ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಾಮಾಜಿಕ ನ್ಯಾಯ ವಿತರಣೆಯನ್ನು ಹೆಚ್ಚಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಚಂಡೀಗಢದಲ್ಲಿ 3 ದಿನಗಳ ರಾಷ್ಟ್ರೀಯ ಚಿಂತನ ಶಿಬಿರ - 'ಅಂತ್ಯೋದಯದ ಸಂಕಲ್ಪ, ಅಮೃತ ಕಾಲದ ಪ್ರತಿಬಿಂಬ' ಚಾಲನೆ


ಪಂಜಾಬ್ ರಾಜ್ಯಪಾಲರಾದ ಶ್ರೀ ಗುಲಾಬ್ ಚಂದ್ ಕಟಾರಿಯಾ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಅವರು ಚಂಡೀಗಢದಲ್ಲಿ ರಾಷ್ಟ್ರೀಯ ಚಿಂತನ ಶಿಬಿರವನ್ನು ಉದ್ಘಾಟಿಸಿದರು

ಸಾಮಾಜಿಕ ನ್ಯಾಯವು ಭಾರತದ ಪ್ರಜಾಪ್ರಭುತ್ವದ ತತ್ವಗಳ ಕೇಂದ್ರಬಿಂದುವಾಗಿದೆ ಮತ್ತು ಬಡವರು ಹಾಗೂ ಅತ್ಯಂತ ದುರ್ಬಲ ವರ್ಗದವರಿಗೆ ಆದ್ಯತೆ ನೀಡಬೇಕು: ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ

ವಿಕಸಿತ ಭಾರತ 2047 ಅನ್ನು ಸರದಿಯ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೆ ಘನತೆ, ಲಭ್ಯತೆ ಮತ್ತು ನಿರಂತರತೆಯ ಆಧಾರದ ಮೇಲೆ ನಿರ್ಮಿಸಬೇಕು: ಡಾ. ವೀರೇಂದ್ರ ಕುಮಾರ್

ಈ ಚಿಂತನ ಶಿಬಿರವು ಜಾರಿಗೊಳಿಸಬಹುದಾದ ಫಲಿತಾಂಶಗಳು ಮತ್ತು ಕಾರ್ಯರೂಪಕ್ಕೆ ತರಬಹುದಾದ ಶಿಫಾರಸುಗಳ ಬಗ್ಗೆ ಚರ್ಚಿಸುವುದಕ್ಕಾಗಿ ಇದೆ: ಶ್ರೀ ಬಿ. ಎಲ್. ವರ್ಮಾ

ಶಿಬಿರದಲ್ಲಿ ಸಮಾವೇಶ್ ಪೋರ್ಟಲ್, ಎನ್ ಎಂ ಬಿ ಎ 2.0, ಸೇತು ಮತ್ತು ಸ್ಮೈಲ್ ಬೆಗ್ಗರಿ ಆಪ್‌‌ ಗಳಿಗೆ ಚಾಲನೆ ನೀಡಲಾಯಿತು

ಚಿಂತನ ಶಿಬಿರದಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ತಳಮಟ್ಟದಲ್ಲಿ ಹೋರಾಡುತ್ತಿರುವ 'ನಶಾ ಮುಕ್ತಿ ಮಿತ್ರ'ರನ್ನು ಸನ್ಮಾನಿಸಲಾಯಿತು

