ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದಲ್ಲಿ ಸ್ವಾಮಿತ್ವ ಯೋಜನೆಯ ಫಲಾನುಭವಿಗಳ ಜೊತೆ ಸಂವಾದದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 06 OCT 2021 3:46PM by PIB Bengaluru

ಸ್ವಾಮಿತ್ವ ಯೋಜನೆಯು ಗ್ರಾಮಗಳಲ್ಲಿ ಉಂಟು ಮಾಡಿರುವ ನಂಬಿಕೆ ಮತ್ತು ವಿಶ್ವಾಸ ಫಲಾನುಭವಿಗಳ ಜೊತೆಗಿನ ಸಂವಾದದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ ಮತ್ತು ಅದನ್ನು ನಾನು ಇಲ್ಲಿ ಕೂಡಾ ಕಾಣುತ್ತಿದ್ದೇನೆ. ನೀವು ನಿಮ್ಮ ಬಿದಿರಿನ ಕುರ್ಚಿಗಳನ್ನು ತೋರಿಸಿದಿರಿ ಆದರೆ ನನ್ನ ಕಣ್ಣುಗಳು ಜನರ ಉತ್ಸಾಹದ ಮೇಲೆ ನೆಟ್ಟಿವೆ. ಜನತೆಯ ಇಷ್ಟೊಂದು ಪ್ರೀತಿ ಮತ್ತು ಆಶೀರ್ವಾದಗಳಿಂದಾಗಿ, ನನಗೆ ಈ ಯೋಜನೆಯು ಜನರಿಗೆ ನೀಡುತ್ತಿರುವ ಕಲ್ಯಾಣ ಪ್ರಯೋಜನಗಳನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ನನ್ನೊಂದಿಗೆ  ಸಂವಾದಿಸಿದ  ಸಹೋದ್ಯೋಗಿಗಳು ಬಹಳ ವಿವರವಾಗಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಈ ಯೋಜನೆ ಬಹಳ ಬಲಶಾಲಿ ಶಕ್ತಿಯಾಗಿ ಮೂಡಿ ಬರುತ್ತಿರುವುದನ್ನು ತೋರಿಸಿದೆ. ಸ್ವಾಮಿತ್ವ ಯೋಜನೆ ಕಾರ್ಯಾರಂಭದ ಬಳಿಕ ಜನರಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಸುಲಭವಾಗಿದೆ.

ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ, ಶ್ರೀ ನರೇಂದ್ರ ಸಿಂಗ್ ತೋಮರ್ ಜೀ, ವೀರೇಂದ್ರ ಕುಮಾರ್ ಜೀ, ಧರ್ಮೇಂದ್ರ ಪ್ರಧಾನ್ ಜೀ, ಜ್ಯೋತಿರಾದಿತ್ಯ ಸಿಂಧ್ಯಾ ಜೀ, ಪ್ರಹ್ಲಾದ್ ಸಿಂಗ್ ಪಟೇಲ್ ಜೀ, ಫಗ್ಗಾನ್ ಸಿಂಗ್ ಕುಲಸ್ಥೇ ಜೀ, ಕಪಿಲ್ ಮೋರೇಶ್ವರ್ ಪಾಟೀಲ್ ಜೀ, ಎಲ್. ಮುರುಗನ್ ಜೀ, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೀ, ಸಚಿವರೇ, ಸಂಸದರೇ ಮತ್ತು ಮಧ್ಯಪ್ರದೇಶದ ಶಾಸಕರೇ, ಇತರ ಗಣ್ಯರೇ ಮತ್ತು ಹದ್ರಾ ಸಹಿತ ಮಧ್ಯಪ್ರದೇಶದ ವಿವಿಧ ಭಾಗಗಳ ಸಾವಿರಾರು ಗ್ರಾಮಗಳಿಂದ ಭಾಗವಹಿಸಿರುವ ಸಹೋದರರೇ ಹಾಗು ಸಹೋದರಿಯರೇ

ಮೊದಲಿಗೆ ಕಮಲ್ ಜೀ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹಾರೈಸುತ್ತೇನೆ. ನಾವು ಟಿ.ವಿ.ಗಳಲ್ಲಿ ನೋಡುವಾಗ (ಜಾಹೀರಾತುಗಳಲ್ಲಿ) ಮಧ್ಯಪ್ರದೇಶ ಬಹಳ ಅದ್ಭುತ. ಮಧ್ಯಪ್ರದೇಶ ಅದ್ಭುತ ಮಾತ್ರವಲ್ಲ, ಅದು ದೇಶದ ಹೆಮ್ಮೆ. ಮಧ್ಯ ಪ್ರದೇಶಕ್ಕೆ ಬೆಳವಣಿಗೆಯ ವೇಗ ಇದೆ ಮತ್ತು ಅಭಿವೃದ್ಧಿಯ ಆಶಯವೂ ಇದೆ. ಜನರ ಹಿತಾಸಕ್ತಿಗಾಗಿ ಯೋಜನೆಯನ್ನು ರೂಪಿಸಿದಾಕ್ಷಣ ಮಧ್ಯ ಪ್ರದೇಶವು ಅದನ್ನು ಆದಷ್ಟು ಬೇಗ ಜಾರಿಗೆ ತರಲು ಕಠಿಣ ಪರಿಶ್ರಮವನ್ನು ಹಾಕುತ್ತದೆ. ನಾನಿದನ್ನು ಕೇಳುವಾಗ ಮತ್ತು ನೋಡುವಾಗ, ನಾನು ಬಹಳ ಸಂತೋಷಪಡುತ್ತೇನೆ ಮತ್ತು ನನ್ನ ಸಹೋದ್ಯೋಗಿಗಳು ಇಂತಹ ಬಹಳ ದೊಡ್ಡ ಕೆಲಸವನ್ನು ಮಾಡುತ್ತಿರುವುದು ನನಗೆ ಬಹಳ ತೃಪ್ತಿಯ ಸಂಗತಿಯಾಗಿದೆ.

