ಪ್ರಧಾನ ಮಂತ್ರಿಯವರ ಕಛೇರಿ

ಆರೋಗ್ಯ ಕ್ಷೇತ್ರ ಕುರಿತಾದ ಆಯವ್ಯಯ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವೆಬಿನಾರ್‌ನಲ್ಲಿ ಪ್ರಧಾನಿ ಭಾಷಣದ ಕನ್ನಡ ನಿರೂಪಣೆ

Posted On: 23 FEB 2021 1:26PM by PIB Bengaluru

ನಮಸ್ಕಾರ!
ಈ ಕಾರ್ಯಕ್ರಮ ಸ್ವಲ್ಪ ವಿಶೇಷವೆಂಬಂತೆ ನಿಮಗೆ ಕಾಣಬಹುದು. ಈ ಬಾರಿ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ ವಿಷಯಗಳ ಬಗ್ಗೆಯೂ ಬಜೆಟ್‌ ಪ್ರಸ್ತಾವನೆಗಳೊಂದಿಗೆ ನೇರವಾಗಿ ಸಂಬಂಧಪಡುವ ವಿವಿಧ ವಲಯಗಳ ತಜ್ಞರೊಂದಿಗೆ ವಿವರವಾಗಿ ಚರ್ಚಿಸಲು ನಿರ್ಧರಿಸಲಾಗಿದೆ. ಹೊಸ ಅಯವ್ಯಯವು ಏಪ್ರಿಲ್‌ ೧ರಿಂದಲೇ ಜಾರಿಯಾಗಿ, ಅದರ ಎಲ್ಲಾ ಯೋಜನೆಗಳೂ ಅಂದಿನಿಂದಲೇ ಚಾಲನೆ ಪಡೆಯಲು ಅನುವುಮಾಡಿಕೊಡುವುದು ಹಾಗೂ ಈ ಸಂಬಂಧ ಸಿದ್ಧತೆಗಾಗಿ ಫೆಬ್ರವರಿ ಮತ್ತು ಮಾರ್ಚ್‌ ಮಾಸಗಳನ್ನು ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಈಗ ನಾವು ಬಜೆಟ್‌ ಅನ್ನು ಸುಮಾರು ಒಂದು ತಿಂಗಳ ಕಾಲ ಮುಂಚಿತವಾಗಿಯೇ ಮಂಡಿಸುತ್ತಿದ್ದೇವೆ. ಇದರಿಂದ ನಮಗೆ ಸಿದ್ಧತೆಗಾಗಿ ಎರಡು ತಿಂಗಳ ಕಾಲಾವಕಾಶ ಸಿಗುತ್ತಿದೆ. ಇದರ ಗರಿಷ್ಠ ಪ್ರಯೋಜನಕ್ಕಾಗಿ ನಾವು ವಿವಿಧ ವಲಯಗಳ ವಿಭಿನ್ನ ಜನರೊಂದಿಗೆ ಸತತವಾಗಿ ಚರ್ಚಿಸುತ್ತಲೇ ಇದ್ದೇವೆ. ಇದಕ್ಕೂ ಮುನ್ನ ನಾವು ಮೂಲಸೌಕರ್ಯ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿದೆವು. ಇಂದು ನನಗೆ ಆರೋಗ್ಯ ವಲಯದ ತಜ್ಞರೊಂದಿಗೆ ಚರ್ಚಿಸುವ ಅವಕಾಶ ದೊರೆತಿದೆ.
ಈ ವರ್ಷದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಬಜೆಟ್ ಅನುದಾನವು ಅಭೂತಪೂರ್ವವಾಗಿದ್ದು, ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಆರೈಕೆ ಒದಗಿಸುವ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಒಂದು ರೀತಿಯಲ್ಲಿ, ಕಳೆದ ವರ್ಷವು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಮನುಕುಲಕ್ಕೆ, ಅದರಲ್ಲೂ ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಒಂದು ರೀತಿಯ ವಿಷಮ ಪರೀಕ್ಷೆಯಾಗಿತ್ತು.
ನಾವೆಲ್ಲರೂ ಮತ್ತು ದೇಶದ ಆರೋಗ್ಯ ಕ್ಷೇತ್ರ ಈ ವಿಷಮ ಪರೀಕ್ಷೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಸಂತೋಷದ ವಿಷಯ. ನಾವು ಅನೇಕರ ಜೀವಗಳನ್ನು ಉಳಿಸುವಲ್ಲಿ ಯಶ ಕಂಡಿದ್ದೇವೆ. ಕೆಲವೇ ತಿಂಗಳಲ್ಲಿ, ದೇಶವು ಸುಮಾರು 2,500 ಪ್ರಯೋಗಾಲಯಗಳ ಜಾಲವನ್ನು ಸ್ಥಾಪಿಸಿ, ಕೇವಲ ೧೦-೧೨ ಪರೀಕ್ಷೆಗಳಿಂದ 21 ಕೋಟಿ ಪರೀಕ್ಷೆಗಳ ಮೈಲಿಗಲ್ಲನ್ನು ತಲುಪಿದೆ.  ಇದೆಲ್ಲವೂ ಸರಕಾರ ಮತ್ತು ಖಾಸಗಿ ವಲಯದ ನಡುವಿನ ಸಹಕಾರದ ಫಲವಾಗಿ ಸಾಧ್ಯವಾಗಿದೆ.
