ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ಕೋಕ್ರಾಜಾರ್ ನಲ್ಲಿ ನಡೆದ ಬೋಡೊ ಶಾಂತಿ ಒಪ್ಪಂದ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ

प्रविष्टि तिथि: 07 FEB 2020 5:53PM by PIB Bengaluru

ಅಸ್ಸಾಂನ ಕೋಕ್ರಾಜಾರ್ ನಲ್ಲಿ ನಡೆದ ಬೋಡೊ ಶಾಂತಿ ಒಪ್ಪಂದ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ

ಬೋಡೊ ಒಪ್ಪಂದ ಅಸ್ಸಾಂನಲ್ಲಿ ನವೋದಯಕ್ಕೆ ಇಂಬು ನೀಡುತ್ತದೆ, ಪ್ರಧಾನಿ ಹೇಳಿಕೆ
ವಲಯಕ್ಕೆ ಅಭಿವೃದ್ಧಿಯ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಮಂತ್ರಿ
ಈಶಾನ್ಯ ಭಾಗದ ಆಶೋತ್ತರಗಳನ್ನು ಈಡೇರಿಸಲು ಹೊಸ ದೃಷ್ಟಿಕೋನ


 

ಹಿಂಸಾಚಾರದ ಹಾದಿಯನ್ನು ಅನುಸರಿಸುತ್ತಿರುವವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಬೋಡೊ ಕಾರ್ಯಕರ್ತರಂತೆ ಸಮಾಜದ ಮುಖ್ಯವಾಹಿನಿಗೆ ಮರಳುವಂತೆ  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರೆ ನೀಡುವ ಮೂಲಕ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಅವರಿಂದು ಅಸ್ಸಾಂನ ಕೋಕ್ರಾಜಾರ್ ನಲ್ಲಿ ನಡೆದ ಬೋಡೊ ಒಪ್ಪಂದದ ಅಂಕಿತದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.
2020ರ ಜನವರಿ 27ರಂದು ಐತಿಹಾಸಿಕ ಒಪ್ಪಂದಕ್ಕೆ ಅಂಕಿತ ಹಾಕಿದ ತರುವಾಯ ಇದು ಅವರು ಈಶಾನ್ಯ ಭಾಗಕ್ಕೆ ನೀಡಿದ ಪ್ರಥಮ ಭೇಟಿಯಾಗಿದೆ.
“ಜಮ್ಮು ಕಾಶ್ಮೀರದಲ್ಲಾಗಲೀ, ಈಶಾನ್ಯದಲ್ಲಾಗಲೀ ಅಥವಾ ನಕ್ಸಲ್ ಪ್ರದೇಶದಲ್ಲೇ ಆಗಲಿ ಶಸ್ತ್ರ ಮತ್ತು ಹಿಂಸಾಚಾರದಲ್ಲಿ ಇನ್ನೂ ನಂಬಿಕೆ ಇಟ್ಟಿರುವವರು ಬೋಡೊ ಯುವಜನರಿಂದ ಸ್ಫೂರ್ತಿ ಪಡೆದು, ಮುಖ್ಯವಾಹಿನಿಗೆ ಮರಳುವಂತೆ ನಾನು ಮನವಿ ಮಾಡುತ್ತೇನೆ. ಮರಳಿ ಬನ್ನಿ ಮತ್ತು ಜೀವನವನ್ನು ಸಂಭ್ರಮಿಸಿ.”, ಎಂದು ಅವರು ಹೇಳಿದರು.
ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು ಬೋಡೊಫಾ ಉಪೇಂದ್ರನಾಥ್ ಬ್ರಹ್ಮಾಜೀ, ರೂಪ್ ನಾಥ್ ಬ್ರಹ್ಮಾಜೀ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದರು.
ಬೋಡೊ  ಒಪ್ಪಂದ  - ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸದ ದ್ಯೋತಕ
 
