ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪಿ.ಕೆ. ಮಿಶ್ರಾ ಅಧಿಕಾರ ಸ್ವೀಕಾರ

Posted On: 11 SEP 2019 1:32PM by PIB Bengaluru

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪಿ.ಕೆ. ಮಿಶ್ರಾ ಅಧಿಕಾರ ಸ್ವೀಕಾರ
 

ಡಾ. ಪ್ರಮೋದ್ ಕುಮಾರ್ ಮಿಶ್ರಾ, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ

ಡಾ. ಪ್ರಮೋದ್ ಕುಮಾರ್ ಮಿಶ್ರಾ ಅವರನ್ನು ಪ್ರಧಾನಮಂತ್ರಿಯವರ ಪ್ರಧಾನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು ಅವರು ಇಂದು ಅಧಿಕಾರ ವಹಿಸಿಕೊಂಡರು.

ಡಾ. ಮಿಶ್ರಾ ಅವರು ಕೃಷಿ, ವಿಪತ್ತು ನಿರ್ವಹಣೆ, ಇಂಧನ ವಲಯ, ಮೂಲಸೌಕರ್ಯ ಹೂಡಿಕೆ, ಮತ್ತು ನಿಯಂತ್ರಣ ವಿಚಾರಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಗಾಧ ಸೇವಾನುಭವವನ್ನು ಹೊಂದಿದ್ದು, ಸಂಶೋಧನೆ, ಪ್ರಕಟಣೆ, ನೀತಿ ನಿರೂಪಣೆ ಮತ್ತು ಕಾರ್ಯಕ್ರಮ/ಯೋಜನಾ ನಿರ್ವಹಣೆಯಲ್ಲಿ ಅದ್ಭುತ ಸೇವಾನುಭವ ಹೊಂದಿದ್ದಾರೆ.

ನೀತಿ ನಿರೂಪಣೆ ಮತ್ತು ಆಡಳಿತದಲ್ಲಿ ವ್ಯಾಪಕ ಅನುಭವ ಹೊಂದಿರುವ ಅವರು ಪ್ರಧಾನಮಂತ್ರಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ, ಭಾರತ ಸರ್ಕಾರದ ಕೃಷಿ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ, ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಾಗಿ, ವಿಪತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೃಷಿ ಮತ್ತು ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ, ಅವರು ರಾಷ್ಟ್ರೀಯ ಕೃಷಿ ಅಭಿವೃದ್ಧಿ ಕಾರ್ಯಕ್ರಮ (ಆರ್.ಕೆ.ವಿ.ವೈ) ಮತ್ತು ರಾಷ್ಟ್ರೀಯ ಆಹಾರ ಭದ್ರತೆ (ಎನ್.ಎಫ್.ಎಸ್.ಎಂ.)ನಂಥ ಪ್ರಮುಖ ರಾಷ್ಟ್ರೀಯ ಉಪಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಪ್ರಧಾನಮಂತ್ರಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ 2014-19ರ ಅವಧಿಯಲ್ಲಿ ಡಾ. ಮಿಶ್ರಾ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅದರಲ್ಲೂ ಉನ್ನತ ಹುದ್ದೆಗಳಿಗೆ ನೇಮಕಾತಿಯಲ್ಲಿ ನಾವಿನ್ಯಪೂರ್ವ ಮತ್ತು ಪರಿವರ್ತನಾತ್ಮಕ ಬದಲಾವಣೆಗಳನ್ನು ತಂದಿದ್ದರು.

ಅವರ ಅಂತಾರಾಷ್ಟ್ರೀಯ ಅನುಭವದಲ್ಲಿ ಯುಕೆಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಕಾಲ ಸಂಶೋಧನೆ ಮತ್ತು ಶೈಕ್ಷಣಿಕ ಕಾರ್ಯ, ಎಡಿಬಿ ಮತ್ತು ವಿಶ್ವ ಬ್ಯಾಂಕ್ ಯೋಜನೆಯಲ್ಲಿ ಆಡಳಿತ ಮಂಡಳಿಯಲ್ಲಿನ ಮಾತುಕತೆ ಮತ್ತು ಜಾರಿ, ಅರೆ ಉಷ್ಣ ಶುಷ್ಕ ವಲಯ ಕುರಿತ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ಐಕ್ರಿಸಾಟ್) ಮತ್ತು ಹಲವು ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ವಿಷಯ ತಜ್ಞ/ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾದದ್ದೂ ಸೇರಿವೆ.