ಮಿತ್ರರೇ,
ನಾವು ಸಾಂಕ್ರಾಮಿಕದ ವಿರುದ್ಧ ಹೋರಾಡಬೇಕಿರುವುದು ಇಂದು ಮಾತ್ರವಲ್ಲ, ಭವಿಷ್ಯದಲ್ಲೂ ಇಂತಹ ಪರಿಸ್ಥಿತಿ ಎದುರಿಸಲು ದೇಶವನ್ನು ಸಜ್ಜುಗೊಳಿಸಬೇಕೆಂಬ ಪಾಠವನ್ನು ಕೊರೊನಾ ನಮಗೆ ಕಲಿಸಿದೆ. ಆದ್ದರಿಂದ, ಆರೋಗ್ಯ ಸೇವೆಗೆ ಸಂಬಂಧಿಸಿದ ಪ್ರತಿಯೊಂದು ವಲಯವನ್ನೂ ಬಲಪಡಿಸುವುದು ಅಷ್ಟೇ ಅವಶ್ಯಕ. ವೈದ್ಯಕೀಯ ಉಪಕರಣಗಳಿಂದ ಹಿಡಿದು ಔಷಧಗಳವರೆಗೆ, ವೆಂಟಿಲೇಟರ್‌ಗಳಿಂದ ಹಿಡಿದು ಲಸಿಕೆಗಳವರೆಗೆ, ವೈಜ್ಞಾನಿಕ ಸಂಶೋಧನೆಯಿಂದ ಹಿಡಿದು ಕಣ್ಗಾವಲು ಮೂಲಸೌಕರ್ಯಗಳವರೆಗೆ, ವೈದ್ಯರಿಂದ ಸಾಂಕ್ರಾಮಿಕ ರೋಗ ತಜ್ಞರವರೆಗೆ, ಭವಿಷ್ಯದಲ್ಲಿ ಯಾವುದೇ ಆರೋಗ್ಯ ದುರಂತಗಳನ್ನು ಎದುರಿಸಲು ದೇಶವು ಉತ್ತಮ ರೀತಿಯಲ್ಲಿ ಸನ್ನದ್ಧವಾಗಿದೆ.
ʻಪ್ರಧಾನಿ ಅತ್ಮನಿರ್ಭರ್ ಸ್ವಸ್ಥ ಭಾರತ್ʼ ಯೋಜನೆಯ ಹಿಂದಿನ ಪ್ರೇರಣೆಯೂ ಇದೇ. ಈ ಯೋಜನೆಯಡಿ, ಸಂಶೋಧನೆಯಿಂದ ಹಿಡಿದು ಪರೀಕ್ಷೆ ಮತ್ತು ಚಿಕಿತ್ಸೆಗಳವರೆಗೆ ಆಧುನಿಕ ಪರಿಸರ ವ್ಯವಸ್ಥೆಯನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಬೇಕೆಂದು ನಿರ್ಧರಿಸಲಾಗಿದೆ. ʻಪಿಎಂ ಅತ್ಮನಿರ್ಭಾರ್ ಸ್ವಸ್ಥ ಭಾರತ್ʼ ಯೋಜನೆಯು ಪ್ರತಿಯೊಂದು ವಲಯದಲ್ಲೂ ನಮ್ಮ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರೋಗ್ಯ ಸೇವೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳಿಗೆ 70 ಸಾವಿರ ಕೋಟಿ ರೂ.ಗಿಂತಲೂ  ಹೆಚ್ಚಿನ ಅನುದಾನ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾತ್ರವಲ್ಲದೆ, ದೇಶದ ದೂರದ ಪ್ರದೇಶಗಳಿಗೆ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಸರಕಾರ ಒತ್ತು ನೀಡಿದೆ. ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಕೇವಲ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು.
