ಪ್ರಧಾನ ಮಂತ್ರಿಯವರ ಕಛೇರಿ

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 22 JAN 2022 3:18PM by PIB Bengaluru

ನಮಸ್ಕಾರ!

ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ದೇಶದ ವಿವಿಧ ರಾಜ್ಯಗಳ ಮಾನ್ಯ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳು, ಎಲ್ಲಾ ರಾಜ್ಯಗಳ ಸಚಿವರು, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು,  ಆಯುಕ್ತರು, ಇತರ ಗಣ್ಯರು , ಮತ್ತು ಮಹಿಳೆಯರೇ ಮತ್ತು ಮಹನೀಯರೇ.

ಜೀವನದಲ್ಲಿ ಸಾಮಾನ್ಯವಾಗಿ, ಜನರು ತಮ್ಮ ಆಕಾಂಕ್ಷೆಗಳಿಗಾಗಿ ಹಗಲಿರುಳು ಶ್ರಮಿಸುತ್ತಾರೆ ಮತ್ತು ಅವುಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವುದನ್ನು ನಾವು ನೋಡುತ್ತೇವೆ. ಆದರೆ ಇತರರ ಆಕಾಂಕ್ಷೆಗಳು ನಮ್ಮದೇ ಆದಾಗ, ಇತರರ ಕನಸುಗಳನ್ನು ನನಸಾಗಿಸುವುದು ನಮ್ಮ ಯಶಸ್ಸಿನ ಅಳತೆಗೋಲಾದಾಗ, ಆ ಕರ್ತವ್ಯದ ಹಾದಿಯು ಇತಿಹಾಸವನ್ನು ಸೃಷ್ಟಿಸುತ್ತದೆ.  ಇಂದು ದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಈ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನನಗೆ ನೆನಪಿದೆ, 2018 ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದಾಗ, ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿರುವ ಪ್ರದೇಶಗಳಲ್ಲಿ ಜನರ ಸೇವೆ ಮಾಡುವ ಅವಕಾಶವು ಸ್ವತಃ ಒಂದು ದೊಡ್ಡ ಭಾಗ್ಯ ಎಂದು ನಾನು ಹೇಳಿದ್ದೆ. ಇಂದು ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಅಭಿಯಾನದ ಅನೇಕ ಸಾಧನೆಗಳೊಂದಿಗೆ ನೀವು ಇಲ್ಲಿ ಉಪಸ್ಥಿತರಿರುವಿರಿ ಎನ್ನುವುದು ನನಗೆ ಸಂತೋಷವಾಗಿದೆ. ನಿಮ್ಮ ಯಶಸ್ಸಿಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನಿಮ್ಮ ಹೊಸ ಗುರಿಗಳಿಗಾಗಿ ನಿಮಗೆ ಶುಭ ಹಾರೈಸುತ್ತೇನೆ. ನಾನು ಮುಖ್ಯಮಂತ್ರಿಗಳು ಮತ್ತು ರಾಜ್ಯಗಳನ್ನು ವಿಶೇಷವಾಗಿ ಅನೇಕ ಜಿಲ್ಲೆಗಳಲ್ಲಿ ಭರವಸೆಯ ಮತ್ತು ಅತ್ಯಂತ ಬುದ್ಧಿಶಾಲಿ ಯುವ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ಇದೇ ಸರಿಯಾದ ತಂತ್ರವಾಗಿದೆ. ಅಂತೆಯೇ, ಆದ್ಯತೆಯ ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅವರ ಅಧಿಕಾರಾವಧಿಯನ್ನು ಸ್ಥಿರವಾಗಿರಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ಅಂದರೆ, ಮುಖ್ಯಮಂತ್ರಿಗಳು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಭರವಸೆಯ ನಾಯಕತ್ವ ಮತ್ತು ತಂಡಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಇಂದು ಶನಿವಾರ, ರಜೆಯ ಮೂಡ್ ಇದೆ, ಆದರೂ ಎಲ್ಲಾ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸಮಯವನ್ನು ವಿನಿಯೋಗಿಸಿ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿಕೊಂಡರು. ಇದು ರಾಜ್ಯಗಳ ಮುಖ್ಯಮಂತ್ರಿಗಳ ಹೃದಯದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮಹತ್ವವನ್ನು ತೋರಿಸುತ್ತದೆ. ಹಿಂದೆ ಉಳಿದವರನ್ನು ರಾಜ್ಯಕ್ಕೆ ಸರಿಸಮನಾಗಿ ತರಬೇಕು ಎನ್ನುವುದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿ.

ಸ್ನೇಹಿತರೇ,

ದೇಶದ ಹಲವು ಜಿಲ್ಲೆಗಳು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಬಜೆಟ್ನಲ್ಲಿ ಹೆಚ್ಚಳ, ನೀತಿಗಳ ರಚನೆ ಮತ್ತು ಅಂಕಿಅಂಶಗಳಲ್ಲಿ ಗೋಚರಿಸುವ ಆರ್ಥಿಕ ಅಭಿವೃದ್ಧಿಯ ಹೊರತಾಗಿಯೂ ಇತರರಿಗಿಂತ ಹಿಂದುಳಿದಿರುವುದನ್ನು ನಾವು ನೋಡಿದ್ದೇವೆ. ಕಾಲಾನಂತರದಲ್ಲಿ, ಈ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಟ್ಯಾಗ್ ಮಾಡಲಾಯಿತು. ಒಂದೆಡೆ ದೇಶದ ನೂರಾರು ಜಿಲ್ಲೆಗಳು ಪ್ರಗತಿಯತ್ತ ಸಾಗಿದರೆ ಮತ್ತೊಂದೆಡೆ ಹಿಂದುಳಿದ ಜಿಲ್ಲೆಗಳು ಹಿಂದೆ ಬೀಳುತ್ತಲೇ ಇದ್ದವು. ಈ ಜಿಲ್ಲೆಗಳು ಇಡೀ ದೇಶದ ಪ್ರಗತಿ ಅಂಕಿಅಂಶಗಳನ್ನು ಕೆಳಮಟ್ಟಕ್ಕಿಳಿಸುತ್ತಿದ್ದವು. ಒಟ್ಟಿನಲ್ಲಿ ಬದಲಾವಣೆ ಕಾಣದಿದ್ದಾಗ ಉತ್ತಮ ಪ್ರದರ್ಶನ ತೋರುತ್ತಿರುವ ಜಿಲ್ಲೆಗಳೂ ನಿರಾಸೆ ಅನುಭವಿಸುವಂತಾಗಿದ್ದು, ಹಿಂದುಳಿದ ಜಿಲ್ಲೆಗಳನ್ನು ಕೈ ಹಿಡಿಯಲು ದೇಶ ವಿಶೇಷ ಗಮನ ಹರಿಸಿದೆ. ಇಂದು ಅಭಿವೃದ್ಧಿಆಶಯದ ಜಿಲ್ಲೆಗಳು ದೇಶದ ಪ್ರಗತಿಯ ಅಡೆತಡೆಗಳನ್ನು ತೆಗೆದುಹಾಕುತ್ತಿವೆ. ನಿಮ್ಮ ಪ್ರಯತ್ನದಿಂದ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಜಡವಾಗುವ ಬದಲು ವೇಗವರ್ಧಕವಾಗುತ್ತಿವೆ. ಇಂದು ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಒಂದು ಕಾಲದಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿವೆ ಎಂದು ಪರಿಗಣಿಸಲ್ಪಟ್ಟ ಜಿಲ್ಲೆಗಳಿಗಿಂತ ಅನೇಕ ನಿಯತಾಂಕಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿವೆ. ಇಲ್ಲಿರುವ ಅನೇಕ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಅದ್ಭುತವಾದ  ಕೆಲಸವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಸ್ನೇಹಿತರೆ,

