ಪ್ರಧಾನ ಮಂತ್ರಿಯವರ ಕಛೇರಿ

2019ರ ಆಗಸ್ಟ್ 15ರಂದು 73ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಕೆಂಪುಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ರೂಪಾಂತರ

Posted On: 15 AUG 2019 4:58PM by PIB Bengaluru

 2019ರ ಆಗಸ್ಟ್ 15ರಂದು 73ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಕೆಂಪುಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ರೂಪಾಂತರ

 ನನ್ನ ಆತ್ಮೀಯ ದೇಶವಾಸಿಗಳೇ,

ಸ್ವಾತಂತ್ರ್ಯೋತ್ಸವದ ಪವಿತ್ರ ದಿನದಂದು, ಎಲ್ಲಾ ದೇಶವಾಸಿಗಳಿಗೆ ನನ್ನ ಅನೇಕಾನೇಕ ಶುಭಾಶಯಗಳು. ಇಂದು ರಕ್ಷಾ-ಬಂಧನದ ಹಬ್ಬದ ದಿನವೂ ಆಗಿದೆ. ಶತಮಾನಗಳ ನಮ್ಮ ಸಂಪ್ರದಾಯವು ಸಹೋದರ ಮತ್ತು ಸಹೋದರಿಯರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ರಕ್ಷಾ ಬಂಧನದ ಈ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಮತ್ತು ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಹಬ್ಬ, ವಾತ್ಸಲ್ಯದಿಂದ ಕೂಡಿ, ನಮ್ಮ ಎಲ್ಲ ಸಹೋದರ ಸಹೋದರಿಯರ ಜೀವನದ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿ, ಕನಸುಗಳನ್ನು ನನಸಾಗಿಸಲಿ ಮತ್ತು ಅವರ ಬದುಕಿನಲ್ಲಿ ವಾತ್ಸಲ್ಯವನ್ನು ತರಲಿ.

ಇಂದು, ದೇಶ ಸ್ವಾತಂತ್ರ್ಯದ ದಿನವನ್ನು ಆಚರಿಸುತ್ತಿರುವಾಗ, ದೇಶದ ವಿವಿಧ ಭಾಗದಲ್ಲಿರುವ ಜನರು, ಭಾರೀ ಮಳೆ ಮತ್ತು ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ನಾನು ಅವರಿಗೆ ಸಂತಾಪ ಸೂಚಿಸುತ್ತೇನೆ. ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಮತ್ತು ಇತರ ಸಂಸ್ಥೆಗಳು ಅಂದರೆ ಎನ್.ಡಿ.ಆರ್.ಎಫ್. ಜನರ ಸಂಕಷ್ಟ ನಿವಾರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಗಲಿರುಳು ಶ್ರಮಿಸುತ್ತಿವೆ.

ಇಂದು, ನಾವು ಈ ಪವಿತ್ರ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಾನು, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಹಿಂಸೆಯ ಮಾಧ್ಯಮದ ಮೂಲಕ ಸತ್ಯಾಗ್ರಹ ಕೈಗೊಂಡು, ಬಲಿದಾನ ಮಾಡಿದ, ತಮ್ಮ ಯೌವನವನ್ನು ಸೆರೆಮನೆಯಲ್ಲಿ ಕಳೆದ, ನೇಣಿಗೆ ಕೊರಳೊಡ್ಡಿದ ಎಲ್ಲರಿಗೂ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ದೇಶ ಬಾಪೂ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. ಅದೇ ರೀತಿ, ಸ್ವಾತಂತ್ರ್ಯ ದೊರೆತ ದಿನದಿಂದ ಹಲವು ವರ್ಷಗಳಲ್ಲಿ ಅಸಂಖ್ಯಾತ ಜನರು ದೇಶದ ಭದ್ರತೆ, ಪ್ರಗತಿ ಮತ್ತು ಶಾಂತಿಗಾಗಿ ತಮ್ಮದೇ ಕೊಡುಗೆ ನೀಡಿದ್ದಾರೆ. ಇಂದು, ನಾನು ಜನರ ಆಶೋತ್ತರಗಳನ್ನು ಈಡೇರಿಸಲು, ಶಾಂತಿ ಮತ್ತು ಸಮೃದ್ಧಿಯ ಸ್ವತಂತ್ರ ಭಾರತಕ್ಕೆ ಕೊಡುಗೆ ನೀಡಿದ ಎಲ್ಲ ಜನರಿಗೂ ನಮನ ಸಲ್ಲಿಸುತ್ತೇನೆ.

ಹೊಸ ಸರ್ಕಾರದ ರಚನೆಯಾದ ತರುವಾಯ, ಕೆಂಪುಕೋಟೆಯ ಮೇಲಿಂದ ನಿಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡುವ ಅವಕಾಶ ನನಗೆ ಮತ್ತೊಮ್ಮೆ ಲಭಿಸಿದೆ. ಹೊಸ ಸರ್ಕಾರ ರಚನೆಯಾಗಿ 10 ವಾರವೂ ಕಳೆದಿಲ್ಲ. ಆದರೆ, ಈ ಅಲ್ಪ 10 ವಾರಗಳ ಅವಧಿಯಲ್ಲಿ, ಎಲ್ಲ ದಿಕ್ಕಿನಲ್ಲಿ, ಎಲ್ಲ ಕ್ಷೇತ್ರದಲ್ಲಿ ಪ್ರಯತ್ನಗಳು ಸಾಗಿದ್ದು, ಹೊಸ ಆಯಾಮ ನೀಡಲಾಗಿದೆ. ಸಾರ್ವಜನಿಕರು ನಮಗೆ ಭರವಸೆಗಳು, ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ನಾವು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ನಿಮ್ಮ ಸೇವೆಗೆ ಸಂಪೂರ್ಣವಾಗಿ ಶ್ರದ್ಧೆಯಿಂದ ಸಮರ್ಪಿಸಿಕೊಳ್ಳುತ್ತೇವೆ.

ವಿಧಿ 370 ಮತ್ತು 35 ಎ ಯನ್ನು 10 ವಾರಗಳ ಒಳಗಾಗಿ ತೆರವು ಮಾಡಿರುವುದು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೇವಲ 10 ವಾರಗಳಲ್ಲಿ ನಾವು ನಮ್ಮ ಮುಸ್ಲಿಂ ಮಹಿಳೆಯರ ಹಕ್ಕು ಸಂರಕ್ಷಿಸಲು ತ್ರಿವಳಿ ತಲಾಖ್ ವಿರುದ್ಧ ಶಾಸನ ತರುವ ಮೂಲಕ, ಭಯೋತ್ಪಾದನೆ ನಿಗ್ರಹಕ್ಕಾಗಿ ಮತ್ತು ಕಾನೂನನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ತಿದ್ದುಪಡಿಗಳನ್ನು ತಂದಿದ್ದೇವೆ, ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 90 ಸಾವಿರ ಕೋಟಿ ರೂಪಾಯಿ ವರ್ಗಾವಣೆ ಮಾಡುವ ಘೋಷಣೆಗಳನ್ನು ಮಾಡಿದ್ದೇವೆ.

ಕೃಷಿಕ ಸಮುದಾಯದ ನಮ್ಮ ಸೋದರರು ಮತ್ತು ಸಹೋದರಿಯರು, ನಮ್ಮ ಸಣ್ಣ ಉದ್ದಿಮೆದಾರರು ಎಂದಿಗೂ ತಮಗೂ ಪಿಂಚಣಿ ಯೋಜನೆ ದೊರಕುತ್ತದೆ ಮತ್ತು ತಮ್ಮ ದೇಹ ಕೃಶವಾಗುತ್ತಾ ಹೋಗುವಾಗ ಮತ್ತು ಬೆಂಬಲದ ಅಗತ್ಯವಿರುವ 60 ವರ್ಷದ ಬಳಿಕ ಗೌರವದ ಬದುಕು ಬಾಳಬಹುದು ಎಂಬ ಕಲ್ಪನೆಯನ್ನೂ ಇಟ್ಟುಕೊಂಡಿರಲಿಲ್ಲ. ನಾವು ಈ ಉದ್ದೇಶಕ್ಕಾಗಿ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ.

https://ssl.gstatic.com/ui/v1/icons/mail/images/cleardot.gif

ಜಲ ಸಂಕಷ್ಟ ಈ ದಿನಗಳಲ್ಲಿ ದೊಡ್ಡ ಸುದ್ದಿಯಾಗಿದೆ. ನೀರಿನ ಬಿಕ್ಕಟ್ಟು ನಮಗೆ ಸನ್ನಿಹಿತ ಎಂದು ಹೇಳಲಾಗುತ್ತಿದೆ. ಇಂಥ ಪರಿಸ್ಥಿತಿಯನ್ನು ನಿರೀಕ್ಷಿಸಿ, ಜಲ ಶಕ್ತಿ ಎಂಬ ಸಮರ್ಪಿತ ನೂತನ ಸಚಿವಾಲಯದ ರಚನೆಯ ಪ್ರಕಟಣೆ ಮಾಡಿದ್ದೇವೆ. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರ ಒಟ್ಟಾಗಿ ನೀರಿನ ಬಿಕ್ಕಟ್ಟು ನಿವಾರಣೆಗೆ ನೀತಿಗಳನ್ನು ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಾರೆ.

ನಮ್ಮ ದೇಶಕ್ಕೆ ಉತ್ತಮ ಆರೋಗ್ಯ ಸೌಲಭ್ಯದ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ವೈದ್ಯರುಗಳ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಲು ನಮಗೆ ಹೊಸ ಕಾನೂನುಗಳ, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ, ಹೊಸ ಚಿಂತನೆಗಳ ಮತ್ತು ಯುವಜನರು ವೈದ್ಯಕೀಯ ವೃತ್ತಿಯನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನಾವು ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆಯನ್ನು ತರಲು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಕಾನೂನು ರೂಪಿಸಿದ್ದೇವೆ.

ಇತ್ತೀಚಿನ ದಿನಗಳಲ್ಲಿ ನಾವು ವಿಶ್ವದಾದ್ಯಂತ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ನೋಡುತ್ತಿದ್ದೇವೆ, ಭಾರತವು ಎಂದಿಗೂ ತನ್ನ ಮಗುವನ್ನು ದುರ್ಬಲವಾಗಲು ಬಿಡುವುದಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಗೆ ಬಲಿಷ್ಠ ಕಾನೂನಿನ ಅಗತ್ಯವಿತ್ತು, ನಾವು ಅದನ್ನು ತಂದಿದ್ದೇವೆ.

ಸಹೋದರ ಮತ್ತು ಸಹೋದರಿಯರೇ, ನೀವು ನನಗೆ 2014-2019ರವರೆಗೆ 5 ವರ್ಷಗಳ ಕಾಲ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಿದಿರಿ. ನಾವು ಶ್ರೀಸಾಮಾನ್ಯರು ಮೂಲಭೂತ ಸೌಲಭ್ಯ ಪಡೆದುಕೊಳ್ಳಲು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡೆವು. ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಶ್ರೀಸಾಮಾನ್ಯರ ದೈನಂದಿನ ಅಗತ್ಯಗಳನ್ನು ಪೂರೈಸುವ ಸೌಲಭ್ಯ ಒದಗಿಸಲು ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಮತ್ತು ಬಡವರಿಗೆ, ಅಂಚಿನಲ್ಲಿರುವವರಿಗೆ, ಸಂತ್ರಸ್ತರಿಗೆ, ಶೋಷಿತರಿಗೆ, ವಂಚಿತರಿಗೆ ಮತ್ತು ಗುಡ್ಡಗಾಡು ಜನರಿಗೆ ಅನುಕೂಲ ಕಲ್ಪಿಸಲು ವಿಶೇಷ ಪ್ರಯತ್ನಗಳು ಸಾಗಿವೆ. ನಾವು ದೇಶವನ್ನು ಮರಳಿ ಅಭಿವೃದ್ಧಿಯ ಪಥಕ್ಕೆ ತರುವ ನಿಟ್ಟಿನಲ್ಲಿ ದಣಿವರಿಯದೇ ದುಡಿಯುತ್ತಿದ್ದೇವೆ. ಈಗ ಕಾಲ ಬದಲಾಗಿದೆ. 2014-2019 ನಿಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುವುದಾಗಿತ್ತು, 2019ರಿಂದೀಚೆಗಿನ ಅವಧಿ ನಿಮ್ಮ ಆಶೋತ್ತರಗಳನ್ನು ಮತ್ತು ಕನಸುಗಳನ್ನು ಈಡೇರಿಸುವುದಾಗಿದೆ.

21ನೇ ಶತಮಾನದ ಭಾರತ ಹೇಗೆ ಕಾಣಬೇಕು?

ಅದು ಎಷ್ಟು ವೇಗವಾಗಿ ಸಾಗಬೇಕು? ಎಷ್ಟು ವ್ಯಾಪಕವಾಗಿ, ಅದು ಕಾರ್ಯ ನಿರ್ವಹಿಸಬೇಕು, ಅದು ಯಾವ ಎತ್ತರ ತಲುಪಬೇಕು, ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಒಂದರ ನಂತರ ಒಂದರಂತೆ ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ಐದು ವರ್ಷಗಳಿಗೆ ಮಾರ್ಗಸೂಚಿಯನ್ನು ರೂಪಿಸುತ್ತಿದ್ದೇವೆ.

2014ರಲ್ಲಿ ನಾನು ದೇಶಕ್ಕೆ ಹೊಸಬನಾಗಿದ್ದೆ. 2013-14ರ ಚುನಾವಣೆಗೂ ಮುನ್ನ ನಾನು ದೇಶದಾದ್ಯಂತ ಸಂಚಾರ ಮಾಡಿದೆ ಮತ್ತು ದೇಶದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ಪ್ರತಿಯೊಬ್ಬರ ಮುಖದಲ್ಲೂ ಹತಾಶೆ ಎದ್ದು ಕಾಣುತ್ತಿದ್ದು, ಪ್ರತಿಯೊಬ್ಬರಲ್ಲೂ ಆಂತಕವಿತ್ತು. ದೇಶವು ಏನಾದರೂ ಮಾಡಲು ಸಾಧ್ಯವೇ ಎಂದು ಜನರು ಆಶ್ಚರ್ಯ ಪಡುತ್ತಿದ್ದರು? ಸರ್ಕಾರದ ಬದಲಾವಣೆಯೊಂದಿಗೆ ದೇಶ ಬದಲಾಗಬಹುದೇ?ಹತಾಶತೆಯ ಭಾವವು ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿತ್ತು. ಇದು ಅವರ ದೀರ್ಘಕಾಲೀನ ಅನುಭವದ ಫಲಿತಾಂಶವಾಗಿತ್ತು – ಭರವಸೆಗಳು ದೀರ್ಘಕಾಲ ಉಳಿದಿರಲಿಲ್ಲ, ಅವರು ಅತ್ಯಂತ ವೇಗವಾಗಿ ಹತಾಶೆಯ ಆಳದಲ್ಲಿ ಮುಳುಗಿಹೋಗುತ್ತಿದ್ದರು.

ಆದರೆ, ಐದು ವರ್ಷಗಳ ಕಠಿಣ ಪರಿಶ್ರಮದ ಬಳಿಕ 2019ರಲ್ಲಿ, ಸಾಮಾನ್ಯ ಜನರಿಗೆ ಮಾತ್ರವೇ ಸಮರ್ಪಣೆಯೊಂದಿಗೆ, ನನ್ನ ಹೃದಯದಲ್ಲಿ ನನ್ನ ರಾಷ್ಟ್ರವನ್ನಿಟ್ಟುಕೊಂಡು, ಕೇವಲ ಲಕ್ಷಾಂತರ ದೇಶವಾಸಿಗಳನ್ನು ಹೃದಯದಲ್ಲಿಟ್ಟುಕೊಂಡು, ಈ ಭಾವನೆಯೊಂದಿಗೆ ನಾವು ಮುಂದೆ ಸಾಗಿದೆವು, ಅದಕ್ಕಾಗಿಯೇ ಪ್ರತಿಯೊಂದು ಕ್ಷಣವನ್ನೂ ಮುಡಿಪಾಗಿಟ್ಟೆವು. 2019ರಲ್ಲಿ ನಾವು ಹೋದಾಗ, ನನಗೆ ಅಚ್ಚರಿಯಾಯಿತು. ಜನರ ಮನಃಸ್ಥಿತಿ ಬದಲಾಗಿತ್ತು. ನಿರಾಶೆ ಬದಲಾಗಿ ಭರವಸೆ ಮೂಡಿತ್ತು. ಪರಿಹಾರದೊಂದಿಗೆ ಕನಸುಗಳು ಬೆಸೆದಿದ್ದವು, ಸಾಧನೆ ಗೋಚರಿಸುತ್ತಿತ್ತು ಮತ್ತು ಶ್ರೀಸಾಮಾನ್ಯರ ಒಂದೇ ಧ್ವನಿ – ಹೌದು ನನ್ನ ದೇಶ ಬದಲಾಗುತ್ತದೆ.

ಶ್ರೀಸಾಮಾನ್ಯರ ಒಂದೇ ಒಂದು ಕೂಗಿತ್ತು – ಹೌದು, ನಾವೂ ಕೂಡ ದೇಶವನ್ನು ಬದಲಾಯಿಸುತ್ತೇವೆ, ನಾವು ಹಿಂದೆ ಉಳಿಯುವುದಿಲ್ಲ.

130 ಕೋಟಿ ಜನರ ಈ ಅಭಿವ್ಯಕ್ತಿ, ಈ ಭಾವನಾತ್ಮಕ ಕೂಗು, ನಮಗೆ ಹೊಸ ಭರವಸೆ ಮತ್ತು ಬಲ ತಂದುಕೊಟ್ಟಿತು.

ನಾವು ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಮಂತ್ರದೊಂದಿಗೆ ಆರಂಭ ಮಾಡಿದೆವು, ಆದರೆ, ಐದು ವರ್ಷಗಳಲ್ಲಿ ದೇಶದ ಜನರು ಎಲ್ಲರ ವಿಶ್ವಾಸ ಎಂಬುದರೊಂದಿಗೆ ದೇಶದ ಮನಃಸ್ಥಿತಿಯ ಚಿತ್ರಣವನ್ನೇ ಬರೆದರು. ಪ್ರತಿಯೊಬ್ಬರ ವಿಶ್ವಾಸ ಮತ್ತು ನಂಬಿಕೆ ಐದು ವರ್ಷಗಳ ಅವಧಿಯಲ್ಲಿ ಬೆಳೆದಿತ್ತು, ಅದು ದೇಶದ ಜನರ ಸೇವೆ ಮಾಡಲು ನಮಗೆ ಹೆಚ್ಚಿನ ಶಕ್ತಿ ನೀಡಿ ನಿರಂತರವಾಗಿ ನಮ್ಮನ್ನು ಪ್ರೇರೇಪಿಸುತ್ತಿದೆ.

ನಾನು ಇತ್ತೀಚಿನ ಚುನಾವಣೆಯಲ್ಲಿ ನೋಡಿದ್ದೇನೆ, ಮತ್ತು ಆ ಸಮಯದಲ್ಲಿ ನಾನು ಹೇಳಿದ್ದೇನೆಂದರೆ ಯಾವುದೇ ರಾಜಕಾರಣಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಯಾವುದೇ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ,ಮೋದಿಯೂ ಸ್ಪರ್ಧಿಸುತ್ತಿಲ್ಲ ಅಥವಾ ಮೋದಿಯ ಸ್ನೇಹಿತರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ದೇಶದ ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, 130 ಕೋಟಿ ದೇಶವಾಸಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ತಮ್ಮ ಸ್ವಂತ ಕನಸುಗಳಿಗಾಗಿ ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ನೈಜ ಸ್ವಭಾವ ಕಂಡುಬಂತು.

