ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’- 81 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ (ದಿನಾಂಕ 26.09.2021)


Posted On: 26 SEP 2021 11:43AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಒಂದು ತುರ್ತು ಕೆಲಸಕ್ಕಾಗಿ ನಾನು ಅಮೆರಿಕಾಗೆ ಹೋಗಬೇಕಾಗಿ ಬಂದಿದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಅಲ್ಲಿಗೆ ಹೋಗುವುದಕ್ಕೂ ಮೊದಲೇ ಮನದ ಮಾತನ್ನು ಧ್ವನಿಮುದ್ರಿಸಲು ನಾನು ಯೋಚಿಸಿದೆ. ಸೆಪ್ಟೆಂಬರ್ ನಲ್ಲಿ ಮನದ ಮಾತು ಯಾವ ದಿನದಂದು ಇದೆಯೋ ಆದಿನ ಮತ್ತೊಂದು ಮಹತ್ವಪೂರ್ಣ ದಿನವಾಗಿದೆ. ಅಂದಹಾಗೆ, ನಾವು ಅನೇಕ ದಿನಗಳನ್ನು ನೆನಪಿಸಿಕೊಳ್ಳುತ್ತೇವೆ; ಬೇರೆ ಬೇರೆ ರೀತಿಯ ದಿನಗಳನ್ನು ಆಚರಿಸುತ್ತೇವೆ; ನಿಮ್ಮ ಮನೆಯಲ್ಲಿ ಯುವಕ– ಯುವತಿಯರು ಇದ್ದರೆ ಅವರನ್ನು ಕೇಳಿದರೆ, ಇಡೀ ವರ್ಷದಲ್ಲಿ ಯಾವ ದಿನ ಎಂದು ಬರುತ್ತದೆ ಎಂದು ಇಡೀ ಪಟ್ಟಿಯನ್ನು ನೀಡುತ್ತಾರೆ. ಆದರೆ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ದಿನವಿದೆ ಮತ್ತು ಶತಮಾನಗಳಿಂದ ನಾವು ಯಾವ ಪರಂಪರೆಯೊಂದಿಗೆ ಬೆಸೆದುಕೊಂಡಿದ್ದೇವೆಯೋ ಆ ಪರಂಪರೆಯೊಂದಿಗೆ ಅದು ಕೂಡಿಕೊಂಡಿದೆ. ಅದು ಯಾವುದು ಅಂದರೆ ‘ವಲ್ರ್ಡ್ ರಿವರ್ ಡೇ’ ಅಂದರೆ ವಿಶ್ವ ನದಿ ದಿವಸ. ನಮ್ಮಲ್ಲಿ ಒಂದು ಮಾತಿದೆ:

ಪಿಬಂತಿ ನದ್ಯಃ ಸ್ವಯಮೇವ ನಾಂಭಃ

ಇದರ ಅರ್ಥ – ನದಿ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ ಬದಲಾಗಿ ಪರರಿಗೆ ನೀಡುತ್ತದೆ ಎಂದು. ನಮಗೆ ನದಿಯು ಒಂದು ಭೌತಿಕ ವಸ್ತುವಲ್ಲ; ನಮಗೆ ನದಿಯು ಒಂದು ಜೀವಸೆಲೆ. ಆದ್ದರಿಂದಲೇ ನಾವು ನದಿಗಳನ್ನು ತಾಯಿ ಎಂದು ಕರೆಯುತ್ತೇವೆ. ನಮ್ಮಲ್ಲಿಯ ಹಲವಾರು ಪರ್ವಗಳು, ಹಬ್ಬಗಳು, ಉತ್ಸವಗಳು, ಆಚರಣೆಗಳು ಇವೆಲ್ಲವೂ ನಮ್ಮ ಈ ತಾಯಂದಿರ ಮಡಿಲಲ್ಲಿ ನಡೆಯುತ್ತವೆ. ಮಾಘ ಮಾಸ ಬಂದಾಗ, ನಮ್ಮ ದೇಶದಲ್ಲಿ ಅನೇಕ ಜನರು ಒಂದು ತಿಂಗಳು ಪೂರ್ತಿ ಗಂಗಾ ಮಾತೆ ಅಥವಾ ಇನ್ನಿತರ ನದಿಯ ದಡದಲ್ಲಿ ಕಳೆಯುತ್ತಾರೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಸ್ನಾನ ಮಾಡುವಾಗಲೂ ಸಹ ನದಿಗಳನ್ನು ಸ್ಮರಿಸುವ ಪದ್ಧತಿ ಇತ್ತು. ಈಗ ಈ ಪದ್ಧತಿ ಇಲ್ಲ ಅಥವಾ ಸ್ವಲ್ಪ ಮಾತ್ರವೇ ಉಳಿದುಕೊಂಡಿದೆ, ಆದರೆ ಈ ಪದ್ಧತಿಯು ಬೆಳಗ್ಗೆ ಸ್ನಾನ ಮಾಡುವ ಸಮಯದಲ್ಲೇ ಮಾನಸಿಕವಾಗಿ ವಿಶಾಲ ಭಾರತದ ಒಂದು ಯಾತ್ರೆಯನ್ನು ಮಾಡಿಸುತ್ತಿತ್ತು. ದೇಶದ ಮೂಲೆ ಮೂಲೆಯನ್ನೂ ಜೋಡಿಸುವ ಪ್ರೇರಣೆ ಆಗುತ್ತಿತ್ತು. ಅದೇನೆಂದರೆ ಭಾರತದಲ್ಲಿ ಸ್ನಾನ ಮಾಡುವ ಸಮಯದಲ್ಲಿ ಒಂದು ಶ್ಲೋಕವನ್ನು ಪಠಿಸುವ ಪರಿಪಾಠ ಇತ್ತು, ಅದು 

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ !

ನರ್ಮದೇ ಸಿಂಧು ಕಾವೇರೀ ಜಲೇ ಅಸ್ಮಿನ್ ಸನ್ನಿಧಿಂ ಕುರು !!

ಹಿಂದೆ ನಮ್ಮ ಮನೆಗಳಲ್ಲಿ ಕುಟುಂಬದ ಹಿರಿಯರು ಈ ಶ್ಲೋಕವನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಿದ್ದರು. ಇದರಿಂದ ನಮ್ಮ ದೇಶದ ನದಿಗಳ ಬಗ್ಗೆ ಗೌರವ ಮೂಡುತ್ತಿತ್ತು. ವಿಶಾಲ ಭಾರತದ ಒಂದು ನಕ್ಷೆ ಮನದಲ್ಲಿ ಅಚ್ಚೊತ್ತುತ್ತಿತ್ತು, ನದಿಗಳ ಜೊತೆ ಬಾಂಧವ್ಯ ಬೆಳೆಯುತ್ತಿತ್ತು. ಯಾವ ನದಿಯನ್ನು ತಾಯಿಯ ರೂಪದಲ್ಲಿ ನಾವು ತಿಳಿಯುತ್ತೇವೆಯೋ, ನೋಡುತ್ತೇವೆಯೋ, ಬದುಕುತ್ತೇವೆಯೋ ಅಂತಹ ನದಿಗಳ ಬಗೆಗೆ ಒಂದು ಗೌರವ ಭಾವನೆ ಮೂಡುತ್ತಿತ್ತು. ಇದೊಂದು ಸಂಸ್ಕಾರ ನೀಡುವ ಪ್ರಕ್ರಿಯೆಯಾಗಿತ್ತು. 