ಈ ಅಭಿವೃದ್ಧಿಯ ಅಭಿಯಾನದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ನಮ್ಮ ಜವಾಬ್ದಾರಿಗಳನ್ನು ಹಲವು ರೀತಿಯಲ್ಲಿ ವಿಸ್ತರಿಸಿವೆ ಮತ್ತು ಮರುವಿನ್ಯಾಸಗೊಳಿಸಿವೆ. ನಮ್ಮ ಸಂವಿಧಾನದ ಕಲ್ಪನೆ ಮತ್ತು ಸ್ಪೂರ್ತಿಯು ಅದಕ್ಕೆ ಗಣನೀಯ ಸ್ವರೂಪವನ್ನು ನೀಡುತ್ತದೆ. ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಆಡಳಿತದ ನಡುವಿನ ಟೀಮ್ ವರ್ಕ್ ಇದರ ಆಧಾರವಾಗಿದೆ.  ಫೆಡರಲ್ – ಸಂಯುಕ್ತ ರಾಜ್ಯಗಳ ರಚನೆಯಲ್ಲಿ ಸಹಕಾರದ ಬೆಳೆಯುತ್ತಿರುವ ಸಂಸ್ಕೃತಿ ಇದರ ವಿಶಿಷ್ಟ ಲಕ್ಷಣವಾಗಿದೆ. ಮತ್ತು ಮುಖ್ಯವಾಗಿ, ಜನರ ಭಾಗವಹಿಸುವಿಕೆಯು  ಹೆಚ್ಚಾದಂತೆ , ಮೇಲ್ವಿಚಾರಣೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು  ಉತ್ತಮ ಫಲಿತಾಂಶಗಳು ಇರುತ್ತವೆ!