ಸ್ನೇಹಿತರೇ,

ಆರಂಭಿಕ ಹಂತದಲ್ಲಿ ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನಾವನ್ನು ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಹರ್ಯಾಣಾ, ಪಂಜಾಬ್, ಕರ್ನಾಟಕ ಮತ್ತು ರಾಜಸ್ಥಾನಗಳ ಕೆಲವು ಗ್ರಾಮಗಳಲಿ ಅನುಷ್ಟಾನಿಸಲಾಯಿತು.ಈ ರಾಜ್ಯಗಳ ಗ್ರಾಮಗಳಲ್ಲಿ ವಾಸಿಸುವ 22 ಲಕ್ಷ ಕುಟುಂಬಗಳಿಗೆ  ಆಸ್ತಿ ಕಾರ್ಡುಗಳು ತಯಾರಾಗಿವೆ. ಈಗ ಇದನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುತ್ತಿದೆ. ಒಂದು ರೀತಿಯಲ್ಲಿ ಇದೊಂದು ಪೈಲೆಟ್ ಯೋಜನೆ, ಆದುದರಿಂದ ಭವಿಷ್ಯದಲ್ಲಿ ಈ ಯೋಜನೆಯಲ್ಲಿ ಯಾವುದೇ ಕುಂದು ಕೊರತೆಗಳಿರಲಾರವು. ಈಗ ಇದನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ಎಂದಿನಂತೆ ಮಧ್ಯ ಪ್ರದೇಶವು  ಇದನ್ನು ತ್ವರಿತಗತಿಯಿಂದ ಅನುಷ್ಟಾನಕ್ಕೆ ತಂದಿದೆ ಮತ್ತು ಅದು ಅಭಿನಂದನೆಗೂ ಅರ್ಹವಾಗಿದೆ. ಇಂದು ಮಧ್ಯ ಪ್ರದೇಶದ 3,000 ಗ್ರಾಮಗಳ 1.70 ಲಕ್ಷಕ್ಕೂ ಅಧಿಕ  ಕುಟುಂಬಗಳು ಆಸ್ತಿ ಕಾರ್ಡನ್ನು ಪಡೆಯುತ್ತಿವೆ. ಅವುಗಳು ಅವರಿಗೆ ಸಮೃದ್ಧಿಯ ವಾಹನಗಳಾಗಲಿವೆ. ಈ ಜನರು ತಮ್ಮ ಆಸ್ತಿ ಕಾರ್ಡ್ ಗಳನ್ನು ಡಿಜಿ ಲಾಕರ್ ಮೂಲಕ ತಮ್ಮ ಮೊಬೈಲ್ ಫೋನ್ ಗಳಿಗೆ ಡೌನ್ ಲೋಡ್  ಮಾಡಬಹುದು. ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಮಾಡಿದವರಿಗೆ ಮತ್ತು ಪೂರ್ಣ ಹೃದಯದಿಂದ ಕೆಲಸ ಮಾಡಿದವರಿಗೆ  ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಲ್ಲಾ ಫಲಾನುಭವಿಗಳಿಗೆ ನಾನು ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಹೇಳುತ್ತೇನೆ. ಮಧ್ಯ ಪ್ರದೇಶ ಪ್ರಗತಿ ಸಾಧಿಸುತ್ತಿರುವ ವೇಗ ನೋಡಿದರೆ ರಾಜ್ಯದಲ್ಲಿಯ ಎಲ್ಲಾ ಗ್ರಾಮೀಣ ಕುಟುಂಬಗಳು ಶೀಘ್ರವೇ ಆಸ್ತಿ ಕಾರ್ಡುಗಳನ್ನು ಪಡೆಯುತ್ತವೆ ಎಂದು ನಾನು ನಂಬುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಭಾರತದ ಆತ್ಮ ಗ್ರಾಮಗಳಲ್ಲಿದೆ ಎಂಬ ಹೇಳಿಕೆಯನ್ನು ನಾವು ಆಗಾಗ ಕೇಳುತ್ತೇವೆ. ಆದರೆ ಸ್ವಾತಂತ್ರ್ಯದ ದಶಕಗಳ ಬಳಿಕವೂ ಭಾರತೀಯ ಹಳ್ಳಿಗಳ, ಗ್ರಾಮಗಳ ಭಾರೀ ಸಾಮರ್ಥ್ಯವನ್ನು ಕಟ್ಟಿ ಹಾಕಲಾಗಿದೆ. ಗ್ರಾಮಸ್ಥರಿಗೆ ತಮ್ಮ ಗ್ರಾಮಗಳ ಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸಲು ಸಾಧ್ಯವಾಗಿಲ್ಲ. ಅವರ ಭೂಮಿ, ಮನೆಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಬದಲು ಅವರು ಭೂ ವಿವಾದ ಮತ್ತು ಮನೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಮತ್ತು ನ್ಯಾಯಾಲಯದಲ್ಲಿ ಮೊಕ್ಕದ್ದಮೆಗಳನ್ನು ಹಾಗು ಅನಧಿಕೃತ ಒತ್ತುವರಿಯನ್ನೂ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಇದು ಹಣಕಾಸು ಮತ್ತು ಸಮಯದ ಅಪವ್ಯಯ. ಮತ್ತು ಅದು ಈ ದಿನಮಾನಗಳ ಕಳವಳ ಅಲ್ಲ. ಗಾಂಧೀಜಿ ಕೂಡಾ ತಮ್ಮ ಕಾಲದಲ್ಲಿ ಈ ಕಳವಳಗಳನ್ನು ವ್ಯಕ್ತಪಡಿಸಿದ್ದರು. ಈ ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮ ಜವಾಬ್ದಾರಿ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ಈ ನಿಟ್ಟಿನಲ್ಲಿ ಕಾರ್ಯನಿರತನಾಗಿದ್ದೇನೆ. ಈ ಸಮಸ್ಯೆಯನ್ನು ನಿಭಾಯಿಸಲು ಗುಜರಾತಿನಲ್ಲಿ ನಾವು ’ಸಮರಸ್ ಗ್ರಾಮ ಪಂಚಾಯತ್’ ಆಂದೋಲನವನ್ನು ಆರಂಭ ಮಾಡಿದೆವು. ಸರಿಯಾದ ಪ್ರಯತ್ನಗಳನ್ನು ಮಾಡಿದರೆ ಇಡೀ ಗ್ರಾಮ ಅದನ್ನು ಮುಂದುವರೆಸಿಕೊಂಡು ಹೋಗುತ್ತದೆ. ಸ್ವಲ್ಪ ಸಮಯದ ಹಿಂದೆ ಶಿವರಾಜ್ ಜೀ ಅವರು ನಾನು 20 ವರ್ಷಗಳ ಈ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿರುವುದಾಗಿ ಹೇಳಿದರು. ಶಿವರಾಜ್ ಜೀ ಅವರು ಇದನ್ನು ಪ್ರಸ್ತಾಪಿಸುತ್ತಿರುವಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದುದನ್ನು, ನನ್ನ ಮೊದಲ ದೊಡ್ಡ ಕಾರ್ಯಕ್ರಮ ಗರೀಬ್ ಕಲ್ಯಾಣ ಮೇಳಾವನ್ನು ನೆನಪಿಸಿಕೊಳ್ಳುತ್ತೇನೆ. ಮತ್ತು ಈಗ 20 ವರ್ಷಗಳ ಈ ಕೊನೆಯ ದಿನದವರೆಗೂ ನಾನು ಬಡವರಿಗಾಗಿ ಈ ಕಾರ್ಯಕ್ರಮದ ಜೊತೆ ಸಂಪರ್ಕ ಹೊಂದಿದ್ದೇನೆ. ನನ್ನ ದೇಶದ ಬಡವರಿಗಾಗಿ ಸೇವೆ ಸಲ್ಲಿಸುವ ಅವಕಾಶ ಈಗಲೂ ಮುಂದುವರೆದಿರುವುದು ಒಂದು ದೈವಿಕ ಸಂಕೇತ. ಸ್ವಾಮಿತ್ವ ಯೋಜನೆ ನಿಮ್ಮ ಸಹಭಾಗಿತ್ವದೊಂದಿಗೆ ಗ್ರಾಮ ಸ್ವರಾಜ್ಯಕ್ಕೆ ಉದಾಹರಣೆಯಾಗಲಿದೆ. ಇತ್ತೀಚೆಗೆ ನಮ್ಮ ಹಳ್ಳಿಗಳು, ಗ್ರಾಮಗಳು ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೇಗೆ ಗುರಿ ನಿಗದಿ ಮಾಡಿ ಹೋರಾಟ ಮಾಡಿದವು ಎಂಬುದನ್ನು ನಾವು ನೋಡಿದ್ದೇವೆ. ಗ್ರಾಮಸ್ಥರು ಮಾದರಿಯನ್ನು ನಿರ್ಮಾಣ ಮಾಡಿದ್ದಾರೆ.  ಗ್ರಾಮಸ್ಥರು ಹೊರಗಿನಿಂದ ಬರುತ್ತಿದ್ದವರಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆಗಳನ್ನು ಮಾಡಿದ್ದರು, ಆಹಾರದ ವ್ಯವಸ್ಥೆ ಮಾಡಿದ್ದರು ಮತ್ತು ಲಸಿಕಾಕರಣಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಿದ್ದರು. ಗ್ರಾಮಸ್ಥರ ಅರಿವು, ಜ್ಞಾನ ಬಹಳ ದೊಡ್ಡ ಮಟ್ಟದಲ್ಲಿ ಕೊರೊನಾದಿಂದ ಭಾರತದ ಗ್ರಾಮಗಳನ್ನು ರಕ್ಷಿಸಿತು. ಮತ್ತು ಅದಕ್ಕಾಗಿ ನನ್ನ ದೇಶದ ಎಲ್ಲಾ ಗ್ರಾಮಸ್ಥರು ಅಭಿನಂದನಾರ್ಹರು. ಅವರು ತಮ್ಮದೇ ರೀತಿಯಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸಿದರು, ಜಾಗೃತಿ ಮೂಡಿಸಿದರು, ಮತ್ತು ಬಹಳ ಉತ್ಸಾಹದೊಂದಿಗೆ ಸರಕಾರವನ್ನು ಬೆಂಬಲಿಸಿದರು. ದೇಶವನ್ನು ರಕ್ಷಿಸುವಲ್ಲಿ ಗ್ರಾಮಗಳ ಸಹಾಯವನ್ನು ನಾನೆಂದೂ ಮರೆಯಲಾರೆ.

