ಜಲ ಶಕ್ತಿ ಸಚಿವಾಲಯ
azadi ka amrit mahotsav

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 'ಸುಜಲ ಗ್ರಾಮ ಸಂವಾದ'ದ 8ನೇ ಆವೃತ್ತಿಯ ಆಯೋಜನೆ


ದೀರ್ಘಾವಧಿ ಜಲ ಭದ್ರತೆಗಾಗಿ ಪಂಚಾಯತ್‌ ಗಳನ್ನು ಸಬಲೀಕರಿಸುವ ಹಾಗೂ ಗ್ರಾಮೀಣ ಜಲ ಕ್ರಾಂತಿಯ ಯಶಸ್ಸನ್ನು ಸಂಭ್ರಮಿಸುವ 'ಸುಜಲ ಗ್ರಾಮ ಸಂವಾದ'

प्रविष्टि तिथि: 25 JUN 2026 5:10PM by PIB Bengaluru

ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯೂಎಸ್) ಬಹುಭಾಷಾ 'ಸುಜಲ ಗ್ರಾಮ ಸಂವಾದ'ದ ಎಂಟನೇ ಆವೃತ್ತಿಯನ್ನು ಇಂದು ಯಶಸ್ವಿಯಾಗಿ ಆಯೋಜಿಸಿತು, ಇದು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಸಮುದಾಯದ ನೇತೃತ್ವದ ನೀರು ನಿರ್ವಹಣೆಗೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

ಈ ಸಂವಾದದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ವಹಿಸಿದ್ದರು. ಈ ಬಹುಭಾಷಾ ಸಂವಾದದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುಜಲ ಗ್ರಾಮ ಸಂವಾದದ ಎಂಟನೇ ಆವೃತ್ತಿಯು 5 ಗ್ರಾಮ ಪಂಚಾಯತ್ ಕೇಂದ್ರ ಕಚೇರಿಗಳನ್ನು ಹೊಂದಿರುವ ಹಳ್ಳಿಗಳಲ್ಲಿ ಗ್ರಾಮ ಮಟ್ಟದ ಸಂವಾದಗಳನ್ನು ಒಳಗೊಂಡಿತ್ತು. ಈ ವರ್ಚುವಲ್ ಸಂವಾದದಲ್ಲಿ 3,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇದು ಸಮುದಾಯಗಳು ಮತ್ತು ಅಧಿಕಾರಿಗಳ ನಡುವಿನ ಬಲವಾದ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ, ಗ್ರಾಮ ಪಂಚಾಯತ್ (ಜಿಪಿ) ಮಟ್ಟದಲ್ಲಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ (ವಿ ಡಬ್ಲ್ಯೂ ಎಸ್‌ ಸಿ) ಸದಸ್ಯರು, ಸಮುದಾಯದ ಪಾಲ್ಗೊಳ್ಳುವವರು, ಜಲ ದೂತರು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು, ನೀರಿನ ಗುಣಮಟ್ಟ ತರಬೇತಿ ಪಡೆದ ಮಹಿಳೆಯರು ಮತ್ತು ಪಂಚಾಯತ್‌ ಗಳ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ದೊಡ್ಡ ಗುಂಪುಗಳಾಗಿ ಈ ಸಂವಾದದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಜೆಜೆಎಂ ರಾಜ್ಯ ಮಿಷನ್ ನಿರ್ದೇಶಕರು, ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್‌/ಡೆಪ್ಯುಟಿ ಕಮಿಷನರ್‌ ಗಳು, ಡಿ ಡಬ್ಲ್ಯೂ ಎಸ್‌ ಎಂ ಅಧಿಕಾರಿಗಳು ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದರು.