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಆಡಳಿತ ಮತ್ತು ಸಾರ್ವಜನಿಕರ ನಡುವಿನ ನೇರ ಮತ್ತು ಭಾವನಾತ್ಮಕ ಸಂಪರ್ಕವು ಬಹಳ ಮುಖ್ಯವಾಗಿದೆ. ಒಂದು ರೀತಿಯಲ್ಲಿ ‘ಮೇಲಿನಿಂದ ಕೆಳಕ್ಕೆ’ ಮತ್ತು ‘ಕೆಳದಿಂದ ಮೇಲಕ್ಕೆ’ ಆಡಳಿತದ ಹರಿವು ಇದೆ.  ಮತ್ತು ಈ ಅಭಿಯಾನದ ಪ್ರಮುಖ ಅಂಶವೆಂದರೆ ತಂತ್ರಜ್ಞಾನ ಮತ್ತು ನಾವೀನ್ಯತೆ!  ನಾವು ಪ್ರಸ್ತುತಿಗಳಲ್ಲಿ ನೋಡಿದಂತೆ ಆಡಳಿತ ಮತ್ತು ವಿತರಣೆಯಲ್ಲಿ ತಂತ್ರಜ್ಞಾನ ಮತ್ತು ನವೀನ ಮಾರ್ಗಗಳನ್ನು ಬಳಸುತ್ತಿರುವ ಜಿಲ್ಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.  ಇಂದು, ದೇಶದ ವಿವಿಧ ರಾಜ್ಯಗಳ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅನೇಕ ಯಶಸ್ಸಿನ ಕಥೆಗಳು ನಮ್ಮ ಮುಂದೆ ಇವೆ. ಇಂದು ನಾನು ಐದು ಜಿಲ್ಲಾ ಅಧಿಕಾರಿಗಳೊಂದಿಗೆ ಮಾತ್ರ ಮಾತನಾಡಬಲ್ಲೆ. ಆದರೆ ಇಲ್ಲಿ ಕುಳಿತಿರುವ ನೂರಾರು ಅಧಿಕಾರಿಗಳು ಒಂದಲ್ಲ ಒಂದು ಯಶೋಗಾಥೆಯನ್ನು ಹೊಂದಿದ್ದಾರೆ. ಅಸ್ಸಾಂನ ದಾರಂಗ್, ಬಿಹಾರದ ಶೇಖ್ಪುರ ಮತ್ತು ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ನ ಉದಾಹರಣೆಗಳಿವೆ. ಕೆಲವೇ ಸಮಯದಲ್ಲಿ, ಈ ಜಿಲ್ಲೆಗಳು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಈಶಾನ್ಯದಲ್ಲಿರುವ ಅಸ್ಸಾಂನ ಗೋಲ್ಪಾರಾ ಮತ್ತು ಮಣಿಪುರದ ಚಂದೇಲ್ ಜಿಲ್ಲೆಗಳು ಕೇವಲ ನಾಲ್ಕು ವರ್ಷಗಳಲ್ಲಿ ಜಾನುವಾರುಗಳ ಲಸಿಕೆಯನ್ನು ಶೇಕಡಾ 20ರಿಂದ ಶೇಕಡಾ 85ಕ್ಕೆ ಹೆಚ್ಚಿಸಿವೆ. ಬಿಹಾರದ ಜಮುಯಿ ಮತ್ತು ಬೇಗುಸರಾಯ್ನಂತಹ ಜಿಲ್ಲೆಗಳು, ಜನಸಂಖ್ಯೆಯ ಶೇಕಡಾ 30ರಷ್ಟು ಜನರು ದಿನಕ್ಕೆ ಕೇವಲ ಒಂದು ಬಕೆಟ್ಫುಲ್ ಕುಡಿಯುವ ನೀರನ್ನು ಪಡೆಯುತ್ತಿದ್ದರು, ಈಗ ಶೇಕಡಾ 90 ರಷ್ಟು ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿದೆ.  ಎಷ್ಟೋ ಬಡವರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಜೀವನದಲ್ಲಿ ಆಹ್ಲಾದಕರ ಬದಲಾವಣೆಯನ್ನು ನಾವು ಊಹಿಸಬಹುದು. ಮತ್ತು ಇವು ಕೇವಲ ಅಂಕಿಅಂಶಗಳಲ್ಲ ಎಂದು ನಾನು ಹೇಳುತ್ತೇನೆ.  ಪ್ರತಿ ಅಂಕಿಅಂಶಗಳೊಂದಿಗೆ ಅನೇಕ ಜೀವನಗಳು ಸಂಬಂಧ ಹೊಂದಿವೆ.  ಈ ಅಂಕಿ-ಅಂಶಗಳ ಹಿಂದೆ ಅನೇಕ ಮಾನವ ಗಂಟೆಗಳು, ಮಾನವಶಕ್ತಿ, ದೃಢತೆ ಮತ್ತು ನಿಮ್ಮಂತಹ ಭರವಸೆಯ ಸ್ನೇಹಿತರ ಶ್ರಮವಿದೆ. ಈ ಬದಲಾವಣೆ ಮತ್ತು ಈ ಅನುಭವಗಳು ನಿಮ್ಮ ಸಂಪೂರ್ಣ ಜೀವನದ ಬಂಡವಾಳ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ದೇಶವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಯಶಸ್ಸನ್ನು ಪಡೆಯುವ ಪ್ರಮುಖ ಕಾರಣಗಳಲ್ಲಿ ಒಮ್ಮುಖವು ಒಂದು. ಇದೀಗ ಕರ್ನಾಟಕದ ನಮ್ಮ ಅಧಿಕಾರಿ ಅವರು ಕೂಪಗಳಿಂದ ಹೇಗೆ ಹೊರಬಂದರು ಎಂಬುದನ್ನು ವಿವರಿಸಿದರು. ಎಲ್ಲಾ ಸಂಪನ್ಮೂಲಗಳು ಒಂದೇ, ಸರ್ಕಾರಿ ಯಂತ್ರ ಒಂದೇ, ಅಧಿಕಾರಿಗಳು ಒಂದೇ ಆದರೆ ಫಲಿತಾಂಶಗಳು ವಿಭಿನ್ನವಾಗಿವೆ. ಯಾವುದೇ ಜಿಲ್ಲೆಯನ್ನು ಒಂದು ಘಟಕವಾಗಿ ನೋಡಿದಾಗ ಮತ್ತು ಜಿಲ್ಲೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ, ಅಧಿಕಾರಿಗಳು ತಮ್ಮ ಜವಾಬ್ದಾರಿಗಳ ಅಗಾಧತೆಯನ್ನು ಅನುಭವಿಸುತ್ತಾರೆ. ಅಧಿಕಾರಿಗಳು ತಮ್ಮ ಪಾತ್ರದ ಮಹತ್ವವನ್ನು ಅರಿತುಕೊಳ್ಳುತ್ತಾರೆ ಮತ್ತು ಜೀವನದಲ್ಲಿ ಒಂದು ಉದ್ದೇಶವನ್ನು ಅನುಭವಿಸುತ್ತಾರೆ. ಅಧಿಕಾರಿಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದವರು ತಮ್ಮ ಜಿಲ್ಲೆಯ ಜನರ ಜೀವನದಲ್ಲಿ ಫಲಿತಾಂಶಗಳು ಮತ್ತು ಬದಲಾವಣೆಗಳನ್ನು ನೋಡಿದಾಗ ತೃಪ್ತಿಯನ್ನು ಪಡೆಯುತ್ತಾರೆ. ಮತ್ತು ಈ ತೃಪ್ತಿ ಕಲ್ಪನೆಗೆ ಮೀರಿದ್ದು, ಪದಗಳನ್ನು ಮೀರಿದ್ದಾಗಿದೆ. ಇದನ್ನು ನಾನೇ ನೋಡಿದ್ದೇನೆ. ಕೊರೊನಾ ಬರುವ ಮುನ್ನ ಯಾವುದೇ ರಾಜ್ಯಕ್ಕೆ ಹೋದಾಗ ಆಕಾಂಕ್ಷಿ ಜಿಲ್ಲೆಗಳ ಜನರು ಹಾಗೂ ಅಧಿಕಾರಿಗಳ ಜತೆ ಮುಕ್ತವಾಗಿ ಮಾತನಾಡಬೇಕೆಂಬ ನಿಯಮ ರೂಪಿಸಿದ್ದೆ. ಅವರೊಂದಿಗಿನ ನನ್ನ ಸಂವಾದದ ಸಮಯದಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೆಲಸ ಮಾಡುವವರು ಸಂಪೂರ್ಣವಾಗಿ ವಿಭಿನ್ನವಾದ ತೃಪ್ತಿಯನ್ನು ಹೊಂದಿದ್ದಾರೆನ್ನುವುದನ್ನು ನಾನು ಕಂಡುಕೊಂಡೆ. ಸರ್ಕಾರದ ಪ್ರಯತ್ನವು ಶಾಶ್ವತ ಗುರಿಯಾದಾಗ, ಸರ್ಕಾರಿ ಯಂತ್ರವು ಶಾಶ್ವತ ಘಟಕವಾದಾಗ ಮತ್ತು ತಂಡದ ಮನೋಭಾವ ಮತ್ತು ತಂಡದ ಸಂಸ್ಕೃತಿ ಇದ್ದಾಗ, ಫಲಿತಾಂಶಗಳನ್ನು ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನೋಡುತ್ತೇವೆ. ಒಬ್ಬರನ್ನೊಬ್ಬರು ಬೆಂಬಲಿಸುವಾಗ, ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳುವಾಗ, ಪರಸ್ಪರ ಕಲಿಯುವಾಗ ಮತ್ತು ಪರಸ್ಪರ ಕಲಿಸುವಾಗ ಬೆಳೆಯುವ ಕೆಲಸದ ಶೈಲಿಯು ಉತ್ತಮ ಆಡಳಿತದ ದೊಡ್ಡ ಆಸ್ತಿಯಾಗಿರುತ್ತದೆ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮಾಡಿದ ಕೆಲಸವು ಪ್ರಪಂಚದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಅಧ್ಯಯನದ ವಿಷಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಪ್ರತಿಯೊಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನ್ ಧನ್ ಖಾತೆಗಳಲ್ಲಿ 4 ರಿಂದ 5 ಪಟ್ಟು ಹೆಚ್ಚಳವಾಗಿದೆ. ಬಹುತೇಕ ಎಲ್ಲ ಕುಟುಂಬಗಳು ಶೌಚಾಲಯವನ್ನು ಹೊಂದಿದ್ದು, ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ತಲುಪಿದೆ. ಬಡವರ ಮನೆಗಳಿಗೆ ವಿದ್ಯುತ್ ತಲುಪಿದೆಯಲ್ಲ, ಅದು ಜನರಿಗೆ ಶಕ್ತಿ ತುಂಬಿದೆ ಮತ್ತು ದೇಶದ ವ್ಯವಸ್ಥೆಯಲ್ಲಿ ಈ ಜನರ ನಂಬಿಕೆಯೂ ಬೆಳೆದಿದೆ.