ಸ್ನೇಹಿತರೇ,

ಜಗತ್ತಿನ ಹಲವು ದೊಡ್ಡ ಸಂಘಟನೆಗಳು ದೇಶದಲ್ಲಿಯ ನಾಗರಿಕರು ಆಸ್ತಿ ಕಾರ್ಡ್ ಹೊಂದಿಲ್ಲದಿದ್ದರೆ ಅವರ ಹಣಕಾಸು ಸಾಮರ್ಥ್ಯ ಬಹಳ ಕಡಿಮೆಯಾಗುತ್ತದೆ  ಮತ್ತು ದುರ್ಬಲವಾಗುತ್ತದೆ  ಎಂದು ಹೇಳುತ್ತವೆ. ಆಸ್ತಿ ಪತ್ರಗಳ ಗೈರು ಹಾಜರಿ ಜಗತ್ತಿನಾದ್ಯಂತ ಇರುವ ಸಮಸ್ಯೆ. ಇದರ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ ಮತ್ತು ಅದು ಅಭಿವೃದ್ಧಿ ಹೊಂದಿದ ದೇಶಗಳಿಗೂ ಬಹಳ ದೊಡ್ಡ ಸವಾಲು.

ಸ್ನೇಹಿತರೇ,

ಶಾಲೆಗಳ ನಿರ್ಮಾಣ, ಆಸ್ಪತ್ರೆಗಳ, ದಾಸ್ತಾನುಗಾರಗಳ, ರಸ್ತೆಗಳ, ಕಾಲುವೆಗಳ,  ಆಹಾರ ಸಂಸ್ಕರಣಾ ಉದ್ಯಮಗಳ ನಿರ್ಮಾಣಕ್ಕೇ ಇರಲಿ ಇಂತಹ ಎಲ್ಲಾ ವ್ಯವಸ್ಥೆಗಳಿಗೂ ಭೂಮಿ ಬೇಕಾಗುತ್ತದೆ. ಮತ್ತು ದಾಖಲೆಗಳು ಸ್ಪಷ್ಟವಾಗಿರದಿದ್ದರೆ, ಇಂತಹ ಅಭಿವೃದ್ಧಿ ಕಾರ್ಯಗಳು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ದೋಷವು ಭಾರತದ ಗ್ರಾಮಗಳ ಅಭಿವೃದ್ಧಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತಿತ್ತು. ಗ್ರಾಮಗಳಲ್ಲಿಯ ಆಸ್ತಿ, ಭೂಮಿ ಮತ್ತು ಮನೆಗಳ ದಾಖಲೆಗಳಿಗೆ ಸಂಬಂಧಿಸಿದ ಈ ಅನಿಶ್ಚಿತತೆಯನ್ನು ಮತ್ತು ಅಪನಂಬಿಕೆಯನ್ನು ಕೊನೆಗಾಣಿಸುವುದು ಬಹಳ ಮುಖ್ಯವಾಗಿತ್ತು, ಆದುದರಿಂದ ಪಿ.ಎಂ. ಸ್ವಾಮಿತ್ವ ಯೋಜನೆಯು ಗ್ರಾಮಗಳಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಶಕ್ತಿಯ ಬಹಳ ದೊಡ್ಡ ಸ್ಥಂಭವಾಗಬಲ್ಲದು. ನಿಮಗೆ ಯಾವುದಾದರೊಂದರ ಮೇಲೆ ಹಕ್ಕು ಇದ್ದರೆ ಅಲ್ಲಿ ಎಷ್ಟೊಂದು ಶಾಂತಿ ನೆಲೆಸಿರುತ್ತದೆ ಎಂಬುದು ನಮಗೆ ತಿಳಿದಿದೆ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ನಿಮ್ಮಲ್ಲಿ ಟಿಕೇಟ್ ಇರುತ್ತದೆ ಆದರೆ ಮುಂಗಡ ಕಾಯ್ದಿರಿಸಿದ ವ್ಯವಸ್ಥೆ ಇರುವುದಿಲ್ಲ. ಆಗ ನಿಮ್ಮಲ್ಲಿ ನಿರಂತರವಾಗಿ ನೀವು ಯಾವ ಹೊತ್ತಿಗಾದರೂ ಕೆಳಗಿಳಿಯಬೇಕಾಗಬಹುದು, ಮತ್ತು ಇನ್ನೊಂದು ಕಂಪಾರ್ಟ್ಮೆಂಟಿಗೆ ಹೋಗಬೇಕಾಗಬಹುದು ಎಂಬ ಚಿಂತೆ ಬಾಧಿಸುತ್ತದೆ. ಆದರೆ ನಿಮ್ಮಲ್ಲಿ ರಿಸರ್ವೇಶನ್ ಇದ್ದರೆ ಆಗ ನೀವು ಆರಾಮವಾಗಿ ಕುಳಿತುಕೊಳ್ಳಬಹುದು. ಯಾವ ದೊಡ್ಡ, ಶ್ರೀಮಂತ ಮನುಷ್ಯ ಬಂದರೂ ನಿಮಗೆ ಚಿಂತೆ ಇಲ್ಲ, ಯಾಕೆಂದರೆ ಆಗ ನೀವು ಹೇಳಬಹುದು ಈ ರಿಸರ್ವೇಶನ್ ನನಗಾಗಿದೆ ಮತ್ತು ನೀವು ಇಲ್ಲಿಯೇ ಕುಳಿತುಕೊಳ್ಳಬಹುದು ಎಂದು. ಇದು ನಿಮ್ಮ ಹಕ್ಕಿನ ಶಕ್ತಿ. ಇಂದು ಗ್ರಾಮಗಳ, ಹಳ್ಳಿಗಳ ಜನರ ಕೈಗೆ ಬಂದಿರುವ ಈ ಹಕ್ಕು ಬಹಳ ದೂರಗಾಮೀ ಪರಿಣಾಮವನ್ನುಂಟು ಮಾಡಬಲ್ಲುದು. ಮಧ್ಯ ಪ್ರದೇಶವು ಶಿವರಾಜ್ ಜೀ ಅವರ ನಾಯಕತ್ವದಲ್ಲಿ ಭೂ ಡಿಜಿಟಲೀಕರಣದಲ್ಲಿ ಮುಂಚೂಣಿ ರಾಜ್ಯವಾಗಿ ಮೂಡಿ ಬಂದಿರುವುದು ನನಗೆ ಸಂತೋಷ ತಂದಿದೆ. ಡಿಜಿಟಲ್ ದಾಖಲೆಗಳ ವ್ಯಾಪ್ತಿಯ ವಿಸ್ತರಣೆ ಅಥವಾ ದಾಖಲೆಗಳ ಗುಣಮಟ್ಟ ಸಹಿತ ಪ್ರತೀ ಅಂಶಗಳಲ್ಲಿ ಮಧ್ಯ ಪ್ರದೇಶ ಶ್ಲಾಘನೀಯ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಸ್ವಾಮಿತ್ವ ಯೋಜನೆ ಕಾನೂನು ಬದ್ಧ ದಾಖಲೆಗಳನ್ನು ಒದಗಿಸುವ ಯೋಜನೆ ಮಾತ್ರವಲ್ಲ, ಅದು ಅಭಿವೃದ್ಧಿಯ ಹೊಸ ಮಂತ್ರ ಮತ್ತು ದೇಶದ ಗ್ರಾಮಗಳಿಗೆ ಆಧುನಿಕ ತಂತ್ರಜ್ಞಾನದ ಜೊತೆ ಭರವಸೆ ಮೂಡಿಸುವ ಸಾಧನ. ಗ್ರಾಮಗಳಲ್ಲಿ ಹಾರಾಡುತ್ತಿರುವ ಉಡಾನ್ ಖಾಟೋಲ (ಡ್ರೋನ್)ವನ್ನು ಕೆಲವರು