ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಮೋದಿಯವರು ಗುಜರಾತ್‌ನ ದಾಹೋದ್ ಮತ್ತು ಪಂಚಮಹಲ್‌ನಲ್ಲಿ 22000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು


"ಡಬಲ್ ಇಂಜಿನ್ ಸರ್ಕಾರವು ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ"

"ಪ್ರಗತಿಯ ಪಯಣದಲ್ಲಿ ನಮ್ಮ ತಾಯಂದಿರು ಮತ್ತು ಹೆಣ್ಣು ಮಕ್ಕಳು ಹಿಂದೆ ಉಳಿಯುವುದಿಲ್ಲ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು"

"ಲೋಕೋಮೋಟಿವ್ ತಯಾರಿಕೆಯಿಂದಾಗಿ, ದಾಹೋದ್ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಕೊಡುಗೆ ನೀಡುತ್ತದೆ"

Posted On: 20 APR 2022 5:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಹೋದ್‌ನಲ್ಲಿ ನಡೆದ ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಸುಮಾರು 22,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. 1400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಸುಮಾರು 840 ಕೋಟಿ ರೂಪಾಯಿ ವೆಚ್ಚದಲ್ಲಿ ನರ್ಮದಾ ನದಿಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾದ ದಾಹೋದ್ ಜಿಲ್ಲಾ ದಕ್ಷಿಣ ಪ್ರದೇಶದ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಅವರು ಉದ್ಘಾಟಿಸಿದರು. ಇದು ದಾಹೋದ್ ಜಿಲ್ಲೆ ಮತ್ತು ದೇವಗಢ್ ಬರಿಯಾ ನಗರದ ಸುಮಾರು 280 ಹಳ್ಳಿಗಳ ನೀರು ಸರಬರಾಜಿನ ಅಗತ್ಯಗಳನ್ನು ಪೂರೈಸುತ್ತದೆ. ಪ್ರಧಾನಮಂತ್ರಿಯವರು ಸುಮಾರು 335 ಕೋಟಿ ರೂಪಾಯಿ ಮೌಲ್ಯದ ದಾಹೋದ್ ಸ್ಮಾರ್ಟ್ ಸಿಟಿಯ ಐದು ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ (ಐಸಿಸಿಸಿ) ಕಟ್ಟಡ, ಪ್ರವಾಹ ನೀರಿನ ಒಳಚರಂಡಿ ವ್ಯವಸ್ಥೆ, ಒಳಚರಂಡಿ ಕಾಮಗಾರಿಗಳು, ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆ ಸೇರಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳ 10,000 ಬುಡಕಟ್ಟು ಜನರಿಗೆ 120 ಕೋಟಿ ರೂಪಾಯಿಗಳ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಧಾನಮಂತ್ರಿಯವರು 66 ಕೆವಿ ಘೋಡಿಯಾ ಸಬ್ ಸ್ಟೇಷನ್, ಪಂಚಾಯತ್ ಮನೆಗಳು, ಅಂಗನವಾಡಿಗಳು ಮತ್ತು ಇತರವುಗಳನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ದಾಹೋದ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ 9000 ಎಚ್‌ಪಿ ಎಲೆಕ್ಟ್ರಿಕ್ ರೈಲು ಇಂಜಿನ್‌ (ಲೋಕೋಮೋಟಿವ್‌) ಗಳ ತಯಾರಿಕೆಗೆ ಅಡಿಪಾಯ ಹಾಕಿದರು. ಯೋಜನೆಯ ವೆಚ್ಚ ಸುಮಾರು ರೂ. 20,000 ಕೋಟಿ. ಸ್ಟೀಮ್ ಇಂಜಿನ್‌ಗಳ ಆವರ್ತಕ ಕೂಲಂಕಷ ಪರೀಕ್ಷೆಗಾಗಿ 1926 ರಲ್ಲಿ ಸ್ಥಾಪಿಸಲಾದ ದಾಹೋದ್ ಕಾರ್ಯಾಗಾರವನ್ನು ಮೂಲಸೌಕರ್ಯ ಸುಧಾರಣೆಗಳೊಂದಿಗೆ ಎಲೆಕ್ಟ್ರಿಕ್ ರೈಲು ಇಂಜಿನ್‌ (ಲೋಕೋಮೋಟಿವ್) ಉತ್ಪಾದನಾ ಘಟಕವನ್ನಾಗಿ ನವೀಕರಿಸಲಾಗುತ್ತದೆ. ಇದು 10,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಪ್ರಧಾನಮಂತ್ರಿಯವರು ರಾಜ್ಯ ಸರ್ಕಾರದ ಸುಮಾರು 550 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಇದರಲ್ಲಿ ಸುಮಾರು ರೂ. 