ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬೆಲ್ಜಿಯಂ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

ಪ್ರಕಟಣಾ ದಿನಾಂಕ: 03 SEP 2026 2:29PM by PIB Bengaluru

ಗೌರವಾನ್ವಿತ ಮಾನ್ಯ ಪ್ರಧಾನ ಮಂತ್ರಿಗಳೇ,

ಉಭಯ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಭಾರತಕ್ಕೆ ಮೊದಲ ಭೇಟಿ ಕೈಗೊಂಡಿರುವ ಪ್ರಧಾನಮಂತ್ರಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ.

ಇದು ಖಂಡಿತವಾಗಿಯೂ ಅವರ ಮೊದಲ ಭಾರತ ಭೇಟಿಯಾಗಿದೆ, ಆದರೆ ಅವರು ಭಾರತದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ. ಅವರು ಹಲವು ವರ್ಷಗಳ ಕಾಲ ಆಂಟ್ವಾರ್ಪ್ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು ಮತ್ತು ಆಂಟ್ವಾರ್ಪೆ ಮತ್ತು ಭಾರತ-ಬೆಲ್ಜಿಯಂ ವಜ್ರ ವ್ಯಾಪಾರದಲ್ಲಿ ದೊಡ್ಡ ಭಾರತೀಯ ಸಮುದಾಯವನ್ನು ಸದಾ ಬೆಂಬಲಿಸಿದ್ದಾರೆ.

ಮಿತ್ರರೇ,

ಭಾರತ-ಬೆಲ್ಜಿಯಂ ಸಂಬಂಧಗಳ ಬೇರುಗಳು ಇತಿಹಾಸದಲ್ಲಿ ಆಳವಾಗಿ ಬೇರೂರಿವೆ. ಮೊದಲ ಮಹಾಯುದ್ಧದ ಸಮಯದಲ್ಲಿ ಬೆಲ್ಜಿಯಂನಲ್ಲಿ ಸಾವಿರಾರು ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗ ನಮ್ಮ ಹಂಚಿಕೆಯ ಸ್ಮರಣೆಯ ಪ್ರಮುಖ ಭಾಗವಾಗಿದೆ.

ಇಂದು ಪ್ರಜಾಪ್ರಭುತ್ವ ಮೌಲ್ಯಗಳು, ಮಾರುಕಟ್ಟೆ ಆರ್ಥಿಕತೆ ಮತ್ತು ಆಳವಾದ ಜನರ-ಜನರ ಸಂಬಂಧಗಳು ನಮ್ಮನ್ನು ಸ್ವಾಭಾವಿಕ ಪಾಲುದಾರರನ್ನಾಗಿ ಮಾಡಿವೆ.

ಮಿತ್ರರೇ,

ಹತ್ತು ವರ್ಷಗಳ ಹಿಂದೆ, ನನಗೆ ಬೆಲ್ಜಿಯಂಗೆ ಭೇಟಿ ನೀಡುವ ಅವಕಾಶ ಸಿಕ್ಕಿತು, ಮತ್ತು ಕಳೆದ ದಶಕದಲ್ಲಿ ನಮ್ಮ ಪಾಲುದಾರಿಕೆ ಗಮನಾರ್ಹ ಪ್ರಗತಿ ಸಾಧಿಸಿರುವುದು ನನಗೆ ತುಂಬಾ ಸಂತಸ ತಂದಿದೆ.