ಪ್ರಕಟಣಾ ದಿನಾಂಕ: 24 APR 2026 7:46PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಂದು ಚಂಡೀಗಢದಲ್ಲಿ ಮೂರು ದಿನಗಳ ರಾಷ್ಟ್ರೀಯ ಚಿಂತನ ಶಿಬಿರಕ್ಕೆ ಚಾಲನೆ ನೀಡಿತು, ಇದು ಭಾರತದ ಸಾಮಾಜಿಕ ನ್ಯಾಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಂದೆಡೆ ಸೇರಿಸಿದೆ. ಪಂಜಾಬ್ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಕೇಂದ್ರ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಅವರ ಸಮ್ಮುಖದಲ್ಲಿ ಜಂಟಿಯಾಗಿ ಇದನ್ನು ಉದ್ಘಾಟಿಸಿದರು. ಈ ಶಿಬಿರವು "ಅಂತ್ಯೋದಯದ ಸಂಕಲ್ಪ, ಅಮೃತ ಕಾಲದ ಪ್ರತಿಬಿಂಬ – ವಿಕಸಿತ ಭಾರತ@2047" ಎಂಬ ವಿಷಯದ ಅಡಿಯಲ್ಲಿ ನಡೆಯುತ್ತಿದ್ದು, ಇದು ಕೊನೆಯ ಮೈಲಿವರೆಗಿನ ಅನುಷ್ಠಾನ, ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಅಂಚಿನಲ್ಲಿರುವ ಸಮುದಾಯಗಳ ಒಳಗೊಳ್ಳುವಿಕೆಯ ಸಬಲೀಕರಣಕ್ಕೆ ಒತ್ತು ನೀಡುತ್ತದೆ. ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಕಲಚೇತನರ ಕಲ್ಯಾಣ ಸಚಿವರಾದ ಶ್ರೀ ನಾರಾಯಣ್ ಸಿಂಗ್ ಕುಶ್ವಾಹಾ; ಹರಿಯಾಣ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ, ಎಸ್‌ ಸಿ ಮತ್ತು ಬಿ ಸಿ ಕಲ್ಯಾಣ ಹಾಗೂ ಅಂತ್ಯೋದಯ ಸಚಿವರಾದ ಶ್ರೀ ಕ್ರಿಶನ್ ಕುಮಾರ್ ಬೇಡಿ; ದೆಹಲಿ ಸರ್ಕಾರದ ಸಮಾಜ ಕಲ್ಯಾಣ, ಎಸ್‌ ಸಿ ಮತ್ತು ಎಸ್‌ ಟಿ ಕಲ್ಯಾಣ ಹಾಗೂ ಸಹಕಾರ ಸಚಿವರಾದ ಶ್ರೀ ರವೀಂದ್ರ ಇಂದ್ರಜಿತ್ ಸಿಂಗ್; ಮಿಜೋರಾಂ ಸರ್ಕಾರದ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಪೈ ಲಾಲ್ರಿನಪುಯಿ; ಮತ್ತು ಉತ್ತರ ಪ್ರದೇಶ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ವಿಕಲಚೇತನರ ಸಬಲೀಕರಣ ಸಚಿವರಾದ ಶ್ರೀ ನರೇಂದ್ರ ಕಶ್ಯಪ್ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಚಿವಾಲಯದ ಪ್ರಮುಖ ಉಪಕ್ರಮಗಳು, ಪ್ರಮುಖ ಯೋಜನೆಗಳು ಮತ್ತು ಸಾಧನೆಗಳನ್ನು ಪ್ರಸ್ತುತಪಡಿಸುವ ಪ್ರದರ್ಶನವನ್ನು ಪಂಜಾಬ್ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ ಅವರು ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಮತ್ತು ಕೇಂದ್ರ ರಾಜ್ಯ ಸಚಿವ ಶ್ರೀ ಬಿ. ಎಲ್. ವರ್ಮಾ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಂಜಾಬ್ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ, ರಾಷ್ಟ್ರೀಯ ಚಿಂತನ ಶಿಬಿರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಯತ್ತ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಸಾಮಾಜಿಕ ನ್ಯಾಯವು ಭಾರತದ ಪ್ರಜಾಪ್ರಭುತ್ವ ತತ್ವಗಳ ಮೂಲವಾಗಿದೆ ಮತ್ತು "ಅಂತ್ಯೋದಯದ ಸಂಕಲ್ಪ, ಅಮೃತ ಕಾಲದ ಪ್ರತಿಬಿಂಬ – ವಿಕಸಿತ ಭಾರತ @2047" ಸಂಕಲ್ಪವು ಬಡವರು ಮತ್ತು ಅತ್ಯಂತ ದುರ್ಬಲರ ಕಾಳಜಿಗಳನ್ನು ನೀತಿ ಮತ್ತು ಆಡಳಿತದ ಕೇಂದ್ರಬಿಂದುವಾಗಿ ಇರಿಸಿದಾಗ ಮಾತ್ರ ಸಾಕಾರಗೊಳ್ಳಲು ಸಾಧ್ಯ ಎಂದು ಅವರು ಒತ್ತಿಹೇಳಿದರು.

ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ನಿಕಟ ಸಮನ್ವಯ ಮತ್ತು ಅರ್ಹ ಫಲಾನುಭವಿಗಳಿಗೆ ಯಾವುದೇ ತಾರತಮ್ಯ ಅಥವಾ ವಿಳಂಬವಿಲ್ಲದೆ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಕ್ರಿಯ ಸಮುದಾಯದ ಭಾಗವಹಿಸುವಿಕೆಯ ಅಗತ್ಯವನ್ನು ಶ್ರೀ ಕಟಾರಿಯಾ ಒತ್ತಿ ಹೇಳಿದರು. ಈ ಚಿಂತನ ಶಿಬಿರವು ಸಾಮಾಜಿಕ ರಕ್ಷಣೆಯನ್ನು ಬಲಪಡಿಸಲು, ಹೊರಗಿಡುವಿಕೆ ಮತ್ತು ವಂಚಿತತೆಯಂತಹ ಸವಾಲುಗಳನ್ನು ಎದುರಿಸಲು ಮತ್ತು ತಳಮಟ್ಟದಲ್ಲಿ ಘನತೆ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಪ್ರಾಯೋಗಿಕ ಹಾಗೂ ಸಮಯಬದ್ಧ ಶಿಫಾರಸುಗಳಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಸಮಾಜದ ಪ್ರತಿಯೊಂದು ಅಂಚಿನಲ್ಲಿರುವ ವರ್ಗವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರದ ಹೊರತು ವಿಕಸಿತ ಭಾರತ 2047 ರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಒಳಗೊಳ್ಳುವ ನೀತಿಗಳು, ಅವಕಾಶಗಳಿಗೆ ಸಮಾನ ಪ್ರವೇಶ ಮತ್ತು ರಾಷ್ಟ್ರದ ಬೆಳವಣಿಗೆಯ ಪಯಣದಲ್ಲಿ ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳಲು ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರು, ಚಿಂತನ ಶಿಬಿರವು ಕೇವಲ ನೀತಿ ನಿರೂಪಕರು ಮತ್ತು ಆಡಳಿತಗಾರರ ವಾಡಿಕೆಯ ಸಭೆಯಲ್ಲ, ಬದಲಾಗಿ ಇದು ವಿಚಾರಗಳು, ಬದ್ಧತೆ ಮತ್ತು ಹಂಚಿಕೆಯ ರಾಷ್ಟ್ರೀಯ ಉದ್ದೇಶದ ಸಾಮೂಹಿಕ ವೇದಿಕೆಯಾಗಿದೆ ಎಂದು ತಿಳಿಸಿದರು. ವಿಕಸಿತ ಭಾರತ 2047 ರ ದೃಷ್ಟಿಕೋನವು ನ್ಯಾಯ, ಸಮಾನತೆ, ಘನತೆ ಮತ್ತು ಅವಕಾಶಗಳ ಅಡಿಪಾಯದ ಮೇಲೆ ನಿಂತಿದೆ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಯು ಐತಿಹಾಸಿಕವಾಗಿ ಅಂಚಿನಲ್ಲಿರುವವರಿಗೆ ಪ್ರಗತಿ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಶಿಬಿರದ ಅವಧಿಯಲ್ಲಿ ನಡೆಯುವ ನೀತಿ ಚರ್ಚೆಗಳು ಘನತೆ, ಲಭ್ಯತೆ ಮತ್ತು ನಿರಂತರತೆ ಎಂಬ ಮೂರು ಪ್ರಮುಖ ಸ್ತಂಭಗಳಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಶಿಕ್ಷಣದ ಆಕಾಂಕ್ಷೆಯಿರುವ ವಿದ್ಯಾರ್ಥಿಯೇ ಆಗಲಿ, ಆರೈಕೆ ಬಯಸುವ ಹಿರಿಯ ನಾಗರಿಕರೇ ಆಗಲಿ ಅಥವಾ ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವ ವಿಕಲಚೇತನರೇ ಆಗಲಿ, ಸಾರ್ವಜನಿಕ ನೀತಿಯು ಕಲ್ಯಾಣವನ್ನು ಮೀರಿ ಸಬಲೀಕರಣದತ್ತ ಸಾಗಬೇಕು ಮತ್ತು ವ್ಯವಸ್ಥೆಗಳು ಮಾನವೀಯ, ಸ್ಪಂದನಾಶೀಲ ಮತ್ತು ಒಳಗೊಳ್ಳುವಿಕೆಯುಳ್ಳದ್ದಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಲಭ್ಯತೆ ಮತ್ತು ನಿರಂತರತೆಯ ಮಹತ್ವವನ್ನು ಒತ್ತಿ ಹೇಳಿದ ಡಾ. ವೀರೇಂದ್ರ ಕುಮಾರ್, ಜನರಿಗಾಗಿ ಇರುವ ಪ್ರಯೋಜನಗಳು ಕೇವಲ ನೀತಿ ದಾಖಲೆಗಳಿಗೆ ಸೀಮಿತವಾಗಬಾರದು ಮತ್ತು ಯಾವುದೇ ಕಾರ್ಯವಿಧಾನದ ಅಡೆತಡೆಗಳಿಲ್ಲದೆ ಉದ್ದೇಶಿತ ಫಲಾನುಭವಿಗಳನ್ನು ತಲುಪಬೇಕು ಎಂದು ಹೇಳಿದರು. ಸರಳೀಕೃತ ವಿದ್ಯಾರ್ಥಿವೇತನ ವ್ಯವಸ್ಥೆಗಳು, ಹಿರಿಯ ನಾಗರಿಕರಿಗೆ ಸೇವೆ ಲಭ್ಯತೆ ಮತ್ತು ವಂಚಿತ ಯುವಕರಿಗೆ ಬೆಂಬಲ ರಚನೆಗಳು ಸೇರಿದಂತೆ ತಂತ್ರಜ್ಞಾನ ಆಧಾರಿತ ಮತ್ತು ಸಮಗ್ರ ವಿಧಾನಗಳು ದೀರ್ಘಾವಧಿಯ ಮತ್ತು ಪರಿವರ್ತಕ ಸಬಲೀಕರಣದ ಅಗತ್ಯ ಅಂಶಗಳಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಮಾತನಾಡಿ, ಚಿಂತನ ಶಿಬಿರವು ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ಇದರ ಅಡಿಯಲ್ಲಿ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಲ್ಯಾಣ ಯೋಜನೆಗಳ ವಿತರಣೆಯನ್ನು ಬಲಪಡಿಸಲು ಒಂದು ತಂಡವಾಗಿ ಒಟ್ಟಾಗಿರುತ್ತವೆ ಎಂದು ಹೇಳಿದರು. ಈ ಕಾರ್ಯಕ್ರಮವು ಸಾಮಾಜಿಕ ನ್ಯಾಯವನ್ನು ಅದರ ಮೂಲವಾಗಿರಿಸಿಕೊಂಡು "ವಿಕಸಿತ ಭಾರತ @2047" ಕ್ಕಾಗಿ ಸರ್ಕಾರದ ಸಂಕಲ್ಪವನ್ನು ಒಳಗೊಂಡಿದೆ ಮತ್ತು ಪ್ರತಿಯೊಬ್ಬ ನಾಗರಿಕನಿಗೆ, ವಿಶೇಷವಾಗಿ ವಂಚಿತ ಮತ್ತು ದುರ್ಬಲ ವರ್ಗದವರಿಗೆ ಸಮಾನತೆ, ಘನತೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ ಎಂದು ಅವರು ಹೇಳಿದರು. ಉತ್ತಮವಾಗಿ ವಿನ್ಯಾಸಗೊಳಿಸಲಾದ ನೀತಿಗಳು, ಗುರಿ ಉದ್ದೇಶಿತ ಕಾರ್ಯಕ್ರಮಗಳು ಮತ್ತು ಪರಿಣಾಮಕಾರಿ ಸೇವಾ ವಿತರಣಾ ಕಾರ್ಯವಿಧಾನಗಳ ಮೂಲಕ ಈ ದೃಷ್ಟಿಕೋನವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ಸಚಿವಾಲಯವು ಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಶ್ರೀ ವರ್ಮಾ ಒತ್ತಿ ಹೇಳಿದರು.

