ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 22 JAN 2021 1:46PM by PIB Bengaluru

ನಮಸ್ಕಾರ !

ಅಸ್ಸಾಂ ರಾಜ್ಯಪಾಲರಾದ ಪ್ರೊ ಜಗದೀಶ್ ಮುಖೀ ಜೀ, ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೀ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್ ಜೀ, ತೇಜ್‌ಪುರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿ.ಕೆ.ಜೈನ್ ಜೀ, ಇತರ ಬೋಧಕ ವರ್ಗದ ಸದಸ್ಯರೇ ಮತ್ತು ತೇಜ್‌ಪುರ ವಿಶ್ವವಿದ್ಯಾಲಯದ ನನ್ನ ಪ್ರೀತಿಯ ಪ್ರತಿಭಾವಂತ ವಿದ್ಯಾರ್ಥಿಗಳೇ, ಇಂದಿನ ದಿನ 1200ಕ್ಕೂ ಅಧಿಕ  ವಿದ್ಯಾರ್ಥಿಗಳಿಗೆ ಜೀವನ ಪೂರ್ತಿ ಸ್ಮರಣೀಯ ದಿನ. ಇಂದಿನ ದಿನ ನಿಮ್ಮ ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ, ಮತ್ತು ನಿಮ್ಮ ಪೋಷಕರಿಗೆ ಕೂಡಾ ಬಹಳ ಮಹತ್ವದ ದಿನ. ಎಲ್ಲಕ್ಕಿಂತ ಮಿಗಿಲಾಗಿ ತೇಜ್‌ಪುರ ವಿಶ್ವವಿದ್ಯಾಲಯದ ಹೆಸರು ಇನ್ನು ಮುಂದೆ ನಿಮ್ಮ ಜೀವನ ಮತ್ತು ಉದ್ಯೋಗದುದ್ದಕ್ಕೂ ನಿಮ್ಮೊಂದಿಗೆ ಇರುತ್ತದೆ.ನೀವು ಎಷ್ಟು ಸಂತೋಷದಿಂದಿದ್ದೀರೋ, ನಾನು ಅದಕ್ಕಿಂತ ಮಿಗಿಲಾದ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಭವಿಷ್ಯದ ಬಗ್ಗೆ ನೀವು ಬಹಳಷ್ಟು ಆಶಾವಾದಿಯಾಗಿರುವಂತೆಯೇ ನಾನು ಕೂಡಾ ನಿಮ್ಮಲ್ಲಿ ಅಪರಿಮಿತ ನಂಬಿಕೆ ಇರಿಸಿದ್ದೇನೆ. ತೇಜ್‌ಪುರ ವಿಶ್ವವಿದ್ಯಾಲಯದಲ್ಲಿ ನೀವು ಏನನ್ನು ಕಲಿತಿದ್ದೀರೋ ಅದು ನಿಮಗೆ ಹೊಸ ವೇಗವನ್ನು ತಂದುಕೊಡುತ್ತದೆಅಸ್ಸಾಂ ಮತ್ತು  ದೇಶದ ಪ್ರಗತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ.

ಸ್ನೇಹಿತರೇ,

ನಂಬಿಕೆಗೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ತೇಜ್‌ಪುರ ಚಾರಿತ್ರಿಕ ಸ್ಥಳ ಮತ್ತು ಅದರ ಪುರಾಣೇತಿಹಾಸದಿಂದ ಅದು ನೀಡಿರುವ ಪ್ರೇರಣೆ!. ಎರಡನೆಯದಾಗಿ, ತೇಜ್‌ಪುರ ವಿಶ್ವವಿದ್ಯಾಲಯದಲ್ಲಿ ನೀವು ಮಾಡುತ್ತಿರುವ ಕೆಲಸ. ಅದರ ಬಗ್ಗೆ ನನಗೆ ತಿಳಿಸಲಾಗಿದೆ. ಅದು ಬಹಳಷ್ಟು ಉತ್ಸಾಹವನ್ನು ಉದ್ದೀಪಿಸುತ್ತದೆ. ಮತ್ತು ಮೂರನೆಯದಾಗಿ ನನಗೆ ಮಾತ್ರವಲ್ಲ, ಇಡೀ ದೇಶಕ್ಕೆ ಪೂರ್ವ ಭಾರತದ ಸಾಮರ್ಥ್ಯಗಳ ಬಗ್ಗೆ, ಅಲ್ಲಿಯ ಜನತೆ , ಅಲ್ಲಿಯ ಯುವ ಜನತೆ ಮತ್ತು ಅವರ ರಾಷ್ಟ್ರ ನಿರ್ಮಾಣ ಪ್ರಯತ್ನಗಳ ಬಗ್ಗೆ ಅಚಲ ನಂಬಿಕೆ ಇದೆ.