ಇಂದು, ನಮ್ಮ ಸಹಕಾರದ ವ್ಯಾಪ್ತಿಯು ಸಾಂಪ್ರದಾಯಿಕ ವಲಯಗಳನ್ನು ಮೀರಿ ರಕ್ಷಣೆ ಮತ್ತು ಶುದ್ಧ ಇಂಧನದಂತಹ ಕಾರ್ಯತಂತ್ರದ ಕ್ಷೇತ್ರಗಳಿಗೆ ವಿಸ್ತರಿಸಿದೆ. ಜೋರಾವರ್ ಟ್ಯಾಂಕ್‌ನಂತಹ ಸುಧಾರಿತ ರಕ್ಷಣಾ ಸಾಧನಗಳ ಮೇಲೆ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆಂಧ್ರಪ್ರದೇಶದ ಕಾಕಿನಾಡದಲ್ಲಿ, ನಾವು ವಿಶ್ವದ ಅತಿದೊಡ್ಡ ಹಸಿರು ಅಮೋನಿಯಾ ಯೋಜನೆಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

ಮಿತ್ರರೇ,

ಜಗತ್ತು ಇಂದು ದೊಡ್ಡ ಕ್ರಾಂತಿಯ ಸಮಯಯನ್ನು ಎದುರಿಸುತ್ತಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷಗಳು ಮುಂದುವರೆದಿವೆ. ಅದು ಆಹಾರ, ಇಂಧನ ಅಥವಾ ಪೂರೈಕೆ ಸರಣಿ ಸೇರಿದಂತೆ ಪ್ರತಿಯೊಂದು ವಲಯದ ಮೇಲೆ ಅನಿಶ್ಚಿತತೆಯ ಪರಿಣಾಮಗಳನ್ನು ಮೂಡಿಸಿವೆ.

ಈ ಸವಾಲಿನ ವಾತಾವರಣದಲ್ಲಿಯೂ ಭಾರತದ ಆರ್ಥಿಕತೆಯು ತನ್ನ ಆವೇಗವನ್ನು ಕಾಯ್ದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ನಾವು ಶೇ.7.8ರಷ್ಟು ಪ್ರಗತಿಯನ್ನು ದಾಖಲಿಸಿದ್ದೇವೆ. ಇಂದು, ಭಾರತದ ಬೆಳವಣಿಗೆಯ ಕಥೆಯು ಜಗತ್ತಿಗೆ ವಿಶ್ವಾಸ ಮತ್ತು ಹೊಸ ಅವಕಾಶಗಳ ಮೂಲವಾಗುತ್ತಿದೆ.

ಮಿತ್ರರೇ,

ಈ ವರ್ಷದ ಆರಂಭದಲ್ಲಿ ನಾವು ಐತಿಹಾಸಿಕ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದೇವೆ. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವಿನ ಈ ಅಭೂತಪೂರ್ವ ಸಹಕಾರವು ಜಾಗತಿಕ ಸ್ಥಿರತೆ, ಅಭಿವೃದ್ಧಿ ಮತ್ತು ಹಂಚಿಕೆಯ ಸಮೃದ್ಧಿಗೆ ಹೊಸ ಉತ್ತೇಜನವನ್ನು ನೀಡುತ್ತದೆ.

ಭಾರತದ ನಿರಂತರ ಆರ್ಥಿಕ ಪ್ರಗತಿ ಮತ್ತು ಈ ಒಪ್ಪಂದವು ನಮ್ಮ ಆರ್ಥಿಕ ಸಂಬಂಧಗಳಿಗೆ ಹೊಸ ಮಾರ್ಗಗಳನ್ನು ತೆರೆದಿದೆ. ಇಂದು ಈ ಸಾಧ್ಯತೆಗಳನ್ನು ಸಮಗ್ರ ಫಲಿತಾಂಶಗಳಾಗಿ ಪರಿವರ್ತಿಸಲು  ನಾವು ಹಲವು  ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಮಿತ್ರರೇ,

