ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಕರೆ

Posted On: 03 MAY 2022 4:37PM by PIB Bengaluru

ಆಟಗಳನ್ನು ಆಡಲು ವಾರಾಂತ್ಯ ಅಥವಾ ರಜಾದಿನಗಳಿಗಾಗಿ ಕಾಯದೆ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಾದರೂ ಕ್ರೀಡೆಗಳಲ್ಲಿ ತೊಡಗಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು. ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರ (ಸಿಎಸ್‌ಇ) ದಲ್ಲಿ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಸಚಿವರು, ಈ ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಬೇಕು ಎಂದು ಹೇಳಿದರು.

 
ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರ (ಸಿಎಸ್‌ಇ) ಬೆಂಗಳೂರಿನಲ್ಲಿ 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವ ದರ್ಜೆಯ ಸಮಗ್ರ ಕ್ರೀಡಾ ಸಂಕೀರ್ಣವಾಗಿದೆ. ಸಿಎಸ್‌ಇಯು ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಈಜು, ಸ್ಕ್ವಾಷ್, ಬಾಸ್ಕೆಟ್‌ಬಾಲ್ ಮತ್ತು ಶೂಟಿಂಗ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಸಿಎಸ್‌ಇ ಸ್ಪರ್ಧಾತ್ಮಕ ಮತ್ತು ತರಬೇತಿ ಕ್ರೀಡಾಪಟುಗಳು, ವೃತ್ತಿಪರ ತರಬೇತುದಾರರು, ಕ್ರೀಡಾ ಅಕಾಡೆಮಿಗಳು ಮತ್ತು ಮಹತ್ವಾಕಾಂಕ್ಷೆಯ ಯುವ ಪ್ರತಿಭೆಗಳನ್ನು ಅವರ ಆಯ್ಕೆಯ ಕ್ರೀಡೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ಭಾರತ ಕ್ರೀಡಾ ಪ್ರಾಧಿಕಾರವು ಸಿಎಸ್‌ಇಯನ್ನು ಬ್ಯಾಡ್ಮಿಂಟನ್ ಮತ್ತು ಈಜು ಎರಡರಲ್ಲೂ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವೆಂದು ಗುರುತಿಸಿದೆ. 


ಸಿಎಸ್‌ಇಯಲ್ಲಿನ ಅಕಾಡೆಮಿಗಳು ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಮತ್ತು ನಿರ್ಮಿಸಲು ತಳಮಟ್ಟದ ಕಾರ್ಯಕ್ರಮಗಳನ್ನು ಪೂರೈಸುತ್ತವೆ, ಹಾಗೆಯೇ ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸುವ ಗುರಿಯನ್ನು ಹೊಂದಿವೆ. ಲಕ್ಷ್ಯ ಸೇನ್, ಶ್ರೀಹರಿ ನಟರಾಜ್, ಅಶ್ವಿನಿ ಪೊನ್ನಪ್ಪ ಮತ್ತು ಅಪೂರ್ವಿ ಚಂದೇಲಿಯಂತಹ ಭಾರತದ ಕೆಲವು ಪ್ರತಿಭಾವಂತ ಮತ್ತು ಯಶಸ್ವಿ ಕ್ರೀಡಾಪಟುಗಳಿಗೆ ಸಿಎಸ್‌ಇ ಈಗಾಗಲೇ ಆತಿಥ್ಯ ವಹಿಸಿದೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ವಿಮಲ್ ಕುಮಾರ್ (ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಮುಖ್ಯ ತರಬೇತುದಾರ) ಮತ್ತು ನಿಹಾರ್ ಅಮೀನ್ (ಡಾಲ್ಫಿನ್ ಅಕ್ವಾಟಿಕ್ಸ್‌ನ ಮುಖ್ಯ ತರಬೇತುದಾರರ) ಸೇರಿದಂತೆ ಕೆಲವು ಅತ್ಯಂತ ನಿಪುಣ ತರಬೇತುದಾರರಿಂದ ನಡೆಸಲಾಗುತ್ತಿರುವ ದೇಶದ ಕೆಲವು ಅತ್ಯಂತ ಯಶಸ್ವಿ ಮತ್ತು ಪ್ರಸಿದ್ಧ ಕ್ರೀಡಾ ಅಕಾಡೆಮಿಗಳಿಗೆ ಸಿಎಸ್‌ಇ ನೆಲೆಯಾಗಿದೆ.