ಮಿತ್ರರೇ, ನಾವು ನಮ್ಮ ದೇಶದ ನದಿಗಳ ಮಹಿಮೆಗಳ ಬಗ್ಗೆ ಮಾತನಾಡುತ್ತಿರುವಾಗ ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ಒಂದು ಪ್ರಶ್ನೆಯನ್ನು ಕೇಳುತ್ತಾರೆ, ಪ್ರಶ್ನಿಸುವ ಹಕ್ಕೂ ಕೂಡ ಇದೆ – ಮತ್ತು ಇದಕ್ಕೆ ಉತ್ತರಿಸುವುದು ನಮ್ಮ ಜವಾಬ್ದಾರಿಯೂ ಕೂಡ ಆಗಿದೆ. “ನೀವು ನದಿಗಳನ್ನು ಕುರಿತು ಇಷ್ಟೊಂದು ಹಾಡಿ ಹೊಗಳುತ್ತಿದ್ದೀರಿ, ನದಿಯನ್ನು ತಾಯಿ ಎಂದು ಕರೆಯುತ್ತೀರಿ, ಹಾಗಿದ್ದ ಮೇಲೆ ಈ ನದಿಗಳು ಇಷ್ಟೊಂದು ಕಲುಷಿತವಾಗುತ್ತಿವೆ ಏಕೆ?” ಎನ್ನುವುದೇ ಯಾರಾದರೂ ಕೇಳಬಹುದಾದ ಆ ಪ್ರಶ್ನೆ. ನಮ್ಮ ಶಾಸ್ತ್ರಗಳಲ್ಲಂತೂ ಅಲ್ಪ ಪ್ರಮಾಣದಲ್ಲಿ ನದಿಗಳನ್ನು ಕಲುಷಿತಗೊಳಿಸುವುದೂ ಕೂಡ ತಪ್ಪು ಎಂದು ಹೇಳಲಾಗಿದೆ. ನಮ್ಮ ಭಾರತದ ಪಶ್ಚಿಮ ಭಾಗ, ಅದರಲ್ಲೂ ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಅಪಾರವಾದ ನೀರಿನ ಕೊರತೆಯಿದೆ ಎಂದು ನಿಮಗೆ ತಿಳಿದಿದೆ. ಅನೇಕ ಬಾರಿ ಬರಗಾಲ ಬರುತ್ತದೆ. ಹಾಗಾಗಿಯೇ ಅಲ್ಲಿನ ಸಾಮಾಜಿಕ ಜೀವನದಲ್ಲಿ ಒಂದು ಹೊಸ ಸಂಪ್ರದಾಯ ಬೆಳೆದು ಬಂದಿದೆ. ಗುಜರಾತ್ ನಲ್ಲಿ ಮಳೆ ಪ್ರಾರಂಭ ಆಗುತ್ತಿದ್ದಂತೆ ಅಲ್ಲಿ ಜಲ್–ಜೀಲ್ನಿ ಏಕಾದಶಿಯನ್ನು ಆಚರಿಸುತ್ತಾರೆ. ಅಂದರೆ ಇಂದಿನ ಕಾಲದಲ್ಲಿ ನಾವು ಯಾವುದನ್ನು ಮಳೆ ನೀರು ಕೊಯ್ಲು ಎಂದು ಕರೆಯುತ್ತೇವೆಯೋ ಅದು. ಪ್ರತಿಯೊಂದು ಮಳೆ ಹನಿಯನ್ನು ಕೂಡ ತಮ್ಮೊಳಗೆ ಹಿಡಿದಿಟ್ಟುಕೊಳ್ಳುವುದು. ಅದೇ ರೀತಿ ಮಳೆಗಾಲದ ನಂತರ ಬಿಹಾರ ಮತ್ತು ಪೂರ್ವ ಭಾಗಗಳಲ್ಲಿ ಛಟ್ ಪರ್ವವನ್ನು ಆಚರಿಸುತ್ತಾರೆ. ಛಟ್ ಉತ್ಸವವನ್ನು ಮುಂದಿಟ್ಟುಕೊಂಡು ಈಗಾಗಲೇ ನದೀ ತೀರಗಳು ಮತ್ತು ಸ್ನಾನ ಘಟ್ಟಗಳನ್ನು ಸ್ವಚ್ಛಗೊಳಿಸುವ ಮತ್ತು ದುರಸ್ತಿ ಮಾಡುವ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎನ್ನುವ ನಂಬಿಕೆ ನನಗಿದೆ. ನದಿಗಳನ್ನು ಸ್ವಚ್ಚಗೊಳಿಸುವ ಮತ್ತು ಅವುಗಳನ್ನು ಮಾಲಿನ್ಯಮುಕ್ತಗೊಳಿಸುವ ಕಾರ್ಯವನ್ನು ಎಲ್ಲರ ಪ್ರಯತ್ನ ಮತ್ತು ಸಹಯೋಗದೊಂದಿಗೆ ನಾವು ಮಾಡಬಹುದಾಗಿದೆ. ನಮಾಮಿ ಗಂಗೇ ಯೋಜನೆ ಈಗಲೂ ಮುಂದುವರೆಯುತ್ತಿದೆ ಎಂದರೆ ಇದರಲ್ಲಿ ಎಲ್ಲಾ ಜನರ ಪ್ರಯತ್ನ, ಒಂದು ರೀತಿಯಲ್ಲಿ ಜನ ಜಾಗೃತಿ, ಜನಾಂದೋಲನ ಇವುಗಳ ಪಾತ್ರ ದೊಡ್ಡದಿದೆ. 

ಗೆಳೆಯರೇ, ನದಿಗಳ ವಿಷಯ ಬಂದಾಗ, ಗಂಗಾ ಮಾತೆಯ ಬಗ್ಗೆ ಮಾತನಾಡುತ್ತಿರುವಾಗ ಮತ್ತೊಂದು ವಿಚಾರದ ಕಡೆಗೆ ನಿಮ್ಮ ಗಮನ ಸೆಳೆಯಲು ನನಗೆ ಮನಸ್ಸಾಗುತ್ತಿದೆ. ನಮಾಮಿ ಗಂಗೆಯ ವಿಷಯ ಮಾತನಾಡುತ್ತಿರುವಾಗ ಒಂದು ವಿಚಾರದ ಬಗ್ಗೆ ನಿಮ್ಮ ಗಮನ ಹರಿದಿರಬಹುದು. ನಮ್ಮ ಯುವಕರಿಗಂತೂ ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ. ಇತ್ತೀಚಿಗೆ ಒಂದು ವಿಶೇಷವಾದ ಇಲೆಕ್ಟ್ರಾನಿಕ್-ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನನಗೆ ಕಾಲ ಕಾಲಕ್ಕೆ ಜನರಿಂದ ದೊರಕಿರುವ ಉಡುಗೊರೆಗಳ ಇಲೆಕ್ಟ್ರಾನಿಕ್-ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಹರಾಜಿನಿಂದ ಎಷ್ಟು ಹಣ ಸಂಗ್ರಹವಾಗುತ್ತದೆಯೋ ಅದನ್ನು ನಮಾಮಿ ಗಂಗೇ ಅಭಿಯಾನಕ್ಕಾಗಿಯೇ ಸಮರ್ಪಿಸಲಾಗುತ್ತಿದೆ. ಈ ಅಭಿಯಾನವು, ನೀವು ಅತ್ಯಂತ ಆತ್ಮೀಯತೆಯಿಂದ ನನಗೆ ಉಡುಗೊರೆ ಕೊಡುವ ಆ ಭಾವನೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. 

ಸ್ನೇಹಿತರೇ, ದೇಶದೆಲ್ಲೆಡೆ ನದಿಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ, ನೀರಿನ ಸ್ವಚ್ಚತೆಗಾಗಿ ಸರ್ಕಾರ ಮತ್ತು ಸಮಾಜಸೇವಾ ಸಂಘಟನೆಗಳು ನಿರಂತರವಾಗಿ ಏನಾದರೂ ಮಾಡುತ್ತಲೇ ಇರುತ್ತವೆ. ಇದು ಇವತ್ತಿನದ್ದಲ್ಲ, ದಶಕಗಳಿಂದ ನಡೆಯುತ್ತಲೇ ಬಂದಿದೆ. ಕೆಲವು ಜನರಂತೂ ಇಂತಹ ಕೆಲಸಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೆ. ಇದೇ ಪರಂಪರೆ, ಪ್ರಯತ್ನ, ಇದೇ ಗೌರವ ನಮ್ಮ ನದಿಗಳನ್ನು ಉಳಿಸುತ್ತಾ ಬಂದಿವೆ. ಭಾರತ ದೇಶದ ಯಾವುದೇ ಮೂಲೆಯಿಂದ ಇಂತಹ ಸಮಾಚಾರಗಳು ನನ್ನ ಕಿವಿಗೆ ತಲುಪಿದಾಗ ಇಂತಹ ಕೆಲಸಗಳನ್ನು ಮಾಡುತ್ತಿರುವ ಜನರ ಬಗ್ಗೆ ದೊಡ್ಡ ಗೌರವದ ಭಾವನೆ ನನ್ನ ಮನದಲ್ಲಿ ಮೂಡುತ್ತದೆ ಮತ್ತು ಆ ಮಾತುಗಳನ್ನು ನಿಮ್ಮೊಂದಿಗೆ ಹೇಳಬೇಕು ಎಂದು ನನ್ನ ಮನಸ್ಸಿಗೆ ಅನ್ನಿಸುತ್ತದೆ. ನೋಡಿ, ನಿಮಗೆ ತಮಿಳುನಾಡಿನ ವೆಲ್ಲೂರು ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ಒಂದು ಉದಾಹರಣೆ ಕೊಡಲು ಬಯಸುತ್ತೇನೆ. ಇಲ್ಲಿ ನಾಗಾ ನದಿ ಎಂಬ ನದಿ ಹರಿಯುತ್ತದೆ. ಈ ನಾಗಾ ನದಿಯು ಬಹಳಷ್ಟು ವರ್ಷಗಳ ಹಿಂದೆ ಒಣಗಿಹೋಗಿತ್ತು. ಇದೇ ಕಾರಣದಿಂದಾಗಿ ಅಲ್ಲಿನ ಭೂಮಿಯಲ್ಲಿ ಅಂತರ್ಜಲ ಮಟ್ಟ ಕೂಡ ತುಂಬಾ ಕೆಳಗೆ ಹೋಗಿತ್ತು. ಆದರೆ, ಅಲ್ಲಿನ ಮಹಿಳೆಯರು ತಮ್ಮ ನದಿಯನ್ನು ಪುನರುಜ್ಜೀವನಗೊಳಿಸಲು ಸಂಕಲ್ಪ ಮಾಡಿದರು. ಆಮೇಲೇನು? ಅವರು ಜನರನ್ನು ಸೇರಿಸಿದರು, ಜನರ ಸಹಭಾಗಿತ್ವದಲ್ಲಿ ನಾಲೆಗಳನ್ನು ಅಗೆದರು, ಚೆಕ್ ಡ್ಯಾಮ್ ನಿರ್ಮಿಸಿದರು, ನೀರನ್ನು ಭೂಮಿಗೆ ಸೇರಿಸಲು ಇಂಗು ಗುಂಡಿಗಳನ್ನು ತೋಡಿದರು. ಇಂದು ಆ ನದಿ ನೀರಿನಿಂದ ತುಂಬಿದೆ ಎಂದು ತಿಳಿದರೆ ನಿಮಗೂ ಸಹ ಸಂತಸವಾಗುತ್ತದೆ ಮಿತ್ರರೇ. ಒಂದು ಬಾರಿ ನದಿ ನೀರಿನಿಂದ ತುಂಬಿದಾಗ ಅದು ಮನಸ್ಸಿಗೆ ಎಂತಹ ಸುಖದ ಅನುಭವ ನೀಡುತ್ತದೆ ಎನ್ನುವುದನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸಿದ್ದೇನೆ. 