ನನ್ನ ದೇಶವಾಸಿಗಳೇ, ಸಮಸ್ಯೆಗೆ ಪರಿಹಾರ ಎಂದರೆ - ಕನಸುಗಳ ಕಾಲ, ದೃಢ ನಿಶ್ಚಯ ಮತ್ತು ಸಾಧನೆಯೊಂದಿಗೆ - ನಾವು ಈಗ ಒಟ್ಟಿಗೆ ನಡೆಯಬೇಕು. ಸಮಸ್ಯೆಗಳು ಪರಿಹಾರವಾದಾಗ ಸ್ವಾವಲಂಬನೆಯ ಪ್ರಜ್ಞೆ ಬೆಳೆಯುತ್ತದೆ ಎಂಬುದು ಸ್ಪಷ್ಟವಾಗಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಸ್ವಾವಲಂಬನೆಯ ವೇಗಕ್ಕೆ ಚೈತನ್ಯ ನೀಡುತ್ತವೆ. ಒಮ್ಮೆ ಸ್ವಾವಲಂಬನೆ ಬಂದಾಗ, ಸ್ವಾಭಿಮಾನವು ಸ್ವಯಂಚಾಲಿತವಾಗಿ ಬೆಳೆಯುತ್ತದೆ ಮತ್ತು ಸ್ವಾಭಿಮಾನವು ಬಲವಾದ ಸಾಮರ್ಥ್ಯವನ್ನು ಹೊಂದಿರುತ್ತದೆ. ಸ್ವಾಭಿಮಾನದ ಶಕ್ತಿ ಎಲ್ಲಕ್ಕಿಂತ ಮಿಗಿಲಾದದ್ದು ಮತ್ತು ಯಾವಾಗ ಪರಿಹಾರ, ಸಂಕಲ್ಪ, ದಕ್ಷತೆ, ಸ್ವಾಭಿಮಾನ ಇರುತ್ತದೋ, ಆಗ ಯಶಸ್ಸಿನ ದಾರಿಯಲ್ಲಿ ಯಾವುದೂ ಅಡ್ಡಿ ಬರಲು ಸಾಧ್ಯವಿಲ್ಲ ಮತ್ತು ಇಂದು ದೇಶವು ಸ್ವಾಭಿಮಾನವನ್ನು ಅನುಭವಿಸುತ್ತಿದೆ.

ಇಂದು, ಈ ಸ್ವಾಭಿಮಾನದೊಂದಿಗೆ ನಾವು, ಯಶಸ್ಸಿನ ಹೊಸ ಎತ್ತರವನ್ನು ಮುಟ್ಟಲು ಮುಂದಡಿ ಇಟ್ಟಿದ್ದೇವೆ. ನಾವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದಾಗ, ನಾವು ಪ್ರತ್ಯೇಕವಾಗಿ ಚಿಂತಿಸಬಾರದು. ಕಷ್ಟಗಳು ಇರುತ್ತವೆ. ಮೆಚ್ಚುಗೆ ಪಡೆಯಲು ಅರೆ ಮನಸ್ಸಿನ ಪ್ರಯತ್ನಗಳನ್ನು ಮಾಡಿದರೆ ದೇಶದ ಕನಸುಗಳನ್ನು ನನಸು ಮಾಡಲು ನೆರವಾಗುವುದಿಲ್ಲ. ನಾವು ಸಮಸ್ಯೆಗಳನ್ನು ಮೂಲೋತ್ಪಾಟನೆ ಮಾಡಲು ಶ್ರಮಿಸಬೇಕು.

ಹೇಗೆ ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಮತ್ತು ಸೋದರಿಯರು ತಮ್ಮ ತಲೆಯ ಮೇಲೆ ತೂಗುತ್ತಿದ್ದ ತ್ರಿವಳಿ ತಲಾಖ್ ಎಂಬ ತೂಗುಗತ್ತಿಯ ಭಯದಿಂದ ಬಾಳುತ್ತಿದ್ದರು ಎಂಬುದನ್ನು ನೀವು ನೋಡಿರಬಹುದು. ಅವರು ತ್ರಿವಳಿ ತಲಾಖ್ ಗೆ ಒಳಗಾಗಿಲ್ಲದಿದ್ದರೂ, ಯಾವ ಸಮಯದಲ್ಲಿ ಬೇಕಾದರೂ ಆಗಬಹುದು ಎಂಬ ಭಯದಲ್ಲೇ ಇರುತ್ತಿದ್ದರು. ಹಲವು ಇಸ್ಲಾಮಿಕ್ ರಾಷ್ಟ್ರಗಳು ಈ ಅನಿಷ್ಠ ಪದ್ಧತಿಯನ್ನು ಬಹಳ ಹಿಂದೆಯೇ ರದ್ದುಗೊಳಿಸಿದ್ದವು. ಆದರೆ, ಕೆಲವು ಕಾರಣಗಳಿಗಾಗಿ ನಾವು, ನಮ್ಮ ಮುಸ್ಲಿಂ ಮಾತೆಯರಿಗೆ, ಸೋದರಿಯರಿಗೆ ಅವರ ಹಕ್ಕು ಕೊಡಲು ಹಿಂಜರಿಯುತ್ತಿದ್ದೆವು. ನಾವು ಸತಿ ಪದ್ಧತಿ ರದ್ದು ಮಾಡುವುದಾದರೆ, ನಾವು ಹೆಣ್ಣು ಭ್ರೂಣ ಹತ್ಯೆ ಕೊನೆಗಾಣಿಸಲು ಶಾಸನ ತರುವುದಾದರೆ, ನಾವು ಬಾಲ್ಯ ವಿವಾಹದ ಬಗ್ಗೆ ಧ್ವನಿ ಎತ್ತಬಹುದಾದರೆ, ನಾವು ದೇಶದಲ್ಲಿ ವರದಕ್ಷಿಣೆ ಪದ್ಧತಿಯ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬಹುದಾದರೆ, ನಾವು ತ್ರಿವಳಿ ತಲಾಖ್ ವಿರುದ್ಧ ದನಿಯನ್ನೇಕೆ ಎತ್ತುತ್ತಿಲ್ಲ? ನಾವು ಈ ಮಹತ್ವದ ನಿರ್ಧಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳಿಗೆ ಗೌರವ ನೀಡಲೆಂದೇ, ಆ ಮೂಲಕ ನಮ್ಮ ಮುಸ್ಲಿಂ ಸೋದರಿಯರು ತಮ್ಮ ಸಮಾನ ಹಕ್ಕು ಪಡೆಯುತ್ತಾರೆಂಬ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸ್ಫೂರ್ತಿಯಿಂದಲೇ ತೆಗೆದುಕೊಂಡಿದ್ದೇವೆ; ಇದರಿಂದ ಅವರಲ್ಲಿ ಹೊಸ ವಿಶ್ವಾಸ ಗರಿಗೆದರಿದೆ; ಹೀಗಾಗಿ ಅವರೂ ಕೂಡ ಭಾರತದ ಅಭಿವೃದ್ಧಿಯ ಪಯಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇಂಥ ನಿರ್ಣಯಗಳು ರಾಜಕೀಯ ಲಾಭಕ್ಕಾಗಿ ಮಾಡುವಂಥದ್ದಲ್ಲ. ಅವು ನಮ್ಮ ಮಾತೆಯರಿಗೆ ಮತ್ತು ಸೋದರಿಯರಿಗೆ ಸುರಕ್ಷತೆಯನ್ನು ತರುತ್ತವೆ.

ಅದೇ ರೀತಿ, ನಾನು ಮತ್ತೊಂದು ಉದಾಹರಣೆ ನೀಡುತ್ತೇನೆ. ವಿಧಿ 370 ಮತ್ತು 35ಎ ತೆರವುಗೊಳಿಸದಿರುವುದರ ಹಿಂದಿನ ಕಾರಣವೇನು? ಇದು ಸರ್ಕಾರದ ಹೆಗ್ಗುರುತಾಗಿದೆ. ನಾವು ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಿಲ್ಲ, ನಾವು ಅದು ಬೆಳೆಯಲೂ ಬಿಡುವುದಿಲ್ಲ. ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ವಿಳಂಬ ಮಾಡಲೂ ಸಮಯವಿಲ್ಲ. ಈ ಹೊಸ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ಕಳೆದ 70 ವರ್ಷಗಳಲ್ಲಿ ಆಗದ ಕಾರ್ಯವನ್ನು 70 ದಿನಗಳಲ್ಲಿ ಮಾಡಿದ್ದೇವೆ. ವಿಧಿ 370 ಮತ್ತು 35ಎ ಅನ್ನು ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಮೂರನೇ ಎರಡರಷ್ಟು ಬಹುಮತದೊಂದಿಗೆ ರದ್ದು ಮಾಡಿದ್ದೇವೆ. ಇದರ ಅರ್ಥ ಪ್ರತಿಯೊಬ್ಬರಿಗೂ ಈ ನಿರ್ಧಾರ ಬೇಕಿತ್ತು, ಆದರೆ, ಯಾರಾದರೂ ಇದನ್ನು ಆರಂಭಿಸಲಿ ಮತ್ತು ಮುಂದೆ ತೆಗೆದುಕೊಂಡು ಹೋಗಲಿ ಎಂದು ಕಾಯುತ್ತಿದ್ದರು. ನಾನು ಈ ಸವಾಲನ್ನು ಪೂರೈಸಲು ನನಗೆ ನನ್ನ ದೇಶವಾಸಿಗಳು ನೀಡಿದ್ದ ಕಾರ್ಯ ಪೂರೈಸಲು ಮುಂದೆ ಬಂದೆ. ನಾನು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ನಾವು ಜಮ್ಮು ಮತ್ತು ಕಾಶ್ಮೀರವನ್ನು ಪುನರ್ ಸಂಘಟನೆ ಮಾಡಲು ಹೆಜ್ಜೆ ಇಟ್ಟಿದ್ದೇವೆ. 70 ವರ್ಷಗಳಿಂದ ಎಲ್ಲ ಸರ್ಕಾರ ಮತ್ತು ಹಲವು ಜನರು ಏನಾದರೂ ಮಾಡಲು ಪ್ರಯತ್ನ ಮಾಡಿದ್ದರು.

ನಿರೀಕ್ಷಿತ ಫಲಿತಾಂಶಗಳು ಬರಲಿಲ್ಲ, ಯಾವಾಗ ಅಪೇಕ್ಷಿತ ಫಲಿತಾಂಶ ಸಾಧ್ಯವಾಗುವುದಿಲ್ಲವೋ, ಆಗ ಹೊಸದಾಗಿ ಚಿಂತಿಸುವ ಮತ್ತು ಹೊಸ ಕ್ರಮ ಕೈಗೊಳ್ಳುವ ಅಗತ್ಯ ಇರುತ್ತದೆ. ಜಮ್ಮು –ಕಾಶ್ಮೀರ ಮತ್ತು ಲಡಾಖ್ ನ ಜನರ ಆಶೋತ್ತರಗಳು ಈಡೇರಬೇಕು, ಇದು ನಮ್ಮ ಜವಾಬ್ದಾರಿ. ಅವರ ಕನಸುಗಳಿಗೆ ಹೊಸ ರೆಕ್ಕೆ ಕಟ್ಟುವುದು ನಮ್ಮ ಸಂಘಟಿತ ಜವಾಬ್ದಾರಿ. ಈ ಜವಾಬ್ದಾರಿ ನನ್ನ 130 ಕೋಟಿ ದೇಶವಾಸಿಗಳ ಹೆಗಲ ಮೇಲೂ ಇದೆ. ಈ ಬದ್ಧತೆಯನ್ನು ಪೂರೈಸಲು, ನಾವು ಮಾರ್ಗದಲ್ಲಿ ಅಡ್ಡಿಯಾಗಿದ್ದ ಎಲ್ಲ ಅಡೆತಡೆಗಳ ತೆರವಿನ ಪ್ರಯತ್ನ ಮಾಡಿದೆವು.

ಕಳೆದ ಎಪ್ಪತ್ತು ವರ್ಷಗಳಿಂದ ಇದ್ದ ವ್ಯವಸ್ಥೆ ಪ್ರತ್ಯೇಕತೆಯನ್ನು ಉಲ್ಬಣಿಸುವಂತೆ ಮಾಡಿ, ಭಯೋತ್ಪಾದನೆಗೆ ಜನ್ಮ ನೀಡಿತ್ತು. ಅದು ವಂಶಪಾರಂಪರ್ಯಾಡಳಿತಕ್ಕೆ ಉತ್ತೇಜನ ನೀಡಿತ್ತು ಮತ್ತು ಭ್ರಷ್ಟಾಚಾರ ಮತ್ತು ತಾರತಮ್ಯದ ಬುನಾದಿಯನ್ನು ಗಟ್ಟಿಗೊಳಿಸಿತ್ತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನ ಮಹಿಳೆಯರು ತಮ್ಮ ಹಕ್ಕು ಪಡೆಯಲು ನಾವು ಪ್ರಯತ್ನ ಮಾಡಬೇಕಿದೆ. ಅಲ್ಲಿ ವಾಸಿಸುತ್ತಿರುವ ನನ್ನ ದಲಿತ ಸೋದರ ಸೋದರಿಯರು ಇಷ್ಟು ದಿನದಿಂದ ವಂಚಿತರಾಗಿರುವ ತಮ್ಮ ಹಕ್ಕು ಪಡೆಯಲು ನಾವು ಪ್ರಯತ್ನ ಮಾಡಬೇಕಾಗಿದೆ, ದೇಶದ ಬುಡಕಟ್ಟು ಜನರು ಪಡೆಯುತ್ತಿರುವ ಹಕ್ಕುಗಳು ಜಮ್ಮು ಮತ್ತು ಕಾಶ್ಮೀರದ ಮತ್ತು ಲಡಾಖ್ ವಲಯದ ನನ್ನ ಸೋದರ ಸೋದರಿಯರಿಗೂ ಸಿಗುವಂತಾಗಬೇಕು. ಅಂಥ ಹಲವು ಸಮುದಾಯಗಳಿವೆ ಅವು ಗುಜ್ಜರ್, ಬಕ್ರಾವಲ್, ಗದ್ದಿಗಳು, ಸಿಪ್ಪಿಗಳು ಅಥವಾ ಬಾಲ್ತಿ – ಈ ಎಲ್ಲ ಸಮುದಾಯಗಳನ್ನೂ ರಾಜಕೀಯ ಹಕ್ಕಿನೊಂದಿಗೆ ಸಬಲೀಕರಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಫಾಯಿ ಕರ್ಮಚಾರಿ ಸೋದರ ಸೋದರಿಯರಿಗೆ ಕಾನೂನಿನ ನಿರ್ಬಂಧಗಳಿದ್ದವು ಎಂಬುದು ಸೋಜಿಗದ ಸಂಗತಿ. ಅವರ ಕನಸುಗಳನ್ನು ದಮನ ಮಾಡಲಾಗಿತ್ತು. ಈಗ, ನಾವು ಅವರನ್ನು ಸಂಕೋಲೆಗಳಿಂದ ಮುಕ್ತಗೊಳಿಸಿದ್ದೇವೆ. ಭಾರತವನ್ನು ವಿಭಜಿಸಿದಾಗ,ಕೋಟ್ಯಂತರ ಜನರು ತಮ್ಮದು ಯಾವುದೇ ತಪ್ಪಿಲ್ಲದಿದ್ದರೂ, ತಮ್ಮ ಪೂರ್ವಜರ ಮನೆಗಳನ್ನು ಬಿಟ್ಟು ಹೋಗಬೇಕಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದವರಿಗೆ ಮಾನವ ಹಕ್ಕುಗಳೂ ಸಿಗಲಿಲ್ಲ ಪೌರತ್ವದ ಹಕ್ಕೂ ದೊರಕಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಗಿರಿ ಪ್ರದೇಶದ ಜನರೂ ವಾಸಿಸುತ್ತಿದ್ದಾರೆ. ನಾವು ಅವರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತಿಸಿದ್ದೇವೆ.

ನನ್ನ ಆತ್ಮೀಯ ದೇಶವಾಸಿಗಳೇ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನ ಶಾಂತಿ ಮತ್ತು ಸಮೃದ್ಧಿ ಭಾರತಕ್ಕೆ ಒಂದು ಸ್ಫೂರ್ತಿಯಾಗಿದೆ. ಅವರು ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದಾಗಿದೆ. ನಾವು ಅವರ ಗತ ವೈಭವವನ್ನು ಮರಳಿಸಲು ಪ್ರಯತ್ನ ಮಾಡುವ ಅಗತ್ಯವಿದೆ. ಇತ್ತೀಚಿನ ಕ್ರಮದ ನಂತರ ಜಾರಿಗೆ ಬಂದ ಹೊಸ ವ್ಯವಸ್ಥೆಯು ರಾಜ್ಯದ ಜನರಿಗೆ ನೇರವಾಗಿ ಅನುಕೂಲವಾಗುವಂತಹ ಸೌಲಭ್ಯಗಳನ್ನು ಸೃಷ್ಟಿಸುತ್ತದೆ. ಈಗ ಯಾರು ಬೇಕಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇತರ ಭಾರತೀಯರಂತೆಯೇ ದೆಹಲಿ ಸರ್ಕಾರವನ್ನು ಸಂಪರ್ಕಿಸಬಹುದು. ಈಗ ಈ ಎರಡರ ನಡುವೆ ಯಾವುದೇ ಅಡ್ಡಿ ಇಲ್ಲ. ನಾವು ಒಂದು ವ್ಯವಸ್ಥೆಯನ್ನು ರೂಪಿಸಿದ್ದೇವೆ. 370 ಮತ್ತು 35 ಎ ರದ್ದು ಮಾಡುವ ನಮ್ಮ ಇತ್ತೀಚಿನ ಕ್ರಮವನ್ನು ಇಡೀ ದೇಶ ಮತ್ತು ಎಲ್ಲ ರಾಜಕೀಯ ಪಕ್ಷಗಳ ಜನರೂ ನಿರೀಕ್ಷೆಗೂ ಮೀರಿ ಸ್ವಾಗತಿಸಿದ್ದಾರೆ. ಕೆಲವರು ನೇರವಾಗಿ ನಮಗೆ ಬೆಂಬಲ ನೀಡಿದ್ದರೆ, ಮತ್ತೆ ಕೆಲವರು ತಮ್ಮ ಮೌನ ಬೆಂಬಲ ನೀಡಿದ್ದಾರೆ. ಆದರೆ, ಅಧಿಕಾರದ ಕಾರಿಡಾರ್ ನಲ್ಲಿ, ಮತಬ್ಯಾಂಕ್ ರಾಜಕಾರಣದ ಲಾಭ ಪಡೆಯುವ ಪ್ರಯತ್ನದಲ್ಲಿ, ಕೆಲವರು ವಿಧಿ 370ರ ಪರವಾಗಿ ಮಾತನಾಡುತ್ತಿದ್ದಾರೆ. 370ರ ಪರವಾಗಿ ಮಾತನಾಡುವವರಿಂದ ದೇಶ, ಈ ವಿಧಿ 370 ಮತ್ತು 35 ಎ ಅಷ್ಟೊಂದು ಮಹತ್ವವೇ ಎಂಬ ಪ್ರಶ್ನೆಗ ಉತ್ತರ ಬಯಸುತ್ತದೆ.

 ವಿಧಿ 370 ಅಷ್ಟೊಂದು ಮಹತ್ವದ್ದಾಗಿದ್ದರೆ, ಕಳೆದ 70 ವರ್ಷಗಳಿಂದ ಬಹುಮತವಿದ್ದಾಗ್ಯೂ ಆಡಳಿತ ಪಕ್ಷಗಳು ಅದನ್ನು ಶಾಶ್ವತಗೊಳಿಸಲಿಲ್ಲ? ಅದನ್ನು ಏಕೆ ತಾತ್ಕಾಲಿಕ ಮಾಡಲಾಗಿತ್ತು? ಅಷ್ಟೊಂದು ಬದ್ಧತೆ ಇದ್ದಿದ್ದರೆ, ನೀವು ಮುಂದಡಿ ಇಟ್ಟು ಅದನ್ನು ಶಾಶ್ವತ ಮಾಡಬಹುದಾಗಿತ್ತು. ಇದರ ಅರ್ಥ ನಿಮಗೆಲ್ಲರಿಗೂ ಗೊತ್ತಿತ್ತು, ಕೈಗೊಳ್ಳಲಾಗಿದ್ದ ನಿರ್ಧಾರ ಸರಿಯಲ್ಲ ಎಂಬುದು. ಆದರೆ, ಅದನ್ನು ತಿದ್ದುಪಡಿ ಮಾಡುವ ಧೈರ್ಯ ಮತ್ತು ಇಚ್ಛಾಶಕ್ತಿ ನಿಮಗೆ ಇರಲಿಲ್ಲ. ನಿಮಗೆ ರಾಜಕೀಯ ಭವಿಷ್ಯದ ಕಾಳಜಿ ಕಾಡುತ್ತಿತ್ತು. ನನಗೆ, ದೇಶದ ಭವಿಷ್ಯವೇ ಎಲ್ಲ. ರಾಜಕೀಯ ಭವಿಷ್ಯಕ್ಕೆಅರ್ಥವೇ ಇಲ್ಲ.

