ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರಕ್ಕೆ ರೂ. 33,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು, ಪೂರ್ವ ಭಾರತ ಮತ್ತು ಬಿಹಾರದ ಅಭಿವೃದ್ಧಿಗೆ ಆದ್ಯತೆ ಎಂದರು
प्रविष्टि तिथि:
17 FEB 2019 3:36PM by PIB Bengaluru
ಬಿಹಾರಕ್ಕೆ ರೂ. 33,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು, ಪೂರ್ವ ಭಾರತ ಮತ್ತು ಬಿಹಾರದ ಅಭಿವೃದ್ಧಿಗೆ ಆದ್ಯತೆ ಎಂದರು
ರೂ. 13,365 ಕೋಟಿಯ ಪಟ್ನಾ ಮೆಟ್ರೋ ರೈಲು ಯೋಜನೆ ಅಡಿಗಲ್ಲು ಸಮಾರಂಭಕ್ಕೆ ಪ್ರಧಾನಮಂತ್ರಿಯವರಿಂದ ಚಾಲನೆ, ಪಟ್ನಾ ನಗರ ಅನಿಲ ವಿತರಣಾ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ ಮಂತ್ರಿಗಳು, ಬರೌನಿ ಶುದ್ದೀಕರಣ ಘಟಕದ ವಿಸ್ತರಣೆ ಆರಂಭ, ಛಾಪ್ರಾ ಮತ್ತು ಪುರ್ನಿಯಾದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಶಂಖುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
ಬಿಹಾರದಲ್ಲಿ ಮೂಲಭೂತ ಸೌಕರ್ಯ, ಸಂಪರ್ಕ, ಇಂಧನ, ಭಧ್ರತೆ ಮತ್ತು ಆರೋಗ್ಯ ಸೇವೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂ. 33,000 ಕೋಟಿ ಮೌಲ್ಯದ ಯೋಜನೆಗಳನ್ನು ಇಂದು ಬರೌನಿಯಲ್ಲಿ ಅನಾವರಣಗೊಳಿಸಿದರು. ಬಿಹಾರದ ರಾಜ್ಯಪಾಲರಾದ, ಲಾಲ್ಜೀ ಟಂಡನ್, ಮುಖ್ಯ ಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯ ಮಂತ್ರಿ ಸುಶೀಲ್ ಮೋದಿ, ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಪ್ರಧಾನ ಮಂತ್ರಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಾಂಕೇತಿಕವಾಗಿ ಡಿಜಿಟಲ್ ಬಟನ್ ಒತ್ತುವ ಮೂಲಕ ರೂ. 13,365 ಕೋಟಿಯ ಅಂದಾಜು ವೆಚ್ಚದ ಪಟ್ನಾ ಮೆಟ್ರೋ ರೈಲು ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಪ್ರಧಾನಿಯವರು ಚಾಲನೆ ನೀಡಿದರು. ಇದು ದಾನಾಪುರ್ ನಿಂದ ಮಿಥಾಪೂರ್ ಮತ್ತು ಪಟ್ನಾ ರೈಲ್ವೇ ನಿಲ್ದಾಣದಿಂದ ಹೊಸ ಐ ಎಸ್ ಬಿ ಟಿ ಗೆ ಎರಡು ಮಾರ್ಗಗಳನ್ನು ಹೊಂದಿದ್ದು, ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆ ಪಟ್ನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕ ಸಾರಿಗೆಯನ್ನು ಸುಗಮಗೊಳಿಸಲಿದೆ
