ಪ್ರಧಾನ ಮಂತ್ರಿಯವರ ಕಛೇರಿ

‘ಪ್ರಾರಂಭ್: ಸ್ಟಾರ್ಟ್ ಅಪ್ ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶ' ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 16 JAN 2021 8:06PM by PIB Bengaluru

ಯುವ ಶಕ್ತಿ, ಯುವ ಕನಸುಗಳು ತುಂಬಾ ಅಗಾಧವಾದವು, ಅವೆಲ್ಲಾ ಉತ್ತಮ ಉದಾಹರಣೆಗಳು. ಸದ್ಯಕ್ಕೆ ನಾನು ನಿಮ್ಮೆಲ್ಲರ ಮಾತನ್ನು ಆಲಿಸುತ್ತಿದ್ದೇನೆ ಮತ್ತು ಸೂಕ್ಷ್ಮವಾಗಿ ನೋಡುತ್ತಿದ್ದೇನೆ. ಈ ವಿಶ್ವಾಸ ನಿಮ್ಮಲ್ಲಿ ಸದಾ ಹೀಗೆ ಇರಬೇಕು. ವೈವಿಧ್ಯಮಯ ಸ್ಟಾರ್ಟ್ ಅಪ್ ಉದ್ಯಮಗಳನ್ನು ಊಹಿಸಿಕೊಳ್ಳಿ. ಒಬ್ಬರು ಕಾರ್ಬನ್ ಫೈಬರ್ 3ಡಿ ಪ್ರಿಂಟರ್ ಸ್ಟಾರ್ಟ್ ಅಪ್ ಬಗ್ಗೆ ಮಾತನಾಡಿದರೆ, ಮತ್ತೊಬ್ಬರು ಉಪಗ್ರಹಗಳ ಉಡಾವಣಾ ವಾಹಕಗಳ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಇ-ಶೌಚಾಲಯದಿಂದ ಜೀವ ವೈವಿಧ್ಯ ಪಿಪಿಇ ಕಿಟ್ ಗಳ ವರೆಗೆ, ಮಧುಮೇಹ ಔಷಧದಿಂದ ಇಟ್ಟಿಗೆ ಮಾಡುವ ಯಂತ್ರದವರೆಗೆ ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ  ಎಆರ್ ತಂತ್ರಜ್ಞಾನದವರೆಗೆ ನೀವು ಇಲ್ಲಿ ಉಲ್ಲೇಖಿಸುತ್ತಿರುವ ಪ್ರತಿಯೊಂದು ವಿಷಯಗಳು ನೀವು ಭವಿಷ್ಯವನ್ನು ಬದಲಾಯಿಸುವ ಶ್ರೇಷ್ಠ ಶಕ್ತಿಯನ್ನು ಹೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ.

ಇದೀಗ ಕಾಣುತ್ತಿರುವ ಮತ್ತೊಂದು ಬದಲಾವಣೆ ಎಂದರೆ, ಹಿಂದೆ ಯುವಕರು ಯಾವುದೇ ನವೋದ್ಯಮವನ್ನು ಆರಂಭಿಸಿದರೆ ಆಗ ಜನರು ‘ನೀನೇಕೆ ಕೆಲಸ ಮಾಡಬಾರದು ? ನವೋದ್ಯಮ ಏಕೆ’? ಎಂದು ಕೇಳುತ್ತಿದ್ದರು. ಆದರೆ ಇದೀಗ ಜನರು ‘ಉದ್ಯೋಗ ಮಾಡುವುದು ಸರಿ, ಆದರೆ ನೀನೆ ಏಕೆ ನಿನ್ನ ಸ್ವಂತದ ಸ್ಟಾರ್ಟ್ ಅಪ್ ಆರಂಭಿಸಬಾರದು’ ? ಎಂದು ಕೇಳುತ್ತಿದ್ದಾರೆ. ಮತ್ತು ಈಗಾಗಲೇ ಸ್ಟಾರ್ಟ್ ಅಪ್ ನಲ್ಲಿರುವ ಯುವಜನತೆಯನ್ನು ನೋಡಿದಾಕ್ಷಣ ಮೊದಲ ಪ್ರತಿಕ್ರಿಯೆ ಎಂದರೆ ‘ಅದ್ಭುತ, ಇದು ನಿನ್ನದೇ ಸ್ಟಾರ್ಟ್ ಅಪ್’ ಎನ್ನುತ್ತಾರೆ. ಈ ಬದಲಾವಣೆಗಳು ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಅಂದರೆ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಒಕ್ಕೂಟಕ್ಕೆ ಹೆಚ್ಚಿನ ಶಕ್ತಿ ತಂದುಕೊಟ್ಟಿವೆ. ಇವೆಲ್ಲಾ ಬೆಳವಣಿಗೆಗಳು ಬಂಗಾಳಕೊಲ್ಲಿಯ ಅಭಿವೃದ್ಧಿಗೆ ಸ್ಫೂರ್ತಿಯಾಗಿವೆ.    ಅದೇ ರೀತಿಯ ಶಕ್ತಿಯನ್ನು ನಾವು ಭಾರತದ ಅಥವಾ ಬಿಮ್ ಸ್ಟೆಕ್ ರಾಷ್ಟ್ರಗಳ ನವೋದ್ಯಮದಲ್ಲಿ ನಾವು ಕಾಣುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಸೇರಿರುವ ಬಿಮ್ ಸ್ಟೆಕ್ ರಾಷ್ಟ್ರಗಳ ಗೌರವಾನ್ವಿತ ಸಚಿವರುಗಳಾದ ಬಾಂಗ್ಲಾದೇಶದ ಶ್ರೀ ಜುನೈದ್ ಅಹಮದ್ ಪಲಕ್ಜಿ, ಭೂತಾನ್ ನ ಶ್ರೀ ಲಿಯಾನ್ಪೋ ಲೋಕನಾಥ್ ಶರ್ಮಾಜಿ, ಮ್ಯಾನ್ಮಾರ್ ನ ಯು ಥೌಂಗ್ ತುನ್ ಜಿ, ನೇಪಾಳದ ಶ್ರೀ ಲೇಖರಾಜ್ ಭಟ್ಟಾಜಿ, ಶ್ರೀಲಂಕಾದ ಶ್ರೀ ನಮಲ್ ರಾಜಪಕ್ಷಾ ಜಿ ಮತ್ತು ಬಿಮ್ ಸ್ಟೆಕ್ ನ ಮಹಾಪ್ರಧಾನ ಕಾರ್ಯದರ್ಶಿ ಶ್ರೀ ಟೆನ್ಸಿನ್ ಲೇಖ್ ಪೇಲ್ ಜಿ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್ ಜಿ, ಶ್ರೀ ಪ್ರಕಾಶ್ ಜಾವಡೇಕರ್ ಜಿ, ಶ್ರೀ ಹರ್ ದೀಪ್ ಸಿಂಗ್ ಪುರಿ ಜಿ, ಶ್ರೀ ಸೋಮ್ ಪ್ರಕಾಶ್ ಜಿ, ಇಲ್ಲಿ ನೆರೆದಿರುವ ಉದ್ಯಮದ ಗಣ್ಯರಾದ ಎಫ್ಐಸಿಸಿಐ ಅಧ್ಯಕ್ಷರಾದ ಶ್ರೀ ಉದಯ್ ಶಂಕರ್ ಜಿ, ಶ್ರೀ ಉದಯ್ ಕೊಟಕ್ ಜಿ, ಶ್ರೀ ಸಂಜೀವ್ ಮೆಹ್ತಾ ಜಿ, ಡಾ. ಸಂಗೀತಾ ರೆಡ್ಡಿ ಜಿಶ್ರೀ ಶುಭ್ರಕಾಂತ್ ಪಾಂಡಜಿ, ಶ್ರೀ ಸಂದೀಪ್ ಸೋಮನಿಜಿ, ಶ್ರೀ ಹರ್ಷ ಮಾರಿವಾಲಾಜಿ, ಶ್ರೀ ಶಿಂಗಹನೈಜಿ, ಎಲ್ಲ ಗಣ್ಯರೇ ಮತ್ತು ನವೋದ್ಯಮ ಜಗತ್ತಿನ ನನ್ನ ಯುವ ಸಹೋದ್ಯೋಗಿಗಳೇ. 