ಯಾವ ಸಬರಮತಿ ನದಿಯ ದಂಡೆಯಲ್ಲಿ ಮಹಾತ್ಮಾ ಗಾಂಧಿಯವರು ಸಬರಮತಿ ಆಶ್ರಮವನ್ನು ಕಟ್ಟಿದ್ದರೋ ಆ ಸಬರಮತಿ ನದಿಯು ಹಿಂದಿನ ಕೆಲವು ದಶಕಗಳಲ್ಲಿ ಒಣಗಿಹೋಗಿತ್ತು ಎನ್ನುವುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿರಬಹುದು. ವರ್ಷದಲ್ಲಿ ಆರರಿಂದ ಎಂಟು ತಿಂಗಳು ನೀರು ಕಾಣಿಸುತ್ತಲೇ ಇರಲಿಲ್ಲ. ಆದರೆ ನರ್ಮದಾ ಮತ್ತು ಸಬರಮತಿ ನದಿಗಳನ್ನು ಜೋಡಣೆ ಮಾಡಿದ ಮೇಲೆ ಈಗ ನೀವು ಅಹಮದಾಬಾದ್ ಗೆ ಹೋದರೆ ಸಬರಮತಿ ನದಿಯ ನೀರು ಮನಸ್ಸನ್ನು ಪ್ರಫುಲ್ಲಿತಗೊಳಿಸುತ್ತದೆ. ತಮಿಳುನಾಡಿನ ನಮ್ಮ ಸೋದರಿಯರು ಹೇಗೆ ಮಾಡಿದರೋ ಅದೇ ರೀತಿಯ ಬಹಳಷ್ಟು ಕೆಲಸಗಳು ದೇಶದ ಬೇರೆ ಬೇರೆ ಮೂಲೆಗಳಲ್ಲಿ ನಡೆಯುತ್ತಿವೆ. ನಮ್ಮ ಧಾರ್ಮಿಕ ಪರಂಪರೆಯಲ್ಲಿ ತೊಡಗಿಸಿಕೊಂಡಿರುವ ಹಲವಾರು ಸಂತರು, ಗುರುಜನರು ಕೂಡ ತಮ್ಮ ಅಧ್ಯಾತ್ಮಿಕ ಪಯಣದ ಜೊತೆಜೊತೆಗೆ ನೀರಿಗಾಗಿ, ನದಿಗಳಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ, ಕೆಲವು ನದಿಗಳ ದಂಡೆಗಳಲ್ಲಿ ಗಿಡಗಳನ್ನು ನೆಡುವ ಅಭಿಯಾನ ನಡೆಯುತ್ತಿದೆ, ಕೆಲವೆಡೆ ನದಿಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಯುವ ಕೆಲಸ ಆಗುತ್ತಿದೆ ಎಂದು ನನಗೆ ತಿಳಿದಿದೆ.

ಸ್ನೇಹಿತರೇ, ನಾವು ಇಂದು ವಿಶ್ವ ನದಿ ದಿನ – ವಲ್ರ್ಡ್ ರಿವರ್ ಡೇ ಆಚರಿಸುತ್ತಿದ್ದೇವೆಂದರೆ ಆ ಕೆಲಸಕ್ಕೆ ಕಾರಣರಾದ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಜೊತೆಗೆ ಭಾರತದಲ್ಲಿ ಮೂಲೆಮೂಲೆಯಲ್ಲಿ ವರ್ಷಕ್ಕೊಮ್ಮೆಯಾದರೂ ನದಿ ಉತ್ಸವ ಆಚರಿಸಬೇಕೆಂದು ನಾನು ಪ್ರತಿಯೊಂದು ನದಿ ತೀರದ ನಿವಾಸಿಗಳಲ್ಲಿ, ದೇಶದ ಜನತೆಯಲ್ಲಿ ಮನವಿ ಮಾಡುತ್ತೇನೆ. 

ನನ್ನ ಪ್ರೀತಿಯ ದೇಶಬಾಂಧವರೇ, ಯಾವುದೇ ಸಣ್ಣ ವಿಷಯವನ್ನು, ಸಣ್ಣ ವಸ್ತುವನ್ನು ಸಣ್ಣದೆಂದು ಭಾವಿಸುವ ತಪ್ಪು ಮಾಡಬಾರದು. ಸಣ್ಣ ಸಣ್ಣ ಪ್ರಯತ್ನಗಳಿಂದಲೇ ಕೆಲವೊಮ್ಮೆ ಬಹಳ ದೊಡ್ಡ ದೊಡ್ಡ ಪರಿವರ್ತನೆಗಳಾಗುತ್ತವೆ. ನಾವು ಗಾಂಧೀಜಿಯವರ ಜೀವನದತ್ತ ಕಣ್ಣು ಹಾಯಿಸಿದರೆ, ಅವರ ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳು ಎಷ್ಟು ಮಹತ್ವ ಹೊಂದಿದ್ದವು, ಮತ್ತು ಅವರು ಸಣ್ಣ ಸಣ್ಣ ವಿಚಾರಗಳನ್ನು ತೆಗೆದುಕೊಂಡು ಯಾವ ರೀತಿ ದೊಡ್ಡ ದೊಡ್ಡ ಸಂಕಲ್ಪಗಳನ್ನು ಸಾಕಾರಗೊಳಿಸಿದರು ಎಂಬುದು ನಮಗೆ ಪ್ರತಿ ಕ್ಷಣ ಅನುಭವಕ್ಕೆ ಬರುತ್ತದೆ. ಸ್ವಚ್ಛತಾ ಅಭಿಯಾನವು ಸ್ವಾತಂತ್ರ್ಯ ಚಳುವಳಿಗೆ ಯಾವರೀತಿ ನಿರಂತರ ಶಕ್ತಿಯಾಯಿತು ಎಂಬುದನ್ನು ನಮ್ಮ ಇಂದಿನ ಯುವಜನತೆ ಖಂಡಿತವಾಗಿಯೂ ಅರಿತುಕೊಳ್ಳಬೇಕು. ಸ್ವಚ್ಛತೆಯನ್ನು ಜನಾಂದೋಲನವನ್ನಾಗಿ ಮಾಡಿದ್ದು ಮಹಾತ್ಮಾ ಗಾಂಧಿಯವರು ತಾನೇ. ಮಹಾತ್ಮಾ ಗಾಂಧಿಯವರು ಸ್ವಚ್ಛತೆಯನ್ನು ಸ್ವಾತಂತ್ರ್ಯದ ಕನಸಿನೊಂದಿಗೆ ಬೆಸೆದರು. ಇಂದು ಇಷ್ಟೊಂದು ದಶಕಗಳ ನಂತರ, ಸ್ವಚ್ಛತಾ ಆಂದೋಲನವು ಮತ್ತೊಮ್ಮೆ ದೇಶದ ನವ ಭಾರತದ ಕನಸಿನೊಂದಿಗೆ ಬೆಸೆಯುವ ಕೆಲಸ ಮಾಡಿದೆ. ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮ ಮಾತ್ರವಲ್ಲ, ಇದು ನಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ಅಭಿಯಾನವೂ ಆಗುತ್ತಿದೆ ಎಂಬುದನ್ನು ನಾವು ಮರೆಯಬಾರದು. ಸ್ವಚ್ಛತೆ ಎನ್ನುವುದು ಪೀಳಿಗೆಯಿಂದ ಪೀಳಿಗೆಗೆ ಸಂಸ್ಕಾರವನ್ನು ವರ್ಗಾಯಿಸುವ ಜವಾಬ್ದಾರಿಯಾಗಿದೆ. ಪೀಳಿಗೆಯಿಂದ ಪೀಳಿಗೆಯವರೆಗೆ ಸ್ವಚ್ಛತಾ ಅಭಿಯಾನ ಮುಂದುವರಿದರೆ, ಆಗ ಸಂಪೂರ್ಣ ಸಮಾಜದ ಜೀವನದಲ್ಲಿ ಸ್ವಚ್ಛತೆಯ ಸ್ವಭಾವ ಬೆಳೆಯುತ್ತದೆ. ಆದ್ದರಿಂದ ಇದು ಒಂದೆರಡು ವರ್ಷ, ಈ ಸರಕಾರ ಆ ಸರಕಾರ ಎನ್ನುವಂತಹ ವಿಷಯವಲ್ಲ, ಪೀಳಿಗೆಯಿಂದ ಪೀಳಿಗೆಗೆ ನಾವು ಸ್ವಚ್ಛತೆಯ ಅರಿವಿನೊಂದಿಗೆ, ಸತತವಾಗಿ ಎಲ್ಲಿಯೂ ನಿಲ್ಲದೇ, ದಣಿಯದೇ, ಅತ್ಯಂತ ಶ್ರದ್ಧೆಯಿಂದ ಅಭಿಯಾನದೊಂದಿಗೆ ಕೂಡಿಕೊಳ್ಳಬೇಕು ಮತ್ತು ಅಭಿಯಾನ ಮುಂದುವರಿಸಿಕೊಂಡು ಹೋಗಬೇಕು. ಸ್ವಚ್ಛತೆ ಎನ್ನುವುದು ಪೂಜ್ಯ ಬಾಪೂ ಅವರಿಗೆ ನಮ್ಮ ದೇಶ ಸಲ್ಲಿಸಬಹುದಾದ ಬಹುದೊಡ್ಡ ಶ್ರದ್ಧಾಂಜಲಿಯಾಗಿದೆ ಮತ್ತು ಇದನ್ನು ನಾವು ಅವರಿಗೆ ಪ್ರತಿ ಬಾರಿ, ಸತತವಾಗಿ ಸಲ್ಲಿಸುತ್ತಲೇ ಇರಬೇಕೆಂದು ನಾನು ಈ ಮೊದಲು ಕೂಡಾ ಹೇಳಿದ್ದೆ. 