ರಾಷ್ಟ್ರೀಯ ಜಲ ಜೀವನ್ ಮಿಷನ್‌ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು ತಮ್ಮ ಆರಂಭಿಕ ನುಡಿಗಳಲ್ಲಿ, ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಗ್ರಾಮೀಣ ಮನೆಗಳಿಗೆ ಶುದ್ಧ ನಲ್ಲಿ ನೀರನ್ನು ಸರಿಯಾದ ಸಮಯಕ್ಕೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್‌ ಗಳ ಪಾತ್ರವನ್ನು ಒತ್ತಿಹೇಳಿದರು. 2019 ರಿಂದ ಭಾರತವು ಮನೆ ಮನೆಗೆ ನಲ್ಲಿ ನೀರು ಒದಗಿಸುವುದಕ್ಕೆ ಆದ್ಯತೆ ನೀಡಿದೆ ಮತ್ತು ಇಂದು ಜಲ ಜೀವನ್ ಮಿಷನ್ ಅಡಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಪಂಚಾಯತ್‌ ಗಳು, ಗ್ರಾಮ ಸಭೆಗಳು, ಸ್ವಸಹಾಯ ಸಂಘಗಳು (ಎಸ್‌ ಎಚ್‌ ಜಿ) ಮತ್ತು ಸ್ಥಳೀಯ ನಿರ್ವಾಹಕರ (ನಲ್ ಜಲ್ ಮಿತ್ರರು) ಸಕ್ರಿಯ ಪಾಲ್ಗೊಳ್ಳುವಿಕೆಯಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ನಿರ್ಮಿಸಲಾಗುತ್ತಿರುವ ಕುಡಿಯುವ ನೀರಿನ ವ್ಯವಸ್ಥೆಗಳು ಮುಂದಿನ 25-30 ವರ್ಷಗಳವರೆಗೆ ಸಮುದಾಯಗಳಿಗೆ ಸೇವೆ ನೀಡುವ ಉದ್ದೇಶವನ್ನು ಹೊಂದಿವೆ ಎಂಬುದನ್ನು ಶ್ರೀ ಕಮಲ್ ಕಿಶೋರ್ ಸೋನ್ ಅವರು ಎತ್ತಿ ತೋರಿಸಿದರು. ಆದ್ದರಿಂದ, ಪಂಚಾಯತ್‌ ಗಳು ನೀರಿನ ಮೂಲದ ಸುಸ್ಥಿರತೆ ಮತ್ತು ರಕ್ಷಣೆ, ಸಕಾಲಿಕ ಕಾರ್ಯಾಚರಣೆ ಮತ್ತು ನಿರ್ವಹಣೆ, ನೀರು ವ್ಯರ್ಥವಾಗುವುದನ್ನು ತಡೆಯುವುದು ಹಾಗೂ ದುರಸ್ತಿ ಮತ್ತು ಉಸ್ತುವಾರಿಗಾಗಿ ಸ್ಥಳೀಯ ಸಾಮರ್ಥ್ಯಗಳನ್ನು ಬಲಪಡಿಸುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ "ಸ್ಟಾಪ್ ಡಯೇರಿಯಾ ಕ್ಯಾಂಪೇನ್" (ಅತಿಸಾರ ತಡೆ ಅಭಿಯಾನ) ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರನ್ನು ಖಾತರಿಪಡಿಸಲು, ಅತಿಸಾರ ಮತ್ತು ಇತರ ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ನಿಯಮಿತವಾಗಿ ನೀರಿನ ಗುಣಮಟ್ಟದ ಪರೀಕ್ಷೆ ಮಾಡುವುದು ಮುಖ್ಯ ಎಂದರು. ಮುಂಗಾರು ಆರಂಭವಾಗಿರುವುದರಿಂದ, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ನೀರಿನ ಮೂಲಗಳ ಮೇಲೆ ನಿರಂತರ ನಿಗಾ ಇಡುವುದು, ಯಾವುದೇ ಕಲುಷಿತ ನೀರನ್ನು ತಕ್ಷಣವೇ ಶುದ್ಧೀಕರಿಸುವುದು ಮತ್ತು ತರಬೇತಿ ಪಡೆದ ಮಹಿಳೆಯರು ಹಾಗೂ ಸಮುದಾಯದ ಸ್ವಯಂಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಅವರು ಒತ್ತಿಹೇಳಿದರು.

ರಾಜ್ಯದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಅಡಿಯಲ್ಲಿರುವ ಹಣಕಾಸು ಮತ್ತು ಯೋಜನಾ ನಿಬಂಧನೆಗಳನ್ನು ಉಲ್ಲೇಖಿಸಿದರು. 15 ನೇ ಹಣಕಾಸು ಆಯೋಗದ ಅನುದಾನದ ಅವಧಿಯು ಮಾರ್ಚ್ 2026 ಕ್ಕೆ ಕೊನೆಗೊಂಡಿದ್ದು, ಈಗ 16 ನೇ ಹಣಕಾಸು ಆಯೋಗದ ಅಡಿಯಲ್ಲಿ ಕೆಲಸಗಳು ಪ್ರಾರಂಭವಾಗಿವೆ ಎಂದು ಅವರು ಮಾಹಿತಿ ನೀಡಿದರು. ಇದರ ಅಡಿಯಲ್ಲಿ, ಭಾರತ ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಸಿದ್ಧಪಡಿಸುವಂತೆ ಅವರು ಎಲ್ಲಾ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಕರೆ ನೀಡಿದರು. 16 ನೇ ಹಣಕಾಸು ಆಯೋಗದ ಅಡಿಯಲ್ಲಿ ಹಣ ಬಿಡುಗಡೆಯಾಗಲು ಪ್ರಮುಖ ಷರತ್ತು ಏನೆಂದರೆ, 15 ಆಗಸ್ಟ್ 2026 ರೊಳಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್‌ ಗಳ ಧ್ವನಿ

4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 5 ಗ್ರಾಮ ಪಂಚಾಯತ್ ಕೇಂದ್ರ ಕಚೇರಿಗಳನ್ನು ಹೊಂದಿರುವ ಹಳ್ಳಿಗಳೊಂದಿಗೆ ಗ್ರಾಮ ಮಟ್ಟದ ಸಂವಾದಗಳನ್ನು ನಡೆಸಲಾಯಿತು. ಪ್ರಾದೇಶಿಕ ಭಾಷೆಗಳಲ್ಲಿ ಸಂವಾದ ನಡೆಸುವ ತನ್ನದೇ ಆದ ವಿಶಿಷ್ಟ ಮಾದರಿಯನ್ನು ಈ ಸಂವಾದವು ಮುಂದುವರೆಸಿತು. ಇದರಿಂದಾಗಿ ಗ್ರಾಮಸ್ಥರು ಜಲ ಜೀವನ್ ಮಿಷನ್ ಮತ್ತು ಅದರ ಸಂಬಂಧಿತ ಉಪಕ್ರಮಗಳಿಗೆ ಸಂಬಂಧಿಸಿದ ಯಶಸ್ಸು ಮತ್ತು ಸವಾಲುಗಳನ್ನು ತಮ್ಮ ಮಾತೃಭಾಷೆಯಲ್ಲೇ ಹಂಚಿಕೊಳ್ಳಲು ಸಾಧ್ಯವಾಯಿತು. ಅಸ್ಸಾಮಿ, ಕನ್ನಡ, ಹರಿಯಾಣ್ವಿ, ಬೆಂಗಾಲಿ ಮತ್ತು ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಂವಹನ ನಡೆಯಿತು. ಪ್ರಾದೇಶಿಕ ಶೈಲಿಯಲ್ಲಿ ಸಂವಹನ ನಡೆಸುವ ಮೂಲಕ ಈ ಸಂವಾದವು ಅತ್ಯಂತ ವಿಶಿಷ್ಟವಾಗಿ ಮೂಡಿಬಂದಿತು.

