ಬಾಹ್ಯಾಕಾಶ ವಿಭಾಗ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ಮತ್ತು 'ವಿಶ್ವಬಂಧು ಭಾರತ'ದ ಸ್ಫೂರ್ತಿಯನ್ನು ಸಾಕಾರಗೊಳಿಸುತ್ತಾ, ಶುಭಾಂಶು ಶುಕ್ಲಾ ನಡೆಸಲಿರುವ ಎಲ್ಲಾ ಪ್ರಯೋಗಗಳನ್ನು ಭಾರತೀಯ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿವೆ ಮತ್ತು ಈ ಪ್ರಯೋಗಗಳಿಂದ ಪಡೆದ ಫಲಿತಾಂಶಗಳನ್ನು ಪ್ರಪಂಚದ ಉಳಿದ ಭಾಗಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು


ಭಾರತೀಯ ಗಗನಯಾತ್ರಿಯನ್ನು ಐ.ಎಸ್.ಎಸ್.  ಗೆ ಸಾಗಿಸುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಯಶಸ್ವಿ ಡಾಕಿಂಗ್ ಅನ್ನು ಡಾ. ಜಿತೇಂದ್ರ ಸಿಂಗ್ ಶ್ಲಾಘಿಸಿದರು

ಏಳು 'ಭಾರತದಲ್ಲಿಯೇ ತಯಾರಿಸಲಾದ' ಪ್ರಯೋಗಗಳು ಬಾಹ್ಯಾಕಾಶ ಸುಸ್ಥಿರತೆಯಲ್ಲಿ ಒಂದು ದೈತ್ಯ ಜಿಗಿತವಾಗಿದೆ: ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಸಿಂಗ್

Posted On: 26 JUN 2025 7:15PM by PIB Bengaluru

ರಾಷ್ಟ್ರಕ್ಕೆ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣದಲ್ಲಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಮತ್ತು ಇತರ ಸಿಬ್ಬಂದಿ ಸದಸ್ಯರು ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐ.ಎಸ್.ಎಸ್.) ದೊಂದಿಗೆ ಯಶಸ್ವಿಯಾಗಿ ಡಾಕಿಂಗ್ (ಜೋಡಣೆ) ಮಾಡಿರುವುದನ್ನು ಶ್ಲಾಘಿಸಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಲ್ಪಿಸಿಕೊಂಡಿರುವ "ಆತ್ಮನಿರ್ಭರ ಭಾರತ" ಮತ್ತು "ವಿಶ್ವಬಂಧು ಭಾರತ"ದ ಸ್ಫೂರ್ತಿಯನ್ನು ಸಾಕಾರಗೊಳಿಸುತ್ತಾ, ಶುಭಾಂಶು ಶುಕ್ಲಾ ಅವರು ನಡೆಸಲಿರುವ ಎಲ್ಲಾ ಪ್ರಯೋಗಗಳನ್ನು ಭಾರತೀಯ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿವೆ ಮತ್ತು ಈ ಪ್ರಯೋಗಗಳಿಂದ ಪಡೆದ ಫಲಿತಾಂಶಗಳನ್ನು ಪ್ರಪಂಚದ ಉಳಿದ ಭಾಗಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಆ್ಯಕ್ಸಿಯಂ-4  ಕಾರ್ಯಾಚರಣೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ರಾಜ್ಯ ಸಚಿವ (ಸ್ವತಂತ್ರ  ಉಸ್ತುವಾರಿ) ಮತ್ತು ಪ್ರಧಾನ ಮಂತ್ರಿ ಕಚೇರಿಯ ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಇಲಾಖೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, "ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಪಾತ್ರ ಇನ್ನು ಮುಂದೆ ಲಾಂಚ್ ಪ್ಯಾಡ್ ಗೆ ಮಾತ್ರಸೀಮಿತವಾಗಿಲ್ಲ. ನಾವು ಈಗ ಬಾಹ್ಯಾಕಾಶದಲ್ಲಿ ಜೀವನ ಮತ್ತು ವಿಜ್ಞಾನದ ಭವಿಷ್ಯವನ್ನು ರೂಪಿಸುತ್ತಿದ್ದೇವೆ" ಎಂದು ಹೇಳಿದರು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತದ ವೈಜ್ಞಾನಿಕ ಕನಸುಗಳನ್ನು ಸೂಕ್ಷ್ಮ ಗುರುತ್ವಾಕರ್ಷಣೆಯ ಗಡಿಗಳಿಗೆ ಕೊಂಡೊಯ್ಯುತ್ತಾರೆ ಎಂದು ಅವರು ಹೇಳಿದರು.

ಭಾರತದ ಪ್ರಬಲ ವೈಜ್ಞಾನಿಕ ಕೊಡುಗೆಯನ್ನು ಎತ್ತಿ ತೋರಿಸುತ್ತಾ, ಡಾ. ಜಿತೇಂದ್ರ ಸಿಂಗ್ ಅವರು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಏಳು ಸಂಪೂರ್ಣ ಸ್ಥಳೀಯ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ಐ.ಎಸ್.ಎಸ್.ನಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ನಿರ್ವಹಿಸಲಿದ್ದಾರೆ ಎಂದು ಘೋಷಿಸಿದರು.