ಸ್ನೇಹಿತರೇ,

ಪದವಿಗಳನ್ನು ಮತ್ತು ಪದಕಗಳನ್ನು  ಪ್ರದಾನಿಸುವುದಕ್ಕೆ ಮೊದಲು ಹಾಡಲಾದ ವಿಶ್ವವಿದ್ಯಾಲಯದ ಪ್ರಾರ್ಥನಾ ಗೀತೆಯ ಸ್ಪೂರ್ತಿಯು ತೇಜ್‌ಪುರದ ಚರಿತ್ರೆಗೆ ವಂದನೆಗಳನ್ನು ಸಲ್ಲಿಸುತ್ತದೆ.ನಾನು ಕೆಲವು ಸಾಲುಗಳನ್ನು ಪುನರುಚ್ಚರಿಸುತೇನೆ, ಯಾಕೆಂದರೆ ಅವುಗಳನ್ನು ಭಾರತ ರತ್ನ ಭುಪೇನ್ ಹಜಾರಿಕಾ ಜೀ ಬರೆದಿದ್ದಾರೆ. ಅವರು ಅಸ್ಸಾಂನ ಹೆಮ್ಮೆ. ಅವರು ಬರೆದಿದ್ದಾರೆअग्निगड़र स्थापत्य, कलियाभोमोरार सेतु निर्माण, ज्ञान ज्योतिर्मय, सेहि स्थानते बिराजिसे तेजपुर विश्वविद्यालय ಅಂದರೆ ತೇಜ್‌ಪುರ ವಿಶ್ವವಿದ್ಯಾಲಯವು ಬೆಂಕಿಯ ಕೋಟೆ ಇದ್ದ ಸ್ಥಳದಲ್ಲಿ ಸ್ಥಾಪನೆಯಾಗಿದೆ, ಅಲ್ಲಿ ಕೋಲಿಯ ಭೋಮೊರಾ ಸೇತು ಇದೆ, ಅಲ್ಲಿ ಜ್ಞಾನದ ಬೆಳಕಿದೆ. ಭುಪೇನ್ ದಾ ಮೂರು ಸಾಲುಗಳಲ್ಲಿ ಬಹಳಷ್ಟನ್ನು ಹೇಳಿದ್ದಾರೆ. ಅಗ್ನಿಘರ್ ಚರಿತ್ರೆ ರಾಜಕುಮಾರ ಅನಿರುದ್ಧ ಮತ್ತು ರಾಜಕುಮಾರಿ ಉಷಾ , ಶ್ರೀ ಕೃಷ್ಣ ದೇವರು. ಅಹೋಮ್ ಮಹಾ ಸೇನಾನಿ ಕಾಲಿಯ ಭೋಮೊರಾ ಫುಕಾನ್  ಅವರ ಚಿಂತನೆಜ್ಞಾನದ ಸಂಗ್ರಹಾಲಯಗಳು ತೇಜ್‌ಪುರದ ಸ್ಪೂರ್ತಿ ಮತ್ತು ಪ್ರೇರಣೆಗಳು. ಭುಪೇನ್ ದಾ ಜೊತೆಗೆ  ಜ್ಯೋತಿ ಪ್ರಸಾದ್ ಅಗರ್ವಾಲ್ ಮತ್ತು ಬಿಷ್ಣು ಪ್ರಸಾದ್ ರಾಭಾ ಅವರೂ ತೇಜ್‌ಪುರದ ಗುರುತಿಸುವಿಕೆಗೆ ಕಾರಣರಾಗಿದ್ದಾರೆ. ನೀವು ಅವರ ಕರ್ಮ ಭೂಮಿಯಲ್ಲಿ ಕಲಿತಿರುವುದರಿಂದ, ಅವರ ಜನ್ಮಭೂಮಿಯಲ್ಲಿದ್ದುದರಿಂದ ನೀವು ಹೆಮ್ಮೆ ಪಡುವುದು ಸಹಜ ಮತ್ತು ನಿಮ್ಮ ಜೀವನ ಆತ್ಮವಿಶ್ವಾಸದಿಂದ ತುಂಬಿರುತ್ತದೆ.

ಸ್ನೇಹಿತರೇ,

ವರ್ಷ ನಮ್ಮ ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷದಲ್ಲಿದೆ. ನೂರಾರು ವರ್ಷಗಳ ದಾಸ್ಯದಿಂದ  ದೇಶವನ್ನು ವಿಮೋಚನೆ ಮಾಡಲು ಅಸ್ಸಾಂನ ಅಸಂಖ್ಯಾತ ಜನರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಕಾಲದಲ್ಲಿ ಜನರು ತಮ್ಮ ಜೀವವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ತಮ್ಮ ಯೌವನವನ್ನು ತ್ಯಾಗ ಮಾಡಿದ್ದಾರೆ. ಈಗ ನೀವು ನವಭಾರತಕ್ಕಾಗಿ ಜೀವಿಸಬೇಕಾಗಿದೆ. ಸ್ವಾವಲಂಬಿ ಭಾರತಕ್ಕಾಗಿ ಬದುಕಬೇಕಾಗಿದೆ ಮತ್ತು ನಿಮ್ಮ ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕಾಗಿದೆ. ಈಗಿನಿಂದ ಸ್ವಾತಂತ್ರ್ಯದ  ನೂರನೇ ವರ್ಷ ಪೂರ್ಣಗೊಳ್ಳುವಾಗ 25-26 ವರ್ಷಗಳು ನಿಮ್ಮ ಬದುಕಿನ ಸುವರ್ಣ ವರ್ಷಗಳು. ಯುವ ಜನತೆಯ ಕನಸುಗಳನ್ನು ಕಲ್ಪಿಸಿಕೊಳ್ಳಿ, 1920-21 ರಲ್ಲಿ ನಿಮ್ಮ ವಯಸ್ಸಿನ ಮಗಳನ್ನು ಕಲ್ಪಿಸಿಕೊಳ್ಳಿ. ಅವರ ಮನಸ್ಸಿನಲ್ಲಿದ್ದ ಸಂಗತಿಗಳು ಯಾವುವು, ಅವರು ಅವುಗಳನ್ನು ಹೇಗೆ ಅನುಸರಿಸಿದರು ಮತ್ತು ಅವುಗಳನ್ನು ಸಾಧಿಸಲು ಹೇಗೆ ತಮ್ಮ ಜೀವನವನ್ನು ಬರಿದು ಮಾಡಿಕೊಂಡರು?.100 ವರ್ಷಗಳ ಹಿಂದೆ ನಿಮ್ಮ ವಯಸ್ಸಿನ ಜನರು ಏನು ಮಾಡುತ್ತಿದ್ದರು ಎಂಬುದನ್ನು ಕಲ್ಪಿಸಿಕೊಳ್ಳಿ, ಆಗ ನೀವು ಏನು ಮಾಡಬೇಕು ಎಂಬುದನ್ನು ಚಿಂತಿಸಲು ಸಮಯ ಬೇಕಾಗುವುದಿಲ್ಲ. ಇದು ನಿಮಗೆ ಸುವರ್ಣ ಅವಧಿ. ತೇಜ್‌ಪುರದ ವೈಭವವನ್ನು ಇಡೀ ಭಾರತದಾದ್ಯಂತ ಹರಡಿ, ವಿಶ್ವದುದ್ದಕ್ಕೂ ಪಸರಿಸಿ. ಅಸ್ಸಾಂ ಮತ್ತು ಈಶಾನ್ಯವನ್ನು ಅಭಿವೃದ್ಧಿಯ ಹೊಸ ಮಜಲಿನೆಡೆಗೆ ಕೊಂಡೊಯ್ಯಿರಿ. ನಮ್ಮ ಸರಕಾರ ಈಶಾನ್ಯದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ  ರೀತಿ, ಪ್ರತೀ ರಂಗದಲ್ಲಿಯೂ ಮಾಡುತ್ತಿರುವ ಕೆಲಸದ ವೈಖರಿ, ಸಂಪರ್ಕ, ಶಿಕ್ಷಣ ಆರೋಗ್ಯ ಇತ್ಯಾದಿ ವಲಯಗಳಲ್ಲಿ ತೊಡಗಿಕೊಂಡಿರುವ ರೀತಿ ನಿಮಗಾಗಿ ಹೊಸ ಸಾಧ್ಯತೆಗಳನ್ನು ರೂಪಿಸಿದೆ. ಸಾಧ್ಯತೆಗಳ ಪೂರ್ಣ ಪ್ರಯೋಜನವನ್ನು ಪಡೆಯಿರಿ. ನಿಮ್ಮ ಪ್ರಯತ್ನಗಳು ನಿಮಗೆ ಹೊಸದಾಗಿ ಚಿಂತಿಸುವ ಮತ್ತು ಅನ್ವೇಷಿಸುವ ಸಾಮರ್ಥ್ಯ ಹಾಗು ಅರ್ಹತೆ ಇದೆ  ಎಂಬುದನ್ನು ತೋರಿಸುತ್ತವೆ.