ಗ್ರಾಮ ಪಂಚಾಯತ್-ಮುರೋರ್ಬೋರಿ, ಜಿಲ್ಲೆ-ಮರಿಗಾಂವ್, ಅಸ್ಸಾಂ: ಮುರೋರ್ಬೋರಿ ಗ್ರಾಮ ಪಂಚಾಯತ್‌ ನ ಪ್ರತಿನಿಧಿಗಳು ಅಸ್ಸಾಮಿ ಭಾಷೆಯಲ್ಲಿ ನಡೆಸಿದ ಸಂವಾದದ ಸಮಯದಲ್ಲಿ, ಪಂಚಾಯತ್ ಸದಸ್ಯರು ಮತ್ತು ಸ್ವಸಹಾಯ ಸಂಘದ (ಎಸ್‌ ಎಚ್‌ ಜಿ) ಕಾರ್ಯಕರ್ತೆಯರು ಜಲ ಜೀವನ್ ಮಿಷನ್‌ ನಿಂದ ಆಗಿರುವ ಗಮನಾರ್ಹ ಪ್ರಯೋಜನಗಳನ್ನು ವರದಿ ಮಾಡಿದರು. ಗ್ರಾಮದ ಎಲ್ಲಾ ಕುಟುಂಬಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಕುಡಿಯುವ ನೀರನ್ನು ಖಚಿತಪಡಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ತಾವು ಮಾಡಿದ ಕೆಲಸಗಳನ್ನು ಸ್ವಸಹಾಯ ಸಂಘದ ಕಾರ್ಯಕರ್ತೆಯರು ವಿವರಿಸಿದರು. ಕ್ಷೇತ್ರ ಪರೀಕ್ಷಾ ಕಿಟ್‌ ಗಳನ್ನು (ಎಫ್‌ ಟಿ ಕೆ) ಬಳಸಿಕೊಂಡು ನಿಯಮಿತವಾಗಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮಾಡಲಾಗುತ್ತಿದೆ, ಫಲಿತಾಂಶಗಳನ್ನು ಪರಿಶೀಲಿಸಲು ಸಮುದಾಯದ ಸಭೆಗಳನ್ನು ನಡೆಸಲಾಗುತ್ತಿದೆ ಮತ್ತು ಸಮಯಕ್ಕೆ ಸರಿಯಾಗಿ 'ಸಹಾಯಕ್' ಗೆ ವರದಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತ್ ಅಧ್ಯಕ್ಷರು, ಶಾಲಾ ಶಿಕ್ಷಕರು, ವಿ ಡಬ್ಲ್ಯೂ ಎಸ್‌ ಸಿ ಮತ್ತು ಜಿಪಿಡಿಸಿ ಸದಸ್ಯರನ್ನು ಒಳಗೊಂಡ ನಿಯಮಿತ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮದ ಜನರು ಸಂವಾದದ ವೇಳೆ ಹೇಳಿದರು.

ಮತ್ತಷ್ಟು ಮಾಹಿತಿ ನೀಡಿದ ಜಿಲ್ಲಾ ಮತ್ತು ರಾಜ್ಯದ ಅಧಿಕಾರಿಗಳು, ನೀರು ಸರಬರಾಜು ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಗ್ರಾಮ ಪಂಚಾಯತ್‌ ಗಳು ಹಾಗೂ ಪಿ ಎಚ್‌ ಡಿ (ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ) ಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆ ಚಟುವಟಿಕೆಗಳನ್ನು ಬಲಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. 16 ನೇ ಹಣಕಾಸು ಆಯೋಗದ ಹಣವನ್ನು ಪಡೆಯಲು ಜಿಲ್ಲಾ ಸುಧಾರಣಾ ಯೋಜನೆಗಳು ಮತ್ತು ಜಿಪಿಡಿಪಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅವರು ಒತ್ತಿಹೇಳಿದರು.

ಗ್ರಾಮ ಪಂಚಾಯತ್-ದೊಡ್ಡಜಾಲ, ಜಿಲ್ಲೆ-ಬೆಂಗಳೂರು ನಗರ, ಕರ್ನಾಟಕ: ಗ್ರಾಮದ ಪ್ರತಿನಿಧಿಗಳು ಜಲ ಶಕ್ತಿ ಸಚಿವರ ಕಚೇರಿಯ ಅಧಿಕಾರಿಯೊಂದಿಗೆ ಕನ್ನಡ ಭಾಷೆಯಲ್ಲಿ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಗ್ರಾಮ ಪಂಚಾಯತ್‌ ನ ಎಲ್ಲಾ ಮನೆಗಳಿಗೂ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದ್ದು, ಸಮರ್ಪಕ ಪ್ರಮಾಣದ ಮತ್ತು ಗುಣಮಟ್ಟದ ಕುಡಿಯುವ ನೀರನ್ನು ಖಚಿತಪಡಿಸಲಾಗಿದೆ ಎಂದು ಅವರು ತಿಳಿಸಿದರು. ಈ ಯೋಜನೆಯ ಯಶಸ್ಸಿಗೆ ಸಕ್ರಿಯ ಸಮುದಾಯದ ಭಾಗವಹಿಸುವಿಕೆ ಮತ್ತು ಸಾಮೂಹಿಕ ಕೊಡುಗೆಗಳೇ ಕಾರಣ ಎಂದು ಗ್ರಾಮಸ್ಥರು ಹೇಳಿದರು. ನೀರು ಸರಬರಾಜು ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬೆಂಬಲ ನೀಡಲು ಪ್ರತಿ ಮನೆಯಿಂದ ತಿಂಗಳಿಗೆ ₹50 ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಆದಾಗ್ಯೂ, ಕೆಲವು ನಿವಾಸಿಗಳು ನಿಯಂತ್ರಣ ಕವಾಟಗಳನ್ನು (ಕಂಟ್ರೋಲ್ ವಾಲ್ವ್) ಅನಧಿಕೃತವಾಗಿ ತಿರುಚುತ್ತಿರುವುದರಿಂದ, ಜಾಲದ ಕೊನೆಯ ಭಾಗದಲ್ಲಿರುವ ಮನೆಗಳಿಗೆ ಸಮಾನವಾಗಿ ನೀರು ವಿತರಣೆ ಮಾಡಲು ತೊಂದರೆಯಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದರು.

