ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ​​​​​​​ ಶ್ರೀ ಅಶ್ವಿನಿ ವೈಷ್ಣವ್ ಅವರಿಂದ ದೋಹ್ರಿಕಾಟ್ - ಮೌ - ಔನ್ರಿಹಾರ್ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ


ಹೊಸ ದೈನಂದಿನ ರೈಲು ಸೇವೆಯು ಮೌ ಮತ್ತು ಗಾಜಿಪುರ ಜಿಲ್ಲೆಗಳ ಪ್ರಯಾಣಿಕರಿಗೆ ಮಿತವ್ಯಯ, ಸುರಕ್ಷಿತ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸಲಿದೆ

ಈ ರೈಲು ಸೇವೆಯನ್ನು ವಾರಾಣಸಿಯವರೆಗೆ ವಿಸ್ತರಿಸಲಾಗುವುದು: ರೈಲ್ವೆ ಸಚಿವರು

ಪೂರ್ವಾಂಚಲದಿಂದ ರಾಷ್ಟ್ರ ರಾಜಧಾನಿಗೆ ಶೀಘ್ರದಲ್ಲೇ ಮತ್ತೊಂದು ರೈಲು ನೀಡುವುದಾಗಿ ರೈಲ್ವೆ ಸಚಿವರ ಭರವಸೆ

ಮೌ, ಅಜಂಗಢ್, ಲಕ್ನೋ ಮತ್ತು ಕಾನ್ಪುರ ಮಾರ್ಗವಾಗಿ ಪೂರ್ವದ ಛಾಪ್ರಾ ಮತ್ತು ದೆಹಲಿ ನಡುವೆ ಹೊಸ ರೈಲು ಸಂಪರ್ಕ

ಪ್ರಕಟಣಾ ದಿನಾಂಕ: 11 MAY 2026 7:07PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೋಹ್ರಿಕಾಟ್ - ಔನ್ರಿಹಾರ್ ಪ್ಯಾಸೆಂಜರ್ ರೈಲಿಗೆ ವರ್ಚುವಲ್ ಆಗಿ ಚಾಲನೆ ನೀಡಿದರು. ಉತ್ತರ ಪ್ರದೇಶ ಸರ್ಕಾರದ ಸಂಪುಟ ಸಚಿವ ಶ್ರೀ ಅರವಿಂದ್ ಕುಮಾರ್ ಶರ್ಮಾ, ಸಂಸದ ರಾಜೀವ್ ರೈ ಮತ್ತು ಇತರ ಗಣ್ಯರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಉದ್ಘಾಟನಾ ಸಮಾರಂಭ ನಡೆಯಿತು.

ಇದು ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದಲ್ಲಿ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ರೈಲು ಪ್ರಯಾಣಿಕರ ಅನುಕೂಲ ಮತ್ತು ಮೌ ಹಾಗೂ ಗಾಜಿಪುರ ಜಿಲ್ಲೆಗಳ ಜನರ ದೀರ್ಘಕಾಲದ ದೈನಂದಿನ ನೇರ ಸಂಪರ್ಕದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ರೈಲು ಸೇವೆಯನ್ನು ಪ್ರಾರಂಭಿಸಲಾಗಿದೆ.

ಔನ್ರಿಹಾರ್ದೋಹ್ರಿಕಾಟ್ಔನ್ರಿಹಾರ್ ಪ್ಯಾಸೆಂಜರ್ ರೈಲು

ಈ ರೈಲು ಸಾದತ್, ಜಖಾನಿಯಾ, ದುಲ್ಲಾಪುರ, ಮೌ, ಇಂದಾರಾ, ಕೋಪಗಂಜ್, ಘೋಷಿ, ಅಮಿಲಾ ಮತ್ತು ಮುರಾದ್‌ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ. ಶೀಘ್ರದಲ್ಲೇ ಈ ರೈಲನ್ನು ವಾರಾಣಸಿಯವರೆಗೆ ವಿಸ್ತರಿಸಲಾಗುವುದು.

ದೈನಂದಿನ ಪ್ರಯಾಣಿಕರಿಗೆ ಮತ್ತು ಇತರರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲು ವಿನ್ಯಾಸಗೊಳಿಸಲಾದ 8 ಬೋಗಿಗಳ ಪ್ಯಾಸೆಂಜರ್ ರೈಲು ಇದಾಗಿದೆ.