ನಮ್ಮ ಸಂವಿಧಾನ ರಚನಾಕಾರರು ಮತ್ತು ಮಹಾ ಮಹಿಮರಾದ ಸರ್ದಾರ್ ವಲ್ಲಭ ಭಾಯ್ ಪಟೇಲ್ ರಂಥವರು ಅತ್ಯಂತ ಕಷ್ಟದ ಸಂದರ್ಭದಲ್ಲೂ ರಾಷ್ಟ್ರೀಯ ಏಕತೆ ಮತ್ತು ರಾಜಕೀಯ ಏಕೀಕರಣವನ್ನು ಗಮನದಲ್ಲಿಟ್ಟುಕೊಂಡು ಇಂಥ ಕಠಿಣ ನಿರ್ಧಾರ ಕೈಗೊಂಡಿದ್ದರು. ರಾಷ್ಟ್ರೀಯ ಏಕತೆಯ ನಿಟ್ಟಿನಲ್ಲಿ ನಡೆದ ಪ್ರಯತ್ನ ಯಶಸ್ವಿಯಾಗಿತ್ತು, ಆದರೆ, 370ನೇ ವಿಧಿ ಮತ್ತು 35 ಎ ಯಿಂದಾಗಿ ಕೆಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಇಂದು, ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವಾಗ, ಈಗ ದೇಶದ ಪ್ರತಿಯೊಬ್ಬರೂ ಒಂದು ರಾಷ್ಟ್ರ, ಒಂದು ಸಂವಿಧಾನ ಬಗ್ಗೆ ಮಾತನಾಡಬಹುದು ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಾವು ಸರ್ದಾರ್ ಅವರ ಕನಸಾಗಿದ್ದ ಏಕ ಭಾರತ ಶ್ರೇಷ್ಠ ಭಾರತವನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ನಾವು ದೇಶದ ಏಕತೆಯನ್ನು ಬಲಪಡಿಸುವಂಥ ಅಂಥ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಒಗ್ಗೂಡಿಸುವ ಶಕ್ತಿಯಾಗಿ ಸೇವೆ ಸಲ್ಲಿಸಬೇಕು ಮತ್ತು ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಇದು ಕೇವಲ ಒಂದು ಮಧ್ಯಂತರ ಕ್ರಮವಲ್ಲ, ಬದಲಾಗಿ ನಿರಂತರ ಪ್ರಕ್ರಿಯೆ.

ಜಿಎಸ್ಪಿ ಮೂಲಕ ನಾವು ಒಂದು ರಾಷ್ಟ್ರ, ಒಂದು ತೆರಿಗೆ ಕನಸು ನನಸಾಗಿಸಿದ್ದೇವೆ. ಅದೇ ರೀತಿ, ಇಂಧನ ವಲಯದಲ್ಲಿ ಇತ್ತೀಚೆಗೆ ನಾವು ಒಂದು ರಾಷ್ಟ್ರ, ಒಂದು ಗ್ರಿಡ್ ಸಾಧಿಸಿದ್ದೇವೆ.

ಅದೇ ರೀತಿ, ಒಂದು ರಾಷ್ಟ್ರ, ಒಂದು ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದೇವೆ ಹಾಗೂ ಪ್ರಸ್ತುತ ದೇಶದಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯನ್ನು ಪ್ರಜಾಸತ್ತಾತ್ಮಕ ಸ್ವರೂಪದಲ್ಲಿ ತೆಗೆದುಕೊಂಡು ಹೋಗಬೇಕು. ನಾವು ಇಂಥ ಹಲವು ಹೊಸ ಕಲ್ಪನೆಗಳನ್ನು ಸೇರಿಸಿ, ಆ ಹೊಸ ಕಲ್ಪನೆಗಳು ಏಕ ಭಾರತ ಶ್ರೇಷ್ಠ ಭಾರತದ ಕನಸು ನನಸಾಗಿಸುವಂತೆ ಮಾಡಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶ ಹೊಸ ಎತ್ತರಕ್ಕೆ ಏರಬೇಕು, ದೇಶ ಜಾಗತಿಕವಾಗಿ ಹೆಜ್ಜೆಗುರುತು ಮೂಡಿಸಬೇಕು. ಇದಕ್ಕಾಗಿ, ನಾವು ದೇಶದಲ್ಲಿ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ ನಮ್ಮ ವರ್ತನೆಗಳನ್ನು ಬದಲಾಯಿಸಕೊಳ್ಳಬೇಕು. ಇದನ್ನು ಒಂದು ಉಪಕಾರ ಎಂದು ಪರಿಗಣಿಸಬಾರದು, ಬದಲಾಗಿ ದೇಶದ ಉಜ್ವಲ ಭವಿಷ್ಯವನ್ನು ನಿರ್ಮಿಸುವಲ್ಲಿ ನಮ್ಮ ಕರ್ತವ್ಯದ ಕೊಡುಗೆ ಎಂದು ತಿಳಿಯಬೇಕು, ಏಕೆಂದರೆ, ನಾವು ಯಾವುದೇ ರೀತಿಯಲ್ಲಿ ಬಡತನದ ಕಬಂದ ಬಾಹುಗಳಿಂದ ಮುಕ್ತರಾಗಬೇಕು. ಕಳೆದ ಐದು ವರ್ಷಗಳಲ್ಲಿ ಬಡತನ ಅಳಿಸಲು ಅನೇಕ ಯಶಸ್ವೀ ಪ್ರಯತ್ನಗಳನ್ನು ಮಾಡಲಾಗಿದೆ. ನಾವು ತ್ವರಿತ ವೇಗದಲ್ಲಿ, ಹಿಂದೆಂದಿಗಿಂತಲೂ ಹೆಚ್ಚು ಯಶಸ್ಸು ಸಾಧಿಸಿದ್ದೇವೆ. ಬಡ ವ್ಯಕ್ತಿಗೆ ನೀಡುವ ಕನಿಷ್ಠ ಗೌರವ ಕೂಡ ಆತನ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಮತ್ತು ಸರ್ಕಾರದ ನೆರವಿಲ್ಲದೆಯೇ ಬಡತನದ ಬಂಧನದಿಂದ ಮುಕ್ತನಾಗುವ ಪ್ರಯತ್ನ ಮಾಡುವಂತೆ ಪ್ರೇರೇಪಿಸುತ್ತದೆ.

ಆಗ ಆತ ತನ್ನ ಸ್ವಂತ ಬಲದಿಂದ ಬಡತನವನ್ನು ಮಣಿಸಲು ಸಮರ್ಥನಾಗುತ್ತಾನೆ. ನಮ್ಮಲ್ಲಿ ಯಾರಿಗಾದರೂ ಪ್ರತಿಕೂಲತೆಯ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿ ಇದ್ದರೆ, ಅದು ನನ್ನ ಬಡ ಸಹೋದರ ಸಹೋದರಿಯರಿಗೆ ಮಾತ್ರ. ಬಡವರು ತಮ್ಮ ಮುಷ್ಟಿಯನ್ನು ಬಿಗಿ ಹಿಡಿದುಕೊಂಡು ತೀವ್ರ ಚಳಿಯಲ್ಲೂ ಬದುಕಬಲ್ಲರು. ಈ ಶಕ್ತಿಯನ್ನು ಅವರು ತನ್ನೊಳಗೆ ಇಟ್ಟುಕೊಂಡಿದ್ದಾರೆ. ಬನ್ನಿ, ಈ ಶಕ್ತಿಗೆ ನಮಸ್ಕರಿಸೋಣ ಮತ್ತು ಅವರ ದೈನಂದಿನ ಬದುಕಿನ ಸವಾಲುಗಳನ್ನು ನಿವಾರಿಸಲು ಸಹಾಯ ಮಾಡೋಣ.

ಬಡವರಿಗೆ ಏಕೆ ಶೌಚಾಲಯ ಇರಬಾರದು , ಮನೆಯಲ್ಲಿ ವಿದ್ಯುತ್ ಇರಬಾರದೇಕೆ, ವಾಸಿಸಲು ಮನೆ ಇಲ್ಲ ಏಕೆ, ನೀರು ಸರಬರಾಜು ಮತ್ತು ಬ್ಯಾಂಕ್ ಖಾತೆ ಏಕೆ ಇರಬಾರದು. ಅವರಿಗೆ ಲೇವಾದೇವಿದಾರರ ಬಳಿ ಹೋಗಿ ಏನಾದರೂ ಅಡವಿಟ್ಟು ಸಾಲಕ್ಕೆ ಕೈಚಾಚುವ ಅನಿವಾರ್ಯತೆ ಸೃಷ್ಟಿಸುವುದು ಏಕೆ? ಬನ್ನಿ ಬಡಜನರ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಆತ್ಮ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡೋಣ.

https://ssl.gstatic.com/ui/v1/icons/mail/images/cleardot.gif

ಸಹೋದರ ಸಹೋದರಿಯರೇ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಎಲ್ಲ ಸರ್ಕಾರಗಳೂ ತಮ್ಮದೇ ರೀತಿಯಲ್ಲಿ ಹಲವು ಕಾರ್ಯ ಮಾಡಿದ್ದಾರೆ. ಯಾವುದೇ ಪಕ್ಷ ಇರಲಿ, ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿನ ಪ್ರತಿಯೊಂದು ಸರ್ಕಾರ, ತಮ್ಮದೇ ಮಾರ್ಗದಲ್ಲಿ ಶ್ರಮಿಸಿದ್ದಾರೆ. ಆದರೂ ವಾಸ್ತವ ಏನೆಂದರೆ, ಭಾರತದಲ್ಲಿರುವ ಅರ್ಧಕ್ಕಿಂತ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಮಾತೆಯರು ಮತ್ತು ಸೋದರಿಯರು 2,3,5 ಕಿ.ಮೀ ಹೋಗಿ ನೀರು ಹೊತ್ತು ತರುವ ಸ್ಥಿತಿ ಇದೆ. ಅವರ ಬಹುತೇಕ ಜೀವನ ನೀರು ತರುವುದರಲ್ಲೇ ಕಳೆದು ಹೋಗುತ್ತದೆ. ಹೀಗಾಗಿ, ಈ ಸರ್ಕಾರ ಹೊಸದೊಂದು ಸವಾಲಿನ ಮೇಲೆ ಒತ್ತು ನೀಡಿದೆ, ಅದೇನೆಂದರೆ – ಪ್ರತಿಯೊಂದು ಮನೆಗೂ ನೀರಿನ ಲಭ್ಯತೆಯ ಖಾತ್ರಿ ಪಡಿಸುವುದು ಹೇಗೆ. ಪ್ರತಿಯೊಂದು ಮನೆಗೂ ನೀರು ಮತ್ತು ಶುದ್ಧ ಕುಡಿಯುವ ಹೇಗೆ ನೀರು ಲಭಿಸುತ್ತದೆ? ಹೀಗಾಗಿ, ನಾನು ಈ ಕೆಂಪು ಕೋಟೆಯ ಮೇಲಿಂದ ಇಂದು ಘೋಷಿಸುತ್ತೇನೆ, ನಾವು, “ಜಲ್- ಜೀವನ್’’ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಈ ಜಲ್ ಜೀವನ್ ಅಭಿಯಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕಾರ್ಯ ನಿರ್ವಹಿಸುತ್ತವೆ. ನಾವು ಈ ಅಭಿಯಾನಕ್ಕಾಗಿ ಮುಂಬರುವ ವರ್ಷಗಳಲ್ಲಿ 3.5ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡುವ ಭರವಸೆ ನೀಡುತ್ತೇವೆ. ಜಲ ಸಂರಕ್ಷಣೆ, ನೀರಾವರಿ, ಮಳೆ ನೀರು ಕೊಯ್ಲು, ಸಮುದ್ರದ ನೀರು ಅಥವಾ ತ್ಯಾಜ್ಯ ಜಲ ಸಂಸ್ಕರಣೆ ಮತ್ತು ಪ್ರತಿ ಹನಿ, ಹೆಚ್ಚು ಇಳುವರಿ, ರೈತರಿಗೆ ಸೂಕ್ಷ್ಮ ನೀರಾವರಿ ಕುರಿತಂತೆ ಕಾರ್ಯ ನಡೆಯಬೇಕು. ಜಲ ಸಂರಕ್ಷಣೆ ಅಭಿಯಾನಗಳನ್ನು ಆರಂಭಿಸಬೇಕು, ಸಾಮಾನ್ಯ ಜನರಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು, ಅವರ ಸೂಕ್ಷ್ಮತೆಯನ್ನು ಪ್ರಚೋದಿಸಿದರೆ, ಅವರು ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ; ಬಾಲ್ಯದಲ್ಲಿಯೇ ಮಕ್ಕಳಿಗೆ ಪಠ್ಯಕ್ರಮದ ಭಾಗವಾಗಿ ನೀರಿನ ಸಂರಕ್ಷಣೆಯ ಬಗ್ಗೆ ಕಲಿಸಬೇಕು. ಮುಂದಿನ ಐದು ವರ್ಷಗಳಲ್ಲಿ ನೀರಿನ ಸಂರಕ್ಷಣೆಗಾಗಿ ಮತ್ತು ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಲು ಕಳೆದ 70 ವರ್ಷಗಳಲ್ಲಿ ಮಾಡಿದ ನಾಲ್ಕು ಪಟ್ಟು ಹೆಚ್ಚು ಕೆಲಸವನ್ನು ನಾವು ಮಾಡಬೇಕಾಗಿದೆ ಎಂಬ ಛಲದೊಂದಿಗೆ ನಾವು ಮುಂದುವರಿಯಬೇಕು. ನಾವು ಇನ್ನು ದೀರ್ಘಕಾಲ ಕಾಯಲು ಸಾಧ್ಯವಿಲ್ಲ. ಶ್ರೇಷ್ಠ ಸಂತ ತಿರುವಳ್ಳುವರ್ ಅವರು ನೂರಾರು ವರ್ಷಗಳ ಹಿಂದೆ ಒಂದು ಪ್ರಮುಖ ವಿಷಯವನ್ನು ಹೇಳಿದ್ದರು, ಬಹುಶಃ ಆಗ ಯಾರೊಬ್ಬರೂ ನೀರಿನ ಬಿಕ್ಕಟ್ಟು ಮತ್ತು ನೀರಿನ ಮಹತ್ವದ ಬಗ್ಗೆ ಯೋಚಿಸಿರಲಿಕ್ಕಿಲ್ಲ.

ಆಗ ತಿರುವಳ್ಳುವರ್ ಅವರು ಹೇಳಿದ್ದರು ನೀರಿಂದ್ರಿ ಅಮಿಯಾಡು ಉಲಗನೆ ಅಂದರೆ, ನೀರು ಕಣ್ಮರೆಯಾಗುತ್ತಾ ಹೋದರೆ, ಆಗ ಪ್ರಕೃತಿಯ ಪ್ರಕ್ರಿಯೆಯೇ ಅಸ್ತವ್ಯಸ್ತವಾಗುತ್ತದೆ ಮತ್ತು ಅಂತಿಮವಾಗಿ ಕೊನೆಯಾಗುತ್ತದೆ. ಇದು ಸಂಪೂರ್ಣ ವಿನಾಶದ ಪ್ರಕ್ರಿಯೆಗೆ ನಾಂದಿ ಹಾಡುತ್ತದೆ.

ನಾನು ಹುಟ್ಟಿದ್ದು ಗುಜರಾತ್ ನಲ್ಲಿ. ಉತ್ತರ ಗುಜರಾತ್ ನಲ್ಲಿ ಒಂದು ಜೈನ ಯಾತ್ರಾ ಸ್ಥಳ ಇದೆ ಅದರ ಹೆಸರು ಮಹುದಿ. ಸುಮಾರು 100 ವರ್ಷಗಳ ಹಿಂದೆ ಅಲ್ಲಿ ಒಬ್ಬರು ಜೈನ್ ಸಂತರು ವಾಸಿಸುತ್ತಿದ್ದರು. ಅವರು ರೈತ ಕುಟುಂಬದಲ್ಲಿ ಜನಿಸಿದ್ದರು. ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರಾದರೂ, ಅದು ಜೈನ ಧರ್ಮದ ಪ್ರಭಾವದಲ್ಲಿ ನಡೆಸುತ್ತಿದ್ದರು. ಅವರು ನಂತರ ಬುಧಿ ಸಾಗರ್ ಜಿ ಮಹಾರಾಜ್ ಎಂಬ ಹೆಸರಿನ ಮುನಿಯಾದರು. ಅವರು 100 ವರ್ಷಗಳ ಹಿಂದೆ ಕೆಲವು ಗ್ರಂಥಗಳನ್ನು ಬಿಟ್ಟುಹೋದರು, ಅದರಲ್ಲಿ ಕಿರಾಣಿ ಅಂಗಡಿಗಳಲ್ಲಿ ನೀರನ್ನು ಮಾರಾಟ ಮಾಡುವ ಕಾಲ ಬರುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಸುಮಾರು 100 ವರ್ಷಗಳ ಹಿಂದೆ ಜೈನ ಮುನಿಯೊಬ್ಬರು ಬರೆದಿದ್ದ ವಿಷಯ ಇಂದು ನಿಜವಾಗುತ್ತದೆ ಎಂದು ನೀವು ಊಹಿಸಿಕೊಳ್ಳಲು ಸಾಧ್ಯವೇ. ನೂರು ವರ್ಷಗಳ ಹಿಂದಿನ ಭವಿಷ್ಯವಾಣಿ ಈಗ ವಾಸ್ತವವಾಗಿದೆ. ನಾವೀಗ ಕಿರಾಣಿ ಅಂಗಡಿಗಳಲ್ಲಿ ನೀರು ಖರೀದಿ ಮಾಡುತ್ತಿದ್ದೇವೆ.

ಪ್ರೀತಿಯ ದೇಶವಾಸಿಗಳೇ, ನಾವು ನಮ್ಮ ಪ್ರಯತ್ನಗಳಲ್ಲಿ ದಣಿದಿಲ್ಲ, ಇಲ್ಲ ಸ್ಥಗಿತಗೊಂಡಿಲ್ಲ ಅಥವಾ ಮುಂದೆ ಸಾಗಲು ಹಿಂಜರಿದಿಲ್ಲ.

ಜಲ ಸಂರಕ್ಷಣೆ ಕುರಿತ ಈ ಅಭಿಯಾನ ಕೇವಲ ಸರ್ಕಾರದ ಕ್ರಮವಾಗಿ ಉಳಿಯಬಾರದು. ಇದು ಸ್ವಚ್ಛ ಭಾರತದ ರೀತಿಯಲ್ಲಿ ಜನಾಂದೋಲನವಾಗಬೇಕು. ನಾವು ಈ ಆಂದೋಲನವನ್ನು ಶ್ರೀಸಾಮಾನ್ಯರ ಆದರ್ಶ, ಆಶಯ ಹಾಗೂ ಪ್ರಯತ್ನದೊಂದಿಗೆ ಮುನ್ನಡೆಸಿಕೊಂಡು ಹೋಗಬೇಕು.

ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶವು ಈಗ ನಾವು ಎಲ್ಲ ವಿಚಾರದಲ್ಲೂ ಪಾರದರ್ಶಕವಾಗಿರುವ ಹಂತವನ್ನು ತಲುಪಿದೆ.

ನಾವೀಗ ಸವಾಲುಗಳನ್ನು ನಮ್ಮ ತಲೆಯ ಮೇಲೆ ಹೊರುವ ಸಮಯ ಈಗ ಬಂದಿದೆ. ಕೆಲವೊಮ್ಮೆ ರಾಜಕೀಯ ಲಾಭವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ, ಆದರೆ ಅವು ನಮ್ಮ ದೇಶದ ಭವಿಷ್ಯದ ಪೀಳಿಗೆಯ ಬೆಳವಣಿಗೆಯ ದೃಷ್ಟಿಯಲ್ಲಿ ಬರುತ್ತವೆ. ನಾನು ಇಂದು ಕೆಂಪು ಕೋಟೆಯ ಮೇಲಿಂದ ಒಂದು ದೇಶದಲ್ಲಿನ ಜನಸಂಖ್ಯೆಯ ಸ್ಫೋಟದ ವಿಷಯವನ್ನು ಮುಖ್ಯವಾಗಿ ತಿಳಿಸಲು ಬಯಸುತ್ತೇನೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಹೊಸ ಹೊಸ ಸವಾಲುಗಳನ್ನು ಒಡ್ಡಿದೆ

ಇದನ್ನು ನೀವು ಸರ್ಕಾರ ರಚನೆಯಾದ ಕೂಡಲೇ ನೋಡಿರಬಹುದು, ಮತ್ತು ಕಳೆದ ಐದು ವರ್ಷಗಳಲ್ಲಿ ಸರ್ಕಾರ, ಹಲವು ಉನ್ನತಾಧಿಕಾರಿಗಳನ್ನು ತೆಗೆದುಹಾಕಿದೆ. ಅಂತ ಎಲ್ಲ ಜನರೂ ತೊಡಕುಂಟು ಮಾಡುತ್ತಿದ್ದರು, ಅವರಿಗೆ ದೇಶಕ್ಕೆ ಇನ್ನು ಮುಂದೆ ನಿಮ್ಮ ಸೇವೆಯ ಅಗತ್ಯವಿಲ್ಲ ಎಂದು ಹೇಳಿ ವಜಾ ಮಾಡಿದ್ದೇವೆ.

ವ್ಯವಸ್ಥೆಯಲ್ಲಿ ಬದಲಾವಣೆ ಇರಬೇಕು ಎಂದು ನಾನು ನಂಬುತ್ತೇನೆ, ಅದೇ ವೇಳೆ ಸಾಮಾಜಿಕ ನೆಲೆಯಲ್ಲಿಯೂ ಬದಲಾವಣೆ ಇರಬೇಕು. ಸಾಮಾಜಿಕ ಬದಲಾವಣೆಯ ಜೊತೆಗೆ ವ್ಯವಸ್ಥೆಯನ್ನು ನಡೆಸುತ್ತಿರುವ ಜನರ ನಂಬಿಕೆ ಮತ್ತು ಮನೋಸ್ಥಿತಿಯಲ್ಲಿನ ಬದಲಾವಣೆಯೂ ಅಗತ್ಯ. ಆಗ ಮಾತ್ರ ಅಪೇಕ್ಷಿತ ಫಲಿತಾಂಶವನ್ನು ಸಾಧಿಸಲು ಸಾಧ್ಯ.

ಸಹೋದರರೇ ಮತ್ತು ಸಹೋದರಿಯರೇ, ದೇಶವು ಸ್ವಾತಂತ್ರ್ಯಾನಂತರದ ಹಲವು ವರ್ಷಗಳ ಬಳಿಕ ಸೂಕ್ತ ಪಥದಲ್ಲಿದೆ.

ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದೇವೆ. ಈ ಸ್ವಾತಂತ್ರ್ಯವು ನಮ್ಮ ಸೈದ್ಧಾಂತಿಕ ಮೌಲ್ಯಗಳು, ನಡೆವಳಿಕೆ ಮತ್ತು ಸಂವೇದನಾಶೀಲತೆಯಷ್ಟೇ ಪವಿತ್ರವಾಗಿದೆ. ನಾನು ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗಲೆಲ್ಲಾ, ನಾನು ಪ್ರಸ್ತಾಪಿಸುವುದೇನೆಂದರೆ, ಅದನ್ನು ನಾನು ಪ್ರಚಾರಕ್ಕಾಗಿ ತಿಳಿಸುತ್ತಿಲ್ಲ, ಆದರೆ ಇಂದು ಆ ಬಗ್ಗೆ ಮಾತನಾಡಬೇಕು ಎಂದು ನನಗೆ ಅನಿಸಿದೆ, ನಾನು ಪದೇ ಪದೇ ಅಧಿಕಾರಿಗಳಿಗೆ, ಸ್ವಾತಂತ್ರ್ಯಾನಂತರದ ಹಲವು ವರ್ಷಗಳ ಬಳಿಕವೂ, ಕೆಂಪು ಟೇಪುಗಳನ್ನು ಕತ್ತರಿಸುವುದನ್ನು ಮತ್ತು ಶ್ರೀಸಾಮಾನ್ಯರ ಬದುಕಿನಲ್ಲಿ ಸರ್ಕಾರದ ಒಳಗೊಳ್ಳುವಿಕೆಯನ್ನು ತಗ್ಗಿಸಲು ಸಾಧ್ಯವಿಲ್ಲವೇ ಎಂದು ಕೇಳುತ್ತಿರುತ್ತೇನೆ.

ನನ್ನ ಅರ್ಥದಲ್ಲಿ ಸ್ವತಂತ್ರ ಭಾರತ ಎಂದರೆ, ಕ್ರಮೇಣವಾಗಿ ಸರ್ಕಾರದ ತನ್ನ ಜನರ ಬದುಕಿನಿಂದ ಹೊರಗೆ ಬರುವಂಥ ಪರಿಸರ ಸ್ನೇಹಿ ವ್ಯವಸ್ಥೆ ರೂಪಿಸುವುದೇ ಆಗಿದೆ. ಇದು ಜನರಿಗೆ ತಮ್ಮ ಮನಸ್ಸಿಗೆ ಒಪ್ಪುವಂಥ ಸ್ವಂತ ಗುರಿಯನ್ನು ನಿರ್ಧರಿಸುವ ಆಯ್ಕೆ ನೀಡುತ್ತದೆ ಮತ್ತು ರಾಷ್ಟ್ರದ ಹಿತದ ದೃಷ್ಟಿಯಲ್ಲಿ ಮತ್ತು ತಮ್ಮ ಕುಟುಂಬದ ಒಳಿತಿಗಾಗಿ ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ತಮ್ಮದೇ ದಿಕ್ಕಿನಲ್ಲಿ ಸಾಗಲು ಅವಕಾಶ ನೀಡುತ್ತದೆ.

ನಾಗರಿಕರಿಗೆ ಸರ್ಕಾರದ ಒತ್ತಡದ ಅನುಭವ ಆಗಬಾರದು, ಅದೇ ವೇಳೆ ಸಂಕಷ್ಟದ ಸಂದರ್ಭದಲ್ಲಿ, ಸರ್ಕಾರದ ಕೊರತೆಯೂ ಕಾಣಬಾರದು. ಸರ್ಕಾರದ ದಬ್ಬಾಳಿಕೆಯೂ ಇರಬಾರದು, ಕೊರತೆಯೂ ಇರಬಾರದು ನಾವೆಲ್ಲರೂ ನಮ್ಮ ಕನಸುಗಳೊಂದಿಗೆ ಮುಂದೆ ಸಾಗಬೇಕು. ಸರ್ಕಾರ ಸದಾ ಒಡನಾಡಿಯಂತೆ ನಮ್ಮ ಜೊತೆ ನಿಲ್ಲಬೇಕು. ಒಂದೊಮ್ಮೆ ಅಗತ್ಯ ಕಂಡುಬಂದಲ್ಲಿ, ಸರ್ಕಾರ ಸದಾ ನಮಗೆ ಬೆಂಬಲವಾಗಿ ಬೆನ್ನಹಿಂದೆ ನಿಲ್ಲುತ್ತದೆ ಎಂಬ ಖಾತ್ರಿ ಜನರಿಗೆ ಇರಬೇಕು. ಇಂಥ ವಾತಾವರಣ ನಾವು ನಿರ್ಮಾಣ ಮಾಡಲು ಸಾಧ್ಯವೇ?

ನಾವು ಹಲವು ಅನಗತ್ಯವಾದ ಕಾನೂನು ಮತ್ತು ನಿಯಮಗಳನ್ನು ಮಾಡಿದ್ದೇವೆ, ಇದನ್ನು ಅನಗತ್ಯವಾಗಿ ತೋರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಾನು ಪ್ರತಿನಿತ್ಯ ಒಂದು ಅನಗತ್ಯವಾದ ಕಾನೂನನ್ನು ರದ್ದು ಮಾಡಿದ್ದೇನೆ. ಶ್ರೀಸಾಮಾನ್ಯರಿಗೆ ಇದರ ಅರಿವಿಲ್ಲ. – ಪ್ರತಿ ನಿತ್ಯ ಒಂದು ಪುರಾತನ ಕಾಯಿದೆ ರದ್ದು ಮಾಡಿದ್ದೇನೆ ಎಂದರೆ, ಬಹುತೇಕ 1,450 ಕಾನೂನುಗಳನ್ನು ಶ್ರೀಸಾಮಾನ್ಯರ ಬದುಕಿಗೆ ಹೊರೆಯಾಗುವುದನ್ನು ಕಡಿಮೆ ಮಾಡಲಾಗಿದೆ. ಹೊಸ ಸರ್ಕಾರ, ಅಧಿಕಾರದಲ್ಲಿ ಕೇವಲ 10 ವಾರಗಳನ್ನು ಪೂರೈಸಿದೆ, ಈಗಾಗಲೇ ಸ್ವತಂತ್ರ ಭಾರತದ ಆಶಯಕ್ಕೆ ಅನುಗುಣವಾಗಿ ಸುಗಮ ಜೀವನಕ್ಕೆ ಅನುವಾಗುವಂತೆ ಮತ್ತೆ 60 ಕಾನೂನುಗಳನ್ನು ರದ್ದು ಮಾಡಲಾಗಿದೆ. ನಾವು ಸುಗಮ ಜೀವನಕ್ಕೆ ಗಮನ ಹರಿಸಲು ಬದ್ಧರಾಗಿದ್ದೇವೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.

ಇಂದು, ಸುಗಮ ವಾಣಿಜ್ಯ ನಡೆಸುವುದರಲ್ಲಿ ಸಾಕಷ್ಟು ಪ್ರಗತಿಯನ್ನು ಸಾಗಿಸಿದ್ದೇವೆ. ಜಾಗತಿಕ ಶ್ರೇಯಾಂಕದಲ್ಲಿ ನಾವು ಪ್ರಥಮ ಐದು ಸ್ಥಾನ ಪಡೆಯುವ ಗುರಿ ಹೊಂದಿದ್ದು, ಇದಕ್ಕಾಗಿ ಹಲವು ಸುಧಾರಣೆಗಳ ಅಗತ್ಯವಿದೆ; ಯಾರೇ ಆದರೂ ಸಣ್ಣ ವಾಣಿಜ್ಯ ಅಥವಾ ಕೈಗಾರಿಕೆ ಸ್ಥಾಪಿಸಲು ಬಯಸಿದಲ್ಲಿ, ಅವರು ಸಣ್ಣ ಮತ್ತು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದರು – ಅಂದರೆ ಹಲವಾರು ಅರ್ಜಿಗಳನ್ನು ತುಂಬುವುದು, ಕಚೇರಿಯ ಕಂಬದಿಂದ ಕಂಬಕ್ಕೆ ಓಡಾಡುವುದು, ಇಷ್ಟೆಲ್ಲಾ ಮಾಡಿದರೂ ಅವರಿಗೆ ಸೂಕ್ತ ಮಂಜೂರಾತಿ ದೊರಕುತ್ತಿರಲಿಲ್ಲ. ಈ ಸಂಕೀರ್ಣವಾದ ಜಾಲವನ್ನು ಬಿಚ್ಚುವ ಪ್ರಯತ್ನಗಳಲ್ಲಿ, ಸುಧಾರಣೆಯ ಮೇಲೆ ಸುಧಾರಣೆಗಳನ್ನು ತರುವುದು, ಕೇಂದ್ರ ಮತ್ತು ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದು, ನಗರ ಮತ್ತು ಮೆಟ್ರೋಪಾಲಿಟನ್ ಪುರಸಭೆಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದು, ನಾವು ‘ಸುಗಮ ವಾಣಿಜ್ಯ’ದ ಕಡೆಗೆ ಸಾಕಷ್ಟು ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು.

ಜಗತ್ತಿನಾದ್ಯಂತ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಂತಹ ದೊಡ್ಡ ದೇಶವು ದೊಡ್ಡ ಕನಸು ಕಾಣಬಹುದು ಮತ್ತು ಅಂತಹ ದೊಡ್ಡದಕ್ಕೆ ದಾಪುಗಾಲು ಹಾಕಬಹುದು. ಸುಗಮ ವಾಣಿಜ್ಯ ಒಂದು ಒಂದು ಮೈಲಿಗಲ್ಲಾಗಿದೆ. ನನ್ನ ಪರಮ ಗುರಿ ಈಗ ಸುಗಮ ಜೀವನ ನಡೆಸುವುದನ್ನು ಸಾಧಿಸುವುದಾಗಿದೆ. – ಅಲ್ಲಿ ಶ್ರೀಸಾಮಾನ್ಯನಿಗೆ ಸರ್ಕಾರ/ಅಧಿಕಾರಿಗಳ ಅನುಮತಿಗಾಗಿ ಬೆವರು ಹರಿಸುವಂತಿರಬಾರದು, ಆತ ತನ್ನ ಅರ್ಹ ಹಕ್ಕುಗಳನ್ನು ಸುಲಭವಾಗಿ ಪಡೆಯಬೇಕು ಈ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶ ಮುಂದೆ ಸಾಗಲೇಬೇಕು, ಆದರೆ ದೇಶವು ಈಗ ಅಧಿಕ ಪ್ರಗತಿಗಾಗಿ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ, ನಾವು ದೊಡ್ಡ ಹಾದಿಯನ್ನು ಹಿಡಿಯಬೇಕಾಗುತ್ತದೆ, ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕಾಗುತ್ತದೆ. ಭಾರತವು ಜಾಗತಿಕ ಗುಣಮಟ್ಟಕ್ಕೆ ತಲುಪಬೇಕಾದರೆ, ನಾವು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯವಿದೆ.

ನಿರಾಶಾದಾಯಕ ನಡೆವಳಿಕೆಗಳ ಹೊರತಾಗಿಯೂ, ಸಾಮಾನ್ಯ ಜನರು ಯಾವಾಗಲೂ ಉತ್ತಮ ವ್ಯವಸ್ಥೆಯ ಕನಸು ಕಾಣುತ್ತಾರೆ. ಅವರು ಉತ್ತಮ ಸಂಗತಿಗಳನ್ನು ಇಷ್ಟ ಪಡುತ್ತಾರೆ, ಅವರು ಅದರ ಅಭಿರುಚಿ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ನಾವು ಈ ಕಾಲಘಟ್ಟದಲ್ಲಿ ಆಧುನಿಕ ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದೇವೆ. ಇದು ಉದ್ಯೋಗವನ್ನು ಸೃಷ್ಟಿಸುತ್ತದೆ; ಇದು ಹೊಸ ವ್ಯವಸ್ಥೆ ರೂಪಿಸುತ್ತದೆ ಮತ್ತು ವಿವಿಧ ಆಶೋತ್ತರಗಳನ್ನು ಈಡೇರಿಸುತ್ತದೆ. ಅದು ಸಾಗರಮಾಲಾ ಯೋಜನೆ ಆಗಿರಲಿ ಅಥವಾ ಭಾರತ್ ಮಾಲಾ ಯೋಜನೆ ಆಗಿರಲಿ, ಆಧುನಿಕ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಅಥವಾ ವಿಮಾನ ನಿಲ್ದಾಣಗಳು ಆಗಿರಲಿ, ಅದು ಆಧುನಿಕ ಆಸ್ಪತ್ರೆಗಳು ಅಥವಾ ವಿಶ್ವ ದರ್ಜೆಯ ಶೈಕ್ಷಣಿಕ ಸಂಸ್ಥೆಗಳು ಆಗಿರಲಿ, ನಾವು ಇಡೀ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು. ಈಗ ದೇಶಕ್ಕೂ ಸಾಗರ ಬಂದರುಗಳ ಅಗತ್ಯವಿದೆ. ಸಾಮಾನ್ಯ ಮನುಷ್ಯರೂ ಬದಲಾಗಿದ್ದಾರೆ ನಾವು ಅದನ್ನು ಅರ್ಥಮಾಡಿಕೊಳ್ಳಬೇಕು.

ಈ ಮುನ್ನ, ನಿರ್ದಿಷ್ಟ ಪ್ರದೇಶವೊಂದರಲ್ಲಿ ರೈಲು ನಿಲ್ದಾಣವೊಂದನ್ನು ನಿರ್ಮಿಸಬೇಕು ಎಂದು ನಿರ್ಧಾರವೊಂದನ್ನು ಕಾಗದದ ಮೇಲೆ ತೆಗೆದುಕೊಂಡರೆ, ಹೊಸ ರೈಲ್ವೆ ನಿಲ್ದಾಣವು ಹತ್ತಿರದಲ್ಲಿ ಎಲ್ಲೋ ಲಭ್ಯವಿರುತ್ತದೆ ಎಂಬ ಸಕಾರಾತ್ಮಕ ಭಾವನೆ ವರ್ಷಗಳ ಕಾಲ ಇರುತ್ತಿತ್ತು. ಈಗ ಕಾಲ ಬದಲಾಗಿದೆ. ಈಗ ಸಾಮಾನ್ಯ ನಾಗರಿಕರು, ರೈಲು ನಿಲ್ದಾಣವೊಂದರಿಂದ ತೃಪ್ತರಾಗುವುದಿಲ್ಲ. ಈಗ ಅವರು “ವಂದೇ ಭಾರತ್ ಎಕ್ಸ್ ಪ್ರೆಸ್” ಯಾವಾಗ ನಮ್ಮ ಪ್ರದೇಶಕ್ಕೆ ಬರುತ್ತದೆ ಎಂದು ತತ್ ಕ್ಷಣವೇ ಕೇಳುತ್ತಾರೆ. ಅವರ ಚಿಂತನೆಗಳು ಬದಲಾಗಿವೆ. ನಾವು ಈಗ ಉತ್ತಮವಾದ ಬಸ್ ನಿಲ್ದಾಣ ಅಥವಾ ಪಂಚತಾರಾ ರೈಲು ನಿಲ್ದಾಣ ನಿರ್ಮಿಸಿದರೆ, ಜನರು ಉತ್ತಮ ಕಾರ್ಯ ಮಾಡಿದ್ದೀರಿ ಎಂದು ಹೇಳುವುದಿಲ್ಲ. ನಂತರ ಅವರು ಯಾವಾಗ ವಿಮಾನ ನಿಲ್ದಾಣ ಸಿದ್ಧವಾಗುತ್ತದೆ ಎಂದು ಕೇಳುತ್ತಾರೆ”?. ಅಂದರೆ, ಅದರ ಅರ್ಥ ಅವರ ಚಿಂತನೆಗಳು ಬದಲಾಗಿವೆ. ಕೇವಲ ರೈಲು ನಿಲುಗಡೆಯಿಂದ ಮಾತ್ರಕ್ಕೆ ಸಂತೋಷ ಪಡುತ್ತಿದ್ದ ಜನ, ಈಗ ಇಲ್ಲಿ ಯಾವಾಗ ವಿಮಾನ ನಿಲ್ದಾಣ ಆರಂಭವಾಗುತ್ತದೆ ಎಂದು ಪ್ರಶ್ನಿಸುತ್ತಾರೆ.?”