ಸ್ನೇಹಿತರೇ,

ಈ ಪ್ರಯತ್ನಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ಒಂದು ಜಿಲ್ಲೆ ಇನ್ನೊಂದು ಜಿಲ್ಲೆಯ ಯಶಸ್ಸಿನಿಂದ ಪಾಠ ಕಲಿಯಬೇಕು ಮತ್ತು ಇನ್ನೊಂದು ಜಿಲ್ಲೆಯ ಸವಾಲುಗಳನ್ನು ಮೌಲ್ಯಮಾಪನ ಮಾಡಬೇಕು. ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಗರ್ಭಿಣಿಯರ ಮೊದಲ ತ್ರೈಮಾಸಿಕ-ನೋಂದಣಿ ನಾಲ್ಕು ವರ್ಷಗಳಲ್ಲಿ 37 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗುತ್ತದೆ? ಅರುಣಾಚಲದ ನಮಸೈ, ಹರಿಯಾಣದ ಮೇವಾತ್ ಮತ್ತು ತ್ರಿಪುರಾದ ಧಲೈನಲ್ಲಿ ಸಾಂಸ್ಥಿಕ ವಿತರಣೆಯು 40-45 ಪ್ರತಿಶತದಿಂದ 90 ಪ್ರತಿಶತಕ್ಕೆ ಹೇಗೆ ಹೆಚ್ಚಾಯಿತು? ಕರ್ನಾಟಕದ ರಾಯಚೂರಿನಲ್ಲಿ ನಿಯಮಿತವಾಗಿ ಹೆಚ್ಚುವರಿ ಪೌಷ್ಟಿಕಾಂಶವನ್ನು ಪಡೆಯುವ ಗರ್ಭಿಣಿಯರ ಸಂಖ್ಯೆ 70 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗಿದೆ? ಹಿಮಾಚಲ ಪ್ರದೇಶದ ಚಂಬಾದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ವ್ಯಾಪ್ತಿಯು 67 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗುತ್ತದೆ? ಅಥವಾ ಛತ್ತೀಸ್ಗಢದ ಸುಕ್ಮಾದಲ್ಲಿ ಶೇ.50ಕ್ಕಿಂತ ಕಡಿಮೆ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಈಗ ಶೇ.90ರಷ್ಟು ಲಸಿಕೆ ಹಾಕಲಾಗುತ್ತಿದೆ. ಈ ಎಲ್ಲಾ ಯಶೋಗಾಥೆಗಳಲ್ಲಿ ಇಡೀ ದೇಶದ ಆಡಳಿತಕ್ಕೆ ಕಲಿಯಲು ಹೊಸ ವಿಷಯಗಳಿವೆ, ಹೊಸ ಪಾಠಗಳೂ ಇವೆ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಾಸಿಸುವ ಜನರು ಮುಂದೆ ಸಾಗಲು ಎಷ್ಟು ಹಂಬಲಿಸುತ್ತಾರೆ, ಎಷ್ಟು ಆಕಾಂಕ್ಷೆ ಇದೆ ಎನ್ನುವುದನ್ನು ನೀವು ನೋಡಿದ್ದೀರಿ. ಈ ಜಿಲ್ಲೆಗಳ ಜನರು ತಮ್ಮ ಜೀವನದ ಬಹುಕಾಲವನ್ನು ಅಭಾವದಲ್ಲಿ, ಅನೇಕ ಕಷ್ಟಗಳಲ್ಲಿ ಕಳೆದಿದ್ದಾರೆ. ಪ್ರತಿ ಸಣ್ಣ ವಿಷಯಕ್ಕೂ ಅವರು ಕಷ್ಟಪಡಬೇಕಾಗುತ್ತದೆ. ಅವರು ಎಷ್ಟು ಕತ್ತಲೆಯನ್ನು ತಮ್ಮ ಜೀವನದಲ್ಲಿ ನೋಡಿದ್ದಾರೆಂದರೆ, ಅವರು ಈ ಕತ್ತಲೆಯಿಂದ ಹೊರಬರಲು ಹಾತೊರೆಯುತ್ತಿದ್ದಾರೆ. ಅದಕ್ಕಾಗಿಯೇ ಆ ಜನರು ಗಂಡಾಂತರವನ್ನು ಎದುರಿಸಲು ಸಿದ್ಧರಾಗಿದ್ದಾರೆ ಮತ್ತು ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾರೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಾಸಿಸುವ ಜನರ ಶಕ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು. ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಯೋಜನೆಗಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ನಾನು ನಂಬುತ್ತೇನೆ. ಈ ಭಾಗಗಳ ಜನರೂ ಮುಂದೆ ಬಂದು ನಿಮ್ಮೊಂದಿಗೆ ಕೆಲಸ ಮಾಡುತ್ತಾರೆ. ಅಭಿವೃದ್ಧಿಯ ಹಂಬಲವು ಒಟ್ಟಾಗಿ ಸಾಗಲು ದಾರಿಯಾಗುತ್ತದೆ. ಮತ್ತು ಜನರು ಮತ್ತು ಆಡಳಿತ ನಿರ್ಧರಿಸಿದಾಗ, ಯಾರಾದರೂ ಹೇಗೆ ಹಿಂದುಳಿದಿರಬಹುದು. ಆಗ ಮುಂದಕ್ಕೆ ಹೋಗುವುದೊಂದೇ ದಾರಿ. ಮತ್ತು ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜನರು ಅದೇ ರೀತಿ ಮಾಡುತ್ತಿದ್ದಾರೆ.

