ಉಪರಾಷ್ಟ್ರಪತಿಗಳ ಕಾರ್ಯಾಲಯ

ವಿಶ್ವವಿದ್ಯಾಲಯಗಳು ತಮ್ಮ ಕೋರ್ಸ್‌ಗಳನ್ನು ಉದಯೋನ್ಮುಖ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಹೊಂದಿಸಬೇಕು - ಉಪರಾಷ್ಟ್ರಪತಿ


5ಜಿ, ಎಐ ಮತ್ತು ರೋಬೋಟಿಕ್ಸ್‌ನಂತಹ ಹೊಸ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತಾಂತ್ರಿಕ ಸಂಸ್ಥೆಗಳಿಗೆ ಸಲಹೆ ನೀಡಿದ ಉಪ ರಾಷ್ಟ್ರಪತಿಗಳು

ಭಾರತವು ಜಾಗತಿಕ ಡ್ರೋನ್ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ – ಉಪರಾಷ್ಟ್ರಪತಿ

ಭಾರತೀಯ ಲೇಖಕರು ಮತ್ತು ಭಾರತೀಯ ಭಾಷೆಗಳಲ್ಲಿ ಹೆಚ್ಚಿನ ತಾಂತ್ರಿಕ ಪುಸ್ತಕಗಳ ರಚನೆಗೆ ಕರೆ ನೀಡಿದ ಉಪ ರಾಷ್ಟ್ರಪತಿ 

ನಗರಗಳಲ್ಲಿ ಮಾಲಿನ್ಯದಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಸಂಸ್ಥೆಗಳು ಪರಿಹಾರಗಳನ್ನು ತರಬೇಕೆಂದು ಕೋರಿದ ಉಪ ರಾಷ್ಟ್ರಪತಿ

ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

Posted On: 15 NOV 2021 3:58PM by PIB Bengaluru

ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಪ್ರಸ್ತುತ ಕೋರ್ಸ್‌ಗಳನ್ನು ಪರಿಶೀಲಿಸಿ, ಉದಯೋನ್ಮುಖ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಅವುಗಳನ್ನು ಹೊಂದಿಸಿಕೊಳ್ಳಬೇಕು ಅಥವಾ ರಾಷ್ಟ್ರೀಯ ಅಗತ್ಯಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು ಎಂದು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕರೆ ನೀಡಿದರು.

ಇಂದು ಬೆಂಗಳೂರಿನಲ್ಲಿ ನಡೆದ ʻಪಿಇಎಸ್ ವಿಶ್ವವಿದ್ಯಾಲಯʼದ ಆರನೇ ಘಟಿಕೋತ್ಸವದಲ್ಲಿ ಮಾತನಾಡಿದ ಉಪರಾಷ್ಟ್ರಪತಿಯವರು, 4ನೇ ಕೈಗಾರಿಕಾ ಕ್ರಾಂತಿಯು ನಮ್ಮ ಹೊಸ್ತಿಲಲ್ಲಿದೆ. ಅದರ ಅತ್ಯುತ್ತಮ ಉಪಯೋಗವನ್ನು ಪಡೆಯಲು, ನಮ್ಮ ವಿಶ್ವವಿದ್ಯಾಲಯಗಳು 5ಜಿ ತಂತ್ರಜ್ಞಾನಗಳು, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೋಬೋಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಭವ್ಯ ಇತಿಹಾಸವನ್ನು ಉಲ್ಲೇಖಿಸಿದ ಅವರು, ಭಾರತವನ್ನು ಜ್ಞಾನ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳು ವಹಿಸಬೇಕಾದ ವಿಶೇಷ ಪಾತ್ರವನ್ನು ಒತ್ತಿ ಹೇಳಿದರು. ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮುಕ್ತ ಅವಕಾಶ ಕಲ್ಪಿಸುವ ಸರಕಾರದ ನಿರ್ಧಾರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ʻಡಿಆರ್‌ಡಿಒʼ ಮತ್ತು ʻಇಸ್ರೋʼ ಸಹಯೋಗದೊಂದಿಗೆ ಎರಡು ಉಪಗ್ರಹಗಳನ್ನು ನಿರ್ಮಿಸಿದ್ದಕ್ಕಾಗಿ ಮತ್ತು ಉಡಾವಣೆ ಮಾಡಿದ್ದಕ್ಕಾಗಿ ಪಿಇಎಸ್ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು. "ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮತ್ತು ತಾಂತ್ರಿಕವಾಗಿ ಮುಂಚೂಣಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನಾನು ನಮ್ಮ ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಎರಡು ಉಪಗ್ರಹಗಳ ಉಡಾವಣೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಡಾ. ವಿ. ಸಾಂಬಶಿವ ರಾವ್ ಅವರನ್ನು ಶ್ರೀ ನಾಯ್ಡು ಸನ್ಮಾನಿಸಿದರು.