ಇಂದು ನಮ್ಮೆಲ್ಲರಿಗೂ ಹಲವು ‘ಆರಂಭ’(ಪ್ರಾರಂಭ)ದ ದಿನ. ಇಂದು ಬಿಮ್ ಸ್ಟೆಕ್ ರಾಷ್ಟ್ರಗಳ ಮೊದಲ ಸ್ಟಾರ್ಟ್ ಅಪ್ ಸಮಾವೇಶ ನಡೆಯುತ್ತಿದೆ. ಇಂದು ಭಾರತದಲ್ಲಿ ನವೋದ್ಯಮ ಚಳವಳಿ ಆರಂಭವಾಗಿ ಯಶಸ್ವಿ ಐದು ವರ್ಷ ಪೂರೈಸಲಾಗಿದೆ ಮತ್ತು ಇಂದು ಭಾರತ ಕೊರೊನಾ ವಿರುದ್ಧ ಅತಿ ದೊಡ್ಡ ಮತ್ತು ಐತಿಹಾಸಿಕ ಲಸಿಕೆ ಆಂದೋಲನವನ್ನು ಪ್ರಾರಂಭಿಸಿದೆ. ಈ ದಿನವನ್ನು ನಾವು ನಮ್ಮ ವಿಜ್ಞಾನಿಗಳು, ಯುವಕರು ಮತ್ತು ಉದ್ಯಮಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ದಿನವಾಗಿದೆ ಮತ್ತು ನಮ್ಮ ವೈದ್ಯರು, ನರ್ಸ್ ಗಳು ಮತ್ತು ಆರೋಗ್ಯ ವಲಯಕ್ಕೆ ಸೇರಿದ ಎಲ್ಲ ಜನರ ಸೇವೆ ಮತ್ತು ಪರಿಶ್ರಮವನ್ನು ಗುರುತಿಸುವ ದಿನವಾಗಿದೆ. ಅನುಭವಗಳಿಂದ ಪಾಠ ಕಲಿತು ನಾವು, ಕೊರೊನಾ ವಿರುದ್ಧದ ಹೋರಾಟ ಮಾಡುತ್ತಾ, ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಬಿಮ್ ಸ್ಟೆಕ್ ರಾಷ್ಟ್ರಗಳ ಉದ್ಯಮಿಗಳು ಹಾಗೂ ಯುವ ಸಮೂಹ ಇಂದಿನ ಈ ಪ್ರಾರಂಭ ಸಮಾವೇಶದಲ್ಲಿ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಈ ಸಮಾವೇಶ ಅತ್ಯಂತ ಪ್ರಮುಖವಾಗಿದೆ. ಇನ್ನೆರಡು ದಿನಗಳ ಅವಧಿಯಲ್ಲಿ ಹಲವು ಪ್ರಮುಖ ಸಮಾಲೋಚನೆಗಳು ನಡೆಯಲಿವೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ನಿಮ್ಮ ಸ್ಟಾರ್ಟ್ ಅಪ್ ಯಶೋಗಾಥೆಗಳನ್ನು ಹಂಚಿಕೊಳ್ಳಿ ಮತ್ತು ಪರಸ್ಪರ ಸಹಕಾರದಿಂದ ಹೊಸ ಅವಕಾಶಗಳನ್ನು ಸೃಷ್ಟಿಸೋಣ. ಅಲ್ಲದೆ 12 ವಿಭಾಗಗಳಲ್ಲಿ ನವೋದ್ಯಮಗಳಿಗೆ ಪ್ರಶಸ್ತಿ ನೀಡುವುದನ್ನು ದೇಶ ಆರಂಭಿಸಿದ್ದು, ಆ ವಿಜೇತರನ್ನು ಇಂದು ಪ್ರಕಟಿಸಲಾಗುವುದು, ಹಾಗಾಗಿ ನಾನು ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತೇನೆ.  

