ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರು ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರು ಜಂಟಿಯಾಗಿ ಶಾಲಾ ನಾವಿನ್ಯತಾ ರಾಯಭಾರಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು


ಶಿಕ್ಷಕರು ಬದಲಾವಣೆಯ ಪ್ರವರ್ತಕರು ಮತ್ತು ನಾವಿನ್ಯತೆಯ ರಾಯಭಾರಿಗಳು: ಕೇಂದ್ರ ಶಿಕ್ಷಣ ಸಚಿವರು

ಶಾಲಾ ನಾವಿನ್ಯತಾ ರಾಯಭಾರಿ ತರಬೇತಿ ಕಾರ್ಯಕ್ರಮವು ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತದೆ: ಶ್ರೀ ಅರ್ಜುನ್ ಮುಂಡಾ

Posted On: 16 JUL 2021 3:18PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಜಂಟಿಯಾಗಿ 50,000 ಶಾಲಾ ಶಿಕ್ಷಕರಿಗೆ 'ಶಾಲಾ ನಾವಿನ್ಯತಾ ರಾಯಭಾರಿ ತರಬೇತಿ ಕಾರ್ಯಕ್ರಮ'ಕ್ಕೆ (ಎಸ್‌ಐಎಟಿಪಿ) ಇಂದು ಚಾಲನೆ ನೀಡಿದರು. ಸಹಾಯಕ ಸಚಿವರಾದ  ಶ್ರೀಮತಿ ಅನ್ನಪೂರ್ಣಾ ದೇವಿರಾಜ್ ಕುಮಾರ್ ರಂಜನ್ ಸಿಂಗ್ ಮತ್ತು ಡಾ. ಸುಭಾಷ್ ಸರ್ಕಾರ್ ಹಾಗೂ ಶಿಕ್ಷಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಧಾನ್, ಶಿಕ್ಷಕರು ನಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುವಂಥವರು. ನಮ್ಮ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರನ್ನು ಬದಲಾವಣೆಯ ಪ್ರವರ್ತಕರನ್ನಾಗಿ ಮತ್ತು ನಾವಿನ್ಯತೆಯ ರಾಯಭಾರಿಗಳನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ತಂತ್ರಜ್ಞಾನವು ಜಗತ್ತನ್ನು ಮರುರೂಪಿಸುತ್ತಿದ್ದು, ನಮ್ಮ ವಿದ್ಯಾರ್ಥಿಗಳು ದೇಶೀಯ ಸವಾಲುಗಳು ಮಾತ್ರವಲ್ಲದೆ ಜಾಗತಿಕ ಸವಾಲುಗಳನ್ನೂ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಶ್ರೀ ಪ್ರಧಾನ್ ಒತ್ತಿ ಹೇಳಿದರು. ಇಂದು ಆರಂಭಿಸಲಾದ ಕಾರ್ಯಕ್ರಮವು ಶಿಕ್ಷಣ ಸಚಿವಾಲಯದ ನಾವಿನ್ಯತಾ ಕೋಶ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ʻಸಿಬಿಎಸ್‌ಇʼ ಮತ್ತು ʻಎಐಸಿಟಿಇʼಗಳ ಸಹಯೋಗದ ಪ್ರಯತ್ನವಾಗಿದೆ. ಇದು ನಾವಿನ್ಯತೆ ಸಾಮರ್ಥ್ಯ ಹೊಂದಿರುವ ಲಕ್ಷಾಂತರ ವಿದ್ಯಾರ್ಥಿಗಳನ್ನು ಪೋಷಿಸುತ್ತದೆ, ನಾವಿನ್ಯತೆಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಹೊಸ ಮತ್ತು ಸದೃಢ ಭಾರತಕ್ಕೆ ಅಡಿಪಾಯ ಹಾಕುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಮಾತನಾಡಿ, ಶಿಕ್ಷಣ ಸಚಿವಾಲಯವು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ನಾವಿನ್ಯತೆಯ ಕ್ಷೇತ್ರದಲ್ಲಿ ತನ್ನ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ದೇಶಾದ್ಯಂತ ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಇರುವ ಹೆಚ್ಚಿನ ಸಂಖ್ಯೆಯ ಶಾಲೆಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ, ಇದು ಪ್ರಧಾನಮಂತ್ರಿಯವರ ನವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು

'ಎಸ್‌ಐಎಟಿಪಿʼ ಮಕ್ಕಳ ಸೃಜನಶೀಲತೆಗೆ ರೆಕ್ಕೆಗಳನ್ನು ನೀಡುತ್ತದೆ ಮತ್ತು ಅವರ ಆಲೋಚನೆಳ ಮೂಲಕ ಜಗತ್ತಿಗೆ ಹೊಸದನ್ನು ನೀಡಲು ವೇದಿಕೆ ಒದಗಿಸುತ್ತದೆ ಎಂದು ಶ್ರೀ ಅರ್ಜುನ್ ಮುಂಡಾ ಹೇಳಿದರು. ಬುಡಕಟ್ಟು ಮಕ್ಕಳಿಗಾಗಿ ಏಕಲವ್ಯ ಮಾದರಿ ವಸತಿ ಶಾಲೆಗಳು (ಇಎಂಆರ್‌ಎಸ್) ಪ್ರಧಾನಮಂತ್ರಿಯವರ ಮತ್ತೊಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ 740 ʻಇಎಂಆರ್‌ಎಸ್ʼಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಬುಡಕಟ್ಟು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವುದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಯತ್ನವಾಗಿರುವುದರಿಂದ ʻಇಎಂಆರ್‌ಎಸ್ʼ ವಿದ್ಯಾರ್ಥಿಗಳು ʻಎಸ್‌ಐಎಟಿಪಿʼಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಶಿಕ್ಷಕರಲ್ಲಿನ ಸಾಮರ್ಥ್ಯ ವರ್ಧನೆಯ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಸಹಯೋಗ, ವಿಮರ್ಶಾತ್ಮಕ ಚಿಂತನೆ ಮತ್ತು ಸಂವಹನ ಕೌಶಲ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆಅಲ್ಲದೆ, ಏಕಲವ್ಯ ಶಾಲೆಗಳನ್ನು ಇಡೀ ಕಾರ್ಯಕ್ರಮದಲ್ಲಿ ಸಂಯೋಜಿಸುವುದು ಬುಡಕಟ್ಟು ಮಕ್ಕಳ ಅರ್ಥಪೂರ್ಣ ಬೆಳವಣಿಗೆಗೆ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ಶ್ರೀ ಅರ್ಜುನ್ ಮುಂಡಾ ವಿವರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಝಾ ಅವರು, ನಾವಿನ್ಯತೆಯನ್ನು ಪ್ರೋತ್ಸಾಹಿಸುವುದು ಹೊಸ ಶಿಕ್ಷಣ ನೀತಿಯ ತಿರುಳಾಗಿದೆ ಎಂದು ಹೇಳಿದರು. ಶಿಕ್ಷಕರು ಹೊಸ ಬೋಧನಾ ವಿಧಾನಗಳನ್ನು ಕಂಡುಕೊಳ್ಳಬೇಕಾಗುತ್ತದೆ; ಅವರು ಮೊದಲು ಲಿಖಿತ ಪಠ್ಯ ಪುಸ್ತಕಗಳ ಸಾಧನಗಳಾಗಿ ವರ್ತಿಸುವ ಹಂತದಿಂದ ಮಾರ್ಗದರ್ಶಿಗಳಾಗಿ ತಮ್ಮನ್ನು ಪರಿವರ್ತಿಸಿಕೊಳ್ಳಬೇಕಾಗುತ್ತದೆ. ʻಎಕಲವ್ಯ ವಿಶ್ವ ಶಿಕ್ಷಣ ಶಾಲೆʼಯನ್ನು ನಡೆಸುವುದರ ಜೊತೆಗೆ, ಬುಡಕಟ್ಟು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಶಿಕ್ಷಣವನ್ನು ನೀಡುವಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಉಪಕ್ರಮಗಳಿಗೆ ಬೆಂಬಲ ನೀಡುತ್ತಿದೆ. ಹೊಸ ಉಪಕ್ರಮವು ಬುಡಕಟ್ಟು ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಝಾ ಹೇಳಿದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ʻಆದಿ-ಪ್ರಶಿಕ್ಷಣ್ʼ ಪೋರ್ಟಲ್ ಅನ್ನು ಪ್ರಾರಂಭಿಸಿದೆ, ಇದು ತರಬೇತಿಯ ಮಾಹಿತಿ ಭಂಡಾರವಾಗಿದೆ. ʻಎಸ್‌ಐಎಟಿಪಿʼ ತರಬೇತಿ ಮಾಡ್ಯೂಲ್ ಕೂಡ ಪೋರ್ಟಲ್‌ಗೆ ಸಂಪರ್ಕ ಪಡೆದರೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ನವೀನ ಮತ್ತು ವಿಶಿಷ್ಟ ರೀತಿಯ ಶಾಲಾ ಶಿಕ್ಷಕರ ತರಬೇತಿ ತರಬೇತಿ ಕಾರ್ಯಕ್ರಮವು 50,000 ಶಾಲಾ ಶಿಕ್ಷಕರಿಗೆ ನಾವಿನ್ಯತೆ, ಉದ್ಯಮಶೀಲತೆ, ಐಪಿಆರ್, ವಿನ್ಯಾಸ ಚಿಂತನೆ, ಉತ್ಪನ್ನ ಅಭಿವೃದ್ಧಿ, ಉಪಾಯಗಳ ಸೃಷ್ಟಿ ಹೀಗೆ ಹಲವು ವಿಷಯಗಳಲ್ಲಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮವನ್ನು ಶಿಕ್ಷಣ ಸಚಿವಾಲಯದ ನಾವಿನ್ಯತಾ ಕೋಶ ಮತ್ತು ಎಐಸಿಟಿಇ ಶಾಲಾ ಶಿಕ್ಷಕರಿಗಾಗಿ ವಿನ್ಯಾಸಗೊಳಿಸಿವೆ. "ಉನ್ನತ ಶಿಕ್ಷಣ ಸಂಸ್ಥೆಯ ಬೋಧಕ ಸದಸ್ಯರಿಗೆ ನಾವಿನ್ಯತಾ ರಾಯಭಾರಿ ತರಬೇತಿ ಕಾರ್ಯಕ್ರಮ"ವನ್ನು ಇದು ಆಧರಿಸಿದೆ. ತರಬೇತಿಯನ್ನು ಆನ್ ಲೈನ್ ಮೂಲಕ ಮಾತ್ರ ನೀಡಲಾಗುತ್ತದೆ.

***



(Release ID: 1736208) Visitor Counter : 225