ಸ್ನೇಹಿತರೇ, ನಾನು ಸ್ವಚ್ಛತೆಯ ಬಗ್ಗೆ ಮಾತನಾಡುವ ಅವಕಾಶವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದು ಜನರಿಗೆ ತಿಳಿದಿದೆ. ಬಹುಶಃ ಅದರಿಂದಾಗಿಯೇ ನಮ್ಮ ಮನ್ ಕಿ ಬಾತ್ ಶ್ರೋತೃಗಳಲ್ಲಿ ಒಬ್ಬರಾದ ಶ್ರೀ ರಮೇಶ್ ಪಟೇಲ್ ಅವರು ಹೀಗೆ ಬರೆದಿದ್ದಾರೆ, ನಾವು ಬಾಪೂ ಅವರಿಂದ ಕಲಿಯುತ್ತಾ, ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಆರ್ಥಿಕ ಸ್ವಚ್ಛತೆಯ ಸಂಕಲ್ಪ ಕೂಡಾ ಮಾಡಬೇಕಿದೆ. ಶೌಚಾಲಯದ ನಿರ್ಮಾಣ ಬಡವರ ಘನತೆ ಹೆಚ್ಚಿಸಿದ ರೀತಿಯಲ್ಲೇ, ಆರ್ಥಿಕ ಸ್ವಚ್ಛತೆ ಬಡವರ ಅಧಿಕಾರವನ್ನು ಖಾತರಿ ಪಡಿಸುತ್ತದೆ, ಅವರ ಜೀವನವನ್ನು ಸುಗಮವಾಗಿಸುತ್ತದೆ. ದೇಶದಲ್ಲಿ ಜನ್ ಧನ್ ಖಾತೆ ತೆರೆಯುವ ಮೂಲಕ ಚಾಲನೆ ನೀಡಲಾದ ಅಭಿಯಾನದಿಂದಾಗಿ, ಇಂದು ಬಡವರಿಗೆ ಅವರ ಹಕ್ಕಿನ ಹಣ ನೇರವಾಗಿ ಅವರ ಖಾತೆಯನ್ನು ತಲುಪುತ್ತಿದೆ ಎಂದು ನಿಮಗೆ ತಿಳಿದಿದೆ. ಇದರಿಂದಾಗಿ ಭ್ರಷ್ಟಚಾರದಂತಹ ಅಡಚಣೆಗಳು ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆರ್ಥಿಕ ಸ್ವಚ್ಛತೆಯಲ್ಲಿ ತಂತ್ರಜ್ಞಾನ ಬಹಳಷ್ಟು ಸಹಾಯ ಮಾಡುತ್ತದೆ ಎನ್ನುವುದು ಸತ್ಯವಾದ ಮಾತು. ಇಂದು ಗ್ರಾಮ- ಗ್ರಾಮಗಳಲ್ಲಿ ಕೂಡಾ fin-techUPI ಮೂಲಕ ಡಿಜಿಟಲ್ ವಹಿವಾಟು ನಡೆಸುವ ದಿಕ್ಕಿನಲ್ಲಿ ಸಾಮಾನ್ಯ ನಾಗರೀಕರೂ ಜೊತೆಯಾಗಿದ್ದಾರೆ. ಇದರ ಪ್ರಚಾರ ಹೆಚ್ಚಾಗುತ್ತಿದೆ ಎನ್ನುವುದು ನಮಗೆ ಬಹಳ ಸಂತೋಷ ತರುವ ವಿಷಯವಾಗಿದೆ. ನಿಮಗೆ ನಿಜಕ್ಕೂ ಹೆಮ್ಮೆ ಎನಿಸುವ ಅಂಕಿಅಂಶವನ್ನು ನಾನು ತಿಳಿಸುತ್ತೇನೆ. ಕಳೆದ ಆಗಸ್ಟ್ ತಿಂಗಳಿನಲ್ಲಿ, ಒಂದೇ ತಿಂಗಳಿನಲ್ಲಿ UPI ನಿಂದ 355 ಕೋಟಿ ವಹಿವಾಟು ನಡೆದಿದೆ. ಅಂದರೆ ಸುಮಾರು 350 ಕೋಟಿಗಿಂತ ಅಧಿಕ ವಹಿವಾಟು, ಅಂದರೆ ಆಗಸ್ಟ್ ತಿಂಗಳಿನಲ್ಲಿ 350 ಕೋಟಿಗಿಂತ ಹೆಚ್ಚು ಬಾರಿ ಡಿಜಿಟಲ್ ವಹಿವಾಟಿಗಾಗಿ ಯುಪಿಐ ಉಪಯೋಗಿಸಲಾಗಿದೆ ಎಂದು ನಾವು ಹೇಳಬಹುದು. ಇಂದು ಸರಾಸರಿ 6 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯಲ್ಲಿ ಸ್ವಚ್ಛತೆ, ಪಾರದರ್ಶಕತೆ ಮೂಡುತ್ತಿದೆ ಮತ್ತು fin-techನ ಪ್ರಾಮುಖ್ಯತೆ ಹೆಚ್ಚಾಗುತ್ತಿದೆಯೆಂದು ನಮಗೆ ತಿಳಿದಿದೆ. 

ಸ್ನೇಹಿತರೇ, ಬಾಪೂರವರು ಹೇಗೆ ಸ್ವಚ್ಛತೆಯನ್ನು ಸ್ವಾತಂತ್ರ್ಯದೊಂದಿಗೆ ಬೆಸೆದರೋ, ಅಂತೆಯೇ ಖಾದಿಯನ್ನೂ ಸ್ವಾತಂತ್ರ್ಯದ ಕುರುಹಾಗಿ ಮಾಡಿದರು. ಇಂದು ಸ್ವಾತಂತ್ರ್ಯದ 75 ವರ್ಷದಲ್ಲಿ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ, ಸ್ವಾತಂತ್ರ್ಯದ ಚಳುವಳಿಯಲ್ಲಿ ಖಾದಿಗೆ ದೊರೆತಿದ್ದ ಮನ್ನಣೆಯನ್ನು ಇಂದು ನಮ್ಮ ಯುವ ಪೀಳಿಗೆ ಖಾದಿಗೆ ನೀಡುತ್ತಿದೆ ಎಂದು ನಾನು ಸಂತೋಷದಿಂದ ಹೇಳಬಹುದು. ಇಂದು ಸಾಕಷ್ಟು ಪ್ರಮಾಣದಲ್ಲಿ ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳಲ್ಲಿ ಹೆಚ್ಚಳವಾಗಿದೆ, ಅವುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ದೆಹಲಿಯ ಖಾದಿ ಶೋರೂಮ್ ನಲ್ಲಿ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ವ್ಯಾಪಾರ ನಡೆದಿರುವ ಅನೇಕ ಸಂದರ್ಭಗಳಿವೆ ಎಂದು ನಿಮಗೂ ತಿಳಿದಿರಬಹುದು. ಅಕ್ಟೋಬರ್ 2 ರಂದು ಬಾಪೂ ಅವರ ಜನ್ಮ ಜಯಂತಿಯಂದು ನಾವೆಲ್ಲರೂ ಮತ್ತೊಮ್ಮೆ ಹೊಸ ದಾಖಲೆ ನಿರ್ಮಿಸೋಣ ಎಂದು ನಾನು ನಿಮಗೆ ಪುನಃ ನೆನಪಿಸಲು ಬಯಸುತ್ತೇನೆ. ನೀವು ನಿಮ್ಮ ನಗರದಲ್ಲಿ ಖಾದಿ, ಕೈಮಗ್ಗದ ಉತ್ಪನ್ನ ಕರಕುಶಲ ವಸ್ತುಗಳ ಮಾರಾಟ ಎಲ್ಲೇ ನಡೆದಿರಲಿ ಅಲ್ಲಿ ಹೋಗಿ ಅವುಗಳನ್ನು ಖರೀದಿಸಿ. ದೀಪಾವಳಿ ಬರಲಿದೆ, ಹಬ್ಬಗಳ ಋತುವಿಗಾಗಿ ಖಾದಿ, ಕೈಮಗ್ಗ, ಮತ್ತು ಕರಕುಶಲ ವಸ್ತುಗಳು ಹೀಗೆ ಉಪಯೋಗಕ್ಕೆ ಬರುವ ಪ್ರತಿ ಖರೀದಿಯೂ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಬಲಗೊಳಿಸುತ್ತದೆ, ಮತ್ತು ಹಿಂದಿನ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಸೃಷ್ಟಿಸುತ್ತದೆ ಎನ್ನುವ ಭರವಸೆ ನನಗಿದೆ. 

