ಗೃಹ ವ್ಯವಹಾರಗಳ ಸಚಿವಾಲಯ

ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿತವಾಗಿದ್ದ ಉತ್ತಮ ಆಡಳಿತ ಸಪ್ತಾಹದ ಸಮಾರೋಪ ಸಮಾರಂಭ ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಷಣ


ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ವರ್ಷದಲ್ಲೇ ಉತ್ತಮ ಆಡಳಿತ ಸಪ್ತಾಹ ಆಚರಿಸುವ ನಿರ್ಧಾರವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೈಗೊಂಡಿದ್ದು, ಈ ಕಾರಣದಿಂದಾಗಿ, ಉತ್ತಮ ಆಡಳಿತದ ಪರಿಕಲ್ಪನೆಯನ್ನು ದೆಹಲಿಯಿಂದ ಜಿಲ್ಲೆಗಳಿಗೆ, ಜಿಲ್ಲೆಗಳಿಂದ ಹಳ್ಳಿಗಳಿಗೆ ರವಾನಿಸಲಾಗುತ್ತಿದೆ. ದೇಶದ ಇಡೀ ಆಡಳಿತ ವ್ಯವಸ್ಥೆಯನ್ನು ಇದೀಗ ‘ಉತ್ತಮ ಆಡಳಿತ’ದ ಪರಿಕಲ್ಪನೆಗೆ ಪರಿಚಯಿಸಲಾಗಿದೆ

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಾಗ ಅದೇ ಮೊದಲ ಬಾರಿಗೆ ದೇಶದ ಜನತೆ, ಈ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸರ್ಕಾರವನ್ನು ನಡೆಸುವುದಕ್ಕೆ ಮಾತ್ರವಲ್ಲ, ಇಡೀ ದೇಶವನ್ನೇ ಬದಲಿಸಲು ಬಂದಿದೆ ಎಂಬುದನ್ನು ಮನಗಂಡರು

ನಾವು ಸ್ವರಾಜ್ಯವನ್ನು ಉತ್ತಮ ಆಡಳಿತವಾಗಿ ಪರಿವರ್ತಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಫಲ ಜನರನ್ನು ಮುಟ್ಟುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಶ್ರೀ ನರೇಂದ್ರ ಮೋದಿ ಅವರು ಜನತೆಯ ಈ ನಿರೀಕ್ಷೆಯನ್ನು ಈಡೇರಿಸಿದರು. ಈ ಸಂಘಟಿತ ಪ್ರಯತ್ನದ ಫಲವಾಗಿ, ಸರ್ಕಾರದ ಮೇಲಿನ ಜನತೆಯ ಆತ್ಮವಿಶ್ವಾಸ ಹೆಚ್ಚಾಯಿತು

ಉತ್ತಮ ಆಡಳಿತದ ಬಗ್ಗೆ ಜನತೆಯ ನಿರೀಕ್ಷೆ ಏನಿತ್ತೆಂದರೆ, ಅಭಿವೃದ್ಧಿ ಮಾದರಿಯು ಎಲ್ಲಾ ವಲಯಗಳನ್ನು ಸ್ಪರ್ಶಿಸುವಂತಿರಬೇಕು, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಆಗಿರಬೇಕು. ದೇಶದ ಯಾವುದೇ ವಲಯ ಅಭಿವೃದ್ಧಿಯಿಂದ ಹಿಂದೆ ಉಳಿಯಬಾರದು. ದೇಶದ ಯಾವುದೇ ವ್ಯಕ್ತಿ ಅಭಿವೃದ್ಧಿ ಮಾದರಿಯ ಸೇ

Posted On: 25 DEC 2021 6:47PM by PIB Bengaluru

ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ದೆಹಲಿಯ ವಿಜ್ಞಾನ ಭವನದಲ್ಲಿಂದು ಆಯೋಜಿಸಲಾಗಿದ್ದ ಉತ್ತಮ ಆಡಳಿತ ಸಪ್ತಾಹದ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಸಚಿವ ಶ್ರೀ ಜಿತೇಂದ್ರ ಸಿಂಗ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯಗಳ ಉನ್ನತಾಧಿಕಾರಿಗಳು  ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ, ಡಿಸೆಂಬರ್ 25 ಹಲವು ಕಾರಣಗಳಿಂದ ಮಹತ್ವದ ದಿನವಾಗಿದೆ. ದೇಶದ 2 ಮಹಾನ್ ವ್ಯಕ್ತಿತ್ವಗಳ ಸವಿನೆನಪುಗಳು ಈ ದಿನಕ್ಕೆ ತಳುಕು ಹಾಕಿಕೊಂಡಿವೆ. ಅವರಿಬ್ಬರು ದೇಶದ ಅಭಿವೃದ್ಧಿ, ಸ್ವಾತಂತ್ರ್ಯ ಮತ್ತು ದೇಶಕ್ಕೆ ಹೊಸ ದಿಕ್ಕು ತೋರಲು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರು ಸ್ವಾತಂತ್ರ್ಯ ಗಳಿಸುವ ಮುನ್ನವೇ ದೇಶದ ಶ್ರೀಮಂತ ಮತ್ತು ಹೆಮ್ಮೆಯ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಭಾರತದ ಸಂಸ್ಕೃತಿ, ಸಂಪ್ರದಾಯ, ಪುರಾತನ ಜ್ಞಾನ, ವಿಜ್ಞಾನ, ವೇದ ಗಣಿತಶಾಸ್ತ್ರ ವಿಷಯಗಳನ್ನು ಹೆಮ್ಮೆಯಿಂದ ವಿಶ್ವಕ್ಕೆ ಪರಿಚಯಿಸಿದ್ದರು. ಎಲ್ಲಾ ವಿಷಯಗಳ ಸಂರಕ್ಷಣೆ ಮತ್ತು ಉತ್ತೇಜನವು ಭಾರತಕ್ಕೆ ಮಾತ್ರವಲ್ಲದೆ, ಇಡೀ  ಜಗತ್ತಿಗೆ ಅತಿಮುಖ್ಯ. ಏಕೆಂದರೆ ಅವುಗಳಲ್ಲಿ ಅನೇಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು ಎಂದು ಹೇಳಿದರು. ಮಾಳವಿಯಾ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು. ಇಂದು ಈ ಮಹಾನ್ ದೇಶಭಕ್ತ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಜನ್ಮದಿನ. ಅಲ್ಲದೆ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವು ಇಂದೇ. ಆಧುನಿಕ ಭಾರತದಲ್ಲಿ ಉತ್ತಮ ಆಡಳಿತ ಎಂಬ ಪದವನ್ನು ನೈಜ ಅರ್ಥದಲ್ಲಿ ಕೆಳ ಹಂತದ ಆಡಳಿತದವರೆಗೆ ಮುಟ್ಟಿಸಿದ ಮಹಾನ್ ನಾಯಕ ವಾಜಪೇಯಿ ಎಂದು ಅಮಿತ್ ಶಾ ಬಣ್ಣಿಸಿದರು. ವಾಜಪೇಯಿ ಪ್ರಧಾನಿ ಆಗಿದ್ದಾಗ, ದೇಶವೇ ಹೆಮ್ಮೆಪಡುವ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದರು. ಅವು ಬಹುಕಾಲ ಉಳಿದಿದ್ದವು. ಸರ್ಕಾರಗಳು ಭವಿಷ್ಯದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ತೋರಿಸಿದ ಶ್ರೀ ವಾಜಪೇಯಿ ಅವರು ದೇಶದ ಜನತೆಯ ಮುಂದೆ ಬಲವಾದ ಮತ್ತು ಉತ್ತಮ ಉದಾಹರಣೆ ಆಗಿದ್ದರು ಎಂದರು.