ಚರ್ಚೆಯ ಸಂದರ್ಭದಲ್ಲಿ, ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (ಡಿ ಡಬ್ಲ್ಯೂ ಎಸ್ ಎಂ) ಮತ್ತು ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ (ಎಸ್‌ ಡಬ್ಲ್ಯೂ ಎಸ್ ಎಂ) ಅಧಿಕಾರಿಗಳು, ಜಲ ಜೀವನ್ ಮಿಷನ್ ಅನುಷ್ಠಾನವು ಸ್ಥಿರವಾಗಿ ಪ್ರಗತಿಯಲ್ಲಿದೆ, ಅನೇಕ ಹಳ್ಳಿಗಳಲ್ಲಿ ಕೆಲಸಗಳು ಪೂರ್ಣಗೊಂಡಿವೆ ಮತ್ತು ಉಳಿದ ಯೋಜನೆಗಳು ಪೂರ್ಣಗೊಳ್ಳುವ ಹಾದಿಯಲ್ಲಿವೆ ಎಂದು ಮಾಹಿತಿ ನೀಡಿದರು. ಕಾರ್ಯಾಚರಣೆಯ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವನ್ನು ಅವರು ಗುರುತಿಸಿದರು ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹಳ್ಳಿಗಳಲ್ಲಿ 'ಜಲ ಸೇವಾ ಆಕಲನ್' (ನೀರಿನ ಸೇವೆಗಳ ಮೌಲ್ಯಮಾಪನ) ಜೊತೆಗೆ ಸಕಾಲಿಕ ಸಭೆಗಳನ್ನು ನಡೆಸಲಾಗುತ್ತಿದೆ ಮತ್ತು 'ಜಲ ಅರ್ಪಣ್' ಅನ್ನು ಸರಿಯಾಗಿ ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ರಾಜ್ಯ ಅಧಿಕಾರಿಗಳನ್ನು 'ಜಲ ಸೇವಾ ಆಕಲನ್' ನಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿರುವುದಕ್ಕಾಗಿ ಶ್ರೀ ಕಮಲ್ ಕಿಶೋರ್ ಸೋನ್ ಅವರು ಅಭಿನಂದಿಸಿದರು ಮತ್ತು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಇದೇ ಉತ್ಸಾಹವನ್ನು ಮುಂದುವರಿಸುವಂತೆ ರಾಜ್ಯಕ್ಕೆ ಒತ್ತಾಯಿಸಿದರು.