"ಬಾಹ್ಯಾಕಾಶ ಮೂಲದ ಈ ಪ್ರಯೋಗಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಮತ್ತು ವಿಶ್ವಬಂಧು ಭಾರತದ ದೃಷ್ಟಿಕೋನದ ಜೀವಂತ ಸಂಕೇತವಾಗಿದೆ" ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.  ಸಂಪಾದಿಸಿದ ಜ್ಞಾನವು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯ ಮತ್ತು ಮಾನವೀಯತೆಗೆ ಉಡುಗೊರೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.

ಮೊದಲ ಪ್ರಯೋಗವು ಐ.ಸಿ.ಜಿ.ಇ.ಬಿ ಮತ್ತು ಬಿ.ಆರ್.ಐ.ಸಿ-ಎನ್.ಐ.ಪಿ.ಜಿ.ಆರ್ ನವದೆಹಲಿಯ ನೇತೃತ್ವದಲ್ಲಿ ಖಾದ್ಯ ಸೂಕ್ಷ್ಮ ಪಾಚಿಗಳ ಅಧ್ಯಯನವನ್ನು ಒಳಗೊಂಡಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಈ ಯೋಜನೆಯು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮೂರು ಆಯ್ದ ವಿಧದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆ ಮತ್ತು ಚಯಾಪಚಯ ಕ್ರಿಯೆಯನ್ನು ಗಮನಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಅಧ್ಯಯನದ ಫಲಿತಾಂಶಗಳು ಸಿಬ್ಬಂದಿ ಪೋಷಣೆಯನ್ನು ಹೆಚ್ಚಿಸಲು, ತ್ಯಾಜ್ಯನೀರಿನ ಮರುಬಳಕೆಯನ್ನು ಸಕ್ರಿಯಗೊಳಿಸಲು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಆಮ್ಲಜನಕವಾಗಿ ಪರಿವರ್ತಿಸಲು ಸಹಾಯ ಮಾಡುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿವೆ, ಇವೆಲ್ಲವೂ ದೀರ್ಘಕಾಲೀನ ಬಾಹ್ಯಾಕಾಶ ವಾಸಕ್ಕೆ ಮಹತ್ವಪೂರ್ಣವಾಗಿವೆ. 

ಯು.ಎ.ಎಸ್. ಧಾರವಾಡ ಮತ್ತು ಐ.ಐ.ಟಿ. ಧಾರವಾಡ ನಡೆಸಿದ ಎರಡನೇ ಪ್ರಯೋಗವು ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ಮೊಳಕೆಯೊಡೆಯುವ ಬೀಜಗಳ, ನಿರ್ದಿಷ್ಟವಾಗಿ ಹೆಸರುಕಾಳು ಮತ್ತು ಮೆಂತ್ಯ ಬೀಜಗಳ ಮೊಳಕೆಯೊಡೆಯುವಿಕೆ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳನ್ನು ಪರಿಶೀಲಿಸುತ್ತದೆ. ಈ ಸಂಶೋಧನೆಗಳು ಗಗನಯಾತ್ರಿಗಳಿಗೆ ಪೌಷ್ಟಿಕ ಆಹಾರ ಪೂರಕಗಳ ಅಭಿವೃದ್ಧಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ಈ ಮೊಗ್ಗುಗಳ ಔಷಧೀಯ ಪ್ರಯೋಜನಗಳನ್ನು ಅನ್ವೇಷಿಸುತ್ತದೆ.

ಬೆಂಗಳೂರಿನ ಬ್ರಿಕ್-ಇನ್.ಸ್ಟೆಮ್ (BRIC-InStem) ಅಭಿವೃದ್ಧಿಪಡಿಸಿದ ಮೂರನೇ ಪ್ರಯೋಗವು ಬಾಹ್ಯಾಕಾಶದಲ್ಲಿ ಸ್ನಾಯು ನಷ್ಟದ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯು ಪುನರುತ್ಪಾದನೆಯನ್ನು ಅನುಕರಿಸುವ ಮೂಲಕ, ಸ್ನಾಯು ನಷ್ಟದ  ಹಿಂದಿನ ಜೈವಿಕ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗಗನಯಾತ್ರಿಗಳ ಆರೋಗ್ಯಕ್ಕೆ ಸಂಭಾವ್ಯ ಮಧ್ಯಸ್ಥಿಕೆಗಳನ್ನು ಗುರುತಿಸುವುದು ಅಧ್ಯಯನದ ಗುರಿಯಾಗಿದೆ. ಈ ಒಳನೋಟಗಳು ಭೂಮಿಯ ಮೇಲಿನ ಸ್ನಾಯು-ಸಂಬಂಧಿತ ಅಸ್ವಸ್ಥತೆಗಳಿಗೆ ಹೊಸ ಪುನರ್ವಸತಿ ಚಿಕಿತ್ಸೆಗಳಿಗೆ ಕಾರಣವಾಗಬಹುದು.

