ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಬಿದಿರು ಸಂಪನ್ಮೂಲದ ಬಳಕೆ ಹಾಗೂ ಸಾಗಾಣೆ ವೆಚ್ಚ ಇಳಿಕೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕರೆ

Posted On: 05 NOV 2020 4:36PM by PIB Bengaluru

ದೇಶದಲ್ಲಿ ಬಿದಿರು ಸಂಪನ್ಮೂಲವನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳಲು ಒತ್ತು ನೀಡುವಂತೆ ಎಂದು ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ(ಎಂಎಸ್ ಎಂಇ) , ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು  ವೆಬಿನಾರ್ ಮೂಲಕ ವರ್ಚ್ಯುವಲ್ ಬಿದಿರು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಟ್ಟಡ ನಿರ್ಮಾಣ, ಒಳಾಂಗಣ, ಕರಕುಶಲ ಕಲೆ, ಅಗರಬತ್ತಿ ಉತ್ಪಾದನೆ, ಜವಳಿ ಮತ್ತು ಜೈವಿಕ ಇಂಧನ ಸಂಪನ್ಮೂಲ ಸೇರಿದಂತೆ ನಾನಾ ವಲಯಗಳಲ್ಲಿ ಬಿದಿರನ್ನು ಹಲವು ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದರು.

ನಾನಾ ವಿಧದ ಸಾರಿಗೆ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಬಿದಿರು ಸಾಗಾಣೆ ವೆಚ್ಚವನ್ನು ತಗ್ಗಿಸಬೇಕು ಹಾಗೂ  ಜಲ, ರೈಲು ಅಥವಾ ರಸ್ತೆ ಸಾರಿಗೆಗಳನ್ನು ಬಳಸಿಕೊಂಡು ಸಾಗಾಣೆ ವೆಚ್ಚ ತಗ್ಗಿಸಬೇಕು ಎಂದರು. ಬ್ರಹ್ಮಪುತ್ರ ನದಿಯಲ್ಲಿ 3 ಮೀಟರ್ ಹೊಳೆತ್ತುವ ಮೂಲಕ ಸರಕುಗಳ ಸಾಗಾಣೆಗೆ ಜಲಮಾರ್ಗವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದವರು ಹೇಳಿದರು. ನದಿಗಳ ಮೂಲಕ ಬಿದಿರು ಮತ್ತು ಈಶಾನ್ಯ ಭಾಗದಿಂದ ಉತ್ಪತ್ತಿಯಾಗುವ ಇತರೆ ಸರಕುಗಳ ಸಾಗಾಣೆ ಅತ್ಯಂತ ಸುಲಭದ್ದಾಗಿದ್ದು, ಅದರಿಂದ ಬಿದಿರು ಸಾಗಾಣೆ ವೆಚ್ಚವನ್ನು ತಗ್ಗಿಸಬಹುದಾಗಿದೆ ಎಂದರು.

ಬಹುತೇಕ ಬಿದಿರನ್ನು ಈಶಾನ್ಯ ಭಾಗದಲ್ಲಿ ಬೆಳೆಯುವುದರಿಂದ ಸಮಗ್ರ ಬಿದಿರು ನೀತಿಯನ್ನು ರೂಪಿಸಬೇಕು ಎಂದು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ(ಡೋನರ್ )ಗೆ ಸಚಿವ ಗಡ್ಕರಿ ಸೂಚನೆ ನೀಡಿದರು. ಅಲ್ಲದೆ, ಅವರು, ಬಿದಿರು ಕಟಾವಿಗೆ ಅನುಮತಿ ಅಗತ್ಯವೆಂಬ  ವಿಚಾರದ ಬಗ್ಗೆ ಪ್ರಧಾನಮಂತ್ರಿ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದನ್ನು ಅವರು ಅರಣ್ಯಾಧಿಕಾರಿಗಳಿಗೆ ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ್ದರಿಂದ ಅದೇ ನಿಯಮವನ್ನು ಅನ್ವಯಿಸುವಂತೆ ನಿರ್ದೇಶನ ನೀಡಿದ್ದನ್ನು ನೆನಪು ಮಾಡಿಕೊಂಡರು.