ಡ್ರೋನ್ ತಂತ್ರಜ್ಞಾನವು ಆರ್ಥಿಕತೆಯ ವಿವಿಧ ವಲಯಗಳಿಗೆ ನೀಡುವ ಅದ್ಭುತ ಪ್ರಯೋಜನಗಳ ಬಗ್ಗೆ ಗಮನ ಸೆಳೆದ ಶ್ರೀ ನಾಯ್ಡು ಅವರು ಹೊಸತನದ ಶೋಧ, ಐಟಿ ಮತ್ತು ಮಿತವ್ಯಯದ ಎಂಜಿನಿಯರಿಂಗ್‌ನಲ್ಲಿ ಸಾಂಪ್ರದಾಯಿಕ ಸಾಮರ್ಥ್ಯ ಹೊಂದಿರುವ ಭಾರತವು ಜಾಗತಿಕ ಡ್ರೋನ್ ಕೇಂದ್ರವಾಗಲು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ, ಈ ವಲಯಕ್ಕೆ ನುರಿತ ಮಾನವ ಶಕ್ತಿಯನ್ನು ಸೃಷ್ಟಿಸಲು ಕರೆ ನೀಡಿದ ಅವರು, ಪಿಇಎಸ್ ವಿಶ್ವವಿದ್ಯಾಲಯವು ಡ್ರೋನ್ ತಂತ್ರಜ್ಞಾನದ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಕ್ರಿಯವಾಗಿ ಯೋಚಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹು-ವಿಷಯಗಳ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. ಆರ್ಥಿಕತೆ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೈಕ್ಷಣಿಕ ಪೇಟೆಂಟ್‌ಗಳಿಗಿಂತಲೂ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಅಡಿಯಲ್ಲಿ ಅನುಷ್ಠಾನಯೋಗ್ಯ ಪೇಟೆಂಟ್‌ಗಳಿಗೆ ಹೆಚ್ಚಿನ ಒತ್ತು ನೀಡುವಂತೆ ವಿಶ್ವವಿದ್ಯಾಲಯಗಳಿಗೆ ಅವರು ಸಲಹೆ ನೀಡಿದರು. 

ವಿದೇಶಿ ಲೇಖಕರು ಪ್ರಕಟಿಸಿದ ಅನೇಕ ತಾಂತ್ರಿಕ ಪುಸ್ತಕಗಳನ್ನು ಭಾರತೀಯ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಬಳಸಲಾಗುತ್ತದೆ ಎಂಬ ವಿಷಯದ ಬಗ್ಗೆ ಗಮನ ಸೆಳೆದ ಅವರು, ಸಮಕಾಲೀನ ವಿಷಯಗಳ ಬಗ್ಗೆ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ರಚಿಸುವಂತೆ ಭಾರತೀಯ ಶಿಕ್ಷಣ ತಜ್ಞರಿಗೆ ಸಲಹೆ ನೀಡಿದರು. "ಭಾರತೀಯ ಲೇಖಕರು ಪುಸ್ತಕಗಳನ್ನು ರಚಿಸಿದ್ದಾದರೆ, ಭಾರತೀಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕೋರ್ಸ್ ವಿಷಯವನ್ನು ಉತ್ತಮವಾಗಿ, ಸಂದರ್ಭೋಚಿತಗೊಳಿಸಬಹುದು. ಇದರಿಂದ ಯುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾರತ, ರೈತರು ಮತ್ತು ಇತರ ಹಿಂದುಳಿದ ವರ್ಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ರಚಿಸಲು ಮತ್ತು ಶೈಕ್ಷಣಿಕ ನಿಯತಕಾಲಿಕೆಗಳ ದೇಶೀಯ ಪ್ರಕಟಣೆಗೆ ಅವರು ಕರೆ ನೀಡಿದರು.

ಸಾಮಾಜಿಕವಾಗಿ ಪ್ರಸ್ತುತವಾದ ಸಂಶೋಧನೆ ಮತ್ತು ತಂತ್ರಜ್ಞಾನಗಳ ಮಹತ್ವವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆದ್ಯತೆಯ ವಿಷಯಗಳ ನಿಟ್ಟಿನಲ್ಲಿ ಕೆಲಸ ಮಾಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದರು. "ಭಾರತೀಯ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ವರದಿಗಳನ್ನು ನಾವು ಆಗಾಗ್ಗೆ ಓದುತ್ತೇವೆ; ಸಮಾಜ, ವಿಶೇಷವಾಗಿ ಕೃಷಿಯಲ್ಲಿ ಎದುರಿಸುತ್ತಿರುವ ಇಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ರೂಪಿಸುವಂತೆ ನಾನು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.