ಪ್ರಧಾನಮಂತ್ರಿಯವರು ಬೋಡೊ ಒಪ್ಪಂದದಲ್ಲಿ ಅತ್ಯಂತ ಧನಾತ್ಮಕ ಪಾತ್ರ ನಿರ್ವಹಿಸಿದ್ದಕ್ಕಾಗಿ ಅಖಿಲ ಬೋಡೊ ವಿದ್ಯಾರ್ಥಿ ಒಕ್ಕೂಟ (ಎ.ಬಿ.ಎಸ್.ಯು), ಬೋಡೊ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎಫ್.ಬಿ.), ಬಿಟಿಸಿ ಮುಖ್ಯಸ್ಥ ಶ್ರೀ ಹಗ್ರಾಮ ಮಹಿಲಾರೆ ಮತ್ತು ಅಸ್ಸಾಂ ಸರ್ಕಾರವನ್ನು ಶ್ಲಾಘಿಸಿದರು.
“ಇಂದು ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ವಲಯಕ್ಕೆ 21ನೇ ಶತಮಾನದ ಹೊಸ ಆರಂಭವನ್ನು, ನವೋದಯವನ್ನು, ಹೊಸ ಸ್ಫೂರ್ತಿಯನ್ನು ಸ್ವಾಗತಿಸುವ ದಿನವಾಗಿದೆ, ಇಂದು ಅಭಿವೃದ್ಧಿ ಮತ್ತು ವಿಶ್ವಾಸವು ನಮ್ಮ ಮುಖ್ಯ ಆಧಾರವಾಗಿ ಮುಂದುವರಿಯುವ ಮತ್ತು ಅವುಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಿದೆ. ಹಿಂಸಾಚಾರದ ಕಗ್ಗತ್ತಲೆಯಲ್ಲಿ ನಾವು ಮತ್ತೆ ಮುಳುಗದೆ, ನವ ದೃಢ ಸಂಕಲ್ಪದ ಭಾರತದ ಶಾಂತಿಯುತ ಅಸ್ಸಾಂ ಅನ್ನು ಸ್ವಾಗತಿಸೋಣ ”ಎಂದು ಅವರು ಹೇಳಿದರು.
ಭಾರತವು ಈ ವರ್ಷ ಮಹಾತ್ಮಾ ಗಾಂಧೀ ಅವರ 150ನೇ ಜಯಂತಿ ಮಹೋತ್ಸವ ಆಚರಿಸುತ್ತಿರುವಾಗ ಈ ಬೋಡೊ ಒಪ್ಪಂದಕ್ಕೆ ಅಂಕಿತ ಹಾಕಿರುವುದು ಹೆಚ್ಚು ಮಹತ್ವ ಪಡೆದಿದೆ ಎಂದರು.  
“ಗಾಂಧೀಜಿಯವರು ಸದಾ ಅಹಿಂಸೆಯಿಂದ ಬರುವ ಯಾವುದೇ ಫಲವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿದ್ದರು", ಎಂದು ಪ್ರಧಾನಮಂತ್ರಿ ತಿಳಿಸಿದರು.
ಬೋಡೊ ಒಪ್ಪಂದ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಇಡೀ ಪ್ರದೇಶದ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಬೋಡೊ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಯ ಅಧಿಕಾರವನ್ನು ಒಪ್ಪಂದದಡಿಯಲ್ಲಿ ಹೆಚ್ಚಿಸಲಾಗಿದೆ ಮತ್ತು ಬಲಪಡಿಸಲಾಗಿದೆ ಎಂದು ಅವರು ಹೇಳಿದರು.
“ಈ ಒಪ್ಪಂದದಲ್ಲಿ ಪ್ರತಿಯೊಬ್ಬರೂ ವಿಜೇತರೇ, ಒಪ್ಪಂದದಲ್ಲಿ ಶಾಂತಿ ಜಯಶಾಲಿ ಮತ್ತು ಮಾನವತೆ ವಿಜಯಿ ಎಂದು ಅವರು ಹೇಳಿದರು.
ಬೋಡೊ ಪ್ರದೇಶದ ಜಿಲ್ಲೆಗಳ (ಬಿಟಿಎಡಿ) ಗುರುತಿಸಲು ಆಯೋಗ ರಚಿಸಲಾಗುವುದು ಎಂದು ಅವರು ಹೇಳಿದರು.
ಬಿಟಿಎಡಿಯ ಕೋಕ್ರಾಜಾರ್, ಚಿರಾಂಗ್, ಬಕ್ಸಾ ಮತ್ತು ಉದಲ್ಗುರಿಯ ಪ್ರಯೋಜನಕ್ಕಾಗಿ 1500 ಕೋಟಿ ರೂಪಾಯಿಗಳ ಪ್ಯಾಕಂಜ್ ಅನ್ನು ಪ್ರಧಾನಮಂತ್ರಿ ಪ್ರಕಟಿಸಿದರು.