ಪ್ಯಾಸೆಂಜರ್ ರೈಲು ಸೇವೆ ವಾರಾಣಸಿಯವರೆಗೆ ವಿಸ್ತರಣೆ

ಒಂದು ಪ್ರಮುಖ ಘೋಷಣೆ ಮಾಡಿದ ಶ್ರೀ ವೈಷ್ಣವ್ ಅವರು, ಹೊಸದಾಗಿ ಪ್ರಾರಂಭಿಸಲಾದ ಔನ್ರಿಹಾರ್-ದೋಹ್ರಿಕಾಟ್-ಔನ್ರಿಹಾರ್ ಪ್ಯಾಸೆಂಜರ್ ಸೇವೆಯನ್ನು ವಾರಾಣಸಿಯವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಈ ವಿಸ್ತರಣೆಯು ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾದ ವಾರಾಣಸಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ, ಇದು ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ.

ಹೊಸ ರೈಲು ಸೇವೆಯ ಪ್ರಯೋಜನಗಳು

ಹೊಸ ರೈಲು ಸೇವೆಯು ಮೌ, ಗಾಜಿಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ನೇರ, ಮಿತವ್ಯಯ, ಸುರಕ್ಷಿತ ಮತ್ತು ಆರಾಮದಾಯಕ ದೈನಂದಿನ ರೈಲು ಪ್ರಯಾಣವನ್ನು ಒದಗಿಸುತ್ತದೆ. ಈ ರೈಲು ಔನ್ರಿಹಾರ್-ದೋಹ್ರಿಕಾಟ್ ಕಾರಿಡಾರ್‌ ನಲ್ಲಿರುವ ಪಟ್ಟಣ ಮತ್ತು ಹಳ್ಳಿಗಳ ನಿವಾಸಿಗಳಿಗೆ ನೇರ ಪ್ರಯೋಜನವನ್ನು ನೀಡುತ್ತದೆ. ಇದು ಪ್ರವಾಸೋದ್ಯಮ, ಸ್ಥಳೀಯ ವ್ಯಾಪಾರ, ಶಿಕ್ಷಣ ಮತ್ತು ಉದ್ಯೋಗಕ್ಕೆ ಬೆಂಬಲ ನೀಡಲಿದೆ.

ದೋಹ್ರಿಕಾಟ್‌ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್ ಅವರು, ದೋಹ್ರಿಕಾಟ್ ಅನ್ನು ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಮತ್ತು ಭಗವಾನ್ ಶ್ರೀ ಪರಶುರಾಮಜಿಯವರ ಭೇಟಿಯ ಸ್ಥಳವೆಂದು ಪೂಜಿಸಲ್ಪಡುವ ಆಳವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳವೆಂದು ಬಣ್ಣಿಸಿದರು.

ಪೂರ್ವಾಂಚಲ ಮತ್ತು ದೆಹಲಿಯನ್ನು ಸಂಪರ್ಕಿಸುವ ಹೊಸ ಎಕ್ಸ್ಪ್ರೆಸ್ ರೈಲು

ಪೂರ್ವಾಂಚಲ ಪ್ರದೇಶದಿಂದ ದೆಹಲಿಗೆ ಉತ್ತಮ ಸಂಪರ್ಕಕ್ಕಾಗಿ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದ ಶ್ರೀ ವೈಷ್ಣವ್ ಅವರು, ಉತ್ತರ ಗಂಗಾ ಕಾರಿಡಾರ್ ಮೂಲಕ ಹೊಸ ಎಕ್ಸ್‌ ಪ್ರೆಸ್ ರೈಲನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ರೈಲು ಛಾಪ್ರಾ – ಬಲ್ಲಿಯಾ – ಮೌ – ಅಜಂಗಢ್ – ಶಾಹಗಂಜ್ – ಜೌನ್‌ಪುರ – ಸುಲ್ತಾನ್‌ಪುರ – ಲಕ್ನೋ – ಕಾನ್ಪುರ – ಅಲಿಗಢ್ – ಗಾಜಿಯಾಬಾದ್ – ಆನಂದ್ ವಿಹಾರ್ ಅನ್ನು ಸಂಪರ್ಕಿಸುತ್ತದೆ. ಈ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅವರು ಸಭೆಗೆ ಭರವಸೆ ನೀಡಿದರು.