ಸ್ನೇಹಿತರೇ, ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ, ದೇಶದಲ್ಲಿ ಸ್ವಾತಂತ್ರ್ಯದ ಇತಿಹಾಸದಲ್ಲಿ ಬೆಳಕಿಗೆ ಬಾರದೇ ಇರುವ ಕಥೆಗಳನ್ನು ಜನತೆಗೆ ತಲುಪಿಸುವ ಒಂದು ಅಭಿಯಾನ ಕೂಡಾ ನಡೆಯುತ್ತಿದೆ. ಇದಕ್ಕಾಗಿ ಉದಯೋನ್ಮುಖ ಲೇಖಕರನ್ನು ಮತ್ತು ವಿಶ್ವದ ಯುವಜನತೆಯನ್ನು ಆಹ್ವಾನಿಸಲಾಯಿತು. ಈ ಅಭಿಯಾನಕ್ಕಾಗಿ ಈವರೆಗೆ ವಿವಿಧ ಭಾಷೆಗಳ 13 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಅದೂ ಕೂಡ 14 ಬೇರೆ ಬೇರೆ ಭಾಷೆಗಳಲ್ಲಿ, 20 ಕ್ಕೂ ಅಧಿಕ ದೇಶಗಳಲ್ಲಿ. ಅನೇಕ ಅನಿವಾಸಿ ಭಾರತೀಯರು ಕೂಡಾ ಈ ಅಭಿಯಾನದೊಂದಿಗೆ ಸೇರುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ.

ಮತ್ತೊಂದು ಬಹಳ ಕುತೂಹಲಕಾರಿ ಮಾಹಿತಿ ಇದೆ. ಸುಮಾರು 5000 ಕ್ಕೂ ಅಧಿಕ ಉದಯೋನ್ಮುಖ ಲೇಖಕರು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಅನ್ವೇಷಿಸುತ್ತಿದ್ದಾರೆ. ಅನಾಮಿಕರಾಗಿ ಉಳಿದಿರುವ, ಇತಿಹಾಸದ ಪುಟಗಳಲ್ಲಿ ಹೆಸರು ಕಾಣದಿರುವ ಅನ್ಸಂಗ್ ಹೀರೋಗಳ ವಿಷಯದ ಬಗ್ಗೆ, ಅವರ ಜೀವನದ ಬಗ್ಗೆ ಅಂತಹ ಘಟನೆಗಳ ಬಗ್ಗೆ ಸ್ವಲ್ಬ ಬರೆಯಲು ಸಂಕಲ್ಪ ಮಾಡಿದ್ದಾರೆ. ಅಂದರೆ ಸ್ವಾತಂತ್ರ್ಯದ 75 ವರ್ಷಗಳಲ್ಲಿ ಎಂದೂ ಚರ್ಚೆಯಾಗಿರದಂತಹ ಸ್ವಾತಂತ್ರ್ಯ ವೀರ ಸೈನಿಕರ ಚರಿತ್ರೆಯನ್ನು ಕೂಡಾ ದೇಶದ ಜನತೆಯ ಮುಂದೆ ತರಲು ನಿರ್ಧರಿಸಿದ್ದಾರೆ. ನೀವು ಕೂಡಾ ಯುವಜನತೆಯನ್ನು ಪ್ರೇರೇಪಿಸಿ ಎಂದು ಎಲ್ಲಾ ಶ್ರೋತೃಗಳಲ್ಲಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಲ್ಲಿ ನನ್ನ ಮನವಿ. ನೀವು ಕೂಡಾ ಮುಂದೆ ಬನ್ನಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇತಿಹಾಸ ಬರೆಯುವ ಕೆಲಸ ಮಾಡುತ್ತಿರುವ ಜನರು ಇತಿಹಾಸ ಸೃಷ್ಟಿಸುವವರು ಕೂಡಾ ಆಗಿರುತ್ತಾರೆ ಎನ್ನುವುದು ನನ್ನ ಖಚಿತ ನಂಬಿಕೆಯಾಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಸಿಯಾಚಿನ್ ಗ್ಲೇಷಿಯರ್ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಅಲ್ಲಿನ ಚಳಿ ಎಷ್ಟು ಭಯಾನಕವಾಗಿದೆಯೆಂದರೆ, ಅಲ್ಲಿ ವಾಸಮಾಡುವುದು ಸಾಮಾನ್ಯ ಮನುಷ್ಯನಿಗೆ ಸಾಧ್ಯವಾಗುವುದೇ ಇಲ್ಲ. ದೂರದೂರವರೆಗೆ ಎಲ್ಲಿ ನೋಡಿದರೂ ಹಿಮವೇ ಹಿಮ ತುಂಬಿರುತ್ತದೆ. ಗಿಡಮರಗಳ ಸುಳಿವಂತೂ ಇರುವುದೇ ಇಲ್ಲ. ಇಲ್ಲಿ ತಾಪಮಾನ ಮೈನಸ್ 60 ಡಿಗ್ರಿ ಸೆಲ್ಷಿಯಸ್ ವರೆಗೂ ಕುಸಿಯುತ್ತದೆ. ಕೆಲವೇ ದಿನಗಳ ಹಿಂದೆ ಸಿಯಾಚಿನ್ ನ ಈ ದುರ್ಗಮ ಪ್ರದೇಶದಲ್ಲಿ 8 ದಿವ್ಯಾಂಗರ ತಂಡವೊಂದು ಮಾಡಿತೋರಿಸಿದ ಅದ್ಭುತ ಕಾರ್ಯವೊಂದು ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆಯ ವಿಷಯವಾಗಿದೆ. ಈ ತಂಡ ಸಿಯಾಚಿನ್ ಗ್ಲೇಷಿಯರ್ ನ 15 ಸಾವಿರ ಅಡಿಗಿಂತ ಹೆಚ್ಚು ಎತ್ತರದಲ್ಲಿರುವ ಕುಮಾರ್ ಪೆÇೀಸ್ಟ್ ನಲ್ಲಿ ತಮ್ಮ ಧ್ವಜ ಹಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ದೈಹಿಕ ಸವಾಲುಗಳ ಹೊರತಾಗಿಯೂ ನಮ್ಮ ಈ ದಿವ್ಯಾಂಗರು ಮಾಡಿ ತೋರಿಸಿರುವ ಕಾರ್ಯವು ಇಡೀ ದೇಶಕ್ಕೆ ಪ್ರೇರಣೆಯಾಗಿದೆ ಮತ್ತು ಈ ತಂಡದ ಸದಸ್ಯರ ಕುರಿತು ತಿಳಿದುಕೊಂಡಾಗ ನನ್ನಂತೆಯೇ ನಿಮ್ಮಲ್ಲೂ ಧೈರ್ಯ ಮತ್ತು ಉತ್ಸಾಹ ಮೂಡುತ್ತದೆ. ಈ ಕೆಚ್ಚೆದೆಯ ದಿವ್ಯಾಂಗರ ಹೆಸರುಗಳು ಹೀಗಿವೆ. ಮಹೇಶ್ ನೆಹೆರಾ, ಉತ್ತರಾಖಂಡದ ಅಕ್ಷತ್ ರಾವತ್, ಮಹಾರಾಷ್ಟ್ರದ ಪುಷ್ಪಕ್ ಗವಾಂಡೆ, ಹರಿಯಾಣಾದ ಅಜಯ್ ಕುಮಾರ್, ಲಡಾಕ್ ನ ಲೋಬ್ಸಾಂಗ್ ಚೋಸ್ಪೇಲ್, ತಮಿಳುನಾಡಿನ ಮೇಜರ್ ದ್ವಾರಕೇಷ್, ಜಮ್ಮು ಕಾಶ್ಮೀರದ ಇರ್ಫಾನ್ ಅಹ್ಮದ್ ಮೀರ್ ಮತ್ತು ಹಿಮಾಚಲ್ ದೇಶದ ಚೋಂಜಿನ್ ಎಂಗ್ಮೋ. ಸಿಯಾಚಿನ್ ಗ್ಲೇಷಿಯರ್ ತಲುಪುವ ಈ ಕಾರ್ಯಾಚರಣೆಯು, ಭಾರತೀಯ ಸೇನೆಯ ವಿಶೇಷ ಪಡೆಗಳ ನೈಪುಣ್ಯತೆಯ ಸಹಾಯದಿಂದ ಸಫಲವಾಗಿದೆ. ನಾನು ಈ ಐತಿಹಾಸಿಕ ಮತ್ತು ಅಭೂತಪೂರ್ವ ಸಾಧನೆಗಾಗಿ ಈ ತಂಡವನ್ನು ಶ್ಲಾಘಿಸುತ್ತೇನೆ. ಇದು ನಮ್ಮ ದೇಶವಾಸಿಗಳ “Can Do Culture”, “Can Do Determination”, “Can Do Attitude” ಪ್ರವೃತ್ತಿಯೊಂದಿಗೆ ಪ್ರತಿ ಸವಾಲನ್ನೂ ಎದುರಿಸಿ ನಿಭಾಯಿಸುವ ಮನೋಭಾವವನ್ನು ಕೂಡಾ ವ್ಯಕ್ತಪಡಿಸುತ್ತದೆ.