ಸ್ನೇಹಿತರೇ,

ಕಳೆದ ವರ್ಷ ಅಕ್ಟೋಬರ್ನಲ್ಲಿ ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 20 ವರ್ಷಗಳನ್ನು ಪೂರೈಸಿದೆ. ಅದಕ್ಕೂ ಮೊದಲು, ನಾನು ದಶಕಗಳಿಂದ ದೇಶದ ವಿವಿಧ ಭಾಗಗಳಲ್ಲಿ ಆಡಳಿತದ ಕಾರ್ಯಶೈಲಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತು ಪರಿಶೀಲಿಸಿದ್ದೇನೆ. ನಿರ್ಧಾರ ಪ್ರಕ್ರಿಯೆ ಮತ್ತು ಅನುಷ್ಠಾನದಲ್ಲಿನ ಸಿಲೋಗಳು    ಅತಿಯಾದ ನಷ್ಟಗಳಿಗೆ ಕಾರಣವಾಗುತ್ತವೆ ಎನ್ನುವುದು ನನ್ನ ಅನುಭವ. ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಅನುಷ್ಠಾನದಲ್ಲಿ ಸಿಲೋಗಳನ್ನು ತೊಡೆದುಹಾಕಿದಾಗ ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಆಗುವುದು ಎನ್ನುವುದನ್ನು  ಸಾಬೀತುಪಡಿಸಿದೆ. ಸಿಲೋ ಪದ್ದತಿ   ಕೊನೆಗೊಂಡಾಗ, ಒಂದು ಪ್ಲಸ್ ಒಂದು ಎರಡು ಆಗುವುದಿಲ್ಲ  ಬದಲಾಗಿ ಹನ್ನೊಂದು ಆಗುತ್ತದೆ

