ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತವು ಜಾಗತಿಕ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಪ್ರಮುಖ ಚಾಲಕನಾಗಿದೆ; 2025-26 ರ ಆರ್ಥಿಕ ವರ್ಷದಲ್ಲಿ ಇದುವರೆಗಿನ ಅತ್ಯಧಿಕ 31.25 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಸೇರ್ಪಡೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


ಹೊಸ ಯುಟಿಲಿಟಿ-ಲೆಡ್ ಅಗ್ರಿಗೇಷನ್ (ಯು ಎಲ್ ಎ) ಮಾದರಿಯಡಿಯಲ್ಲಿ ಒಡಿಶಾದಲ್ಲಿ 1.5 ಲಕ್ಷ ಮೇಲ್ಛಾವಣಿ ಸೌರ ಘಟಕಗಳು ಸ್ಥಾಪನೆಯಾಗಲಿದ್ದು, 7-8 ಲಕ್ಷ ನಾಗರಿಕರನ್ನು ಸಶಕ್ತಗೊಳಿಸಲಿವೆ: ಕೇಂದ್ರ ಸಚಿವರಾದ ಜೋಶಿ

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಪುರಿಯಲ್ಲಿ ಜಾಗತಿಕ ಇಂಧನ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು

प्रविष्टि तिथि: 06 DEC 2025 2:29PM by PIB Bengaluru

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು ತನ್ನ ಅತ್ಯಧಿಕ ಪಳೆಯುಳಿಕೆಯೇತರ ಸಾಮರ್ಥ್ಯಕ್ಕೆ 31.25 ಗಿಗಾವ್ಯಾಟ್ ಸೇರಿಸಿದೆ, ಇದರಲ್ಲಿ 24.28 ಗಿಗಾವ್ಯಾಟ್ ಸೌರಶಕ್ತಿಯೂ ಸೇರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಒಡಿಶಾದ ಪುರಿಯಲ್ಲಿ ನಡೆದ ಜಾಗತಿಕ ಇಂಧನ ನಾಯಕರ ಶೃಂಗಸಭೆ 2025 ರಲ್ಲಿ ಮಾತನಾಡಿದ ಸಚಿವರು, ಒಡಿಶಾದ 7-8 ಲಕ್ಷ ಜನರಿಗೆ ಪ್ರಯೋಜನ ಮತ್ತು ಸಬಲೀಕರಣಕ್ಕಾಗಿ ವಿನ್ಯಾಸಗೊಳಿಸಲಾದ 1.5 ಲಕ್ಷ ಮೇಲ್ಛಾವಣಿ ಯು ಎಲ್‌ ಎ ಮಾದರಿಯನ್ನು ಘೋಷಿಸಿದರು.

2022ರಲ್ಲಿ 1 ಟೆರಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತಲುಪಲು ಸುಮಾರು 70 ವರ್ಷಗಳನ್ನು ತೆಗೆದುಕೊಂಡಿದ್ದ ಜಗತ್ತು, ನಂತರ 2024 ರ ವೇಳೆಗೆ 2 ಟೆರಾವ್ಯಾಟ್ ಅನ್ನು ಸಾಧಿಸಿತು, ಕೇವಲ ಎರಡು ವರ್ಷಗಳಲ್ಲಿ ಎರಡನೇ ಟೆರಾವ್ಯಾಟ್ ಅನ್ನು ಸೇರಿಸಿತು ಎಂದು ಸಚಿವರು ಹೇಳಿದರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಈ ಅಗಾಧ ಜಾಗತಿಕ ಏರಿಕೆಗೆ ಭಾರತ ಪ್ರಮುಖ ಚಾಲಕನಾಗಿದೆ. ಕಳೆದ 11 ವರ್ಷಗಳಲ್ಲಿ, ದೇಶದ ಸೌರ ಸಾಮರ್ಥ್ಯವು 2.8 ಗಿಗಾವ್ಯಾಟ್‌  ನಿಂದ ಸುಮಾರು 130 ಗಿಗಾವ್ಯಾಟ್‌ ಗೆ ಬೆಳೆದಿದೆ, ಇದು ಶೇ.4,500 ಕ್ಕಿಂತ ಹೆಚ್ಚು ಏರಿಕೆಯಾಗಿದೆ. 2022 ಮತ್ತು 2024 ರ ನಡುವೆ, ಭಾರತವು ಜಾಗತಿಕ ಸೌರ ಸೇರ್ಪಡೆಗಳಿಗೆ 46 ಗಿಗಾವ್ಯಾಟ್‌ ಕೊಡುಗೆ ನೀಡುವ ಮೂಲಕ, ಮೂರನೇ ಅತಿದೊಡ್ಡ ಕೊಡುಗೆದಾರನಾಗಿದೆ ಎಂದು ಅವರು ಹೇಳಿದರು.