ಸ್ನೇಹಿತರೇ,

ತೇಜ್‌ಪುರ ವಿಶ್ವವಿದ್ಯಾಲಯವು ಅದರ ಅನ್ವೇಷಣಾ ಕೇಂದ್ರದಿಂದಾಗಿ ಪ್ರಸಿದ್ಧಿಯನ್ನು ಗಳಿಸಿದೆ. ನಿಮ್ಮ ತಳಮಟ್ಟದ ಅನ್ವೇಷಣೆಗಳು ಸ್ಥಳೀಯ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡುವ ವೋಕಲ್ ಫಾರ್ ಲೋಕಲ್ ಗೆ ಬಲ ಮತ್ತು ಹೊಸ ವೇಗವನ್ನು ನೀಡಿವೆ. ಅನ್ವೇಷಣೆಗಳು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಅಭಿವೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುವಲ್ಲಿ ಸಮರ್ಥವಾಗಿವೆ. ನಿಮ್ಮ ರಾಸಾಯನಿಕ ವಿಜ್ಞಾನ ವಿಭಾಗವು ಸ್ವಚ್ಚ ಕುಡಿಯುವ ನೀರು ಪಡೆಯುವ ಕಡಿಮೆ ಖರ್ಚಿನ ಮತ್ತು ಸುಲಭ ಬಳಕೆಯ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದೆ ಎಂದು ನನಗೆ ತಿಳಿಸಲಾಗಿದೆ. ಇದರಿಂದ ಅಸ್ಸಾಂನ ಬಹಳಷ್ಟು ಹಳ್ಳಿಗಳಿಗೆ ಪ್ರಯೋಜನವಾಗುತ್ತಿದೆ. ಜೊತೆಗೆ ಹೊಸ ತಂತ್ರಜ್ಞಾನ ಛತ್ತೀಸ್ ಗಢ , ಒಡಿಶಾ, ಬಿಹಾರ, ಕರ್ನಾಟಕ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಬಳಕೆಯಾಗುತ್ತಿದೆ, ಅಂದರೆ ನಿಮ್ಮ ಖ್ಯಾತಿ ಈಗ ಹರಡುತ್ತಿದೆ. ಭಾರತದಲ್ಲಿ ಮಾದರಿಯ ತಂತ್ರಜ್ಞಾನ ಅಭಿವೃದ್ಧಿ ಪ್ರತೀ ಮನೆಗೂ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಆಂದೋಲನ ಕನಸನ್ನು ನನಸು ಮಾಡಲು ಸಹಾಯ ಮಾಡಲಿದೆ.

ಸ್ನೇಹಿತರೇ,

ನೀರು ಮಾತ್ರವಲ್ಲದೆ, ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸಲು ನೀವು ಕೈಗೆತ್ತಿಕೊಂಡ ಕಾರ್ಯದ ಪರಿಣಾಮ ಬಹಳ ದೊಡ್ಡದು. ಬೆಳೆ ತ್ಯಾಜ್ಯಗಳು ನಮ್ಮ ರೈತರಿಗೆ ಮತ್ತು ನಮ್ಮ ಪರಿಸರಕ್ಕೆ ಬಹಳ ದೊಡ್ಡ ಸಮಸ್ಯೆ. ಜೈವಿಕ ಅನಿಲ ಮತ್ತು ಸಾವಯವ ರಸಗೊಬ್ಬರಗಳಿಗೆ ಸಂಬಂಧಿಸಿ ನಿಮ್ಮ ವಿಶ್ವವಿದ್ಯಾಲಯ ಮಾಡುತ್ತಿರುವ ಕಡಿಮೆ ಖರ್ಚಿನ ಮತ್ತು ಸಮರ್ಪಕ, ಕ್ರಿಯಾಶೀಲ ತಂತ್ರಜ್ಞಾನ ಕುರಿತ ಕೆಲಸ  ದೇಶದ ಪ್ರಮುಖ ಸಮಸ್ಯೆಯನ್ನು ಪರಿಹರಿಸಬಲ್ಲದು.

ಸ್ನೇಹಿತರೇ,

ತೇಜ್‌ಪುರ ವಿಶ್ವವಿದ್ಯಾಲಯವು ಜೀವ ವೈವಿಧ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಈಶಾನ್ಯದ ಶ್ರೀಮಂತ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಂದೋಲನ ನಡೆಸುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಈಶಾನ್ಯದ ಬುಡಕಟ್ಟು ಸಮುದಾಯಗಳ ಭಾಷೆಗಳ ದಾಖಲೀಕರಣ ಮಾಡುವುದು ಒಂದು ಶ್ಲಾಘನೀಯ ಕಾರ್ಯ. ಭಾಷೆಗಳು ಕಣ್ಮರೆಯಾಗುವ ಅಪಾಯದಲ್ಲಿವೆ. ಅದೇ ರೀತಿ ನೀವು ಇತರ ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿದ್ದೀರಿ. ನಾಗಾಂವ್ ಬಟದ್ರವ ಥಾನ್ ನಲ್ಲಿ ಶತಮಾನ ಹಳೆಯ ಮರದ ಕಲೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ನೀವು ತೊಡಗಿಕೊಂಡಿದ್ದೀರಿ, ಇದು ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳ. ಅಸ್ಸಾಂ ಸ್ವಾಧೀನಪಡಿಸಿಕೊಳ್ಳುವಿಕೆ ಸಂದರ್ಭದಲ್ಲಿಯ ಅವಧಿಯ ಪುಸ್ತಕಗಳು ಮತ್ತು ಪತ್ರಿಕೆಗಳ ಡಿಜಿಟಲೀಕರಣವನ್ನೂ ಮಾಡುತ್ತಿದ್ದೀರಿ. ಇದನ್ನು ಕೇಳಿದ ಯಾರೇ ಆದರೂ ಹೆಮ್ಮೆಯನ್ನು ಅನುಭವಿಸುತ್ತಾರೆ. ಭಾರತದ ಪೂರ್ವದ ಕೊನೆಯ ಭಾಗವಾದ ತೇಜ್‌ಪುರದಲ್ಲಿ ಅರ್ಪಣಾ ಭಾವದಿಂದ ಮತ್ತು  ಅನುಷ್ಟಾನದಿಂದ ಕೆಲಸ ಆಗುತ್ತಿದೆ. ನೀವು ಅದ್ಭುತವಾದುದನ್ನು ಮಾಡುತ್ತಿದ್ದೀರಿ.