ʻರಾಷ್ಟ್ರೀಯ ಶಿಕ್ಷಣ ನೀತಿ-2020ʼರ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ ನೀಡಿದ ಶ್ರೀ ನಾಯ್ಡು, ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ಹೆಚ್ಚಿನ ತಾಂತ್ರಿಕ ಕೋರ್ಸ್‌ಗಳನ್ನು ಪರಿಚಯಿಸುವಂತೆ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿದರು.

ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಉಪರಾಷ್ಟ್ರಪತಿಯವರು, ವೃತ್ತಿಜೀವನದಲ್ಲಿ 'ಸೇವಾ ಮನೋಭಾವ'ವನ್ನು ಅಳವಡಿಸಿಕೊಳ್ಳುವಂತೆ ಮತ್ತು लोकः समस्ताः सुखिनो भवन्तु (ಇಡೀ ಜಗತ್ತು ಸಂತೋಷವಾಗಿರಲಿ) ಎಂಬ ಪ್ರಾಚೀನ ಭಾರತೀಯ ಮೌಲ್ಯವನ್ನು ಅನುಸರಿಸುವಂತೆ ಮನವಿ ಮಾಡಿದರು. ಸ್ವತಃ ಫಿಟ್ನೆಸ್ ಉತ್ಸಾಹಿಯಾಗಿರುವ ಶ್ರೀ ನಾಯ್ಡು ಅವರು, ಕ್ರೀಡೆ ಅಥವಾ ಯೋಗದಲ್ಲಿ ನಿಯಮಿತವಾಗಿ ಪಾಲ್ಗೊಳ್ಳುವ ಮೂಲಕ ಜಡ ಅಭ್ಯಾಸಗಳನ್ನು ತಪ್ಪಿಸಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೀವನದಲ್ಲಿ ಪ್ರಗತಿಗೆ ದಾರಿ ಮಾಡುವ ಶಿಸ್ತು, ಸಮರ್ಪಣಾಭಾವ ಮತ್ತು ದೃಢ ನಿಶ್ಚಯ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.

ಪಿಇಎಸ್ ವಿಶ್ವವಿದ್ಯಾಲಯವು ತನ್ನ ಕಿರು ಪ್ರಯಾಣದಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ವಿದ್ಯಾರ್ಥಿಗಳಿಗೆ ಉತ್ಕೃಷ್ಟತೆಯ ಕಡೆಗೆ ಮಾರ್ಗದರ್ಶನ ನೀಡಿದ ಕುಲಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ಅವರನ್ನು ಅಭಿನಂದಿಸಿದರು.

ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ಶ್ರೀ ಬಿ.ಎ. ಬಸವರಾಜ, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ದೊರೆಸ್ವಾಮಿ, ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜೆ. ಸೂರ್ಯ ಪ್ರಸಾದ್, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಬೋಧಕ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಪ ರಾಷ್ಟ್ರಪತಿಗಳ ಭಾಷಣದ ಪೂರ್ಣ ಪಠ್ಯ ಇಲ್ಲಿದೆ:-

ಸಹೋದರಿಯರೇ ಮತ್ತು ಸಹೋದರರೇ,

ಪಿಇಎಸ್ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವಕ್ಕಾಗಿ ಇಂದು ನಿಮ್ಮೊಂದಿಗೆ ಇಲ್ಲಿರುವುದು ನನಗೆ ತುಂಬಾ ಸಂತಸ ತಂದಿದೆ.

ತಮ್ಮ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಎಲ್ಲಾ ಪದವೀಧರ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ಎಲ್ಲಾ ಶಿಕ್ಷಕರು, ಪೋಷಕರು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನೂ ನಾನು ಅಭಿನಂದಿಸುತ್ತೇನೆ. ಏಕೆಂದರೆ, ಅವರ ಕಠಿಣ ಪರಿಶ್ರಮ ಮತ್ತು ಬೆಂಬಲವು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಈ ಪ್ರಮುಖ ಶೈಕ್ಷಣಿಕ ಹೆಗ್ಗುರುತನ್ನು ಯಶಸ್ವಿಯಾಗಿ ತಲುಪಲು ಅನುವುಮಾಡಿಕೊಟ್ಟಿದೆ.