ಅಧಿಕ ಇಳುವರಿ ನೀಡುವ ಬಿದಿರು ತಳಿಗಳನ್ನು ಬೆಳೆಸುವಂತೆ ಕರೆ ನೀಡಿದ ಅವರು, ಕೈಗಾರಿಕಾ ಬಳಕೆಗಾಗಿ ಪ್ರತಿ ಎಕರೆಯಲ್ಲಿ ಸುಮಾರು 200 ಟನ್ ಇಳುವರಿಯ ಬಿದಿರು ಬೆಳೆಯಬಹುದು, ಕೆಲವು ತಳಿಯ ಬಿದಿರು ಎಕರೆಗೆ ಕೇವಲ 40 ಟನ್ ಮಾತ್ರ ಇಳುವರಿ ಬರುತ್ತದೆ. ಅಧಿಕ ಬೆಳೆ ಮತ್ತು ವ್ಯಾಪಕ ಬಿದಿರು ಬಳಕೆಯಿಂದ ವಿಶೇಷವಾಗಿ ಈಶಾನ್ಯ ಭಾಗದಲ್ಲಿ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

ಬಿದಿರು ಕಡ್ಡಿಗಳನ್ನು ಬಿದಿರು ತುಂಡುಗಳನ್ನಾಗಿ ಪರಿವರ್ತಿಸುವುದರಿಂದ, ತೇವಾಂಶ ದೂರವಾಗುತ್ತದೆ,  ಮತ್ತು ಅದಕ್ಕೆ      ಕ್ಯಾಲೋರಿಫಿಕ್  ಮೌಲ್ಯ ಬರುವುದರಿಂದ ಅದು ಸಾಗಾಣೆ ಮಾಡುವುದು ಸಹ ಸುಲಭ ಮತ್ತು ವೆಚ್ಚವೂ ತಗ್ಗಲಿದೆ. ಈ ನಿಟ್ಟಿನಲ್ಲಿ ಐಐಟಿಗಳಿಂದ ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಅಲ್ಲದೆ, ಬಿದಿರು ಬೆಳೆಗೆ, ಸಂಸ್ಕರಣೆ ಮತ್ತು ನಿರ್ವಹಣೆಗೆ ಹೆಚ್ಚಿನ ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿ, ಇದರಿಂದ ದೀರ್ಘಾವಧಿಯಲ್ಲಿ ಬಿದಿರು ಆಧಾರಿತ ಉದ್ಯಮವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.

ಈಶಾನ್ಯ ರಾಜ್ಯಗಳ ಅಭಿವೃದ್ಧಿ (ಡೋನರ್) ಖಾತೆ (ಸ್ವಂತ್ರ ಹೊಣೆಗಾರಿಕೆ ) ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು, ಕೋವಿಡ್ ನಂತರದ ಆರ್ಥಿಕ ಪುನಃಶ್ಚೇತನದಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರವಹಿಸಬೇಕಾಗಿದೆ ಮತ್ತು ಈಶಾನ್ಯ ಭಾಗದ ಪ್ರದೇಶಲ್ಲಿನ ಭಾರಿ ಪ್ರಮಾಣದಲ್ಲಿರುವ ಬಿದಿರು ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ ಎಂದರು. ಬಿದಿರಿನ ಬಳಕೆ ಮತ್ತು ಅದರ ಬೆಳೆಯನ್ನು ಉತ್ತೇಜಿಸಲು ಭಾರತದಾದ್ಯಂತ ಏಕರೂಪದ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಹೇಳಿದರು. ಬಿದಿರು ನವ ಎಂಜಿನ್ ನ ನವ ಇಂಧನವಾಗಲಿದೆ, ಅದು ಭಾರತ ಪ್ರಗತಿ ಗಾಥೆಗೆ ಈಶಾನ್ಯ ಭಾಗದ ಕೊಡುಗೆಯಾಗಲಿದೆ ಎಂದರು.

