ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ನಡುವೆಯೇ ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಪರಿಹಾರದ ಮೊದಲ ಕಂತಿನ ತಲಾ 500 ರೂ. ವಿತರಣೆಯಲ್ಲಿ ಬ್ಯಾಂಕ್ ಸಖಿಗಳ ಮಹತ್ವದ ಪಾತ್ರ ಮತ್ತು ಬ್ಯಾಂಕ್ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದ ಎಸ್ಎಚ್ ಜಿ ಸದಸ್ಯರು (ಬಿ.ಸಿ. ಸಖಿ)

Posted On: 13 APR 2020 3:24PM by PIB Bengaluru

ಕೋವಿಡ್-19 ಲಾಕ್ ಡೌನ್ ನಡುವೆಯೇ ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಪರಿಹಾರದ ಮೊದಲ ಕಂತಿನ ತಲಾ 500 ರೂ. ವಿತರಣೆಯಲ್ಲಿ ಬ್ಯಾಂಕ್ ಸಖಿಗಳ ಮಹತ್ವದ ಪಾತ್ರ ಮತ್ತು ಬ್ಯಾಂಕ್ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದ ಎಸ್ಎಚ್ ಜಿ ಸದಸ್ಯರು

(ಬಿ.ಸಿ. ಸಖಿ)

 

ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ರಾಷ್ಟ್ರಾದ್ಯಂತ ಲಾಕ್ ಡೌನ್ ನಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ಅನಿರೀಕ್ಷಿತ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ನಿಂದಾಗಿ ತುಂಬಾ ತೊಂದರೆಗೀಡಾಗಿರುವುದು ದಿನಗೂಲಿ ಕಾರ್ಮಿಕರು, ವಲಸಿಗರು, ನಿರಾಶ್ರಿತರು, ಬಡವರು ಮತ್ತು ಅಲೆದಾಟದಲ್ಲಿ ತೊಡಗಿರುವ ಹಲವು ಜನಸಂಖ್ಯೆ. ಕೇಂದ್ರ ಸರ್ಕಾರ, 20.39 ಕೋಟಿ ಮಹಿಳಾ ಪಿಎಂಜೆಡಿವೈ ಖಾತೆಗಳಿಗೆ ಮೂರು ತಿಂಗಳ ಕಾಲ ತಲಾ 500 ರೂ. ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ಎಂ)ಗೆ ಈ ಹಣ ವರ್ಗಾವಣೆ ಹೊಣೆಗಾರಿಕೆ ವಹಿಸಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನೆರವಾಗುವಂತೆ ಸೂಚಿಸಲಾಗಿತ್ತು. ಭಾರತ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಖಾತೆಗಳಿಗೆ ನೇರ ನಗದು ಮೂಲಕ 2.000 ರೂ. ವರ್ಗಾವಣೆ, ಎಲ್ಲಾ ಗ್ರಾಮೀಣ ಜನಸಂಖ್ಯೆಗೆ ಮನ್ರೇಗಾ ವೇತನ ಪಾವತಿ ಮಾಡುವ ಮೂಲಕ ಆ ಸಮುದಾಯ ಎದುರಿಸುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯ ಮಾಡುತ್ತಿದೆ.

ಡಿಬಿಟಿ ನಿಧಿಯಡಿ ಹಣಕಾಸು ಬಿಡುಗಡೆಯಾಗಿರುವುದರಿಂದ ಬ್ಯಾಂಕ್ ಗಳ ಆವರಣದಲ್ಲಿ ಹಣ ಪಡೆದುಕೊಳ್ಳಲು ಭಾರೀ ಜನದಟ್ಟಣೆ ನಿರೀಕ್ಷಿಸಲಾಗಿತ್ತು. ಬ್ಯಾಂಕ್ ಖಾತೆದಾರರು ತಮ್ಮ ಖಾತೆ ಸಂಖ್ಯೆಯ ಕೊನೆಯ ಅಂಕಿ ಬಳಸಿ, ಹೇಗೆ ಮತ್ತು ಯಾವ ರೀತಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದು ಎಂದು ಸ್ಪಷ್ಟ ಸೂಚನೆಗಳನ್ನು ಮುಂಚಿತವಾಗಿಯೇ ನೀಡಲಾಗಿತ್ತು. ಆದರೆ ಬಹುತೇಕ ಪ್ರಕರಣಗಳಲ್ಲಿ ಬಿ.ಸಿ. ಸಖಿಗಳ(ಎಸ್ಎಚ್ ಜಿ ಸದಸ್ಯರು ಬ್ಯಾಂಕುಗಳ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ) ನೆರವು ಬಳಸಿ ಗ್ರಾಮೀಣ ಜನರಿಗೆ ಪಾವತಿಗಳನ್ನು ಮಾಡಲಾಯಿತು.