ಸ್ನೇಹಿತರೇ,

ನಾನು ಇಷ್ಟನ್ನು ತಿಳಿದುಕೊಂಡ ನಂತರ, ಮನಸ್ಸಿಗೆ ಒಂದು ಪ್ರಶ್ನೆ ಬಂದಿದೆ, ನೀವು ಇದಕ್ಕೆಲ್ಲಾ ಪ್ರೇರಣೆ ಎಲ್ಲಿಂದ ಪಡೆದಿರಿ, ಸ್ಥಳಿಯ ಆವಶ್ಯಕತೆಗಳು, ಸ್ಥಳೀಯ ವಿಷಯಗಳ ಮೇಲೆ ಸಂಶೋಧನೆ ನಡೆಸಲು ನಿಮಗೆ ಪ್ರೇರಣೆ ಎಲ್ಲಿಂದ ಲಭಿಸಿತು? ಇದಕ್ಕೆ ಉತ್ತರ ತೇಜ್‌ಪುರ ವಿಶ್ವ ವಿದ್ಯಾಲಯದ ಆವರಣದಲ್ಲಿದೆ. ನಿಮ್ಮ ಹಾಸ್ಟೆಲ್ ಗಳು- ಚರೈದೇವ್, ನೀಲಾಚಲ, ಕಾಂಚನಗಂಗಾ, ಪಟ್ಕಾಯಿ, ಧನ್ಸಿರಿ, ಸುಬಾನ್ ಸಿರಿ, ಕೋಪಿಲಿ ಹೆಸರುಗಳನ್ನು ಹೊಂದಿವೆ. ಹೆಸರುಗಳು ಪರ್ವತಗಳವು, ಶಿಖರಾಗ್ರಗಳವು ಮತ್ತು ನದಿಗಳವು. ಮತ್ತು ಇವುಗಳು ಬರಿಯ ಹೆಸರುಗಳಲ್ಲ. ಅವುಗಳು ಬದುಕಿನ  ಜೀವಂತ ಪ್ರೇರಕಗಳು.ಬದುಕಿನ ಪ್ರಯಾಣದಲ್ಲಿ ನಾವು ಬಹಳಷ್ಟು ಕಷ್ಟ ಪರಂಪರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ಪರ್ವತಗಳನ್ನು ಹತ್ತಬೇಕಾಗುತ್ತದೆ. ಮತ್ತು ಹಲವು ನದಿಗಳನ್ನು ದಾಟಬೇಕಾಗುತ್ತದೆ. ಇದು ಒಂದು ಅವಧಿಯ ಕೆಲಸ ಅಲ್ಲ. ನೀವು ಒಂದು ಪರ್ವತ ಹತ್ತಿ ಅಲ್ಲಿಂದ ಮುಂದೆ ಹೋಗಬೇಕಾಗುತ್ತದೆ. ಪ್ರತೀ ಪರ್ವತ ಹತ್ತಿದಾಗಲೂ ನಿಮ್ಮ ಮಾಹಿತಿ ಕೂಡಾ ವಿಸ್ತಾರಗೊಳ್ಳುತ್ತದೆ. ನಿಮ್ಮ ತಜ್ಞತೆ ವಿಸ್ತರಿಸುತ್ತದೆ. ಮತ್ತು ನಿಮ್ಮ  ಮನಸ್ಸು ಹೊಸ ಸವಾಲುಗಳಿಗೆ ತಯಾರಾಗುತ್ತದೆ, ಧೋರಣೆಯನ್ನು ಅದು ಬೆಳೆಸಿಕೊಳ್ಳುತ್ತದೆ. ಅದೇ ರೀತಿ ನದಿಗಳು ನಮಗೆ ಬಹಳಷ್ಟನ್ನು ಕಲಿಸುತ್ತವೆ. ನದಿಗಳು ಬಹಳಷ್ಟು ಉಪನದಿಗಳನ್ನು ಹೊಂದಿರುತ್ತವೆ. ಮತ್ತು ಅವುಗಳು ಬಳಿಕ ಸಮುದ್ರವನ್ನು ಸೇರುತ್ತವೆ. ನಾವು ಜೀವನದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಅವರಿಂದ ಕಲಿಯಬೇಕಾಗುತ್ತದೆ ಮತ್ತು ಪಾಠಗಳೊಂದಿಗೆ ಮುಂದುವರೆದು ನಮ್ಮ ಗುರಿಗಳನ್ನು ಸಾಧಿಸಬೇಕಾಗುತ್ತದೆ.

ಸ್ನೇಹಿತರೇ,

ನೀವು ಧೋರಣೆಯೊಂದಿಗೆ ಮುಂದುವರೆದರೆ, ನೀವು ಅಸ್ಸಾಂನ ಏಳಿಗೆಗೆ ಕೊಡುಗೆ ನೀಡಲು ಸಮರ್ಥರಾಗುತ್ತೀರಿ. ಈಶಾನ್ಯ ಮತ್ತು ದೇಶಕ್ಕೂ ಕೊಡುಗೆ ನೀಡಲು ಸಮರ್ಥರಾಗುತ್ತೀರಿ. ಕೊರೊನಾ ಅವಧಿಯಲ್ಲಿ ನಮ್ಮ ಮಾತುಗಳಲ್ಲಿ ಆತ್ಮನಿರ್ಭರ ಭಾರತ ಆಂದೋಲನ ಒಂದು ಸಮಗ್ರ ಅವಿಭಾಜ್ಯ ಭಾಗವಾಯಿತು ಎಂಬುದನ್ನು ನೀವು ನೋಡಿರಬಹುದುಅದು ನಮ್ಮ ಕನಸುಗಳೊಂದಿಗೆ ಸೇರಿ ಹೋಗಿದೆ. ನಮ್ಮ ಪ್ರಯತ್ನಗಳು, ನಮ್ಮ ನಿರ್ಧಾರಗಳು, ನಮ್ಮ ಸಾಧನೆಗಳು, ಪ್ರತಿಯೊಂದೂ ಅದರ ಸುತ್ತಲೇ ಸುತ್ತುತ್ತಿವೆ. ಆದರೆ ಆಂದೋಲನ ಏನು? ಮತ್ತು ಅದರಿಂದಾದ ಬದಲಾವಣೆ ಏನು? ಬದಲಾವಣೆ ಸಂಪನ್ಮೂಲಗಳಿಗೆ ಮಾತ್ರವೇ ಸೀಮಿತವಾಗಿದೆಯೇ?. ಬದಲಾವಣೆ ಭೌತಿಕ ಮೂಲಸೌಕರ್ಯಗಳಿಗೆ ಮಾತ್ರವೇ ಸೀಮಿತವಾಗಿದೆಯೇ?.