ಸಣ್ಣ ಹೆಲಿಕಾಪ್ಟರ್ ಎಂದು ಕರೆಯುತ್ತಾರೆ. ಅದು ಭಾರತದ  ಗ್ರಾಮಗಳಿಗೆ ಹೊಸ ವೇಗವನ್ನು ನೀಡಲಿದೆ. ಡ್ರೋನ್ ಗಳು ವೈಜ್ಞಾನಿಕವಾಗಿ ಮನೆಗಳ ಮ್ಯಾಪ್ ಗಳನ್ನು ತೆಗೆಯುತ್ತವೆ ಮತ್ತು ಆಸ್ತಿಯನ್ನು ಯಾವುದೇ ಪಕ್ಷಪಾತರಹಿತವನ್ನಾಗಿಸುತ್ತವೆ. ಇದುವರೆಗೆ ಡ್ರೋನ್ ಗಳು  ದೇಶದ 60 ಜಿಲ್ಲೆಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿವೆ. ಇದರಿಂದ ಗ್ರಾಮ ಪಂಚಾಯತ್ ಗಳಿಗೆ ನಿಖರ ಭೂ ದಾಖಲೆಗಳೊಂದಿಗೆ ಮತ್ತು ಜಿ.ಐ.ಎಸ್. ಮ್ಯಾಪ್ ಗಳೊಂದಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಯನ್ನು ಸುಧಾರಿಸಲು ಸಹಾಯವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಗೋಚರಿಸುತ್ತಿರುವ ಸ್ವಾಮಿತ್ವ ಯೋಜನಾದ ಪ್ರಯೋಜನಗಳು ಬಡವರನ್ನು ಸ್ವಾವಲಂಬಿಯಾಗಿಸುವ ಮತ್ತು ಹಣಕಾಸು ದೃಷ್ಟಿಯಿಂದ ಬಲಿಷ್ಟರನ್ನಾಗಿಸುವ ಬಹಳ ದೊಡ್ಡ ಆಂದೋಲನದ ಭಾಗ. ಮತ್ತು ನಾವು ಈಗಷ್ಟೆ ಪವನ್ ಜೀ ಅವರಿಂದ ಕೇಳಿದ್ದೇವೆ- ಕಳೆದ ಮೂರು ತಿಂಗಳಲ್ಲಿ ಅವರು ಎಷ್ಟೊಂದು ಧೈರ್ಯವಂತರಾಗಿದ್ದಾರೆ ಎಂಬುದರ ಬಗ್ಗೆ. ಅವರೀಗ ಅವರದೇ ಮನೆಯನ್ನು ಹೊಂದಿದ್ದಾರೆ, ಆದರೆ ಅಲ್ಲಿ ದಾಖಲೆ ಪತ್ರಗಳಿಲ್ಲ. ಈಗ ದಾಖಲೆ ಪತ್ರಗಳು ಲಭಿಸಿವೆ. ಅವರ ಬದುಕು ಬದಲಾಗಿದೆ. ನಮ್ಮ ಗ್ರಾಮಸ್ಥರ ಭಾರೀ ಸಾಮರ್ಥ್ಯಗಳ ಹೊರತಾಗಿಯೂ ಅವರಿಗೆ ಆರಂಭಿಕ ಸಂಪನ್ಮೂಲಗಳ ಕೊರತೆ ಇದೆ, ಅಂದರೆ ಲಾಂಚಿಂಗ್ ಪ್ಯಾಡ್ ನಂತೆ !.  ಅವರು ಮನೆ ನಿರ್ಮಾಣ ಮಾಡಬೇಕಾಗಿದ್ದರೆ, ಅಲ್ಲಿ ಮನೆ ಸಾಲ ಪಡೆಯುವ ಸಮಸ್ಯೆ ಬರುತ್ತದೆ. ಅವರು ವ್ಯಾಪಾರೋದ್ಯಮ ಆರಂಭಿಸಬೇಕಿದ್ದರೆ ಅಲ್ಲಿ ಬಂಡವಾಳದ ಸಮಸ್ಯೆ ಇದೆ. ಅವರು ಕೃಷಿಯನ್ನು ವಿಸ್ತರಿಸುವುದಿದ್ದರೆ, ಹೊಸ ಬೆಳೆ ಪ್ರಯತ್ನಿಸುವುದಿದ್ದರೆ, ಟ್ರ್ಯಾಕ್ಟರ್ ಖರೀದಿಸುವುದಿದ್ದರೆ ಅಥವಾ ಬೇರೆ ಯಾವುದೇ ಸಲಕರಣೆ ಖರೀದಿಸುವುದಿದ್ದರೆ ಆಗಲೂ  ಅಲ್ಲಿ ಆರಂಭಕ್ಕೆ ಹಣದ ಸಮಸ್ಯೆ. ಆಸ್ತಿ ದಾಖಲೆಗಳಿಲ್ಲದೆ ಅವರಿಗೆ ಬ್ಯಾಂಕುಗಳಿಂದ ಸುಲಭದಲ್ಲಿ ಸಾಲ ದೊರೆಯಲಾರದು. ಭಾರತದ ಗ್ರಾಮಸ್ಥರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿರುವ ವ್ಯಕ್ತಿಗಳಿಂದ ಸಾಲ ಪಡೆಯುವ ಅನಿವಾರ್ಯ ಸ್ಥಿತಿಯಲ್ಲಿರುತ್ತಾರೆ. ಸಣ್ಣ ಕೆಲಸಕ್ಕೂ ಬಡವರು ಬೇರಾರನ್ನೋ ಬೇಡಬೇಕಾದಂತಹ ನೋವಿನ ಸ್ಥಿತಿಯನ್ನು  ನಾನು ನೋಡಿದ್ದೇನೆ. ಸದಾ ಬೆಳೆಯುತ್ತಿರುವ ಬಡ್ಡಿ ಆತನ ಬದುಕಿನ ಬಹಳ ದೊಡ್ಡ ಉದ್ವಿಗ್ನತೆ, ಚಿಂತೆಯಾಗಿರುತ್ತದೆ. ಅವರಿಗೆ ಮೂರನೇ ವ್ಯಕ್ತಿಯಿಂದ ಸಾಲ ಪಡೆಯುವುದರ ಹೊರತು ಬೇರೆ ದಾರಿ ಇಲ್ಲದಿರುವುದು ಒಂದು ಸಮಸ್ಯೆ. ಆ ವ್ಯಕ್ತಿಯು ಬಡ ವ್ಯಕ್ತಿಯನ್ನು ಸಾಕಷ್ಟು ಸುಲಿಯುತ್ತಾನೆ. ಯಾಕೆಂದರೆ ಬಡವರಿಗೆ ಬೇರೆ ದಾರಿ ಇಲ್ಲ. ನಾನು ದೇಶದ ಬಡವರು ಮತ್ತು ಗ್ರಾಮಗಳ ಯುವಜನರನ್ನು ಈ ವಿಷ ವರ್ತುಲದಿಂದ ಪಾರು ಮಾಡಲು ಇಚ್ಛಿಸುತ್ತೇನೆ. ಸ್ವಾಮಿತ್ವ ಯೋಜನೆ ಇದಕ್ಕೆ ಪ್ರಮುಖ ಮೂಲಾಧಾರ. ಒಂದೊಮ್ಮೆ ಗ್ರಾಮಸ್ಥರು ಆಸ್ತಿ ಕಾರ್ಡ್ ಪಡೆದರೆ ಅವರಿಗೆ ಬ್ಯಾಂಕುಗಳಿಂದ ಸುಲಭದಲ್ಲಿ ಸಾಲ ಸಿಗುತ್ತದೆ. ಈಗಷ್ಟೆ ಫಲಾನುಭವಿಗಳ ಜೊತೆ ನಡೆದ ನಮ್ಮ ಸಂಭಾಷಣೆಯಲ್ಲಿ ಅವರಿಗೆ ಬ್ಯಾಂಕ್ ಸಾಲ ಪಡೆಯುವಲ್ಲಿ ಆಸ್ತಿ ಕಾರ್ಡ್ ಹೇಗೆ ಸಹಾಯ ಮಾಡಿದೆ ಎಂಬುದನ್ನು ಕೇಳಿದ್ದೇವೆ.