ಈ ಮೊದಲು ಜನರು “ಯಾವಾಗ ನಮ್ಮ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಆಗುತ್ತದೆ ಎಂದು ಕೇಳುತ್ತಿದ್ದರು. ಈಗ ಜನ ಕೇಳುವುದೇನು ಗೊತ್ತೆ ರಸ್ತೆ “ಚತುಷ್ಪಥವೋ ಅಷ್ಟಪಥವೋ“ ಅವರು ಕೇವಲ ರಸ್ತೆಗೆ ತೃಪ್ತರಾಗುವುದಿಲ್ಲ. ಇದು ಆಶಯ ಭಾರತದ ಗಣನೀಯ ಬದಲಾವಣೆ ಎಂದು ನಾನು ಭಾವಿಸುತ್ತೇನೆ.

ಈ ಮೊದಲು, ವಿದ್ಯುತ್ ಕಂಬಗಳನ್ನು ತಂದು ನೆಲದಲ್ಲಿ ಮಲಗಿಸಿ ಹೋಗುವುದನ್ನು ನೋಡಿದ ಮಾತ್ರಕ್ಕೆ ಜನ ಸಂತೋಷ ಪಡುತ್ತಿದ್ದರು. ಕಂಬ ನಿಲ್ಲಿಸದಿದ್ದರೂ, ವಿದ್ಯುತ್ ತಮ್ಮ ಪ್ರದೇಶಕ್ಕೂ ತಲುಪುತ್ತದೆ ಎಂದು ಭಾವಿಸುತ್ತಿದ್ದರು. ಆದರೆ ಈಗ ವಿದ್ಯುತ್ ಸರಬರಾಜು ತಂತಿಗಳನ್ನು ಮತ್ತು ವಿದ್ಯುತ್ ಮೀಟರ್ ಗಳನ್ನು ಅಳವಡಿಸಿದ ತರುವಾಯವೂ, ಜನರು “ನಮಗೆ ಯಾವಾಗ 24 ಗಂಟೆ ವಿದ್ಯುತ್ ದೊರಕುತ್ತದೆ“ ಎಂದು ಕೇಳುತ್ತಾರೆ. ಅವರು ಇನ್ನೆಂದು ಕಂಬ ಮತ್ತು ತಂತಿಯಿಂದ ತೃಪ್ತರಾಗುವುದಿಲ್ಲ.

ಈ ಮೊದಲು, ಮೊಬೈಲ್ ಫೋನ್ ಗಳು ಆಗಷ್ಟೇ ಬಂದಿದ್ದಾಗ, ಕೊನೆಗೂ ಮೊಬೈಲ್ ಫೋನ್ ಬಂತಲ್ಲ ಎಂದುಕೊಳ್ಳುತ್ತಿದ್ದರು. ಆದರೆ, ಈಗ ಅವರು ಡಾಟಾ ವೇಗದ ಬಗ್ಗೆ ಚರ್ಚಿಸುತ್ತಾರೆ. ನಾವು ಈ ಪರಿವರ್ತನೆಯ ಮನಃಶಾಸ್ತ್ರವನ್ನು ಮತ್ತು ಬದಲಾಗುತ್ತಿರುವ ಕಾಲಘಟ್ಟವನ್ನು ಅರ್ಥಮಾಡಿಕೊಳ್ಳಬೇಕು. ಜಾಗತಿಕ ಮೈಲಿಗಲ್ಲಾದ ಅದರೆ ಆಧುನಿಕ ಮೂಲಸೌಕರ್ಯ, ಶುದ್ಧ ಇಂಧನ, ಅನಿಲ ಆಧಾರಿತ ಆರ್ಥಿಕತೆ, ಅನಿಲ ಗ್ರಿಡ್, ಇ-ಮೊಬಿಲಿಟಿ ಇತ್ಯಾದಿ ಸೇರಿದಂತೆ ನಾವು ಹಲವು ಕ್ಷೇತ್ರಗಳಲ್ಲಿ ಮುಂದೆ ಸಾಗಿದ್ದೇವೆ,

ನನ್ನ ಪ್ರೀತಿಯ ದೇಶವಾಸಿಗಳೇ, ಸಾಮಾನ್ಯವಾಗಿ ನಮ್ಮ ದೇಶದ ಸರ್ಕಾರಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಅಥವಾ ನಿರ್ದಿಷ್ಟ ಸಮುದಾಯಕ್ಕೆ ಅಥವಾ ಗುಂಪಿಗೆ ತಾವು ಏನು ಮಾಡಿದ್ದೇವೆ ಎಂಬುದನ್ನು ಗುರುತಿಸುತ್ತವೆ. ಸಾಮಾನ್ಯವಾಗಿ, ಸರ್ಕಾರಗಳು ಮತ್ತು ಜನರು ಸರ್ಕಾರ ನಮಗೆ ಎಷ್ಟು ಕೊಟ್ಟಿದೆ, ಯಾರಿಗೆ ಎಷ್ಟು ಕೊಟ್ಟಿದೆ ಎಂಬ ಮಾನದಂಡವನ್ನು ಪರಿಗಣಿಸುತ್ತಾರೆ. ಇದನ್ನು ಉತ್ತಮ ಎಂದು ಪರಿಗಣಿಸುತ್ತಾರೆ. ಇದು ಈ ಹೊತ್ತಿನ ಅಗತ್ಯ ಅಥವಾ ಅನಿವಾರ್ಯತೆ ಇದ್ದಿರಬಹುದು.

ಆದರೆ, ಏನೇ ಇರಲಿ, ಯಾವಾಗಲೇ ಇರಲಿ, ಅಥವಾ ಯಾರೇ ಆಗಿರಲಿ ಈ ಹಿಂದೆ ಏನೇ ಪಡೆದಿರಬಹುದು, ಈಗ ನಾವು ಒಂದು ರಾಷ್ಟ್ರವಾಗಿ ಯಾವ ಕನಸುಗಳನ್ನು ನನಸಾಗಿಸಲು ಬಯಸುತ್ತೇವೆ ಎಂಬುದರ ಬಗ್ಗೆ ನಾವು ಈಗ ಒಗ್ಗಟ್ಟಿನಿಂದ ಯೋಚಿಸಬೇಕಾಗಿದೆ. ಈ ಕನಸುಗಳನ್ನು ಈಡೇರಿಸಲು ನಾವು ಹೋರಾಡಬೇಕು ಮತ್ತು ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಸಮಯವು ಒತ್ತಾಯಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ರೂಪಿಸುವ ಕನಸು ಕಟ್ಟಿಕೊಂಡಿದ್ದೇವೆ. 130 ಕೋಟಿ ದೇಶವಾಸಿಗಳು ಸಣ್ಣ ಕೊಡುಗೆಯೊಂದಿಗೆ ಮುಂದೆ ಸಾಗಬಹುದು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯು ಕೆಲವು ಜನರಿಗೆ ಕಷ್ಟ ಎನಿಸಬಹುದು. ಅವರು ಹೇಳುವುದೂ ತಪ್ಪಲ್ಲ, ಆದರೆ, ನಾವು ಕಷ್ಟಕರವಾದ ಸವಾಲುಗಳನ್ನು ಎದುರಿಸದಿದ್ದರೆ, ದೇಶ ಹೇಗೆ ಮುಂದೆ ಸಾಗಲು ಸಾಧ್ಯ? ನಾವು ಕಷ್ಟಕರವಾದ ಸವಾಲುಗಳನ್ನು ತೆಗೆದುಕೊಳ್ಳದಿದ್ದರೆ, ನಾವು ಮುಂದೆ ಸಾಗುವ ಮನೋಸ್ಥಿತಿಯನ್ನು ಹೇಗೆ ಬೆಳೆಸಲು ಸಾಧ್ಯ?

ಮಾನಸಿಕವಾಗಿಯೂ ನಾವು ಸದಾ ಉನ್ನತ ಗುರಿ ಹೊಂದಬೇಕು ಮತ್ತು ಅದನ್ನೇ ನಾವು ಮಾಡುತ್ತಿದ್ದೇವೆ. ಇದು ಕೇವಲ ಗಾಳಿಗೋಪುರ ಅಲ್ಲ. ನಾವು ಈಗಾಗಲೇ 2 ಟ್ರಿಲಿಟನ್ ಡಾಲರ್ ಆರ್ಥಿಕತೆಯನ್ನು 70 ವರ್ಷಗಳ ಸ್ವಾತಂತ್ರ್ಯಾನಂತರ ತಲುಪಿದ್ದೇವೆ. 70 ವರ್ಷಗಳ ಅಭಿವೃದ್ಧಿ ಪಥದ ಪಯಣದಲ್ಲಿ, ನಾವು ಕೇವಲ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದ್ದೆವು. ಆದರೆ 2014ರಿಂದ 2019ರ ಐದು ವರ್ಷಗಳಲ್ಲಿ ನಾವು 3 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ತಲುಪಿದೆವು, ಅಂದರೆ, ನಾವು ಒಂದು ಟ್ರಿಲಿಯನ್ ಡಾಲರ್ ಸೇರ್ಪಡೆ ಮಾಡಿದೆವು. ಕೇವಲ 5 ವರ್ಷಗಳಲ್ಲಿ ನಾವು ಅಷ್ಟು ದೊಡ್ಡ ಜಿಗಿತ ಕಾಣಲು ಸಾಧ್ಯ ಎನ್ನುವುದಾದರೆ, ಮುಂದಿನ 5 ವರ್ಷಗಳಲ್ಲಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಲು ಖಂಡಿತಾ ಸಾಧ್ಯ. ಇದು ಪ್ರತಿಯೊಬ್ಬ ಭಾರತೀಯನ ಕನಸಾಗಬೇಕು.

ಆರ್ಥಿಕತೆ ಬೆಳೆದಾಗ, ಜನರಿಗೆ ಉತ್ತಮ ಜೀವನ ನಿರ್ವಹಣೆಯನ್ನು ತರುತ್ತದೆ. ಕೆಳಗಿರುವವರ ಕನಸುಗಳನ್ನು ನನಸು ಮಾಡಲೂ ಅವಕಾಶಗಳು ಸೃಷ್ಟಿಯಾಗುತ್ತವೆ. ಈ ಅವಕಾಶಗಳನ್ನು ಸೃಷ್ಟಿಸಲು ಈ ಮನೋಸ್ಥಿತಿಯನ್ನು ನಾವು ದೇಶದ ಆರ್ಥಿಕ ವಲಯದಲ್ಲಿ ರೂಪಿಸಬೇಕು.

ನಾವು ನಮ್ಮ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಕನಸು ಕಂಡಾಗ, 75 ವರ್ಷಗಳ ಸ್ವಾತಂತ್ರ್ಯಾನಂತರ ಪ್ರತಿ ಕುಟುಂಬವೂ ಅದರಲ್ಲೂ ಬಡವರಲ್ಲೇ ಕಡುಬಡುವರು ಕೂಡ ಸ್ವಂತ ಮನೆ ಹೊಂದಬೇಕು ಎಂದು ಕನಸು ಕಂಡಾಗ, 75 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಳ್ಳುವ ಹೊತ್ತಿಗೆ ಪ್ರತಿಯೊಂದು ಮನೆಯಲ್ಲೂ ವಿದ್ಯುತ್ ಇರಬೇಕು ಎಂದು ನಾವು ಕನಸು ಕಂಡಾಗ, 75 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಳ್ಳುವ ಹೊತ್ತಿಗೆ ಪ್ರತಿ ಹಳ್ಳಿಯೂ ಆಪ್ಟಿಕಲ್ ಫೈಬರ್ ಜಾಲ, ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ದೂರಶಿಕ್ಷಣ ಹೊಂದಬೇಕು ಎಂದು ಕನಸು ಕಂಡಿದ್ದೆವು ಈಗ ಇವು ಯಾವುವೂ ಕಸನಾಗಿ ಉಳಿದಿಲ್ಲ,

ನಾವು ನಮ್ಮಸಾಗರ ಸಂಪನ್ಮೂಲಗಳ ಮತ್ತು ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಗಮನ ಹರಿಸಬೇಕಾಗಿದೆ. ನಾವು ನಮ್ಮ ಮೀನುಗಾರರ ಸಮುದಾಯವನ್ನು ಸಬಲೀಕರಿಸಬೇಕಾಗಿದೆ. ನಮಗೆ ಅನ್ನ ನೀಡುವ ನಮ್ಮ ರೈತರು, ಶಕ್ತಿ ನೀಡುವವರಾಗಬೇಕು. ಅವರು ಏಕೆ ರಫ್ತುದಾರರಾಗಬಾರದು. ನಮ್ಮ ರೈತರು ಬೆಳೆವ ಉತ್ಪನ್ನಗಳು ಏಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದಿಪತ್ಯ ಸಾಧಿಸಬಾರದು? ಈ ಕನಸುಗಳೊಂದಿಗೆ ನಾವು ಮುಂದೆ ಸಾಗಲು ಬಯಸುತ್ತೇವೆ. ನಮ್ಮ ದೇಶ ಈ ರಫ್ತುನ್ನು ಉತ್ತೇಜಿಸಬೇಕು. ನಾವು ಜಾಗತಿಕ ಮಾರುಕಟ್ಟೆ ತಲುಪಲು ಎಲ್ಲ ಪ್ರಯತ್ನ ಮಾಡಬೇಕು.

ನಮ್ಮ ದೇಶದ ಪ್ರತಿಯೊಂದು ಜಿಲ್ಲೆಯೂ ಒಂದು ದೇಶದ ಸಾಮರ್ಥ್ಯಕ್ಕೆ ಸಮಾನವಾಗಿದೆ. ನಮ್ಮ ಎಲ್ಲ ಜಿಲ್ಲೆಗಳೂ ವಿಶ್ವದ ಸಣ್ಣ ದೇಶಗಳ ಸಾಮರ್ಥ್ಯವನ್ನು ಹೊಂದಿವೆ. ನಾವು ಈ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಈ ಸಾಮರ್ಥ್ಯವನ್ನು ಸರಿಯಾಗಿ ರೂಪಿಸಬೇಕು. ಏಕೆ ಪ್ರತಿಯೊಂದು ಜಿಲ್ಲೆಯೂ ರಫ್ತು ತಾಣವಾಗಿ ಪರಿವರ್ತನೆಯಾಗುವ ಬಗ್ಗೆ ಚಿಂತಿಸುತ್ತಿಲ್ಲ? ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ಕರಕುಶಲ ಕಲೆ ಹೊಂದಿದೆ ಮತ್ತು ಪ್ರತಿ ಜಿಲ್ಲೆಯೂ ಅನನ್ಯ ವಿಶೇಷತೆಯನ್ನು ಒಳಗೊಂಡಿವೆ.

ಕೆಲವು ಜಿಲ್ಲೆಗಳು ತಮ್ಮ ಸುಗಂಧಕ್ಕೆ ಹೆಸರಾಗಿದ್ದರೆ, ಮತ್ತೆ ಕೆಲವು ಜಿಲ್ಲೆಗಳು ಸೀರೆಗಳನ್ನು ಅದರ ವಿಶಿಷ್ಟ ಗುರುತಾಗಿ ಹೊಂದಿರಬಹುದು ಆದರೆ ಬೇರೆ ಕೆಲವು ಜಿಲ್ಲೆಗಳು ಪಾತ್ರೆಗಳಿಗೆ ಹೆಸರುವಾಸಿಯಾಗಿದ್ದರೆ ಮತ್ತೆ ಕೆಲವು ಜಿಲ್ಲೆಯು ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿವೆ. ಜಾಗತಿಕ ಮಾರುಕಟ್ಟೆಗೆ ನಮ್ಮ ಈ ಎಲ್ಲ ಜಿಲ್ಲೆಗಳೂ ವಿಭಿನ್ನ ಗುರುತು ಮತ್ತು ಸಾಮರ್ಥ್ಯವನ್ನು ಹೊಂದಿವೆ.

ಜಾಗತಿಕ ಮಾರುಕಟ್ಟೆಗಳಿಗೆ ಉತ್ಪಾದನೆಯಲ್ಲಿ ದೋಷ ರಹಿತ, ಶೂನ್ಯ ಪರಿಣಾಮವನ್ನು ನಾವು ಹೇಗೆ ಬಳಸಬಹುದು ಎಂಬುದನ್ನು ಕಾಣಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ವೈವಿಧ್ಯತೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಮೂಲಕ ನಾವು ರಫ್ತಿನತ್ತ ಗಮನಹರಿಸಿದರೆ ಮತ್ತು ವಿಶ್ವ ಮಾರುಕಟ್ಟೆಯನ್ನು ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ದೇಶದ ಯುವಕರಿಗೆ ಉದ್ಯೋಗ ದೊರಕುತ್ತದೆ. ಇದು ನಮ್ಮ ಸಣ್ಣ ಪ್ರಮಾಣದ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ. ನಾವು ಆ ಶಕ್ತಿಯನ್ನು ಹೆಚ್ಚಿಸಬೇಕು.

  • ದೇಶವು ಪ್ರಪಂಚದ ಆಕರ್ಷಕ ಪ್ರವಾಸಿ ತಾಣವಾಗಬಹುದು, ಆದರೆ ಕೆಲವು ಕಾರಣಗಳಿಂದಾಗಿ, ನಮಗೆ ಅಗತ್ಯವಿರುವಷ್ಟು ವೇಗವಾಗಿ ಅದನ್ನು ಬೆಳೆಸಲು ನಮಗೆ ಸಾಧ್ಯವಾಗಲಿಲ್ಲ. ಬನ್ನಿ, ದೇಶವಾಸಿಗಳಾದ ನಾವೆಲ್ಲರೂ ದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳೋಣ. ಪ್ರವಾಸೋದ್ಯಮ ಬೆಳೆದಂತೆ, ಬಂಡವಾಳ ಹೂಡಿಕೆ ಹೆಚ್ಚಿನ ಉದ್ಯೋಗಾವಕಾಶ ತರುತ್ತದೆ. ದೇಶದ ಆರ್ಥಿಕತೆಯೂ ಚೈತನ್ಯ ಪಡೆಯುತ್ತದೆ. ವಿಶ್ವದಾದ್ಯಂತ ಇರುವ ಜನರು ಭಾರತವನ್ನು ಇಂದು ಹೊಸ ರೀತಿಯಲ್ಲಿ ನೋಡಲು ಸಿದ್ಧರಿದ್ದಾರೆ. ನಾವು ದೇಶಕ್ಕೆ ವಿಶ್ವಾದ್ಯಂತದ ಪ್ರವಾಸಿಗರನ್ನು ಹೇಗೆ ಸೆಳೆಯಬೇಕು ಎಂಬ ಬಗ್ಗೆ ಚಿಂತಿಸೋಣ. ನಾವು ಪ್ರವಾಸೋದ್ಯಮ ವಲಯವನ್ನು ಹೇಗೆ ಬಲಪಡಿಸಬಹುದು ಮತ್ತು ಇದಕ್ಕಾಗಿ ಪ್ರವಾಸಿ ತಾಣಗಳಲ್ಲಿ ಯಾವ ವ್ಯವಸ್ಥೆಗಳನ್ನು ಮಾಡಬೇಕು. ನಾವು ಸಾಮಾನ್ಯ ನಾಗರಿಕನ ಆದಾಯವನ್ನು ಹೆಚ್ಚಿಸುವ, ಉತ್ತಮ ಶಿಕ್ಷಣವನ್ನು ಅವರಿಗೆ ನೀಡುವ, ಹೊಸ ಉದ್ಯೋಗಾವಕಾಶಗಳ ಬಗ್ಗೆಯೂ ಮಾತನಾಡೋಣ. ಮಧ್ಯಮವರ್ಗದ ಜನರಿಗೆ ಮೇಲೇರಲು ಅವಕಾಶ ಇರಬೇಕು, ಆಗ ಅವರು ತಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯ. ವಿಜ್ಞಾನಿಗಳಿಗೆ ಉತ್ತಮ ಸೌಲಭ್ಯ ಮತ್ತು ಸೌಕರ್ಯ ಮತ್ತು ಸಂಪನ್ಮೂಲ ಇರಬೇಕು, ನಮ್ಮ ಪಡೆಗಳ ಬಳಿ ಉತ್ತಮವಾದ ದೇಶೀಯವಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳು ಇರಬೇಕು. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಹೊಸ ಶಕ್ತಿ ತುಂಬುವ ಹಲವು ಕ್ಷೇತ್ರಗಳಿವೆ ಎಂದು ನಾನು ನಂಬುತ್ತೇನೆ.