ಬದಲಾವಣೆ ಬರೇ ತಂತ್ರಜ್ಞಾನದಲ್ಲಿ ಮಾತ್ರವೇ ಆಗಿದೆಯೇ? ಬದಲಾವಣೆ ಬೆಳೆಯುತ್ತಿರುವ ಆರ್ಥಿಕ ಮತ್ತು ವ್ಯೂಹಾತ್ಮಕ ಕಾರಣದಿಂದ ಆಗುತ್ತಿದೆಯೇ?. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೌದು. ಆದರೆ ಅತ್ಯಂತ ದೊಡ್ಡ ಬದಲಾವಣೆ ಪ್ರವೃತ್ತಿ, ಕ್ರಿಯೆ ಮತ್ತು ಪ್ರತಿಕ್ರಿಯೆಗೆ ಸಂಬಂಧಿಸಿದ್ದು. ಇಂದು ಪ್ರತೀ ಸವಾಲನ್ನು ಮತ್ತು ಸಮಸ್ಯೆಯನ್ನು ನಿಭಾಯಿಸುವಲ್ಲಿ ನಮ್ಮ ಯುವ ದೇಶದ ಮನಸ್ಥಿತಿ ಮತು ಮಾದರಿ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ನಾವಿದನ್ನು ಕ್ರಿಕೆಟಿನ ಕ್ಷೇತ್ರದಲ್ಲಿ ಇತ್ತೀಚೆಗೆ ನೋಡಿದ್ದೇವೆ. ನಿಮ್ಮಲ್ಲಿ ಬಹುತೇಕರು ಭಾರತೀಯ ಕ್ರಿಕೆಟ್ ಟೀಮ್ ಆಸ್ಟ್ರೇಲಿಯಾ ಪ್ರವಾಸವನ್ನು ಅನುಸರಿಸುತ್ತಿರಬಹುದು ಪ್ರವಾಸದಲ್ಲಿ ನಮ್ಮ ತಂಡ ಯಾವೆಲ್ಲ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು?. ನಾವು ಬಹಳ ದಯನೀಯವಾಗಿ ಸೋತೆವು. ಆದರೆ ನಾವು ಅಷ್ಟೇ ತೀವ್ರಗತಿಯಿಂದ ತಿರುಗಿಬಿದ್ದೆವು. ಮತ್ತು ಮುಂದಿನ ಪಂದ್ಯದಲ್ಲಿ ನಾವು ಗೆದ್ದೆವು. ಗಾಯಗೊಂಡರೂ, ನಮ್ಮ ಆಟಗಾರರು ಪಂದ್ಯವನ್ನು ಉಳಿಸಲು ಆಟದ ಮೈದಾನದಲ್ಲಿ ಸ್ಥಿರವಾಗಿ ನಿಂತರು. ಸವಾಲಿನ ಪರಿಸ್ಥಿತಿಗಳಲ್ಲಿ ನಿರಾಶರಾಗದೆ ನಮ್ಮ ಯುವ ಆಟಗಾರರು ಸವಾಲನ್ನು ಎದುರಿಸಿದರು. ಹೊಸ ಪರಿಹಾರಗಳನ್ನು ಕಂಡು ಕೊಂಡರು. ಸಂಶಯವೇ ಬೇಡ, ಕೆಲವು ಆಟಗಾರರಿಗೆ ಬಹಳ ಕಡಿಮೆ ಅನುಭವವಿತ್ತು. ಆದರೆ ಅವರ ನೈತಿಕ ಸ್ಥೈರ್ಯ ಬಹಳ ಎತ್ತರದಲ್ಲಿತ್ತು. ಅವರು ತಮಗೆ ಅವಕಾಶ ದೊರೆಯುತ್ತಿದ್ದಂತೆ ಅವರು ಚರಿತ್ರೆಯನ್ನು ನಿರ್ಮಿಸಿದರು. ಪ್ರತಿಭೆಯಲ್ಲಿರುವ ನಂಬಿಕೆ ಅಂತಹದು. ಮತ್ತು ಅಂತಹ ಹುರುಪಿನಿಂದ ಅವರು ಉತ್ತಮ ತಂಡವನ್ನು ಸೋಲಿಸಿದರು. ಅತ್ಯಂತ ಅನುಭವಿ ತಂಡ ಮತ್ತು ಬಹಳಷ್ಟು ಅನುಭವೀ ಆಟಗಾರರಿದ್ದಾರೆಂದು ಬಿಂಬಿಸಲಾದ ತಂಡ ಸೋತಿತು