ಮಿತ್ರರೇ,

ಈ ಶತಮಾನ ಡಿಜಿಟಲ್ ಕ್ರಾಂತಿಯ ಶತಮಾನ ಮತ್ತು ಅನ್ವೇಷಣೆಗಳ ನವಯುಗವಾಗಿದೆ ಮತ್ತು ಈ ಶತಮಾನ ಏಷ್ಯಾದ ಶತಮಾನ ಎಂದು ಕರೆಯಲಾಗುತ್ತಿದೆ. ಆದ್ದರಿಂದ ಭವಿಷ್ಯದ ತಂತ್ರಜ್ಞಾನ ಏಷ್ಯಾದ ಪ್ರಯೋಗಾಲಯಗಳಿಂದ ಹುಟ್ಟುವುದಕ್ಕೆ ಇದು ಸಕಾಲವಾಗಿದೆ ಮತ್ತು ಭವಿಷ್ಯದ ಉದ್ದಿಮೆದಾರರು ಇಲ್ಲಿಂದ ರೂಪುಗೊಳ್ಳುತ್ತಾರೆ. ಇದಕ್ಕಾಗಿ ಏಷ್ಯಾದ ರಾಷ್ಟ್ರಗಳು ಮುಂದೆ ಬರಬೇಕಾಗಿದೆ ಮತ್ತು ಯಾರು ಒಟ್ಟಿಗೆ ಕೆಲಸ ಮಾಡಬೇಕು ಎಂಬ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ ಹಾಗೂ ಪ್ರತಿಯೊಬ್ಬರೂ ಪರಸ್ಪರ ಒಗ್ಗೂಡಿ ಕೆಲಸ ಮಾಡುತ್ತಾ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಜೊತೆಗೆ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ಈ ಹೊಣೆಗಾರಿಕೆ ಸ್ವಾಭಾವಿಕವಾಗಿ ಬಿಮ್ ಸ್ಟೆಕ್ ರಾಷ್ಟ್ರಗಳ ಮೇಲಿದೆ. ಶತಮಾನಗಳಷ್ಟು ಹಳೆಯದಾದ ನಮ್ಮ ಸಂಬಂಧಗಳು, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಯನ್ನು ಹಂಚಿಕೊಂಡಿರುವ ನಾವು, ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ನಾವು ನಮ್ಮ ಚಿಂತನೆಗಳನ್ನು ಹಂಚಿಕೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಾವು ಪರಸ್ಪರರ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಬೇಕು. ಹಾಗಾಗಿ ನಮ್ಮ ಯಶಸ್ಸನ್ನೂ ಕೂಡ ಹಂಚಿಕೊಳ್ಳಬೇಕಾಗಿದೆ. ಇದೇ ವೇಳೆ ಜಗತ್ತಿನ ಒಂದನೇ ಐದರಷ್ಟು ಜನಸಂಖ್ಯೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವೆಲ್ಲಾ ಒಗ್ಗೂಡಿದರೆ ಜಿಡಿಪಿ 3.8 ಟ್ರಿಲಿಯನ್ ಡಾಲರ್ ಆಗಲಿದೆ. ನಾನು ನಮ್ಮ ಯುವಜನರ ಶಕ್ತಿಯಿಂದಾಗಿ ಇಡೀ ವಿಶ್ವದಲ್ಲಿ ಹೊಸ ಸಾಧ್ಯತೆಗಳನ್ನು ಕಾಣುತ್ತಿದ್ದೇನೆ. ಅವರು ತಮ್ಮದೇ ಭವಿಷ್ಯವನ್ನು ಬರೆಯಲು ಕಾತುರರಾಗಿದ್ದಾರೆ.

ಮಿತ್ರರೇ,

ಅದಕ್ಕಾಗಿಯೇ ನಾನು 2018ರಲ್ಲಿ ನಡೆದ ಬಿಮ್ ಸ್ಟೆಕ್ ಶೃಂಗಸಭೆ ಹೇಳಿದ್ದು, ತಂತ್ರಜ್ಞಾನ ಮತ್ತು ಆವಿಷ್ಕಾರದ ವಲಯದಲ್ಲಿ ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದು. ನಾನು ಬಿಮ್ ಸ್ಟೆಕ್ ಸ್ಟಾರ್ಟ್ ಅಪ್ ಸಮಾವೇಶದ ಬಗ್ಗೆ ಕೂಡ ಮಾತನಾಡಿದ್ದೆ. ನಾವೆಲ್ಲಾ ಈ ಸ್ಟಾರ್ಟ್ ಅಪ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶದಲ್ಲಿ ಒಗ್ಗೂಡಿದ್ದೇವೆ ಮತ್ತು ಆ ನಿರ್ಣಯವನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ಎಲ್ಲಾ ಬಿಮ್ ಸ್ಟೆಕ್ ರಾಷ್ಟ್ರಗಳು ಈಗಾಗಲೇ ನಿರಂತರವಾಗಿ ಪರಸ್ಪರ ಸಂಪರ್ಕ ಮತ್ತು ವ್ಯಾಪಾರ ಸಂಬಂಧಗಳ ಸುಧಾರಣೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. 2018ರಲ್ಲಿ ಬಿಮ್ ಸ್ಟೆಕ್ ಸಚಿವರು, ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ, ಡಿಜಿಟಲ್ ಸಂಪರ್ಕ ವೃದ್ಧಿಗೆ ಆಸಕ್ತಿ ತೋರಿದ್ದರು. ಅಂತೆಯೇ ನಾವೆಲ್ಲಾ ರಕ್ಷಣಾ, ವಿಪತ್ತು ನಿರ್ವಹಣೆ, ಬಾಹ್ಯಾಕಾಶ, ಪರಿಸರ, ಕೃಷಿ, ವ್ಯಾಪಾರ ಮತ್ತಿತರ ವಲಯಗಳಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವಲಯಗಳು ಬಲಿಷ್ಠವಾದರೆ ಮತ್ತು ಆಧುನೀಕರಣಗೊಂಡರೆ ಅದರಿಂದ ನಮ್ಮ ನವೋದ್ಯಮಗಳಿಗೂ ಅನುಕೂಲವಾಗುತ್ತವೆ. ಇದು ಮೌಲ್ಯಸೃಷ್ಟಿ ಚಕ್ರವಾಗಿದೆ. ಆದ್ದರಿಂದ ಮೂಲಸೌಕರ್ಯ, ಕೃಷಿ ಮತ್ತು ವ್ಯಾಪಾರ, ವಾಣಿಜ್ಯ ವಲಯಗಳಲ್ಲಿ ನಮ್ಮ ಸಂಬಂಧಗಳನ್ನು ಬಲವರ್ಧನೆಗೊಳಿಸಿಕೊಳ್ಳುವ ಜೊತೆಗೆ ನಮ್ಮ ನವೋದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕಿದೆ ಮತ್ತು ನಮ್ಮ ನವೋದ್ಯಮಗಳು ಬಲಿಷ್ಠವಾದಷ್ಟು ನಾವು ಎಲ್ಲ ವಲಯಗಳಲ್ಲಿ ತ್ವರಿತ ಪ್ರಗತಿಯನ್ನು ಕಾಣಬಹುದಾಗಿದೆ.  