ಮಿತ್ರರೇ, ಇಂದು ದೇಶದಲ್ಲಿ ದಿವ್ಯಾಂಗ ಜನರ ಕಲ್ಯಾಣಕ್ಕಾಗಿ ಬಹಳಷ್ಟು ಪ್ರಯತ್ನಗಳು ಆಗುತ್ತಿವೆ. ನನಗೆ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಒಂದು ಪ್ರಯತ್ನ ‘ಒನ್ ಟೀಚರ್, ಒನ್ ಕಾಲ್’ ಇದರ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಬರೇಲಿಯಲ್ಲಿ ನಡೆಯುತ್ತಿರುವ ಇಂತಹ ಅನನ್ಯ ಪ್ರಯತ್ನ ದಿವ್ಯಾಂಗ ಮಕ್ಕಳಿಗೆ ಹೊಸ ದಾರಿ ತೋರಿಸುತ್ತಿದೆ. ಈ ಅಭಿಯಾನದ ನೇತೃತ್ವವನ್ನು ಡಭೌರಾ ಗಂಗಾಪುರದ ಒಂದು ಶಾಲೆಯ ಪ್ರಿನ್ಸಿಪಾಲ್ ಆದಂತಹ ದೀಪಮಾಲಾ ಪಾಂಡೇಯ್ ಅವರು ವಹಿಸಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಈ ಅಭಿಯಾನದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗಿದ್ದಷೆ್ಟೀ ಅಲ್ಲದೆ ಸುಮಾರು 350 ಕ್ಕೂ ಅಧಿಕ ಶಿಕ್ಷಕರು ಕೂಡ ಸೇವಾ ಭಾವದಿಂದ ಈ ಅಭಿಯಾನದಲ್ಲಿ ಸೇರಿಕೊಂಡರು. ಈ ಶಿಕ್ಷಕರು ಹಳ್ಳಿ ಹಳ್ಳಿಗೆ ಹೋಗಿ ದಿವ್ಯಾಂಗ ಮಕ್ಕಳನ್ನು ಹುಡುಕುತ್ತಾರೆ ಮತ್ತು ಅವರನ್ನು ಯಾವುದಾದರೊಂದು ಶಾಲೆಗೆ ನಿಶ್ಚಿತವಾಗಿ ಸೇರಿಸುತ್ತಾರೆ. ದಿವ್ಯಾಂಗ ಜನರಿಗಾಗಿ ದೀಪಮಾಲಾ ಹಾಗೂ ಸಹ ಶಿಕ್ಷಕರ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಮನದಾಳದಿಂದ ಪ್ರಶಂಸಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಪ್ರತೀ ಪ್ರಯತ್ನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. 

 ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಮ್ಮೆಲ್ಲರ ಜೀವನದ ಪರಿಸ್ಥಿತಿ ಹೇಗಾಗಿದೆ ಎಂದರೆ ಒಂದು ದಿನದಲ್ಲಿ ನೂರಾರು ಬಾರಿ ಕೊರೊನಾ ಎನ್ನುವ ಶಬ್ದ ನಮ್ಮ ಕಿವಿಯಲ್ಲಿ ಘುಯ್ ಗುಡುತ್ತಿದೆ. ನೂರು ವರ್ಷಗಳಲ್ಲಿ ಬಂದಿರುವ ಅತೀ ದೊಡ್ಡ ಜಾಗತಿಕ ಮಹಾಮಾರಿ ಕೋವಿಡ್ 19 ಪ್ರತೀ ಭಾರತೀಯನಿಗೂ ಬಹಳಷ್ಟು ಕಲಿಸಿಕೊಟ್ಟಿದೆ. ಆರೋಗ್ಯಪಾಲನೆ ಮತ್ತು ಸ್ವಾಸ್ಥ್ಯದ ವಿಚಾರವಾಗಿ ಇಂದು ಚರ್ಚೆ ಕೂಡ ಹೆಚ್ಚಿದೆ, ಹಾಗೆಯೇ ಜಾಗರೂಕತೆಯೂ ಕೂಡ ಹೆಚ್ಚಿದೆ. ನಮ್ಮ ದೇಶದಲ್ಲಿ ಪರಂಪರಾಗತವಾಗಿ ಆರೋಗ್ಯಕ್ಕೆ ಸಹಕಾರಿಯಾಗುವಂತಹ ನೈಸರ್ಗಿಕ ಉತ್ಪನ್ನಗಳು ಹೇರಳವಾಗಿ ಲಭ್ಯವಿದ್ದು ಇವು ಅರೋಗ್ಯ ಕಾಪಾಡಿಕೊಳ್ಳಲು ಬಹಳ ಪ್ರಯೋಜನಕಾರಿಯಾಗಿದೆ. ಒಡಿಶಾದ ಕಾಲಾಹಾಂಡೀ ಯ, ನಾಂದೋಲ್ ಎಂಬಲ್ಲಿ ವಾಸವಿರುವ ಪತಾಯತ್ ಸಾಹೂಜೀ ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಒಂದು ಹೊಸ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಒಂದೂವರೆ ಎಕರೆಯಷ್ಟು ಜಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಇದಿಷೆ್ಟೀ ಅಲ್ಲದೆ ಸಾಹೂಜೀ ಅವರು ಈ ಔಷಧೀಯ ಸಸ್ಯಗಳ ವಿವರಗಳನ್ನು ಕೂಡ ದಾಖಲಿಸಿದ್ದಾರೆ. ರಾಂಚಿಯಿಂದ ಸತೀಶ್ ಅವರು ಪತ್ರಮುಖೇನ ನನಗೆ ಇಂತಹುದೇ ಮತ್ತೊಂದು ವಿಚಾರವನ್ನು ತಿಳಿಸಿದ್ದಾರೆ. ಸತೀಶ್ ಅವರು ಝಾಖರ್ಂಡ್ ನ ಒಂದು ಆಲೋವೆರಾ ಹಳ್ಳಿಯ ಕಡೆಗೆ ನನ್ನ ಗಮನ ಬೀಳುವಂತೆ ಮಾಡಿದ್ದಾರೆ. ರಾಂಚಿಯ ಸಮೀಪದಲ್ಲೇ ಇರುವ ದೇವರೀ ಗ್ರಾಮದ ಮಹಿಳೆಯರು ಮಂಜೂ ಕಚ್ಚಪ್ ಅವರ ನೇತೃತ್ವದಲ್ಲಿ ಬಿರ್ಸಾ ಕೃಷಿ ವಿದ್ಯಾಲಯದಿಂದ ಆಲೋವೆರಾ ಕೃಷಿಯ ಬಗ್ಗೆ ಶಿಕ್ಷಣ ಪಡೆದುಕೊಂಡಿದ್ದರು. ನಂತರ ಅವರು ಆಲೋವೆರಾದ ಕೃಷಿ ಪ್ರಾರಂಭಿಸಿದರು. ಈ ಕೃಷಿಯಿಂದ ಬರೀ ಅರೋಗ್ಯ ಕ್ಷೇತ್ರದಲ್ಲಿ ಲಾಭವಾಗಿದ್ದಷೆ್ಟೀ ಅಲ್ಲದೆ ಈ ಮಹಿಳೆಯರ ಗಳಿಕೆ ಕೂಡ ಹೆಚ್ಚಾಯಿತು. ಕೋವಿಡ್ ಮಹಾಮಾರಿಯ ಕಾರಣವಿದ್ದಾಗ್ಯೂ ಇವರಿಗೆ ಹೆಚ್ಚಿನ ಗಳಿಕೆ ಆಯಿತು. ಇದಕ್ಕೆ ದೊಡ್ಡ ಕಾರಣ ಏನೆಂದರೆ ಸ್ಯಾನಿಟೈಸರ್ ತಯಾರಿಸುವ ಕಂಪನಿಗಳು ನೇರವಾಗಿ ಇವರಿಂದಲೇ ಆಲೋವೆರಾ ಖರೀದಿ ಮಾಡುತ್ತಿದ್ದರು. ಇಂದು ಈ ಕಾರ್ಯದಲ್ಲಿ ಸುಮಾರು ನಲವತ್ತು ಮಹಿಳೆಯರ ಒಂದು ತಂಡ ಸೇರಿಕೊಂಡಿದೆ ಮತ್ತು ಹಲವಾರು ಎಕರೆಗಳಲ್ಲಿ ಆಲೋವೆರಾದ ಕೃಷಿ ನಡೆಯುತ್ತಿದೆ. ಒಡಿಶಾದ ಪತಯಾತ್ ಸಾಹೂಜೀ ಅವರೇ ಆಗಲಿ, ಅಥವಾ ದೇವರೀ ಗ್ರಾಮದ ಮಹಿಳೆಯರ ಈ ತಂಡವೇ ಆಗಿರಲಿ ಕೃಷಿಯನ್ನು ಯಾವ ವಿಧವಾಗಿ ಅರೋಗ್ಯ ಕ್ಷೇತ್ರಕ್ಕೆ ಜೋಡಿಸಿದ್ದಾರೆ ಎನ್ನುವುದಕ್ಕೆ ಇದು ಒಂದು ದೊಡ್ಡ ಉದಾಹರಣೆ. 