ನನ್ನ ಸಹೋದರ ಮತ್ತು ಸಹೋದರಿಯರೇ, ಇಂದು ದೇಶ ಆರ್ಥಿಕ ಯಶಸ್ಸು ಸಾಧಿಸಲು ಹಿತಕರವಾದ ವಾತಾವರಣವನ್ನು ಹೊಂದಿದೆ. ಸ್ಥಿರವಾದ ಸರ್ಕಾರ ಇದ್ದಾಗ, ನೀತಿಗಳನ್ನು ಊಹಿಸಲು ಸಾಧ್ಯ ಮತ್ತು ವ್ಯವಸ್ಥೆ ಸ್ಥಿರವಾಗಿರುತ್ತದೆ, ಆಗ ವಿಶ್ವವೂ ನಿಮ್ಮ ಮೇಲೆ ನಂಬಿಕೆ ಇಡುತ್ತದೆ. ದೇಶದ ಜನರು ಇದನ್ನು ತೋರಿಸಿದ್ದಾರೆ. ವಿಶ್ವ ಕೂಡ ಭಾರತದ ರಾಜಕೀಯ ಸ್ಥಿರತೆಯನ್ನು ಅತ್ಯಂತ ಗೌರವ ಮತ್ತು ಹೆಮ್ಮೆಯಿಂದ ಗಮನಿಸುತ್ತಿದೆ. ನಾವು ಈ ಅವಕಾಶವನ್ನು ಕೈಚೆಲ್ಲಬಾರದು. ಇಂದು ವಿಶ್ವ ನಮ್ಮೊಂದಿಗೆ ವಾಣಿಜ್ಯ ನಡೆಸಲು ಉತ್ಸುಕವಾಗಿದೆ. ಅದು ನಮ್ಮೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ. , ಹಣದುಬ್ಬರವನ್ನು ನಿಯಂತ್ರಿಸುವಾಗ, ಬೆಳವಣಿಗೆಯ ದರವನ್ನು ಹೆಚ್ಚಿಸಲು ನಾವು ಒಂದು ಪ್ರಮುಖ ಸಮೀಕರಣದೊಂದಿಗೆ ಮುಂದುವರಿಯುತ್ತಿದ್ದೇವೆ ಎಂಬುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಕೆಲವೊಮ್ಮೆ ಬೆಳವಣಿಗೆಯ ದರ ಹೆಚ್ಚಾಗಬಹುದು, ಆದರೆ ಹಣದುಬ್ಬರವು ನಿಯಂತ್ರಣದಲ್ಲಿರುವುದಿಲ್ಲ. ಕೆಲವೊಮ್ಮೆ ಹಣದುಬ್ಬರ ನಿಯಂತ್ರಣದಲ್ಲಿದ್ದಾಗ, ಬೆಳವಣಿಗೆಯ ದರವು ಪರಿಣಾಮ ಬೀರುತ್ತದೆ. ಆದರೆ ನಮ್ಮ ಸರ್ಕಾರ ಹಣದುಬ್ಬರವನ್ನು ನಿಯಂತ್ರಿಸುವುದಲ್ಲದೆ ಬೆಳವಣಿಗೆಯ ದರವನ್ನೂ ಹೆಚ್ಚಿಸಿದೆ.

ನಮ್ಮ ಆರ್ಥಿಕತೆಯ ಮೂಲಭೂತತ್ವ ಬಹಳ ಬಲಿಷ್ಠವಾಗಿದೆ. ಈ ಬಲ ನಮಗೆ ಮುಂದೆ ಸಾಗಲು ವಿಶ್ವಾಸ ತುಂಬುತ್ತಿದೆ. ಅದೇ ರೀತಿ, ಜಿಎಸ್ಟಿಯಂಥ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ, ದಿವಾಳಿ ಮತ್ತು ದಿವಾಳಿತನ ಸಂಹಿತೆಯನ್ನು ತರುವುದರೊಂದಿಗೆ, ನಾವು ವಿಶ್ವಾಸದ ವಾತಾವರಣವನ್ನು ಅಭಿವೃದ್ಧಿಪಡಿಸಲು ಬಯಸಿದ್ದೇವೆ. ನಮ್ಮ ದೇಶದಲ್ಲಿ ಹೆಚ್ಚಿನ ಉತ್ಪಾದನೆ ಇರಬೇಕು, ನಮ್ಮ ಸ್ವಾಭಾವಿಕ ಸಂಪನ್ಮೂಲಗಳ ಹೆಚ್ಚಿನ ಸಂಸ್ಕರಣ ಇರಬೇಕು, ಮೌಲ್ಯ ವರ್ಧನೆ ಇರಬೇಕು, ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ವಿಶ್ವಕ್ಕೇ ಆಗಬೇಕು. ಭಾರತದ ಒಂದಿಲ್ಲಾ ಒಂದು ಉತ್ಪನ್ನಗಳನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಆಮದು ಮಾಡಿಕೊಳ್ಳಬೇಕು ಎಂದು ನಾವು ಕನಸು ಕಾಣಬಾರದೇಕೆ, ಅದರಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯೂ ಕೆಲವೊಂದುಉತ್ಪನ್ನವನ್ನು ರಫ್ತು ಮಾಡಬಾರದೇಕೆ? ನಾವು ಈ ಎರಡು ವಿಷಯಗಳನ್ನು ಗಣನೆಗೆ ತೆಗೆದುಕೊಂಡರೆ, ನಾವು ಆದಾಯವನ್ನೂ ಹೆಚ್ಚಿಸಬಹುದು. ನಮ್ಮ ಕಂಪನಿಗಳು ಮತ್ತು ಉದ್ಯಮಿಗಳು ಸಹ ವಿಶ್ವ ಮಾರುಕಟ್ಟೆಗೆ ಪ್ರವೇಶ ಪಡೆಯುವ ಕನಸು ಕಾಣಬಹುದು. ವಿಶ್ವ ಮಾರುಕಟ್ಟೆಗೆ ಪ್ರವೇಶ ಪಡೆಯುವುದರೊಂದಿಗೆ ನಮ್ಮ ಹೂಡಿಕೆದಾರರು ಭಾರತದ ದರ್ಜೆಯನ್ನು ಹೆಚ್ಚಿಸಬಹುದು; ನಮ್ಮ ಹೂಡಿಕೆದಾರರು ಹೆಚ್ಚಿಗೆ ಗಳಿಸಬಹುದು; ನಮ್ಮ ಹೂಡಿಕೆದಾರರು ಇನ್ನೂ ಹೆಚ್ಚಿನ ಹೂಡಿಕೆ ಮಾಡಬಹುದು; ನಮ್ಮ ಹೂಡಿಕೆದಾರರು ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದು. ಉದ್ಯೋಗ ಸೃಷ್ಟಿಸಲು ಮುಂದೆ ಬರುವಂತೆ ನಾವು ಸಂಪೂರ್ಣವಾಗಿ ನಮ್ಮ ಹೂಡಿಕೆದಾರರನ್ನು ಉತ್ತೇಜಿಸುತ್ತೇವೆ.

ನಮ್ಮ ದೇಶದಲ್ಲಿ, ಕೆಲವು ತಪ್ಪು ನಂಬಿಕೆಗಳು ಅಸ್ತಿತ್ವದಲ್ಲಿವೆ. ನಾವು ಆ ಮನೋಸ್ಥಿತಿಯಿಂದ ಹೊರಬರಬೇಕಾಗಿದೆ. ಯಾರು ದೇಶಕ್ಕಾಗಿ ಸಂಪತ್ತು ಸೃಷ್ಟಿಸುತ್ತಾರೋ, ದೇಶದ ಆಸ್ತಿಯ ಸೃಷ್ಟಿಗೆ ಯಾರು ಕೊಡುಗೆ ನೀಡುತ್ತಾರೋ ಅವರೆಲ್ಲರೂ ದೇಶಕ್ಕೆ ಸೇವೆ ಮಾಡುತ್ತಿದ್ದಾರೆ. ನಾವು ನಮ್ಮ ಸಂಪತ್ತಿನ ನಿರ್ಮಾತೃಗಳನ್ನು ಅನುಮಾನಿಸಬಾರದು.

ಈ ಹೊತ್ತಿನ ಅಗತ್ಯವೆಂದರೆ, ನಮ್ಮ ದೇಶದಲ್ಲಿ ಸಂಪತ್ತಿನ ನಿರ್ಮಾತೃಗಳನ್ನು ಗುರುತಿಸಿ ಉತ್ತೇಜಿಸುವುದಾಗಿದೆ. ಅವರು ಹೆಚ್ಚಿನ ಗೌರವ ಪಡೆಬೇಕು. ಸಂಪತ್ತು ಸೃಷ್ಟಿಯಾಗದಿದ್ದರೆ, ಸಂಪತ್ತನ್ನು ಹಂಚಲು ಸಾಧ್ಯವಿಲ್ಲ. ತರುವಾಯ, ಸಂಪತ್ತಿನ ಹಂಚಿಕೆಯಾಗದಿದ್ದರೆ ನಾವು ನಮ್ಮ ಸಮಾಜದ ಬಡ ವರ್ಗದವರನ್ನು ನಾವು ಮೇಲೆತ್ತಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಸಂಪತ್ತಿನ ಸೃಷ್ಟಿಗೆ ಇಷ್ಟೊಂದು ಮಹತ್ವವಿದೆ, ಇದಕ್ಕೆ ನಾವು ಮತ್ತಷ್ಟು ಅವಕಾಶ ಮಾಡಿಕೊಡಬೇಕು. ಸಂಪತ್ತನ್ನು ಸೃಷ್ಟಿಸಲು ಪ್ರಯತ್ನಗಳನ್ನು ಮಾಡುವವರು, ನನ್ನ ಪ್ರಕಾರ ಅವರು ಸ್ವತಃ ರಾಷ್ಟ್ರಕ್ಕೆ ಒಂದು ಆಸ್ತಿಯಾಗಿದ್ದು, ಅವರಿಗೆ ಮನ್ನಣೆ ನೀಡಬೇಕು..

ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾವು ಅಭಿವೃದ್ಧಿಯ ಜೊತೆಗೆ ಶಾಂತಿ ಮತ್ತು ಸುರಕ್ಷತೆಗೆ ಒತ್ತು ನೀಡುತ್ತಿದ್ದೇವೆ. ಜಾಗತಿಕವಾಗಿ, ದೇಶಗಳು ಹಲವಾರು ಅಭದ್ರತೆಗಳಿಂದ ಕೂಡಿವೆ. ಸಾವು ಪ್ರಪಂಚದ ಒಂದಲ್ಲಾ ಒಂದು ಭಾಗಗಳಲ್ಲಿ ಸುಳಿದಾಡುತ್ತಿದೆ ಅನಿಸುತ್ತಿದೆ.

ವಿಶ್ವ ಶಾಂತಿಯನ್ನು ಪುನರ್ಸ್ಥಾಪಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಜಾಗತಿಕ ಪರಿಸರದಲ್ಲಿ ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ನಾವು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಬಲವಾದ ಹೋರಾಟ ನಡೆಸುತ್ತಿದ್ದೇವೆ. ಪ್ರಪಂಚದ ಯಾವುದೇ ಭಾಗದಲ್ಲಿ ಭಯೋತ್ಪಾದನೆಯ ಕೃತ್ಯವನ್ನು ಮಾನವೀಯತೆಯ ಮೇಲಿನ ಆಕ್ರಮಣವೆಂದು ಪರಿಗಣಿಸಬೇಕು. ಆದ್ದರಿಂದ, ಭಯೋತ್ಪಾದಕ ಸಂಘಟನೆಗಳನ್ನು ಉತ್ತೇಜಿಸುವ ಮತ್ತು ಆಶ್ರಯ ನೀಡುವವರ ವಿರುದ್ಧ ಎಲ್ಲಾ ಶಕ್ತಿಗಳು ಒಂದಾಗಬೇಕೆಂದು ನಾನು ಕೋರುತ್ತೇನೆ. ಈ ಮಾನವೀತೆಯ ವಿರೋಧಿ ಚಟುವಟಿಕೆಗಳನ್ನು ಬಹಿರಂಗಪಡಿಸಲು ಭಾರತ ಕೊಡುಗೆ ನೀಡಬೇಕು ಮತ್ತು ಭಯೋತ್ಪಾದನೆಗೆ ಅಂತ್ಯ ಹಾಡಲು ಎಲ್ಲಾ ವಿಶ್ವ ಶಕ್ತಿಗಳನ್ನು ಒಗ್ಗೂಡಿಸಲು ದೃಢ ನಿಶ್ಚಯವನ್ನು ಹೊಂದಬೇಕು.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಪ್ರಮುಖ ಪಾತ್ರ ವಹಿಸಬೇಕು ಎಂದು ನಾನು ಬಯಸುತ್ತೇನೆ. ಭಯೋತ್ಪಾದಕರಿಗೆ ಆಶ್ರಯ ನೀಡುವ, ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ಭಯೋತ್ಪಾದನೆಯನ್ನು ರಫ್ತು ಮಾಡುವ ಶಕ್ತಿಗಳ ಬಣ್ಣ ಬಯಲು ಮಾಡಲು ಎಲ್ಲ ಶಕ್ತಿಗಳನ್ನೂ ಭಾರತ ಒಗ್ಗೂಡಿಸಬೇಕು.

ಕೆಲವು ಭಯೋತ್ಪಾದಕ ಸಂಘಟನೆಗಳು ಭಾರತವನ್ನು ಮಾತ್ರವೇ ಗುರಿಯಾಗಿಸಿಕೊಂಡಿಲ್ಲ, ಅವು ನಮ್ಮ ನೆರೆಯ ರಾಷ್ಟ್ರಗಳಿಗೂ ಹಾನಿ ಮಾಡುತ್ತಿವೆ. ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ರಾಷ್ಟ್ರಗಳೂ ಭಯೋತ್ಪಾದಕ ಚಟುವಟಿಕೆಗಳಿಂದ ನಲುಗಿವೆ. ಶ್ರೀಲಂಕಾದಲ್ಲಿನ ಚರ್ಚ್ ನೊಳಗೆ ಮುಗ್ಧಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು. ಇದು ಹೃದಯವಿದ್ರಾವಕ ಘಟನೆ. ಹೀಗಾಗಿ, ನಾವೆಲ್ಲರೂ ಒಗ್ಗೂಡಿ ಸಕಾರಾತ್ಮಕವಾಗಿ ಕ್ರಮಕ್ಕೆ ಮುಂದಾಗಿ ಭದ್ರತೆ, ಶಾಂತಿ ಮತ್ತು ಸೌಹಾರ್ದವನ್ನು ಉಪಖಂಡದಲ್ಲಿ ಮೂಡಿಸಬೇಕು.

ನಮ್ಮ ಮಿತ್ರ ನರೆರಾಷ್ಟ್ರ ಆಪ್ಘಾನಿಸ್ತಾನ ಸಹ ಇಂದಿನಿಂದ ನಾಲ್ಕು ದಿನಗಳ ತರುವಾಯ 100ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ.ನಾನು ಈ ಪವಿತ್ರ ಸಂದರ್ಭದಲ್ಲಿ ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ.

ಭಯವನ್ನು ಹುಟ್ಟಿಸುವ ಮತ್ತು ಹಿಂಸೆಯನ್ನು ಹೆಚ್ಚಿಸುವವರನ್ನು ನೆಲಕ್ಕೆ ಉರುಳಿಸಬೇಕು ಎಂಬುದು ನಮ್ಮ ಸ್ಪಷ್ಟ ನೀತಿಯಾಗಿದೆ. ಅಂತಹ ಎಲ್ಲಾ ದುರುದ್ದೇಶಗಳನ್ನು ನಿಗ್ರಹಿಸಲು ನಾವು ನಮ್ಮ ನೀತಿಗಳು ಮತ್ತು ಕಾರ್ಯತಂತ್ರಗಳ ಮೂಲಕ ಇದನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಸೇನೆ, ಗಡಿ ಭದ್ರತಾ ಪಡೆಗಳು ಮತ್ತು ಭದ್ರತಾ ಸಂಸ್ಥೆಗಳು ಶ್ಲಾಘನಾರ್ಹ ಕೆಲಸ ಮಾಡುತ್ತಿವೆ. ಅವರು ತಮ್ಮ ಸಮವಸ್ತ್ರದಲ್ಲಿ ಎತ್ತರಕ್ಕೆ ನಿಂತು ಎಲ್ಲ ಪ್ರತಿಕೂಲಗಳಿಂದ ನಮ್ಮನ್ನು ಕಾಯುತ್ತಿದ್ದಾರೆ. ನಾನು ಅವರಿಗೆ ನಮನ ಸಲ್ಲಿಸುತ್ತೇನೆ. ನಮ್ಮ ಉಜ್ವಲ ಭವಿಷ್ಯಕ್ಕಾಗಿ ಅವರು ಹುತಾತ್ಮರಾಗಿದ್ದಾರೆ. ನಾನು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಾವು ಸುಧಾರಣೆಗಾಗಿ ಸಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.

ಮಿಲಿಟರಿ ಮೂಲಸೌಕರ್ಯದಲ್ಲಿ, ಸಶಸ್ತ್ರ ಪಡೆಗಳು ಮತ್ತು ಮಿಲಟರಿ ಮೂಲಗಳು. ಸುಧಾರಣೆಗಳನ್ನು ತರಲು ದೀರ್ಘ ಕಾಲದಿಂದ ಚರ್ಚೆಗಳು ನಡೆಯುತ್ತಲೇ ಇವೆ ಎಂಬುದನ್ನು ನೀವು ಗಮನಿಸಿರಬಹುದು. ಹಿಂದಿನ ಸರ್ಕಾರಗಳು ಸಹ ಇದನ್ನೇ ಚರ್ಚಿಸಿವೆ. ಹಲವು ಆಯೋಗಗಳು ಮತ್ತು ವರದಿಗಳು ಈ ವಿಚಾರಗಳನ್ನು ಬೆಳಕಿಗೆ ತಂದಿವೆ.

ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಆದರೆ ಇದನ್ನು ಪದೇ ಪದೇ ಹೇಳಲಾಗುತ್ತಿದೆ. ನಮ್ಮ ನೌಕಾಪಡೆ, ಸೇನೆ ಮತ್ತು ವಾಯುಪಡೆಯ ನಡುವೆ ಸಮನ್ವಯವಿದೆ. ನಮ್ಮ ಸಶಸ್ತ್ರ ಪಡೆಗಳ ವ್ಯವಸ್ಥೆ ಬಗ್ಗೆ ನಾವು ಹೆಮ್ಮೆಪಡಬಹುದು. ಯಾವುದೇ ಹಿಂದೂಸ್ತಾನಿ ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಪಡಬಹುದು. ಅವರು ತಮ್ಮದೇ ಆದ ರೀತಿಯಲ್ಲಿ ಆಧುನಿಕತೆಗಾಗಿ ಶ್ರಮಿಸುತ್ತಾರೆ.

