿಂಗ್‌ನಂತಹ ಇತರ ವಿಷಯಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು.

 2022ರ ಮೇ ನಲ್ಲಿ, ಇಲಾಖೆಯು ಪ್ರಮುಖ ಖಾದ್ಯ ತೈಲ ಸಂಘಗಳೊಂದಿಗೆ ಸಭೆ ಕರೆದಿತ್ತು ಮತ್ತು ಮೂಲಗಳ ಪ್ರಕಾರ, ಫಾರ್ಚೂನ್‌ ರಿಫೈನ್ಡ್‌ ಸೂರ್ಯಕಾಂತಿ ಎಣ್ಣೆ 1 ಲೀಟರ್‌ ಪ್ಯಾಕ್‌ನ ಎಂಆರ್‌ಪಿಯನ್ನು 220 ರೂ.ಗಳಿಂದ 210 ರೂ.ಗಳಿಗೆ ಮತ್ತು ಸೋಯಾಬೀನ್‌ (ಫಾರ್ಚೂನ್‌) ಮತ್ತು ಕಾಚಿ ಘನಿ ಆಯಿಲ್‌ 1 ಲೀಟರ್‌ ಪ್ಯಾಕ್‌ಅನ್ನು 205 ರೂ.ಗಳಿಂದ 195 ರೂ.ಗೆ ಇಳಿಸಲಾಗಿತ್ತು. ಕೇಂದ್ರ ಸರ್ಕಾರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದ ನಂತರ ತೈಲ ಬೆಲೆಗಳಲ್ಲಿಇಳಿಕೆಯಾಗಿದೆ. ಕಡಿಮೆ ಮಾಡಿದ ಸುಂಕದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ನಿರಂತರವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮಕ್ಕೆ ಸಲಹೆ ನೀಡಲಾಯಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ನಾಟಕೀಯ ಕುಸಿತಕ್ಕೆ ಸಾಕ್ಷಿಯಾಗುತ್ತಿವೆ, ಆದಾಗ್ಯೂ, ಬೆಲೆಗಳಲ್ಲಿನ ಕುಸಿತವು ಕ್ರಮೇಣವಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯು ಸ್ವಲ್ಪ ಭಿನ್ನವಾಗಿದೆ. ಭಾರತ ಸರ್ಕಾರ, ಮಧ್ಯಪ್ರವೇಶಿಸಿತು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಎಸ್‌ಇಎಐ, ಐವಿಪಿಎ ಮತ್ತು ಎಸ್‌ಓಪಿಎ ಸೇರಿದಂತೆ ಪ್ರಮುಖ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಜಾಗತಿಕ ಬೆಲೆಗಳ ಕುಸಿತದ ನಡುವೆ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಗಳಲ್ಲಿಕಡಿತದ ಬಗ್ಗೆ ಚರ್ಚಿಸಲು ಸಭೆ ಕರೆದಿದೆ.

ಕಳೆದ ಒಂದು ತಿಂಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ 300-450 ಡಾಲರ್‌ಗಳಷ್ಟು ಕುಸಿದಿವೆ, ಆದರೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿಬಿಂಬಿಸಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಚಿಲ್ಲರೆ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಉದ್ಯಮವು ಮಾಹಿತಿ ನೀಡಿದೆ.

ದೇಶದಲ್ಲಿಖಾದ್ಯ ತೈಲದ ಬೆಲೆಗಳು ಮತ್ತು ಲಭ್ಯತೆಯ ಪರಿಸ್ಥಿತಿಯನ್ನು ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಖಾದ್ಯ ತೈಲಗಳ ಮೇಲಿನ ಕಡಿಮೆ ಸುಂಕ ರಚನೆಯ ಲಾಭವನ್ನು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳಲ್ಲಿನ ನಿರಂತರ ಗಮನಾರ್ಹ ಕುಸಿತದ ಪ್ರಯೋಜನವನ್ನು ತಕ್ಷ ಣವೇ ಅಂತಿಮ ಗ್ರಾಹಕರಿಗೆ ತಪ್ಪದೆ ವರ್ಗಾಯಿಸುವುದು ಅತ್ಯಗತ್ಯವಾಗಿದೆ. ಗ್ರಾಹಕರು ತಮ್ಮ ಅಡುಗೆ ಮನೆ ಬಜೆಟ್‌ನಲ್ಲಿ ಸ್ವಲ್ಪ ಹೆಚ್ಚುವರಿ ಹಣವನ್ನು ಉಳಿಸಲು ಎದುರು ನೋಡಬಹುದು.

*******



(Release ID: 1840259) Visitor Counter : 154