ಈ ಸಾಮೂಹಿಕ ಶಕ್ತಿ ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸ್ಪಷ್ಟವಾಗಿದೆ. ನಾವು ಉತ್ತಮ ಆಡಳಿತದ ಮೂಲ ತತ್ವಗಳನ್ನು ಅನುಸರಿಸಿದರೆ, ಕಡಿಮೆ ಸಂಪನ್ಮೂಲಗಳಿಂದಲೂ ದೊಡ್ಡ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ನಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸಾಬೀತುಪಡಿಸಿವೆ. ಮತ್ತು ಈ ಅಭಿಯಾನದಲ್ಲಿನ ವಿಧಾನವು ಸ್ವತಃ ಅಭೂತಪೂರ್ವವಾಗಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ದೇಶದ ಮೊದಲ ವಿಧಾನವೆಂದರೆ ಈ ಜಿಲ್ಲೆಗಳ ಮೂಲಭೂತ ಸಮಸ್ಯೆಗಳನ್ನು ಗುರುತಿಸುವುದು. ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಕೇಳುವುದು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅನುಭವಗಳ ಆಧಾರದ ಮೇಲೆ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಸುಧಾರಿಸುವುದು ನಮ್ಮ ಎರಡನೆಯ ವಿಧಾನವಾಗಿದೆ. ನಾವು ಕೆಲಸದ ಸಂಸ್ಕೃತಿಯನ್ನು ಪ್ರಾರಂಭಿಸಿದ್ದೇವೆ, ಇದರಲ್ಲಿ ಅಳೆಯಬಹುದಾದ ಸೂಚಕಗಳ ಆಯ್ಕೆ ಇತ್ತು, ಇದರಲ್ಲಿ ಜಿಲ್ಲೆಯ ಪ್ರಸ್ತುತ ಸ್ಥಿತಿಯನ್ನು ರಾಜ್ಯ ಮತ್ತು ದೇಶದ ಅತ್ಯುತ್ತಮ ಸ್ಥಿತಿಯೊಂದಿಗೆ ಹೋಲಿಸಲಾಗುತ್ತದೆ, ಇದರಲ್ಲಿ ಪ್ರಗತಿಯ ನೈಜ-ಸಮಯದ ಮೇಲ್ವಿಚಾರಣೆ ಇತ್ತು. ಇತರ ಜಿಲ್ಲೆಗಳೊಂದಿಗೆ ಆರೋಗ್ಯಕರ ಸ್ಪರ್ಧೆ ಇತ್ತು ಮತ್ತು ಉತ್ತಮ ಅಭ್ಯಾಸಗಳನ್ನು ಪುನರಾವರ್ತಿಸಲು ಉತ್ಸಾಹ ಮತ್ತು ಪ್ರಯತ್ನಗಳು ಇದ್ದವು. ಈ ಅಭಿಯಾನದ ಸಮಯದಲ್ಲಿ ಮೂರನೇ ವಿಧಾನವೆಂದರೆ ಆಡಳಿತ ಸುಧಾರಣೆಗಳನ್ನು ಕೈಗೊಳ್ಳುವುದು, ಇದು ಜಿಲ್ಲೆಗಳಲ್ಲಿ ಪರಿಣಾಮಕಾರಿ ತಂಡವನ್ನು ನಿರ್ಮಿಸಲು ಸಹಾಯ ಮಾಡಿತು. ನೀತಿ ಆಯೋಗ ತನ್ನ ಪ್ರಸ್ತುತಿಯಲ್ಲಿ ಹೇಳಿದಂತೆ ಅಧಿಕಾರಿಗಳ ಸ್ಥಿರ ಅಧಿಕಾರಾವಧಿಯು ನೀತಿಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಬಹಳಷ್ಟು ಸಹಾಯ ಮಾಡಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ನೀವೆಲ್ಲರೂ ಈ ಅನುಭವಗಳನ್ನು ಖುದ್ದು ಅನುಭವಿಸಿದ್ದೀರಿ. ಉತ್ತಮ ಆಡಳಿತದ ಪರಿಣಾಮವನ್ನು ಜನರು ಅರಿತುಕೊಳ್ಳಲು ನಾನು ಈ ವಿಷಯಗಳನ್ನು ಪುನರುಚ್ಚರಿಸಿದೆ. ನಾವು ಮೂಲಭೂತ ಅಂಶಗಳಿಗೆ ಒತ್ತು ನೀಡುವ ಮಂತ್ರವನ್ನು ಅನುಸರಿಸಿದಾಗ, ಅದರ ಫಲಿತಾಂಶಗಳು ಸಹ ಲಭ್ಯವಿವೆ. ಮತ್ತು ಇಂದು ನಾನು ಇದಕ್ಕೆ ಇನ್ನೊಂದು ವಿಷಯವನ್ನು ಸೇರಿಸಲು ಬಯಸುತ್ತೇನೆ. ಕ್ಷೇತ್ರ ಭೇಟಿಗಳು, ತಪಾಸಣೆಗಳು ಮತ್ತು ರಾತ್ರಿ ನಿಲುಗಡೆಗಳಿಗಾಗಿ ವಿವರವಾದ ಮಾರ್ಗಸೂಚಿಗಳನ್ನು ಮಾಡಲು ನೀವು ಪ್ರಯತ್ನಗಳನ್ನು ಮಾಡಬೇಕು; ಒಂದು ಮಾದರಿಯನ್ನು ಅಭಿವೃದ್ಧಿಪಡಿಸಬೇಕು. ಇದು ನಿಮಗೆ ಎಷ್ಟು ಪ್ರಯೋಜನವನ್ನು ನೀಡುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳುವಿರಿ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸಾಧಿಸಿದ ಯಶಸ್ಸಿನ ದೃಷ್ಟಿಯಿಂದ, ದೇಶವು ಈಗ ತನ್ನ ಗುರಿಗಳನ್ನು ಮತ್ತಷ್ಟು ವಿಸ್ತರಿಸಿದೆ. ಸ್ವಾತಂತ್ರ್ಯದ ಈ ಪುಣ್ಯದ ಅವಧಿಯಲ್ಲಿ, ದೇಶದ ಗುರಿಯು 100% ಸೇವೆಗಳು ಮತ್ತು ಸೌಲಭ್ಯಗಳ ಶುದ್ಧತ್ವವಾಗಿದೆ. ಅಂದರೆ, ನಾವು ಇಲ್ಲಿಯವರೆಗೆ ಸಾಧಿಸಿದ್ದಕ್ಕಿಂತ ಬಹಳ ದೂರ ಸಾಗಬೇಕಾಗಿದೆ. ಮತ್ತು ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕು. ನಮ್ಮ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ರಸ್ತೆಯನ್ನು ಹೇಗೆ ಖಚಿತಪಡಿಸಿಕೊಳ್ಳುವುದು, ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಹೇಗೆ ತಲುಪಿಸುವುದು, ಬ್ಯಾಂಕ್ ಖಾತೆಗಳನ್ನು ಹೇಗೆ ವ್ಯವಸ್ಥೆ ಮಾಡುವುದು, ಯಾವುದೇ ಬಡ ಕುಟುಂಬವು ಉಜ್ವಲ ಅನಿಲ ಸಂಪರ್ಕದಿಂದ ವಂಚಿತವಾಗಬಾರದು ಎಂದು ಪ್ರತಿ ಜಿಲ್ಲೆಗೆ ಕಾಲಮಿತಿಯ ಗುರಿ ಇರಬೇಕು. ಮತ್ತು ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಸರ್ಕಾರದ ವಿಮೆ, ಪಿಂಚಣಿ ಮತ್ತು ಮನೆ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು. ಅದೇ ರೀತಿ ಮುಂದಿನ ಎರಡು ವರ್ಷಗಳಿಗೆ ಪ್ರತಿ ಜಿಲ್ಲೆ ತನ್ನದೇ ಆದ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬಹುದಾದ ಮತ್ತು ಜನ ಸಾಮಾನ್ಯನ  ಜೀವನ ಸೌಕರ್ಯವನ್ನು ಸುಧಾರಿಸುವಂತಹ ಯಾವುದೇ 10 ಕಾರ್ಯಗಳನ್ನು ನೀವು ನಿರ್ಧರಿಸಬಹುದು. ಅಂತೆಯೇ, ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಯಾವುದೇ ಐದು ಕಾರ್ಯಗಳನ್ನು ನಿರ್ಧರಿಸಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಿರಿ. ಇದು ಈ ಐತಿಹಾಸಿಕ ಅವಧಿಯಲ್ಲಿ ನಿಮ್ಮ, ನಿಮ್ಮ ಜಿಲ್ಲೆಯ ಮತ್ತು ನಿಮ್ಮ ಜಿಲ್ಲೆಯ ಜನರ ಐತಿಹಾಸಿಕ ಸಾಧನೆಗಳಾಗಬೇಕು. ದೇಶವು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಮುನ್ನಡೆಸಲು ಪ್ರಯತ್ನಿಸುತ್ತಿರುವಂತೆಯೇ, ನೀವು ಜಿಲ್ಲೆಯ ಬ್ಲಾಕ್ ಮಟ್ಟದಲ್ಲಿ ನಿಮ್ಮ ಆದ್ಯತೆಗಳು ಮತ್ತು ಗುರಿಗಳನ್ನು ಹೊಂದಿಸಬಹುದು. ನೀವು ಜವಾಬ್ದಾರಿಯನ್ನು ಪಡೆದಿರುವ ಜಿಲ್ಲೆಯ ಅರ್ಹತೆಗಳನ್ನು ಸಹ ನೀವು ಗುರುತಿಸಬೇಕು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸಬೇಕು. ಈ ಗುಣಗಳಲ್ಲಿ ಜಿಲ್ಲೆಯ ಸಾಮರ್ಥ್ಯ ಅಡಗಿದೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಎನ್ನುವುದು ಜಿಲ್ಲೆಯ ಅರ್ಹತೆಯ ಮೇಲೆ ನಿಂತಿರುವುದನ್ನು ನೀವು ನೋಡಿದ್ದೀರಿ. ನಿಮ್ಮ ಜಿಲ್ಲೆಗೆ ರಾಷ್ಟ್ರೀಯ ಮತ್ತು ಜಾಗತಿಕ ಗುರುತನ್ನು ಒದಗಿಸುವುದು ನಿಮ್ಮ ಧ್ಯೇಯವಾಗಿರಬೇಕು. ಅಂದರೆ, ನಿಮ್ಮ ಜಿಲ್ಲೆಗಳಿಗೂ 'ವೋಕಲ್ ಫಾರ್ ಲೋಕಲ್' ಎಂಬ ಮಂತ್ರವನ್ನು ಅನ್ವಯಿಸಿ. ನೀವು ಜಿಲ್ಲೆಯ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಗುರುತಿಸಬೇಕು ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸಬೇಕು. ಡಿಜಿಟಲ್ ಇಂಡಿಯಾ ರೂಪದಲ್ಲಿ ದೇಶವು ಮೂಕ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಯಾವುದೇ ಜಿಲ್ಲೆ ಹಿಂದೆ ಬೀಳಬಾರದು. ಡಿಜಿಟಲ್ ಮೂಲಸೌಕರ್ಯವು ನಮ್ಮ ದೇಶದ ಪ್ರತಿ ಹಳ್ಳಿಯನ್ನು ತಲುಪುವುದು ಮತ್ತು ಸೇವೆಗಳು ಮತ್ತು ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸಾಧನವಾಗುವುದು ಬಹಳ ಮುಖ್ಯ.  ನೀತಿ ಆಯೋಗದ ವರದಿಯಲ್ಲಿ ನಿರೀಕ್ಷೆಗಿಂತ ನಿಧಾನವಾಗಿ ಪ್ರಗತಿ ಸಾಧಿಸಿರುವ ಜಿಲ್ಲೆಗಳ ಉಸ್ತುವಾರಿ DM ಗಳು ಮತ್ತು ಕೇಂದ್ರ ಅಧಿಕಾರಿಗಳು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಡುವೆ ನಿಯಮಿತ ಸಂವಹನ ನಡೆಯುವಂತೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ನಾನು ನೀತಿ ಆಯೋಗಕ್ಕೆ ಹೇಳುತ್ತೇನೆ ಇದರಿಂದ ಪ್ರತಿ ಜಿಲ್ಲೆಗಳು ಪರಸ್ಪರ ಉತ್ತಮ ಅಭ್ಯಾಸಗಳನ್ನು ಜಾರಿಗೆ ತರಬಹುದು. ಕೇಂದ್ರದ ಎಲ್ಲಾ ಸಚಿವಾಲಯಗಳು ಸಹ ವಿವಿಧ ಜಿಲ್ಲೆಗಳಲ್ಲಿ ಬರುವ ಎಲ್ಲಾ ಸವಾಲುಗಳನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ʼಪ್ರಧಾನಮಂತ್ರಿ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ ʼ ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ಅವರು ನೋಡಬೇಕು.

