ಜಲ ಶಕ್ತಿ ಸಚಿವಾಲಯ

2021-22ನೇ ಸಾಲಿನಲ್ಲಿ ಸುಮಾರು 2 ಲಕ್ಷ ಗ್ರಾಮಗಳಿಗೆ ಎಸ್ ಎಲ್ ಡಬ್ಲೂ ಎಂ ಬೆಂಬಲ ನೀಡಲು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿ 40,700 ಕೋಟಿ ರೂ. ಅನುದಾನ ಹಂಚಿಕೆ

Posted On: 08 JUN 2021 6:04PM by PIB Bengaluru

ಕೇಂದ್ರ ಜಲಶಕ್ತಿ ಸಚಿವಾಲಯ 2ನೇ ಹಂತದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ(ಎಸ್ ಬಿಎಂ-ಜಿ) ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷ 2021-22ನೇ ಸಾಲಿಗೆ ಸುಮಾರು ಎರಡು ಲಕ್ಷ ಗ್ರಾಮಗಳಿಗೆ ಘನ ಮತ್ತು ದ್ರವ ರೂಪದ ತ್ಯಾಜ್ಯ ನಿರ್ವಹಣೆ(ಎಸ್ಎಲ್ ಡಬ್ಲೂಎಂ) ಸಾಧಿಸಿಲು ಸುಮಾರು 40,700 ಕೋಟಿ ರೂ. ಹೂಡಿಕೆಯೊಂದಿಗೆ ನೆರವು ನೀಡಲಿದೆಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಎಸ್ ಬಿಎಂ-ಜಿ ಕುರಿತಾದ ರಾಷ್ಟ್ರೀಯ ಯೋಜನೆಯ ಅನುಮೋದನಾ ಸಮಿತಿ(ಎನ್ಎಸ್ಎಸ್ ಸಿ) ಸಭೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಕ್ರಿಯಾ ಯೋಜನೆ (ಎಐಪಿ)ಗೆ ಅನುಮೋದನೆ ನೀಡಿದೆ

ಇದರಲ್ಲಿ ಕೇಂದ್ರದ ಪಾಲು ಸುಮಾರು 14,000 ಕೋಟಿ ರೂ.ಗಳಾಗಲಿದೆ ಮತ್ತು ರಾಜ್ಯ ಸರ್ಕಾರಗಳು ಸುಮಾರು 8300 ಕೋಟಿ ರೂ.ಗಳನ್ನು ವ್ಯಯ ಮಾಡಬೇಕಿದೆ. ಸುಮಾರು 12,730 ಕೋಟಿ ರೂ.ಗಳು 15ನೇ ಹಣಕಾಸು ಆಯೋಗದಿಂದ ಲಭ್ಯವಾಗಲಿದೆ ಮತ್ತು ಸುಮಾರು  4,100 ಕೋಟಿ ರೂ.ಗಳು ಮನ್ರೇಗಾದೊಂದಿಗೆ ಬಳಸಿಕೊಳ್ಳಲಾಗುವುದು. ಅಲ್ಲದೆ ಸುಮಾರು 1500 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಗಳು ಇತರೆ ಮೂಲಗಳಿಂದ ಉದಾಹರಣೆಗೆ ವ್ಯಾಪಾರಿ ಮಾದರಿ, ಸಿಎಸ್ಆರ್ ಮತ್ತಿತರೆ ಯೋಜನೆಗಳ ಮೂಲಕ ಹೂಡಿಕೆ ಮಾಡಲಿವೆ. ಎಸ್ ಬಿಎಂ(ಜಿ) ಎರಡನೇ ಹಂತದಲ್ಲಿ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತೆ ಸಾಧಿಸುವ ಗುರಿ ಹೊಂದಲಾಗಿದ್ದು, ಬಯಲು ಶೌಚ ಮುಕ್ತ ಪ್ರದೇಶ(ಒಡಿಎಫ್) ಸುಸ್ಥಿರತೆ ಮತ್ತು ಗ್ರಾಮಗಳಲ್ಲಿ ಎಸ್ಎಲ್ ಡಬ್ಲ್ಯೂಎಂ ವ್ಯವಸ್ಥೆ ಖಾತ್ರಿಪಡಿಸುವ ಮೂಲಕ ಒಡಿಎಫ್ ಪ್ಲಸ್ ಸ್ಥಾನಗಳಿಸಲು ಹೆಚ್ಚಿನ ಗಮನಹರಿಸಲಾಗುವುದು.