"ನೈಜ ಜನ ಸೇವಕರಾಗಿ ಬದಲಾಗುವುದೇ ವಿಶ್ವವಿದ್ಯಾಲಯ ಶಿಕ್ಷಣದ ಗುರಿ" ಎಂಬ ಮಹಾತ್ಮಾ ಗಾಂಧಿ ಅವರ ಮಾತುಗಳನ್ನು ಈಗ ಪದವಿ ಗಳಿಸಿರುವ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.

ಇಂದಿನ ದಿನದಲ್ಲಿ ಅತ್ಯಗತ್ಯವಾಗಿರುವುದು ಈ 'ಸೇವಾ ಮನೋಭಾವ'ವೇ. ನಮ್ಮ ಪ್ರಾಚೀನ ಋಷಿವರ್ಯರು - लोकः समस्ताः सुखिनो भवन्तु - ಇಡೀ ಜಗತ್ತು ಸಂತೋಷವಾಗಿರಲಿ ಎಂದು ಹೇಳಿದ್ದಾರೆ. ಈ ಮಹಾನ್ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಜೀವನದಲ್ಲಿ ಮುಂದುವರಿಯಬೇಕು.

ಪ್ರಿಯ ವಿದ್ಯಾರ್ಥಿಗಳೇ,

ಶಿಕ್ಷಣ ಕ್ಷೇತ್ರದಲ್ಲಿ ಭಾರತ ಭವ್ಯ ಇತಿಹಾಸವನ್ನು ಹೊಂದಿದೆ. ನಮ್ಮ ಪ್ರಾಚೀನ ತಕ್ಷಶಿಲಾ ಮತ್ತು ನಳಂದಾ ವಿಶ್ವವಿದ್ಯಾಲಯಗಳು ನಾನಾ ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿದವು ಮತ್ತು ನಳಂದಾ ವಿಶ್ವವಿದ್ಯಾಲಯದಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಅಡಿಯಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ವಿಶ್ವದ ಸಂಸ್ಕೃತಿಗೆ ಯೋಗ ಮತ್ತು ಧ್ಯಾನವು ಭಾರತದ ಅಮೂಲ್ಯ ಕೊಡುಗೆಗಳಾಗಿವೆ, ವಿಶ್ವಸಂಸ್ಥೆಯು ಪ್ರತಿ ವರ್ಷದ ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಆಚರಿಸುತ್ತದೆ.

ಇಂದು, ಜ್ಞಾನ ಆಧರಿತ ಆರ್ಥಿಕತೆ ಮತ್ತು ಅತ್ಯಾಧುನಿಕ ತಾಂತ್ರಿಕ ಆವಿಷ್ಕಾರಗಳಿಂದ ಪ್ರೇರಿತವಾದ 4ನೇ ಕೈಗಾರಿಕಾ ಕ್ರಾಂತಿಯು ನಮ್ಮ ಹೊಸ್ತಿಲಲ್ಲಿದೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ನಮ್ಮ ಯುವಕರನ್ನು 21ನೇ ಶತಮಾನದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಬೇಕು.

ರಾಷ್ಟೀಯ ಶಿಕ್ಷಣ ನೀತಿ-2020 (ಎನ್‌ಇಪಿ) ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಜ್ಞಾನ ಆಧಾರಿತ ಆರ್ಥಿಕತೆಯ ಸವಾಲುಗಳತ್ತ ಪರಿವರ್ತಿಸುವ ಮತ್ತು ಮರುರೂಪಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗಿದೆ. 5ಜಿ ಆಧಾರಿತ ತಂತ್ರಜ್ಞಾನಗಳಂತಹ ಉದಯೋನ್ಮುಖ ಜಾಗತಿಕ ಬೆಳವಣಿಗೆಗಳೊಂದಿಗೆ ನಮ್ಮ ವಿಶ್ವವಿದ್ಯಾಲಯದ ತರಗತಿಗಳನ್ನು ಹೊಂದಿಸುವ ತುರ್ತು ಅಗತ್ಯವಿದೆ. ಏಕೆಂದರೆ, ಇವು ಕೃಷಿ, ವೈದ್ಯಕೀಯ, ಆಡಳಿತಾತ್ಮಕ, ವಾಣಿಜ್ಯ ಮತ್ತು ಕೈಗಾರಿಕಾ ನಿರ್ವಹಣೆ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಅನ್ವಯಿಕೆ ಹೊಂದಿರುತ್ತವೆ. 

ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಷಿನ್‌ ಲರ್ನಿಂಗ್‌, 5ಜಿ ತಂತ್ರಜ್ಞಾನಗಳು, ರೋಬೋಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನದಂತಹ ಆಧುನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪಿಇಎಸ್ ವಿಶ್ವವಿದ್ಯಾಲಯ ಗಮನ ಹರಿಸಿದೆ ಎಂದು ತಿಳಿದು ನನಗೆ ಸಂತಸವಾಗಿದೆ.

ʻಡಿಆರ್‌ಡಿಒʼ ಮತ್ತು ʻಇಸ್ರೋʼ ಸಹಯೋಗದೊಂದಿಗೆ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಎರಡು ಉಪಗ್ರಹಗಳನ್ನು ನಿರ್ಮಿಸಿ ಉಡಾವಣೆ ಮಾಡಿದ್ದು ಪ್ರಶಂಸನೀಯ. ಐಐಟಿ ಬಾಂಬೆ ಬಳಿಕ ಈ ಅದ್ಭುತ ಸಾಧನೆಯನ್ನು ಮಾಡಿದ ದೇಶದ ಎರಡನೇ ವಿಶ್ವವಿದ್ಯಾಲಯವೆಂದರೆ ಅದು ಪಿಇಎಸ್ ವಿಶ್ವವಿದ್ಯಾಲಯ. ಇದು ಅತ್ಯಾಧುನಿಕ ಸಂಶೋಧನೆಯಲ್ಲಿ ನಿಮ್ಮ ಅದ್ವಿತೀಯ ಸಾಧನೆಯನ್ನು ಸೂಚಿಸುತ್ತದೆ.

ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ಈ ಅದ್ಭುತ ಕೊಡುಗೆಗಾಗಿ ಪ್ರೊ. ಎಂ.ಆರ್. ದೊರೆಸ್ವಾಮಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ/ವಿದ್ಯಾರ್ಥಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಬಾಹ್ಯಾಕಾಶ ವಲಯದಲ್ಲಿ ದೂರಗಾಮಿ ಸುಧಾರಣೆಗಳನ್ನು ತಂದಿದೆ. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವಂತೆ ಮತ್ತು ತಾಂತ್ರಿಕವಾಗಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಲು ನಮ್ಮ ಖಾಸಗಿ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು ನಾನು ಈ ಮೂಲಕ ಒತ್ತಾಯಿಸುತ್ತೇನೆ.

ಸ್ನೇಹಿತರೇ,

ʻಡ್ರೋನ್ʼ ತಂತ್ರಜ್ಞಾನವು ಮತ್ತೊಂದು ಉದಯೋನ್ಮುಖ ಕ್ಷೇತ್ರವಾಗಿದ್ದು, ಕೃಷಿ, ಕಣ್ಗಾವಲು, ಸಾರಿಗೆ, ರಕ್ಷಣೆ ಮತ್ತು ಕಾನೂನು ಜಾರಿ ಸೇರಿದಂತೆ ಆರ್ಥಿಕತೆಯ ಬಹುತೇಕ ಎಲ್ಲಾ ವಲಯಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಡ್ರೋನ್ ಸೇವೆಗಳ ಉದ್ಯಮವು ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ನಾವಿನ್ಯ, ಐಟಿ ಮತ್ತು ಮಿತವ್ಯಯದ ಎಂಜಿನಿಯರಿಂಗ್‌ನಲ್ಲಿ ತನ್ನ ಸಾಂಪ್ರದಾಯಿಕ ಸಾಮರ್ಥ್ಯಗಳನ್ನು ಹೊಂದಿರುವ ಭಾರತವು ಮುಂಬರುವ ದಶಕದಲ್ಲಿ ಜಾಗತಿಕ ಡ್ರೋನ್ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಲಯಕ್ಕೆ ನುರಿತ ಮಾನವ ಶಕ್ತಿಯನ್ನು ಸೃಷ್ಟಿಸುವತ್ತ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಪಿಇಎಸ್ ವಿಶ್ವವಿದ್ಯಾಲಯವು ಡ್ರೋನ್ ತಂತ್ರಜ್ಞಾನದ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಕ್ರಿಯವಾಗಿ ಯೋಚಿಸುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ವಾಸ್ತವವಾಗಿ, ನಮ್ಮ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಅಗತ್ಯಗಳಿಗೆ ಸ್ಪಂದಿಸಬೇಕು ಮತ್ತು ಅವು ತಮ್ಮ ಅಸ್ತಿತ್ವದಲ್ಲಿರುವ ಕೋರ್ಸ್ ಗಳನ್ನು ಉದಯೋನ್ಮುಖ ಜಾಗತಿಕ ಹೊಸ ಪ್ರವೃತ್ತಿಗಳಿಗೆ ಹೊಂದಿಸಬೇಕು ಅಥವಾ ಆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು.