ಭಾರತದಲ್ಲಿ ನಾವು  ಬೆಲ್ಜಿಯಂ ಕಂಪನಿಗಳಿಗೆ ಹೂಡಿಕೆ ತ್ವರಿತಗತಿ (ಫಾಸ್ಟ್-ಟ್ರ್ಯಾಕ್) ಕಾರ್ಯವಿಧಾನವನ್ನು ಸ್ಥಾಪಿಸಿದ್ದೇವೆ. ಭಾರತ-ಬೆಲ್ಜಿಯಂ ವ್ಯಾಪಾರ ವೇದಿಕೆಯನ್ನು ನಿಯಮಿತ ಕಾರ್ಯವಿಧಾನವನ್ನಾಗಿ ಮಾಡಲು ನಾವು ನಿರ್ಧರಿಸಿದ್ದೇವೆ. ಎರಡೂ ದೇಶಗಳ ಹಣಕಾಸು, ಫಿನ್‌ಟೆಕ್ ಮತ್ತು ನಿಯಂತ್ರಕ ಸಂಸ್ಥೆಗಳ ನಡುವೆ ಸಮನ್ವಯವನ್ನು ನಾವು ಬಲಪಡಿಸುತ್ತೇವೆ.

ಈ ಎಲ್ಲಾ ಉಪಕ್ರಮಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಸಾಧಿಸುತ್ತೇವೆ.

ಮಿತ್ರರೇ,

ರಕ್ಷಣಾ ಮತ್ತು ಭದ್ರತಾ ಸಹಕಾರವು ನಮ್ಮ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. ಇಂದು, ನಾವು ಎರಡೂ ದೇಶಗಳ ನಡುವೆ ಮಿಲಿಟರಿ ವಿನಿಮಯ ಮತ್ತು ತರಬೇತಿ ಸಹಕಾರವನ್ನು ವೃದ್ಧಿಸಲು ಒಪ್ಪಿಕೊಂಡಿದ್ದೇವೆ.

ನಮ್ಮ ಸರ್ಕಾರಗಳು ಮತ್ತು ರಕ್ಷಣಾ ಕೈಗಾರಿಕೆಗಳ ನಡುವಿನ ಒಪ್ಪಂದಗಳು ರಕ್ಷಣಾ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಹೊಸ ಅವಕಾಶಗಳನ್ನು ತೆರೆಯುತ್ತವೆ. ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ನಮ್ಮ ಸಂಸ್ಥೆಗಳ ನಡುವಿನ ಗುಪ್ತಚರ ಹಂಚಿಕೆ ಮತ್ತು ಸಹಕಾರವನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ.

ಮಿತ್ರರೇ,

ಶುದ್ಧ ಇಂಧನ ಭವಿಷ್ಯ ಮತ್ತು ವಿಶ್ವಾಸಾರ್ಹ ಪೂರೈಕೆ ಸರಣಿಗಳು ನಮ್ಮ ಹಂಚಿಕೆಯ ಆದ್ಯತೆಗಳಾಗಿವೆ. ಇಂದು ಸಹಿ ಹಾಕಲಾದ ನವೀಕರಿಸಬಹುದಾದ ಇಂಧನದ ಕುರಿತಾದ ಒಪ್ಪಂದವು ನಮ್ಮ ಸುಸ್ಥಿರತೆಯ ಸಹಕಾರಕ್ಕೆ ಹೊಸ ಆವೇಗವನ್ನು ನೀಡುತ್ತದೆ. ನಿರ್ಣಾಯಕ ಖನಿಜಗಳಲ್ಲಿ, ಸಂಸ್ಕರಣೆ ಮತ್ತು ಮರುಬಳಕೆಯಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ.

ಸೆಮಿಕಂಡಕ್ಟರ್‌ಗಳಲ್ಲಿ ಬೆಲ್ಜಿಯಂನ ಪರಿಣತಿ ಮತ್ತು ಭಾರತದ ಪ್ರಮಾಣವು ಪರಸ್ಪರ ಪೂರಕವಾಗಿದೆ. ಈ ದಿಕ್ಕಿನಲ್ಲಿ, ಬೆಲ್ಜಿಯಂನ ಐಎಂಇಸಿ ಸಂಸ್ಥೆಯನ್ನು ಭಾರತದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ನಾವು ಒಗ್ಗೂಡಿ ಕಾರ್ಯನಿರ್ವಹಿಸುತ್ತೇವೆ.