ಸ್ನೇಹಿತರೇ,

ಕಳೆದ 6-7 ವರ್ಷಗಳಿಂದ ನಮ್ಮ ಸರಕಾರದ ಪ್ರಯತ್ನಗಳನ್ನು, ಕಾರ್ಯಕ್ರಮಗಳನ್ನು ನೋಡಿ.   ಬಡವರು ಮೂರನೇ ವ್ಯಕ್ತಿಯಿಂದ ಭಿಕ್ಷೆ ಬೇಡದಂತೆ ಮಾಡಲು, ನಾಚಿಕೆಯಿಂದ ತಲೆ ತಗ್ಗಿಸದಂತೆ ಮಾಡಲು ಪ್ರಯತ್ನಿಸಿದ್ದೇವೆ. ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ಕೃಷಿ ಆವಶ್ಯಕತೆಗಳಿಗಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಹಾಕಲಾಗುತ್ತಿದೆ. ಸಣ್ಣ ರೈತರ ಹಾರೈಕೆಗಳು, ಆಶೀರ್ವಾದಗಳು ನನ್ನ ಮೇಲಿವೆ, ನಾವು ಅವರ ಹಕ್ಕುಗಳಿಗಾಗಿ ನಮ್ಮೆಲ್ಲಾ ಪ್ರಯತ್ನಗಳನ್ನು ಹಾಕಿದ್ದೇವೆ. 100 ರಲ್ಲಿ 80 ರೈತರು ಸಣ್ಣ ರೈತರು ಎಂದು ನಾನು ನಂಬಿದ್ದೇನೆ ಮತ್ತು ಅವರಿಗೆ ಹೆಚ್ಚು ಗಮನ ನೀಡಲಾಗುತ್ತಿರಲಿಲ್ಲ. ಅಲ್ಲಿ ದೊಡ್ಡ ರೈತರ ಬಗ್ಗೆ ಮಾತ್ರ ಕಳಕಳಿ ಇತ್ತು. ಮತ್ತು ನನ್ನ ಸಣ್ಣ ರೈತರು ಬಲಿಷ್ಟರಾದಾಗ ನನ್ನ ದೇಶವನ್ನು ದುರ್ಬಲಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಕೊರೊನಾ ಕಾಲದಲ್ಲಿಯೂ ನಾವು ಆಂದೋಲನದ ಮೂಲಕ 2 ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಕಾರ್ಡ್ ಗಳನ್ನು ನೀಡಿದ್ದೇವೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಯನ್ನೂ ಇದಕ್ಕೆ ಜೋಡಿಸಲಾಗಿದೆ. ಇದರ ಉದ್ದೇಶ ಇವರು ಅವಶ್ಯ ಇದ್ದಾಗ ಬ್ಯಾಂಕುಗಳಿಂದ ಹಣವನ್ನು ಪಡೆಯಬಹುದು ಮತ್ತು ಅವರು ಅದಕ್ಕಾಗಿ ಬೇರೆಡೆಗೆ ಹೋಗಬೇಕಾಗಿಲ್ಲ. ಮುದ್ರಾ ಯೋಜನಾ ಕೂಡಾ ಜನರಿಗೆ ಯಾವುದೇ ಭದ್ರತೆ ಇಲ್ಲದೆ ಬ್ಯಾಂಕುಗಳಿಂದ ಸಾಲ ಪಡೆದು ತಮ್ಮ ಉದ್ಯಮ ಸ್ಥಾಪಿಸಲು ಅವಕಾಶ ಒದಗಿಸಿಕೊಟ್ಟಿದೆ. ಈ ಯೋಜನೆ ಅಡಿಯಲ್ಲಿ ಕಳೆದ ಆರು ವರ್ಷಗಳಲ್ಲಿ 29 ಕೋಟಿಗೂ ಅಧಿಕ ಸಾಲಗಳನ್ನು ನೀಡಲಾಗಿದೆ. ಮುದ್ರಾ ಯೋಜನೆ ಅಡಿಯಲ್ಲಿ 15 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತ ಜನತೆಗೆ ತಲುಪಿದೆ. 15 ಲಕ್ಷ ಕೋ.ರೂ. ಸಣ್ಣ ಮೊತ್ತವೇನಲ್ಲ!. ಈ ಮೊದಲು ಅವರು ಆ ಮೊತ್ತಕ್ಕಾಗಿ ಮೂರನೇ ವ್ಯಕ್ತಿಯ ಬಳಿಗೆ ಹೋಗಬೇಕಾಗುತ್ತಿತ್ತು. ಮತ್ತು ಅವರು ಹೆಚ್ಚಿನ ಬಡ್ಡಿಯ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದರು.