ಸ್ನೇಹಿತರೇ,

ಇಂದಿನ ಕಾರ್ಯಕ್ರಮದಲ್ಲಿ, ನಾನು ನಿಮ್ಮ ಮುಂದೆ ಇನ್ನೊಂದು ಸವಾಲನ್ನು ಇಡಲು ಬಯಸುತ್ತೇನೆ; ನಾನು ಹೊಸ ಗುರಿಯನ್ನು ನೀಡಲು ಬಯಸುತ್ತೇನೆ. ದೇಶದ 22 ರಾಜ್ಯಗಳ 142 ಜಿಲ್ಲೆಗಳಿಗೆ ಈ ಸವಾಲು ಎದುರಾಗಿದೆ. ಅಭಿವೃದ್ಧಿಯ ಓಟದಲ್ಲಿ ಈ ಜಿಲ್ಲೆಗಳು ಹಿಂದುಳಿದಿಲ್ಲ. ಇವು ಮಹತ್ವಾಕಾಂಕ್ಷೆಯ ಜಿಲ್ಲೆಗಳ ವರ್ಗದಲ್ಲಿಲ್ಲ. ಅವುಗಳು ತುಂಬಾ ಪ್ರಗತಿ ಸಾಧಿಸಿವೆ. ಆದರೆ ಹಲವು ಪ್ಯಾರಾಮೀಟರ್ಗಳಲ್ಲಿ  (ನಿಯತಾಂಕ) ಮುಂದಿದ್ದರೂ ಒಂದೋ ಎರಡೋ ಪ್ಯಾರಾಮೀಟರ್ಗಳಲ್ಲಿ ಹಿಂದುಳಿದಿದ್ದಾರೆ. ಆದ್ದರಿಂದ, ಅಂತಹ ನಿಯತಾಂಕಗಳನ್ನು ಗುರುತಿಸಲು ನಾನು ಸಚಿವಾಲಯಗಳಿಗೆ ಹೇಳಿದ್ದೆ. ಕೆಲವರು ಹತ್ತು, ನಾಲ್ಕಾರು ಜಿಲ್ಲೆಗಳನ್ನು ಕಂಡುಕೊಂಡರು.  ಉದಾಹರಣೆಗೆ, ಒಂದು ಜಿಲ್ಲೆ ಇದೆ, ಅಲ್ಲಿ ಎಲ್ಲವೂ ಉತ್ತಮವಾಗಿದೆ ಆದರೆ ಅಪೌಷ್ಟಿಕತೆಯ ಸಮಸ್ಯೆ ಇದೆ. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲ ಸೂಚಕಗಳು ಸರಿಯಾಗಿದ್ದರೂ ಶಿಕ್ಷಣದಲ್ಲಿ ಹಿಂದುಳಿದಿದೆ. ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಅಂತಹ 142 ಜಿಲ್ಲೆಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಈಗ ನಾವು ಒಂದು ಅಥವಾ ಎರಡು ನಿಯತಾಂಕಗಳಲ್ಲಿ ಹಿಂದುಳಿದಿರುವ ಈ ವಿವಿಧ 142 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮಾಡಿದ ಅದೇ ಸಾಮೂಹಿಕ ವಿಧಾನದೊಂದಿಗೆ ಕೆಲಸ ಮಾಡಬೇಕಾಗಿದೆ. ಇದು ಎಲ್ಲಾ ಸರ್ಕಾರಗಳು, ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಮತ್ತು ಸರ್ಕಾರಿ ಯಂತ್ರಕ್ಕೆ ಹೊಸ ಅವಕಾಶ ಮತ್ತು ಸವಾಲಾಗಿದೆ. ಈಗ ನಾವು ಒಟ್ಟಾಗಿ ಈ ಸವಾಲನ್ನು ಎದುರಿಸಬೇಕಾಗಿದೆ. ಮುಂದೆಯೂ ನನ್ನ ಎಲ್ಲ ಮುಖ್ಯಮಂತ್ರಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ.