ಎಲ್ಲ ಬ್ಯಾಂಕ್ ಗಳು ಬಿ.ಸಿ. ಸಖಿ ಮತ್ತು ಬ್ಯಾಂಕ್ ಸಖಿಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು ಕೋವಿಡ್-19 ಲಾಕ್ ಡೌನ್ ವೇಳೆ ಅವರಿಗೆ ವಿಶೇಷ ಕರ್ತವ್ಯ ಕೆಲಸದ ಐಡಿ ಕಾರ್ಡ್ ಗಳನ್ನು ವಿತರಿಸಿದ್ದವು. ಬ್ಯಾಂಕುಗಳು ಸ್ಥಳೀಯ ಆಡಳಿತದಿಂದ ಸ್ಟಿಕರ್ ಅಥವಾ ಪಾಸ್ ಗಳನ್ನು ಪಡೆದು ವಿತರಣೆ ಮಾಡಿದ್ದವು. ಕೋವಿಡ್-19 ಹಿನ್ನೆಲೆಯಲ್ಲಿ ಅವರಿಗೆ ಹ್ಯಾಂಡ್ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಮತ್ತಿತರ ವಿಷಯಗಳ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು.

ಅದರ ಪರಿಣಾಮವಾಗಿ ಸುಮಾರು 8800 ಬಿ.ಸಿ. ಸಖಿ ಮತ್ತು 21600 ಬ್ಯಾಂಕ್ ಸಖಿಗಳ ಪೈಕಿ ಶೇ.50ಕ್ಕೂ ಅಧಿಕ ಮಂದಿ ದೇಶಾದ್ಯಂತ ಲಾಕ್ ಡೌನ್ ವೇಳೆಯೂ ಅಸ್ಸಾಂ, ಮಿಝೋರಾಂ, ಸಿಕ್ಕಿಂ, ಮಣಿಪುರ, ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ, ಮಧ್ಯಪ್ರದೇಶ, ಒಡಿಶಾ, ಪಶ್ಚಿಮಬಂಗಾಳ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬ್ಯಾಂಕ್ ಸಖಿಗಳು ಶಾಖೆಗಳಲ್ಲಿ ಡಿಬಿಟಿ ಪಾವತಿ ವೇಳೆ ದಟ್ಟಣೆ ಉಂಟಾಗದಂತೆ ಜನನಿರ್ವಹಣೆ ಮಾಡುವಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ನೆರವಾಗಿದ್ದಾರೆ ಮತ್ತು ಗ್ರಾಮೀಣ ಸಮುದಾಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಭಾರತ ಸರ್ಕಾರ ಒದಗಿಸಿದ ಹಣಕಾಸು ಪರಿಹಾರ ಪ್ಯಾಕೇಜ್ ವಿತರಣೆಯಲ್ಲಿ ಎಸ್ಎಚ್ ಜಿ ಸದಸ್ಯರು ಬಿ.ಸಿ. ಸಖಿ ಮತ್ತು ಬ್ಯಾಂಕ್ ಸಖಿಗಳಾಗಿ ಮಹತ್ವದ ಪಾತ್ರವಹಿಸಿದ್ದಾರೆ ಎಂಬುದನ್ನು ಪ್ರಮುಖವಾಗಿ ಹೇಳಲೇಬೇಕಾಗಿದೆ. ಅವರುಗಳಿಂದಾಗಿ ಸಾಮಾಜಿಕ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಗ್ರಾಮೀಣ ಸಮುದಾಯ ಬ್ಯಾಂಕಿಂಗ್ ಸೇವೆಗಳನ್ನು ತಮ್ಮ ಮನೆ ಬಾಗಿಲಲ್ಲೇ ಪಡೆಯುವಂತಾಯಿತು. ಲಾಕ್ ಡೌನ್ ಸಮಯದಲ್ಲಿ ಬ್ಯಾಂಕ್ ಇಲ್ಲದಂತಹ ಪ್ರದೇಶಗಳಲ್ಲಿ ಬಿ.ಸಿ. ಕೇಂದ್ರಗಳ ಮೂಲಕ ಫಲಾನುಭವಿಗಳ ಮನೆಗೆ ಹಣವನ್ನು ತಲುಪಿಸಿ, ಅವರ ದೈನಂದಿನ ಅಗತ್ಯತೆಗಳಿಗೆ ಬಳಸಿಕೊಳ್ಳಲು ನೆರವಾಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ವೇಳೆ ಜನಸಾಮಾನ್ಯರಿಗೆ ನೆರವಾಗಲು ಭಾರತ ಸರ್ಕಾರ, ಪಿಎಂಜಿಕೆವೈ, ಪಿಎಂ ಕಿಸಾನ್ ಮತ್ತು ಮನ್ರೇಗಾ ಮತ್ತಿತರ ಹಣಕಾಸು ಯೋಜನೆಗಳ ಮೂಲಕ ಪ್ರಕಟಿಸಿದ ಆರ್ಥಿಕ ಪರಿಹಾರ ಪ್ಯಾಕೇಜ್ ಗಳ ಕುರಿತು ಮಾಹಿತಿಯನ್ನು ತಲುಪಿಸುವಲ್ಲಿ ಬಿ.ಸಿ. ಸಖಿ/ ಬ್ಯಾಂಕ್ ಸಖಿ ಅವರುಗಳು ಅತ್ಯಂತ ಪ್ರಮುಖ ಫಾತ್ರ ವಹಿಸಿದ್ದಾರೆ.