ಸಾಮಾಜಿಕ ನ್ಯಾಯದ ಕ್ಷೇತ್ರದಲ್ಲಿ ಸಚಿವಾಲಯದ ಪ್ರಮುಖ ಆದ್ಯತೆಗಳೆಂದರೆ ವಂಚಿತರನ್ನು ತಲುಪುವುದು, ಸೇವೆಗಳ ಲಭ್ಯತೆಯನ್ನು ಸುಧಾರಿಸುವುದು, ಕಾರ್ಯವಿಧಾನಗಳನ್ನು ಸರಳಗೊಳಿಸುವುದು ಮತ್ತು ಫಲಾನುಭವಿ ಕೇಂದ್ರಿತ ಆಡಳಿತವನ್ನು ಖಚಿತಪಡಿಸಿಕೊಳ್ಳುವುದು ಎಂದು ಶ್ರೀ ವರ್ಮಾ ಹೇಳಿದರು. ಚಿಂತನ ಶಿಬಿರವನ್ನು ಕೇವಲ ಚರ್ಚೆಗಾಗಿ ವಿನ್ಯಾಸಗೊಳಿಸಲಾಗಿಲ್ಲ, ಬದಲಾಗಿ ವಿಷಯಾಧಾರಿತ ಗುಂಪು ಕೆಲಸ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಕಾರ್ಯರೂಪಕ್ಕೆ ತರಬಹುದಾದ ಶಿಫಾರಸುಗಳ ಮೂಲಕ ಜಾರಿಗೊಳಿಸಬಹುದಾದ ಫಲಿತಾಂಶಗಳನ್ನು ತಲುಪಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶ ಪಂತ್ ಅವರು ಮಾತನಾಡಿ, ಈ ಚಿಂತನ ಶಿಬಿರವು ಕೊನೆಯ ವ್ಯಕ್ತಿಯನ್ನು ಮೊದಲು ತಲುಪುವ ನಮ್ಮ ಬದ್ಧತೆಯನ್ನು ಮತ್ತು ಅಭಿವೃದ್ಧಿಯು ಒಳಗೊಳ್ಳುವ ಹಾಗೂ ಪರಿವರ್ತಕವಾಗುವುದನ್ನು ಖಚಿತಪಡಿಸುವ ನಮ್ಮ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದರು.

ವಿಕಲಚೇತನರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿ. ವಿದ್ಯಾವತಿ ಮಾತನಾಡಿ, "ವಿಕಲಚೇತನರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರು ಸಂಪೂರ್ಣವಾಗಿ ಒಳಗೊಳ್ಳುವ ಮತ್ತು ಅಭಿವೃದ್ಧಿಯ ಎಲ್ಲಾ ಆಯಾಮಗಳಲ್ಲಿ ಭಾಗವಹಿಸಲು ಸಬಲೀಕರಣಗೊಳ್ಳುವ 'ಸಮಗ್ರ ಭಾರತ'ವಿಲ್ಲದೆ ವಿಕಸಿತ ಭಾರತ 2047 ರ ದೃಷ್ಟಿಕೋನವನ್ನು ಸಾಧಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಉದ್ಘಾಟನಾ ಅಧಿವೇಶನದ ಪ್ರಮುಖ ಆಕರ್ಷಣೆಯೆಂದರೆ ಲಭ್ಯತೆ, ಪಾರದರ್ಶಕತೆ ಮತ್ತು ಸೇವಾ ವಿತರಣೆಯನ್ನು ಬಲಪಡಿಸುವ ಉದ್ದೇಶದ ಹಲವಾರು ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳು ಮತ್ತು ಜ್ಞಾನ ಸಂಪನ್ಮೂಲಗಳಿಗೆ ಚಾಲನೆ. ಇವುಗಳಲ್ಲಿ ಸಬಲೀಕರಣ ಮತ್ತು ಸಾಮಾಜಿಕ ಸಾಮರಸ್ಯದ ವಿವಿಧ ವಿಭಾಗಗಳಿಗೆ ಏಕ ಪ್ರವೇಶ ಕಾರ್ಯವಿಧಾನವಾಗಿ 'ಸಮಾವೇಶ್' ಪೋರ್ಟಲ್, 'ನಶಾ ಮುಕ್ತ ಭಾರತ ಅಭಿಯಾನ'ವನ್ನು ಬಲಪಡಿಸಲು 'ಎನ್‌ ಎಂ ಬಿ ಎ 2.0' ಆಪ್, ವಿದ್ಯಾರ್ಥಿವೇತನ ಸಂಬಂಧಿತ ಸೇವೆಗಳನ್ನು ಸುಗಮಗೊಳಿಸಲು 'ಸೇತು' ಆಪ್ ಮತ್ತು ದುರ್ಬಲ ವರ್ಗಗಳ ಸಂಪರ್ಕ ಹಾಗೂ ಪುನರ್ವಸತಿಗಾಗಿ 'ಸ್ಮೈಲ್' ಆಪ್ ಸೇರಿವೆ.