ಐತಿಹಾಸಿಕ ರೈಲು ಮಾರ್ಗದ ಗೇಜ್ ಪರಿವರ್ತನೆ

ಇಂದಾರಾ-ದೋಹ್ರಿಕಾಟ್ ಮೀಟರ್ ಗೇಜ್ ಮಾರ್ಗವನ್ನು 1904 ರಲ್ಲಿ ಅಂದರೆ 100 ವರ್ಷಗಳ ಹಿಂದೆ ನಿರ್ಮಿಸಲಾಯಿತು, ಆದರೆ ಅದರ ಗೇಜ್ ಪರಿವರ್ತನೆಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಳ್ಳುವವರೆಗೆ ಕಾಯಬೇಕಾಯಿತು ಎಂದು ಶ್ರೀ ವೈಷ್ಣವ್ ಹೇಳಿದರು. 2014 ರ ನಂತರ, ಗೇಜ್ ಪರಿವರ್ತನೆ, ಜೋಡಿ ಮಾರ್ಗ ಮತ್ತು ಅಪೂರ್ಣ ಯೋಜನೆಗಳು ಸೇರಿದಂತೆ ದೇಶಾದ್ಯಂತ ದೀರ್ಘಕಾಲ ಬಾಕಿ ಉಳಿದಿದ್ದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇಂದಾರಾ-ದೋಹ್ರಿಕಾಟ್ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದ್ದು, ಪೂರ್ವ ಉತ್ತರ ಪ್ರದೇಶಕ್ಕೆ ಹೊಸ ರೈಲು ಸೌಲಭ್ಯಗಳನ್ನು ತರಲಾಗಿದೆ. ಡಿಸೆಂಬರ್ 2023 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಈ ಹೊಸದಾಗಿ ಪರಿವರ್ತಿಸಲಾದ ಮಾರ್ಗದಲ್ಲಿ ರೈಲು ಸೇವೆಗಳನ್ನು ಉದ್ಘಾಟಿಸಿದರು ಎಂದು ರೈಲ್ವೆ ಸಚಿವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಹೆಚ್ಚಿದ ರೈಲ್ವೆ ಹೂಡಿಕೆ

2014 ರಲ್ಲಿ ಉತ್ತರ ಪ್ರದೇಶಕ್ಕೆ ರೈಲ್ವೆ ಬಜೆಟ್ ಹಂಚಿಕೆ ಕೇವಲ ₹₹1,109 ಕೋಟಿ ಇತ್ತು. 2014 ರ ನಂತರ, ಈ ಹಂಚಿಕೆಯು ಸರಿಸುಮಾರು ₹20,012 ಕೋಟಿಗೆ ಏರಿದೆ ಎಂದು ಕೇಂದ್ರ ಸಚಿವರು ಹೇಳಿದರು. ಉತ್ತರ ಪ್ರದೇಶದಾದ್ಯಂತ ಸುಮಾರು ₹₹1.2 ಲಕ್ಷ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ, ಇದು ರಾಜ್ಯದ ಇತಿಹಾಸದಲ್ಲೇ ಅಭೂತಪೂರ್ವವಾಗಿದೆ ಎಂದು ಅವರು ಹೇಳಿದರು.