300 ಕೋಟಿಗಳ ನೀರು ಸರಬರಾಜು ಸಂಬಂಧಿತ ಯೋಜನೆಗಳು, ಸುಮಾರು ರೂ. 175 ಕೋಟಿಗಳ ದಾಹೋದ್ ಸ್ಮಾರ್ಟ್ ಸಿಟಿ ಯೋಜನೆಗಳು, ದುಧಿಮತಿ ನದಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು, ಘೋಡಿಯಾದಲ್ಲಿ ಜಿಇಟಿಸಿಒ ಸಬ್‌ಸ್ಟೇಷನ್, ಇತ್ಯಾದಿ ಸೇರಿವೆ. ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀಮತಿ ದರ್ಶನಾ ಜರ್ದೋಶ್, ಗುಜರಾತಿನ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಗುಜರಾತ್ ಸರ್ಕಾರದ ಅನೇಕ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯ ಬುಡಕಟ್ಟು ಸಮುದಾಯದೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸಿದರು ಮತ್ತು ರಾಷ್ಟ್ರದ ಸೇವೆಯನ್ನು ಕೈಗೊಳ್ಳಲು ಪ್ರೇರೇಪಿಸಿದಕ್ಕಾಗಿ ಅವರ ಆಶೀರ್ವಾದವನ್ನು ಸ್ಮರಿಸಿದರು. ಬುಡಕಟ್ಟು ಸಮುದಾಯಗಳ ಮತ್ತು ವಿಶೇಷವಾಗಿ ಮಹಿಳೆಯರ ಎಲ್ಲಾ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವು ಪರಿಹರಿಸುವ ಸನ್ನಿವೇಶಕ್ಕೆ ಅವರ ಬೆಂಬಲ ಮತ್ತು ಆಶೀರ್ವಾದವೇ ಕಾರಣವೆಂದರು. ಇಂದು ಉದ್ಘಾಟನೆಗೊಂಡಿರುವ ಯೋಜನೆಗಳಲ್ಲಿ ಒಂದು ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆ, ಇನ್ನೊಂದು ದಹೋದ್ ಸ್ಮಾರ್ಟ್ ಸಿಟಿ ಮಾಡುವ ಯೋಜನೆಯಾಗಿದೆ ಎಂದು ಹೇಳಿದರು. ಇದರಿಂದ ಈ ಭಾಗದ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಜೀವನ ನೆಮ್ಮದಿಯಾಗಲಿದೆ. 20 ಸಾವಿರ ಕೋಟಿ ಮೌಲ್ಯದ 9000 ಎಚ್‌ಪಿ ಎಲೆಕ್ಟ್ರಿಕ್ ರೈಲ್ವೇ ಇಂಜಿನ್‌ಗಳು ದಾಹೋದ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಬರಲಿರುವುದರಿಂದ ಇದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ದಾಹೋದ್ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು. ಅವರು ಬಹಳ ಹಿಂದೆಯೇ ಆ ಪ್ರದೇಶದಲ್ಲಿನ ಕೆಲಗಾರರ  ಕ್ವಾರ್ಟರ್ಸ್‌ಗೆ ಭೇಟಿ ನೀಡುತ್ತಿದ್ದಾಗ ದಾಹೋದ್‌ನ ರೈಲ್ವೆ ಪ್ರದೇಶವು ಹೇಗೆ ನಶಿಸುತ್ತಿತ್ತು ಎನ್ನುವುದನ್ನು ಅವರು ನೆನಪಿಸಿಕೊಂಡರು. ಈ ಭಾಗದ ರೈಲು ಮಾರ್ಗವನ್ನು ಪುನಶ್ಚೇತನಗೊಳಿಸುವ ಪ್ರತಿಜ್ಞೆ ಮಾಡಿದ್ದ ಅವರು, ಆ ಕನಸು ಇಂದು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಬೃಹತ್ ಹೂಡಿಕೆಯು ಅಲ್ಲಿನ ಕ್ಷೇತ್ರದ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು. ರೈಲ್ವೇ, ಎಲ್ಲಾ ಅಂಶಗಳಲ್ಲಿ ಮೇಲ್ದರ್ಜೆಗೆ ಏರುತ್ತಿದೆ ಮತ್ತು ಅಂತಹ ಸುಧಾರಿತ ಇಂಜಿನ್‌ಗಳ ತಯಾರಿಕೆಯು ಭಾರತದ ಸಾಮರ್ಥ್ಯವನ್ನು ಸೂಚಿಸುತ್ತದೆ. “ವಿದೇಶಗಳಲ್ಲಿ ವಿದ್ಯುತ್ ಇಂಜಿನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸುವಲ್ಲಿ ದಾಹೋದ್ ದೊಡ್ಡ ಪಾತ್ರವನ್ನು ವಹಿಸುತ್ತದೆ. 9 ಸಾವಿರ ಅಶ್ವಶಕ್ತಿಯ ಶಕ್ತಿಶಾಲಿ ಇಂಜೀನನ್ನು ತಯಾರಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ” ಎಂದು ಅವರು ಹೇಳಿದರು.
 
ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಾ  ಪ್ರಧಾನಮಂತ್ರಿಯವರು, ಪ್ರಗತಿಯ ಪಯಣದಲ್ಲಿ ನಮ್ಮ ತಾಯಂದಿರು ಮತ್ತು ಹೆಣ್ಣು ಮಕ್ಕಳು ಹಿಂದೆ ಸರಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಅದಕ್ಕಾಗಿಯೇ ಪ್ರಧಾನಮಂತ್ರಿಯವರು, ಮಹಿಳೆಯರ  ಸುಗಮ ಜೀವನ ಮತ್ತು ಸಬಲೀಕರಣವು ಸರ್ಕಾರದ ಎಲ್ಲಾ ಯೋಜನೆಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದರು. ನೀರಿನ ಕೊರತೆ ಮೊದಲು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಉದಾಹರಣೆ ನೀಡಿದರು, ಅದಕ್ಕಾಗಿಯೇ, ಪ್ರತಿ ಮನೆಗೆ ನಲ್ಲಿ ನೀರನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ 6 ಕೋಟಿ ಕುಟುಂಬಗಳು ನಲ್ಲಿ ನೀರಿನ ಸೌಲಭ್ಯ ಪಡೆದಿವೆ. ಗುಜರಾತ್‌ನಲ್ಲಿ 5 ಲಕ್ಷ ಬುಡಕಟ್ಟು ಕುಟುಂಬಗಳು ನಲ್ಲಿ ನೀರಿನ ಸೌಲಭ್ಯವನ್ನು ಪಡೆದಿವೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಚುರುಕುಗೊಳಿಸಲಾಗುತ್ತಿದೆ. ಸಾಂಕ್ರಾಮಿಕ ಮತ್ತು ಯುದ್ಧಗಳ ಕಷ್ಟದ ಅವಧಿಯಲ್ಲಿ, ಎಸ್‌ಟಿ, ಎಸ್‌ಸಿ, ಒಬಿಸಿ ಮತ್ತು ವಲಸೆ ಕಾರ್ಮಿಕರಂತಹ ದುರ್ಬಲ ಸಮುದಾಯಗಳ ಕಲ್ಯಾಣವನ್ನು ಸರ್ಕಾರ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ಯಾವುದೇ ಬಡ ಕುಟುಂಬ ಹಸಿವಿನಿಂದ ಇರಬಾರದು  ಎಂದು ಎರಡು ವರ್ಷಗಳಿಂದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಲಾಗುವುದನ್ನು ಖಾತ್ರಿಪಡಿಸಲಾಯಿತು. ಪ್ರತಿ ಬುಡಕಟ್ಟು ಮನೆಗಳು ಶೌಚಾಲಯ, ಗ್ಯಾಸ್ ಸಂಪರ್ಕ, ವಿದ್ಯುತ್, ನೀರಿನ ಸಂಪರ್ಕದೊಂದಿಗೆ ಪಕ್ಕಾ ಮನೆ ಹೊಂದಿರಬೇಕು ಎನ್ನುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದರು. ಗ್ರಾಮದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ, ಶಿಕ್ಷಣ, ಆಂಬ್ಯುಲೆನ್ಸ್ ಮತ್ತು ರಸ್ತೆಗಳು ಇರಬೇಕು. ಇದನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವಿರತವಾಗಿ ಶ್ರಮಿಸುತ್ತಿವೆ. ನೈಸರ್ಗಿಕ ಕೃಷಿಯಂತಹ ರಾಷ್ಟ್ರಸೇವೆಯ ಯೋಜನೆಗಳಿಗೆ ಫಲಾನುಭವಿಗಳು ಮುಂದಾಗುತ್ತಿರುವುದನ್ನು ಕಂಡು ಅಪಾರ ಸಂತಸ ವ್ಯಕ್ತಪಡಿಸಿದರು.  ಸಿಕಲ್ ಸೆಲ್ ಕಾಯಿಲೆಯ ಸಮಸ್ಯೆಯನ್ನು ಸಹ ಸರ್ಕಾರ ಪರಿಹರಿಸಿದೆ.

ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಸಂದರ್ಭದಲ್ಲಿ, ಅನೇಕ ನೈಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಗವಾನ್ ಬಿರ್ಸಾ ಮುಂಡಾ ಅವರಂತಹ ಪೂಜ್ಯ ಹೋರಾಟಗಾರರಿಗೆ ನೀಡಿದ ಮನ್ನಣೆಯ ಬಗ್ಗೆ ತಿಳಿಸಿದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಿರುವ ದಾಹೋದ್ ಹತ್ಯಾಕಾಂಡದ ಬಗ್ಗೆ ಹೊಸ ಪೀಳಿಗೆಗೆ ಈ ಘಟನೆಗಳ ಬಗ್ಗೆ ತಿಳಿಸುವಂತೆ ಅವರು ಸ್ಥಳೀಯ ಶಿಕ್ಷಕರಿಗೆ ತಿಳಿಸಿದರು. ಮೊದಲು ಒಂದೇ ಒಂದು ವಿಜ್ಞಾನ ಶಾಲೆ ಇಲ್ಲದ ದಿನಗಳಿಗೆ ಹೋಲಿಸಿದರೆ ಈ ಪ್ರದೇಶದ ಈಗಿನ ಪ್ರಗತಿಯ ಬಗ್ಗೆ ಮಾತನಾಡಿದರು. ಈಗ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಬರುತ್ತಿವೆ, ಯುವಕರು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಮತ್ತು ಏಕಲವ್ಯ ಮಾದರಿ ಶಾಲೆಗಳು ಸ್ಥಾಪನೆಯಾಗುತ್ತಿವೆ. ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಏರಿದೆ. 108 ಸೌಲಭ್ಯದಡಿ ಹಾವು ಕಡಿತಕ್ಕೆ ಚುಚ್ಚುಮದ್ದು ನೀಡಲಾಗುತ್ತಿದೆ  ಎನ್ನುವುದನ್ನು ಸ್ಮರಿಸಿದರು.
ಮುಕ್ತಾಯದಲ್ಲಿ, ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ 75 ಸರೋವರಗಳನ್ನು ನಿರ್ಮಿಸಲು ಅವರು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

 

*****



(Release ID: 1818668) Visitor Counter : 142