ಸ್ನೇಹಿತರೇ,

ನಮ್ಮ ತಾಯಂದಿರು ಮತ್ತು ಸಹೋದರಿಯರು, ನಮ್ಮ ಮಹಿಳಾ ಶಕ್ತಿ ಭಾರತದ ಗ್ರಾಮಗಳ ಆರ್ಥಿಕ ಶಕ್ತಿಯನ್ನು ಒಗ್ಗೂಡಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇಂದು ದೇಶಾದ್ಯಂತ 70 ಲಕ್ಷಕ್ಕೂ ಅಧಿಕ ಸ್ವ ಸಹಾಯ ಗುಂಪುಗಳಿವೆ, ಇವುಗಳ ಮೂಲಕ 8 ಕೋಟಿ ಸಹೋದರಿಯರು ಜೋಡಿಸಲ್ಪಟ್ಟಿದ್ದಾರೆ. ಮತ್ತು ಅವರಲ್ಲಿ ಬಹುತೇಕರು ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಹೋದರಿಯರು ಜನ್ ಧನ್ ಖಾತೆಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಸಂಪರ್ಕಿಸಲ್ಪಟ್ಟಿರುವುದು ಮಾತ್ರವಲ್ಲ, ಅವರ ಭದ್ರತೆ ರಹಿತ ಸಾಲದ ಮೊತ್ತವೂ ಹೆಚ್ಚಳವಾಗಿದೆ. ಇತ್ತೀಚೆಗೆ ಸರಕಾರ ಇನ್ನೊಂದು ಪ್ರಮುಖ ನಿರ್ಧಾರವನ್ನು ಮಾಡಿದೆ. ಈ ಮೊದಲು ಪ್ರತೀ ಸ್ವಸಹಾಯ ಗುಂಪು ಭದ್ರತೆ ಇಲ್ಲದೆ 10 ಲಕ್ಷ ರೂ.ಗಳವರೆಗೆ ಸಾಲ ಪಡೆಯಲು ಅವಕಾಶ ಇತ್ತು, ಈಗ ಈ ಮಿತಿಯನ್ನು 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳವರೆಗೆ ದುಪ್ಪಟ್ಟು ಮಾಡಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಹಳ್ಳಿಗಳ/ಗ್ರಾಮಗಳ ಅನೇಕ ಸಂಗಾತಿಗಳು ಹತ್ತಿರದ ನಗರಗಳಿಗೆ ಹೋಗಿ ಬೀದಿ ಬದಿ ವ್ಯಾಪಾರಿಗಳಾಗಿ ಕೆಲಸ ಮಾಡುತ್ತಾರೆ. ಅವರಿಗೆ ಕೂಡಾ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನಾ ಅಡಿಯಲ್ಲಿ ಸಾಲ ಪಡೆಯುವ ಸೌಲಭ್ಯ ಒದಗಿಸಲಾಗಿದೆ. ಇಂದು 25 ಲಕ್ಷಕ್ಕೂ ಅಧಿಕ ಇಂತಹ ಸ್ನೇಹಿತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಈಗ ಅವರು ಕೂಡಾ ಅವರ ಕೆಲಸವನ್ನು ಕೈಗೊಳ್ಳಲು ಸಾಲ ಪಡೆಯಲು ಬೇರೆಯವರಲ್ಲಿಗೆ ಹೋಗಬೇಕಾಗಿಲ್ಲ.