ಭಾರತವು ವಿಶ್ವದ ಐದನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ ಮತ್ತು ಕಲ್ಲಿದ್ದಲಿನ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ ಎಂದು ಸಚಿವರು ಹೇಳಿದರು. ಈ ಸಮೃದ್ಧಿಯ ಹೊರತಾಗಿಯೂ, ಈ ಪರಿವರ್ತನೆಯು ವೇಗಗೊಳ್ಳುತ್ತಿದ್ದಂತೆ ಭಾರತವು ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಇಂಧನವನ್ನು ನಿರಂತರವಾಗಿ ಸಮತೋಲನಗೊಳಿಸುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಕಾರ್ಯವಿಧಾನಗಳು ಈಗ ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ರೂಪಿಸುತ್ತಿರುವುದರಿಂದ, ನವೀಕರಿಸಬಹುದಾದ ಇಂಧನದತ್ತ ಭಾರತದ ಬದಲಾವಣೆಯು ಇನ್ನಷ್ಟು ತುರ್ತು ಮತ್ತು ಕಾರ್ಯತಂತ್ರದ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ನವೀಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ಒಡಿಶಾ ಪ್ರಗತಿ

ಒಡಿಶಾದ ಪ್ರಮುಖ ಹೊಸ ಉಪಕ್ರಮಗಳನ್ನು ಉಲ್ಲೇಖಿಸಿದ ಸಚಿವರು, ರಾಜ್ಯದಲ್ಲಿ 1 ಕಿ.ವ್ಯಾಟ್ ನ 1.5 ಲಕ್ಷ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲು ಪಿಎಂ ಸೂರ್ಯ ಘರ್ ಅಡಿಯಲ್ಲಿ ಗ್ರಾಹಕ ಸ್ವಾಮ್ಯದ ಯುಟಿಲಿಟಿ-ಲೆಡ್ ಅಗ್ರಿಗೇಷನ್ (ಯು ಎಲ್ ಎ) ಮಾದರಿಗೆ ಅನುಮೋದನೆ ನೀಡುವುದಾಗಿ ಘೋಷಿಸಿದರು. ಇದು ಸುಮಾರು 7-8 ಲಕ್ಷ ಜನರಿಗೆ, ವಿಶೇಷವಾಗಿ ಒಡಿಶಾದ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಒಡಿಶಾ ಈಗಾಗಲೇ ಶುದ್ಧ ಇಂಧನವನ್ನು ಬಲವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಸಚಿವರು ಹೇಳಿದರು. 3.1 ಗಿಗಾವ್ಯಾಟ್ ಗಿಂತ ಹೆಚ್ಚು ನವೀಕರಿಸಬಹುದಾದ ಸಾಮರ್ಥ್ಯದೊಂದಿಗೆ, ಶುದ್ಧ ಇಂಧನವು ಈಗ ರಾಜ್ಯದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.34 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ, 1.6 ಲಕ್ಷ ಮನೆಗಳು ಮೇಲ್ಛಾವಣಿ ಸೌರಶಕ್ತಿಗಾಗಿ ಅರ್ಜಿ ಸಲ್ಲಿಸಿವೆ, 23,000ಕ್ಕೂ ಹೆಚ್ಚು ಸ್ಥಾಪನೆಗಳು ಪೂರ್ಣಗೊಂಡಿವೆ ಮತ್ತು 19,200ಕ್ಕೂ ಹೆಚ್ಚು ಕುಟುಂಬಗಳು ₹147 ಕೋಟಿಗೂ ಹೆಚ್ಚಿನ ಸಬ್ಸಿಡಿಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆದಿವೆ ಎಂದು ಅವರು ಹೇಳಿದರು.

