ಗ್ರಾಮೀಣಾಭಿವೃದ್ಧಿ ಸಚಿವಾಲಯ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ) ಅಡಿಯಲ್ಲಿ 12 ರಾಜ್ಯಗಳಿಗೆ ₹10,021 ಕೋಟಿ "ಮಾತೃ ಮಂಜೂರಾತಿ"ಯನ್ನು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಡುಗಡೆ ಮಾಡಿದ್ದಾರೆ
ಎಲ್ಲರಿಗೂ ವಸತಿ ಎಂಬ ದೃಷ್ಟಿಕೋನಕ್ಕೆ ಪ್ರಮುಖ ಉತ್ತೇಜನ; ಪಿಎಂ ಎವೈ-ಜಿ ಯೋಜನೆ ಅನುಷ್ಠಾನಕ್ಕಾಗಿ ದೊಡ್ಡ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ
ಭೂಮಿಯಿಲ್ಲದ ಬಡ ಕುಟುಂಬಗಳಿಗೆ ಭೂಮಿ ಒದಗಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಗಳನ್ನು ಒತ್ತಾಯಿಸಿದ್ದಾರೆ
ಪ್ರಕಟಣಾ ದಿನಾಂಕ:
28 MAY 2026 5:00PM by PIB Bengaluru
ಮಾರ್ಚ್ 2029 ರೊಳಗೆ ‘ಎಲ್ಲರಿಗೂ ವಸತಿ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಒಂದು ಹೆಗ್ಗುರುತು ಹೆಜ್ಜೆಯಾಗಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ) ಅಡಿಯಲ್ಲಿ 12 ರಾಜ್ಯಗಳಿಗೆ ₹10,021.42 ಕೋಟಿ "ಮಾತೃ ಮಂಜೂರಾತಿ"ಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರ ಶೇಖರ್ ಪೆಮ್ಮಸಾನಿ ಅವರ ಸಮ್ಮುಖದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದ್ದಾರೆ.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೇಶವ ಪ್ರಸಾದ್ ಮೌರ್ಯ, ರಾಜಸ್ಥಾನ ಸಚಿವರಾದ ಡಾ. ಕಿರೋರಿ ಲಾಲ್ ಮೀನಾ, ಅಸ್ಸಾಂ ಸಚಿವರಾದ ಶ್ರೀ ಅತುಲ್ ಬೋರಾ, ಜಾರ್ಖಂಡ್ ಸಚಿವರಾದ ಶ್ರೀಮತಿ ದೀಪಿಕಾ ಪಾಂಡೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್, ಕೇಂದ್ರ ಮತ್ತು ವಿವಿಧ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

"ಮಾತೃ ಮಂಜೂರಾತಿ" ಬಿಡುಗಡೆಯಾದ ರಾಜ್ಯಗಳಲ್ಲಿ ಅಸ್ಸಾಂ, ಛತ್ತೀಸ್ ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿವೆ.
ಈ ಸಂದರ್ಭದಲ್ಲಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ದೇಶದಲ್ಲಿ ಯಾವುದೇ ಬಡವರು ಕಚ್ಚಾ ಮನೆಯಲ್ಲಿ ವಾಸಿಸದಂತೆ ನೋಡಿಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬದ್ಧರಾಗಿದ್ದಾರೆ ಎಂದು ಹೇಳಿದರು. ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು, 2016 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣವನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ 4.95 ಕೋಟಿ ಮನೆಗಳ ಗುರಿಗೆ ವಿರುದ್ಧವಾಗಿ, 3.91 ಕೋಟಿ ಮನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಮತ್ತು 3.05 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

"ಮನೆ ಚೆನ್ನಾಗಿದ್ದಾಗ ಜೀವನ ಸುಲಭವಾಗುತ್ತದೆ. ನಾವು ಕೇವಲ ಮನೆಗಳನ್ನು ನಿರ್ಮಿಸುತ್ತಿಲ್ಲ, ಬದಲಾಗಿ ರಸ್ತೆಗಳು, ವಿದ್ಯುತ್, ಕುಡಿಯುವ ನೀರು, ಎಲ್ಪಿಜಿ ಸಂಪರ್ಕಗಳು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳಿಂದ ಬೆಂಬಲಿತವಾದ ಮನೆಗಳನ್ನು ನಿರ್ಮಿಸುತ್ತಿದ್ದೇವೆ" ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ಹೇಳಿದರು. ವಿವಿಧ ಕಲ್ಯಾಣ ಯೋಜನೆಗಳೊಂದಿಗೆ ಒಗ್ಗೂಡುವ ಮೂಲಕ ಗ್ರಾಮೀಣ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸಲು ಭಾರತ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಜ್ಯಗಳು ಕೈಗೊಂಡಿರುವ ನಾವೀನ್ಯತೆಗಳನ್ನು ಅವರು ಶ್ಲಾಘಿಸಿದರು. ಹಲವಾರು ರಾಜ್ಯಗಳು ಸಹಾಯವಾಣಿಗಳು, ಕುಂದುಕೊರತೆ ಪರಿಹಾರ ವ್ಯವಸ್ಥೆಗಳು, ಮಳೆನೀರು ಕೊಯ್ಲು, ಸ್ವಸಹಾಯ ಗುಂಪುಗಳ ಮೂಲಕ ಜೀವನೋಪಾಯ ವರ್ಧನೆ ಮತ್ತು ಮೇಸನ್ ತರಬೇತಿ ಕಾರ್ಯಕ್ರಮಗಳಂತಹ ಶ್ಲಾಘನೀಯ ಉಪಕ್ರಮಗಳನ್ನು ಪರಿಚಯಿಸಿವೆ, ಇದು ಯೋಜನೆಯ ಗುರಿಗಳ ಸಾಧನೆಯನ್ನು ವೇಗಗೊಳಿಸಿದೆ ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣವನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ) ಅಡಿಯಲ್ಲಿ ಮಂಜೂರಾದ ಸುಮಾರು 75 ಪ್ರತಿಶತ ಮನೆಗಳು ಮಹಿಳೆಯರ ಹೆಸರಿನಲ್ಲಿ ಅಥವಾ ಜಂಟಿ ಮಾಲೀಕತ್ವದಲ್ಲಿವೆ, ಇದರಿಂದಾಗಿ ಮಹಿಳೆಯರ ಘನತೆ, ಸ್ವಾಭಿಮಾನ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಬಡ ಕುಟುಂಬಗಳು ಭೂಮಿಯನ್ನು ಹೊಂದಿರದ ಸಂದರ್ಭಗಳಲ್ಲಿ ವಸತಿ ನಿರ್ಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ತಿಳಿಸಿದರು. ಭೂಮಿಯನ್ನು ಒದಗಿಸಲು ಮತ್ತು ಅಂತಹ ಫಲಾನುಭವಿಗಳಿಗೆ ಅಗತ್ಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳನ್ನು ವಿಶೇಷ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು.