ಸ್ನೇಹಿತರೇ,

ನೀವು ಈ ಎಲ್ಲಾ ಯೋಜನೆಗಳತ್ತ ನೋಡಿದರೆ, ಬ್ಯಾಂಕುಗಳು ಮತ್ತು ಸರಕಾರ ಹಣ ಕೊಡುವಂತಾದರೆ ಬಡವರು ಯಾವುದೇ ಮೂರನೆ ವ್ಯಕ್ತಿಯತ್ತ ಹೋಗಬೇಕಾದುದಿಲ್ಲ ಎಂಬುದು ಅವುಗಳ ಗುರಿಯಾಗಿರುವುದು ಗೋಚರಿಸುತ್ತದೆ. ಸಣ್ಣ ಸಣ್ಣ ಸಂಗತಿಗಳಿಗಾಗಿ, ಸಣ್ಣ ಮೊತ್ತಕ್ಕಾಗಿ ಬಡವರು ಸರಕಾರದ ಕಂಭಗಳನ್ನು ಹಲವಾರು ಬಾರಿ ಸುತ್ತುವ ಕಾಲ ಹೋಗಿದೆ. ಈಗ ಸರಕಾರವೇ ಬಡವರನ್ನು ಸಶಕ್ತೀಕರಣಗೊಳಿಸಲು ಅವರ ಬಳಿಗೆ ಬರುತ್ತಿದೆ. ನೀವು ನೋಡಿ ಕೊರೊನಾ ಕಾಲದಲ್ಲಿ, ಸಮಸ್ಯೆಗಳು ಗಂಭೀರವಾಗಿದ್ದಾಗ ಸರಕಾರ ತಾನೇ ಮುಂದೆ ಬಂದು 80 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಖಾತ್ರಿಪಡಿಸಿತು. ಯಾವುದೇ ಒಬ್ಬ ಬಡವನ ಮನೆಯಲ್ಲಿಯೂ ಒಲೆ ಉರಿಯದೇ ಇರಬಾರದು ಎಂಬುದನ್ನು ಖಾತ್ರಿಪಡಿಸಲಾಯಿತು. ಮಧ್ಯ ಪ್ರದೇಶದ ರೈತರ ಕಠಿಣ ಪರಿಶ್ರಮ ಮತ್ತು ಕೊಡುಗೆಯೂ ಇದರಲ್ಲಿದೆ. ಸರಕಾರವು ಬಡವರಿಗೆ ಉಚಿತ ಆಹಾರ ಒದಗಿಸಲು ಎರಡು ಲಕ್ಷ ಕೋ.ರೂ.ಗಳನ್ನು ವ್ಯಯ ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಡವರಿಗೆ ಒದಗಿಸಲಾಗಿರುವ ಉಚಿತ ಚಿಕಿತ್ಸಾ ಸೌಲಭ್ಯದಿಂದ ಬಡವರಿಗೆ 40,000 ದಿಂದ 50,000 ಕೋ.ರೂ.ಗಳಷ್ಟು ಉಳಿತಾಯವಾಗಿದೆ. ಕೈಗೆಟಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವ 8,000 ಕ್ಕೂ ಅಧಿಕ ಜನೌಷಧಿ ಕೇಂದ್ರಗಳಿಂದಾಗಿ ಬಡವರ ನೂರಾರು ಕೋಟಿ ರೂಪಾಯಿಗಳು ಉಳಿತಾಯವಾಗಿವೆ. ಇಂದ್ರಧನುಷ್ ಆಂದೋಲನಕ್ಕೆ ಹೊಸ ಲಸಿಕೆಗಳನ್ನು ಸೇರ್ಪಡೆ ಮಾಡುವ ಮೂಲಕ ನಾವು ಕೋಟ್ಯಾಂತರ ಗರ್ಭಿಣಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಹಲವು ರೋಗಗಳಿಂದ ರಕ್ಷಿಸಿದ್ದೇವೆ ಮತ್ತು ಗರಿಷ್ಠ ಸಂಖ್ಯೆಯಲ್ಲಿ ಬಡವರನ್ನು ಲಸಿಕೆ ಪಡೆಯುವಿಕೆ ಕಾರ್ಯಕ್ರಮಕ್ಕೆ ಒಳಪಡಿಸಿದ್ದೇವೆ. ಈ ಎಲ್ಲಾ ಪ್ರಯತ್ನಗಳು ಗ್ರಾಮಗಳಲ್ಲಿಯ ಬಡವರ ಹಣವನ್ನು ಉಳಿತಾಯ ಮಾಡುತ್ತಿವೆ. ಮತ್ತು ಅವರನ್ನು ನಿರ್ಬಂಧಗಳಿಂದ ಮುಕ್ತ ಮಾಡಿ ಸಾಧ್ಯತೆಗಳ ಅನಂತ ಆಕಾಶದೊಂದಿಗೆ ಸಂಪರ್ಕಿಸುತ್ತಿವೆ. ಸ್ವಾಮಿತ್ವ ಯೋಜನೆ ಅಡಿಯಲ್ಲಿ ಗ್ರಾಮಗಳನ್ನು ಸಶಕ್ತೀಕರಣಗೊಳಿಸಿದಾಗ ಭಾರತದ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲ್ಪಡಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಆಧುನಿಕ ತಂತ್ರಜ್ಞಾನ ಮೊದಲು ನಗರಗಳನ್ನು ತಲುಪುತ್ತದೆ ಬಳಿಕ ಅದು ಗ್ರಾಮಗಳನ್ನು ತಲುಪುವುದು ಭಾರತದ ಸಂಪ್ರದಾಯ. ಇಂದು ಆ ಸಂಪ್ರದಾಯವನ್ನು ಬದಲು ಮಾಡುವ ನಿಟ್ಟಿನಲ್ಲಿ ದೇಶವು ಕಾರ್ಯತತ್ಪರವಾಗಿದೆ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಆನ್ ಲೈನ್ ಗೆ ಹಾಕುವ ಆರಂಭಿಕ ಪ್ರಯತ್ನಗಳನ್ನು ಮಾಡಲಾಯಿತು. ಇ-ಗ್ರಾಮ ಸೇವೆಯನ್ನು ಗ್ರಾಮಗಳು ತಂತ್ರಜ್ಞಾನದ ಮೂಲಕ ಸರಕಾರವನ್ನು ಸಂಪರ್ಕಿಸುವಂತೆ ಮಾಡುವುದಕ್ಕಾಗಿ ಆರಂಭಿಸಲಾಯಿತು. ಗುಜರಾತ್ ಸ್ವಾಗತ್ ಎಂಬ ಉಪಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಪರಿಹಾರ ಮಾಡಲು ಪ್ರಯತ್ನಿಸಿತು. ಅದನ್ನು ಈಗಲೂ ಉಲ್ಲೇಖಿಸಲಾಗುತ್ತಿದೆ. ಅದೇ ಮಂತ್ರವನ್ನು ಅನುಸರಿಸಿ ಸ್ವಾಮಿತ್ವ ಯೋಜನೆ ಮತ್ತು ಡ್ರೋನ್ ತಂತ್ರಜ್ಞಾನದ ಮೂಲಕ ಭಾರತದ ಗ್ರಾಮಗಳನ್ನು ಶ್ರೀಮಂತಗೊಳಿಸಲು ದೇಶವು ಪ್ರಯತ್ನವನ್ನು ಮಾಡುತ್ತಿದೆ. ಡ್ರೋನ್ ತಂತ್ರಜ್ಞಾನವು ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ಕಷ್ಟದ ಕೆಲಸಗಳನ್ನು ಅತ್ಯಂತ ನಿಖರವಾಗಿ ಮಾಡಬಲ್ಲದು. ಮಾನವರು ಹೋಗದ ಸ್ಥಳಗಳಿಗೆ ಡ್ರೋನ್ ಗಳು ಸುಲಭದಲ್ಲಿ ಹೋಗಬಲ್ಲವು. ಮನೆಗಳ ಮ್ಯಾಪಿಂಗ್ ಅಲ್ಲದೆ ಡ್ರೋನ್ ಗಳು ಭೂ ದಾಖಲೆಗಳನ್ನು ತಯಾರಿಸುವಲ್ಲಿ, ದೇಶದಲ್ಲಿ ಸರ್ವೇಕ್ಷಣೆ ಮತ್ತು ಹೆಚ್ಚು ಸಮರ್ಪಕವಾಗಿ ಹಾಗು ಪಾರದರ್ಶಕವಾಗಿ ಭೂ ವಿಂಗಡಣೆ ಮಾಡುವಲ್ಲಿಯೂ ಬಹಳ ಉಪಯುಕ್ತ. ಮ್ಯಾಪಿಂಗ್ ನಿಂದ ಹಿಡಿದು ವಿಪತ್ತು ನಿರ್ವಹಣೆ, ಕೃಷಿ ಕಾರ್ಯ, ಮತ್ತು ಸೇವಾ ಒದಗಣೆಗಳವರೆಗೆ ಡ್ರೋನ್ ಗಳ ಬಳಕೆ ಈಗ ವ್ಯಾಪಕವಾಗಿದೆ. ಎರಡು ದಿನಗಳ ಹಿಂದೆ ನೀವು ಟಿ.ವಿ.ಯಲ್ಲಿ ನೋಡಿರಬಹುದು ಅಥವಾ ಪತ್ರಿಕೆಗಳಲ್ಲಿ ಓದಿರಬಹುದು, ಕೊರೊನಾ ಲಸಿಕೆಗಳನ್ನು ಮಣಿಪುರದಲ್ಲಿ ಬಹಳ ತ್ವರಿತವಾಗಿ ಡ್ರೋನ್ ಗಳ ಮೂಲಕ ಪೂರೈಕೆ ಮಾಡಿರುವುದನ್ನು. ಇಲ್ಲಿ ಮಾನವ ಶಕ್ತಿಯ  ಮೂಲಕ  ಅವುಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಬಹಳ ಸಮಯ ತಗಲುತ್ತಿತ್ತು. ಅದೇ ರೀತಿ ಡ್ರೋನ್ ಗಳನ್ನು ಗುಜರಾತಿನಲ್ಲಿ ಯೂರಿಯಾ ಸಿಂಪರಿಸುವುದಕ್ಕೂ ಬಳಸಲಾಗುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಡ್ರೋನ್ ತಂತ್ರಜ್ಞಾನದಿಂದ ರೈತರು, ರೋಗಿಗಳು, ಮತ್ತು ದುರ್ಗಮ ಪ್ರದೇಶಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಂತಾಗಲು ಇತ್ತೀಚೆಗೆ ಹಲವು ನೀತಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್ ಗಳನ್ನು ತಯಾರಿಸಲು ಅನುಕೂಲವಾಗುವಂತೆ ಮತ್ತು ಭಾರತವು ಅದರಲ್ಲಿ ಸ್ವಾವಲಂಬಿಯಾಗುವಂತೆ ಮಾಡುವುದಕ್ಕಾಗಿ ಪಿ.ಎಲ್.ಐ. ಯೋಜನೆಯನ್ನು ಘೋಷಿಸಲಾಗಿದೆ. ದೇಶದ ಕಠಿಣ ಪರಿಶ್ರಮಿ ವಿಜ್ಞಾನಿಗಳು, ಇಂಜಿನಿಯರ್ ಗಳು, ಸಾಫ್ಟ್ ವೇರ್ ಡೆವಲಪರ್ ಗಳು ಮತ್ತು ನವೋದ್ಯಮಗಳು ಭಾರತದಲ್ಲಿ ಕಡಿಮೆ ವೆಚ್ಚದ, ಗುಣಮಟ್ಟದ ಡ್ರೋನ್ ಗಳನ್ನು ಉತ್ಪಾದಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದೆ ಬರಬೇಕು ಎಂದು ನಾನು ಮನವಿ ಮಾಡುತ್ತೇನೆ. ಈ ಡ್ರೋನ್ ಗಳು ಭಾರತದ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಡ್ರೋನ್ ಮತ್ತು ಸಂಬಂಧಿತ ಸೇವೆಗಳನ್ನು ಭಾರತೀಯ ಕಂಪೆನಿಗಳಿಂದ ಪಡೆದುಕೊಳ್ಳಲು ಭಾರತ ಸರಕಾರ ನಿರ್ಧರಿಸಿದೆ. ಇದು ದೇಶೀಯ ಮತ್ತು ವಿದೇಶದ ಬೃಹತ್ ಸಂಖ್ಯೆಯ ಕಂಪೆನಿಗಳಿಗೆ ಭಾರತದಲ್ಲಿ ಡ್ರೋನ್ ಗಳ ತಯಾರಿಕೆಗೆ ಉತ್ತೇಜನ ನೀಡಲಿದೆ ಮತ್ತು ಅದರಿಂದ ಹೊಸ ಉದ್ಯೋಗಗಳ ಸೃಷ್ಟಿಯೂ ಆಗಲಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಸುಸಂದರ್ಭ ಈ ಸಮಯ, ಅಂದರೆ ಮುಂದಿನ 25 ವರ್ಷಗಳಲ್ಲಿ ನಾವು ನಮ್ಮ ಅಭಿವೃದ್ಧಿಯ ಪಯಣವನ್ನು ಗ್ರಾಮಗಳ ಆರ್ಥಿಕ ಶಕ್ತಿಯನ್ನು ಬಲಪಡಿಸಲು ಇರುವಂತಹದು. ಇದರಲ್ಲಿ ಮೂಲಸೌಕರ್ಯ ಸಂಬಂಧಿತ ತಂತ್ರಜ್ಞಾನ ಬಹಳ ದೊಡ್ಡ ಪಾತ್ರವನ್ನು ವಹಿಸಲಿದೆ. ಮೊಬೈಲ್ ಫೋನುಗಳು ಮತ್ತು ಅಂತರ್ಜಾಲ ಗ್ರಾಮಗಳಲ್ಲಿ ಯುವ ಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಮೊಬೈಲ್ ಫೋನುಗಳು ರೈತರನ್ನು ಹೊಸ ಕೃಷಿ ತಂತ್ರಜ್ಞಾನಗಳು, ಹೊಸ ಬೆಳೆಗಳು ಮತ್ತು ಹೊಸ ಮಾರುಕಟ್ಟೆಗಳ ಜೊತೆ ಬೆಸೆಯುವಲ್ಲಿ ಬಹಳ ಉಪಯುಕ್ತವಾಗಿವೆ. ಇಂದು ನಗರಗಳಿಗಿಂತ ಭಾರತದ ಗ್ರಾಮಗಳಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ ಹೆಚ್ಚಿದೆ. ಈಗ ದೇಶದ ಎಲ್ಲಾ ಗ್ರಾಮಗಳನ್ನೂ ಆಪ್ಟಿಕಲ್ ಫೈಬರ್ ಜಾಲದಿಂದ ಬೆಸೆಯುವ ಆಂದೋಲನ ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿದ್ದು, ಪ್ರಗತಿಯಲ್ಲಿದೆ. ಕೃಷಿ, ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ, ಉತ್ತಮ ಅಂತರ್ಜಾಲ ಸೌಲಭ್ಯಗಳು ಗ್ರಾಮಗಳ ಬಡವರಿಗೂ ಲಭ್ಯವಾಗಬೇಕು ಮತ್ತು ಇದು ಸಾಧ್ಯವಾಗಲಿದೆ.

