ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ತಿರುಪ್ಪೂರಿಗೆ ಪಿ.ಎಂ. ಭೇಟಿ

Posted On: 10 FEB 2019 4:04PM by PIB Bengaluru

ತಮಿಳುನಾಡಿನ ತಿರುಪ್ಪೂರಿಗೆ ಪಿ.ಎಂ. ಭೇಟಿ 
 

ತಿರುಪ್ಪೂರ್ ನಲ್ಲಿ ಇಎಸ್.ಐ.ಸಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ, ಚೆನ್ನೈ ಮೆಟ್ರೋದ Iನೇ ಹಂತದ ಎಲ್ಲ 45 ಕಿ.ಮೀ. ಕಾರ್ಯಾರಂಭ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಚಾಲನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ತಿರುಪ್ಪೂರಿಗೆ ಇಂದು ಭೇಟಿ ನೀಡಿ, ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

 

ಪ್ರಧಾನಮಂತ್ರಿಯವರು ತಿರುಪ್ಪೂರಿನ ಪೆರುಮಾನಲ್ಲೂರು ಗ್ರಾಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಅನಾವರಣ ಮಾಡಿದರು.

 

ಅವರು ನೌಕರರ ರಾಜ್ಯ ವಿಮಾ ನಿಗಮ (ಇಎಸ್.ಐ.ಸಿ.)ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಿರುಪ್ಪೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. 100 ಹಾಸಿಗೆಗಳ ಸಾಮರ್ಥ್ಯದ ಈ ಸುಸಜ್ಜಿತ ಆಸ್ಪತ್ರೆ ತಿರುಪ್ಪೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಇ.ಎಸ್.ಐ. ಕಾಯಿದೆ ವ್ಯಾಪ್ತಿಗೆ ಒಳಪಡುವ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲಿದೆ. ಈ ಮುನ್ನ ಈ ಎಲ್ಲ ಜನರಿಗೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇ.ಎಸ್.ಐ.ಸಿ.ಯ ಡಿಸ್ಪೆನ್ಸರಿಗಳು ಆರೋಗ್ಯ ಸೇವೆ ಒದಗಿಸುತ್ತಿದ್ದವು. ಮುಂದುವರಿದ ಚಿಕಿತ್ಸೆಗಾಗಿ ಅವರು 50 ಕಿ.ಮೀ. ದೂರದ ಕೊಯಮತ್ತೂರಿನ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೋಗಬೇಕಿತ್ತು.

 

ಅವರು ಚೆನ್ನೈನ ಇ.ಎಸ್.ಐ.ಸಿ. ಆಸ್ಪತ್ರೆಯನ್ನು ದೇಶಕ್ಕೆ ಸಮರ್ಪಿಸಿದರು. 470 ಹಾಸಿಗೆಗಳ ಸಾಮರ್ಥ್ಯದ ಈ  ಆಸ್ಪತ್ರೆ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ವೈದ್ಯಕೀಯದ ಎಲ್ಲ ವಿಭಾಗಗಳಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತದೆ.

 

ಪ್ರಧಾನಮಂತ್ರಿಯವರು ಟ್ರಿಚಿ ವಿಮಾನ ನಿಲ್ದಾಣದ ನೂತನ ಸಮಗ್ರ ಕಟ್ಟಡಕ್ಕೆ ಮತ್ತು ಚೆನ್ನೈ ವಿಮಾನ ನಿಲ್ದಾಣದ ಆಧುನೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಟ್ರಿಚಿಯಲ್ಲಿ ನೂತನ ಸಮಗ್ರ ಟರ್ಮಿನಲ್ ಕಟ್ಟಡದೊಂದಿಗೆ, ವಿಮಾನ ನಿಲ್ದಾಣವು ಪೂರ್ಣ ಪ್ರಮಾಣದಲ್ಲಿ ವಾರ್ಷಿಕ 3.63 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಿದೆ ಮತ್ತು ವಿಸ್ತರಣೆಯ ಅವಕಾಶದೊಂದಿಗೆ ಪೀಕ್ ಅವರ್ ನಲ್ಲಿ 2900 ಪ್ರಯಾಣಿಕರನ್ನು ನಿರ್ವಹಿಸಲಿದೆ. ಚೆನ್ನೈ ವಿಮಾನ ನಿಲ್ದಾಣವನ್ನು ಇ ದ್ವಾರಗಳು, ಬಯೋ ಮೆಟ್ರಿಕ್ ಆಧಾರಿತ ಪ್ರಯಾಣಿಕರ ತಪಾಸಣೆ ವ್ಯವಸ್ಥೆ, ಮತ್ತು ಇತರ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಹಾಲಿ ಇರುವ ಅಂತಾರಾಷ್ಟ್ರೀಯ ನಿರ್ಗಮನ ಟರ್ಮಿನಲ್ ನ ಸಂಚಾರ ಒತ್ತಡ ನಿವಾರಿಸುತ್ತದೆ.