ಬಾಕಿ ಇರುವ ದೂರುಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡಲು, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಮಂಜೂರಾದ ನಿಧಿಯ ತ್ವರಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅವರು ರಾಜ್ಯಗಳಿಗೆ ಕರೆ ನೀಡಿದರು. ಕೆಲವು ರಾಜ್ಯಗಳು ತಮ್ಮ 2024-25 ಮತ್ತು 2025-26 ಗುರಿಗಳಿಗೆ ಅನುಗುಣವಾಗಿ ಅನುಮೋದನೆಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ ಎಂದು ಅವರು ಗಮನಿಸಿದರು ಮತ್ತು ಜೂನ್ 30, 2026 ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವರು ರಾಜ್ಯಗಳನ್ನು ಒತ್ತಾಯಿಸಿದರು.
ವಿಡಿಯೋ ಸಮ್ಮೇಳನದಲ್ಲಿ, ಕೇಂದ್ರ ಸಚಿವರು ಜೂನ್ 5, 2026 ರಂದು ವಿಶ್ವ ಪರಿಸರ ದಿನದಂದು 'ತಾಯಿಯ ಹೆಸರಲ್ಲಿ ಒಂದು ಸಸಿ(ಏಕ್ ಪೆಡ್ ಮಾ ಕೆ ನಾಮ್)' ಅಭಿಯಾನದಡಿಯಲ್ಲಿ ಕನಿಷ್ಠ ಒಂದು ಸಸಿಯನ್ನು ನೆಡುವಂತೆ ಪ್ರತಿಯೊಬ್ಬ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ) ಇದರ ಫಲಾನುಭವಿಗೆ ಮನವಿ ಮಾಡಿದರು.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ ) ಇದರ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯಗಳು ಗಮನಾರ್ಹ ಸಹಕಾರವನ್ನು ನೀಡಿವೆ ಎಂದು ಹೇಳಿದರು. 2026-27ನೇ ಹಣಕಾಸು ವರ್ಷಕ್ಕೆ ಈಗಾಗಲೇ ₹11,121 ಕೋಟಿಗಳ ಮಾತೃ ಮಂಜೂರಾತಿಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈಗ ₹10,021 ಕೋಟಿಗೂ ಹೆಚ್ಚು ಹೆಚ್ಚುವರಿ ಮಂಜೂರಾತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ವರ್ಷಕ್ಕಿಂತ ಈ ವರ್ಷದ ವಸತಿ ಗುರಿ ಮೂರು ಪಟ್ಟು ಹೆಚ್ಚಾಗಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳ ಸಂಘಟಿತ ಪ್ರಯತ್ನಗಳ ಮೂಲಕ ಸಮಯಕ್ಕೆ ಅನುಗುಣವಾಗಿ ಇದನ್ನು ಸಾಧಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮೀಣ ಭಾರತದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂ ಎವೈ-ಜಿ ) ತನ್ನ ಪರಿವರ್ತನಾ ಪ್ರಯಾಣವನ್ನು ಮುಂದುವರೆಸಿದೆ. ಯಾವುದೇ ಅರ್ಹ ಗ್ರಾಮೀಣ ಕುಟುಂಬವು ಪಕ್ಕಾ ಮನೆಯಿಂದ ವಂಚಿತವಾಗಬಾರದು ಮತ್ತು ಪ್ರತಿ ಮನೆಯು ಗೌರವಾನ್ವಿತ ಜೀವನಕ್ಕಾಗಿ ಅಗತ್ಯವಾದ ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ.

*****
(ಪ್ರಕಟಣೆ ಐ.ಡಿ.: 2266334)
ವಿಸಿಟರ್ ಕೌಂಟರ್ : 6