 ಕ್ರೀಡಾಪಟುವಿನ ಪ್ರಯಾಣದ ಪ್ರಮುಖ ಅಂಶವೆಂದರೆ ಅವರು ಜಾಗತಿಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ಕ್ರೀಡಾ ವಿಜ್ಞಾನಗಳ ಮೂಲಕ ಅಗತ್ಯವಿರುವ ಬೆಂಬಲ ಪಡೆಯುವುದಾಗಿದೆ. ಸಿಎಸ್‌ಇಯಲ್ಲಿ, ಅಭಿನವ್ ಬಿಂದ್ರಾ ಟಾರ್ಗೆಟಿಂಗ್ ಪರ್ಫಾರ್ಮೆನ್ಸ್ ಸೆಂಟರ್ (ಎಬಿಟಿಪಿ), ವೆಸೋಮಾ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಮತ್ತು ಸಮೀಕ್ಷಾ ಸೈಕಾಲಜಿ ಕ್ರೀಡಾಪಟುಗಳು ಮತ್ತು ಗ್ರಾಹಕರಿಗೆ ಫಿಸಿಯೋಥೆರಪಿ, ಗಾಯದ ಪುನರ್ವಸತಿ, ಜಲಚಿಕಿತ್ಸೆ, ಜೆರಿಯಾಟ್ರಿಕ್ ಕೇರ್, ಕ್ರೀಡಾ ಪೋಷಣೆ ಮತ್ತು ಕ್ರೀಡಾ ಮನೋವಿಜ್ಞಾನ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತವೆ.
 

 


ಎಬಿಟಿಪಿಯನ್ನು ಭಾರತದ ಏಕೈಕ ವ್ಯಕ್ತಿಗತ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಸ್ಥಾಪಿಸಿದ್ದಾರೆ ಮತ್ತು ಪಿಲೇಟ್‌ನ ಕೋಣೆ ಮತ್ತು ಕ್ರೈಯೊಥೆರಪಿ ಚೇಂಬರ್‌ಗೆ ಪ್ರವೇಶ ಸೇರಿದಂತೆ ಗಣ್ಯ ಕ್ರೀಡಾಪಟುಗಳು ಮತ್ತು ತರಬೇತಿ ಬಳಕೆದಾರರಿಗೆ ಮೌಲ್ಯಮಾಪನ ಮತ್ತು ತರಬೇತಿಗಾಗಿ ಕೇಂದ್ರವು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ.
ಕೇಂದ್ರವು ಕ್ರೀಡೆಗಳನ್ನು ಪ್ರೀತಿಸುವ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳಿಗೆ ಕ್ರೀಡಾ ಸದಸ್ಯತ್ವವನ್ನು ಸಹ ನೀಡುತ್ತದೆ. ಅವರು ತಮ್ಮ ಆಯ್ಕೆಯ ಕ್ರೀಡೆಯ ಜೊತೆಗೆ ಸಂಪೂರ್ಣ ಕ್ರಿಯಾತ್ಮಕ ಫಿಟ್‌ನೆಸ್ ಸೆಂಟರ್‌ಗೆ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಕ್ಯಾಂಪಸ್‌ನ ಹೃದಯಭಾಗದಲ್ಲಿರುವ ಎರಡು ಅಂತಸ್ತಿನ ಕ್ಲಬ್‌ಹೌಸ್ 'ದಿ ಗ್ರ್ಯಾಂಡ್‌ಸ್ಟ್ಯಾಂಡ್' ಗೆ ಪ್ರವೇಶವನ್ನು ಪಡೆಯುತ್ತಾರೆ.
 


ಕ್ರಿಕೆಟ್‌ ಆಟಗಾರ ಶ್ರೀ ರಾಹುಲ್ ದ್ರಾವಿಡ್, ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿವೇಕ್ ಕುಮಾರ್, ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಸಚಿವರ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

***



(Release ID: 1822367) Visitor Counter : 153