 

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಎಣ್ಣೂರು ಕರಾವಳಿ ಟರ್ಮಿನಲ್ ಅನ್ನು ಇದೇ ಸಂದರ್ಭದಲ್ಲಿ ದೇಶಕ್ಕೆ ಸಮರ್ಪಿಸಲಾಯಿತು. ಈ ಟರ್ಮಿನಲ್ ನಿಂದಾಗಿ ಕೊಚ್ಚಿಯ ಕರಾವಳಿಯಿಂದ ಸರಕು ಸಾಗಣೆ ಮಾಡಬಹುದಾಗಿದೆ, ಆ ಮೂಲಕ ರಸ್ತೆಯ ಮೂಲಕ ಆಗುತ್ತಿದ್ದ ಸಾಗಣೆಯ ವೆಚ್ಚವನ್ನು ತಗ್ಗಿಸಬಹುದಾಗಿದೆ.

 

ಪ್ರಧಾನಮಂತ್ರಿಯವರು ಚೆನ್ನೈ ಬಂದರಿನಿಂದ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಸಿಪಿಸಿಎಲ್)ನ ಮನಾಲಿ ರಿಫೈನರಿವರೆಗಿನ ನೂತನ ಕಚ್ಚಾ ತೈಲ ಕೊಳವೆ ಮಾರ್ಗವನ್ನು ಉದ್ಘಾಟಿಸಿದರು. ಹೆಚ್ಚಿನ ಸುರಕ್ಷತೆ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿರುವ ಈ ಕೊಳವೆ ಮಾರ್ಗ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ ಕಚ್ಚಾತೈಲ ಪೂರೈಕೆಯ ಖಾತ್ರಿ ಒದಗಿಸುತ್ತದೆ ಮತ್ತು ತಮಿಳುನಾಡು ಮತ್ತು ನೆರೆಯ ರಾಜ್ಯಗಳ ಅಗತ್ಯವನ್ನು ಪೂರೈಸುತ್ತದೆ.

 

ಚೆನ್ನೈ ಮೆಟ್ರೋದ ಎಜಿ-ಡಿಎಂ.ಎಸ್. ಮೆಟ್ರೋ ನಿಲ್ದಾಣದಿಂದ ವಾಷರ್ಮೆನ್ ಪೇಟ್  ಮೆಟ್ರೋ ನಿಲ್ದಾಣದವರೆಗಿನ ವಿಭಾಗದಲ್ಲಿ ಪ್ರಯಾಣಿಕರ ಸೇವೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. 10 ಕಿ.ಮೀ.ಗಳ ಈ ವಿಭಾಗವು ಚೆನ್ನೈ ಮೆಟ್ರೋ ಮೊದಲ ಹಂತದ ಭಾಗವಾಗಿದೆ. ಇದರೊಂದಿಗೆ ಪ್ರಥಮ ಹಂತದ ಎಲ್ಲ 45 ಕಿ.ಮೀ. ಯೋಜನೆ ಕಾರ್ಯಾಚರಣೆ ಮಾಡಿದಂತಾಗಿದೆ.

 

ಪ್ರಧಾನಮಂತ್ರಿಯವರು ಇಲ್ಲಿಂದ ತಮ್ಮ ಕೊನೆಯ ಚರಣದ ಭೇಟಿಗಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

 

*****



(Release ID: 1563743) Visitor Counter : 83