ಮಿತ್ರರೇ,

ವೈಯಕ್ತಿಕ ಆಧಾರದಲ್ಲಿ ಹೇಳುವುದಾದರೆ ಬಹುತೇಕ ಎಲ್ಲ ನವೋದ್ಯಮಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ಬದಲಾವಣೆಯ ಈ ಬಹುದೊಡ್ಡ ಪಯಣದಲ್ಲಿ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಅನುಭವವಾಗಿರುತ್ತದೆ. ಭಾರತ ಕೂಡ ಇಂದು ‘ಭಾರತದಲ್ಲಿ ನವೋದ್ಯಮದ ಉದಯ’ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಐದು ವರ್ಷಗಳ ಅನುಭವವನ್ನು ಹಂಚಿಕೊಳ್ಳಲಾಗಿದೆ. ಪ್ರತಿಯೊಂದು ಬಿಮ್ ಸ್ಟೆಕ್ ರಾಷ್ಟ್ರವೂ ತಮ್ಮ ಅನುಭವಗಳನ್ನು ಕಾಲ ಕಾಲಕ್ಕೆ ಪರಸ್ಪರ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಅನುಭವಗಳಿಂದ ನಮಗೆ ಕಲಿಯಲು ಸಹಾಯಕವಾಗುತ್ತದೆ. ಉದಾಹರಣೆಗೆ ಭಾರತದ ಐದು ವರ್ಷಗಳ ನವೋದ್ಯಮ ಪಯಣವನ್ನು ನೋಡಿ. ಭಾರತದಲ್ಲಿ ನವೋದ್ಯಮ ಮಿಷನ್ ಆರಂಭವಾದಾಗ ನಾವೂ ಕೂಡ ಹಲವು ಸವಾಲುಗಳನ್ನು ಎದುರಿಸಿದೆವು. ಆದರೆ ಇಂದು ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಯನ್ನು ಹೊಂದಿದೆ. ಇಂದು ಸುಮಾರು 41,000ಕ್ಕೂ ಅಧಿಕ ನವೋದ್ಯಮಗಳು ಒಂದಲ್ಲಾ ಒಂದು ಯೋಜನೆಯಲ್ಲಿ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 5,700ಕ್ಕೂ ಅಧಿಕ ನವೋದ್ಯಮಗಳು ಮಾಹಿತಿ ತಂತ್ರಜ್ಞಾನ ವಲಯದಲ್ಲಿವೆ. ಆರೋಗ್ಯ ವಲಯದಲ್ಲಿ 3,600ಕ್ಕೂ ಅಧಿಕ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದರೆ, ಕೃಷಿ ವಲಯದಲ್ಲಿ 1,700ಕ್ಕೂ ಅಧಿಕ ನವೋದ್ಯಮಗಳು ಆರಂಭವಾಗಿವೆ.

ಮಿತ್ರರೇ,

ಈ ನವೋದ್ಯಮಗಳು ಇಂದು ವಾಣಿಜ್ಯ ವಹಿವಾಟಿನ ಜನಸಂಖ್ಯಾ ಗುಣಲಕ್ಷಣಗಳನ್ನು ಬದಲಾಯಿಸುತ್ತಿವೆ. ಇಂದು ಭಾರತದಲ್ಲಿನ ಮಾನ್ಯತೆ ಪಡೆದ ನವೋದ್ಯಮಗಳಲ್ಲಿ ಶೇ.44ಕ್ಕೂ ಅಧಿಕ ನವೋದ್ಯಮಗಳಲ್ಲಿ ಮಹಿಳಾ ನಿರ್ದೇಶಕಿಯರು ಇದ್ದಾರೆ. ಅವುಗಳಲ್ಲಿ ಬಹುಸಂಖ್ಯೆಯ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಸಾಮಾನ್ಯ ಆರ್ಥಿಕ ಹಿನ್ನೆಲೆಯಿಂದ ಬಂದ ಯುವಕರೂ ಸಹ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅವುಗಳ ಫಲಿತಾಂಶವೂ ಕೂಡ ಇಂದು ನಮ್ಮ ಮುಂದಿದೆ. 2014ರಲ್ಲಿ ಭಾರತದಲ್ಲಿ ಕೇವಲ ನಾಲ್ಕು ನವೋದ್ಯಮಗಳು ಯೂನಿಕಾರ್ನ್ ಕ್ಲಬ್ ನಲ್ಲಿದ್ದವು. ಆದರೆ ಇಂದು 30ಕ್ಕೂ ಅಧಿಕ ನವೋದ್ಯಮಗಳು ಒಂದು ಬಿಲಿಯನ್ ಗೂ ಅಧಿಕ ವಹಿವಾಟು ನಡೆಸುತ್ತಿವೆ. ನಿಮಗೆ ಆಶ್ಚರ್ಯವಾಗಬಹುದು. ನಮ್ಮ 11 ಸ್ಟಾರ್ಟ್ ಅಪ್ ಗಳು 2020ರಲ್ಲೇ ಯೂನಿಕಾರ್ನ್ ಕ್ಲಬ್ ಗೆ ಸೇರ್ಪಡೆಯಾಗಿವೆ. ಅದೂ ಸಹ ಈ ಕೊರೊನಾ ವರ್ಷದ ಸಂಕಷ್ಟ ಸಮಯದಲ್ಲಿ. 