ಗೆಳೆಯರೇ, ಮುಂಬರುವ ಅಕ್ಟೋಬರ್ 2 ರಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿ ಕೂಡ ಇದೆ. ಅವರ ನೆನಪಿನಲ್ಲಿ ಈ ದಿನ, ನಮಗೆ ಕೃಷಿ ನೆಲದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಬಗ್ಗೆ ಕೂಡ ಕಲಿಸುತ್ತದೆ. ಔಷಧೀಯ ಸಸ್ಯಗಳ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಮೆಡಿ-ಹಬ್ ಟಿಬಿಐ ಎಂಬ ಹೆಸರಿನಲ್ಲಿ ಒಂದು ಇನ್ಕ್ಯುಬೇಟರ್ ಗುಜರಾತ್ ನ ಆನಂದ್ ನಲ್ಲಿ ಕೆಲಸ ಮಾಡುತ್ತಿದೆ. ಔಷಧ ಮತ್ತು ಸುಗಂಧ ಸಸ್ಯಗಳ ಜೊತೆ ಬೆಸೆದುಕೊಂಡಿರುವ ಈ ಇನ್ಕ್ಯುಬೇಟರ್ ಬಹಳ ಕಡಿಮೆ ಸಮಯದಲ್ಲೇ ಹದಿನೈದು ಹೊಸ ಉದ್ಯಮಿಗಳ ವ್ಯವಹಾರದ ಯೋಜನೆಗಳಲ್ಲಿ ಸಹಾಯಹಸ್ತ ನೀಡಿದೆ. ಈ ಇನ್ಕ್ಯುಬೇಟರ್ ನ ಸಹಾಯದಿಂದಲೇ ಸುಧಾ ಚೆಬ್ರೋಲೂ ಅವರು ತಮ್ಮ ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಇವರ ಕಂಪನಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧಿತ್ವ ನೀಡಲಾಗುತ್ತದೆ ಮತ್ತು ಅವರ ಮೇಲೆಯೇ ಹೊಸ ಕಲ್ಪನೆಯ ಗಿಡಮೂಲಿಕೆಯ ಮಿಶ್ರಣಗಳನ್ನು ತಯಾರು ಮಾಡುವ ಜವಾಬ್ದಾರಿಯೂ ಕೂಡ ಇದೆ. ಮತ್ತೋರ್ವ ನವೋದ್ಯಮಿ ಸುಭಾಶ್ರೀ ಅವರಿಗೆ ಕೂಡ ಇದೇ ಔಷಧ ಮತ್ತು ಸುಗಂಧ ಸಸ್ಯಗಳ ಇನ್ಕ್ಯುಬೇಟರ್ ನಿಂದ ಸಹಾಯ ಸಿಕ್ಕಿದೆ. ಸುಭಾಶ್ರೀ ಅವರ ಕಂಪನಿಯು ಹರ್ಬಲ್ ರೂಂ ಮತ್ತು ಕಾರ್ ಫ್ರೆಶ್ ನರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಇವರು ಒಂದು ಹರ್ಬಲ್ ಟೆರೆಸ್ ಉದ್ಯಾನ ವನ್ನು ಕೂಡ ಮಾಡಿದ್ದಾರೆ. ಇದರಲ್ಲಿ 400 ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ.

ಮಿತ್ರರೇ, ಆಯುಷ್ ಸಚಿವಾಲಯವು ಮಕ್ಕಳಲ್ಲಿ ಔಷಧೀಯ ಮತ್ತು ಗಿಡಮೂಲಿಕೆಗಳ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆಸಕ್ತಿದಾಯಕ ಕ್ರಮವನ್ನು ಕೈಗೊಂಡಿದೆ. ಇದರ ಜವಾಬ್ದಾರಿಯನ್ನು ಪೆÇ್ರಫೆಸರ್ ಆಯುಷ್ಮಾನ್ ಅವರು ವಹಿಸಿಕೊಂಡಿದ್ದಾರೆ. ಈ ಪೆÇ್ರಫೆಸರ್ ಆಯುಷ್ಮಾನ್ ಯಾರು ಎಂದು ನೀವು ಯೋಚಿಸುತ್ತಿರಬಹುದು. ವಾಸ್ತವವಾಗಿ ಪೆÇ್ರಫೆಸರ್ ಆಯುಷ್ಮಾನ್ ಒಂದು ಕಾಮಿಕ್ಸ್ ಪುಸ್ತಕದ ಹೆಸರು. ಇದರಲ್ಲಿ ಬೇರೆ ಬೇರೆ ಕಾರ್ಟೂನ್ ಪಾತ್ರಗಳ ಮೂಲಕ ಸಣ್ಣ ಸಣ್ಣ ಕಥೆಗಳನ್ನು ಚಿತ್ರಿಸಲಾಗಿದೆ. ಜೊತೆಯಲ್ಲಿ ತುಳಸಿ, ಆಲೋವೆರಾ, ನೆಲ್ಲಿಕಾಯಿ, ಅಮೃತಬಳ್ಳಿ, ಬೇವು, ಅಶ್ವಗಂಧ, ಬ್ರಾಹ್ಮೀ ಮುಂತಾದ ಆರೋಗ್ಯಕರ ಔಷಧೀಯ ಸಸ್ಯಗಳ ಉಪಯೋಗಗಳನ್ನು ತಿಳಿಸಲಾಗಿದೆ.

ರ ಅಪಾರ ಸಾಧ್ಯತೆಗಳಿವೆ. ಆಯುರ್ವೇದ ಮತ್ತು ಗಿಡಮೂಲಿಕೆ ಉತ್ಪನ್ನಗಳ ರಪ್ತು ಪ್ರಮಾಣದಲ್ಲಿ ಕೂಡಾ ಕಳೆದ ವರ್ಷಗಳಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. 

 ನಮ್ಮ ಜನರ ಯೋಗಕ್ಷೇಮ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ರೈತರ ಮತ್ತು ಯುವಜನತೆಯ ಆದಾಯವನ್ನು ಹೆಚ್ಚಿಸುವಲ್ಲಿ ಕೂಡಾ ಸಹಾಯ ಮಾಡುವ ರೀತಿ ಈ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ವಿಜ್ಞಾನಿಗಳಲ್ಲಿ, ಸಂಶೋಧಕರಲ್ಲಿ ಮತ್ತು ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಮನವಿ ಮಾಡುತ್ತೇನೆ. 

ಸ್ನೇಹಿತರೇ, ಸಾಂಪ್ರದಾಯಿಕ ಕೃಷಿಗಿಂತ ಒಂದು ಹೆಜ್ಜೆ ಮುಂದೆ ಸಾಗಿ, ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳು, ಹೊಸ ಆಯ್ಕೆಗಳು, ಸತತವಾಗಿ ಸ್ವಉದ್ಯೋಗದ ಹೊಸ ಸಾಧನಗಳಾಗುತ್ತಿವೆ. ಪುಲ್ವಾಮಾದ ಇಬ್ಬರು ಸೋದರರ ಕತೆಯೊಂದು ಇದರ ಒಂದು ಉದಾಹರಣೆಯಾಗಿದೆ. ಜಮ್ಮು ಕಾಶ್ಮೀರದ ಬಿಲಾಲ್ ಅಹ್ಮದ್ ಶೇಖ್ ಮತ್ತು ಮುನೀರ್ ಅಹ್ಮದ್ ಶೇಖ್ ಸೋದರರು ತಮಗಾಗಿ ಹೊಸ ವಿಧಾನವೊಂದನ್ನು ಅನ್ವೇಷಿಸಿದ್ದು, ಇದು ನವಭಾರತದ ಒಂದು ಉದಾಹರಣೆಯಾಗಿದೆ. 39 ವರ್ಷದ ಬಿಲಾಲ್ ಅಹ್ಮದ್ ಅವರು ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ಅವರು ಅನೇಕ ಪದವಿಗಳನ್ನು ಗಳಿಸಿದ್ದಾರೆ. ತಮ್ಮ ಉನ್ನತ ಶಿಕ್ಷಣದಿಂದ ಗಳಿಸಿದ ಅನುಭವಗಳನ್ನು ಉಪಯೋಗಿಸಿ ಅವರಿಂದು ಕೃಷಿಯಲ್ಲಿ ಸ್ವಂತ ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಬಿಲಾಲ್ ಅವರು ತಮ್ಮ ಮನೆಯಲ್ಲೇ ವರ್ಮಿ ಕಂಪೆÇೀಸ್ಟಿಂಗ್ ಘಟಕವೊಂದನ್ನು ಸ್ಥಾಪಿಸಿದ್ದಾರೆ. ಈ ಘಟಕದಿಂದ ತಯಾರಾಗುವ ಜೈವಿಕ ರಸಗೊಬ್ಬರದಿಂದ ಹೊಲದಲ್ಲಿ ಸಾಕಷ್ಟು ಪ್ರಯೋಜನವಾಗಿದ್ದು ಮಾತ್ರವಲ್ಲ, ಇದು ಜನರಿಗೆ ಉದ್ಯೋಗಾವಕಾಶಗಳನ್ನು ಕೂಡಾ ಒದಗಿಸಿದೆ. ಪ್ರತಿ ವರ್ಷ ಈ ಸೋದರರ ಘಟಕದಿಂದ ರೈತರಿಗೆ ಸುಮಾರು ಮೂರು ಸಾವಿರ ಕ್ವಿಂಟಾಲ್ ವರ್ಮಿ ಕಂಪೆÇೀಸ್ಟ್ ದೊರೆಯುತ್ತಿದೆ. ಇಂದು ಅವರ ಈ ವರ್ಮಿ ಕಂಪೆÇೀಸ್ಟಿಂಗ್ ಘಟಕದಲ್ಲಿ 15 ಮಂದಿ ಕೆಲಸ ಕೂಡಾ ಮಾಡುತ್ತಿದ್ದಾರೆ. ಅವರ ಘಟಕವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಇಚ್ಛೆಯಿರುವ ಯವಜನತೆಯಾಗಿದ್ದಾರೆ. ಪುಲ್ವಾಮಾದ ಶೇಖ್ ಸೋದರರು ಉದ್ಯೋಗಾನ್ವೇಷಕರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗುವ ಸಂಕಲ್ಪ ತೊಟ್ಟರು ಮತ್ತು ಅವರಿಂದು ಜಮ್ಮು ಕಾಶ್ಮೀರ ಮಾತ್ರವಲ್ಲದೇ ಇಡೀ ದೇಶದ ಜನರಿಗೆ ಹೊಸದೊಂದು ದಾರಿ ತೋರಿಸುತ್ತಿದ್ದಾರೆ. 