ಸ್ನೇಹಿತರೇ,

ಗ್ರಾಮಗಳನ್ನು ತಂತ್ರಜ್ಞಾನದ ಮೂಲಕ ಪರಿವರ್ತಿಸುವ ಈ ಆಂದೋಲನ ಐ.ಟಿ. ಅಥವಾ ಡಿಜಿಟಲ್ ತಂತ್ರಜ್ಞಾನಕ್ಕೆ ಮಾತ್ರ ಸೀಮಿತಗೊಂಡುದಲ್ಲ. ಗ್ರಾಮಗಳ ಅಭಿವೃದ್ಧಿಯಲ್ಲಿ ಇತರ ತಂತ್ರಜ್ಞಾನಗಳನ್ನು ಕೂಡಾ ವ್ಯಾಪಕವಾಗಿ ಬಳಸಲಾಗುತ್ತಿದೆ. ನೀರಾವರಿಯ ಹೊಸ ಅವಕಾಶಗಳು ಮತ್ತು ಸೌರ ಶಕ್ತಿಯಿಂದ ಗಳಿಕೆ ಗ್ರಾಮಗಳಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ. ಆಧುನಿಕ ಸಂಶೋಧನೆಯ ಸಹಾಯದಿಂದ ಹೊಸ ಬೀಜಗಳನ್ನು  ಬದಲಾಗುತ್ತಿರುವ ಋತುಮಾನ ಮತ್ತು ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ರೈತರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಹೊಸ ಮತ್ತು ಸುಧಾರಿತ ಲಸಿಕಾ ಕಾರ್ಯಕ್ರಮಗಳ ಮೂಲಕ ಪಶುಗಳ ಆರೋಗ್ಯವನ್ನು ಸುಧಾರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂತಹ ಅರ್ಥಪೂರ್ಣ ಪ್ರಯತ್ನಗಳ ಮೂಲಕ, ಗ್ರಾಮಸ್ಥರ ಸಕ್ರಿಯ ಸಹಭಾಗಿತ್ವದ ಮೂಲಕ ಮತ್ತು ಎಲ್ಲರ ಪ್ರಯತ್ನಗಳ ಮೂಲಕ ನಾವು ಗ್ರಾಮಗಳ ಪೂರ್ಣ ಸಾಮರ್ಥ್ಯವನ್ನು ಭಾರತದ ಅಭಿವೃದ್ಧಿಯ ತಳಪಾಯವನ್ನಾಗಿ ಮಾಡಲಿದ್ದೇವೆ. ಗ್ರಾಮಗಳು ಸಶಕ್ತೀಕರಣಗೊಂಡರೆ, ಆಗ ಮಧ್ಯ ಪ್ರದೇಶವೂ ಬಲಿಷ್ಠಗೊಳ್ಳುತ್ತದೆ ಮತ್ತು ಭಾರತವೂ ಸಶಕ್ತವಾಗುತ್ತದೆ. ಈ ಆಶಯದೊಂದಿಗೆ ಮತ್ತೊಮ್ಮೆ ಶುಭ ಹಾರೈಕೆಗಳು!. ಪವಿತ್ರ ಹಬ್ಬ ನವರಾತ್ರಿ ನಾಳೆಯಿಂದ ಆರಂಭಗೊಳ್ಳುತ್ತಿದೆ. ಇದು ಎಲ್ಲರಿಗೂ ಆಶೀರ್ವಾದದಂತೆ ಬರಲಿ!.  ದೇಶವು ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ!. ಈ ಕೊರೊನಾ ಅವಧಿಯಲ್ಲಿ ನಾವೆಲ್ಲರೂ ಜಾಗೃತೆಯಿಂದಿರೋಣ. ನಮ್ಮ ಜೀವದೊಂದಿಗೆ ಮತ್ತು ಹರ್ಷದ ಜೀವನ ನಡೆಸುತ್ತಾ ಬದುಕನ್ನು ಮುನ್ನಡೆಸೋಣ. ಈ ಶುಭ ಹಾರೈಕೆಗಳೊಂದಿಗೆ, ನಿಮಗೆಲ್ಲ ಬಹಳ ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1762725) Visitor Counter : 264