ಮಿತ್ರರೇ,

ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲೇ ಭಾರತ ಆತ್ಮನಿರ್ಭರ ಭಾರತ ಅಭಿಯಾನವನ್ನು ಆರಂಭಿಸಿದೆ. ಇಂದು ಅದರಲ್ಲಿ ನಮ್ಮ ನವೋದ್ಯಮಗಳೂ ಕೂಡ ಅತಿ ದೊಡ್ಡ ಪಾತ್ರವನ್ನು ವಹಿಸುತ್ತಿವೆ. ವಿಶ್ವದ ಅತಿ ದೊಡ್ಡ ಕಂಪನಿಗಳ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದರೆ. ನಮ್ಮ ನವೋದ್ಯಮಗಳ ಹೊಸ ಸೇನೆ ಸಾಂಕ್ರಾಮಿಕದ ಸಮಯದಲ್ಲಿ ಭಾರತದಲ್ಲಿ ಸಜ್ಜಾಗುತ್ತಿವೆ. ದೇಶಕ್ಕೆ ಸ್ಯಾನಿಟೈಸರ್, ಪಿಪಿಇ ಕಿಟ್ ಪೂರೈಕೆ ಸರಣಿ ಅತ್ಯಗತ್ಯವಾಗಿತ್ತು ಮತ್ತು ನಮ್ಮ ನವೋದ್ಯಮಗಳು ಅವುಗಳಲ್ಲಿ ಅತಿ ದೊಡ್ಡ ಪಾತ್ರವಹಿಸಿದವು. ಸ್ಥಳೀಯ ಸ್ಟಾರ್ಟ್ ಅಪ್ ಗಳು ಸ್ಥಳೀಯ ಅಗತ್ಯತೆಗಳಿಗೆ ಸ್ಪಂದಿಸಿದವು. ಒಂದು ಸ್ಟಾರ್ಟ್ ಅಪ್ ಗ್ರಾಹಕರಿಗೆ ಅಡುಗೆ ಕೋಣೆಯ ಅಗತ್ಯತೆಗಳನ್ನು ಒದಗಿಸಿದರೆ ಮತ್ತೊಂದು ಔಷಧಗಳನ್ನು ಮನೆಯ ಬಾಗಿಲಿಗೇ ಪೂರೈಸಲು ಕ್ರಮ ಕೈಗೊಂಡಿತು. ಒಂದು ನವೋದ್ಯಮ ಮುಂಚೂಣಿ ಸಿಬ್ಬಂದಿಗೆ ಸಾರಿಗೆ ಸಂಪನ್ಮೂಲವನ್ನು ಒದಗಿಸಿದರೆ, ಮತ್ತೊಂದು ಆನ್ ಲೈನ್ ಅಧ್ಯಯನ ಸಾಮಗ್ರಿಯನ್ನು ಒದಗಿಸಿತು. ಈ ನವೋದ್ಯಮಗಳೂ ಕೂಡ ಪ್ರತಿಕೂಲ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡವು ಮತ್ತು ಸಂಕಷ್ಟದ ಸಮಯದಲ್ಲಿ ತಮ್ಮ ವಿಶ್ವಾಸವನ್ನು ಬಲವರ್ಧನೆಗೊಳಿಸಿಕೊಂಡವು. 

ಮಿತ್ರರೇ,

ಇಂದು ಈ ನವೋದ್ಯಮಗಳ ಯಶೋಗಾಥೆ ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ನೀವು ನೋಡಬಹುದು ಇಂದು 8 ನವೋದ್ಯಮಗಳಿಗೆ ಪ್ರಶಸ್ತಿ ಲಭಿಸಿದೆ. ಅವ್ಯಾವು ಮೆಟ್ರೋ ನಗರಗಳಿಗೆ ಸೇರಿಲ್ಲ. ಸಣ್ಣ ಪಟ್ಟಣಗಳಿಗೆ ಸೇರಿದವು. ಕೆಲವರು ಲಖನೌ, ಭೂಪಾಲ್, ಸೋನಿಪತ್, ಕೋಚಿ ಮತ್ತು ತಿರುವನಂತಪುರಂಗೆ ಸೇರಿದವು. ಏಕೆಂದರೆ ಇಂದು ಭಾರತದ ಪ್ರತಿಯೊಂದು ರಾಜ್ಯವೂ ಭಾರತದ ನವೋದ್ಯಮ ಮಿಷನ್ ನಲ್ಲಿ ಪಾಲುದಾರರಾಗಿವೆ. ಪ್ರತಿಯೊಂದು ರಾಜ್ಯವೂ ತಮ್ಮ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ನವೋದ್ಯಮಗಳನ್ನು ಬೆಂಬಲಿಸುತ್ತಿವೆ ಮತ್ತು ಪೋಷಣೆ ಮಾಡುತ್ತಿವೆ. ಅದರ ಪರಿಣಾಮ ಭಾರತದ ಶೇ.80ರಷ್ಟು ಜಿಲ್ಲೆಗಳು ನವೋದ್ಯಮ ಅಭಿಯಾನಕ್ಕೆ ಸೇರ್ಪಡೆಯಾಗಿವೆ. ಶೇ.45ರಷ್ಟು ನಮ್ಮ ನವೋದ್ಯಮಗಳು ಇಂದು ಎರಡು ಹಾಗೂ ಮೂರನೇ ದರ್ಜೆ ನಗರಗಳಿಂದ ಬಂದಿವೆ. ಅವು ಸ್ಥಳೀಯ ಉತ್ಪನ್ನಗಳಿಗೆ ಬ್ರ್ಯಾಂಡ್ ರಾಯಭಾರಿಗಳಾಗಿವೆ.