ನನ್ನ ಪ್ರೀತಿಯ ದೇಶಬಾಂಧವರೇ, ಸೆಪ್ಟೆಂಬರ್ 25 ದೇಶದ ಶ್ರೇಷ್ಠ ಪುತ್ರ ಪಂಡಿತ್ ದೀನ್ ದಯಾಲ್ ಉಪಾಧ್ಯಾಯ ಅವರ ಜಯಂತಿ. ದೀನ್ ದಯಾಳ್ ಅವರು, ಕಳೆದ ಶತಮಾನದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು. ಅವರ ಅರ್ಥಶಾಸ್ತ್ರ ತತ್ವಗಳು, ಸಮಾಜವನ್ನು ಸಶಕ್ತಗೊಳಿಸುವ ಅವರ ನೀತಿಗಳು, ಅವರು ತೋರಿಸಿದ ಅಂತ್ಯೋದಯದ ಮಾರ್ಗ, ಇಂದಿಗೂ ಪ್ರಸ್ತುತ, ಅಷೆ್ಟೀ ಪ್ರೇರಣಾದಾಯಕವಾಗಿವೆ. ಮೂರು ವರ್ಷಗಳ ಹಿಂದೆ ಸೆಪ್ಟೆಂಬರ್ 25 ರಂದು ಅವರ ಜನ್ಮ ಜಯಂತಿಯಂದು ವಿಶ್ವದ ಅತಿ ದೊಡ್ಡ Health Assurance Scheme – ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಲಾಯಿತು. ಇಂದು ದೇಶದ ಎರಡೂಕಾಲು ಕೋಟಿಗೂ ಅಧಿಕ ಬಡಜನತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ದೊರೆತಿದೆ. ಬಡವರಿಗಾಗಿ ಇಷ್ಟು ದೊಡ್ಡ ಯೋಜನೆಯನ್ನು, ದೀನ್ ದಯಾಳ್ ಅವರ ಅಂತ್ಯೋದಯ್ ತತ್ವಕ್ಕೆ ಸಮರ್ಪಿಸಲಾಗಿದೆ. ಇಂದಿನ ಯುವಜನತೆ ಅವರ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದರಿಂದ ಅವರಿಗೆ ಬಹಳಷ್ಟು ಸಹಾಯವಾಗುತ್ತದೆ. ಒಂದು ಬಾರಿ ಲಕ್ನೋದಲ್ಲಿ ದೀನ್ ದಯಾಳ್ ಅವರು ಹೀಗೆ ಹೇಳಿದ್ದರು. - “ಪ್ರಪಂಚದಲ್ಲಿ ಎಷೆ್ಟೂಂದು ಉತ್ತಮ ವಿಷಯಗಳು, ಉತ್ತಮ ಗುಣಗಳಿವೆ, ಇವೆಲ್ಲವೂ ನಮಗೆ ಸಮಾಜದಿಂದಲೇ ದೊರೆಯುತ್ತವೆ. ನಾವು ಸಮಾಜದ ಈ ಋಣವನ್ನು ತೀರಿಸಲೇ ಬೇಕು ಎನ್ನುವಂತಹ ವಿಚಾರಗಳನ್ನು ನಾವು ಯೋಚಿಸಬೇಕು.” ಅಂದರೆ ನಾವು ಸಮಾಜದಿಂದ, ದೇಶದಿಂದ ಏನೆಲ್ಲಾ ಪಡೆದುಕೊಳ್ಳುತ್ತೇವೋ ಅದು ದೇಶದ ಕಾರಣದಿಂದಲೇ ಪಡೆದುಕೊಳ್ಳುತ್ತೇವೆ. ಆದ್ದರಿಂದ ದೇಶದ ಈ ಋಣವನ್ನು ಹೇಗೆ ತೀರಿಸಬೇಕೆಂಬ ಕುರಿತು ಚಿಂತಿಸಬೇಕೆಂಬ ವಿಷಯವನ್ನು ನಮಗೆ ದೀನ್ ದಯಾಳ್ ಅವರು ಕಲಿಸಿದ್ದಾರೆ. ಇದು ಇಂದಿನ ಯುವಜನತೆಗೆ ದೊಡ್ಡ ಸಂದೇಶವಾಗಿದೆ. 

ಸ್ನೇಹಿತರೇ, ದೀನ್ ದಯಾಳ್ ರವರ ಜೀವನದಿಂದ ನಮಗೆ ಎಂದಿಗೂ ಸೋಲೊಪ್ಪದ ಪಾಠವೂ ದೊರೆಯುತ್ತದೆ. ಗಂಭೀರ ರಾಜಕೀಯ ಮತ್ತು ಸೈದ್ಧಾಂತಿಕ ವೈಪರೀತ್ಯಗಳ ಹೊರತಾಗಿಯೂ ಭಾರತದ ಪ್ರಗತಿಗಾಗಿ ದೇಶೀಯ ಮಾದರಿಯ ದೃಷ್ಟಿಕೋನದಿಂದ ಅವರು ಹಿಂದೆ ಸರಿಯಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯ ಯುವಜನತೆ ಸಿದ್ಧ ಮಾರ್ಗಗಳಲ್ಲದೇ ಪ್ರತ್ಯೇಕವಾಗಿ ಮುಂದೆ ಸಾಗಲು ಬಯಸುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ದೀನ್ ದಯಾಳ್ ಅವರ ಜೀವನದಿಂದ ಇಂತಹವರಿಗೆ ಸಾಕಷ್ಟು ಸಹಾಯ ದೊರೆಯಬಹುದು. ಆದ್ದರಿಂದಲೇ ಅವರ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ. 

 ನನ್ನ ಪ್ರೀತಿಯ ದೇಶ ಬಾಂಧವರೇ, ನಾವಿಂದು ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಹೇಳುತ್ತಿದ್ದ ಹಾಗೆ, ಮುಂಬರುವ ದಿನಗಳು ಹಬ್ಬಗಳ ಸಮಯವಾಗಿದೆ. ಇಡೀ ದೇಶ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸುಳ್ಳಿನ ವಿರುದ್ಧ ಸತ್ಯದ ವಿಜಯೋತ್ಸವವನ್ನು ಆಚರಿಸಲಿದೆ. ಆದರೆ ಈ ಉತ್ಸವಾಚರಣೆಯಲ್ಲಿ ನಾವು ಹೋರಾಟದ ಬಗ್ಗೆ ಕೂಡಾ ನೆನಪಿಟ್ಟುಕೊಳ್ಳಬೇಕು ಅದೇ ಕೊರೋನಾ ವಿರುದ್ಧದ ಹೋರಾಟ. ಟೀಮ್ ಇಂಡಿಯಾ ಈ ಹೋರಾಟದಲ್ಲಿ ಪ್ರತಿದಿನ ಹೊಸದೊಂದು ದಾಖಲೆ ಸೃಷ್ಟಿಸುತ್ತಿದೆ. ಲಸಿಕಾ ನೀಡಿಕೆಯಲ್ಲಿ ದೇಶವು ಇಂತಹ ಅನೇಕ ದಾಖಲೆಗಳನ್ನು ಮಾಡುತ್ತಿದೆ. ಇದರ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆ ನಡೆಯುತ್ತಿದೆ. ಈ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಮಹತ್ವದ ಪಾತ್ರವಿದೆ. ನಮ್ಮ ಸರದಿ ಬಂದಾಗ ನಾವು ಲಸಿಕೆಯನ್ನು ಪಡೆಯಲೇ ಬೇಕು ಅದರೊಂದಿಗೆ ಈ ಸುರಕ್ಷತೆಯಿಂದ ಯಾರೂ ಹೊರತಾಗಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಸುತ್ತ ಮುತ್ತ ಯಾರಾದರೂ ಇನ್ನೂ ಲಸಿಕೆ ಪಡೆದುಕೊಳ್ಳದವರು ಇದ್ದರೆ, ಅವರನ್ನು ಲಸಿಕಾ ಕೇಂದ್ರಕ್ಕೆ ಕರೆತರಬೇಕು. ಲಸಿಕೆ ಪಡೆದುಕೊಂಡ ನಂತರವೂ ಅಗತ್ಯ ಶಿಷ್ಟಾಚಾರದ ಪಾಲನೆ ಮಾಡಲೇ ಬೇಕು. ಈ ಹೋರಾಟದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ತಮ್ಮ ಧ್ವಜ ಹಾರಿಸಲಿದೆಯೆಂಬ ಭರವಸೆ ನನಗಿದೆ. ನಾವು ಮುಂದಿನ ಬಾರಿ ಬೇರೊಂದು ವಿಷಯದ ಬಗ್ಗೆ ಮನದ ಮಾತನಾಡೋಣ. ನಿಮ್ಮೆಲ್ಲರಿಗೂ, ಪ್ರತಿಯೊಬ್ಬ ದೇಶವಾಸಿಗೂ, ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು. 

ಧನ್ಯವಾದ.

***



(Release ID: 1758233) Visitor Counter : 461