21ನೇ ಶತಮಾನದಲ್ಲಿ, ಜಾಗತಿಕ ಆರ್ಥಿಕತೆಯ ಮೇಲೆ ಜ್ಞಾನ ಸಂಬಂಧಿತ ಚಟುವಟಿಕೆಗಳ ಪ್ರಾಬಲ್ಯ ಹೆಚ್ಚಾಗಿದೆ. ಭಾರತವು 2050ರ ವೇಳೆಗೆ ಬಹು-ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಇದರಲ್ಲಿ ಕನಿಷ್ಠ ಶೇ.50ರಷ್ಟು ಸಾಧನೆಯು ಜ್ಞಾನ ಸಂಬಂಧಿತ ಚಟುವಟಿಕೆಗಳು ಮತ್ತು ಕೌಶಲ್ಯಗಳಿಂದ ಆಗಬೇಕೆಂಬ ಗುರಿಯನ್ನು ಎನ್‌ಇಪಿ-2020 ಹೊಂದಿದೆ. ಭಾರತವನ್ನು ಜ್ಞಾನ ಶಕ್ತಿಯಾಗಿ ಪರಿವರ್ತಿಸುವಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳ ಪಾತ್ರ ವಿಶೇಷವಾಗಿದೆ. 

ಪಿಇಎಸ್ ವಿಶ್ವವಿದ್ಯಾಲಯವು ದೃಢವಾದ ಮತ್ತು ಬಲಿಷ್ಠ ಸಂಶೋಧನಾ ಸಂಸ್ಕೃತಿಯನ್ನು ನಿರ್ಮಿಸಿದೆ. ಐದು ವರ್ಷಗಳ ಅಲ್ಪಾವಧಿಯಲ್ಲಿ, 600ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗಿದೆ ಮತ್ತು ವಿಶ್ವವಿದ್ಯಾಲಯದಿಂದ ಒಟ್ಟು 24 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಇದು ಶ್ಲಾಘನೀಯ ವಿಷಯ. 

ನಮ್ಮ ವಿಶ್ವವಿದ್ಯಾಲಯಗಳು ಆರ್ಥಿಕತೆ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಶೈಕ್ಷಣಿಕ ಪೇಟೆಂಟ್‌ಗಳಿಗಿಂತಲೂ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಅಡಿಯಲ್ಲಿ ಅನುಷ್ಠಾನಯೋಗ್ಯ ಪೇಟೆಂಟ್‌ಗಳಿಗೆ ಹೆಚ್ಚು ಒತ್ತು ನೀಡುವಂತೆ ನಾನು ಸೂಚಿಸಲು ಬಯಸುತ್ತೇನೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರತವು ತುರ್ತಾಗಿ ಬಹು-ವಿಷಯಗಳ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಮತ್ತು ಉತ್ತಮ ಸಂಶೋಧನಾ ಫಲಿತಾಂಶಗಳಿಗಾಗಿ ನಾವು ಉದ್ಯಮ-ಸಂಸ್ಥೆಯ ಸಂಪರ್ಕಗಳನ್ನು ಬಲಪಡಿಸಬೇಕು.

ಭಾರತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಳಸುವ ಅನೇಕ ತಾಂತ್ರಿಕ ಪುಸ್ತಕಗಳನ್ನು ವಿದೇಶಿ ಲೇಖಕರು ಪ್ರಕಟಿಸಿರುವುದನ್ನು ನಾನು ಕಂಡಿದ್ದೇನೆ. ನಮ್ಮ ದೇಶದ ಶಿಕ್ಷಣ ತಜ್ಞರೇ ಸಮಕಾಲೀನ ವಿಷಯಗಳ ಬಗ್ಗೆ ಜಾಗತಿಕ ಮಾನದಂಡಗಳ ಪುಸ್ತಕಗಳನ್ನು ರಚಿಸುವ ಮೂಲಕ ಜ್ಞಾನ ಆರ್ಥಿಕತೆಯನ್ನು ಉತ್ತೇಜಿಸಿದರೆ ಒಳ್ಳೆಯದು. ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ, ಭಾರತೀಯ ಲೇಖಕರು ಪುಸ್ತಕಗಳನ್ನು ರಚಿಸಿದರೆ ಭಾರತೀಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕೋರ್ಸ್ ವಿಷಯವನ್ನು ಉತ್ತಮವಾಗಿ ಸಂದರ್ಭೋಚಿತಗೊಳಿಸಬಹುದು. ಗ್ರಾಮೀಣ ಭಾರತ, ರೈತರು ಮತ್ತು ಸಮಾಜದ ಇತರ ಹಿಂದುಳಿದ ಗುಂಪುಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗಿರುವುದರಿಂದ ಯುವ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗುತ್ತದೆ. ನಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ರಚಿಸಲು ನಾವು ಪ್ರಯತ್ನಿಸಬೇಕು.