ಗ್ರಾಮ ಪಂಚಾಯತ್-ಅಮರಪುರ, ಜಿಲ್ಲೆ- ಪಲ್ವಾಲ್, ಹರಿಯಾಣ: ಅಮರಪುರ ಗ್ರಾಮ ಪಂಚಾಯತ್‌ ನ ಪ್ರತಿನಿಧಿಗಳೊಂದಿಗೆ ಹರಿಯಾಣ್ವಿ ಭಾಷೆಯಲ್ಲಿ ನಡೆದ ಸಂವಾದದ ಸಮಯದಲ್ಲಿ, ನಿಯಮಿತ ಬಳಕೆದಾರರ ಶುಲ್ಕವನ್ನು (ಸಾಮಾನ್ಯ ಕುಟುಂಬಗಳಿಗೆ ₹₹40 ಮತ್ತು ಎಸ್‌ ಸಿ/ಬಿಸಿ ಕುಟುಂಬಗಳಿಗೆ ₹20) ಸಂಗ್ರಹಿಸಲಾಗುತ್ತಿದೆ ಮತ್ತು ಇದನ್ನು ಪೈಪ್‌ಲೈನ್ ನಿರ್ವಹಣೆ ಮತ್ತು ಸೋರಿಕೆ ದುರಸ್ತಿಗಾಗಿ ಬಳಸಲಾಗುತ್ತಿದ್ದು, ನೀರು ಸರಬರಾಜು ವ್ಯವಸ್ಥೆಯ ಸುಸ್ಥಿರತೆಯನ್ನು ಖಾತ್ರಿಪಡಿಸಲಾಗಿದೆ ಎಂದು ತಿಳಿಸಲಾಯಿತು. ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಬಲವಾದ ಸಮುದಾಯ ನೇತೃತ್ವದ ನೀರು ನಿರ್ವಹಣೆಯೊಂದಿಗೆ ಮಾಸಿಕ ₹₹7,000–8,000 ಸಂಗ್ರಹಣೆಯನ್ನು ಸುಲಭವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು. ತಿಂಗಳಿಗೆ ಎರಡು ಬಾರಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ ಮತ್ತು ನೀರನ್ನು ಉಳಿಸಲು ಗ್ರಾಮದ ಸದಸ್ಯರೊಂದಿಗೆ ಮಾಸಿಕ ಸಭೆಗಳನ್ನು ನಡೆಸುವ ಮೂಲಕ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ಮತ್ತಷ್ಟು ಮಾಹಿತಿ ಹಂಚಿಕೊಂಡ ಗ್ರಾಮದ ಮಹಿಳೆಯರು, ತಾವು ನೀರಿನ ಏಕೈಕ ರಕ್ಷಕರಾಗಿರುವುದರಿಂದ ನೀರಿನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ನೀರನ್ನು ವಿವೇಚನೆಯಿಂದ ಬಳಸುವುದು, ಉಳಿಸುವುದು ಮತ್ತು ಸಂರಕ್ಷಿಸುವ ಬಗ್ಗೆ ಮನೆ ಮನೆಗೆ ಹೋಗಿ ಪರಸ್ಪರ ಸಂವಹನದ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು. ಇದು ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಬಳಸಿದ ನೀರಿನ ಮರುಬಳಕೆ ಮತ್ತು ನೀರಿನ ಮೂಲದ ಸುಸ್ಥಿರತೆಯ ಕ್ರಮಗಳ ಬಗ್ಗೆಯೂ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಸಂವಾದದ ಸಮಯದಲ್ಲಿ ಪಲ್ವಾಲ್‌ ನ ಜಿಲ್ಲಾಧಿಕಾರಿ ಡಾ. ಜೈಂದರ್ ಸಿಂಗ್ ಚಿಲ್ಲರ್ ಅವರು, ಅಮರಪುರವು ಒಂದು ಮಾದರಿ ಗ್ರಾಮವಾಗಿದ್ದು, ಇದನ್ನು ಈಗಾಗಲೇ 'ಒಡಿಎಫ್ ಪ್ಲಸ್' (ಬಯಲುಶೌಚ ಮುಕ್ತ ಪ್ಲಸ್) ಎಂದು ಘೋಷಿಸಲಾಗಿದೆ ಎಂದು ಹೈಲೈಟ್ ಮಾಡಿದರು. ಇದಲ್ಲದೆ, ಗ್ರಾಮವನ್ನು ಒಡಿಎಫ್ ಪ್ಲಸ್‌ ನಿಂದ 'ವಾಟರ್ ಪ್ಲಸ್' (ನೀರಿನ ಸುಸ್ಥಿರತೆ) ಸ್ಥಿತಿಗೆ ಕೊಂಡೊಯ್ಯಲು ಸಾರ್ವಜನಿಕ ಆರೋಗ್ಯ ಇಲಾಖೆಯೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದರು. ಹರಿಯಾಣದ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ನೀರು ಸರಬರಾಜು ಯೋಜನೆಗಳ ಪಂಚಾಯತ್ ನೇತೃತ್ವದ ನಿರ್ವಹಣೆಯ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದರು. ನೀರಿನ ಶುಲ್ಕ ಸಂಗ್ರಹಣೆಗೆ ಲಿಂಕ್ ಮಾಡಲಾದ ಆರ್ಥಿಕ ಪ್ರೋತ್ಸಾಹಕಗಳ ಬೆಂಬಲದೊಂದಿಗೆ, ಈಗಾಗಲೇ 400 ಕ್ಕೂ ಹೆಚ್ಚು ಪಂಚಾಯತ್‌ ಗಳು ಸಮುದಾಯದ ನೇತೃತ್ವದ ಕಾರ್ಯಾಚರಣೆಗಳಿಗಾಗಿ ಒಪ್ಪಂದ ಪತ್ರಗಳಿಗೆ ಸಹಿ ಹಾಕಿವೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್-ರತನ್‌ಪುರ, ಜಿಲ್ಲೆ-ದಕ್ಷಿಣ ತ್ರಿಪುರಾ, ತ್ರಿಪುರಾ: ರತನಪುರ ಗ್ರಾಮದ ಸದಸ್ಯರೊಂದಿಗೆ ಬೆಂಗಾಲಿ ಭಾಷೆಯಲ್ಲಿ ಸಂವಾದ ನಡೆಸಲಾಯಿತು. ಜಲ ಜೀವನ್ ಮಿಷನ್ ಗ್ರಾಮದ ಎಲ್ಲಾ ಮನೆಗಳು, ಅಂಗನವಾಡಿಗಳು ಮತ್ತು ಶಾಲೆಗಳಿಗೆ ನಲ್ಲಿ ಸಂಪರ್ಕಗಳನ್ನು ತಲುಪಿಸಿದೆ ಎಂದು ವಿ ಡಬ್ಲ್ಯೂ ಎಸ್‌ ಸಿ ಫಲಾನುಭವಿಗಳು ವರದಿ ಮಾಡಿದರು. ಬೋರ್‌ವೆಲ್ ಮೂಲದಿಂದ ನಿಯಮಿತ, ಸಮರ್ಪಕ ಪ್ರಮಾಣದ ಮತ್ತು ಗುಣಮಟ್ಟದ ನೀರು ಲಭ್ಯವಿದ್ದು, ಇದು ದೂರದ ಮೂಲಗಳಿಂದ ನೀರನ್ನು ಹೊತ್ತು ತರುವ ಹಿಂದಿನ ಕಷ್ಟಗಳನ್ನು ನಿವಾರಿಸಿದೆ ಎಂದು ನಿವಾಸಿಗಳು ಖಚಿತಪಡಿಸಿದರು. ಗ್ರಾಮ ಪಂಚಾಯತ್ ದೂರು ರಿಜಿಸ್ಟರ್ ಅನ್ನು ನಿರ್ವಹಿಸುತ್ತಿದ್ದು, ಅಲ್ಲಿ ಆಪರೇಟರ್‌ ಗಳು ದೋಷಗಳನ್ನು ಸರಿಪಡಿಸುತ್ತಾರೆ ಮತ್ತು ಸಣ್ಣಪುಟ್ಟ ಸಮಸ್ಯೆಗಳನ್ನು 2-3 ದಿನಗಳಲ್ಲಿ ಸ್ಥಳೀಯವಾಗಿಯೇ ಬಗೆಹರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಮನೆಗಳ ಮಾದರಿಗಳನ್ನು ಬಳಸಿಕೊಂಡು ಮಾಸಿಕ ನೀರಿನ ಗುಣಮಟ್ಟ ಪರೀಕ್ಷೆಯನ್ನು ನಡೆಸಲಾಗುತ್ತಿದೆ; ವಿ ಡಬ್ಲ್ಯೂ ಎಸ್‌ ಸಿ ಸದಸ್ಯರು ಕ್ಷೇತ್ರ ಪರೀಕ್ಷಾ ಕಿಟ್‌ಗಳನ್ನು ಬಳಸುತ್ತಾರೆ ಮತ್ತು ಫಲಿತಾಂಶಗಳನ್ನು ದಾಖಲಿಸುತ್ತಾರೆ ಎಂದು ಅವರು ಹೇಳಿದರು. ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದಾಗ, ಶಾಲೆಯ ಆವರಣದೊಳಗೆ ಕುಡಿಯುವ ನೀರು ಮತ್ತು ಪ್ರತ್ಯೇಕ ಶೌಚಾಲಯಗಳ ಲಭ್ಯತೆಯನ್ನು ಅವರು ಖಚಿತಪಡಿಸಿದರು.