ಸ್ವಚ್ಛಭಾರತ್ ಮಿಷನ್ ಗ್ರಾಮೀಣ ಎರಡನೇ ಹಂತ 2021-2022ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಲಿದ್ದು, ಇದರಡಿ ಸುಮಾರು 50 ಲಕ್ಷ ವೈಯಕ್ತಿಕ ಕೌಟುಂಬಿಕ ಶೌಚಾಲಯಗಳು (ಐಎಚ್ಎಚ್ಎಲ್ಎಸ್), ಒಂದು ಲಕ್ಷ ಸಮುದಾಯ ಶೌಚಾಲಯಗಳು, ಭಾರತದ 2400 ಬ್ಲಾಕ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು, 386 ಜಿಲ್ಲೆಗಳಲ್ಲಿ ಗೋಬರ್ಧನ್ ಯೋಜನೆ ಸುಮಾರು 250 ಜಿಲ್ಲೆಗಳಲ್ಲಿ ಮಲ ಕೆಸರು ನಿರ್ವಹಣಾ ವ್ಯವಸ್ಥೆ ಮಾತ್ರವಲ್ಲದೆ, ಸುಮಾರು ಎರಡು ಲಕ್ಷ ಗ್ರಾಮಗಳಲ್ಲಿ ಎಸ್ಎಲ್ ಡಬ್ಲ್ಯೂಎಂ ಮಧ್ಯಪ್ರವೇಶ ಕಾರ್ಯಗಳಿಗೆ ಬೆಂಬಲ ನೀಡುವ ಗುರಿ ಹೊಂದಲಾಗಿದೆ.

ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯಗಳ ಕ್ರಿಯಾ ಯೋಜನೆಗಳನ್ನು ಅನುಮೋದಿಸಿ, ಯಾವೊಬ್ಬ ವ್ಯಕ್ತಿಯೂ ಯೋಜನೆಯಿಂದ ಹೊರಗುಳಿಯಬಾರದು ಮತ್ತು ಪ್ರತಿಯೊಂದು ಕುಟುಂಬವೂ ಶೌಚಾಲಯ ಹೊಂದುವಂತೆ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು. ಐಎಚ್ಎಚ್ಎಲ್ ಗಳ ನಿರ್ಮಾಣದಲ್ಲಿ ಎರಡು ಗುಂಡಿ ಶೌಚಾಲಯ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವುದು ಅತ್ಯಂತ ಸುರಕ್ಷಿತವಾಗಿರಲಿದೆ, ಕಡಿಮೆ ವೆಚ್ಚ ಮತ್ತು ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸುಲಭವಾಗಲಿದೆ ಎಂದು ಒತ್ತಿ ಹೇಳಿದರು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಕಡಿಮೆ ವೆಚ್ಚದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕಾಗಿದೆ. ಇದರಿಂದಾಗಿ ವಿಕೇಂದ್ರೀಕೃತ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಹಾಯಕವಾಗಲಿದೆ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ(ಡಿಡಿಡಬ್ಲ್ಯೂಎಸ್), ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಡಿಎಫ್ ಪ್ಲಸ್ ಅನುಷ್ಠಾನದ ಅಂಶಗಳನ್ನು ಮತ್ತು ಅದರ ಫಲಿತಾಂಶ ವ್ಯಾಪ್ತಿಯನ್ನು ವಿಸ್ತರಿಸಲು ಜಿಲ್ಲೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿತು. ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ತಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲಿರುವ ಅನುಷ್ಠಾನ ಗುರಿ ಮತ್ತು ಕಾರ್ಯತಂತ್ರದ ಕುರಿತು ವಾರ್ಷಿಕ ಅನುಷ್ಠಾನ ಯೋಜನೆಗಳನ್ನು ರೂಪಿಸಬೇಕು. ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮವನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಭಿಯಾನ ದೇಶದಲ್ಲಿ ಸ್ವಚ್ಛತೆಯು ವಿಶಿಷ್ಟ ಜನಾಂದೋಲನವಾಗಿ ಜನಪ್ರಿಯತೆಗಳಿಸಿದೆ.

ರಾಷ್ಟ್ರೀಯ ಯೋಜನಾ ಅನುಮೋದನಾ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಪಂಚಾಯತ್ ರಾಜ್, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತು ವಲಯ ತಜ್ಞರನ್ನು ಒಳಗೊಂಡಿದೆ. ಎನ್ಎಸ್ಎಸ್ ಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳನ್ನು ಪರಾಮರ್ಶೆ ನಡೆಸಿತು ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಸ್ವಚ್ಛತೆ ಮತ್ತು ನಿರ್ಮಲೀಕರಣಕ್ಕೆ ಅಗ್ರ ಆದ್ಯತೆ ನೀಡಬೇಕಾಗಿರುವುದರಿಂದ ಅನುಷ್ಠಾನವನ್ನು ತೀವ್ರಗೊಳಿಸಲು ಅಗತ್ಯ ಮಾರ್ಗದರ್ಶನ ನೀಡಿತು. ಅಲ್ಲದೆ ಎನ್ಎಸ್ಎಸ್ ಸಿ ನಿರ್ಮಲೀಕರಣಕ್ಕೆ ಮೀಸಲಿಟ್ಟಿರುವ 15ನೇ ಹಣಕಾಸು ಆಯೋಗದ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಬಲವಾಗಿ ಪ್ರತಿಪಾದಿಸಿತು.

***



(Release ID: 1725479) Visitor Counter : 253