ಮಿತ್ರರೇ,
ಕೊರೊನಾ ಸಮಯದಲ್ಲಿ ತನ್ನ ಅನುಭವ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ ಭಾರತದ ಸದೃಢ ಆರೋಗ್ಯ ವಲಯವು ಜಗತ್ತಿನ ಗಮನ ಸೆಳೆದಿದೆ. ಇಂದು ಭಾರತದ ಆರೋಗ್ಯ ಕ್ಷೇತ್ರದ ಪ್ರತಿಷ್ಠೆ ಮತ್ತು ಮಾಹಿತಿ ಆ ಕ್ಷೇತ್ರದ ಮೇಲಿನ ವಿಶ್ವಾಸವು ಜಗತ್ತಿನಾದ್ಯಂತ ಹೊಸ ಎತ್ತರಕ್ಕೆ ತಲುಪಿದೆ. ಈ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ನಂಬಿಕೆಯಿಂದಾಗಿಯೇ ಭವಿಷ್ಯದಲ್ಲಿ ವಿಶ್ವಾದ್ಯಂತ ಭಾರತೀಯ ವೈದ್ಯರಿಗಾಗಿ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಭಾರತೀಯ ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ವಿಶ್ವದಾದ್ಯಂತ ಭಾರಿ ಬೇಡಿಕೆ ಬರಲಿದೆ, ನನ್ನ ಈ ಮಾತನ್ನು ಬೇಕಾದರೆ ಬರೆದಿಟ್ಟುಕೊಳ್ಳಿ. ಈ ನಡುವೆ ಭಾರತೀಯ ಔಷಧಗಳು ಮತ್ತು ಲಸಿಕೆಗಳು ಹೊಸ ವಿಶ್ವಾಸವನ್ನು ಗಳಿಸಿವೆ. ಅವುಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ತಯಾರಿ ಮಾಡಿಕೊಳ್ಳಬೇಕು. ಸಹಜವಾಗಿಯೇ ನಮ್ಮ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯು ಜನರ ಗಮನ ಸೆಳೆಯಲಿದೆ ಮತ್ತು ಅದರ ವಿಶ್ವಾಸವೂ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ಬರುವ ಸಾಧ್ಯತೆ ಇದೆ. ಇದನ್ನು ಸಹ ನಾವು ಪ್ರೋತ್ಸಾಹಿಸಬೇಕು.
ಕೊರೊನಾ ಸಮಯದಲ್ಲಿ, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ನಾವು ಪರಿಣತಿಯನ್ನು ಬೆಳೆಸಿಕೊಂಡಿದ್ದೇವೆ. ಜಾಗತಿಕ ಬೇಡಿಕೆ ಪೂರೈಸಲು ಭಾರತವೂ ಸಹ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ವಿಶ್ವಕ್ಕೆ ಅಗತ್ಯವಿರುವ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸುವ ಕನಸನ್ನು ಭಾರತ ಕಾಣಬಹುದೇ? ಭಾರತ ಜಾಗತಿಕ ಪೂರೈಕೆದಾರ ರಾಷ್ಟ್ರವಾಗಲು ಹೇಗೆ ಸಾಧ್ಯ? ಕೈಗೆಟುಕುವ, ಸುಸ್ಥಿರ ವ್ಯವಸ್ಥೆ ಮತ್ತು ಬಳಕೆದಾರ-ಸ್ನೇಹಿ ತಂತ್ರಜ್ಞಾನ ಇದ್ದರೆ, ಇಡೀ ಜಗತ್ತು ಭಾರತದ ಆರೋಗ್ಯ ಕ್ಷೇತ್ರದತ್ತ ಮುಖ ಮಾಡಲಿದೆ ಎಂಬ ಭರವಸೆ ನನಗಿದೆ.
ಮಿತ್ರರೇ,
ಸರಕಾರದ ಬಜೆಟ್ ಖಂಡಿತವಾಗಿಯೂ ಈ ವಿಚಾರದಲ್ಲಿ ವೇಗವರ್ಧಕವಾಗಿ ಕೆಲಸ ಮಾಡಲಿದೆ ನಿಜ. ಆದರೆ, ಆದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಎಲ್ಲವೂ ಸಾಕಾರಗೊಳ್ಳುತ್ತದೆ.
ಮಿತ್ರರೇ,
ಹಿಂದಿನ ಸರಕಾರಗಳಿಗೆ ಹೋಲಿಸಿದರೆ ನಮ್ಮ ಸರಕಾರದ ಆರೋಗ್ಯ ನೀತಿ ಸ್ವಲ್ಪ ಭಿನ್ನವಾಗಿದೆ. ಬಜೆಟ್ ನಂತರ ಸ್ವಚ್ಛತೆ, ಪೌಷ್ಟಿಕತೆ, ಯೋಗಕ್ಷೇಮ ಮತ್ತು ಆಯುಷ್‌ ಇಲಾಖೆಯ ಆರೋಗ್ಯ ಯೋಜನೆಗಳನ್ನು ಸಮಗ್ರ   ರೀತಿಯಲ್ಲಿ ಹೊರತರುವುದನ್ನು ನೀವು ನೋಡಲಿದ್ದೀರಿ. ಈ ಹಿಂದೆ ಆರೋಗ್ಯ ಕ್ಷೇತ್ರವು ವಿಚ್ಛಿನ್ನವಾಗಿರುವುದು ಕಂಡುಬರುತ್ತಿತ್ತು ಮತ್ತು ಅದರ ಕಾರ್ಯನಿರ್ವಹಣೆಯೂ ಬಿಡಿಬಿಡಿಯಾಗಿತ್ತು.
ನಮ್ಮ ಸರಕಾರ ಆರೋಗ್ಯ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ನೋಡುವ ಬದಲು ಅವುಗಳತ್ತ ಸಮಗ್ರ, ಸಂಯೋಜಿತ ಮತ್ತು ಕೇಂದ್ರೀಕೃತ ರೀತಿಯಲ್ಲಿ ಗಮನ ಹರಿಸುತ್ತಿದೆ. ಆದ್ದರಿಂದ, ನಾವು ಕೇವಲ ಚಿಕಿತ್ಸೆಯಲ್ಲಿ ಮಾತ್ರವಲ್ಲ, ದೇಶದ ಯೋಗಕ್ಷೇಮದ ಕಡೆಗೂ ಗಮನ ಹರಿಸುತ್ತಿದ್ದೇವೆ.  ನಾವು ರೋಗ ತಡೆಯಿಂದ ಉಪಶಮನದವರೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಭಾರತವನ್ನು ಆರೋಗ್ಯವಾಗಿಡಲು ನಾವು ನಾಲ್ಕು ಹಂತದ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ.