ದಕ್ಷಿಣ ತ್ರಿಪುರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಅವರು, ಜಿಲ್ಲಾ ಸುಧಾರಣಾ ಯೋಜನೆಯು ರತನಪುರದ 'ವಿಲೇಜ್ ಆಕ್ಷನ್ ಪ್ಲಾನ್' (ಗ್ರಾಮ ಕ್ರಿಯಾ ಯೋಜನೆ) ಅನ್ನು ಒಳಗೊಂಡಿದ್ದು, ಅದನ್ನು ಈಗ ಇ-ಗ್ರಾಮ ಸ್ವರಾಜ್ ಮೂಲಕ ಜಿಪಿಡಿಪಿಗೆ ಯಶಸ್ವಿಯಾಗಿ ಸಂಯೋಜಿಸಲಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್‌ ಗಳಲ್ಲಿ 'ಜಲ ಉತ್ಸವ' ಮತ್ತು 'ಜಲ ಅರ್ಪಣ್' ಜೊತೆಗೆ 'ನಲ್ ಜಲ್ ಮಿತ್ರ' ತರಬೇತಿ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಎಸ್‌ ಡಬ್ಲ್ಯೂ ಎಸ್‌ ಎಂ ಅಧಿಕಾರಿಯು ವ್ಯಾಪಕವಾದ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಯೋಜನೆಯ ಅನುಷ್ಠಾನ, ರಾಜ್ಯ, ಜಿಲ್ಲೆ ಮತ್ತು ಉಪ-ವಿಭಾಗ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ ಬಿ ಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳು ಮತ್ತು ನಡೆಯುತ್ತಿರುವ ನಲ್ ಜಲ್ ಮಿತ್ರ ತರಬೇತಿಗಳನ್ನು ಹೇಳಿದರು.

ಗ್ರಾಮ ಪಂಚಾಯತ್-ಗಿಂದಿಯಾಲ್, ಜಿಲ್ಲೆ-ಕಾರ್ಗಿಲ್, ಲಡಾಖ್: ಜಲ ಜೀವನ್ ಮಿಷನ್‌ ನ ಪರಿವರ್ತನಾತ್ಮಕ ಪ್ರಭಾವವನ್ನು ವಿವರಿಸಿದ ಗ್ರಾಮದ ಪ್ರತಿನಿಧಿಗಳು ಎನ್‌ ಜೆ ಜೆ ಎಂ ಅಧಿಕಾರಿಯೊಂದಿಗೆ ಹಿಂದಿ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಮುನ್ನ ತಾವು ಅನುಭವಿಸಿದ ತೀವ್ರ ಕಷ್ಟಗಳನ್ನು ಫಲಾನುಭವಿಗಳು ನೆನಪಿಸಿಕೊಂಡರು, ಚಳಿಗಾಲದಲ್ಲಿ ತಾಪಮಾನವು -40°C ಗೆ ಇಳಿಯುವಾಗ ಮಹಿಳೆಯರು 7-10 ಕಿಮೀ ವರೆಗೆ ನಡೆದು, ನೀರು ತರಲು ಮಂಜುಗಡ್ಡೆಯನ್ನು ಒಡೆಯಬೇಕಾಗಿತ್ತು. ಜೆಜೆಎಂನ ಮಧ್ಯಸ್ಥಿಕೆಗಳೊಂದಿಗೆ, ನಲ್ಲಿ ಸಂಪರ್ಕಗಳು ಈಗ ಪ್ರತಿ ಮನೆ, ಅಂಗನವಾಡಿ ಮತ್ತು ಶಾಲೆಗಳನ್ನು ತಲುಪಿದ್ದು, ದೈನಂದಿನ ಕಷ್ಟವನ್ನು ಕೊನೆಗೊಳಿಸಿದೆ ಮತ್ತು ನಿಯಮಿತ, ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸಿದೆ.

ಗ್ರಾಮಸ್ಥರು ಕಠಿಣ ಹವಾಮಾನಕ್ಕಾಗಿ ಮಾಡಿಕೊಂಡ ತಾಂತ್ರಿಕ ಹೊಂದಾಣಿಕೆಗಳನ್ನು ವಿವರಿಸಿದರು, ಪೈಪ್‌ಲೈನ್‌ ಗಳನ್ನು ಹಿಮದ ರೇಖೆಯ (ಫ್ರಾಸ್ಟ್ ಲೈನ್) ಕೆಳಗೆ ಅಳವಡಿಸಲಾಗಿದೆ, ಕಲ್ಲಿನ ಪ್ರದೇಶಗಳಲ್ಲಿ ಇನ್ಸುಲೇಶನ್ ಮಾಡಲಾಗಿದೆ, ತ್ಯಾಜ್ಯನೀರಿನ ಮರುಪೂರಣಕ್ಕಾಗಿ ಸೋಕ್ ಪಿಟ್‌ ಗಳನ್ನು ಮಾಡಲಾಗಿದೆ ಮತ್ತು ಮ್ಯಾಪ್ ಮಾಡಲಾದ ನೈಸರ್ಗಿಕ ಬುಗ್ಗೆಗಳನ್ನು ಅವಲಂಬಿಸಲಾಗಿದೆ. ಪಂಚಾಯತ್ ಉಪಕರಣಗಳನ್ನು ಖರೀದಿಸಿ ಸ್ಥಳೀಯ ಸಿಬ್ಬಂದಿಗೆ ತರಬೇತಿ ನೀಡಿದೆ; ಐವರು ಆಪರೇಟರ್‌ ಗಳು ಮತ್ತು ತರಬೇತಿ ಪಡೆದ ಮಹಿಳೆಯರು ಕ್ಷೇತ್ರ ಪರೀಕ್ಷಾ ಕಿಟ್‌ ಗಳನ್ನು ಬಳಸಿಕೊಂಡು ದ್ವೈಮಾಸಿಕ ನೀರು ಪರೀಕ್ಷೆಯನ್ನು ನಡೆಸುತ್ತಾರೆ ಮತ್ತು ಮಾದರಿಗಳನ್ನು ಜಿಲ್ಲಾ ಪ್ರಯೋಗಾಲಯಗಳಿಗೆ ಕಳುಹಿಸುತ್ತಾರೆ. ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಮತ್ತು ದೂರು ರಿಜಿಸ್ಟರ್ ಕ್ಷಿಪ್ರ ಕುಂದುಕೊರತೆ ನಿವಾರಣೆಗೆ ಅನುವು ಮಾಡಿಕೊಡುತ್ತದೆ ಮತ್ತು ಸಣ್ಣ ದೋಷಗಳನ್ನು ಕೆಲವೇ ದಿನಗಳಲ್ಲಿ ಸರಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಡೆಪ್ಯುಟಿ ಕಮಿಷನರ್ ಮತ್ತು ಮ್ಯಾಜಿಸ್ಟ್ರೇಟ್ ಶ್ರೀ ರಾಕೇಶ್ ಕುಮಾರ್ ಅವರು, ಕಾರ್ಗಿಲ್‌ ನ ಭೂಪ್ರದೇಶದಲ್ಲಿ ವಿಶೇಷ ಎಂಜಿನಿಯರಿಂಗ್ ಅಗತ್ಯತೆಗಳು, ಚಳಿಗಾಲದ ರಕ್ಷಣೆ ಮತ್ತು ಬುಗ್ಗೆಗಳ ಮೂಲಗಳನ್ನು ಮ್ಯಾಪ್ ಮಾಡುವುದು ಹಾಗೂ ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಹಿಮದ ರೇಖೆಯ ಕೆಳಗೆ ಪೈಪ್‌ಲೈನ್‌ ಗಳನ್ನು ಹಾಕುವುದು, ಕಲ್ಲಿನ ಪ್ರದೇಶಗಳಲ್ಲಿ ಇನ್ಸುಲೇಶನ್, ಚಾಲನೆಯಲ್ಲಿರುವ ನೀರಿನ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮತ್ತು ಸೋಕ್ ಪಿಟ್‌ ಗಳನ್ನು ಸಂಯೋಜಿಸುವುದು ಸೇರಿದಂತೆ ನೀರು ಸರಬರಾಜು ವ್ಯವಸ್ಥೆಯನ್ನು ಚಳಿಗಾಲಕ್ಕೆ ಸಜ್ಜುಗೊಳಿಸಲು ಅಳವಡಿಸಿಕೊಂಡ ಕ್ರಮಗಳನ್ನು ಅವರು ವಿವರಿಸಿದರು. 170 ಗ್ರಾಮ ಪಂಚಾಯತ್‌ ಗಳು ಮತ್ತು ಗ್ರಾಮ ಸಮಿತಿಗಳಲ್ಲಿ ನಲ್ ಜಲ್ ಮಿತ್ರ ತರಬೇತಿಯನ್ನು ಪೂರ್ಣಗೊಳಿಸಿರುವುದಾಗಿ ಮತ್ತು ಸ್ಥಳೀಯ ತಾಂತ್ರಿಕ ಬೆಂಬಲಕ್ಕಾಗಿ ಅವರ ಪಾತ್ರವನ್ನು ಸಾಂಸ್ಥಿಕಗೊಳಿಸಲು 16 ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿಕೊಳ್ಳುತ್ತಿರುವುದಾಗಿ ಅವರು ವರದಿ ಮಾಡಿದರು. ಅವರು ಮಾಸಿಕ ಡಿ ಡಬ್ಲ್ಯೂ ಎಸ್‌ ಎಂ ಪರಾಮರ್ಶೆಗಳನ್ನು ನಡೆಸಲಾಗುತ್ತಿದೆ ಎಂದು ಖಚಿತಪಡಿಸಿದರು ಮತ್ತು ನಿರ್ದೇಶನಗಳ ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕ್ಷೇತ್ರ ಮಟ್ಟದ ಉಸ್ತುವಾರಿಯನ್ನು ತೀವ್ರಗೊಳಿಸುವುದಾಗಿ ಭರವಸೆ ನೀಡಿದರು.