ದೇಶವು ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂವತ್ಸರದಲ್ಲೇ ಉತ್ತಮ ಆಡಳಿತ ಸಪ್ತಾಹ ಆಚರಿಸುವ ನಿರ್ಧಾರವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೈಗೊಂಡಿದ್ದು, ಈ ಕಾರಣದಿಂದಾಗಿ, ಉತ್ತಮ ಆಡಳಿತದ ಪರಿಕಲ್ಪನೆಯನ್ನು ದೆಹಲಿಯಿಂದ ಜಿಲ್ಲೆಗಳಿಗೆ, ಜಿಲ್ಲೆಗಳಿಂದ ಹಳ್ಳಿಗಳಿಗೆ ರವಾನಿಸಲಾಗುತ್ತಿದೆ. ದೇಶದ ಇಡೀ ಆಡಳಿತ ವ್ಯವಸ್ಥೆಯನ್ನು ಇದೀಗ ‘ಉತ್ತಮ ಆಡಳಿತ’ದ ಪರಿಕಲ್ಪನೆಗೆ ಪರಿಚಯಿಸಲಾಗಿದ್ದು, ಇದೊಂದು ಬಹುದೊಡ್ಡ ಸಾಧನೆಯಾಗಿದೆ ಎಂದು ಅಮಿತ್ ಶಾ ತಿಳಿಸಿದರು.

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಾಗ ಅದೇ ಮೊದಲ ಬಾರಿಗೆ ದೇಶದ ಜನತೆ, ಈ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸರ್ಕಾರವನ್ನು ನಡೆಸುವುದಕ್ಕೆ ಮಾತ್ರವಲ್ಲ, ಇಡೀ ದೇಶವನ್ನೇ ಬದಲಿಸಲು ಬಂದಿದೆ ಎಂಬುದನ್ನು ಮನಗಂಡರು.

ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿದ್ದ ಭಾವನೆ ಏನೆಂದರೆ, ಸ್ವರಾಜ್ಯ ಗಳಿಸಿದ್ದಾಯಿತು, ಅವರು ಸೂರಜ್ ಪಡೆಯುವುದು ಯಾವಾಗ? 70 ವರ್ಷಗಳಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಜನರ ನಂಬಿಕೆ ಕಾಲಾನುಕ್ರಮೇಣ ಕಡಿಮೆಯಾಗುತ್ತಾ ಬಂತು. ಸ್ವರಾಜ್ಯವನ್ನು ಉತ್ತಮ ಆಡಳಿತವಾಗಿ ಪರಿವರ್ತಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಜನರಿಗೆ ತಲುಪಲು ಸಾಧ್ಯ. ಶ್ರೀ ನರೇಂದ್ರ ಮೋದಿ ಅವರು ಸನ್ಮಾರ್ಗದಲ್ಲಿ ಜನರ ಈ ನಿರೀಕ್ಷೆಯನ್ನು ಈಡೇರಿಸಿದರು. ಉತ್ತಮ ಆಡಳಿತವನ್ನು ಕೆಳ ಹಂತದ ಆಡಳಿತದವರೆಗೆ ಕೊಂಡೊಯ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಈ ಸಂಘಟಿತ ಪ್ರಯತ್ನಗಳ ಫಲವಾಗಿ, ಸರ್ಕಾರದ ಮೇಲೆ ಜನರ ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಾಯಿತು. 25 ವರ್ಷಗಳ ನಂತರ ದೇಶ ಸ್ವಾತಂತ್ರ್ಯ ಗಳಿಸಿದ ಶತಮಾನೋತ್ಸವ ಆಚರಿಸುವಾಗ, ದೇಶದ ಪ್ರತಿ ನಾಗರಿಕ “ದೇಶ ಈಗ ಹೇಗಿದೆ” ಎಂಬುದನ್ನು ಊಹಿಸುತ್ತಾನೆ. ದೇಶ ಇಲ್ಲಿಯ ತನಕ 22 ಸರ್ಕಾರಗಳನ್ನು ನೋಡಿದೆ. ಇವೆಲ್ಲವುಗಳ ನಂತರ ನಾವೆಲ್ಲಾ ಈಗ ದೇಶದಲ್ಲಿ ಬದಲಾವಣೆಗಳನ್ನು ನೋಡುವಂತಾಗಿದೆ ಎಂದು ಅಮಿತ್ ಶಾ ತಿಳಿಸಿದರು.