ಯುವ ಸ್ನೇಹಿತರೇ,

ಕ್ರಿಕೆಟ್ ರಂಗದಲ್ಲಿ ನಮ್ಮ ಆಟಗಾರರ ಸಾಧನೆ ಕ್ರೀಡಾ ಕ್ಷೇತ್ರಕ್ಕೆ ಮಾತ್ರವೇ ಪ್ರಮುಖವಾದುದೆಂದು ಸೀಮಿತಗೊಳಿಸಲಾಗದು, ಅದರಲ್ಲಿ ಬಹಳ ದೊಡ್ದ ಜೀವನ ಪಾಠವಿದೆ. ಮೊದಲ ಪಾಠ ನಾವು ನಂಬಿಕೆ ಇಡಬೇಕು ಮತ್ತು ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಇಡಬೇಕು ಎಂಬುದು. ಎರಡನೇ ಪಾಠ ನಮ್ಮ ಮನೋಸ್ಥಿತಿಗೆ ಸಂಬಂಧಿಸಿದ್ದು. ನಾವು ಧನಾತ್ಮಕ ಮನೋಸ್ಥಿತಿಯೊಂದಿಗೆ ಮುಂದುವರೆದರೆ ಫಲಿತಾಂಶವೂ ಧನಾತ್ಮಕವಾಗಿರುತ್ತದೆ. ಮೂರನೇ ಮತ್ತು ಬಹಳ ಪ್ರಮುಖವಾದ ಪಾಠವೆಂದರೆ ನಿಮಗೆ ಒಂದು ಭಾಗದಲ್ಲಿ ಅತ್ಯಂತ ಸುರಕ್ಷಿತವಾಗಿ ಆಟವಾಡುವ ಅವಕಾಶ ಇದ್ದರೆ ಮತ್ತು ಇನ್ನೊಂದೆಡೆ ಗೆಲ್ಲುವುದು ಅತ್ಯಂತ ಕಷ್ಟ ಸಾಧ್ಯವಾಗಿದ್ದರೆ ನೀವು ಗೆಲ್ಲುವ ಸಾಧ್ಯತೆಯನ್ನು ಅನ್ವೇಷಿಸಬೇಕು. ಗೆಲ್ಲುವ ಯತ್ನದಲ್ಲಿ  ಸಾಂದರ್ಭಿಕ ವೈಫಲ್ಯಗಳಾದರೆ ಅಲ್ಲಿ ಹಾನಿಯೇನೂ ಇಲ್ಲ. ಅಪಾಯಗಳನ್ನು ಎದುರಿಸಲು ಮತ್ತು ಪ್ರಯೋಗಗಳನ್ನು ಮಾಡಲು ಹಿಂಜರಿಯಬೇಡಿ. ನಾವು ಮುಂಜಾಗರೂಕತೆ ವಹಿಸಬೇಕು ಮತ್ತು ಭಯಮುಕ್ತರಾಗಿರಬೇಕು. ನಾವು ಒಮ್ಮೆ ವೈಫಲ್ಯಗಳ ಭಯದಿಂದ ಮುಕ್ತರಾದರೆ ಮತ್ತು ನಮ್ಮ ಮೇಲೆ ನಾವು ಹೇರಿಕೊಳ್ಳುವ ಅನಗತ್ಯ ಒತ್ತಡದಿಂದ ಹೊರಬಂದರೆ ನಾವು ಭಯಮುಕ್ತರಾಗಿ ಹೊರಹೊಮ್ಮುತ್ತೇವೆ

ಸ್ನೇಹಿತರೇ,

ಭಾರತ ನೈತಿಕ ಬಲದಿಂದಾಗಿ ಅದರ ಗುರಿಗಳತ್ತ ಅರ್ಪಣಾ ಭಾವದಿಂದ ಮುನ್ನಡೆಯಿತು ಎಂಬುದು ಕ್ರಿಕೆಟ್ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಲಾಗದು.   ಇದಕ್ಕೆ ನೀವು ಕೂಡಾ ಪ್ರತಿಬಿಂಬಗಳಂತಿದ್ದೀರಿ. ನೀವು ಆತ್ಮ ವಿಶ್ವಾಸದಿಂದ ಇದ್ದೀರಿ ಮತ್ತು ಭರವಸೆಯನ್ನು ಹೊಂದಿದ್ದೀರಿ. ನೀವು ಸಂಪ್ರದಾಯಬದ್ಧವಲ್ಲದ ರೀತಿಯಲ್ಲಿ ಚಿಂತಿಸಲು ಮತ್ತು ನಡೆಯಲು ಹಿಂಜರಿಯುವುದಿಲ್ಲ. ನಿಮ್ಮಲ್ಲಿರುವಂತಹದೇ ಯುವ ಶಕ್ತಿ ಭಾರತಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹಳ ಶಕ್ತಿಯನ್ನು ತುಂಬಿದೆ. ನೀವು ನೆನಪಿಸಿಕೊಳ್ಳಬಹುದು, ಹೋರಾಟದ ಆರಂಭದಲ್ಲಿ ಇಷ್ಟೊಂದು ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತ ಸಂಪನ್ಮೂಲಗಳ ಕೊರತೆಯಿಂದಾಗಿ ಕೊರೊನಾದಿಂದ ಅಸ್ತವ್ಯಸ್ತ ಸ್ಥಿತಿಗೆ ತಲುಪಬಹುದೆಂಬ ಕಳವಳಗಳು ವ್ಯಕ್ತವಾಗಿದ್ದವು. ಆದರೆ ಭಾರತವು ದೃಢ ನಿರ್ಧಾರವೊಂದಿದ್ದರೆ ಮತ್ತು ಪುನರುಜ್ಜೀವನ ಸಾಧ್ಯವಿದ್ದರೆ ಆಗ ಸಂಪನ್ಮೂಲಗಳನ್ನು ಅಭಿವೃದ್ಧಿ ಮಾಡಲು ಕಾಲಾವಕಾಶ ಬೇಕಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತು. ಅದನ್ನು ಭಾರತ ಮಾಡಿತು. ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಳ್ಳದೆ ಭಾರತವು ತ್ವರಿತವಾಗಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿತು. ಅದು ಸಮಸ್ಯೆಗಳನ್ನು ಉಲ್ಬಣಾವಸ್ಥೆಗೆ ಹೋಗಲು ಬಿಡಲಿಲ್ಲ. ಇದರ ಫಲಿತಾಂಶ ಎಂದರೆ ಭಾರತವು ವೈರಸ್ ವಿರುದ್ಧ ಸಮರ್ಥವಾದ ಹೋರಾಟವನ್ನು ನೀಡಿತು. ಭಾರತದಲ್ಲಿಯೇ ತಯಾರಾದ ಪರಿಹಾರಗಳೊಂದಿಗೆ, ನಾವು ವೈರಸ್ ಹರಡುವಿಕೆಯನ್ನು ನಿಯಂತ್ರಿಸಿದೆವು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಿದೆವು. ಈಗ, ನಮ್ಮ ಲಸಿಕೆ ಸಂಬಂಧಿ ಸಂಶೋಧನೆ ಮತ್ತು ಉತ್ಪಾದನಾ ಸಾಮರ್ಥ್ಯಗಳು ಭಾರತಕ್ಕೆ ಮತ್ತು ಜಗತ್ತಿನ ಇತರ ಹಲವು ದೇಶಗಳಿಗೆ ರಕ್ಷಣಾ ಕವಚದಂತಹ ವಿಶ್ವಾಸವನ್ನು ಮೂಡಿಸಿವೆ