ಇತ್ತೀಚೆಗೆ, ಅವರಿಗೆ ವಿಪತ್ತ ನಿರ್ವಹಣೆ ಕ್ಷೇತ್ರದಲ್ಲಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ವಿಶ್ವ ಸಂಸ್ಥೆಯ ಸಸಕ್ವಾ ಪ್ರಶಸ್ತಿ 2019 ಪ್ರದಾನ ಮಾಡಲಾಗಿತ್ತು.

ಡಾ. ಮಿಶ್ರಾ ಅವರು ಸುಸೆಕ್ಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ/ಅಭಿವೃದ್ಧಿ ಅಧ್ಯಯನದಲ್ಲಿ ಪಿಎಚ್.ಡಿ., ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪ್ರಥಮ ದರ್ಜೆಯಲ್ಲಿ ಎಂ.ಎ ಮತ್ತು ಬಿಎ ಆನರ್ಸ್ (ಅರ್ಥಶಾಸ್ತ್ರ)ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿದ್ದಾರೆ. ಜಿ.ಎಂ. ಕಾಲೇಜು (ಸಂಬಾಲ್ ಪುರ ವಿಶ್ವವಿದ್ಯಾಲಯ)ದಿಂದ 1970ರಲ್ಲಿ ಇತರ ವಿಷಯಗಳಲ್ಲೂ ಅವರು ಅತ್ಯುನ್ನತ ದರ್ಜೆ ಪಡೆದಿದ್ದಾರೆ. ಒಡಿಶಾದ ಎಲ್ಲ ವಿಶ್ವವಿದ್ಯಾಲಯಗಳ ಪೈಕಿ ಅರ್ಥಶಾಸ್ತ್ರದಲ್ಲಿ ಆಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಏಕೈಕ ವ್ಯಕ್ತಿ ಇವರಾಗಿದ್ದರು.

ಅವರ ಪ್ರಕಟಣೆಗಳಲ್ಲಿ

● ಕಚ್ ಭೂಕಂಪ 2001: ನೆನಪಿನ ಪಾಠಗಳು ಮತ್ತು ಒಳನೋಟ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ, ನವದೆಹಲಿ , ಭಾರತ (2004).

● ಕೃಷಿ ಅಪಾಯ, ವಿಮೆ ಮತ್ತು ಆದಾಯ: ಭಾರತದ ಸಮಗ್ರ ಬೆಳೆ ವಿಮೆ ಯೋಜನೆ ವಿನ್ಯಾಸ ಮತ್ತು ಪರಿಣಾಮಗಳು ಒಂದು ಅಧ್ಯಯನ, ಅವೆಬರಿ, ಆಲ್ಡರ್‌ಶಾಟ್, ಯುಕೆ (1996).

● ಏಷ್ಯಾದಲ್ಲಿ ಕೃಷಿ ವಿಮೆ ಯೋಜನೆಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆ, ಏಷ್ಯಾ ಉತ್ಪಾದಕತೆ ಸಂಘಟನೆ, ಟೋಕಿಯೋ, ಜಪಾನ್ (1999) ಸಂಪಾದನೆ, ಸೇರಿವೆ.

ಅವರು ಹಲವು ಅಂತಾರಾಷ್ಟ್ರೀಯ ನಿಯತಕಾಲಿಕಗಳಿಗೆ ಲೇಖನ ಮತ್ತು ವಿಮರ್ಶೆಗಳನ್ನು ಬರೆದಿದ್ದಾರೆ.



(Release ID: 1585270) Visitor Counter : 113