ರೈಲ್ವೇ ಸಚಿವಾಲಯ
ರೈಲು ವ್ಯಾಗನ್ ವಿನ್ಯಾಸ ನೀತಿಯಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರಲು ರೈಲ್ವೆ ಮಂಡಳಿ ನಿರ್ಧರಿಸಿದೆ
15 ದಿನಗಳಲ್ಲಿ ಹೊಸ ರೈಲು ವ್ಯಾಗನ್ ವಿನ್ಯಾಸ ನೀತಿಯನ್ನು ಹೊರಡಿಸುವಂತೆ ಅಶ್ವಿನಿ ವೈಷ್ಣವ್ ಅವರು ನಿರ್ದೇಶನ ನೀಡಿದ್ದಾರೆ
ರೈಲು ವ್ಯಾಗನ್ ವಿನ್ಯಾಸ ನೀತಿ ಬಿಡುಗಡೆಗೂ ಮುನ್ನ ಕೇಂದ್ರ ರೈಲ್ವೆ ಸಚಿವರು ರೈಲು ಸುಧಾರಣಾ ನೀತಿಯನ್ನು ಪರಿಶೀಲಿಸಿದ್ದಾರೆ
ಕೈಗಾರಿಕೆಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯಾಗನ್ಗಳನ್ನು ವಿನ್ಯಾಸಗೊಳಿಸಲು ಅನುವು ಮಾಡಿಕೊಡುವ ಹೊಸ ನೀತಿ
ಭಾರತದಲ್ಲಿ ಅತ್ಯುನ್ನತ ಗುಣಮಟ್ಟದ ರೈಲು ವ್ಯಾಗನ್ ಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸ ಅನುಮೋದನೆ ಮತ್ತು ಮೂಲಮಾದರಿಯ ಅಭಿವೃದ್ಧಿಗಾಗಿ ಕಟ್ಟುನಿಟ್ಟಾದ ಮಾನದಂಡಗಳನ್ನು ಅನುಷ್ಠಾನಗೊಳಿಸಲಾಗುವುದು: ಅಶ್ವಿನಿ ವೈಷ್ಣವ್
प्रविष्टि तिथि:
25 JUN 2026 4:03PM by PIB Bengaluru
ದೇಶದ ಸರಕು ಸಾಗಣೆಯ ಹೆಚ್ಚಿನ ಪಾಲನ್ನು ರೈಲು ಮೂಲಕ ಸಾಗಿಸಬೇಕು ಎಂದು ಗೌರವಾನ್ವಿತ ಪ್ರಧಾನಮಂತ್ರಿ ಅವರು ನಿರಂತರವಾಗಿ ಹೇಳುತ್ತಿದ್ದಾರೆ, ಏಕೆಂದರೆ ಇದು ಹಸಿರು ಮತ್ತು ಹೆಚ್ಚು ಇಂಧನ-ಸಮರ್ಥ ಸಾರಿಗೆ ವಿಧಾನವಾಗಿದೆ. ಭಾರತೀಯ ರೈಲ್ವೆ 100 ಪ್ರತಿಶತ ವಿದ್ಯುದೀಕರಣದ ಸಮೀಪದಲ್ಲಿರುವುದರಿಂದ, ರೈಲು ಆಧಾರಿತ ಸರಕು ಸಾಗಣೆಯಲ್ಲಿನ ಹೆಚ್ಚಳವು ಆಮದು ಮಾಡಿಕೊಂಡ ಡೀಸೆಲ್ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡಿದೆ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಿದೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಇಂದು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು, ಅಲ್ಲಿ ಭಾರತೀಯ ರೈಲ್ವೆಯನ್ನು ವಿವಿಧ ರೀತಿಯ ಸರಕುಗಳಿಗೆ ಸರಕು ಸಾಗಣೆಯ ಆದ್ಯತೆಯ ವಿಧಾನವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಸುಧಾರಣೆಗಳ ಬಗ್ಗೆ ಸಭೆಯಲ್ಲಿ, ಚರ್ಚಿಸಲಾಯಿತು. ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರವನೀತ್ ಸಿಂಗ್ ಬಿಟ್ಟು, ಆರ್ಡಿಎಸ್ಒ (ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ) ಮಹಾನಿರ್ದೇಶಕರು, ರೈಲ್ವೆ ಮಂಡಳಿ ಸದಸ್ಯರು ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಭಾರತೀಯ ರೈಲ್ವೆ ವಿವಿಧ ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ರೈಲು ಸಾರಿಗೆಗೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುವ ಸರಕುಗಳಿಗೆ ಸಂಬಂಧಿಸಿದ ಪ್ರಮುಖ ಸರಕು ಗ್ರಾಹಕರೊಂದಿಗೆ ವ್ಯಾಪಕ ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದೆ. ಈ ಚರ್ಚೆಗಳ ಸಮಯದಲ್ಲಿ, ವಿವಿಧ ಸರಕುಗಳ ನಿರ್ದಿಷ್ಟ ನಿರ್ವಹಣೆ, ಲೋಡಿಂಗ್, ಇಳಿಸುವಿಕೆ ಮತ್ತು ಸಾರಿಗೆ ಅಗತ್ಯಗಳಿಗೆ ಅನುಗುಣವಾಗಿ ರೈಲು ವ್ಯಾಗನ್ ವಿನ್ಯಾಸಗಳನ್ನು ಸಾಗಣಿಕೆಯ ಅಗತ್ಯಗಳಿಗೆ ತಕ್ಕಂತೆ (ಕಸ್ಟಮೈಸ್) ಮಾಡಿದರೆ, ರೈಲು ಸಾರಿಗೆಯನ್ನು ಹೆಚ್ಚು ವ್ಯಾಪಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಉದ್ಯಮ ಪ್ರತಿನಿಧಿಗಳು ಸಭೆಯಲ್ಲಿ ಸೂಚಿಸಿದರು.