ಮೊದಲನೆಯದು ರೋಗವನ್ನು ತಡೆಗಟ್ಟುವುದು ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು. ಸ್ವಚ್ಛ ಭಾರತ ಅಭಿಯಾನ, ಯೋಗ, ಪೌಷ್ಟಿಕತೆ, ಗರ್ಭಿಣಿಯರು ಮತ್ತು ಮಕ್ಕಳ ಸಕಾಲಿಕ ಆರೈಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಇದರಡಿಯಲ್ಲಿ ಕೈಗೊಳ್ಳಲಾಗಿದೆ.
ಎರಡನೆಯದು ಅತ್ಯಂತ ಬಡಜನರಿಗೆ ಅಗ್ಗದ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುವುದು. ಆಯುಷ್ಮಾನ್ ಭಾರತ್ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರಗಳೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.
ಮೂರನೆಯದು ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ವೃತ್ತಿಪರರ ಸಂಖ್ಯೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು. ಕಳೆದ ಆರು ವರ್ಷಗಳಿಂದ ಏಮ್ಸ್‌ನಂತಹ ಸಂಸ್ಥೆಗಳು ದೂರದ ರಾಜ್ಯಗಳಲ್ಲಿ ವಿಸ್ತರಿಸುತ್ತಿವೆ. ದೇಶದಲ್ಲಿ ಹೆಚ್ಚುಹೆಚ್ಚು ವೈದ್ಯಕೀಯ ಕಾಲೇಜುಗಳ ಸ್ಥಾಪನೆಯೂ ಇದರ ಒಂದು ಭಾಗವಾಗಿದೆ.
ನಾಲ್ಕನೆಯದು ಸಮರೋಪಾದಿಯಲ್ಲಿ ಕೆಲಸ ಮಾಡುವುದು ಮತ್ತು ಅಡೆತಡೆಗಳನ್ನು ಸಕಾಲದಲ್ಲಿ ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು. ಮಿಷನ್ ಇಂದ್ರಧನುಷ್ ಅನ್ನು ದೇಶದ ಬುಡಕಟ್ಟು ಮತ್ತು ದೂರದ ಪ್ರದೇಶಗಳಿಗೆ ವಿಸ್ತರಿಸಲಾಗಿದೆ.
ವಿಶ್ವದಿಂದ ಕ್ಷಯ ರೋಗವನ್ನು (ಟಿಬಿ)ತೊಡೆದುಹಾಕಲು ವಿಶ್ವವು 2030ರ ಗುರಿಯನ್ನು ನಿಗದಿ ಮಾಡಿದೆ. ಆದರೆ, ಭಾರತ ಅದಕ್ಕೂ ಐದು ವರ್ಷ ಮೊದಲೇ, ಅಂದರೆ, 2025ರಲ್ಲೇ ಈ ಗುರಿ ಸಾಧಿಸುವ ಸಂಕಲ್ಪ ಹೊಂದಿದೆ.  ಈ ಸಮಯದಲ್ಲಿ ನಾನು ಕ್ಷಯ ರೋಗದ ಬಗ್ಗೆ ವಿಶೇಷ ಗಮನವನ್ನು ನೀಡಲು ಬಯಸುತ್ತೇನೆ. ಏಕೆಂದರೆ ಟಿಬಿ ಸೋಂಕಿತ ವ್ಯಕ್ತಿಗಳ ಡ್ರಾಪ್‌ಲೆಟ್‌ಗಳಿಂದ ಹರಡುತ್ತದೆ. ಮಾಸ್ಕ್ ಧರಿಸುವುದು ಮತ್ತು ಮುಂಚಿತವಾಗಿ ರೋಗ ಪತ್ತೆ ಹಾಗೂ ಚಿಕಿತ್ಸೆ ಸಹ ಟಿಬಿ ತಡೆಗಟ್ಟುವಲ್ಲಿ ಪ್ರಮುಖವಾಗಿದೆ.