ಯಶಸ್ಸು ನಾವು ನಮ್ಮ ವಿಜ್ಞಾನಿಗಳಲ್ಲಿ, ಸಂಶೋಧಕರಲ್ಲಿ, ವಿದ್ವಾಂಸರಲ್ಲಿ ಮತ್ತು ನಮ್ಮ ಕೈಗಾರಿಕೋದ್ಯಮದ ಶಕ್ತಿಯಲ್ಲಿ  ನಂಬಿಕೆ ಇಡದಿದ್ದರೆ ಸಾಧ್ಯವಾಗುತ್ತಿತ್ತೇ?. ಮತ್ತು ಸ್ನೇಹಿತರೇ, ಆರೋಗ್ಯ ವಲಯ ಮಾತ್ರ ಯಾಕೆ, ನಮ್ಮ  ಡಿಜಿಟಲ್ ಮೂಲಸೌಕರ್ಯವನ್ನು ಬೇಕಿದ್ದರೆ ಉದಾಹರಣೆಗಾಗಿ ತೆಗೆದುಕೊಳ್ಳಿ. ಭಾರತದಲ್ಲಿ ಸಾಕ್ಷರತೆ ಗೈರು ಆಗಿರುವಾಗ ಡಿ.ಬಿ.ಟಿ ಮತ್ತು ಡಿಜಿಟಲ್ ವರ್ಗಾವಣೆ ಸಾಧ್ಯವಿಲ್ಲ ಎಂದು ಭಾವಿಸಿದ್ದರೆ ಕೊರೊನಾ ಅವಧಿಯಲ್ಲಿ ಸರಕಾರಕ್ಕೆ ಬಡವರಲ್ಲಿ ಬಡವರನ್ನು ತಲುಪಲು ಸಾಧ್ಯವಾಗುತ್ತಿತ್ತೇ?. ಹಣಕಾಸು ತಂತ್ರಜ್ಞಾನದಲ್ಲಿ ಮತ್ತು ಡಿಜಿಟಲ್ ಸೇರ್ಪಡೆಯಲ್ಲಿ ಇಂದು ವಿಶ್ವದ ಪ್ರಮುಖ ದೇಶಗಳಲ್ಲಿ ನಾವು ಒಂದಾಗಿದ್ದಿದ್ದರೆ ನಮಗೆ ಇದು ಸಾಧ್ಯವಾಗುತ್ತಿತ್ತೇ?. ಇಂದಿನ ಭಾರತ ಸಮಸ್ಯೆಗಳನ್ನು ಪರಿಹಾರ ಮಾಡಲು ಪ್ರಯೋಗಗಳನ್ನು ನಡೆಸುವುದಕ್ಕೆ ಹಿಂಜರಿಯುವುದಿಲ್ಲ ಮತ್ತು ಅದು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುವುದಕ್ಕೂ ಹಿಂತೆಗೆಯುವುದಿಲ್ಲ. ಬ್ಯಾಂಕಿಂಗ್ ಸೇರ್ಪಡೆಯ ಅತ್ಯಂತ ದೊಡ್ಡ ಆಂದೋಲನ, ಶೌಚಾಲಯಗಳ ನಿರ್ಮಾಣ, ಪ್ರತೀ ಕುಟುಂಬಕ್ಕೂ ಮನೆಗಳನ್ನು ಒದಗಿಸುವುದು, ಮತ್ತು ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಕಾರ್ಯಕ್ರಮಗಳು ಭಾರತದಲ್ಲಿ ನಡೆಯುತ್ತಿವೆ. ಮತ್ತು ಅಲ್ಲಿ ಬೃಹತ್ ಆರೋಗ್ಯ ಭರವಸೆ ಯೋಜನೆ ಇದೆ. ಮತ್ತು ಈಗ ಬೃಹತ್ ಲಸಿಕಾ ಆಂದೋಲನ ಭಾರತದಲ್ಲಿ ನಡೆಯುತ್ತಿದೆ. ಎಲ್ಲಾ ಕಾರ್ಯಕ್ರಮಗಳು ಈಶಾನ್ಯಕ್ಕೆ ಮತ್ತು ಅಸ್ಸಾಂನ ಜನತೆಗೆ ಪ್ರಯೋಜನಗಳನ್ನು ಒದಗಿಸಿವೆದೇಶ ಮತ್ತು ಸಮಾಜ ಆತ್ಮವಿಶ್ವಾಸದಿಂದಿದ್ದರೆ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಮತ್ತು ದೇಶವು ಅನ್ವೇಷಣೆ ಹಾಗು ಯಥಾಸ್ಥಿತಿ ಬದಲಾವಣೆಗೆ ತನ್ನೆಲ್ಲಾ ಯತ್ನಗಳನ್ನು ಮಾಡುತ್ತಿದೆ.