ಸಿಮೆಂಟ್ ಮತ್ತು ಉಪ್ಪು ಹಾಗೂ ಇಂತಹ ಸರಕುಗಳಿಗಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ವಿಶೇಷ ರೈಲು ವ್ಯಾಗನ್ಗಳ ಯಶಸ್ಸು ಉದ್ಯಮ ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯಾಗನ್ ಗಳನ್ನು ವಿನ್ಯಾಸಗೊಳಿಸುವ ಮಹತ್ವವನ್ನು ಪ್ರದರ್ಶಿಸಿದೆ ಎಂದು ಸಭೆಯು ಉಲ್ಲೇಖಿಸಿದೆ. ಸರಕು-ನಿರ್ದಿಷ್ಟ ವ್ಯಾಗನ್ ಗಳು ಲೋಡಿಂಗ್, ಅನ್ಲೋಡಿಂಗ್ ಮತ್ತು ಸಾರಿಗೆ ದಕ್ಷತೆಯನ್ನು ಸುಧಾರಿಸಿವೆ, ಇದರಿಂದಾಗಿ ರೈಲು ಲಾಜಿಸ್ಟಿಕ್ಸ್ನ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಈ ಸಂದರ್ಭದಲ್ಲಿ, ಭಾರತೀಯ ರೈಲ್ವೆ ಅಸ್ತಿತ್ವದಲ್ಲಿರುವ ವ್ಯಾಗನ್ ವಿನ್ಯಾಸ ನೀತಿಯಲ್ಲಿ ಸಮಗ್ರ ಸುಧಾರಣೆಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ವಿವಿಧ ಸರಕುಗಳ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ವ್ಯಾಗನ್ಗಳ ಅಭಿವೃದ್ಧಿಗೆ ಉದ್ಯಮ ಸ್ನೇಹಿ ಚೌಕಟ್ಟನ್ನು ಒದಗಿಸಲು, ಹೊಸ ವ್ಯಾಗನ್ ವಿನ್ಯಾಸ ನೀತಿಯನ್ನು 15 ದಿನಗಳಲ್ಲಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ವಿನ್ಯಾಸ ಅನುಮೋದನೆ ಮತ್ತು ಮೂಲಮಾದರಿ ಅಭಿವೃದ್ಧಿಗಾಗಿ ಕಟ್ಟುನಿಟ್ಟಾದ ಮಾನದಂಡಗಳು ಭಾರತದಲ್ಲಿ ಅತ್ಯುನ್ನತ ಗುಣಮಟ್ಟದ ವ್ಯಾಗನ್ ಗಳ ಉತ್ಪಾದನೆಯನ್ನು ಖಚಿತಪಡಿಸುತ್ತವೆ ಎಂದು ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ. ರೈಲ್ವೆ ಮಂಡಳಿಯು ವ್ಯಾಗನ್ ವಿನ್ಯಾಸ ನೀತಿಯಲ್ಲಿ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲು ಸಹ ನಿರ್ಧರಿಸಿದೆ. ಪ್ರಸ್ತಾವಿತ ನೀತಿಯಡಿಯಲ್ಲಿ, ಕೈಗಾರಿಕೆಗಳು ಅವುಗಳ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯಾಗನ್ಗಳನ್ನು ವಿನ್ಯಾಸಗೊಳಿಸಲು ಅನುಮತಿಸಲಾಗುತ್ತದೆ. ಉದಾಹರಣೆಗೆ, ಉಕ್ಕಿನ ಸುರುಳಿಗಳ ಸಾಗಣೆಗೆ ವಿಶೇಷ ಬೈಂಡಿಂಗ್ ವ್ಯವಸ್ಥೆಗಳು ಮತ್ತು ಮೀಸಲಾದ ಲೋಡಿಂಗ್ ಮತ್ತು ಇಳಿಸುವಿಕೆಯ ವ್ಯವಸ್ಥೆಗಳು ಬೇಕಾಗುತ್ತವೆ, ಆದರೆ ಹಲವಾರು ಇತರ ಸರಕುಗಳು ತಮ್ಮದೇ ಆದ ವಿಶಿಷ್ಟ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಹೊಂದಿವೆ. ಹೊಸ ಚೌಕಟ್ಟಿನ ಅಡಿಯಲ್ಲಿ, ಕೈಗಾರಿಕೆಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವ್ಯಾಗನ್ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಪ್ರಸ್ತಾಪಿಸಲು ಅಧಿಕಾರ ನೀಡುತ್ತವೆ. ವ್ಯಾಗನ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆರ್.ಡಿ.ಎಸ್.ಒ ಮತ್ತು ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರ (ಸಿ.ಸಿ.ಆರ್.ಎಸ್) ಮೇಲೆ ಇರುತ್ತದೆ. ಈ ಸುಧಾರಣೆಗಳು ರೈಲ್ವೆ ಸರಕು ಪರಿಸರ ವ್ಯವಸ್ಥೆಗೆ ಹಲವಾರು ಹೊಸ ಕೈಗಾರಿಕೆಗಳ ಪ್ರವೇಶವನ್ನು ಸಕ್ರಿಯಗೊಳಿಸುವ ನಿರೀಕ್ಷೆಯಿದೆ.