ಬಿದಿರು ಸಂಪನ್ಮೂಲವನ್ನು ಸಮಗ್ರವಾಗಿ ಬಳಸಿಕೊಳ್ಳಲು ಮತ್ತು ಅಖಿಲ ಭಾರತ ಮಟ್ಟದಲ್ಲಿ ಅದರ ತಾಂತ್ರಿಕತೆಯನ್ನು ಅರಿತುಕೊಳ್ಳಲು ಡೋನರ್ ಸಚಿವಾಲಯ ಮತ್ತು ಈಶಾನ್ಯ ಮಂಡಳಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ಬಿದಿರು ಬುಟ್ಟಿಗಳನ್ನು, ಅಗರಬತ್ತಿಗಳನ್ನು ಮತ್ತು ಬಿದಿರಿನಿಂದ ಇದ್ದಿಲನ್ನು ಮಾಡಲು ಜಮ್ಮು, ಕತ್ರಾ ಮತ್ತು ಸಾಂಬಾ ವಲಯಗಳಲ್ಲಿ ಬಿದಿರು ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಬಿದಿರು ತಂತ್ರಜ್ಞಾನ ಕೇಂದ್ರವನ್ನೂ ಸಹ ತೆರೆಯಲಾಗುವುದು ಎಂದು ಹೇಳಿದರು. ಬಿದಿರನ್ನು ಸಂಪನ್ಮೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಚಿವಾಲಯ ಈಗಾಗಲೇ ದೇಶದ ನಾನಾ ಕಡೆ ಬಿದಿರು ಯಥೇಚ್ಛವಾಗಿ ಪ್ರದೇಶಗಳನ್ನು ಗುರುತಿಸುತ್ತದೆ ಎಂದರು. ಕಳೆದ ನಾಲ್ಕು ವರ್ಷಗಳಲ್ಲಿ ಡೋನರ್ ಸಚಿವಾಲಯ, ಅಸ್ಸಾಂನ ದಿಮಾ ಹಸಾವೋದಲ್ಲಿ ಬಿದಿರು ಕೈಗಾರಿಕಾ ಪ್ರದೇಶ ಸ್ಥಾಪನೆ ಸೇರಿದಂತೆ  ಈಶಾನ್ಯ ರಾಜ್ಯಗಳಿಗೆ 17 ಬಿದಿರು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಸುಮಾರು ಶೇ.40ರಷ್ಟು ಬಿದಿರು ಈಶಾನ್ಯ ರಾಜ್ಯಗಳಲ್ಲಿಯೇ ಇದೆ ಎಂದು ಕೇಂದ್ರ ಸಚಿವರು ಹೇಳಿದರು. ಆದರೂ ಈಶಾನ್ಯ ಭಾಗದಲ್ಲಿರುವ ಬಿದಿರು ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ, ಅದಕ್ಕೆ ಕಾರಣ ಭಾರತೀಯ ಅರಣ್ಯ ಕಾಯಿದೆ 1927ರಡಿಯಲ್ಲಿ ಬಿದಿರು ಸಾಗಾಣೆಗೆ ಇರುವ ನಿರ್ಬಂಧವಾಗಿತ್ತು ಎಂದರು. ಬಿದಿರು ಉತ್ತೇಜಿಸುವ ಅಗತ್ಯತೆಯನ್ನು ಅರ್ಥ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಶತಮಾನಗಳಷ್ಟು ಹಳೆಯದಾದ ಭಾರತೀಯ ಅರಣ್ಯ ಕಾಯಿದೆಯನ್ನು ತಿದ್ದುಪಡಿ ಮಾಡಿ, ಸ್ವಂತವಾಗಿ ಬೆಳೆಯುವ ಬಿದರನ್ನು ಅರಣ್ಯ ಕಾಯಿದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಮತ್ತು ಬಿದಿರಿನ ಮೂಲಕ ಜೀವನೋಪಾಯ ಚಟುವಟಿಕೆಗಳನ್ನು ವೃದ್ಧಿಸಲಾಗುತ್ತಿದೆ.

ಮತ್ತೊಂದು ಪ್ರಮುಖ ಸುಧಾರಣೆ ಎಂದರೆ, ಬಿದಿರು ಕಡ್ಡಿಗಳ ಮೇಲಿನ ಆಮದು ಸುಂಕವನ್ನು ಶೇ.25ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ಇದರಿಂದಾಗಿ ಭಾರತದಲ್ಲಿ ಹೆಚ್ಚುತ್ತಿರುವ ಅಗರಬತ್ತಿಗಳನ್ನು ಪೂರೈಸಲು ಹೊಸ ಹೊಸ ಅಗರಬತ್ತಿ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಲು ನೆರವು ನೀಡಿದಂತಾಗಿದೆ. ಭಾರತದಲ್ಲಿ ಅಗರಬತ್ತಿ ಉದ್ಯಮದ  ಮಾರುಕಟ್ಟೆಯ ಪಾಲು  5 ರಿಂದ 6 ಸಾವಿರ ಕೋಟಿ ರೂ.ಗಳಷ್ಟು ಇದೆ, ಆದರೆ ಬಹುತೇಕ ಅಗರಬತ್ತಿಯನ್ನು ನಾವು ಚೀನಾ ಮತ್ತು ಕೊರಿಯಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದರು.

ಶುದ್ಧ ಇಂಧನ ಮೂಲವಾಗಿ ಬಳಕೆಯಲ್ಲಿ ಬಿದಿರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯವಿದೆ ಎಂದ ಡಾ.ಜಿತೇಂದ್ರ ಸಿಂಗ್, ಪ್ಲಾಸ್ಟಿಕ್ ಬದಲಿಗೆ ನಾವು ಬಿದಿರನ್ನು ಬಳಕೆ ಮಾಡುವ ಮೂಲಕ ಭಾರತದಲ್ಲಿ ಪರಿಸರ ಮತ್ತು ಸ್ವಚ್ಛ ಪರಿಸರ ಕಾಯ್ದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಡೋನರ್ ಕಾರ್ಯದರ್ಶಿ ಡಾ.ಇಂದ್ರಜೀತ್ ಸಿಂಗ್ ಮಾತನಾಡಿದರು.

******



(Release ID: 1670398) Visitor Counter : 185