ಅದೇ ರೀತಿ, ಶೈಕ್ಷಣಿಕ ನಿಯತಕಾಲಿಕೆಗಳನ್ನೂ ಸ್ಥಳೀಯವಾಗಿಯೇ ಪ್ರಕಟಣೆ ಮಾಡಬೇಕು. ಇದರಿಂದ ಈ ದೇಶದಲ್ಲಿ ಸೃಷ್ಟಿಯಾದ ಜ್ಞಾನದ ಕೃತಿಸ್ವಾಮ್ಯ ಮತ್ತು ಮಾಲೀಕತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ, ಇಲ್ಲದಿದ್ದರೆ ನಮ್ಮ ಸಂಶೋಧನಾ ಪ್ರಬಂಧಗಳನ್ನು ಪ್ರಕಟವಾಗುವ ಅಂತರರಾಷ್ಟ್ರೀಯ ನಿಯತಕಾಲಿಕೆಗಳಿಗೆ ಇವುಗಳ ವರ್ಗಾವಣೆಯಾಗುವ ಸಾಧ್ಯತೆಯಿದೆ.

ಪ್ರಿಯ ಸ್ನೇಹಿತರೇ,

ಸಾಮಾಜಿಕವಾಗಿ ಪ್ರಸ್ತುತವೆನಿಸುವ ಸಂಶೋಧನೆ ಮತ್ತು ತಂತ್ರಜ್ಞಾನಗಳು ಇಂದಿನ ತುರ್ತು ಅಗತ್ಯವಾಗಿವೆ. ಉತ್ಕೃಷ್ಟತೆಯತ್ತ ತಮ್ಮ ಪ್ರಯಾಣದಲ್ಲಿ, ವಿಶ್ವವಿದ್ಯಾಲಯಗಳು ರಾಷ್ಟ್ರೀಯವಾಗಿ ಪ್ರಸ್ತುತವಾಗಿರುವ ಮತ್ತು ಜಾಗತಿಕವಾಗಿ ಸೂಕ್ಷ್ಮವಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ, ಅಂತಹ ಎರಡು ವಿಷಯಗಳು ಜಾಗತಿಕ ಗಮನವನ್ನು ಒತ್ತಾಯಿಸುತ್ತಿವೆ, ಅವುಗಳೆಂದರೆ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ. ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳು ಜಾಗತಿಕವಾಗಿ ಆದ್ಯತೆ ನೀಡಿದ ಈ ವಿಷಯಗಳಲ್ಲಿ ಕೈಜೋಡಿಸಬೇಕಾದ ಬಾಧ್ಯತೆಯನ್ನು ಹೊಂದಿವೆ. ಭಾರತೀಯ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ವರದಿಗಳನ್ನು ನಾವು ಆಗಾಗ್ಗೆ ಓದುತ್ತೇವೆ; ಸಮಾಜ ಎದುರಿಸುತ್ತಿರುವ ಇಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ರೂಪಿಸುವಂತೆ ನಾನು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ.

ಪಿಇಎಸ್ ವಿಶ್ವವಿದ್ಯಾಲಯವು ರಾಜ್ಯ ಮತ್ತು ದೇಶವ್ಯಾಪ್ತಿಯಾಗಿ ವಿವಿಧ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿದೆ ಎಂದು ನನಗೆ ತಿಳಿಯಿತು. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ 40ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ದತ್ತು ಪಡೆದಿದ್ದೀರಿ. ಈ ವಿಶ್ವವಿದ್ಯಾಲಯವು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವುದು, ಶಾಲೆ ಬಿಟ್ಟ ಮಕ್ಕಳ ಕೌಶಲ್ಯ ತರಬೇತಿ ಮತ್ತು ಕೋವಿಡ್ ಪರಿಹಾರ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ ಎಂದು ನಾನು ಕೇಳಲ್ಪಟ್ಟೆ. ಇದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು. 