ವ್ಯಾಪಾರ ಮಾಡುವ ಸುಲಭತೆ, ಹೂಡಿಕೆದಾರರ ವಿಶ್ವಾಸ, ಮೂಲಸೌಕರ್ಯ, ಬೇಡಿಕೆ ಆಧಾರಿತ ಯೋಜನೆಗಳು ಮತ್ತು ಬಲವಾದ ಕೇಂದ್ರ-ರಾಜ್ಯ ಸಹಕಾರದಂತಹ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಚಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯು ಭಾರತದಲ್ಲಿ ನವೀಕರಿಸಬಹುದಾದ ಇಂಧನದ ವಿಸ್ತರಣೆಯನ್ನು ಉತ್ತೇಜಿಸಿದೆ ಎಂದು ಶ್ರೀ ಜೋಶಿ ಒತ್ತಿ ಹೇಳಿದರು.

ಮುಂಬರುವ ವರ್ಷಗಳು ಒಡಿಶಾಗೆ ಸೇರಿರುತ್ತವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು, ಮತ್ತು ನವೀಕರಿಸಬಹುದಾದ ಇಂಧನ ಮತ್ತು ಹಸಿರು ತಂತ್ರಜ್ಞಾನವನ್ನು ಉತ್ತೇಜಿಸಿದ್ದಕ್ಕಾಗಿ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಉಪಮುಖ್ಯಮಂತ್ರಿ ಶ್ರೀ ಕನಕ ವರ್ಧನ್ ಸಿಂಗ್ ದೇವ್ ಮತ್ತು ರಾಜ್ಯದ ಜನರನ್ನು ಶ್ಲಾಘಿಸಿದರು.

2025ರ ಜಾಗತಿಕ ಇಂಧನ ನಾಯಕರ ಶೃಂಗಸಭೆ (ಜಿ ಇ ಎಲ್‌ ಎಸ್) ಬಗ್ಗೆ

ಪುರಿಯಲ್ಲಿ ನಡೆಯುವ ಜಾಗತಿಕ ಇಂಧನ ನಾಯಕರ ಶೃಂಗಸಭೆ (ಜಿ ಇ ಎಲ್‌ ಎಸ್) ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ನೀತಿ ನಿರೂಪಕರು, ನಾವೀನ್ಯಕಾರರು ಮತ್ತು ಉದ್ಯಮ ನಾಯಕರನ್ನು ಒಟ್ಟುಗೂಡಿಸುವ ಮೊದಲ ಹೆಜ್ಜೆಯಾಗಿದೆ. ಡಿಸೆಂಬರ್ 5-7, 2025 ರವರೆಗೆ ನಡೆಯಲಿರುವ ಜಿ ಇ ಎಲ್‌ ಎಸ್ ಪುರಿ 2025, ಕೇಂದ್ರ ಮತ್ತು ರಾಜ್ಯ ಇಂಧನ ಸಚಿವರು, ಜಾಗತಿಕ ಇಂಧನ ನಾಯಕರು, ನಾವೀನ್ಯಕಾರರು ಮತ್ತು ಕೈಗಾರಿಕಾ ನಾಯಕರನ್ನು ಒಟ್ಟುಗೂಡಿಸುತ್ತದೆ. ಈ ಶೃಂಗಸಭೆಯು ಇಂಧನದ ಭವಿಷ್ಯವನ್ನು ರೂಪಿಸುವತ್ತ ಗಮನಹರಿಸುತ್ತದೆ.

 

*****


(रिलीज़ आईडी: 2199810) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Odia , Tamil