ಮಿತ್ರರೇ,

ಜನರಲ್ಲಿ ಆರೋಗ್ಯ ಮತ್ತು ಆಹಾರ ಅಭ್ಯಾಸದ ಬಗ್ಗೆ ಇಂದು ಜಾಗೃತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಆರೋಗ್ಯಕರ ಬದಲಾವಣೆಗಳಾಗುತ್ತಿದ್ದು, ಜೊತೆಗೆ ನವೋದ್ಯಮಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಒಂದು ರೀತಿಯಲ್ಲಿ ಇದು ಸದಾ ಹಸಿರಿನ ವಲಯವಾಗಿದೆ. ಅದೆಂದರೆ ಆಹಾರ ಮತ್ತು ಕೃಷಿ ವಲಯವಾಗಿದೆ. ಭಾರತದಲ್ಲಿ ಈ ವಲಯಗಳ ಪ್ರಗತಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಭಾರತದಲ್ಲಿ ಕೃಷಿ ಸಂಬಂಧಿ ಮೂಲಸೌಕರ್ಯ ಆಧುನೀಕರಣಕ್ಕೆ ಒಂದು ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಇದು ನಮ್ಮ ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆದಿದೆ. ಇಂದು ನವೋದ್ಯಮಗಳು ರೈತರೊಂದಿಗೆ ಸಹಭಾಗಿತ್ವ ಸಾಧಿಸುತ್ತಿವೆ. ತೋಟಗಳಿಂದ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವಲ್ಲಿ ನವೋದ್ಯಮಗಳು ಕೂಡ ತಮ್ಮ ಕಾರ್ಯನಿರ್ವಹಿಸುತ್ತಿವೆ.

ಮಿತ್ರರೇ,

ನಮ್ಮ ಸ್ಮಾರ್ಟ್ ಅಪ್ ಜಗತ್ತಿನ ಯುಎಸ್ ಪಿ ಎಂದರೆ, ಅದರ ಅಗಾಧತೆ ಮತ್ತು ವೈವಿಧ್ಯೀಕರಣ ಸಾಮರ್ಥ್ಯ. ಅದು ಒಡಕು ಉಂಟು ಮಾಡುವ ಸಾಮರ್ಥ್ಯದಿಂದಾಗಿ ಹೊಸ ವಿಧಾನಗಳಿಗೆ, ಹೊಸ ತಂತ್ರಜ್ಞಾನಕ್ಕೆ ಮತ್ತು ಹೊಸ ಮಾದರಿಗಳನ್ನು ಇಂದು ಹುಟ್ಟುಹಾಕುತ್ತದೆ. ನಮ್ಮ ನವೋದ್ಯಮಗಳು ಅದೇ ಹಳೆಯ ಹಳಿಯ ಮೇಲೆ ನಡೆಯದೆ ಬದಲಾವಣೆ ಮಾಡಿಕೊಳ್ಳುತ್ತಿವೆ. ಎರಡನೇಯದಾಗಿ ವೈವಿಧ್ಯೀಕರಣ, ನೀವು ನೋಡಿರಬಹುದು, ಇಂದು ಆರಂಭವಾಗುತ್ತಿರುವ ಬಹುತೇಕ ನವೋದ್ಯಮಗಳು, ಭಿನ್ನ ಭಿನ್ನ ಆಲೋಚನೆಯವು. ಈ ನವೋದ್ಯಮಗಳು ಪ್ರತಿಯೊಂದು ವಲಯದಲ್ಲೂ ಕ್ರಾಂತಿಯನ್ನುಂಟು ಮಾಡುತ್ತಿವೆ.  ಇಂದು ನಮ್ಮ ನವೋದ್ಯಮಗಳ ಪ್ರಮಾಣ ಮತ್ತು ವ್ಯಾಪ್ತಿ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಅದೆಲ್ಲಕ್ಕೂ ಮುಖ್ಯವಾಗಿ ವಾಸ್ತವವಾಗಿ ಹಲವು     ಬದಲಾವಣೆಗಳಾಗಿ ಪ್ಯಾಷನ್ ಈ ನವೋದ್ಯಮಗಳನ್ನು ಮುನ್ನಡೆಸುವ ಮಾರ್ಗದರ್ಶಿಯಾಗಿದೆ. ಯಾವುದೇ ವಲಯದಲ್ಲಿ ಯಾವುದೇ ಹೊಸ ಸವಾಲುಗಳು ಎದುರಾದರೂ ಸಹ ಯಾರಾದರೊಬ್ಬರೂ ನವೋದ್ಯಮದ ಮೂಲಕ ಮುಂದೆ ಬರುತ್ತಾರೆ ಮತ್ತು ಸವಾಲು ಕೈಗೆತ್ತಿಕೊಳ್ಳುತ್ತಾರೆ.  ಭಾರತ ಕೂಡ ಇಂದು ಅದೇ ಬಗೆಯ ನವೋದ್ಯಮ ಸ್ಪೂರ್ತಿಯೊಂದಿಗೆ ಮುನ್ನಡೆಯುತ್ತಿದೆ.  ಮೊದಲು ಯಾವುದೇ ಹೊಸ ಪರಿಸ್ಥಿತಿ ಎದುರಾದರೆ ಅಥವಾ ಹೊಸತನ್ನು ಏನಾದರೂ ಮಾಡಬೇಕಾದರೆ, ‘ಯಾರು ಇದನ್ನು ಮಾಡುತ್ತೀರಿ’? ಎಂದು ಕೇಳಬೇಕಿತ್ತು. ಆದರೆ ಇಂದು ದೇಶವೇ ಹೇಳುತ್ತಿದೆ “ನಾವು ಮಾಡುತ್ತೇವೆ ಎಂದು’. ಅದು ಡಿಜಿಟಲ್ ಪಾವತಿಯಲ್ಲಾಗಿರಬಹುದು, ಸೌರ ವಲಯದ ನಿರ್ಮಾಣವಾಗಿರಬಹುದು, ಅಥವಾ ಕೃತಕ ಬುದ್ದಿಮತ್ತೆ ಕ್ರಾಂತಿ ಆಗಿರಬಹುದು, ದೇಶದ ‘ಯಾರು ಮಾಡುತ್ತೀರಿ? ಎಂದು ಕೇಳುವಂತಿಲ್ಲ.  ದೇಶವೇ ನಿರ್ಧರಿಸುತ್ತದೆ, ನಾವು ಮಾಡುತ್ತೇವೆ ಎಂದು. ಮತ್ತು ಅವುಗಳ ಫಲಿತಾಂಶ ಇಂದು ನಮ್ಮೆಲ್ಲರ ಮುಂದೆ ಇದೆ.  ಇಂದು ಭೀಮ್ ಯುಪಿಐ ಇಡೀ ಪಾವತಿ ವ್ಯವಸ್ಥೆಯನ್ನು ಕ್ರಾಂತಿಯನ್ನುಂಟು ಮಾಡಿದೆ.  ಡಿಸೆಂಬರ್ ತಿಂಗಳೊಂದರಲ್ಲೇ ಯುಪಿಐ ಮೂಲಕ ಭಾರತದಲ್ಲಿ 4 ಲಕ್ಷ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಲಾಗಿದೆ. ಭಾರತ ಇದೀಗ ಸೌರ ವಲಯದಲ್ಲಿ ಇಡೀ ವಿಶ್ವವನ್ನು ಮುನ್ನಡೆಸುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಭಾರತದಲ್ಲಿ ಕೃತಕ ಬುದ್ಧಿಶಕ್ತಿಯ ಬಳಕೆ ವಿಶ್ವದ ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ.