 

https://ci6.googleusercontent.com/proxy/XqjC9uUBmbyk76ftvJbIb-eu5s7rf-5tmHu1NBpWjCk8IycubxR5c8ZLKHYz1CugO1wY1TY3rgA6aswd0dFr6_rHr27I4XkNxRz92FCKtVOjKuhlM1Qe=s0-d-e1-ft#https://static.pib.gov.in/WriteReadData/userfiles/image/image0012XIO.jpg

 

ಬಿ.ಸಿ. ಸಖಿಗಳು ಈ ಸಮಯದಲ್ಲಿ ದೃಢ ಬದ್ಧತೆಯನ್ನು ತೋರಿದ್ದಾರೆ ಮತ್ತು ಬಡವರು ಹಸಿವಿನಿಂದ ಹೊರಬರಲು ಆ ಸಮುದಾಯಕ್ಕೆ ಅವರ ಮನೆ ಬಾಗಿಲಿಗೆ ಪ್ರಾಥಮಿಕ ಬ್ಯಾಂಕಿಂಗ್ ಸೇವೆಗಳನ್ನು ಖಾತ್ರಿಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಡಿಎವೈ-ಎನ್ಆರ್ ಎಲ್ಎಂನ ಸಾಮರ್ಥ್ಯವೆಂದರೆ ದೇಶಾದ್ಯಂತ 63 ಲಕ್ಷ ಸ್ವಸಹಾಯ ಗುಂಪುಗಳಲ್ಲಿ ಸುಮಾರು 690 ಲಕ್ಷ ಮಹಿಳಾ ಸದಸ್ಯರನ್ನು ಹೊಂದಿರುವುದು. ಈ ಅತ್ಯುತ್ಸಾಹಿ ಮತ್ತು ಬದ್ಧತೆಯ ಸದಸ್ಯರು ಸದಾ ಆರ್ಥಿಕ ಮತ್ತು ಸಾಮಾಜಿಕ ಅಗತ್ಯತೆಗಳಿಗೆ ತಮ್ಮದೇ ಆದ ಸೇವೆ ನೀಡುತ್ತಾ ಸಮುದಾಯ ಹಂತದಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ ಎಸ್ ಎಚ್ ಜಿ ಸದಸ್ಯರು, ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸಾಧ್ಯವಾದ ಎಲ್ಲಾ ಕ್ರಮಗಳ ಕೊಡುಗೆ ಮೂಲಕ ಸಮುದಾಯ ಯೋಧರಾಗಿ ಬದಲಾಗಿದ್ದಾರೆ ಮತ್ತು ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎದುರಾಗುವ ಅಗತ್ಯತೆಗಳಿಗೆ ಸ್ಪಂದಿಸುತ್ತಿದ್ದಾರೆ.

*****



(Release ID: 1614095) Visitor Counter : 264