ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯಲ್ಲಿ ನಡೆದ ‘ಕಾಶಿ ಏಕ್ ರೂಪ್ ಅನೇಕ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
16 FEB 2020 6:16PM by PIB Bengaluru
ವಾರಣಾಸಿಯಲ್ಲಿ ನಡೆದ ‘ಕಾಶಿ ಏಕ್ ರೂಪ್ ಅನೇಕ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ
ಸಾಂಪ್ರದಾಯಿಕ ಕರಕುಶಲಕರ್ಮಿಗಳ ಬಲವರ್ಧನೆ
ಎಂಎಸ್ಎಂಇಗಳಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಗೆ ನೆರವು: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಯ ನಿಟ್ಟಿನಲ್ಲಿ ಸರ್ಕಾರ ಅಗತ್ಯ ನಿರ್ಧಾರ ಕೈಗೊಳ್ಳಲಿದೆ ಎಂದರು. ವಾರಣಾಸಿಯಲ್ಲಿ ಸಂಜೆ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಕರಕುಶಲಕರ್ಮಿಗಳು ಮತ್ತು ಕಲಾಕಾರರಿಗೆ ಅಗತ್ಯ ಸೌಕರ್ಯ ಒದಗಿಸಿ ಅವರ ಬಲವರ್ಧನೆಗೊಳಿಸಲಾಗುವುದು ಮತ್ತು ಎಂಎಸ್ಎಂಇ ಗುರಿ ಸಾಧನೆಗೆ ನೆರವಾಗಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಣಾಸಿಯ ಬಡಾಲಾಲ್ ಪುರ್ ನಲ್ಲಿನ ದೀನ್ ದಯಾಳ್ ಉಪಾಧ್ಯಾಯ ವ್ಯಾಪಾರ ಉತ್ತೇಜನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ‘ಕಾಶಿ ಏಕ್ ರೂಪ್ ಅನೇಕ್’ ಹೆಸರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಅವರು, ಉತ್ತರ ಪ್ರದೇಶದ ನಾನಾ ಜಿಲ್ಲೆಗಳು ಮತ್ತು ಕಾಶಿಯ ನೇಕಾರರು ಹಾಗೂ ಕರಕುಶಲಕರ್ಮಿಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನಕ್ಕೆ ಭೇಟಿ ನೀಡಿದರು. ಅವರು, ಕೈಮಗ್ಗ ಮಳಿಗೆ, ಗುಲಾಬಿ ಬಣ್ಣದ ಮೀನಾಕಾರಿ, ಮರದ ಗೊಂಬೆಗಳು, ಚಂದೌಲಿ ಕಪ್ಪು ಹಕ್ಕಿ, ಕನ್ನೂಜ್ ನ ಸುಗಂಧದ್ರವ್ಯ, ಮೊರಾದಾಬಾದ್ ನ ಲೋಹದ ಉತ್ಪನ್ನಗಳು, ಆಗ್ರಾದ ಚರ್ಮದ ಶೂಗಳು, ಲಖನೌದ ಚಿಕಾಂನ್ ಕಾರಿ ಮತ್ತು ಅಜಮ್ ಗಢ್ ನ ಕಪ್ಪು ಮಣ್ಣಿನ ಮಡಿಕೆ, ಕುಡಿಕೆಗಳನ್ನು ಪರಿಶೀಲಿಸಿದರು ಮತ್ತು ಪ್ರತಿಯೊಂದು ಜಿಲ್ಲೆಯ ಒಂದೊಂದು ಉತ್ಪನ್ನಗಳನ್ನು ವೀಕ್ಷಿಸಿ ಕರಕುಶಲಕರ್ಮಿಗಳ ಜೊತೆ ಸಮಾಲೋಚಿಸಿದರು. ಅಲ್ಲದೆ ಅವರು ನಾನಾ ಕಲೆಗಳಲ್ಲಿ ಪರಿಣಿತಿ ಹೊಂದಿದ ಕರಕುಶಲಕರ್ಮಿಗಳಿಗೆ ಕಿಟ್ ಹಾಗೂ ಆರ್ಥಿಕ ನೆರವನ್ನು ವಿತರಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಉತ್ತರ ಪ್ರದೇಶ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕರಕುಶಲಕರ್ಮಿಗಳಿಗೆ ಮತ್ತು ನೇಕಾರರಿಗೆ ಅಗತ್ಯ ಯಂತ್ರೋಪಕರಣ ಮತ್ತು ಕರಕುಶಲಕರ್ಮಿಗಳಿಗೆ ಸಾಲ ಮತ್ತಿತರ ನೆರವು ನೀಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ರಫ್ತು ವಹಿವಾಟು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಉತ್ತರ ಪ್ರದೇಶ ಉತ್ಪನ್ನಗಳಿಂದ ಇಡೀ ದೇಶಕ್ಕೆ ಪ್ರಯೋಜನವಾಗುತ್ತಿರುವ ಜೊತೆಗೆ ವಿದೇಶಗಳಿಗೂ ತಲುಪುತ್ತಿದೆ. ಜಗತ್ತಿನ ಆನ್ ಲೈನ್ ಮಾರುಕಟ್ಟೆಯನ್ನೂ ಸಹ ಪ್ರವೇಶಿಸಿದೆ ಎಂದು ಪ್ರಧಾನಿ ಹೇಳಿದರು.