ಮಿತ್ರರೇ,

ನವೋದ್ಯಮಗಳು ಎಲ್ಲ ವಲಯಗಳಲ್ಲಿ ಅಡೆತಡೆಗಳನ್ನು ಮೀರಿ ಪರಿಹಾರಗಳನ್ನು ನೀಡುತ್ತಿರುವಂತೆಯೇ ಭಾರತವೂ ಸಹ ಇಂದು ಪ್ರತಿಯೊಂದು ವಲಯದಲ್ಲೂ ಸಹ ಹಳೆಯ ಅಡೆತಡೆಗಳನ್ನು ಮೀರುತ್ತಿದೆ. ಇಂದು ದೇಶದ ಬಡವರು ಮತ್ತು ರೈತರು ಹಾಗೂ ವಿದ್ಯಾರ್ಥಿಗಳು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆರ್ಥಿಕ ನೆರವು ಪಡೆದುಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಜನರ ಸಂಕಷ್ಟಗಳನ್ನೂ ಸಹ ದೂರ ಮಾಡಿದೆ ಮತ್ತು  ದೇಶದಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಹಣ ಸೋರಿಕೆಯನ್ನು ಇದು ತಪ್ಪಿಸಿದೆ.  ಅಂತೆಯೇ ಇಂದು ಡಿಜಿಟಲ್ ಇಂಡಿಯಾ ಯೋಜನೆಯಡಿ ಹೆಚ್ಚಿನ ಸರ್ಕಾರಿ ಮತ್ತು ಬ್ಯಾಂಕ್ ಸಂಬಂಧಿ ಸೇವೆಗಳು ಮೊಬೈಲ್ ಫೋನ್ ನಲ್ಲಿಯೇ ಲಭ್ಯವಾಗುತ್ತಿವೆ.  ದೇಶದಲ್ಲಿ ಈ ಬದಲಾವಣೆಗಳ ಅನುಭವ ನಮ್ಮ ನವೋದ್ಯಮಗಳಿಗೂ ಅಗುತ್ತಿವೆ.

ಇಂದು ನವೋದ್ಯಮಗಳು ಜಿಇಎಂ ಪೋರ್ಟಲ್ ಮೂಲಕ ಸರ್ಕಾರಿ ಟೆಂಡರ್ ಗಳಲ್ಲಿ ದೊಡ್ಡ ಕಂಪನಿಗಳಿಗೆ ಸಿಗುವಷ್ಟೇ ಅವಕಾಶವನ್ನು ಪಡೆದುಕೊಳ್ಳುತ್ತಿವೆ. ಈವರೆಗೆ ಜಿಇಎಂ ಪೋರ್ಟಲ್ ನಲ್ಲಿ 8 ಸಾವಿರಕ್ಕೂ ಅಧಿಕ ನವೋದ್ಯಮಗಳು ನೋಂದಣಿ ಮಾಡಿಕೊಂಡಿವೆ ಮತ್ತು ಅವು ಸುಮಾರು 2300 ಕೋಟಿ ರೂ. ವಹಿವಾಟು ನಡೆಸಿವೆ. ಇಂದು ಜಿಇಎಮ್ ಪೋರ್ಟಲ್ ನಲ್ಲಿ ಒಟ್ಟಾರೆ ವಹಿವಾಟು ಸುಮಾರು 80ಸಾವಿರ ಕೋಟಿ ರೂ. ದಾಟುತ್ತಿದೆ. ಮುಂದಿನ ದಿನಗಳಲ್ಲಿ ನವೋದ್ಯಮಗಳ ಪಾಲು ಮತ್ತಷ್ಟು ಹೆಚ್ಚಾಗಲಿದೆ. ಈ ಹಣ ನಮ್ಮ ನವೋದ್ಯಮಗಳನ್ನು ತಲುಪಿದರೆ, ಸ್ಥಳೀಯ ಉತ್ಪಾದನೆಗಳೂ ಸಹ ಹೆಚ್ಚಾಗಲಿವೆ, ಬಹು ಸಂಖ್ಯೆಯ ಯುವಜನಾಂಗಕ್ಕೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ನವೋದ್ಯಮಗಳು ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಲಿವೆ.