ಪ್ರಗತಿಯಲ್ಲಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳು

ಉತ್ತರ ಪ್ರದೇಶದಲ್ಲಿ ಪ್ರಗತಿಯಲ್ಲಿರುವ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಸರಣಿಯನ್ನು ಶ್ರೀ ವೈಷ್ಣವ್ ವಿವರಿಸಿದರು. ಗಂಗಾನದಿಯ ದಕ್ಷಿಣದಲ್ಲಿ ಪ್ರಯಾಗರಾಜ್-ಕಾನ್ಪುರ-ಆಗ್ರಾ-ದೆಹಲಿ ಮಾರ್ಗದಲ್ಲಿ ಪ್ರಮುಖ ನಾಲ್ಕು ಪಥದ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ, ಗಂಗಾನದಿಯ ಉತ್ತರದಲ್ಲಿ ಗಾಜಿಯಾಬಾದ್, ಮೊರಾದಾಬಾದ್, ಬರೇಲಿ, ಸೀತಾಪುರ, ಗೊಂಡಾ ಮತ್ತು ಗೋರಖಪುರ ಮೂಲಕ ದೆಹಲಿಯನ್ನು ಬಿಹಾರ ಮತ್ತು ಈಶಾನ್ಯದೊಂದಿಗೆ ಸಂಪರ್ಕಿಸುವ ಬೃಹತ್ ನಾಲ್ಕು ಪಥದ ರೈಲ್ವೆ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಚಿವರು ಈ ಪ್ರದೇಶದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಹೊಸ ಮಾರ್ಗ ಮತ್ತು ಜೋಡಿ ಮಾರ್ಗ ಯೋಜನೆಗಳನ್ನು ಪಟ್ಟಿ ಮಾಡಿದರು: ಚಿಟೌನಿ-ತಮ್ಕುಹಿ ರೋಡ್ ಹೊಸ ಮಾರ್ಗ; ಆನಂದ ನಗರ-ಘುಘ್ಲಿ ಹೊಸ ಮಾರ್ಗ; ಸಹಜನವಾ-ದೋಹ್ರಿಕಾಟ್ ಹೊಸ ಮಾರ್ಗ; ಬಹ್ರೈಚ್-ಖಲೀಲಾಬಾದ್ ಹೊಸ ಮಾರ್ಗ; ಗೋರಖಪುರ-ವಾಲ್ಮೀಕಿ ನಗರ ಜೋಡಿ ಮಾರ್ಗ; ಬುರ್ಹ್ವಾಲ್-ಗೊಂಡಾ ಮೂರನೇ ಮಾರ್ಗ; ಕತ್ರಾ-ಅಯೋಧ್ಯೆ ಜೋಡಿ ಮಾರ್ಗ; ಔನ್ರಿಹಾರ್-ವಾರಾಣಸಿ 3ನೇ ಮಾರ್ಗ; ಮಥುರಾ-ಝಾನ್ಸಿ ಮೂರನೇ ಮಾರ್ಗ; ಆಗ್ರಾ ಫೋರ್ಟ್-ಬಂದಿಕುಯಿ ಜೋಡಿ ಮಾರ್ಗ; ಚೋಪನ್-ಚುನಾರ್ ಜೋಡಿ ಮಾರ್ಗ; ಮತ್ತು ಪ್ರಯಾಗರಾಜ್-ಮಾಣಿಕಪುರ ಮೂರನೇ ಮಾರ್ಗ.

ವಾರಾಣಸಿಯ ಹಳೆಯ ಮಾಳವೀಯ ಸೇತುವೆ ಶಿಥಿಲಗೊಳ್ಳುತ್ತಿದ್ದು, ಅದರ ಪಕ್ಕದಲ್ಲೇ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿದೆ, ಇದು ಕೆಳಭಾಗದಲ್ಲಿ ನಾಲ್ಕು ರೈಲು ಮಾರ್ಗಗಳನ್ನು ಮತ್ತು ಮೇಲೆ ಆರು ಪಥದ ಹೆದ್ದಾರಿಯನ್ನು ಹೊಂದಿರುತ್ತದೆ ಎಂದು ಶ್ರೀ ವೈಷ್ಣವ್ ತಿಳಿಸಿದರು. ಈ ಯೋಜನೆಗಳು ಉತ್ತರ ಪ್ರದೇಶದ ರೈಲ್ವೆ ಭೂಪಟವನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ ಮತ್ತು ಭವಿಷ್ಯದಲ್ಲಿ ಕನಿಷ್ಠ 500 ಹೊಸ ರೈಲುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತವೆ ಎಂದು ಅವರು ಹೇಳಿದರು.

ಅಮೃತ್ ಭಾರತ್ ನಿಲ್ದಾಣಗಳು

ಉತ್ತರ ಪ್ರದೇಶದಲ್ಲಿ 157 ಅಮೃತ್ ಭಾರತ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 28 ನಿಲ್ದಾಣಗಳಲ್ಲಿ ಕೆಲಸ ಈಗಾಗಲೇ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಪೂರ್ವಾಂಚಲ ಪ್ರದೇಶದಲ್ಲಿ ಮೌ, ಗಾಜಿಪುರ ಸಿಟಿ ಮತ್ತು ದಿಲ್ದಾರನಗರ ನಿಲ್ದಾಣಗಳಲ್ಲಿ ಪುನರಾಭಿವೃದ್ಧಿ ಕಾರ್ಯ ನಡೆಯುತ್ತಿದೆ.