ಈ ಸಂದರ್ಭದಲ್ಲಿ, ಸಾಂಸ್ಥಿಕ ಆರೈಕೆ, ಪುನರ್ವಸತಿ ಚೌಕಟ್ಟುಗಳು ಮತ್ತು ಸೇವೆಯ ಗುಣಮಟ್ಟವನ್ನು ಬಲಪಡಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸಲು 'ಡಿಮೆನ್ಶಿಯಾ ಕೇರ್ ಹೋಮ್‌ ಗಳ ಕನಿಷ್ಠ ಮಾನದಂಡಗಳು' ಮತ್ತು 'ಭಿಕ್ಷುಕರ ವಸತಿಗೃಹಗಳ ಮಾದರಿ ಮಾರ್ಗಸೂಚಿಗಳ' ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು. ಸಾಮಾಜಿಕ ವಲಯದಲ್ಲಿ ಸಾಮರ್ಥ್ಯ ವೃದ್ಧಿ, ತರಬೇತಿ ಮತ್ತು ಸಂಶೋಧನಾ ಉಪಕ್ರಮಗಳನ್ನು ವಿಸ್ತರಿಸಲು ರಾಷ್ಟ್ರೀಯ ಸಮಾಜ ರಕ್ಷಣಾ ಸಂಸ್ಥೆ (ಎನ್‌ ಐ ಎಸ್‌ ಡಿ) ಮತ್ತು ಪಾಲುದಾರ ಸಂಸ್ಥೆಗಳ ನಡುವೆ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ವಿವಿಧ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮತ್ತು ಹೋರಾಡುವಲ್ಲಿ ಅವರು ನೀಡಿದ ಶ್ಲಾಘನೀಯ ಪ್ರಯತ್ನಗಳು ಮತ್ತು ತಳಮಟ್ಟದ ಕೊಡುಗೆಗಳನ್ನು ಗುರುತಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 'ನಶಾ ಮುಕ್ತಿ ಮಿತ್ರ'ರನ್ನು ಸನ್ಮಾನಿಸಲಾಯಿತು. ಮಾದಕವ್ಯಸನ ಮುಕ್ತ ಸಮಾಜದ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಅವರ ಸಮರ್ಪಣೆ ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆಯು ಪ್ರಮುಖ ಸಾಧನವಾಗಿದೆ ಎಂದು ಶ್ಲಾಘಿಸಲಾಯಿತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳ ಅನುಷ್ಠಾನವನ್ನು ಬಲಪಡಿಸಲು ಅಗತ್ಯವಿರುವ ಕಾರ್ಯರೂಪಕ್ಕೆ ತರಬಹುದಾದ ಶಿಫಾರಸುಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ, ಈ ಚಿಂತನ ಶಿಬಿರವು ಮುಂದಿನ ಎರಡು ದಿನಗಳ ಕಾಲ ವಿಷಯಾಧಾರಿತ ಚರ್ಚೆಗಳು, ಉಪ-ಗೋಷ್ಠಿಗಳು ಮತ್ತು ಗುಂಪು ಪ್ರಸ್ತುತಿಗಳೊಂದಿಗೆ ಮುಂದುವರಿಯಲಿದೆ.

 

*****


(ಪ್ರಕಟಣೆ ಐ.ಡಿ.: 2255455) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Punjabi