ಇದೇ ಸಂದರ್ಭದಲ್ಲಿ ಫುಲ್ ಪೂರ್ ನಿಂದ ಪಟ್ನಾ ವರೆಗೆ ವಿಸ್ತರಿಸಲಾಗುತ್ತಿರುವ, ಜಗದೀಶ್ ಪೂರ್ - ವಾರಣಾಸಿ ನೈಸರ್ಗಿಕ ಅನಿಲದ ಪೈಪ್ ಲೈನನ್ನು ಪ್ರಧಾನ ಮಂತ್ರಿ ಉದ್ಘಾಟಿಸಿದರು. ಅವರಿಂದ ಶಂಕುಸ್ಥಾಪನೆ ಮಾಡಲಾದ ಯೋಜನೆಗಳು, ಅವರಿಂದಲೇ ಉದ್ಘಾಟನೆಯಾಗುತ್ತಿರುವುದು,ತಾವು ಕಂಡ ಅಭಿವೃದ್ಧಿಯ ಕನಸಿನ ಮತ್ತೊಂದು ಉದಾಹರಣೆಯೆಂದು ಪ್ರಸ್ತಾಪಿಸುತ್ತಾ, ಈ ಯೋಜನೆಯನ್ನು 2015ರ ಜುಲೈನಲ್ಲಿ ಉಪಕ್ರಮಿಸಿದ್ದಾಗಿ ತಿಳಿಸಿದರು. “ಇದು ಸ್ಥಳೀಯ ಕೈಗಾರಿಕೆಗಳಿಗೆ ಅನಿಲ ಸರಬರಾಜು ಮಾಡುವುದಲ್ಲದೇ, ಪಟ್ನಾದಿಂದ ಪೈಪ್ ಲೈನ್ ಮೂಲಕ ಅನಿಲ ಸರಬರಾಜು ಆರಂಭಿಸುವುದರಿಂದ ಬಾರೌನಿ ಕಾರ್ಖಾನೆಯ ಪುನಶ್ಚೇತನವನ್ನು ಖಾತ್ರಿ ಪಡಿಸುತ್ತದೆ. ಈ ಅನಿಲ ಮೂಲದ ಪರಿಸರ ನಿರ್ಮಾಣ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.
ಈ ಪ್ರದೇಶದ ಪ್ರಾಮುಖ್ಯತೆಗಳನ್ನು ಪ್ರತಿಬಿಂಬಿಸಲು “ಪೂರ್ವ ಭಾರತ ಮತ್ತು ಬಿಹಾರದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ” ಎಂದು ಪ್ರಧಾನ ಮಂತ್ರಿಗಳು ನುಡಿದರು. ಪ್ರಧಾನ ಮಂತ್ರಿ ಊರ್ಜಾ ಗಂಗಾ ಯೋಜನೆಯಡಿ ವಾರಣಾಸಿ, ಭುವನೇಶ್ವರ್, ಕಟಕ್, ಪಟ್ನಾ, ರಾಂಚಿ ಮತ್ತು ಜೆಮ್ ಶೆಡ್ ಪುರ್ ಗಳಿಗೆ ಪೈಪ್ಲೈನ್ ಮೂಲಕ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ. ಪಟ್ನಾ ನಗರ ಅನಿಲ ವಿತರಣೆ ಯೋಜನೆಯನ್ನು ಪ್ರಧಾನಮಂತ್ರಿಗಳು ಪಟ್ನಾದಲ್ಲಿ ಉದ್ಘಾಟಿಸಿದರು. ಇದು ಪಟ್ನಾ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಪೈಪ್ಲೈನ್ ಮೂಲಕ ಅನಿಲ ಸರಬರಾಜು ಮಾಡಲಿದೆ.
ಈ ಯೋಜನೆಗಳು ಪಟ್ನಾ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಸಂಪರ್ಕ ವೃದ್ಧಿಸಲಿದೆ ಮತ್ತು ಈ ಪ್ರದೇಶಗಳಲ್ಲಿ ಅನಿಲದ ಲಭ್ಯತೆಯನ್ನು ಹೆಚ್ಚಿಸಲಿದೆ.
ಬಡವರ್ಗದ ಜನರ ಶ್ರೇಯೋಭಿವೃದ್ಧಿಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿಗಳು “ ಎನ್ ಡಿ ಎ ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಕಳೆದ 70 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಹೆಣಗುತ್ತಿರುವ ಸಮಾಜದಲ್ಲಿ ತುಳಿತಕ್ಕೊಳಗಾದವರ ಶ್ರೇಯೋಭಿವೃದ್ಧಿ ಹೀಗೆ ದ್ವಿ ಮಾರ್ಗಗಳ ಮೂಲಕ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದೆ” ಎಂದು ತಿಳಿಸಿದರು.