ಕೊರೊನಾ ಸಮಯದಲ್ಲಿ ನಾವು ಗಳಿಸಿದ ಅನುಭವವನ್ನು ಬಳಸಿ, ಕ್ಷಯ ರೋಗದ ವಿರುದ್ಧದ ಹೋರಾಟದಲ್ಲಿ ಅದೇ ಅಭ್ಯಾಸಗಳನ್ನು ಅನ್ವಯಿಸಿದರೆ, ನಾವು ಕ್ಷಯ ರೋಗದ ವಿರುದ್ಧ ಹೋರಾಟದಲ್ಲಿ ಗೆಲ್ಲುವುದು ಬಹಳ ಸುಲಭ. ಆದ್ದರಿಂದ ಕೊರೊನಾದ ಅನುಭವದ ಹಿನ್ನೆಲೆಯಲ್ಲಿ, ಜನರಲ್ಲಿ ಸಾಮೂಹಿಕ ಜಾಗೃತಿ ಹಾಗೂ ಈ ರೋಗವನ್ನು ತಡೆಗಟ್ಟುವಲ್ಲಿ ಅವರ ಕೊಡುಗೆಯ ಮೂಲಕ ನಾವು 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತದ ಕನಸನ್ನು ನನಸು ಮಾಡಬಹುದು. ಆದರೆ, ಕೊರೊನಾಗೆ ಅನುಸರಿಸಿದ ಮಾದರಿಯನ್ನೇ ನಾವು ಸಣ್ಣ ಬದಲಾವಣೆಗಳು ಮತ್ತು ಮಾರ್ಪಾಡುಗಳೊಂದಿಗೆ ಟಿಬಿ ವಿಷಯದಲ್ಲೂ ಅನುಸರಿಸಬೇಕು.
ಅದೇ ರೀತಿ, ಪೂರ್ವಾಂಚಲ ಎಂದೂ ಕರೆಯಲಾಗುವ ಉತ್ತರ ಪ್ರದೇಶದ ಗೋರಖ್‌ಪುರದಂತಹ ಸ್ಥಳಗಳಲ್ಲಿ ʻಮೆನಿಂಜೈಟಿಸ್‌ʼನಿಂದ ಪ್ರತಿವರ್ಷ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿರುವ ವಿಷಯ ನಿಮ್ಮ ನೆನಪಿನಲ್ಲಿರಬಹುದು. ಈ ಬಗ್ಗೆ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. ಈ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದಾಗ, ನಮ್ಮ ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಆ ಮಕ್ಕಳ ಸಾವಿನ ವಿಷಯ ನೆನೆದು ತೀವ್ರ ಭಾವುಕರಾಗಿದ್ದರು. ಆದರೆ, ಅವರು ಆ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಕೇಂದ್ರದ ಧೋರಣೆಯನ್ನು ಅನುಸರಿಸಲು ಆರಂಭಿಸಿದರು. ಅವರು ಬೇರೆಲ್ಲವನ್ನೂ ಬದಿಗಿರಿಸಿದರು. ಪರಿಣಾಮವಾಗಿ ಇಂದು ನಾವು ತುಂಬಾ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ.  ಮೆನಿಂಜೈಟಿಸ್ ಹರಡುವುದನ್ನು ತಡೆಗಟ್ಟಲು ನಾವು ಒತ್ತು ನೀಡಿದ್ದೇವೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಿದ್ದೇವೆ ಮತ್ತು ಅದರ ಪರಿಣಾಮ ನಮ್ಮ ಕಣ್ಣ ಮುಂದಿದೆ.
ಮಿತ್ರರೇ,
ಕೊರೊನಾ ಅವಧಿಯಲ್ಲಿ ನಮ್ಮ ʻಆಯುಷ್ʼ ಜಾಲವೂ ಉತ್ತಮ ಕೆಲಸ ಮಾಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳ ಮತ್ತು ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದಂತೆ ನಮ್ಮ ಆಯುಷ್ ಮೂಲಸೌಕರ್ಯವೂ ಸಹ ದೇಶದಲ್ಲಿ ಬಹಳ ಸಹಾಯವಾಗಿದೆ.
ಭಾರತದ ಔಷಧಗಳು ಮತ್ತು ಲಸಿಕೆಗಳ ಜೊತೆಗೆ ನಮ್ಮ ಮಸಾಲಾ ಪದಾರ್ಥಗಳು ಮತ್ತು ಕಷಾಯಗಳ ಕೊಡುಗೆಯು ಜಗತ್ತಿನ ಅನುಭವಕ್ಕೆ ಬಂದಿದೆ. ನಮ್ಮ ಸಾಂಪ್ರದಾಯಿಕ ಔಷಧಗಳು ಕೂಡ ಜಗತ್ತಿನ ಮನಸ್ಸಿನ ಮೇಲೆ ವಿಶೇಷ ಮುದ್ರೆಯನ್ನು ಒತ್ತಿವೆ. ಸಾಂಪ್ರದಾಯಿಕ ಔಷಧಗಳು ಮತ್ತು ಆಯುರ್ವೇದ ಔಷಧಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ತಮ್ಮ ಉತ್ಪಾದನೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಗಮನ ಕೇಂದ್ರೀಕರಿಸಬೇಕು.
ಯೋಗವನ್ನು ಜಗತ್ತು ಸ್ವಾಗತಿಸುವ ರೀತಿಯಲ್ಲೇ, ಸಮಗ್ರ ಆರೋಗ್ಯ ರಕ್ಷಣೆಯತ್ತ ಅದರ ಗಮನ ಹೊರಳುತ್ತಿದೆ. ಅಡ್ಡ ಪರಿಣಾಮಗಳಿಲ್ಲದ ಆರೋಗ್ಯ ಸೇವೆಯತ್ತ ಭಾರತವು ವಿಶ್ವದ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಭಾರತದ ಸಾಂಪ್ರದಾಯಿಕ ಔಷಧಗಳು ಬಹಳ ಉಪಯುಕ್ತ. ಭಾರತದ ಸಾಂಪ್ರದಾಯಿಕ ಔಷಧಗಳು ಮುಖ್ಯವಾಗಿ ಗಿಡಮೂಲಿಕೆ ಆಧಾರಿತವಾಗಿದ್ದು, ಪ್ರಪಂಚದ ಗಮನವನ್ನು ಆಕರ್ಷಿಸಬಲ್ಲವು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬುದು ಜನರ ನಂಬಿಕೆ. ನಾವು ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದೇ? ನಮ್ಮ ಆರೋಗ್ಯ ಬಜೆಟ್ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಒಟ್ಟಾಗಿ ಏನಾದರೂ ಮಾಡಲು ಸಾಧ್ಯವೇ?
ಕೊರೊನಾದ ಸಮಯದಲ್ಲಿ ನಮ್ಮ ಸಾಂಪ್ರದಾಯಿಕ ಔಷಧಗಳ ಶಕ್ತಿಯನ್ನು ಕಂಡು ನಮಗೆ ಸಂತಸವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ  (ಡಬ್ಲ್ಯೂಎಚ್‌ಒ) ಭಾರತದಲ್ಲಿ ತನ್ನ ʻಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರʼ (ಗ್ಲೋಬಲ್ ಸೆಂಟರ್ ಆಫ್ ಟ್ರೆಡಿಷನಲ್ ಮೆಡಿಸಿನ್) ಪ್ರಾರಂಭಿಸುತ್ತಿರುವುದು ಆಯುರ್ವೇದ ಸಾಂಪ್ರದಾಯಿಕ ಔಷಧಗಳನ್ನು ನಂಬುವವರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಹೆಮ್ಮೆಯ ವಿಷಯ. ಈಗಾಗಲೇ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಅಗತ್ಯ ಕೆಲಸ ಮಾಡುತ್ತಿದೆ. ಈ ಗೌರವವು ವಿಶ್ವಕ್ಕೂ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.
ಮಿತ್ರರೇ,
ಎಲ್ಲರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಕ್ಷೇತ್ರದ ಸೇವೆಗಳ ಲಭ್ಯತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಡಿಜಿಟಲ್ ಆರೋಗ್ಯ ಅಭಿಯಾನವು ಜನಸಾಮಾನ್ಯರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸಕಾಲದಲ್ಲಿ ಮತ್ತು ಪರಿಣಾಮಕಾರಿ ಚಿಕಿತ್ಸೆಪಡೆಯಲು ಸಹಾಯ ಮಾಡುತ್ತದೆ.
ಮಿತ್ರರೇ,
ಕಳೆದ ವರ್ಷಗಳ ಧೋರಣೆಯನ್ನು ಬದಲಿಸಲು ಮತ್ತೊಂದು ವಿಷಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಈ ಬದಲಾವಣೆಯು ʻಅತ್ಮನಿರ್ಭರ್ ಭಾರತ್‌ʼಗೂ ಬಹಳ ಮುಖ್ಯ. ಭಾರತವನ್ನು ಜಗತ್ತಿನ ಔಷಧಾಲಯ ಎಂದು ಪರಿಗಣಿಸಿರುವುದು ನಮ್ಮ ಪಾಲಿಗೆ ಹೆಮ್ಮೆಯ ವಿಷಯವಾದರೂ ನಾವು ಅನೇಕ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳಿಗಾಗಿ ವಿದೇಶಗಳಿಂದ ಆಮದನ್ನು ಅವಲಂಬಿಸಿದ್ದೇವೆ.
ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬನೆಯಿಂದ ನಮ್ಮ ಉದ್ಯಮಕ್ಕೆ ಉಂಟಾದ ಕೆಟ್ಟ ಅನುಭವ ಎಂಥದ್ದೆಂಬುದು ನಾವೆಲ್ಲರೂ ನೋಡಿದ್ದೇವೆ. ಇದು ಸರಿಯಲ್ಲ.  ಇದರಿಂದ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ, ಸಲಕರಣೆಗಳನ್ನು ಒದಗಿಸಲು ತೊಂದರೆಯಾಗುತ್ತದೆ. ಇದಕ್ಕಾಗಿ ನಾವು ಒಂದು ಮಾರ್ಗೋಪಾಯವನ್ನು ಕಂಡುಕೊಳ್ಳಬೇಕು. ಈ ಕ್ಷೇತ್ರಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಇತ್ತೀಚೆಗೆ ನಾಲ್ಕು ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಜೆಟ್‌ನಲ್ಲಿಯೂ ಇವುಗಳನ್ನು ಪ್ರಸ್ತಾಪಿಸಲಾಗಿದೆ, ನೀವು ಇದನ್ನು ಅಧ್ಯಯನ ಮಾಡಿರಬಹುದು.