ನನ್ನ ಪ್ರೀತಿಯ ಯುವ ಸ್ನೇಹಿತರೇ,

ನೀವು ಶೈಕ್ಷಣಿಕ ಉತ್ಕೃಷ್ಟತೆಯ ಹಾದಿಯಲ್ಲಿ ಸಾಗುವಾಗ, ಯೋಗ ಅಥವಾ ಸೈಕ್ಲಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯ. ನೀವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಜಡ ಅಭ್ಯಾಸಗಳು ಮತ್ತು ಜಂಕ್‌ಫುಡ್ ನಂತಹ ಅನಾರೋಗ್ಯಕರ ಆಹಾರವನ್ನು ತ್ಯಜಿಸಬೇಕು. ನಮ್ಮ ಪೂರ್ವಜರು ನಮ್ಮ ಹವಾಮಾನ ಮತ್ತು ದೈಹಿಕ ಅಗತ್ಯಗಳಿಗೆ ಅನುಗುಣವಾಗಿ ನಮಗೆ ಸಮೃದ್ಧವಾದ ವಿವಿಧ ಆಹಾರಗಳನ್ನು ಶಿಫಾರಸು ಮಾಡಿದ್ದಾರೆ. ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ನಾವು ಯಾವಾಗಲೂ ಸರಿಯಾಗಿ ಬೇಯಿಸಿದ ಸಾಂಪ್ರದಾಯಿಕ ಆಹಾರವನ್ನೇ ಸೇವಿಸಲು ಆದ್ಯತೆ ನೀಡಬೇಕು. 

ಪ್ರಿಯ ವಿದ್ಯಾರ್ಥಿಗಳೇ, 

ಜೀವನದಲ್ಲಿ ಪ್ರಗತಿ ಸಾಧಿಸಲು ಶಿಸ್ತು, ಸಮರ್ಪಣೆ ಮತ್ತು ದೃಢನಿರ್ಧಾರದಂತಹ ಗುಣಗಳು ಬಹಳ ಮುಖ್ಯ ಎಂಬುದನ್ನು ಸದಾ ನೆನಪಿಡಿ. ದೊಡ್ಡ ಕನಸು ಕಾಣಿ, ದೊಡ್ಡ ಗುರಿಯನ್ನು ಹೊಂದಿರಿ ಮತ್ತು ಕಷ್ಟಪಟ್ಟು ಕೆಲಸ ಮಾಡಿ - ಇದು ಯಶಸ್ಸಿಗೆ ನನ್ನ ಮಂತ್ರ.

ಚಾನ್ಸಲರ್ ಪ್ರೊ. ಎಂ.ಆರ್. ದೊರೆಸ್ವಾಮಿ ಅವರ ಜ್ಞಾನದೀವಿಗೆಯ ಮಾರ್ಗದರ್ಶಕತ್ವದಲ್ಲಿ ಪಿಇಎಸ್ ವಿಶ್ವವಿದ್ಯಾಲಯವು ಉತ್ಕೃಷ್ಟತೆಯತ್ತ ತನ್ನ ಪ್ರಯಾಣದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿರುವುದು ಸಂತೋಷದ ವಿಷಯ. 

ಅವರ ಶ್ರೇಷ್ಠತೆಯನ್ನು ಗುರುತಿಸಿ, ಕರ್ನಾಟಕ ಸರಕಾರವು ಪ್ರೊ. ದೊರೆಸ್ವಾಮಿ ಅವರನ್ನು ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಲು ಆಹ್ವಾನಿಸಿತು ಮತ್ತು ಅವರು ಸರಕಾರಕ್ಕೆ ನೀಡಿದ 18 ಶಿಫಾರಸುಗಳು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ರೂಪಿಸಲಾದ ದೃಢವಾದ ಕ್ರಿಯಾ ಯೋಜನೆಗೆ ಆಧಾರವಾಗಿವೆ ಎಂದು ಕೇಳಲ್ಪಟ್ಟೆ. 

ಪಿಇಎಸ್ ವಿಶ್ವವಿದ್ಯಾಲಯವು ಮುಂಬರುವ ವರ್ಷಗಳಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯ ಹೊಸ ಎತ್ತರವನ್ನು ಏರಲಿದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯತ್ತ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಆಶಿಸುತ್ತೇನೆ.

ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿಪರ ಜೀವನದಲ್ಲಿ ಉತ್ಕೃಷ್ಟತೆಯ ಅನ್ವೇಷಣೆಯಲ್ಲಿ ಎತ್ತರೆತ್ತರಕ್ಕೆ ಏರುವಂತೆ ಹಾರೈಸಲು ನನಗೆ ಬಹಳ ಸಂತಸವಾಗುತ್ತದೆ. 

ಜೈ ಹಿಂದ್!

***



(Release ID: 1772101) Visitor Counter : 247