ಬಿಹಾರದ ಆರೋಗ್ಯ ರಕ್ಷಣಾ ವ್ಯವಸ್ಥೆ ಕುರಿತು ಮಾತನಾಡಿದ ಅವರು, “ಆರೋಗ್ಯ ರಕ್ಷಣೆಯ ಮೂಲಭೂತ ಅಭಿವೃದ್ಧಿ ವಿಚಾರದಲ್ಲಿ ಬಿಹಾರಕ್ಕೆ ಇದೊಂದು ಐತಿಹಾಸಿಕ ದಿನ ಎಂದರು. ಛಾಪ್ರಾ ಮತ್ತು ಪೂರ್ಣಿಯಾದಲ್ಲಿ ಹೊಸ ವೃದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಗಯಾ ಮತ್ತು ಭಾಗಲ್ ಪುರ್ ದಲ್ಲಿರುವ ಕಾಲೇಜುಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಜನರ ಆರೋಗ್ಯ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲು ಪಟ್ನಾದಲ್ಲಿ ಎಐಐಎಂಎಸ್ ಕಾರ್ಯನಿರ್ವಹಿಸುತ್ತಿದ್ದು ಮತ್ತೊಂದು ಎಐಐಎಂಎಸ್ ಸ್ಥಾಪನೆಯ ಕಾರ್ಯ ಪ್ರಗತಿಯಲ್ಲಿದೆ” ಎಂದರು.
ಪಟ್ನಾದಲ್ಲಿ ನದಿ ಪಾತ್ರದ ಅಭಿವೃದ್ಧಿಯ ಪ್ರಥಮ ಹಂತವನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಅವರು 96.54 ಕಿ. ಮೀ. ಗಳ ಕರ್ಮಾಲಿಚಕ್ ಚರಂಡಿ ವ್ಯವಸ್ಥೆಯ ಜಾಲದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು. ಬಾರ್ಹ್, ಸುಲ್ತಾನ್ ಗಂಜ್ ಮತ್ತು ನೌಗಾಶಿಯಾದಲ್ಲಿ ಚರಂಡಿ ನೀರು ಶುದ್ಧಿಕರಣ ಘಟಕಕ್ಕೆ ಸಂಬಂಧಿಸಿದ ಕಾರ್ಯಗಳು ಪ್ರಧಾನ ಮಂತ್ರಿಗಳಿಂದ ಉದ್ಘಾಟಿಸಲ್ಪಟ್ಟವು. ವಿವಿಧ ಪ್ರದೇಶಗಳಲ್ಲಿ ಆರಂಭವಾಗಲಿರುವ 22 ಅಮೃತ್ ಯೋಜನೆಗಳಿಗೂ ಅವರು ಶಂಕು ಸ್ಥಾಪನೆ ನೆರವೇರಿಸಿದರು.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಕುರಿತು ದೇಶದೆಲ್ಲೆಡೆ ತಲೆದೂರಿರುವ ನೋವು, ಸಿಟ್ಟು, ಶೋಕದ ವಾತಾವರಣದ ಕುರಿತು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು, “ನನ್ನ ಒಡಲಲ್ಲಿ ದಹಿಸುತ್ತಿರುವ ಜ್ವಾಲೆ ನಿಮ್ಮಲ್ಲೂ ಉರಿಯುತ್ತಿದೆ ಎಂದು ಭಾವಿಸುತ್ತೇನೆ ” ಎಂದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಪಟ್ನಾದ ಹುತಾತ್ಮ ಯೋಧ ಕಾನ್ಸ್ ಟೇಬಲ್ ಸಂಜಯ್ ಕುಮಾರ್ ಸಿನ್ಹಾ ಮತ್ತು ಭಾಗಲ್ ಪುರದ ರತನ್ ಕುಮಾರ್ ಠಾಕೂರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿಯವರು, ಇಂಥ ಶೊಕತಪ್ತ ಸಂದರ್ಭದಲ್ಲಿ ಸಂಪೂರ್ಣ ರಾಷ್ಟ್ರ ಹುತಾತ್ಮರ ಕುಟುಂಬಗಳೊಂದಿಗೆ ನಿಲ್ಲುತ್ತದೆ ಎಂದರು.