ಹೊಸ ರೈಲುಗಳು ಮತ್ತು ಸೇವೆಗಳು

ಕೋವಿಡ್ ನಂತರ ಉತ್ತರ ಪ್ರದೇಶದಲ್ಲಿ ಸುಮಾರು 58 ಹೊಸ ರೈಲು ಸೇವೆಗಳು ಪ್ರಾರಂಭವಾಗಿವೆ ಮತ್ತು 568 ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಪ್ರಸ್ತುತ ಉತ್ತರ ಪ್ರದೇಶದಲ್ಲಿ 40 ಅಮೃತ್ ಭಾರತ್ ಎಕ್ಸ್‌ ಪ್ರೆಸ್ ಸೇವೆಗಳು ಮತ್ತು 32 ವಂದೇ ಭಾರತ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಆನಂದ್ ವಿಹಾರ್-ಮೌ ರೈಲು ಸೇವೆ ಫೆಬ್ರವರಿ 2021 ರಲ್ಲಿ ಪ್ರಾರಂಭವಾಯಿತು ಮತ್ತು ಡಿಸೆಂಬರ್ 2023 ರಲ್ಲಿ ಮೌ ನಿಂದ ಮುಂಬೈ ಕಡೆಗೆ ಹೊಸ ಸೇವೆಗಳು ಸಹ ಪ್ರಾರಂಭವಾದವು ಎಂದು ಅವರು ಹೇಳಿದರು.

ಮೂರು ಸ್ಥಳಗಳಲ್ಲಿ ಅಂಡರ್ಪಾಸ್

14C, 25C ಮತ್ತು 27C ಸ್ಥಳಗಳಲ್ಲಿ ಅಂಡರ್‌ಪಾಸ್‌ ಗಳ ನಿರ್ಮಾಣವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಘೋಷಿಸಿದರು. ದಾಖಲೆ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಅವರು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉತ್ತರ ಪ್ರದೇಶಕ್ಕೆ ಬುಲೆಟ್ ರೈಲು

ಪ್ರಧಾನ ಮಂತ್ರಿ ಮೋದಿಯವರು ಈ ವರ್ಷದ ಬಜೆಟ್‌ ನಲ್ಲಿ ಉತ್ತರ ಪ್ರದೇಶಕ್ಕೆ ಬುಲೆಟ್ ಟ್ರೈನ್ ಕಾರಿಡಾರ್ ಅನ್ನು ಘೋಷಿಸಿದ್ದು, ಕೆಲಸ ವೇಗವಾಗಿ ಪ್ರಗತಿಯಲ್ಲಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಉದ್ದೇಶಿತ ಪ್ರಯಾಣದ ಸಮಯವನ್ನು ಅವರು ಹಂಚಿಕೊಂಡರು:

  • ದೆಹಲಿ–ಆಗ್ರಾ: 58 ನಿಮಿಷ
  • ದೆಹಲಿ–ಲಕ್ನೋ: 2 ಗಂಟೆ 12 ನಿಮಿಷ
  • ದೆಹಲಿ–ವಾರಾಣಸಿ: 3 ಗಂಟೆ 33 ನಿಮಿಷ
  • ದೆಹಲಿ–ಅಯೋಧ್ಯೆ: 2 ಗಂಟೆ 47 ನಿಮಿಷ
  • ಲಕ್ನೋ–ವಾರಾಣಸಿ: 1 ಗಂಟೆ 21 ನಿಮಿಷ

ದೆಹಲಿ – ಲಕ್ನೋ – ವಾರಾಣಸಿ – ಪಾಟ್ನಾ – ಸಿಲಿಗುರಿ ಸಂಪರ್ಕಿಸುವ ಬುಲೆಟ್ ರೈಲು ಜಾಲವು ಈಶಾನ್ಯದ ಅಷ್ಟಲಕ್ಷ್ಮಿ ರಾಜ್ಯಗಳೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ವಿಕಸಿತ ಉತ್ತರ ಪ್ರದೇಶ ಹಾಗೂ ವಿಕಸಿತ ಭಾರತದ ದೃಷ್ಟಿಕೋನವನ್ನು ಪೂರೈಸುತ್ತದೆ ಎಂದು ಅವರು ಹೇಳಿದರು. ಬುಲೆಟ್ ರೈಲು ಮಧ್ಯಮ ವರ್ಗದವರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಅವರು ಭರವಸೆ ನೀಡಿದರು.

 

*****


(ಪ್ರಕಟಣೆ ಐ.ಡಿ.: 2260022) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati