ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಆಸ್ಟ್ರೇಲಿಯಾ ವರ್ತುಲ ಆರ್ಥಿಕ ಹ್ಯಾಕಥಾನ್‌ (ಐ-ಎಸಿಇ) ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ನಮ್ಮ ಭೂ ಮಂಡಲದ ಪರಿಸರದ ಮೇಲಿನ ಒತ್ತಡ ನಿವಾರಣೆಗೆ ವರ್ತುಲ ಆರ್ಥಿಕತೆಯು ಪ್ರಮುಖ ಹೆಜ್ಜೆಯಾಗಬಲ್ಲದು

ಕೊರೋನೋತ್ತರ ಜಗತ್ತನ್ನು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಸಹಭಾಗಿತ್ವವು ಮಹತ್ವದ ಪಾತ್ರವನ್ನು ವಹಿಸಲಿದೆ: ಪ್ರಧಾನಿ

Posted On: 19 FEB 2021 10:26AM by PIB Bengaluru

ನಮ್ಮ ಅನುಭೋಗದ ವಿಧಾನ ಮತ್ತು ಅದರಿಂದ ನಮ್ಮ ಪರಿಸರದ ಮೇಲಾಗುತ್ತಿರುವ ಪರಿಣಾಮವನ್ನು ಹೇಗೆ ಕಡಿಮೆ ಮಾಡಬಹುದೆಂಬ ಬಗ್ಗೆ ಅವಲೋಕನ ನಡೆಸಬೇಕಾದ ಅಗತ್ಯವಿದೆ ಎಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಹೇಳಿದರು ನಿಟ್ಟಿನಲ್ಲಿ ನಮ್ಮ ಹಲವು ಸವಾಲುಗಳನ್ನು ಪರಿಹರಿಸುವಲ್ಲಿ ಆವರ್ತ ಆರ್ಥಿಕತೆಯು ಪ್ರಮುಖ ಹೆಜ್ಜೆಯಾಗಬಲ್ಲದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ-ಆಸ್ಟ್ರೇಲಿಯಾ ಆವರ್ತ ಆರ್ಥಿಕತೆಯ ಹ್ಯಾಕಥಾನ್‌ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರು ಮಾತನಾಡಿದರು.

ವಸ್ತುಗಳ ಮರುಸಂಸ್ಕರಣೆ ಮತ್ತು ಮರುಬಳಕೆ, ತ್ಯಾಜ್ಯದ ನಿರ್ಮೂಲನೆ ಮತ್ತು ಸಂಪನ್ಮೂಲದ ದಕ್ಷತೆಯನ್ನು ಹೆಚ್ಚಿಸುವುದು ನಮ್ಮ ಜೀವನ ವಿಧಾನದ ಭಾಗವಾಗಬೇಕು ಎಂದು ಪ್ರಧಾನಿಯವರು ಅಭಿಪ್ರಾಯಪಟ್ಟರು. ಹ್ಯಾಕಥಾನ್‌ನಲ್ಲಿ ಪ್ರದರ್ಶಿಸಲಾದ ಅನ್ವೇಷಣೆಗಳು ಆವರ್ತ ಆರ್ಥಕತೆಯ ವಿಚಾರದಲ್ಲಿ ಮುಂದಾಳತ್ವ ವಹಿಸಲು ಎರಡೂ ದೇಶಗಳಿಗೆ ಪ್ರೇರಣೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಆಲೋಚನೆಗಳನ್ನು ಬೆಳೆಸಲು ಮತ್ತು ಕಾರ್ಯಾನುಷ್ಠಾನಗೊಳಿಸಲು ಮಾರ್ಗೋಪಾಯಗಳನ್ನು ಹುಡುಕುವಂತೆಯೂ ಅವರು ಕರೆ ನೀಡಿದರು. "ಭೂತಾಯಿಯು ನಮಗೆ ನೀಡಿರುವ ಸರ್ವಸ್ವಕ್ಕೂ ನಾವು ಒಡೆಯರಲ್ಲ. ಬದಲಿಗೆ, ಮುಂದಿನ ಪೀಳಿಗೆಗೂ ಭೂತಾಯಿಯ ಕೊಡುಗೆಯನ್ನು ಉಳಿಸುವ  ಹೊಣೆಯನ್ನು ಹೊಂದಿರುವ ನ್ಯಾಸಧಾರಿಗಳಷ್ಟೇ  ಎಂಬುದನ್ನು ಎಂದಿಗೂ ಮರೆಯಬಾರದು.” ಎಂದು ಪ್ರಧಾನಿ ಹೇಳಿದರು.

ಹ್ಯಾಕಥಾನ್‌ನಲ್ಲಿ ಇಂದಿನ ಯುವಕರ ಪಾಲ್ಗೊಳ್ಳುವಿಕೆಯಲ್ಲಿ ಕಂಡು ಬಂದ ಹುರುಪು ಮತ್ತು ಉತ್ಸಾಹಗಳು ಭಾರತ ಹಾಗೂ ಆಸ್ಟ್ರೇಲಿಯಾ ಎದುರು ನೋಡುತ್ತಿರುವ ಭವಿಷ್ಯದ ಸಹಭಾಗಿತ್ವಕ್ಕೆ ಸಂಕೇತ ಎಂದು ಪ್ರಧಾನಿಯವರು ಹೇಳಿದರು. “ಬಲಿಷ್ಠ ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವವು ಕೊರೊನೋತ್ತರ ಜಗತ್ತನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಮ್ಮ ಯುವಜನತೆ, ಯುವ ಸಂಶೋಧಕರು, ನಮ್ಮ ನವೋದ್ಯಮಗಳು ಸಹಭಾಗಿತ್ವದ ಮುಂದಾಳತ್ವ ವಹಿಸಲಿದ್ದಾರೆ.” ಎಂದು ಪ್ರಧಾನ ಮಂತ್ರಿಗಳು ಹೇಳಿದರು.

***



(Release ID: 1699406) Visitor Counter : 209