ಕೇಂದ್ರಾಡಳಿತ ಪ್ರದೇಶದ ಪ್ರಗತಿಯನ್ನು ಶ್ಲಾಘಿಸುತ್ತಾ, ಎನ್‌ ಜೆ ಜೆ ಎಂ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು ಕಳೆದ ವರ್ಷ ತಮ್ಮ ಲಡಾಖ್ ಭೇಟಿಯನ್ನು ನೆನಪಿಸಿಕೊಂಡರು, ಅಲ್ಲಿ ಕೆಲವು ಪ್ರದೇಶಗಳಲ್ಲಿ ಬುಗ್ಗೆಯ ನೀರಿನ ತೊರೆಗಳು ಒಳಚರಂಡಿ ನೀರಿನೊಂದಿಗೆ ಮಿಶ್ರಣಗೊಂಡು ಕಲುಷಿತಗೊಳ್ಳುತ್ತಿರುವುದನ್ನು ಅವರು ಗಮನಿಸಿದ್ದರು, ಇದು ಗಂಭೀರ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಇಂತಹ ಘಟನೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅವರು ಒತ್ತಿ ಹೇಳಿದರು. ನೀರಿನ ಗುಣಮಟ್ಟವನ್ನು ರಕ್ಷಿಸಲು ದೃಢವಾದ ಮತ್ತು ನಿರಂತರ ಉಸ್ತುವಾರಿ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಶ್ರೀ ಕಮಲ್ ಕಿಶೋರ್ ಸೋನ್ ಅವರು ತಮ್ಮ ಸಮಾರೋಪ ನುಡಿಗಳಲ್ಲಿ ಮುಂದಿನ ಹಾದಿಯ ಕುರಿತು ಮಾತನಾಡುತ್ತಾ, ಜಲ ಜೀವನ್ ಮಿಷನ್ ಕಡೆಗೆ ಅವರ ಬದ್ಧತೆಗಾಗಿ ಜಿಲ್ಲಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ ಗಳ ಸಕ್ರಿಯ ಬೆಂಬಲವನ್ನು ಶ್ಲಾಘಿಸಿದರು.

ಇಂತಹ ಉತ್ತಮ ಪದ್ಧತಿಗಳನ್ನು ವೇಗಗೊಳಿಸಲು ಮತ್ತು ಹೆಚ್ಚಿನ ಪಂಚಾಯತ್‌ ಗಳನ್ನು ಒಟ್ಟಿಗೆ ತರಲು ನಿರಂತರ ಪ್ರಯತ್ನಗಳಿಗೆ ಕರೆ ನೀಡಿದರು, ಇದರಿಂದಾಗಿ ಪಾರದರ್ಶಕತೆ, ಸಮುದಾಯದ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯ ಇಂತಹ ಮಾದರಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪುನರಾವರ್ತಿಸಬಹುದಾಗಿದೆ. 'ಜಲ ಸೇವಾ ಆಕಲನ್' ಎಂಬುದು ತಿದ್ದುಪಡಿ ಕ್ರಮಗಳಿಗಾಗಿ ಸೇವೆಯ ಕೊರತೆಗಳನ್ನು ಗುರುತಿಸುವ ಉದ್ದೇಶವನ್ನು ಹೊಂದಿರುವ ಒಂದು ಸತ್ಯಶೋಧನಾ ಕಾರ್ಯವಾಗಿದೆ ಎಂದು ಅವರು ಹೇಳಿದರು. ಸಮಸ್ಯೆಗಳನ್ನು ಇಂದು ಬಗೆಹರಿಸದಿದ್ದರೆ, ಅವು ಭವಿಷ್ಯದಲ್ಲಿ ಇನ್ನಷ್ಟು ಗಂಭೀರವಾಗುತ್ತವೆ, ಆದ್ದರಿಂದ ಇದನ್ನು ಬಗೆಹರಿಸಲು ನಿಯಮಿತವಾಗಿ ಡಿ ಡಬ್ಲ್ಯೂ ಎಸ್‌ ಎಂ ಸಭೆಗಳನ್ನು ಕರೆಯಲು ಮತ್ತು ಪ್ರತಿ ತಿಂಗಳು ನೀರು ಮತ್ತು ನೈರ್ಮಲ್ಯದ ವಿಷಯಗಳನ್ನು ಪರಿಶೀಲಿಸಲು ಸಮಯವನ್ನು ಮೀಸಲಿಡಲು ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.

ಎನ್‌ ಜೆ ಜೆ ಎಂ ನಿರ್ದೇಶಕರಾದ ಶ್ರೀ ವೈ ಕೆ ಸಿಂಗ್ ಅವರು ಸಂದರ್ಭ ಮತ್ತು ಉದ್ದೇಶವನ್ನು ಹಂಚಿಕೊಳ್ಳುವ ಮೂಲಕ ಸಂವಾದವನ್ನು ಪ್ರಾರಂಭಿಸಿದರು. ಈ ಸಂವಾದವು ಗ್ರಾಮೀಣ ಸಮುದಾಯಗಳ ಮಾತುಗಳನ್ನು ಆಲಿಸುವುದು, ಅವರ ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಮೂಲದ ಸುಸ್ಥಿರತೆಯ ಕುರಿತು ಸ್ಥಳೀಯ ಪದ್ಧತಿಗಳನ್ನು ಕಲಿಯುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

******

 


(रिलीज़ आईडी: 2277993) आगंतुक पटल : 13
इस विज्ञप्ति को इन भाषाओं में पढ़ें: Tamil , English , Urdu , हिन्दी , Assamese