ಮಿತ್ರರೇ,

ಜನರ ನಡುವಿನ ಸಂಬಂಧಗಳು ನಮ್ಮ ಸಂಬಂಧದ ದೊಡ್ಡ ಶಕ್ತಿ. ಇಂದು, ನಮ್ಮ ನವೋದ್ಯಮಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಮತ್ತು ಸಾಗರ ವಲಯದಲ್ಲಿ ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸಲು ನಾವು ಒಪ್ಪಿಕೊಂಡಿದ್ದೇವೆ.

ನಾವು ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಹಕಾರವನ್ನು ಸಹ ಬಲಪಡಿಸುತ್ತೇವೆ. ಮತ್ತು, ಪ್ರತಿಭೆಗಳ ಸಂಚಾರ (ಮೊಬಿಲಿಟಿ) ಯನ್ನು ಸುಗಮಗೊಳಿಸಲು, ನಾವು ಶೀಘ್ರದಲ್ಲೇ “ವಲಸೆ ಮತ್ತು ಮೊಬಿಲಿಟಿ ಪಾಲುದಾರಿಕೆ ಒಪ್ಪಂದ”ವನ್ನು ಮುಕ್ತಾಯಗೊಳಿಸುತ್ತೇವೆ.

ಮಿತ್ರರೇ,

ನಾವು ಇಂದು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಭಾರತ ಮತ್ತು ಬೆಲ್ಜಿಯಂ ಎರಡೂ ಕಾನೂನು, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತವೆ.

ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಸಂಘರ್ಷಗಳಿಗೆ ಆರಂಭಿಕ ಅಂತ್ಯ ಮತ್ತು ಶಾಂತಿಯ ಪುನಃಸ್ಥಾಪನೆಯನ್ನು ಗುರಿಯಾಗಿರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ. ಮತ್ತು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ನಿರ್ಮೂಲನೆ ಮಾಡುವುದು ನಮ್ಮ ಹಂಚಿಕೆಯ ಬದ್ಧತೆಯಾಗಿದೆ.

ಗೌರವಾನ್ವಿತರೇ,

ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಕಳೆದ ತಿಂಗಳು ಜಂಟಿಯಾಗಿ ಹಾಕಿ ವಿಶ್ವಕಪ್ ಅನ್ನು ಆಯೋಜಿಸಿವೆ. ಈ ಭವ್ಯ ವಿಶ್ವಕಪ್‌ನ ಯಶಸ್ವಿ ಸಂಘಟನೆಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಮ್ಮ ಆಟಗಾರರ ಕಠಿಣ ಪರಿಶ್ರಮ ಮತ್ತು ಕಾರ್ಯಕ್ಷಮತೆಗಾಗಿ ನಾನು ಶ್ಲಾಘಿಸುತ್ತೇನೆ.

ವಜ್ರಗಳು ಭಾರತ ಮತ್ತು ಬೆಲ್ಜಿಯಂ ನಡುವಿನ ಕೊಂಡಿಯಾಗಿ ಬಹಳ ಹಿಂದಿನಿಂದಲೂ ಇವೆ. ಇಂದು, ನಾವು ಈ ಐತಿಹಾಸಿಕ ಬೆಸುಗೆಯನ್ನು ಹೊಸ ಮತ್ತು ಹೆಚ್ಚು ಸಮಗ್ರ ಸಂಬಂಧವಾಗಿ ಪರಿವರ್ತಿಸುತ್ತಿದ್ದೇವೆ.

ಇಂದಿನ ಚರ್ಚೆಗಳು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತವೆವೆಂದು  ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಾನು ನಿಮಗೆ ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಆತ್ಮೀಯವಾಗಿ ಸ್ವಾಗಸಿಸುತ್ತೇನೆ.

ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2306347) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Gujarati , Telugu