“ಇದು ಬೋಡೊ ಸಂಸ್ಕೃತಿ, ಪ್ರದೇಶ ಮತ್ತು ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ಹೇಳಿದರು.
ಬಿಟಿಸಿಯ ಮತ್ತು ಅಸ್ಸಾಂ ಸರ್ಕಾರದ ಹೆಚ್ಚಿನ ಜವಾಬ್ದಾರಿಯ ಬಗ್ಗೆ ಪ್ರತಿಪಾದಿಸಿದ ಪ್ರಧಾನಮಂತ್ರಿ, ಅಭಿವೃದ್ಧಿಯ ಮೂಲ ಉದ್ದೇಶವು ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಮಾತ್ರವೇ ಆಗಿದೆ ಎಂದರು.
“ ಇಂದು, ಬೋಡೊ ವಲಯದಲ್ಲಿ ಹೊಸ ವಿಶ್ವಾಸ, ಹೊಸ ಕನಸು, ಹೊಸ ಸ್ಫೂರ್ತಿ ಸಂವಹನಗೊಂಡಿದೆ, ನಿಮ್ಮೆಲ್ಲರ ಜವಾಬ್ದಾರಿಯೂ ಹೆಚ್ಚಾಗಿದೆ. ಬೋಡೊ ಟೆರಿಟೋರಿಯಲ್ ಕೌನ್ಸಿಲ್ ಈಗ ಎಲ್ಲ ಸಮಾಜವನ್ನೂ ತೆಗೆದುಕೊಂಡು ಹೊಸ ಅಭಿವೃದ್ಧಿಯ ಮಾದರಿ ರೂಪಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು. ಇದು ಅಸ್ಸಾಂ ಅನ್ನು ಬಲಪಡಿಸುತ್ತದೆ ಮತ್ತು ಭಾರತದ ಸ್ಪೂರ್ತಿ ಮತ್ತು ಶ್ರೇಷ್ಠ ಭಾರತವನ್ನು ಬಲಗೊಳಿಸುತ್ತದೆ”, ಎಂದೂ ಪ್ರಧಾನಮಂತ್ರಿ ತಿಳಿಸಿದರು.
ತಮ್ಮ ಸರ್ಕಾರ ಅಸ್ಸಾಂ ಒಪ್ಪಂದದ ಆರನೇ ಷರತ್ತನ್ನು ಅನುಷ್ಠಾನಗೊಳಿಸಲು ಬಯಸುತ್ತದೆ ಮತ್ತು ಇದಕ್ಕಾಗಿ ಸಮಿತಿಯ ವರದಿಗಾಗಿ ಕಾಯುತ್ತಿದೆ ಎಂದು ತಿಳಿಸಿದರು.
ಈಶಾನ್ಯದ ಆಶೋತ್ತರಗಳನ್ನು ಪೂರೈಸಲು ಹೊಸ ದೃಷ್ಟಿಕೋನ
ಈಶಾನ್ಯದೊಂದಿಗೆ ಸೇರಿಕೊಂಡಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಇಂಥ ದೃಷ್ಟಿಕೋನ ವಲಯದ ಆಶೋತ್ತರಗಳು ಮತ್ತು ಭಾವನಾತ್ಮಕ ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಂಡಾಗ ಮಾತ್ರವೇ ಸಾಧ್ಯವಾಗುತ್ತದೆ ಎಂದು ಹೇಳಿದರು.
“ಸಂಬಂಧಪಟ್ಟ ಎಲ್ಲರೊಂದಿಗೆ ಸಹಾನುಭೂತಿಯೊಂದಿಗೆ ಚರ್ಚೆ ಮತ್ತು ಸಮಾಲೋಚನೆ ನಡೆಸಿ ಪರಿಹಾರಗಳು ಕಂಡುಕೊಳ್ಳಲಾಗಿದೆ. ನಾವು ಎಲ್ಲರೊಂದಿಗೂ ನಮ್ಮವರಂತೆ ವ್ಯವಹರಿಸುತ್ತಿದ್ದೇವೆ ಹೊರತು ಹೊರಗಿನವರಂತೆ ಅಲ್ಲ ಹೀಗಾಗಿ ಪರಿಹಾರ ದೊರೆತಿದೆ. ನಾವು ಅವರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಇವರು ನಮ್ಮವರೇ ಎಂಬ ಭಾವನೆ ಮೂಡಿಸಿದ್ದೇವೆ. ಇದು ವಿಧ್ವಂಸಕತೆ ತಗ್ಗಲು ಕಾರಣವಾಗಿದೆ. ಇದಕ್ಕೂ ಮುನ್ನ ಈಶಾನ್ಯದಲ್ಲಿ ವಿಧ್ವಂಸಕತೆಯಿಂದ 1000 ಹತ್ಯೆ ನಡೆಯುತ್ತಿತ್ತು. ಆದರೆ  ಇಂದು, ಒಟ್ಟಾರೆಯಾಗಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಸಹಜವಾಗಿದೆ ಎಂದರು.
ಈಶಾನ್ಯ ಭಾರತದ ಅಭಿವೃದ್ಧಿಯ ಚಾಲಕ ಶಕ್ತಿ
 
“ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಈಶಾನ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇಡೀ ಈಶಾನ್ಯ ಭಾಗದ ರೈಲು ಜಾಲವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿದೆ. ಹೊಸ ಶಿಕ್ಷಣ, ಕೌಶಲ ಮತ್ತು ಕ್ರೀಡಾ ಸಂಸ್ಥೆಗಳ ಮೂಲಕ ಈಶಾನ್ಯದ ಯುವಜನರನ್ನು ಸಬಲೀಕರಿಸಲು ಗಮನ ಹರಿಸಲಾಗಿದೆ. ಇದರ ಜೊತೆಗೆ ಈಶಾನ್ಯದ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಮತ್ತು ದೆಹಲಿಯಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನು ಕೂಡ ಸ್ಥಾಪಿಸಲಾಗಿದೆ”, ಎಂದೂ ಪ್ರಧಾನಿ ತಿಳಿಸಿದರು.
 
ಮೂಲಸೌಕರ್ಯ ಎಂದರೆ ಗಾರೆ ಮತ್ತು ಸಿಮೆಂಟ್ ಸಂಯೋಜನೆ ಮಾತ್ರವೇ ಅಲ್ಲ, ಅದಕ್ಕೆ ಮಾನವನ ಮಗ್ಗಲೂ ಇದೆ. ತಮ್ಮ ಬಗ್ಗೆ ಯಾರೋ ಒಬ್ಬರು ಕಾಳಜಿ ವಹಿಸುತ್ತಾರೆ ಎಂದು ಜನರಿಗೆ ಅನಿಸುತ್ತದೆ ಎಂದು ಪ್ರಧಾನಿ ಹೇಳಿದರು.
“ಬೋಗಿಬೀಲ್ ಸೇತುವೆಯಂತೆ ದಶಕಗಳಿಂದ ನನೆಗುದಿಯಲ್ಲಿರುವ ಅನೇಕ ಯೋಜನೆಗಳು ಪೂರ್ಣಗೊಂಡು ಲಕ್ಷಾಂತರ ಜನರು ಸಂಪರ್ಕವನ್ನು ಪಡೆದಾಗ, ಸರ್ಕಾರದ ಬಗ್ಗೆ ಅವರ ವಿಶ್ವಾಸ ಹೆಚ್ಚಾಗುತ್ತದೆ. ಈ ಸರ್ವಾಂಗೀಣ ಅಭಿವೃದ್ಧಿ ಪ್ರತ್ಯೇಕತೆಯನ್ನು ದೃಢವಾಗಿ ಪರಿವರ್ತಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಯಾವಾಗ ನಂಟಿರುತ್ತದೋ, ಯಾವಾಗ ಪ್ರಗತಿಯು ಪ್ರತಿಯೊಬ್ಬರಿಗೂ ಸಮಾನವಾಗಿ ತಲುಪುತ್ತದೋ, ಆಗ ಜನರೂ ಒಗ್ಗೂಡಿ ಶ್ರಮಿಸಲು ಸಿದ್ಧರಾಗುತ್ತಾರೆ. ಯಾವಾಗ ಜನರು ಒಗ್ಗೂಡಿ ಶ್ರಮಿಸಲು ಸಿದ್ಧರಾಗುತ್ತಾರೋ ಆಗ ದೊಡ್ಡ ದೊಡ್ಡ ಸಮಸ್ಯೆಗಳೂ ಪರಿಹಾರವಾಗುತ್ತವೆ”, ಎಂದೂ ಪ್ರಧಾನಮಂತ್ರಿ ತಿಳಿಸಿದರು.


****

Refresh Refresh   Compose Compose        
   
     

(रिलीज़ आईडी: 1602648) आगंतुक पटल : 193
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Punjabi , Gujarati , Tamil