ಸ್ನೇಹಿತರೇ,

ಇಂದು,ಭಾರತದಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿರುವ ರೀತಿಯಿಂದಾಗಿ ಅವುಗಳು ಜಗತ್ತಿನಲ್ಲಿ ಪ್ರತೀ ರಂಗದಲ್ಲಿಯೂ ಹೊಸ ಸಾಧ್ಯತೆಗಳನ್ನು ನಿರ್ಮಾಣ ಮಾಡುತ್ತಿವೆ. ಇಂದು, ನಾವು ದಿನ ನಿತ್ಯದ ಬದುಕಿನಲ್ಲಿ ಇಂತಹ ಪ್ರಯೋಗಗಳನ್ನು ನೋಡುತ್ತಿದ್ದೇವೆ. ಶಾಖಾರಹಿತ ಬ್ಯಾಂಕುಗಳು, ಶೋರೂಂ ಇಲ್ಲದೆ ಚಿಲ್ಲರೆ ವ್ಯಾಪಾರ, ಭೋಜನ ಗೃಹವಿಲ್ಲದ ಕ್ಲೌಡ್ ಅಡುಗೆಮನೆಗಳು, ಇತ್ಯಾದಿಗಳು ಇದಕ್ಕೆ ಉದಾಹರಣೆಗಳು. ಭವಿಷ್ಯದಲ್ಲಿ ವಿಶ್ವವಿದ್ಯಾಲಯಗಳು ಸಂಪೂರ್ಣವಾಗಿ ವರ್ಚುವಲ್ ಆಗಿರುವ ಮತ್ತು ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಹಾಗು ಬೋಧಕ ಸಿಬ್ಬಂದಿಗಳು  ಯಾವುದೇ ವಿಶ್ವವಿದ್ಯಾಲಯದ ಭಾಗವಾಗಬಹುದಾದ ಸಾಧ್ಯತೆ ಇದೆ. ರೀತಿಯ ಪರಿವರ್ತನೆಗೆ ನಾವು ಪ್ರಮುಖವಾದಂತಹ ನಿಯಂತ್ರಣ ಚೌಕಟ್ಟನ್ನು ರೂಪಿಸಬೇಕಾದ ಅಗತ್ಯವಿದೆ. ಇದನ್ನು ಹೊಸ ಶಿಕ್ಷಣ ನೀತಿಯ ಮೂಲಕ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ನೀತಿಯು ತಂತ್ರಜ್ಞಾನದ ಬಳಕೆ, ಬಹುಶಿಸ್ತೀಯ ಶಿಕ್ಷಣ  ಮತ್ತು ಅದರಲ್ಲಿ ನಮ್ಯತೆಯನ್ನು ಅಂದರೆ ಆಯ್ಕೆಯ ಅವಕಾಶಗಳನ್ನು ಹೆಚ್ಚು ಹೆಚ್ಚು ಉತ್ತೇಜಿಸಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದತ್ತಾಂಶ ಮತ್ತು ದತ್ತಾಂಶ ವಿಶ್ಲೇಷಣೆಗೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತದೆ. ದತ್ತಾಂಶ ವಿಶ್ಲೇಷಣೆಯ ಸಹಾಯದಿಂದ ಸೇರ್ಪಡೆಯಿಂದ ಹಿಡಿದು ಬೋಧನೆ ಮತ್ತು ಮೌಲ್ಯಮಾಪನದವರೆಗಿನ ಇಡೀ ಪ್ರಕ್ರಿಯೆ ಹೆಚ್ಚು ಉತ್ತಮಗೊಳ್ಳಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಗಳನ್ನು ಈಡೇರಿಸುವಲ್ಲಿ ತೇಜ್‌ಪುರ ವಿಶ್ವವಿದ್ಯಾಲಯವು ಪ್ರಮುಖ ಪಾತ್ರವಹಿಸಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ತೇಜ್‌ಪುರ ವಿಶ್ವವಿದ್ಯಾಲಯದ ಸಾಧನೆ ಮತ್ತು ಸಾಮರ್ಥ್ಯದ ಬಗ್ಗೆಯೂ ನನಗೆ ಪೂರ್ಣ ವಿಶ್ವಾಸವಿದೆ. ಮತ್ತು ನಾನು ಇದನ್ನು ನಿರ್ದಿಷ್ಟವಾಗಿ ನನ್ನ ವಿದ್ಯಾರ್ಥಿ ಸಹೋದ್ಯೋಗಿಗಳಿಗೆ ಹೇಳುತ್ತೇನೆ ಏನೆಂದರೆ ನೀವು ನಿಮ್ಮ ಔಪಚಾರಿಕ ಶಿಕ್ಷಣ ಪೂರ್ಣಗೊಂಡ ಬಳಿಕ ನಿಮ್ಮ ಭವಿಷ್ಯಕ್ಕಾಗಿ ಮಾತ್ರವೇ ಕೆಲಸ ಮಾಡುವುದಲ್ಲ ದೇಶದ ಭವಿಷ್ಯಕ್ಕಾಗಿಯೂ ಕೆಲಸ ಮಾಡಿ. ನೀವು ಒಂದು ಸಂಗತಿಯನ್ನು ನೆನಪಿಡಿ , ನಿಮ್ಮ ಉದ್ದೇಶಗಳು ಉನ್ನತ ಗುಣಮಟ್ಟದ್ದಾಗಿದ್ದರೆ, ಶ್ರೇಷ್ಟವಾದವುಗಳಾಗಿದ್ದರೆ, ನೀವು ಜೀವನದ ಏರು ಪೇರುಗಳಿಂದ ಕಂಗಾಲಾಗುವುದಿಲ್ಲ. ಮುಂದಿನ ನಿಮ್ಮ ಬದುಕಿನ 25-26 ವರ್ಷಗಳು ನಿಮ್ಮ ಜೀವನವನ್ನು, ಉದ್ಯೋಗಗಳನ್ನು ನಿರ್ಧರಿಸಲಿವೆ ಮತ್ತು ದೇಶದ ಭವಿಷ್ಯವನ್ನೂ ನಿರ್ಧರಿಸಲಿವೆ.

ನನಗೆ ಖಚಿತವಿದೆ, ನೀವೆಲ್ಲರೂ ಸೇರಿ ದೇಶವನ್ನು ಹೊಸ ಎತ್ತರಕ್ಕೆ ಒಯ್ಯುತ್ತೀರಿ ಎಂಬ ಬಗ್ಗೆ. 2047ರಲ್ಲಿ, ದೇಶವು ಸ್ವಾತಂತ್ರ್ಯದ 100 ನೇ ವರ್ಷಾಚರಣೆ ಮಾಡುವಾಗ 25-30 ವರ್ಷಗಳ ಅವಧಿ ನಿಮ್ಮ ಕೊಡುಗೆಯನ್ನು , ನಿಮ್ಮ ಪ್ರಯತ್ನಗಳನ್ನು ಮತ್ತು ನಿಮ್ಮ ಕನಸುಗಳನ್ನು ತುಂಬಿಕೊಡಲಿದೆ. ಸ್ವಾತಂತ್ರ್ಯದ ಶತಮಾನದಲ್ಲಿ 25 ವರ್ಷ ಎಷ್ಟೊಂದು ದೊಡ್ಡ ಪಾತ್ರವಹಿಸಬಲ್ಲದು ಎಂಬುದನ್ನು ಕಲ್ಪಿಸಿಕೊಳ್ಳಿ. ಆದುದರಿಂದ ಸ್ನೇಹಿತರೇ, ನಾವು ಕನಸುಗಳ ಬಗ್ಗೆ ಜಾಗೃತರಾಗಿರೋಣ, ಎಚ್ಚರದಿಂದಿರೋಣ, ಮತ್ತು ಕುರಿತ ನಿರ್ಧಾರಗಳೊಂದಿಗೆ, ಕನಸುಗಳು ಮತ್ತು ಸಾಧನೆಗಳೊಂದಿಗೆ  ಮುನ್ನಡೆಯೋಣ. ನೋಡಿ, ಪ್ರತಿಯೊಂದು ಯಶಸ್ಸಿನ ಜೊತೆಯೂ ಬದುಕು ತನ್ನದೇ ಹಾದಿಯನ್ನು ಮಾಡಿಕೊಳ್ಳುತ್ತದೆ. ಇಂದು ಪ್ರಶಸ್ತ, ಪವಿತ್ರ ಸಂದರ್ಭದಲ್ಲಿ, ನಾನು ನಿಮ್ಮ ಕುಟುಂಬದ ಸದಸ್ಯರಿಗೆ, ನಿಮ್ಮ ಶಿಕ್ಷಕರಿಗೆ, ಬೋಧಕ ವರ್ಗದವರಿಗೆ ಶುಭಾಶಯಗಳನ್ನು ಹೇಳುತ್ತೇನೆ. ನಿಮ್ಮ ಕನಸುಗಳಿಗೆ , ಮತ್ತು ಪ್ರತಿಯೊಬ್ಬರಿಗೂ ನನ್ನ ಅಗಣಿತ ಶುಭಹಾರೈಕೆಗಳು.

ಬಹಳ ಬಹಳ ಧನ್ಯವಾದಗಳು !!

ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1692607) Visitor Counter : 180