ಉತ್ತಮ ಆಡಳಿತದ ಬಗ್ಗೆ ಜನರ ನಿರೀಕ್ಷೆಗಳು ಏನೆಂದರೆ, ಅಭಿವೃದ್ಧಿ ಮಾದರಿಯು ಸಾರ್ವತ್ರಿಕವಾಗಿರಬೇಕು, ಎಲ್ಲರನ್ನೂ ಒಳಗೊಂಡಿರಬೇಕು. ದೇಶದ ಯಾವುದೇ ವಲಯ ಅಭಿವೃದ್ಧಿಯಿಂದ ಹೊರಗುಳಿಯಬಾರದು. ಅಭಿವೃದ್ಧಿ ಮಾದರಿಯ ಸೇರ್ಪಡೆಯಿಂದ ದೇಶದ ಯಾವುದೇ ವ್ಯಕ್ತಿ ಹೊರಗುಳಿಯಬಾರದು. ಉತ್ತಮ ಆಡಳಿತದ ಮಾದರಿಯ ಬಗ್ಗೆ ಜನರ ನಿರೀಕ್ಷೆಗಳೆಂದರೆ, ಭ್ರಷ್ಟಾಚಾರಮುಕ್ತ, ಪಾರದರ್ಶಕ ಆಡಳಿತ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನಗಳು, ಹೊಣೆಗಾರಿಕೆಯ ಸೂಕ್ಷ್ಮತೆ, ನಾವೀನ್ಯತೆ, ಸ್ಥಿರತೆ ಮತ್ತು ಈ ಎಲ್ಲಾ ಪ್ರಯತ್ನಗಳನ್ನು ನಡೆಸಲು ಜನರು ಸರ್ಕಾರ ಮೇಲೆ ನಂಬಿಕೆ ಹೊಂದಿರಬೇಕು. ಅದೇ ರೀತಿ ಸರ್ಕಾರ ಸಹ ಜನರ ಮೇಲೆ ನಂಬಿಕೆ ಹೊಂದಿರಬೇಕು. ಈ ಮಾದರಿಯಲ್ಲಿ ಅಥವಾ ಈ ರೀತಿಯಲ್ಲಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣವಾಗಬೇಕು. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಜನರು ಈ 7 ನಿರೀಕ್ಷೆಗಳನ್ನು ಹೊಂದಿದ್ದಾರೆ ಮತ್ತು ಈ ನಿರೀಕ್ಷೆಗಳನ್ನು ಪೂರೈಸುವ ಜವಾಬ್ದಾರಿಯನ್ನು ನಾವು ಸಹ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.

ಈ ಮುನ್ನ ಅಭಿವೃದ್ಧಿಗೆ ವಿಭಿನ್ನವಾದ ವ್ಯಾಖ್ಯಾನ ನೀಡಲಾಗುತ್ತಿತ್ತು, ಆಡಳಿತದೊಳಗೆ ಘರ್ಷಣೆ, ಕಲಹಗಳು ಇದ್ದವು. ಆದರೆ ಮೋದಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಿ, ಈ ಎಲ್ಲಾ ಘರ್ಷಣೆಗಳಿಗೆ ಅಂತ್ಯ ಹಾಡಿತು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಳೆದ 7 ವರ್ಷಗಳಲ್ಲಿ ಸರ್ಕಾರದ ಎಲ್ಲಾ ವಿರೋಧಾಭಾಸಗಳನ್ನು ನಿರ್ಮೂಲನೆ ಮಾಡುವ ಮೂಲಕ ನಾವು ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ತಂದಿದ್ದೇವೆ. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ರಕ್ಷಣೆ, ಆಂತರಿಕ ಭದ್ರತೆ, ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ವಲಯಗಳ ಅಭಿವೃದ್ಧಿಗೆ ಪೂರಕವಾದ ಸ್ಪಷ್ಟ ಮತ್ತು ಸಮಗ್ರ ನೀತಿಗಳನ್ನು ಮೋದಿ ಸರಕಾರ ರೂಪಿಸಿದೆ. ಇದರಿಂದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

2014ಕ್ಕೆ ಮುನ್ನ ದೇಶದ 80 ಕೋಟಿ ಬಡಜನರಲ್ಲಿ ಬಹುದೊಡ್ಡ ಪ್ರಶ್ನೆ ಇತ್ತು. ಅದೇನೆಂದರೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪ್ರಧಾನ ಮಂತ್ರಿ ಆಯ್ಕೆಯಾಗುತ್ತಾರೆ, ಹೋಗುತ್ತಾರೆ. ಆದರೆ ನಮಗೇನೂ ಲಾಭವಿಲ್ಲ. ನಮ್ಮ ಜೀವನನೋಪಾಯದಲ್ಲಿ ಯಾವುದೇ ಬದಲಾವಣೆಗಳು ಮಾತ್ರ ಆಗುತ್ತಿಲ್ಲ. ಇಂತಹ ಸರ್ಕಾರಗಳು ನಮಗೇಕೆ ಎಂಬುದು. 2014ಕ್ಕಿಂತ ಮುನ್ನ ದೇಶದ 60 ಕೋಟಿ ಜನರಿಗೆ ಒಂದೇ ಒಂದು ಬ್ಯಾಂಕ್ ಖಾತೆಯೂ ಇರಲಿಲ್ಲ, ದೇಶದ ಆರ್ಥಿಕತೆಗೆ ಅವರ ಕೊಡುಗೆ ಮತ್ತು ಪಾಲು ನಯಾಪೈಸೆಯೂ ಇರಲಿಲ್ಲ. ಬಹುದೊಡ್ಡ ಘೋಷಣೆಯ ಬಜೆಟ್ ಗಳು ಬರುತ್ತವೆ, ಹೋಗುತ್ತವೆ. ಜನರ ಕಲ್ಯಾಣದ ಬಗ್ಗೆ ದೊಡ್ಡ ಭಾಷಣಗಳನ್ನೇ ಬಿಗಿಯುತ್ತಾರೆ. ಆದರೆ ನಮಗೆ ಯಾವ ಪ್ರಯೋಜನ ಲಭಿಸಿತು. ಎಲ್ಲವೂ ಶೂನ್ಯ ಎಂಬ ಭಾವನೆ ಅವರದ್ದಾಗಿತ್ತು. ಅವರಿಗೆ ಮನೆ, ವಿದ್ಯುತ್ ಮತ್ತು ಶೌಚಾಲಯ ಸೌಲಭ್ಯ ಸಿಕ್ಕಿರಲಿಲ್ಲ. 10 ಕೋಟಿಗಿಂತ ಹೆಚ್ಚಿನ ಮನೆಗಳಿಗೆ ಶೌಚಾಲಯವೇ ಇರಲಿಲ್ಲ. 30 ದಶಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. 140 ದಶಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಅನಿಲ ಸಿಲಿಂಡರ್ ಇರಲಿಲ್ಲ. ಆರೋಗ್ಯ ವಲಯದ ಸೌಲಭ್ಯದ ಬಗ್ಗೆ ಮಾತನಾಡುವಂತೆಯೇ ಇಲ್ಲ. ಅವರಿಗೆ ಕನಿಷ್ಠ ಆರೋಗ್ಯ ಸೌಲಭ್ಯ ಸಿಕ್ಕಿಲ್ಲ. ಗಂಭೀರ ಆರೋಗ್ಯ ಸಮಸ್ಯೆ ಎದುರಾದರೆ ಬಡವರು ಅಸಹಾಯಕರಾಗುತ್ತಿದ್ದರು. ಅವರಿಗೆ ದೇವರು ಬಿಟ್ಟರೆ ಇನ್ನಾರೂ ನೆನಪಾಗುತ್ತಿರಲಿಲ್ಲ. ಅಸಹಾಯಕ ಬಡವರು ವೈದ್ಯಕೀಯ ಸೌಲಭ್ಯ ಸಿಗದೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡರು ಎಂದರೆ, ಸ್ವಾತಂತ್ರ್ಯ ಗಳಿಸಿದ್ದಕ್ಕೆ ದೇಶದಲ್ಲಿ ಬೆಲೆಯೇನು ಬಂತು ಎಂದು ಸಚಿವರು ಪ್ರಶ್ನಿಸಿದರು.

ಮೋದಿ ಸರ್ಕಾರ ಮೊದಲ ಬಾರಿಗೆ 2 ಕೋಟಿಗಿಂತ ಹೆಚ್ಚಿನ ಬಡ ಜನರಿಗೆ ಮನೆ ನಿರ್ಮಿಸಿಕೊಡುವ ಗುರಿ ನಿಗದಿಪಡಿಸಿತು. ಪ್ರತಿ ಮನೆಗೆ ವಿದ್ಯುತ್ ಮತ್ತು ಶೌಚಾಲಯ ನಿರ್ಮಿಸಿಕೊಡುವ ಕಾರ್ಯ ಪೂರ್ಣವಾಗಿದೆ. 14 ಕೋಟಿ ಮನೆಗಳಿಗೆ ಉಚಿತ ಅನಿಲ ಸಂಪರ್ಕ ಒದಗಿಸಿ, ಮಹಿಳೆಯರ ಆರೋಗ್ಯ ಸುಧಾರಿಸಲಾಗಿದೆ.  2022 ಡಿಸೆಂಬರ್ ವೇಳೆಗೆ ಪ್ರತಿ ಮನೆಗೆ ಕುಡಿಯುವ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ಭರದಿಂದ ಸಾಗಿದೆ. ಬಡ ವ್ಯಕ್ತಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗೆ ಸಿಲುಕಿದರೆ, ಖರ್ಚಿಲ್ಲದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ಪಡೆಯಬಹುದಾಗಿದೆ. ಕೋವಿಡ್-19 ಕಾಲಘಟ್ಟದಲ್ಲಿ ಬಡವರು ಹಸಿವಿನಿಂದ ನರಳಬಾರದು ಎಂದು ಮೋದಿ ಸರ್ಕಾರ, ಪ್ರತಿ ವ್ಯಕ್ತಿಗೆ 2 ವರ್ಷಗಳ ಕಾಲ ಉಚಿತವಾಗಿ ಮಾಸಿಕ 25 ಕೆಜಿ ಆಹಾರಧಾನ್ಯ ವಿತರಿಸಿದೆ. ದೇಶದ ಅಭಿವೃದ್ಧಿಯಿಂದ ಹೊರಗುಳಿದಿದ್ದ ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನ ಜನರಲ್ಲಿ ಇದೀಗ ಹೊಸ ಭರವಸೆ ಮತ್ತು ಆಶಾವಾದ ಮೂಡಿದೆ.

ನರೇಂದ್ರ ಮೋದಿ ಸರಕಾರವು ಯೋಜನೆಗಳ ಪ್ರಮಾಣವನ್ನು ಬದಲಿಸಿದೆ. ಹಿಂದಿನ ಯೋಜನೆಗಳು ಅಂಕಿಅಂಶಗಳಲ್ಲಿದ್ದವು, ಈಗ ಯೋಜನೆಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿವೆ. ಭ್ರಷ್ಟಾಚಾರ ನಿರ್ಮೂಲನೆಗೆ ಬಹಳಷ್ಟು ಕೆಲಸ ಮಾಡಲಾಗಿದೆ. ಮೊದಲನೆಯದಾಗಿ, ನೇರ ನಗದು ವರ್ಗಾವಣೆ ಯೋಜನೆ ರೂಪಿಸಲಾಗಿದೆ. ಹಿಂದೆ 60 ಕೋಟಿ ಜನರು ಸರ್ಕಾರದಿಂದ ಯೋಜನೆಗಳ ಹಣ ಸ್ವೀಕರಿಸಲು ಮಧ್ಯವರ್ತಿಗಳನ್ನು ಅವಲಂಬಿಸಿದ್ದರು. ಆದರೆ ಇಂದು ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ದೆಹಲಿಯಿಂದ ತಲುಪುತ್ತದೆ. ಮೋದಿ ಸರ್ಕಾರವು ಬಹಳ ವ್ಯವಸ್ಥಿತ ರೀತಿಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತಂದಿದೆ. ಕಾಳಧನ ತಡೆಯಲು ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆರ್ಥಿಕ ಅಪರಾಧಿಗಳ ವಿರುದ್ಧ ಬೇನಾಮಿ ಆಸ್ತಿ ಕಾನೂನುಗಳನ್ನು ರೂಪಿಸಲಾಗಿದೆ. ನಕಲಿ ಕಂಪನಿಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಲಾಯಿತು ಮತ್ತು ಇನ್ಸ್ ಪೆಕ್ಟರ್ ರಾಜ್ ನಿಷೇಧಿಸುವ ಕೆಲಸವು ಸಹ ನಡೆಯಿತು. ಶ್ರೀ ನರೇಂದ್ರ ಮೋದಿ ಆಡಳಿತ ಇದನ್ನು ಮಾಡಿದೆ.  ಈ ಕಾರಣದಿಂದಾಗಿ, ಇಂದು 7 ವರ್ಷಗಳ ನಂತರ, ಸಾರ್ವಜನಿಕರ ಮುಂದೆ ನಾವು ವಿಶ್ವಾಸದಿಂದ ಹೇಳಬಹುದು, ಇಂದು ಯಾರೂ ಸಹ ಭ್ರಷ್ಟಾಚಾರ ಆರೋಪ ಮಾಡದಂತಾಂಗಿದೆ ಎಂದು. ಇದು ಪಾರದರ್ಶಕ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ.

ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ರೂಪಿಸಬೇಕು. ಅದರಿಂದ ಸಂಪೂರ್ಣ ಸಮಸ್ಯೆಯನ್ನು ಮೂಲ ಬೇರಿನಿಂದ ಬೇರ್ಪಡಿಸಬಹುದು. ತಂತ್ರಜ್ಞಾನವನ್ನು ಬಳಸುವ ಮೂಲಕ ಇದನ್ನು ಸುಲಭವಾಗಿ ಮಾಡಲಾಗಿದೆ.

ಕೋವಿಡ್ ಲಸಿಕಾ ಕಾರ್ಯಕ್ರಮ ವಿಶ್ವಾದ್ಯಂತ ನಡೆಯುತ್ತಿದೆ. ಆದರೆ ಲಸಿಕೆ ಪಡೆದ 30 ಸೆಕೆಂಡುಗಳ ಒಳಗೆ ಒಬ್ಬ ವ್ಯಕ್ತಿಗೆ ವಿದ್ಯುನ್ಮಾನ ಪ್ರಮಾಣಪತ್ರ ನೀಡುತ್ತಿರುವ ಸೌಲಭ್ಯ ಭಾರತದಲ್ಲಿ ಮಾತ್ರ ಇದೆ. ಇದು ಬೇರೆ ಯಾವ ದೇಶದಲ್ಲೂ ಇಲ್ಲ. ಕೋವಿನ್ ಅಪ್ಲಿಕೇಷನ್ ಮೂಲಕ ಭಾರತ ಆ ಸಾಧನೆ ಮಾಡಿದೆ. ತಂತ್ರಜ್ಞಾನ ಸಹಾಯದಿಂದ 130 ಕೋಟಿ ಜನರಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ. ಲಸಿಕಾ ಪರಿಹಾರ ಒದಗಿಸುವ ಮೂಲಕ ಮೋದಿ ಸರಕಾರವು ವಿಭಿನ್ನ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಿದೆ ಎಂಬುದನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದರು.

COVID-19 ಆಗಮನದೊಂದಿಗೆ, ಅನೇಕ ಜನರ ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ದಿನನಿತ್ಯ ಸಂಪಾದಿಸುವ ದುಡಿಮೆದಾರರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದರು. ಸಣ್ಣ ಜನಸಂಖ್ಯೆ ಹೊಂದಿರುವ ದೇಶಗಳು ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಲಿಲ್ಲ. ಆದರೆ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ನಮ್ಮ ಸರ್ಕಾರವು 80 ಕೋಟಿ ಜನರನ್ನು ಕೊವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣಕ್ಕೆ ಬರುವ ತನಕ ಬಡವರಿಗೆ ಪ್ರತಿ ತಿಂಗಳು 25 ಕಿ.ಗ್ರಾಂ ಆಹಾರ ಧಾನ್ಯಗಳನ್ನು ವಿತರಿಸಿ, ಅವರ ಸಮಸ್ಯೆ ಪರಿಹರಿಸಲಾಯಿತು. ಇದನ್ನು ಪ್ರತಿಕ್ರಿಯಾಶೀಲ ಮತ್ತು ಸೂಕ್ಷ್ಮ ಸರ್ಕಾರ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ, 130 ಕೋಟಿ ಜನರನ್ನು ಲಸಿಕೆ ನೀಡುವ ಮೂಲಕ, ಇಂದು ನಾವು ನಮ್ಮ ನಾಗರಿಕರಿಗೆ COVID-19 ಬೆದರಿಕೆಯಿಂದ ರಕ್ಷಣೆ ಖಾತ್ರಿಪಡಿಸಿದ್ದೇವೆ ಎಂದು ನಾವು ಧೈರ್ಯದಿಂದ ಹೇಳಬಹುದು. ಇದು ಹೇಗೆ ಸೂಕ್ಷ್ಮ ಸರ್ಕಾರವೊಂದು  ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಕಳೆದ 40 ವರ್ಷಗಳಿಂದ ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆ ಕಾರ್ಯಗತಗೊಳಿಸಲು ನಿರ್ಧಾರವನ್ನೇ ತೆಗೆದುಕೊಂಡಿರಲಿಲ್ಲ. 45 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್  ತಾಪಮಾನದಲ್ಲಿ ನಮ್ಮ ಗಡಿ ಕಾಯುವ ರಕ್ಷಣಾ ಸಿಬ್ಬಂದಿಯ ವೇತನ ಮತ್ತು ಶ್ರೇಣಿ ಕುರಿತಾದ ನಿರ್ಧಾರವು ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಆದರೆ ಮೋದಿ ಸರ್ಕಾರವು ಒಂದು ಶ್ರೇಣಿ-ಒಂದು ಪಿಂಚಣಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿತು.

ರೈತರ ಸಾಲ ಮನ್ನಾ ಬಹುದೊಡ್ಡ ಸಮಸ್ಯೆಯಾಗಿತ್ತು. ಪ್ರತಿ ಚುನಾವಣೆಯಲ್ಲೂ ಸಾಲ ಮನ್ನಾ ಬೇಡಿಕೆ ಹೆಚ್ಚಾಗುತ್ತಿತ್ತು. ಪ್ರತಿ ಬಾರಿಯೂ ಸಾಲ ಮನ್ನಾ ಘೋಷಿಸಲಾಗುತ್ತಿತ್ತು. ಇದರಿಂದ ಬ್ಯಾಂಕ್ ಗಳ ಮೇಲೆ ಹೊರೆ ಜಾಸ್ತಿಯಾಗಿತ್ತು. ಆದರೆ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬದಲು ರೈತರಿಗೆ ನೇರವಾಗಿ ವಾರ್ಷಿಕ 6,000 ರೂ. ಸಹಾಯಧನ ನೀಡುವ ನಿರ್ಧಾರ ಕೈಗೊಂಡಿತು. ಇದರಿಂದ ಸಣ್ಣ ರೈತರು ಸಾಲ ಪಡೆಯುವ ಪ್ರಮೇಯವೇ ಇಲ್ಲದಂತಾಯಿತು.

ಮೋದಿ ಸರ್ಕಾರವು ಉತ್ತಮ ಆಡಳಿತಕ್ಕೆ ಸಂಬಂಧಿಸಿದ ಅನೇಕ ಆವಿಷ್ಕಾರಗಳನ್ನು ಜಾರಿಗೆ ತಂದಿದೆ. ಸರ್ಕಾರವು ಅನೇಕ ನೀತಿಗಳಿಗೆ ನಾವೀನ್ಯತೆಗೆ ಅಳವಡಿಸಿಕೊಂಡು, ಸ್ಥಿರತೆ ನೀಡುವ ಕೆಲಸ ಮಾಡಿದೆ.  ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಮೋದಿ ಸರ್ಕಾರವು ಡ್ರೋನ್ ನೀತಿ ರೂಪಿಸಿತು. ಬಾಹ್ಯಾಕಾಶದಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆಗೆ ಯಾವುದೇ ನೀತಿ ಇರಲಿಲ್ಲ.  ಆದರೆ ನಾವು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುವಂತೆ ನೀತಿ ರೂಪಿಸಿದೆವು. ರಾಷ್ಟ್ರದ ಭದ್ರತೆ, ಉತ್ತಮ ಆಡಳಿತದಲ್ಲಿ ಬಲವಾದ ನಂಬಿಕೆ ಹೊಂದಿರುವ ವ್ಯಕ್ತಿಯಿಂದ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಮೋದಿ ಅವರು ದೃಢ ನಂಬಿಕೆ ಹೊಂದಿದ್ದಾರೆ ಮತ್ತು ಉತ್ತಮ ಆಡಳಿತದ ಫಲಿತಾಂಶಗಳ ಬಗ್ಗೆ ಖಚಿತತೆ ಹೊಂದಿದ್ದಾರೆ. ಈ ಕಾರಣದಿಂದಾಗಿ, ಮೋದಿ ಅವರು ಅನೇಕ ಬಾರಿ ವಿರೋಧ ಎದುರಿಸಬೇಕಾಯಿತು, ಆದರೂ, ಅವರು ಈ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿಯೇ ಅವರು ಜನರ ಅಪಾರ ನಂಬಿಕೆಯನ್ನು ಗಳಿಸಿದ್ದಾರೆ.

ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಹಾಗೆಯೇ ಸರ್ಕಾರಕ್ಕೆ ಜನರ ಮೇಲಿನ ನಂಬಿಕೆಯೂ ಹೆಚ್ಚಾಗಿದೆ. ಈ ಮೊದಲು ಯುವಕರು ತಮ್ಮ ಪ್ರಮಾಣಪತ್ರಗಳನ್ನು ದೃಢೀಕರಿಸಲು ಅಧಿಕಾರಿಗಳ ಬಳಿ ಹೋಗಬೇಕಿತ್ತು. ಆದರೆ ಮೋದಿ ಅವರು, ಯುವಕರೇ ತಮ್ಮ ಪ್ರಮಾಣಪತ್ರಗಳನ್ನು ದೃಢೀಕರಿಸಿಕೊಳ್ಳಲು ಅನುಮತಿ ನೀಡಿದರು. ಯುವಕರು ಯಾವುದೇ ತಪ್ಪು ಮಾಡಿದರೆ, ಆಡಳಿತ ಅದನ್ನು ಪರಿಶೀಲಿಸುತ್ತದೆ ಎಂಬುದು ಮೋದಿ ಅವರ ಪ್ರತಿಪಾದನೆಯಾಗಿದೆ. 3 ಮತ್ತು 4ನೇ ದರ್ಜೆಯ ಹುದ್ದೆಗಳಿಗೆ ಆಯ್ಕೆ ಮಾಡಲು ಇದ್ದ ಸಂದರ್ಶನಗಳನ್ನು ಕೊನೆಗೊಳಿಸುವ ಮೂಲಕ ಭ್ರಷ್ಟಾಚಾರ ತಡೆಗಟ್ಟಲು ಮೋದಿ ಹೆಚ್ಚಿನ ಕೆಲಸ ಮಾಡಿದ್ದಾರೆ.  ಕೋವಿಡ್ -19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡಾಗ ಮೋದಿ ಜನತಾ ಕರ್ಫ್ಯೂ ಘೋಷಿಸಿದರು. ಇದರಿಂದ ಜನರು ಪೊಲೀಸರ ಸೂಚನೆಗೆ ಕಾಯದೆ ಮಧ್ಯಾಹ್ನ 12ರ ಒಳಗೆ ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಿದ್ದರು. ಇದರಿಂದಾಗಿ ನಾವು ಜನರಿಗೆ ಶಿಸ್ತು ರೂಪಿಸಿದ್ದೇವೆ. ಜನರು ತಮ್ಮ ಮನವಿ ಆಲಿಸುವ ಮೂಲಕ ವಿಶ್ವಾಸವನ್ನು ಮರುಪಾವತಿಸುತ್ತಿದ್ದಾರೆ ಎಂದು ಮೋದಿ ಹೇಳುತ್ತಿದ್ದರು. ಪ್ರಧಾನಿ ಅವರಿಗೆ ಸಾರ್ವಜನಿಕರ ಬಗ್ಗೆ ಇದ್ದ ನಂಬಿಕೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಮೋದಿ ಜನರನ್ನು ನಂಬುತ್ತಾರೆ ಮತ್ತು ಜನರು ಸಹ ಅವರನ್ನು ನಂಬುತ್ತಾರೆ. ಇದಕ್ಕಾಗಿಯೇ ಜನರು ಕಳೆದ 20 ವರ್ಷಗಳಿಂದ ಅವರನ್ನು ಮತ್ತೆ ಮತ್ತೆ ಆಯ್ಕೆ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.

ಉತ್ತಮ ನೀತಿಗಳನ್ನು ರೂಪಿಸುವ ಮೂಲಕ ಮತ್ತು ಆಡಳಿತದಲ್ಲಿ ತಂತ್ರಜ್ಞಾನ ಬಳಸುವ ಮೂಲಕ ಮಾತ್ರ ಒಳ್ಳೆಯ ಆಡಳಿತ ನೀಡಬಹುದು. ಈ ನಿಟ್ಟಿನಲ್ಲಿ  ಮೋದಿ ಅವರು ಕನಿಷ್ಠ ಸರ್ಕಾರದ ನಿರ್ದೇಶನದಲ್ಲಿ ಕೆಲಸ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುನ್ಮಾನ-ಆಡಳಿತ ನಾಗರಿಕರ ಸನ್ನದು, ರಾಷ್ಟ್ರೀಯ ವಿದ್ಯುನ್ಮಾನ-ಸೇವೆ ವಿತರಣೆ ಮೌಲ್ಯಮಾಪನ ವ್ಯವಸ್ಥೆ ಮತ್ತು ಉತ್ತಮ ಆಡಳಿತ ಸೂಚ್ಯಂಕಗಳ ಉತ್ತೇಜನದ  ಅನೇಕ ಉಪಕ್ರಮಗಳನ್ನು ಜಾರಿ ಮಾಡಿವೆ. ಮೋದಿ ಅವರು ಮಿಷನ್ ಕರ್ಮಯೋಗಿ ಪ್ರಾರಂಭಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಮಿಷನ್ ಕರ್ಮಯೋಗಿಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಅದನ್ನು ಕೆಳ ಮಟ್ಟದ ಆಡಳಿತದಲ್ಲಿ ಅಳವಡಿಸದಿದ್ದರೆ, ಉತ್ತಮ ಆಡಳಿತ ಸಾಧ್ಯವಿಲ್ಲ. ಮಿಷನ್ ಕರ್ಮಯೋಗಿಯು ಆಡಳಿತ ಆಧಾರಿತ ಕಲಿಕೆಯಿಂದ ಪಾತ್ರ ಆಧಾರಿತ ಕಲಿಕೆಗೆ ಪರಿವರ್ತಿಸುವುದಾಗಿದೆ ಎಂದರು.

 ಸಾಮರ್ಥ್ಯ ನಿರ್ಮಾಣ ಆಯೋಗ ಮತ್ತು ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪಿಸಲಾಗಿದೆ. ದೂರು ಅಥವಾ ಕುಂದುಕೊರತೆ ಪರಿಹಾರ ವ್ಯವಸ್ಥೆಗಾಗಿ ಸಿಪಿಗ್ರಾಮ್ಸ್ ಸಹ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ 87 ಸಚಿವಾಲಯಗಳು ಮತ್ತು 38 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಸಿಪಿಗ್ರಾಮ್ ನ ಸಂಪರ್ಕ ಹೊಂದಿವೆ. ಹಿಂದೆ 2 ಲಕ್ಷ ಜನರ  ದೂರುಗಳನ್ನು ಸ್ವೀಕರಿಸಲಾಗುತ್ತಿತ್ತು. ಆದರೆ ಇದೀಗ 12 ಲಕ್ಷ ಜನರ ಕುಂದುಕೊರತೆಗಳನ್ನು ಪರಿಹರಿಸಲಾಗುತ್ತಿದೆ. ಶೇಕಡ 62ರಷ್ಟಿದ್ದ ಕುಂದುಕೊರತೆಗಳ ಪರಿಹಾರ ಇದೀಗ ಶೇಕಡ 90ರಿಂದ 95ಕ್ಕೆ ಏರಿಕೆಯಾಗಿದೆ.  ಇದೊಂದು ದೊಡ್ಡ ಸಾಧನೆಯಾಗಿದೆ. ಸೂಕ್ಷ್ಮ ಸರ್ಕಾರದ ಕಾರ್ಯವೈಖರಿಗೆ ಇದೊಂದು ಉದಾಹರಣೆಯಾಗಿದೆ.

ಉತ್ತಮ ಆಡಳಿತಕ್ಕಾಗಿ ಮೋದಿ ಅವರು ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಚುನಾಯಿತ ಸರ್ಕಾರವು ನೀತಿಗಳನ್ನು ನಿರ್ಧರಿಸುತ್ತದೆ, ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡುತ್ತದೆ, ಆದರೆ ಅವುಗಳನ್ನು ಕಾರ್ಯಗತಗೊಳಿಸುವುದು ಅಧಿಕಾರಿಗಳ ಕೈಯಲ್ಲಿದೆ. ಅವರು ಸರ್ಕಾರದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಕೆಳಮಟ್ಟದ ಆಡಳಿತಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು. ಸಂವಿಧಾನವು ಅಧಿಕಾರಿಗಳ ಮೇಲೆ ವಿಶೇಷ ನಂಬಿಕೆ ಇಟ್ಟಿದೆ. ಚುನಾಯಿತ ಪ್ರತಿನಿಧಿಗಳನ್ನು 5 ವರ್ಷಗಳ ಕಾಲಕ್ಕೆ ಮಾತ್ರ ಆಯ್ಕೆ ಮಾಡಲಾಗುತ್ತದೆ. 5 ವರ್ಷಗಳ ನಂತರ ಅವರಿಗೆ ಮತ್ತೆ ಅಧಿಕಾರ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಜನರು ನಿರ್ಧರಿಸುತ್ತಾರೆ, ಆದರೆ 25ರಿಂದ 30ರ ಒಳಗಿನ ವಯಸ್ಸಿನಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ನೇಮಕಗೊಂಡ ಸಮಯದಿಂದ ಅವರು ನಿವೃತ್ತಿಯಾಗುವವರೆಗೂ ಸೇವೆಯಲ್ಲಿರುತ್ತಾರೆ. ಸಂವಿಧಾನವು ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ತೋರಿಸುತ್ತದೆ. ಆದ್ದರಿಂದ ಚುನಾಯಿತರ ಹೆಗಲ ಮೇಲೆ ಇರುವ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಹಾಗಾಗಿ, ಅಧಿಕಾರಿಗಳು  ಆಡಳಿತ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಆದರೆ ಇದರಲ್ಲಿ ನನ್ನ ಮತ್ತು ನನ್ನ ಇಲಾಖೆಯ ಪಾತ್ರ ಯಾವುದು, ನನ್ನ ಇಲಾಖೆಯ ಕೊಡುಗೆ ಏನು, ನಾವು ಇಂತಹ ವ್ಯತ್ಯಾಸ ಅರ್ಥ ಮಾಡಿಕೊಂಡರೆ, ಸೂಕ್ತ ಬದಲಾವಣೆಗಳನ್ನು ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಕಾಗದದ ಮೇಲೆ ಬರೆಯಲ್ಪಟ್ಟ ರೀತಿಯಲ್ಲಿ ನಿಯಮಗಳು ಮತ್ತು ಕಾನೂನುಗಳನ್ನು ಓದಬೇಡಿ, ಆದರೆ ಅವುಗಳ ಸ್ಫೂರ್ತಿ ಮತ್ತು ಚೈತನ್ಯವನ್ನು ಅರ್ಥ ಮಾಡಿಕೊಳ್ಳಿ. ನಿಯಮಗಳು ಮತ್ತು ಕಾನೂನುಗಳ ಉದ್ದೇಶ ಮತ್ತು ಚೈತನ್ಯವನ್ನು ಅರ್ಥ ಮಾಡಿಕೊಂಡರೆ, ಸ್ವಲ್ಪ ವಿಭಿನ್ನ ರೀತಿಯಲ್ಲಿ ನಿಯಮಗಳು ಮತ್ತು ನಿಯಮಗಳನ್ನು ನಾವು ಓದುತ್ತಿದ್ದರೆ, ಜನರಿಗೆ ಯಾವುದು ಮತ್ತು ಏನು ಉತ್ತಮ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ

"ನಾನು ಏನು ಮಾಡಬೇಕು ಮತ್ತು ನನಗೆ ಏನು" ಎಂಬುದನ್ನು ಅಧಿಕಾರಿಗಳು ಮರೆತುಬಿಡಬೇಕು, ಉತ್ತಮ ಆಡಳಿತವು "ಸುಧಾರಣೆ ತಾ ಮತ್ತು ಒಳ್ಳೆಯದನ್ನು ಮಾಡು" ಎಂಬ ಪದಗುಚ್ಛದಲ್ಲಿ ಬರುತ್ತದೆ ಎಂಬುದನ್ನು ನಂಬಬೇಕು ಎಂದು ಅಮಿತ್ ಶಾ ತಿಳಿಸಿದರು.

***



(Release ID: 1785313) Visitor Counter : 264