ಆದರೆ, ಇಂದು ವಿಶ್ವ ಬದಲಾಗುತ್ತಿದೆ, ಯುದ್ಧದ ವ್ಯಾಪ್ತಿ ಬದಲಾಗುತ್ತಿದೆ, ಯುದ್ಧದ ಸ್ವರೂಪವೂ ಬದಲಾಗುತ್ತಿದೆ . ಈಗ ಇದು ತಾಂತ್ರಿಕತೆಯಿಂದ ಮಾಡಬಲ್ಲುದಾಗಿದೆ; ಇಂಥ ಸನ್ನಿವೇಶದಲ್ಲಿ ಭಾರತ, ಛಿದ್ರವಾದ ವಿಧಾನಕ್ಕೆ ಅಂಟಿಕೊಳ್ಳಬಾರದು. ನಮ್ಮ ಇಡೀ ಸೇನಾ ಶಕ್ತಿ ಒಗ್ಗೂಡಿ ಕೆಲಸ ಮಾಡಬೇಕು ಮತ್ತು ಮುಂದೆ ಸಾಗಬೇಕು. ನೌಕಾಪಡೆ, ಸೇನಾಪಡೆ ಮತ್ತು ವಾಯುಪಡೆ ಯಾವುದೇ ಆಗಲಿ ಉಳಿದೆರಡಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿದರೂ ಅವು ಸುಗಮವಾಗಿ ಸಾಗಲು ಸಾಧ್ಯವಿಲ್ಲ, ಆಗ ಉಳಿದೆರಡು ಹಿಂದೆ ಬೀಳುತ್ತವೆ. ಈ ಮೂರೂ ಒಂದೇ ವೇಗದಲ್ಲಿ ಒಂದೇ ಸಮನಾಗಿ ಸಾಗಬೇಕು. ಇದಕ್ಕೆ ಉತ್ತಮವಾದ ಸಮನ್ವಯತೆ ಇರಬೇಕು ಮತ್ತು ಅದು ಜನರ ನಂಬಿಕೆ ಮತ್ತು ಆಶಯಗಳಿಗೆ ತಕ್ಕುನಾಗಿರಬೇಕು. ಇದು ವಿಶ್ವದ ಬದಲಾಗುತ್ತಿರುವ ಯುದ್ಧ ಮತ್ತು ಭದ್ರತಾ ಪರಿಸರಕ್ಕೆ ಅನುಗುಣವಾಗಿರಬೇಕು, ಇಂದು ನಾನು ಈ ಕೆಂಪುಕೋಟೆಯಿಂದ ಒಂದು ಮಹತ್ವದ ಘೋಷಣೆ ಮಾಡುತ್ತೇನೆ. ವಿಷಯ ತಜ್ಞರು ಈ ವಿಷಯದ ಬಗ್ಗೆ ದೀರ್ಘ ಕಾಲದಿಂದ ಒತ್ತಾಯ ಮಾಡುತ್ತಲೇ ಇದ್ದಾರೆ. ಇಂದು ನಾವು ಸಿಡಿಎಸ್ ಅಂದರೆ ಚೀಫ್ ಡಿಫೆನ್ಸ್ ಸ್ಟಾಫ್ (ರಕ್ಷಣಾ ಪಡೆಯ ಮುಖ್ಯಸ್ಥ) ಅನ್ನು ಹೊಂದಲು ನಿರ್ಧರಿಸಿದ್ದೇವೆ. ಈ ಹುದ್ದೆಯ ಸೃಷ್ಟಿಯ ತರುವಾಯ, ಉನ್ನತ ಮಟ್ಟದಲ್ಲಿ ಮೂರೂ ಪಡೆಗಳಿಗೆ ಸಮರ್ಥ ನಾಯಕತ್ವ ದೊರಕಲಿದೆ. ಸಿಡಿಎಸ್ ವ್ಯವಸ್ಥೆ ಮಹತ್ವದ್ದು ಮತ್ತು ವಿಶ್ವದಲ್ಲಿ ಹಿಂದೂಸ್ತಾನದ ಕಾರ್ಯತಂತ್ರದ ವೇಗವನ್ನು ಸುಧಾರಿಸುವ ನಮ್ಮ ಕನಸಿಗೆ ಬಲಿಷ್ಠ ಕಾರ್ಯವಾಗಿದೆ.

ಬನ್ನಿ ನನ್ನ ದೇಶಬಾಂಧರೇ, ನಾವಿದನ್ನು ಮುಂದೆ ತೆಗೆದುಕೊಂಡು ಹೋಗೋಣ.

ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲು ನಾವು ಏನು ಮಾಡಬಹುದು ಎಂಬುದನ್ನು ತಿಳಿಸುವಂತೆ ಸ್ಟಾರ್ಟ್ ಅಪ್ ಗಳು, ತಂತ್ರಜ್ಞರು ಮತ್ತು ಉದ್ಯಮಿಗಳಲ್ಲಿ ನಾನು ವಿನಂತಿಸುತ್ತೇನೆ. ಹೆದ್ದಾರಿಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅಂತಹ ಅನೇಕ ಪರಿಹಾರಗಳು ಇರಬಹುದು. ಆದರೆ ಅಂತಹ ಸಮಸ್ಯೆಗಳಿಂದ ಹೊರಬರಲು ನಾವು ಸಾಮೂಹಿಕ ಆಂದೋಲನವನ್ನು ಆರಂಭಿಸಬೇಕು. ಅದೇ ಸಮಯದಲ್ಲಿ ನಾವು ಪರ್ಯಾಯ ವ್ಯವಸ್ಥೆಗಳ ಬಗ್ಗೆಯೂ ಯೋಚಿಸಬೇಕು. ಎಲ್ಲಾ ಅಂಗಡಿಯವರಿಗೆ ನನ್ನ ವಿನಂತಿಯೆಂದರೆ, ನಿಮ್ಮ ಅಂಗಡಿಯಲ್ಲಿನ ಅನೇಕ ಸೈನ್ ಬೋರ್ಡ್‌ಗಳ ಜೊತೆಗೆ ದಯವಿಟ್ಟು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಗ್ರಾಹಕರಿಗೆ ಸೂಚಿಸುವ ಇನ್ನೊಂದು ಫಲಕವಿರಿಸಿ; ಅವರು ತಮ್ಮ ಸಾಮಗ್ರಿಗಳನ್ನು ಸಾಗಿಸಲು ತಾವೇ ಬಟ್ಟೆಯ ಚೀಲಗಳನ್ನು ತರಬೇಕು ಅಥವಾ ಬಟ್ಟೆಯ ಚೀಲಗಳನ್ನು ಖರೀದಿಸಬೇಕು. ನಾವು ಅಂತಹ ಪರಿಸರವನ್ನು ಸೃಷ್ಟಿಸೋಣ. ನಾವು ಸಾಮಾನ್ಯವಾಗಿ ದೀಪಾವಳಿಯಂದು ಜನರಿಗೆ ಉಡುಗೊರೆಗಳನ್ನು ನೀಡುತ್ತೇವೆ. ಈ ವರ್ಷ ಮತ್ತು ಪ್ರತಿ ಬಾರಿಯೂ ಉಡುಗೊರೆಗಳನ್ನು ಬಟ್ಟೆಯ ಚೀಲಗಳಲ್ಲಿ ಏಕೆ ಪ್ಯಾಕ್ ಮಾಡಬಾರದು? ಜನರು ಬಟ್ಟೆ ಚೀಲಗಳೊಂದಿಗೆ ಮಾರುಕಟ್ಟೆಗೆ ಹೋದರೆ, ಅದು ನಿಮ್ಮ ಕಂಪನಿಯ ಜಾಹೀರಾತಾಗುತ್ತದೆ. ನೀವು ಡೈರಿ ಅಥವಾ ಕ್ಯಾಲೆಂಡರ್ ನೀಡಿದರೆ ಏನೂ ಆಗುವುದಿಲ್ಲ. ಆದರೆ ನೀವು ಚೀಲವನ್ನು ನೀಡಿದರೆ, ಅದು ನಿಮ್ಮ ಜಾಹೀರಾತಿನ ಮಾಧ್ಯಮವಾಗಿರುತ್ತದೆ. ಅದು ಸೆಣಬಿನ ಚೀಲವಾಗಿರಬೇಕು. ಇದು ರೈತರಿಗೆ ಸಹಾಯ ಮಾಡುತ್ತದೆ. ಬಟ್ಟೆಯ ಚೀಲ ರೈತರಿಗೆ ಸಹಾಯ ಮಾಡುತ್ತದೆ. ಇವೆಲ್ಲ ಸಣ್ಣ ಪುಟ್ಟ ವಿಷಯಗಳು. ಹೊಲಿಗೆ ಹಾಕಲು ಬರುವ ಬಡ ವಿಧವೆಯರಿಗೆ ಇದು ಸಹಾಯ ಮಾಡುತ್ತದೆ. ನಮ್ಮ ಸಣ್ಣ ಹೆಜ್ಜೆಗಳು ಸಾಮಾನ್ಯ ಜನರ ಜೀವನವನ್ನು ಬದಲಾಯಿಸಬಹುದು ಮತ್ತು ನಾವು ನಿಟ್ಟಿನಲ್ಲಿ ಕೆಲಸ ಮಾಡಬೇಕು.

 

ನನ್ನ ಪ್ರೀತಿಯ ದೇಶಬಾಂಧವರೇ, ಅದು ಐದು ಟ್ರಿಲಿಯನ್ ಆರ್ಥಿಕತೆಯ ಕನಸಾಗಿರಲಿ ಅಥವಾ ಸ್ವಾವಲಂಬಿ ಭಾರತದ ಕನಸಾಗಿರಲಿ, ನಾವು ಮಹಾತ್ಮ ಗಾಂಧಿಯವರ ತತ್ವಗಳನ್ನು ಅನುಸರಿಸುತ್ತಿದ್ದೇವೆ. ಮಹಾತ್ಮ ಗಾಂಧಿಯವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದ ನಾವು ನಮ್ಮ ‘ಮೇಕ್ ಇನ್ ಇಂಡಿಯಾ’ಅಭಿಯಾನವನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗಿದೆ. ಉತ್ಪನ್ನಗಳನ್ನು ಭಾರತದಲ್ಲೇ ಉತ್ಪಾದಿಸುವುದು ನಮ್ಮ ಆದ್ಯತೆಯಾಗಿರಬಾರದೇ? ನಮ್ಮ ದೇಶದಲ್ಲೇ ಉತ್ಪಾದನೆಯಾಗುವುದಕ್ಕೆ ಮತ್ತು ಇಲ್ಲಿ ಲಭ್ಯವಿರುವುದಕ್ಕೆ ನಮ್ಮ ಆದ್ಯತೆ ಎಂದು ನಿರ್ಧರಿಸೋಣ. ಉತ್ತಮ ನಾಳೆಗಾಗಿ ನಾವು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕಾಗಿದೆ; ಉಜ್ವಲ ಭವಿಷ್ಯಕ್ಕಾಗಿ ನಾವು ಸ್ಥಳೀಯ ಉತ್ಪನ್ನಗಳಿಗೆ ಹೋಗಬೇಕಾಗಿದೆ. ಹಳ್ಳಿಯಲ್ಲಿ ಏನೇ ಉತ್ಪಾದಿಸಿದರೂ ಅದಕ್ಕೆ ಆದ್ಯತೆ ನೀಡಬೇಕು. ಅದು ಹಳ್ಳಿಯಲ್ಲಿ ಲಭ್ಯವಾಗದಿದ್ದರೆ ನಾವು ಅದನ್ನು ಮೀರಿ- ತಾಲ್ಲೂಕು, ಜಿಲ್ಲೆ ಮತ್ತು ನಂತರ ರಾಜ್ಯ ಮಟ್ಟಕ್ಕೆ ಹೋಗಬೇಕು. ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾರೊಬ್ಬರೂ ಹೊರ ರಾಜ್ಯಗಳಿಗೆ ಹೋಗಬೇಕು ಎಂದು ನನಗನಿಸುವುದಿಲ್ಲ. ನಮ್ಮ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ; ನಮ್ಮ ಸಣ್ಣ ಉದ್ಯಮಿಗಳು ಉತ್ತೇಜನವನ್ನು ಪಡೆಯುತ್ತಾರೆ; ನಮ್ಮ ಸಾಂಪ್ರದಾಯಿಕ ಸಂಗತಿಗಳಿಗೆ ಮಹತ್ವ ಬರುತ್ತದೆ.

ಸೋದರ, ಸೋದರಿಯರೇ ನಾವು ಮೊಬೈಲ್ ಫೋನ್ ಗಳನ್ನು ಇಷ್ಟಪಡುತ್ತೇವೆ, ನಾವು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಇಷ್ಟಪಡುತ್ತೇವೆ, ನಾವು ಫೇಸ್ಬುಕ್-ಟ್ವಿಟ್ಟರ್ ನಲ್ಲಿರಲು ಇಷ್ಟಪಡುತ್ತೇವೆ. ಈ ವಿಧಾನಗಳ ಮೂಲಕ ನಾವು ದೇಶದ ಆರ್ಥಿಕತೆಗೆ ಸಹಾಯ ಮಾಡಬಹುದು. ಅದರ ಉಪಯುಕ್ತತೆಯನ್ನು ತಿಳಿದಿರುವ ಜನರಿಗೆ ತಂತ್ರಜ್ಞಾನವು ಉಪಯುಕ್ತವಾಗಿದೆ. ಆಧುನಿಕ ಭಾರತದ ಅಭಿವೃದ್ಧಿಗೆ ತಂತ್ರಜ್ಞಾನ ಸಹಕಾರಿಯಾಗಿದೆ. ನಾವು ಡಿಜಿಟಲ್ ಪಾವತಿಯತ್ತ ಏಕೆ ಹೋಗಬಾರದು? ಸಿಂಗಾಪುರದಲ್ಲಿ ನಮ್ಮ ರುಪೇ ಕಾರ್ಡ್ ಸ್ವೀಕರಿಸಲಾಗುತ್ತದೆ ಎಂದು ಇಂದು ನಾವು ಹೆಮ್ಮೆಪಡುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದೇಶಗಳಲ್ಲಿ ರುಪೇ ಕಾರ್ಡ್ ಸ್ವೀಕರಿಸಲಾಗುವುದು. ನಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್ ಸ್ಥಿರವಾಗಿ ವಿಸ್ತಾರಗೊಳ್ಳುತ್ತಿದೆ. ಹಳ್ಳಿಗಳು, ಸಣ್ಣ ಅಂಗಡಿಗಳು ಮತ್ತು ಸಣ್ಣ ಶಾಪಿಂಗ್ ಮಾಲ್‌ಗಳಲ್ಲಿ ಡಿಜಿಟಲ್ ಪಾವತಿಗೆ ನಾವು ಒತ್ತು ನೀಡಬೇಕಲ್ಲವೇ? ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸುವ ಸಲುವಾಗಿ ನಾವು ಡಿಜಿಟಲ್ ಪಾವತಿಯತ್ತ ಸಾಗೋಣ. ನೀವು ಹಳ್ಳಿಗಳಿಗೆ ಹೋದರೆ ವ್ಯಾಪಾರಿಗಳು "ನಗದು ಮಾತ್ರ, ಸಾಲ ಇಲ್ಲ" ಎಂದು ಹೇಳುವ ಬೋರ್ಡ್‌ಗಳನ್ನು ನೀವು ಸಾಮಾನ್ಯವಾಗಿ ನೋಡುತ್ತೀರಿ. ನಾನು ಅವರಿಗೆ ಕೇಳಿಕೊಳ್ಳುವುದೇನೆಂದರೆ “ಡಿಜಿಟಲ್ ಪಾವತಿ ಬೇಕು, ನಗದು ಬೇಡ ”ಎಂಬ ಮತ್ತೊಂದು ಬೋರ್ಡ್ ಅನ್ನು ಪ್ರದರ್ಶಿಸಿ.  ನಾವು ರೀತಿಯ ವಾತಾವರಣವನ್ನು ಸೃಷ್ಟಿಸಬೇಕು. ಈ ವಿಷಯಗಳಿಗೆ ಒತ್ತು ನೀಡುವಂತೆ ನಾನು ಬ್ಯಾಂಕಿಂಗ್ ಕ್ಷೇತ್ರ ಮತ್ತು ವ್ಯಾಪಾರ ಜಗತ್ತಿನ ಜನರನ್ನು ಒತ್ತಾಯಿಸುತ್ತೇನೆ.

ನಮ್ಮ ದೇಶದಲ್ಲಿ ಮಧ್ಯಮ ವರ್ಗ ಮತ್ತು ಉನ್ನತ ಮಧ್ಯಮ ವರ್ಗ ಹೆಚ್ಚುತ್ತಿದೆ. ಇದು ಒಳ್ಳೆಯದು. ಜನರು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ತಮ್ಮ ಕುಟುಂಬದೊಂದಿಗೆ ವಿವಿಧ ದೇಶಗಳಿಗೆ ಪ್ರವಾಸ ಹೋಗುತ್ತಾರೆ. ನಮ್ಮ ಮಕ್ಕಳು ನೋಡುವುದು ಒಳ್ಳೆಯದು. ಆದರೆ ಇಂದು ನಾನು ಅಂತಹ ಎಲ್ಲ ಕುಟುಂಬಗಳನ್ನು ಕೇಳ ಬಯಸುವುದೇನೆಂದರೆ, ಅನೇಕ ಮಹಾನ್ ಪುರುಷರು ಮತ್ತು ಮಹಿಳೆಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಂತರ ಸಾಧಿಸಿದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ದೇಶದ ಬಗ್ಗೆ  ತಮ್ಮ ಮಕ್ಕಳು ತಿಳಿದುಕೊಳ್ಳಬೇಕೆಂದು ಬಯಸುತ್ತೀರಾ? ತಮ್ಮ ಮಕ್ಕಳು ದೇಶದ ನೆಲ, ಅದರ ಇತಿಹಾಸ, ಗಾಳಿ ಮತ್ತು ನೀರಿನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಲು ಬಯಸದ ಯಾವುದೇ ಪೋಷಕರು ಇದ್ದಾರೆಯೇ? ಈ ಎಲ್ಲದರಿಂದ ತಮ್ಮ ಮಕ್ಕಳು ಹೊಸ ಶಕ್ತಿಯನ್ನು ಪಡೆಯುವುದನ್ನು ಅವರು ಬಯಸುವುದಿಲ್ಲವೇ? ನಾವು ಸರಿಯಾದ ಶ್ರದ್ಧೆಯಿಂದ ಮುಂದುವರಿಯಬೇಕು. ನಾವು ಎಷ್ಟೇ ಮುಂದುವರಿದರೂ, ನಮ್ಮ ಬೇರುಗಳಿಂದ ಬೇರ್ಪಟ್ಟರೆ, ನಾವು ಎಂದಿಗೂ ಬದುಕಲು ಸಾಧ್ಯವಿಲ್ಲ. ಇಂದು ಕೆಂಪು ಕೋಟೆಯ ಪ್ರಾಕಾರದಿಂದ, ನಾನು ನಿಮ್ಮನ್ನು ಒಂದು ವಿಷಯ ಕೇಳುತ್ತಿದ್ದೇನೆ. ಇದು ಯುವಜನರ ಉದ್ಯೋಗವನ್ನು ಸೃಷ್ಟಿಸುವುದು, ಜಗತ್ತಿನಲ್ಲಿ ಭಾರತದ ಚಿತ್ರಣವನ್ನು ನಿರ್ಮಿಸುವುದು ಮತ್ತು ಭಾರತವು ಎಷ್ಟು ಸಮರ್ಥವಾಗಿದೆ ಎಂಬುದನ್ನು ಜಗತ್ತಿಗೆ ತಿಳಿಸುವುದು. ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲಿರುವ 2022 ಕ್ಕಿಂತ ಮೊದಲು, ನಾವು ನಮ್ಮ ಕುಟುಂಬಗಳನ್ನು ದೇಶದ ಕನಿಷ್ಠ 15 ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತೇವೆ ಎಂದು ನೀವು ನಿರ್ಧರಿಸುವ ಸಮಯ ಇದು. ಆ ಸ್ಥಳಗಳಲ್ಲಿ ನಾವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು, ಆದರೆ ನೀವು ಹೋಗಲೇಬೇಕು. ಉತ್ತಮ ಹೋಟೆಲ್‌ಗಳು ಇಲ್ಲದಿರಬಹುದು. ಆದರೆ, ಕೆಲವೊಮ್ಮೆ ಅಂತಹ ತೊಂದರೆಗಳು ಸಹ ಅವಕಾಶಗಳನ್ನು ತೆರೆಯುತ್ತವೆ. ಅಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ನಮ್ಮ ಮಕ್ಕಳು ತಮ್ಮ ದೇಶ ಏನೆಂದು ಕಲಿಯುತ್ತಾರೆ. ಸೌಲಭ್ಯಗಳನ್ನು ನಿರ್ಮಿಸಬಲ್ಲ ಜನರು ಸಹ ಅಲ್ಲಿಗೆ ತಲುಪುತ್ತಾರೆ ಮತ್ತು ಅದು ಉದ್ಯೋಗವನ್ನು ಸೃಷ್ಟಿಸುತ್ತದೆ. ನಾವು 100 ಉತ್ತಮ ಪ್ರವಾಸಿ ತಾಣಗಳನ್ನು ಏಕೆ ಅಭಿವೃದ್ಧಿಪಡಿಸಬಾರದು?  ಪ್ರತಿ ರಾಜ್ಯದಲ್ಲಿ 2, 5 ಅಥವಾ 7 ಉನ್ನತ ದರ್ಜೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಗುರಿ ಏಕೆ ಇರಬಾರದು? ಭಾರತದ ಈಶಾನ್ಯವು ಬೃಹತ್ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ ಆದರೆ ಎಷ್ಟು ವಿಶ್ವವಿದ್ಯಾಲಯಗಳು ದೇಶದ ಭಾಗವನ್ನು ತಮ್ಮ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಿವೆ? ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ, ನೀವು ಸಾಕಷ್ಟು ಸಮಯವನ್ನು ನೀಡುವ ಅಗತ್ಯವಿಲ್ಲ; 7 ರಿಂದ 10 ದಿನಗಳಲ್ಲಿ ನೀವು ದೇಶದೊಳಗೆ ಸುತ್ತಾಡಬಹುದು.