ಈ ಸುಧಾರಣೆಯು ರೈಲು ವ್ಯಾಗನ್ ಅಭಿವೃದ್ಧಿಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತೀಯ ರೈಲ್ವೆಯ ಸರಕು ಸಾಗಣೆ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸರಕು-ನಿರ್ದಿಷ್ಟ ಸಾರಿಗೆ ಪರಿಹಾರಗಳನ್ನು ಒದಗಿಸುವ ಮೂಲಕ, ಭಾರತೀಯ ರೈಲ್ವೆ ಹೊಸ ಸರಕು ಹರಿವುಗಳನ್ನು ಆಕರ್ಷಿಸಲು, ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ವಲಯದಲ್ಲಿ ರೈಲು ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಲು ಗುರಿಯನ್ನು ಹೊಂದಿದೆ.
ಕೈಗಾರಿಕೆಗಳು ರಸ್ತೆಯಿಂದ ರೈಲಿಗೆ ಹೆಚ್ಚಿನ ಪ್ರಮಾಣದ ಸರಕುಗಳನ್ನು ಬದಲಾಯಿಸಲು ಅನುವು ಮಾಡಿಕೊಡುವ ಮೂಲಕ, ಹೊಸ ವ್ಯಾಗನ್ ವಿನ್ಯಾಸ ನೀತಿಯು ಹಸಿರು ರೈಲ್ವೆಗಳು ಮತ್ತು ಹಸಿರು ಲಾಜಿಸ್ಟಿಕ್ಸ್ನ ದೃಷ್ಟಿಕೋನವನ್ನು ಮುನ್ನಡೆಸುತ್ತದೆ. ರೈಲು ಸಾರಿಗೆಯು ರಸ್ತೆ ಸಾರಿಗೆಗಿಂತ ಸರಿಸುಮಾರು 90 ಪ್ರತಿಶತ ಹೆಚ್ಚು ಪರಿಸರ ಸ್ನೇಹಿಯಾಗಿದೆ ಮತ್ತು ಭಾರತೀಯ ರೈಲ್ವೆಯ ಬಹುತೇಕ ಸಂಪೂರ್ಣ ವಿದ್ಯುದೀಕರಣದೊಂದಿಗೆ, ಹೆಚ್ಚಿದ ರೈಲು ಆಧಾರಿತ ಸರಕು ಸಾಗಣೆಯು ಆಮದು ಮಾಡಿಕೊಂಡ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಾಗರಿಕರಿಗೆ ಅಗತ್ಯ ಸರಕುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
ಪ್ರಸ್ತಾವಿತ ರೈಲು ವ್ಯಾಗನ್ ವಿನ್ಯಾಸ ನೀತಿಯು ಆಧುನಿಕ, ಗ್ರಾಹಕ-ಕೇಂದ್ರಿತ ಮತ್ತು ನಾವೀನ್ಯತೆ-ಚಾಲಿತ ಸರಕು ಸಾಗಣೆ ವ್ಯವಸ್ಥೆಯನ್ನು ನಿರ್ಮಿಸುವ ಕಡೆಗೆ ಭಾರತೀಯ ರೈಲ್ವೆಯ ಮತ್ತೊಂದು ಪ್ರಮುಖ ಸುಧಾರಣೆಯಾಗಿದೆ. ಇದು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು, ಪರಿಸರ ಸುಸ್ಥಿರತೆಯನ್ನು ಬಲಪಡಿಸಲು ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
*****
(रिलीज़ आईडी: 2277812)
आगंतुक पटल : 6