ಇದರ ಅಡಿಯಲ್ಲಿ, ದೇಶದಲ್ಲಿಯೇ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಕಚ್ಚಾ ಸಾಮಗ್ರಿಯ ಉತ್ಪಾದನೆಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಔಷಧ, ವೈದ್ಯಕೀಯ ಉಪಕರಣಗಳ ತಯಾರಿಕೆಗಾಗಿ ಬೃಹತ್ ಪಾರ್ಕ್‌ಗಳ ನಿರ್ಮಾಣಕ್ಕೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಮಿತ್ರರೇ,
ಕೊನೆಯ ಚರಣದವರೆಗೂ ಆರೋಗ್ಯ ಸೌಲಭ್ಯ ವಿಸ್ತರಣೆಯಷ್ಟೇ ಭಾರತದ ಬಯಕೆಯಲ್ಲ, ದೇಶದ ಮೂಲೆ ಮೂಲೆ ಮತ್ತು ದೂರದ ಪ್ರದೇಶಗಳಲ್ಲೂ ಈ ಸೌಲಭ್ಯಗಳು ದೊರೆಯುವಂತಾಗಬೇಕು. ಚುನಾವಣೆ ಸಂದರ್ಭದಲ್ಲಿ ಒಬ್ಬೊಬ್ಬರೇ ಮತದಾರರಿದ್ದರೂ ಅವರ ಮತದಾನಕ್ಕೆ ಅವಕಾಶ ಕಲ್ಪಿಸಲು ದೂರ ಪ್ರದೇಶಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂಬ ವರದಿಗಳನ್ನು ನಾವು ಓದಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ಎರಡೂ ಕ್ಷೇತ್ರಗಳಲ್ಲೂ ಇದೇ ರೀತಿಯ ಧೋರಣೆಯ ಅಗತ್ಯವಿದೆ. ಕೊನೆಯ ವ್ಯಕ್ತಿಯವರೆಗೂ ಈ ಸೇವಾ-ಸೌಲಭ್ಯಗಳು ತಲುಪಬೇಕು. ಇದು ನಮ್ಮ ಧೋರಣೆಯಾಗಬೇಕು ಮತ್ತು ನಾವು ಅದನ್ನು ಒತ್ತಾಯಿಸಬೇಕು ಮತ್ತು ಅತ್ಯುತ್ತಮ ರೀತಿಯಲ್ಲಿ ನಮ್ಮ ಕೊಡುಗೆ ನೀಡಬೇಕು. ಆದ್ದರಿಂದ ಎಲ್ಲ ಪ್ರದೇಶಗಳಲ್ಲಿ ಆರೋಗ್ಯ ಸೇವೆ ದೊರೆಯುವಂತೆ ಮಾಡುವತ್ತ ಗಮನ ಹರಿಸಬೇಕಿದೆ. ದೇಶಕ್ಕೆ ಯೋಗಕ್ಷೇಮ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು, ತೀವ್ರ ನಿಗಾ ಘಟಕಗಳು, ಆರೋಗ್ಯ ಕಣ್ಗಾವಲು ಮೂಲಸೌಕರ್ಯ, ಆಧುನಿಕ ಪ್ರಯೋಗಾಲಯಗಳು ಮತ್ತು ಟೆಲಿಮೆಡಿಸಿನ್ ಸೌಲಭ್ಯದ ಅಗತ್ಯವಿದೆ. ನಾವು ಪ್ರತಿ ಹಂತದಲ್ಲೂ ಕೆಲಸ ಮಾಡಬೇಕು, ಪ್ರತಿ ಹಂತವನ್ನೂ ಉತ್ತೇಜಿಸಬೇಕು.
ದೇಶದ ಜನರು, ಅವರು ಬಡವರಾಗಿರಲಿ, ದೂರದ ಪ್ರದೇಶಗಳಲ್ಲಿರಲಿ, ಅವರು ಸರಿಯಾದ ಸಮಯಕ್ಕೆ ಮತ್ತು ಅತ್ಯುತ್ತಮ ಚಿಕಿತ್ಸೆಯನ್ನು ಪಡೆಯುತ್ತಾರೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಕೇಂದ್ರ ಸರಕಾರ, ಎಲ್ಲ ರಾಜ್ಯ ಸರಕಾರಗಳು, ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಜಾಲವನ್ನು ನಿರ್ಮಿಸಲು ಖಾಸಗಿ ವಲಯವು ʻಪಿಪಿಪಿʼ ಮಾದರಿಗಳನ್ನು ಬೆಂಬಲಿಸಬಹುದು. ಜೊತೆಗೆ ʻಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆʼಯಲ್ಲೂ (ಪಿಎಂ-ಜೆಎವೈ) ಸಹಭಾಗಿತ್ವ ಪಡೆಯಬಹುದು. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್, ನಾಗರಿಕರ ಡಿಜಿಟಲ್ ಆರೋಗ್ಯ ದಾಖಲೆಗಳು ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳಲ್ಲೂ ಪಾಲುದಾರಿಕೆ ಹೊಂದಬಹುದು.