ಸ್ನೇಹಿತರೇ,

ಸದ್ಯ ಅಲ್ಲಿ ಕೊರೊನಾ ವಾತಾವರಣವಿದೆ. ಎಲ್ಲಾ ಜಿಲ್ಲೆಗಳು ಕೊರೊನಾ ಎದುರಿಸಲು ತಯಾರಿ, ಅದರ ನಿರ್ವಹಣೆ ಮತ್ತು ಏಕಕಾಲದಲ್ಲಿ ಅಭಿವೃದ್ಧಿಯ ವೇಗವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಈ ಜಿಲ್ಲೆಗಳಲ್ಲಿ ಭವಿಷ್ಯದ ಸವಾಲುಗಳನ್ನು ಪರಿಗಣಿಸಿ ಈಗಿನಿಂದಲೇ ಕೆಲಸ  ಆರಂಭಿಸಬೇಕು.

ಸ್ನೇಹಿತರೇ,

ನಮ್ಮ ಋಷಿಮುನಿಗಳು ಹೇಳಿದ್ದಾರೆ – ''ಜಲ ಬಿಂದು ನಿಪಾತೇನ ಕ್ರಮಃ ಪೂರ್ಯತೇ ಘಟ:'' ಅಂದರೆ ಹೂಜಿಯು ನೀರಿನ ಪ್ರತಿ ಹನಿಯಿಂದ ತುಂಬಿರುತ್ತದೆ!  ಆದ್ದರಿಂದ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನಿಮ್ಮ ಪ್ರತಿಯೊಂದು ಪ್ರಯತ್ನವು ನಿಮ್ಮ ಜಿಲ್ಲೆಯನ್ನು ಅಭಿವೃದ್ಧಿಯ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಉಪಸ್ಥಿತರಿರುವ ನಾಗರಿಕ ಸೇವಾ ಸಹೋದ್ಯೋಗಿಗಳಿಗೆ ಇನ್ನೊಂದು ವಿಷಯವನ್ನು ನೆನಪಿಟ್ಟುಕೊಳ್ಳಲು ಹೇಳಬಯಸುತ್ತೇನೆ. ಈ ಸೇವೆಯಲ್ಲಿ ಸೇರಿದ ನಿಮ್ಮ ಮೊದಲ ದಿನವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ದೇಶಕ್ಕಾಗಿ ಎಷ್ಟು ಮಾಡಲು ಬಯಸಿದ್ದೀರಿ, ಎಷ್ಟು ಉತ್ಸಾಹ ಮತ್ತು ಸೇವಾ ಮನೋಭಾವದಿಂದ ತುಂಬಿದ್ದೀರಿ. ಈಗ ಅದೇ ಉತ್ಸಾಹದಿಂದ ಮುನ್ನಡೆಯಬೇಕು. ಸ್ವಾತಂತ್ರ್ಯದ ಈ ಪುಣ್ಯ ಕಾಲದಲ್ಲಿ ಮಾಡಬೇಕಾದ್ದು ತುಂಬಾ ಇದೆ ಮತ್ತು ಗಳಿಸುವುದು ತುಂಬಾ ಇದೆ. ಪ್ರತಿಯೊಂದು ಮಹತ್ವಾಕಾಂಕ್ಷೆಯ ಜಿಲ್ಲೆಯ ಅಭಿವೃದ್ಧಿಯು ದೇಶದ ಕನಸುಗಳನ್ನು ನನಸಾಗಿಸುತ್ತದೆ. ಸ್ವಾತಂತ್ರ್ಯ ಬಂದು ನೂರು ವರ್ಷಗಳು ಪೂರೈಸಿದ ಸಂದರ್ಭದಲ್ಲಿ ನಾವು ಕಂಡ ನವಭಾರತದ ಕನಸು ನನಸಾಗುವುದು ಈ ಜಿಲ್ಲೆಗಳು ಮತ್ತು ಹಳ್ಳಿಗಳ ಮೂಲಕ. ನಿಮ್ಮ ಪ್ರಯತ್ನಗಳಲ್ಲಿ ನೀವು ಸರ್ವ ಪ್ರಯತ್ನವನ್ನು ಮಾಡುವಿರಿ ಎಂದು ನನಗೆ ಖಾತ್ರಿಯಿದೆ. ದೇಶವು ತನ್ನ ಕನಸುಗಳನ್ನು ನನಸಾಗಿಸಿದಾಗ, ಅದರ ಸುವರ್ಣ ಅಧ್ಯಾಯದಲ್ಲಿ ನಿಮ್ಮೆಲ್ಲ ಸ್ನೇಹಿತರ ಪ್ರಮುಖ ಪಾತ್ರವಿರುತ್ತದೆ. ಈ ನಂಬಿಕೆಯೊಂದಿಗೆ, ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಅವರು ತಮ್ಮ ಜೀವನದಲ್ಲಿ ಮಾಡಿದ ಕಠಿಣ ಪರಿಶ್ರಮ ಮತ್ತು ಫಲಿತಾಂಶಗಳಿಗಾಗಿ ಎಲ್ಲಾ ಯುವ ಒಡನಾಡಿಗಳನ್ನು ಅಭಿನಂದಿಸುತ್ತೇನೆ. ಬಹಳ ಧನ್ಯವಾದಗಳು!  ಜನವರಿ 26 ಬಹಳ ಹತ್ತಿರದಲ್ಲಿದೆ. ಅದಕ್ಕೂ ಒತ್ತಡವಿದ್ದು, ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಒತ್ತಡವಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನೀವು ಮುಂಚೂಣಿಯಲ್ಲಿದ್ದೀರಿ. ಮತ್ತು ಅಂತಹ ಪರಿಸ್ಥಿತಿಯಲ್ಲಿ, ಶನಿವಾರದಂದು ನನ್ನೊಂದಿಗೆ ಇರಲು ನಾನು ನಿಮಗೆ ತೊಂದರೆ ನೀಡುತ್ತಿದ್ದೇನೆ, ಆದರೆ ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದ ನೀವೆಲ್ಲರೂ ಸೇರಿರುವುದು ನನಗೆ ಸಂತೋಷದ ವಿಷಯವಾಗಿದೆ. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು! ನಾನು ನಿಮಗೆ ಶುಭ ಹಾರೈಸುತ್ತೇನೆ!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1792453) Visitor Counter : 237