ಬರೌನಿಯ ಶುದ್ಧೀಕರಣ ವಿಸ್ತರಣಾ ಯೋಜನೆಯ 9 ಎಂ ಎಂ ಟಿ ಎ ವಿ ಯು ಗೆ ಪ್ರಧಾನಿ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದರು. ದುರ್ಗಾಪುರ್ ದಿಂದ ಮುಝಫರ್ ಪುರ್ ಮತ್ತು ಪಟ್ನಾವರೆಗಿನ ಪಾರಾದೀಪ್-ಹಲ್ದಿಯಾ- ದುರ್ಗಾಪುರ್ ಎಲ್ ಪಿ ಜಿ ಪೈಪ್ ಲೈನ್ ವೃದ್ಧಿಗೆ ಸಹ ಪ್ರಧಾನ ಮಂತ್ರಿಗಳು ಅಡಿಗಲ್ಲು ಸಮಾರಂಭ ನೆರವೇರಿಸಿದರು. ಬರೌನಿ ಶುದ್ಧೀಕರಣ ಘಟಕದಲ್ಲಿ ಎ ಟಿ ಎಫ್ ಹೈಡ್ರೋ ಟ್ರೀಟಿಂಗ್ ಘಟಕಕ್ಕೂ (ಐ ಎನ್ ಡಿ ಜೆ ಇ ಟಿ) ಅಡಿಗಲ್ಲು ಸಮಾರಂಭ ನೆರವೇರಿಸಿದರು. ಈ ಯೋಜನೆಗಳು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿಲದ ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಪ್ರಧಾನ ಮಂತ್ರಿಗಳು ತಮ್ಮ ಈ ಭೇಟಿಯ ವೇಳೆ ಬರೌನಿಯಲ್ಲಿರುವ ಅಮೋನಿಯಾ-ಯೂರಿಯಾ ರಸಗೊಬ್ಬರ ಕಾಂಪ್ಲೆಕ್ಸ್ ಗೆ (ಕಟ್ಟಡಕ್ಕೆ) ಅಡಿಗಲ್ಲು ಸಮಾರಂಭ ನೆರವೇರಿಸಿದರು. ಇದು ರಸಗೊಬ್ಬರ ಉತ್ಪಾದನೆಗೆ ಪುಷ್ಠಿ ನೀಡಲಿದೆ
ಬರೌನಿ-ಕುಮೆದ್ ಪುರ್, ಮುಝಫರ್ ಪುರ್-ರಕ್ಸೌಲ್, ಫತೂಹ - ಇಸ್ಲಾಂ ಪುರ್, ಬಿಹಾರ್ ಶರೀಫ್ – ದನಿಯಾವಾನ್ ವಿಭಾಗದ ರೈಲ್ವೇ ಹಲಿಗಳ ವಿದ್ಯುದೀಕರಣ ಕಾರ್ಯದ ಉದ್ಘಾಟನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಂಚಿ – ಪಟ್ನಾ ವಿಭಾಗಗಳ ಹವಾ ನಿಯಂತ್ರಿತ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.
ಬರೌನಿಯ ನಂತರ ಪ್ರಧಾನ ಮಂತ್ರಿಯವರ ಮುಂದಿನ ಪಯಣ ಜಾರ್ಖಂಡ್ ನೆಡೆಗೆ. ಇಲ್ಲಿ ಅವರು ಹಝಾರಿ ಬಾಗ್ ಮತ್ತು ರಾಂಚಿಗೆ ಭೇಟಿ ನೀಡಲಿದ್ದಾರೆ. ಹಝಾರಿ ಬಾಗ್, ಡುಮ್ಕಾ ಮತ್ತು ಪಲಾಮೌ ನಲ್ಲಿ ಅವರು ಆಸ್ಪತ್ರೆಗಳಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
(रिलीज़ आईडी: 1564966)
आगंतुक पटल : 104