ಆರೋಗ್ಯಕರ ಮತ್ತು ಸಮರ್ಥ ಭಾರತಕ್ಕಾಗಿ ನಾವೆಲ್ಲರೂ ಸದೃಢವಾದ ಸಹಭಾಗಿತ್ವ ಮತ್ತು ಸ್ವಾವಲಂಬಿ ಪರಿಹಾರಗಳನ್ನು ಕಂಡುಕೊಳ್ಳಬಹುದೆಂಬ ಭರವಸೆ ನನಗಿದೆ. ಬಜೆಟ್ ಬಂದಿದೆ. ಈ ಕ್ಷೇತ್ರದ ಪರಿಣತರು ಮತ್ತು ಪಾಲುದಾರರು ತಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳಲು ನಾನು ವಿನಂತಿಸುತ್ತಿದ್ದೇನೆ. ನಿಮ್ಮ ಎಲ್ಲಾ ನಿರೀಕ್ಷೆಗಳು ಬಜೆಟ್‌ ನಲ್ಲಿ ಪ್ರತಿಫಲಿಸಿಲ್ಲ, ಆದರೆ ಇದೇ ಕೊನೆಯ ಬಜೆಟ್ ಅಲ್ಲ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಪರಿಶೀಲನೆ ಮಾಡಬಹುದು.  ಬಜೆಟ್ ಪ್ರಸ್ತಾವನೆಗಳನ್ನು ನಾವು ಎಷ್ಟು ವೇಗವಾಗಿ ಅನುಷ್ಠಾನಗೊಳಿಸಬಹುದು ಮತ್ತು ಸಾಮಾನ್ಯ ಜನರನ್ನು ತಲುಪಲು ಸಹಾಯಕವಾಗುವ ವ್ಯವಸ್ಥೆಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರತ್ತ ಗಮನ ಹರಿಸುವುದು ಈಗ ಮುಖ್ಯ. ನಾವು ಬಜೆಟ್‌ನ ನ್ಯೂನತೆಗಳನ್ನು ಸಂಸತ್ತಿನಲ್ಲಿ ಚರ್ಚಿಸುತ್ತೇವೆ, ಆದರೆ ನಿಮ್ಮ ಅನುಭವ ಮತ್ತು ನಿಮ್ಮ ಸಲಹೆಗಳು ಕೂಡಾ ಅಷ್ಟೇ ಮುಖ್ಯ. ಬಜೆಟ್ ಬಗ್ಗೆ ಮೊದಲ ಬಾರಿಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸುತ್ತಿದ್ದೇವೆ. ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸುವಾಗ, ಅವು ಸಲಹೆಗಳ ಸುತ್ತ ಸುತ್ತುತ್ತವೆ, ಆದರೆ ನಾವು ಬಜೆಟ್ ನಂತರದ ಚರ್ಚೆಗಳನ್ನು ನಡೆಸಿದಾಗ, ಪರಿಹಾರಗಳನ್ನು ಕಂಡುಕೊಳ್ಳಬಹುದು.
ಆದ್ದರಿಂದ, ನಾವು ಪರಿಹಾರಗಳನ್ನು ಕಂಡುಕೊಳ್ಳೋಣ, ಮತ್ತು ತ್ವರಿತವಾಗಿ ಮುನ್ನಡೆಯೋಣ. ಸರಕಾರ ಮತ್ತು ನೀವು ಬೇರೆ ಬೇರೆಯಲ್ಲ. ಸರಕಾರ ನಿಮ್ಮದೂ ಹೌದು ಮತ್ತು ನೀವೂ ದೇಶಕ್ಕಾಗಿ ಇದ್ದೀರಿ. ದೇಶದ ಕಡು ಬಡವರನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕ್ಷೇತ್ರಕ್ಕೆ ಮತ್ತು ಆರೋಗ್ಯಕರ ಭಾರತಕ್ಕೆ ಉಜ್ವಲ ಭವಿಷ್ಯವನ್ನು ನಿರ್ಮಿಸೋಣ. ನೀವು ಇದಕ್ಕಾಗಿ ನಿಮ್ಮ ಸಮಯವನ್ನು ನೀಡಿದ್ದೀರಿ. ನಿಮ್ಮ ಮಾರ್ಗದರ್ಶನ ಬಹಳ ಮುಖ್ಯ. ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯೂ ಸಹ ನಮಗೆ ಬಹಳ ಉಪಯೋಗಕಾರಿ.
ನೀವು ನೀಡಿದ ಸಮಯಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಅಮೂಲ್ಯ ಸಲಹೆಗಳು ನಮ್ಮ ಮುಂದಿನ ಪಯಣಕ್ಕೆ ಮಾಡುತ್ತವೆ. ನೀವು ಸಲಹೆ ನೀಡುವುದನ್ನು ಮುಂದುವರಿಸುತ್ತೀರಿ. ಪಾಲುದಾರರಾಗಿಯೂ ಮುಂದುವರೆಯುವಿರಿ. ನೀವು ನಿರೀಕ್ಷೆಗಳನ್ನು ಮಾತ್ರವಲ್ಲ, ಜವಾಬ್ದಾರಿಯನ್ನು ಸಹ ಹೊಂದಿರುತ್ತೀರಿ. ಇದೇ ನಂಬಿಕೆಯೊಂದಿಗೆ, ಅನೇಕಾನೇಕ ಧನ್ಯವಾದಗಳು! ನಮಸ್ಕಾರ.
*ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

****

 



(Release ID: 1701118) Visitor Counter : 264