ಮಿತ್ರರೇ,

ನಮ್ಮ ನವೋದ್ಯಮಗಳಿಗೆ ಹಣಕಾಸಿನ ಕೊರತೆ ಆಗದಂತೆ ದೇಶ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ, ಇಂದಿನ ಕಾರ್ಯಕ್ರಮದಲ್ಲಿ ನಾನು ಮತ್ತೊಂದು ಪ್ರಮುಖ ಘೋಷಣೆಯನ್ನು ಮಾಡುತ್ತಿದ್ದೇನೆ, ನವೋದ್ಯಮಗಳಿಗೆ ಆರಂಭಿಕ ಹಣಕಾಸು ನೆರವು ಒದಗಿಸಲು ದೇಶ ಇಂದು 1ಸಾವಿರ ಕೋಟಿ ರೂ. ಗಳ ಸ್ಟಾರ್ಟ್ ಅಪ್ ಭಾರತ ಮೂಲ ನಿಧಿಯನ್ನು ಆರಂಭಿಸುತ್ತಿದೆ. ಈಗಾಗಲೇ ಆರಂಭವಾಗಿರುವ ನವೋದ್ಯಮಗಳಿಗೆ ಗುಣಮಟ್ಟ ಹೆಚ್ಚಿಸಲು ನಿಧಿಯ ನಿಧಿ ಯೋಜನೆಯ ಮೂಲಕ ಬೆಂಬಲ ನೀಡಲಾಗುವುದು. ಅಲ್ಲದೆ, ಸರ್ಕಾರ, ಖಾತ್ರಿ ಒದಗಿಸುವ ಮೂಲಕ ನವೋದ್ಯಮಗಳಿಗೆ ಸಾಲದ ಬಂಡವಾಳ ಎತ್ತುವಳಿಗೆ ಸಹಾಯ ಮಾಡಲಿದೆ.

ಮಿತ್ರರೇ,

ಯುವಜನರಿಂದ, ಯುವಜನರಿಗಾಗಿ ಮತ್ತು ಯುವಜನರಿಗೋಸ್ಕರ’ ಎಂಬ ಆಧಾರದಲ್ಲಿ ಭಾರತ ನವೋದ್ಯಮ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ನವೋದ್ಯಮ ಭಾರತ ಅಭಿಯಾನದ ಮೂಲಕ ನಮ್ಮ ಯುವಜನತೆ ಈ ಐದು ವರ್ಷಗಳಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ನಾವು ಇದೀಗ ಮುಂದಿನ ಐದು ವರ್ಷಗಳಿಗೆ ಗುರಿಗಳನ್ನು ನಿಗದಿಪಡಿಸಬೇಕು. ಅದರ ಗುರಿ ನಮ್ಮ ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳು ಜಾಗತಿಕ ದಿಗ್ಗಜ ಕಂಪನಿಗಳಾಗಿ ಬೆಳೆಯಬೇಕು ಮತ್ತು ಅವು ಭವಿಷ್ಯದ ತಂತ್ರಜ್ಞಾನಗಳನ್ನು ಮುನ್ನೆಡಸಬೇಕು ಎಂಬುದಾಗಿದೆ. ಈ ನಿರ್ಣಯಗಳು ಬಿಮ್ ಸ್ಟೆಕ್ ರಾಷ್ಟ್ರಗಳ ಸಾಮೂಹಿಕ ನಿರ್ಣಯಗಳಾದರೆ, ಬಹುದೊಡ್ಡ ಜನಸಂಖ್ಯೆಗೆ ಪ್ರಯೋಜನವಾಗಲಿದೆ ಮತ್ತು ಎಲ್ಲ ದೇಶಗಳ ಜನರ ಜೀವನ ಉತ್ತಮಗೊಳ್ಳಲಿದೆ.

ಬಿಮ್ ಸ್ಟೆಕ್ ಪಾಲುದಾರ ರಾಷ್ಟ್ರಗಳ ನವೋದ್ಯಮಗಳ ಯಶೋಗಾಥೆಯನ್ನು ನೋಡುತ್ತಿದ್ದರೆ ಮತ್ತು ಕೇಳುತ್ತಿದ್ದರೆ, ನನ್ನ ಸಂತೋಷ ಮತ್ತಷ್ಟು ಹೆಚ್ಚಾಗಲಿದೆ. ಬಿಮ್ ಸ್ಟೆಕ್ ದೇಶಗಳ ನವೋದ್ಯಮಗಳಿಗೆ ನನ್ನ ಶುಭಾಶಯಗಳು. ನನಗೆ ವಿಶ್ವಾಸವಿದೆ ನಾವೆಲ್ಲೂ ಒಗ್ಗೂಡಿ ಪ್ರಾದೇಶಿಕವಾಗಿ ನವೋದ್ಯಮಗಳಿಗೆ ಹೊಸ ಹೆಗ್ಗುರುತನ್ನು ಮೂಡಿಸಲಿದ್ದೇವೆ ಮತ್ತು ಈ ಹೊಸ ದಶಕದಲ್ಲಿ ಬಿಮ್ ಸ್ಟೆಕ್ ರಾಷ್ಟ್ರಗಳ ನವೋದ್ಯಮ ಶಕ್ತಿಯನ್ನು ಇಡೀ ವಿಶ್ವಕ್ಕೆ ಅರ್ಥ ಮಾಡಿಸಲಿದ್ದೇವೆ. ಈ ಶುಭಾಶಯಗಳೊಂದಿಗೆ, ಎಲ್ಲರಿಗೂ ಧನ್ಯವಾದಗಳು ಮತ್ತು ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ.  ಅವರುಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***



(Release ID: 1689635) Visitor Counter : 166