ನೀವು ಭೇಟಿ ನೀಡುವ ಸ್ಥಳಗಳಲ್ಲಿ ಹೊಸ ಜಗತ್ತು ಅಸ್ತಿತ್ವಕ್ಕೆ ಬರಲಿದೆ. ನಾವು ಭಾರತೀಯರು ಈಶಾನ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನಂತರ  ಜೀವನದಲ್ಲಿ ಆನಂದವನ್ನು ಪಡೆಯುತ್ತೇವೆ, ವಿದೇಶಿಯರು ಸಹ ಇದನ್ನೇ ಅನುಸರಿಸುತ್ತಾರೆ. ನಾವು ವಿದೇಶಕ್ಕೆ ಹೋದಾಗ ಅಲ್ಲಿನ ಜನರು ತಮಿಳುನಾಡಿನ ದೇವಾಲಯವನ್ನು ನೋಡಿದ್ದೀರಾ ಎಂದು ಕೇಳಿದಾಗ ನೀವು ‘ಇಲ್ಲ’ ಎಂದು ಹೇಳಿದರೆ ಹೇಗಾಗಬೇಡ ಎಂದು ಯೋಚಿಸಿ. ಅವರು ಆಶ್ಚರ್ಯಚಕಿತರಾಗುತ್ತಾರೆ. ಅವರು ವಿದೇಶಿಯರು, ಆ ದೇವಸ್ಥಾನಕ್ಕೆ ಭೇಟಿ ನೀಡಿರುತ್ತಾರೆ  ಆದರೆ ನೀವು ಭಾರತೀಯರಾಗಿ ಇಲ್ಲಿಯವರೆಗೆ ಅದನ್ನು ನೋಡಿಲ್ಲ. ಆದ್ದರಿಂದ, ನಾವು ವಿದೇಶಕ್ಕೆ ಹೋಗುವ ಮೊದಲು ನಮ್ಮ ದೇಶವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.

ಈಗ, ನನ್ನ ರೈತ ಸಹೋದರರಿಂದ ನಾನು ಏನನ್ನಾದರೂ ಕೇಳಲು ಬಯಸುತ್ತೇನೆ. ರೈತರಿಗೆ, ನನ್ನ ದೇಶವಾಸಿಗಳಿಗೆ ದೇಶ ಅವರ ಮಾತೃಭೂಮಿ. ನಾವು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಿದ್ದಂತೆ ನಮ್ಮ ಹೃದಯಗಳು ಹೊಸ ಶಕ್ತಿಯಿಂದ ತುಂಬುತ್ತವೆ.

“ವಂದೇ ಮಾತರಂ’ಎಂಬ ಪದವು ದೇಶಕ್ಕಾಗಿ ತ್ಯಾಗ ಮಾಡುವ ಇಚ್ಛೆಯೊಂದಿಗೆ ನಮ್ಮ ಹೃದಯವನ್ನು ಪುಳಕಗೊಳಿಸುತ್ತದೆ. ಸುದೀರ್ಘ ಇತಿಹಾಸವು ನಮ್ಮನ್ನು ಕರೆಯುತ್ತದೆ. ಆದರೆ ನಮ್ಮ ತಾಯ್ನಾಡಿನ ಆರೋಗ್ಯದ ಬಗ್ಗೆ ಯೋಚಿಸಲು ನಾವು ಎಂದಾದರೂ ಕಾಳಜಿ ವಹಿಸಿದ್ದೇವೆಯೇ? ನಾವು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವ ರೀತಿಯಿಂದಾಗಿ ಅದು ಮಣ್ಣಿನ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ. ಕೃಷಿಕನಾಗಿ, ಈ ಮಣ್ಣಿನ ಮಗನಾಗಿದ್ದಾಗ, ಅದರ ಆರೋಗ್ಯವನ್ನು ಹಾಳುಮಾಡಲು ನನಗೆ ಯಾವುದೇ ಹಕ್ಕಿಲ್ಲ. ನನ್ನ ಭಾರತ ಮಾತೆ ದುಃಖಿಸುವಂತೆ ಮಾಡಲು ಅಥವಾ ಅವಳನ್ನು ಅನಾರೋಗ್ಯಕ್ಕೀಡು ಮಾಡುವ ಹಕ್ಕಿಲ್ಲ.

ನಾವು ನಮ್ಮ ಸ್ವಾತಂತ್ರ್ಯದ  75 ವರ್ಷಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ.

ಪೂಜ್ಯ ಬಾಪು ನಮಗೆ ದಾರಿ ತೋರಿಸಿದ್ದಾರೆ. ನಮ್ಮ ಹೊಲಗಳಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯನ್ನು ನಾವು ಶೇ10 ಅಥವಾ ಶೇ.20 ಅಥವಾ ಶೇ.25 ರಷ್ಟು ಕಡಿತಗೊಳಿಸಲಾಗುವುದಿಲ್ಲವೇ? ಸಾಧ್ಯವಾದರೆ ನಾವು ಮುಕ್ತಿಕಾರ್ ಅಭಿಯಾನವನ್ನು ಪ್ರಾರಂಭಿಸಬಾರದೇಕೆ? ಇದು ರಾಷ್ಟ್ರಕ್ಕೆ ದೊಡ್ಡ ಸೇವೆಯಾಗಲಿದೆ. ನಮ್ಮ ಮಾತೃ ಭೂಮಿಯನ್ನು ಉಳಿಸುವಲ್ಲಿ ಇದು ಒಂದು ಉತ್ತಮ ಹೆಜ್ಜೆಯಾಗುತ್ತದೆ. ನಮ್ಮ ಮಾತೃ ಭೂಮಿಯನ್ನು ಉಳಿಸುವ ನಿಮ್ಮ ಪ್ರಯತ್ನವು ನಮ್ಮ ತಾಯ್ನಾಡಿಗೆ ಸ್ವಾತಂತ್ರ್ಯವನ್ನು ಸಾಧಿಸುವ ಕನಸನ್ನು ಈಡೇರಿಸುವ ಸಲುವಾಗಿ ವಂದೇ ಮಾತರಂ ಜಪಿಸುತ್ತಾ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಆಶೀರ್ವಾದವನ್ನೂ ಪಡೆಯುತ್ತದೆ. ಆದ್ದರಿಂದ ನನ್ನ ದೇಶವಾಸಿಗಳು ಖಂಡಿತವಾಗಿಯೂ ಇದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿರುವುದರಿಂದ ನಾನು ನಿಮಗೆ ಮನವಿ ಮಾಡುತ್ತೇನೆ. ನನ್ನ ರೈತರು ನನ್ನ ವಿನಂತಿಯನ್ನು ಈಡೇರಿಸುತ್ತಾರೆ ಏಕೆಂದರೆ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ.

ನನ್ನ ಪ್ರೀತಿಯ ಸೋದರ, ಸೋದರಿಯರೇ, ನಮ್ಮ ದೇಶದ ವೃತ್ತಿಪರರು ಜಾಗತಿಕವಾಗಿ ಕಮಾಂಡಿಂಗ್ ಸ್ಥಾನದಲ್ಲಿದ್ದಾರೆ. ಅವರ ಸಾಮರ್ಥ್ಯವನ್ನು ಚೆನ್ನಾಗಿ ಗುರುತಿಸಲಾಗಿದೆ. ಜನರು ಅವರನ್ನು ಗೌರವಿಸುತ್ತಾರೆ. ಬಾಹ್ಯಾಕಾಶದಲ್ಲಾಗಲಿ, ತಂತ್ರಜ್ಞಾನದಲ್ಲಾಗಲಿ, ನಾವು ಹೊಸ ಎತ್ತರವನ್ನು ಸಾಧಿಸಿದ್ದೇವೆ. ನಮ್ಮ ಚಂದ್ರಯಾನವು ಇದುವರೆಗೆ ಯಾರೂ ತಲುಪದ ಚಂದ್ರನ ಭಾಗದ ಕಡೆಗೆ ವೇಗವಾಗಿ ಚಲಿಸುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ. ಇದು ನಮ್ಮ ವಿಜ್ಞಾನಿಗಳ ಪಾಂಡಿತ್ಯವಾಗಿದೆ.

ಅಂತೆಯೇ, ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಉಪಸ್ಥಿತಿಯು ತುಂಬಾ ಕಡಿಮೆಯಾಗಿತ್ತು. ಇಂದು 18 ರಿಂದ 22 ವರ್ಷದೊಳಗಿನ ನನ್ನ ದೇಶದ ಯುವಕ, ಯುವತಿಯರು ಭಾರತದ ತ್ರಿವರ್ಣ ಧ್ವಜವನ್ನು ವಿವಿಧ ಕ್ರೀಡಾಂಗಣಗಳಲ್ಲಿ ಹಾರಿಸುತ್ತಿದ್ದಾರೆ. ಅದು ಎಷ್ಟೊಂದು ಹೆಮ್ಮೆ ಅನಿಸುತ್ತದೆ! ನಮ್ಮ ಕ್ರೀಡಾಪಟುಗಳು ದೇಶಕ್ಕಾಗಿ ಪ್ರಶಸ್ತಿಗಳನ್ನು ಗಳಿಸುತ್ತಿದ್ದಾರೆ.

ಆತ್ಮೀಯ ದೇಶಬಾಂಧವರೇ, ನಾವು ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು. ನಾವು ನಮ್ಮ ದೇಶವನ್ನು ಪರಿವರ್ತಿಸಬೇಕು. ನಾವು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ತಲುಪುವಂತೆ ಮಾಡಬೇಕು ಮತ್ತು ನಾವು ಇದನ್ನು ಒಟ್ಟಾಗಿ ಮಾಡಬೇಕು. ಸರ್ಕಾರ ಮತ್ತು ಜನರು ಇದನ್ನು ಸಾಮೂಹಿಕವಾಗಿ ಮತ್ತು ಜಂಟಿಯಾಗಿ ಸಾಧಿಸಬೇಕಾಗಿದೆ. ನಮ್ಮ 130 ಕೋಟಿ ದೇಶವಾಸಿಗಳು ಇದನ್ನು ಮಾಡಬೇಕು. ದೇಶದ ಪ್ರಧಾನ ಮಂತ್ರಿ ಕೂಡ ನಿಮ್ಮಂತಹ ದೇಶದ ಮಗು ಮತ್ತು ಅವರು ಕೂಡ ದೇಶದ ಪ್ರಜೆ. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಕ್ಷೇಮ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕಾಗುತ್ತದೆ. ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ನಮ್ಮ ಯುವಕರು ವೈದ್ಯರಾಗಬೇಕೆಂಬ ಕನಸನ್ನು ನನಸಾಗುತ್ತದೆ. 2 ಕೋಟಿಗೂ ಹೆಚ್ಚು ಬಡವರಿಗೆ ಮನೆಗಳನ್ನು ನಿರ್ಮಿಸಬೇಕಾಗಿದೆ. ನಾವು ಗ್ರಾಮೀಣ ಪ್ರದೇಶದ 15 ಕೋಟಿ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಬೇಕು, ಗ್ರಾಮೀಣ ಪ್ರದೇಶದಲ್ಲಿ 1.25 ಲಕ್ಷ ಕಿ.ಮೀ ರಸ್ತೆಗಳನ್ನು ನಿರ್ಮಿಸಬೇಕು. ಪ್ರತಿ ಹಳ್ಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಒದಗಿಸಬೇಕು ಮತ್ತು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಕಲ್ಪಿಸಬೇಕು. 50,000 ಕ್ಕೂ ಹೆಚ್ಚು ಹೊಸ ಸ್ಟಾರ್ಟ್ ಅಪ್‌ಗಳ ಜಾಲವನ್ನು ಸಹ ಹೆಚ್ಚಿಸಬೇಕಾಗಿದೆ. ನಾವು ಅನೇಕ ಕನಸುಗಳೊಂದಿಗೆ ಮುಂದುವರಿಯಬೇಕಾಗಿದೆ.

ಆದ್ದರಿಂದ, ಸಹೋದರ ಸಹೋದರಿಯರೇ, ನಾವು ದೇಶವಾಸಿಗಳು ಒಟ್ಟಾಗಿ ಕನಸುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ದೇಶವನ್ನು ಮುಂದೆ ಸಾಗಿಸಬೇಕಾಗಿದೆ ಮತ್ತು ಈ 75 ವರ್ಷಗಳ ಸ್ವಾತಂತ್ರ್ಯ ನಮಗೆ ಬಹಳ ದೊಡ್ಡ ಪ್ರೇರಣೆಯಾಗಿದೆ.

130 ಕೋಟಿ ದೇಶವಾಸಿಗಳು ಸವಾಲುಗಳನ್ನು, ಕನಸುಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಕನಸು ಮತ್ತು ಸವಾಲಿಗೆ ತನ್ನದೇ ಆದ ಮಹತ್ವವಿದೆ. ಕೆಲವು ಹೆಚ್ಚು ಮಹತ್ವದ್ದಾಗಿವೆ ಮತ್ತು ಕೆಲವು ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ ಎನ್ನುವ ಹಾಗಿಲ್ಲ. ಭಾಷಣದಲ್ಲಿ ಎಲ್ಲಾ ವಿಷಯಗಳನ್ನು ಪರಿಶೀಲಿಸಲು ನನಗೆ ಸಾಧ್ಯವಾಗದಿರಬಹುದು. ಆದ್ದರಿಂದ, ನಾನು ಇಂದು ಮಾತನಾಡಿದ ಮತ್ತು ಮಾತನಾಡಲು ಸಾಧ್ಯವಾಗದ ಯಾವುದೇ ವಿಷಯಗಳೂ ಸಹ ಅಷ್ಟೇ ಮುಖ್ಯ. ನಾವು ಮುಂದೆ ಸಾಗಬೇಕಾದರೆ, ನಾವು ನಮ್ಮ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ನೆನಪಿನಲ್ಲಿಡಬೇಕು.

75 ವರ್ಷಗಳ ಸ್ವಾತಂತ್ರ್ಯ, 150 ವರ್ಷಗಳ ಗಾಂಧಿ ಮತ್ತು ಭಾರತದ ಸಂವಿಧಾನಕ್ಕೆ 70 ವರ್ಷಗಳು ಪೂರ್ಣಗೊಂಡಿರುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸಾಗಿದೆ. ನಾವು ವರ್ಷ ಗುರುನಾನಕ್ ದೇವ್  ಅವರ 550 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಇಡೀ ಪ್ರಪಂಚದ ನಿರೀಕ್ಷೆಗೆ ಅನುಗುಣವಾಗಿ ಉತ್ತಮ ಸಮಾಜ ಮತ್ತು ಉತ್ತಮ ದೇಶವನ್ನು ನಾವು ನಿರ್ಮಿಸಬೇಕಾಗಿರುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗುರುನಾನಕ್ ದೇವ್  ಅವರ ಬೋಧನೆಗಳನ್ನು ಅನುಸರಿಸಿ ನಾವು ಮುಂದೆ ಸಾಗೋಣ.

ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಮ್ಮ ಗುರಿಗಳು ಹಿಮಾಲಯದಷ್ಟು ಎತ್ತರವಾಗಿವೆ ಎಂದು ನಮಗೆ ತಿಳಿದಿದೆ. ನಮ್ಮ ಕನಸುಗಳು ಅಸಂಖ್ಯಾತ ನಕ್ಷತ್ರಗಳಿಗಿಂತಲೂ ಹೆಚ್ಚಿವೆ. ಆದರೆ ಆಕಾಶಕ್ಕೂ ಸಹ ನಮ್ಮ ಧೈರ್ಯವನ್ನು ಪರೀಕ್ಷಿಸಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ.

ಇದು ನಮ್ಮ ಸಂಕಲ್ಪ, ಹಿಂದೂ ಮಹಾಸಾಗರದಂತೆಯೇ ನಮ್ಮ ಸಾಮರ್ಥ್ಯವನ್ನೂ ಅಳೆಯಲಾಗದು. ನಮ್ಮ ಪ್ರಯತ್ನಗಳು ಗಂಗೆಯಂತೆ ಪವಿತ್ರವಾಗಿವೆ ಮತ್ತು ಸದಾ ಹರಿಯುತ್ತಿರುತ್ತವೆ. ಈ ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮೌಲ್ಯಗಳು ನಮ್ಮ ಪ್ರಾಚೀನ ಸಂಸ್ಕೃತಿಯಿಂದ ಮತ್ತು ನಮ್ಮ ಋಷಿಮುನಿಗಳು ಮತ್ತು ಸಂತರ ತಪಸ್ಸಿನಿಂದ ಸ್ಫೂರ್ತಿ ಪಡೆಯುತ್ತವೆ. ನಮ್ಮ ದೇಶವಾಸಿಗಳ ತ್ಯಾಗ ಮತ್ತು ಕಠಿಣ ಪರಿಶ್ರಮ ನಮಗೆ ಪ್ರೇರಣೆ.

ಬನ್ನಿ, ಈ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಭಾರತವನ್ನು ನಿರ್ಮಿಸಲು ನಾವು ಮುಂದುವರಿಯೋಣ ಮತ್ತು ಮನಸ್ಸಿನಲ್ಲಿ ಸಂಕಲ್ಪ ತೊಡೋಣ. ಹೊಸ ವಿಶ್ವಾಸ ಮತ್ತು ನವಭಾರತವನ್ನು ನಿರ್ಮಿಸುವ ಹೊಸ ಸಂಕಲ್ಪದೊಂದಿಗೆ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದು ನಮ್ಮ ಮಂತ್ರವಾಗಿರಬೇಕು. ಈ ಒಂದೇ ಒಂದು ನಿರೀಕ್ಷೆಯಿಂದ ನಾವು ಒಟ್ಟಾಗಿ ನಮ್ಮ ದೇಶವನ್ನು ಮುಂದಕ್ಕೆ ಸಾಗಿಸೋಣ. ದೇಶಕ್ಕಾಗಿ ಬದುಕಿದ, ಹೋರಾಡಿದ, ಮಡಿದ ಎಲ್ಲರಿಗೂ ನಾನು ಮತ್ತೊಮ್ಮೆ ನಮಸ್ಕರಿಸುತ್ತೇನೆ.

ಜೈ ಹಿಂದ್.

ಜೈ ಹಿಂದ್.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ವಂದೇ ಮಾತರಂ

ವಂದೇ ಮಾತರಂ

ತುಂಬಾ ತುಂಬಾ ಧನ್ಯವಾದಗಳು. 



(Release ID: 1582121) Visitor Counter : 1629