ಭಾರತದಲ್ಲಿ ಪ್ರತಿಯೊಂದು ವಸ್ತು ಮತ್ತು ಪ್ರತಿಯೊಂದು ಜಿಲ್ಲೆಯಲ್ಲೂ ಸಹ ಒಂದು ವಿಶಿಷ್ಟ ಕಲೆ, ಉತ್ಪನ್ನಗಳ ಜೊತೆ ಗುರುತಿಸಬಹುದಾಗಿದೆ. ಉದಾಹರಣೆಗೆ ರೇಷ್ಮೆ ಮತ್ತು ಸಾಂಬಾರ ಪದಾರ್ಥಗಳ ವೈವಿಧ್ಯಮಯ ವಿಧಗಳು. ಮೇಕ್ ಇನ್ ಇಂಡಿಯಾ ಮತ್ತು ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗಳ ಹಿಂದೆ ಇದು ಅತಿ ದೊಡ್ಡ ಸ್ಫೂರ್ತಿಯ ಕೆಲಸವಾಗಿದೆ ಎಂದು ಅವರು ಹೇಳಿದರು.
ಕಳೆದ 2 ವರ್ಷಗಳಿಂದೀಚೆಗೆ ಉತ್ತರ ಪ್ರದೇಶ ವಿನ್ಯಾಸ ಕೇಂದ್ರ(ಯುಪಿಐಡಿ) ನೆರವಿನೊಂದಿಗೆ 30 ಜಿಲ್ಲೆಗಳ 3,500ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಮತ್ತು ನೇಕಾರರಿಗೆ ನೆರವು ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಸುಮಾರು ಒಂದು ಸಾವಿರ ಕೆಲಸಗಾರರಿಗೆ ಯಂತ್ರೋಪಕರಣಗಳ ಕಿಟ್ ಅನ್ನು ನೀಡಲಾಗಿದೆ. ನೇಕಾರರು ಕರಕುಶಲಕರ್ಮಿಗಳಿಗೆ ನೆರವು ನೀಡುವ ಕಾರ್ಯದಲ್ಲಿ ಯುಪಿಐಡಿ ಪ್ರಯತ್ನಗಳು ಶ್ಲಾಘನೀಯ ಎಂದು ಅವರು ಹೇಳಿದರು.
21ನೇ ಶತಮಾನದ ಬೇಡಿಕೆಗಳಿಗೆ ಅನುಗುಣವಾಗಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳ ಗುಣಮಟ್ಟ ಸುಧಾರಣೆ ಮತ್ತು ಅವುಗಳನ್ನು ಶುದ್ಧಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ನಮ್ಮ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಸಾಂಸ್ಥಿಕ ನೆರವು, ಹಣಕಾಸು ಸಹಾಯ, ಹೊಸ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು. ಆ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಸಬಲೀಕರಣಗೊಳಿಸುವ ಹೊಸ ಮನೋಭಾವದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದು ಅವರು ಹೇಳಿದರು.
ಕೈಗಾರಿಕೆಗಳು ಮತ್ತು ಸಂಪತ್ತು ಸೃಷ್ಟಿಸುವವರಿಗೆ ಅಗತ್ಯ ಸೌಕರ್ಯಗಳನ್ನು ಕೈಗೊಳ್ಳಲು ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಈ ವರ್ಷದ ಬಜೆಟ್ ನಲ್ಲಿ ಉತ್ಪಾದನೆ ಮತ್ತು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಗೆ 1500 ಕೋಟಿ ರೂ. ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ಗಾಗಿ 3700 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕಾರಿಡಾರ್ ನಿಂದ ಸಣ್ಣ ಉದ್ದಿಮೆಗಳಿಗೆ ಅನುಕೂಲವಾಗಲಿದೆ ಮತ್ತು ಅದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಸರ್ಕಾರಿ ಇ-ಮಾರುಕಟ್ಟೆ ತಾಣ – ಜಿಇಎಂ, ಸಣ್ಣ ಉದ್ದಿಮೆದಾರರಿಗೆ ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸುಲಭ ಹಾದಿ ಮಾಡಿಕೊಟ್ಟಿದೆ ಎಂದು ಪ್ರಧಾನಿ ಅವರು ಉಲ್ಲೇಖಿಸಿದರು. ಏಕೀಕೃತ ಖರೀದಿ ವ್ಯವಸ್ಥೆ ಸೃಷ್ಟಿಯಿಂದಾಗಿ ಸರ್ಕಾರ ಸಣ್ಣ ಕೈಗಾರಿಕೆಗಳಿಂದ ಸರಕು ಮತ್ತು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಖರೀದಿಸಲು ನೆರವಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಾಗಾಣೆ ನೀತಿಯನ್ನು ಸಿದ್ಧಪಡಿಸಲಾಗಿದೆ. ಇದರಿಂದ ಏಕಗವಾಕ್ಷಿ ಇ-ಸಾರಿಗೆ ಸೃಷ್ಟಿಯಾಗಲಿದೆ ಮತ್ತು ಎಲ್ಲ ಸಣ್ಣ ಕೈಗಾರಿಕೆಗಳು ಇನ್ನು ಹೆಚ್ಚು ಸ್ಪರ್ಧಾತ್ಮಕಗೊಳ್ಳುವುದಲ್ಲದೆ, ಉದ್ಯೋಗಸೃಷ್ಟಿಗೂ ನೆರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತವನ್ನು ಉತ್ಪಾದನಾ ಶಕ್ತಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಸಮಗ್ರ ಪ್ರಯತ್ನಗಳನ್ನು ನಡೆಸುವಂತೆ ಪ್ರತಿಯೊಬ್ಬರಿಗೂ ಕರೆ ನೀಡುವ ಮೂಲಕ ಪ್ರಧಾನಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
**********
(Release ID: 1603503)