ನಾಲ್ಕನೇ ಪ್ರಯೋಗದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ) ಬೆಂಗಳೂರಿನ ಸಂಶೋಧಕರು ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ಸುಪರಿಚಿತವಾದ ಸ್ಥಿತಿಸ್ಥಾಪಕ ಸೂಕ್ಷ್ಮ ಜೀವಿಗಳಾದ ಟಾರ್ಡಿಗ್ರೇಡ್ ಗಳ ಬದುಕುಳಿಯುವಿಕೆ, ಪುನರುಜ್ಜೀವನ ಮತ್ತು ಸಂತಾನೋತ್ಪತ್ತಿಯನ್ನು ಪರಿಶೀಲಿಸುತ್ತಾರೆ. ಈ ಅಧ್ಯಯನವು ಬಾಹ್ಯಾಕಾಶದಲ್ಲಿ ಮತ್ತು ಸಂಭಾವ್ಯವಾಗಿ ಭೂಮಿಯ ಮೇಲಿನ ತೀವ್ರ ಪರಿಸರಗಳಲ್ಲಿ ಮಾನವ ಹೊಂದಾಣಿಕೆ ಮತ್ತು ಬದುಕುಳಿಯುವ ತಂತ್ರಗಳ ಕುರಿತು ಮೌಲ್ಯಯುತವಾದ  ದತ್ತಾಂಶವನ್ನು  ನೀಡಲು ಸಜ್ಜಾಗಿದೆ.

ಐದನೇ ಪ್ರಯೋಗವು, ಇದೂ ಕೂಡ ಬೆಂಗಳೂರಿನ ಐ.ಐ.ಎಸ್.ಸಿ.ಯದು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮಾನವರು ಮತ್ತು ಎಲೆಕ್ಟ್ರಾನಿಕ್ ಪ್ರದರ್ಶನಗಳ ನಡುವಿನ ಪರಸ್ಪರ ಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತದೆ. ಬಾಹ್ಯಾಕಾಶದಲ್ಲಿ ಡಿಜಿಟಲ್ ಇಂಟರ್ಫೇಸ್ ಗಳನ್ನು ಗಗನಯಾತ್ರಿಗಳು ಹೇಗೆ ಗ್ರಹಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎನ್ನುವುದನ್ನು ಅರಿಯುವುದು ಇದರ   ಗುರಿಯಾಗಿದ್ದು, ಇದು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಬಾಹ್ಯಾಕಾಶ ನೌಕೆ ನಿಯಂತ್ರಣ ವ್ಯವಸ್ಥೆಗಳು ಮತ್ತು ಸಿಬ್ಬಂದಿ ಕನ್ಸೋಲ್ಗಳ ವಿನ್ಯಾಸವನ್ನು ತಿಳಿಸುತ್ತದೆ.

ಆರನೇ ಪ್ರಯೋಗದಲ್ಲಿ, ನವದೆಹಲಿಯ ಐ.ಸಿ.ಜಿ.ಇ.ಬಿ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಯೂರಿಯಾವನ್ನು ಸಾರಜನಕ ಮೂಲವಾಗಿ ಬಳಸಿಕೊಂಡು ಸೈನೋಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಅನ್ವೇಷಿಸುತ್ತದೆ. ಈ ಸಂಶೋಧನೆಗಳು ಬಾಹ್ಯಾಕಾಶದಲ್ಲಿ ಇಂಗಾಲ ಮತ್ತು ಸಾರಜನಕ ಮರುಬಳಕೆಗಾಗಿ ಸುಸ್ಥಿರ ವ್ಯವಸ್ಥೆಗಳ ಅಭಿವೃದ್ಧಿಯನ್ನು ಬೆಂಬಲಿಸಬಹುದು ಮತ್ತು ದೀರ್ಘಾವಧಿಯ ಕಾರ್ಯಾಚರಣೆಗಳಿಗೆ ಸೂಪರ್ ಫುಡ್ ಆಗಿ ಸೈನೋಬ್ಯಾಕ್ಟೀರಿಯಾದ ಸಾಮರ್ಥ್ಯವನ್ನು ಮುಖ್ಯವಾಗಿ ತೋರಿಸಬಹುದು.

ಕಡೆಯದಾಗಿ, ಏಳನೇ ಪ್ರಯೋಗವು ಬೀಜ ಚೇತರಿಕೆಯ  ಪ್ರಯೋಗಗಳು, ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಡ್ಡಿಕೊಂಡ ಅಕ್ಕಿ, ಗೋವಿನ ಜೋಳ, ಎಳ್ಳು, ಬದನೆಕಾಯಿ ಮತ್ತು ಟೊಮೆಟೊ ಬೀಜಗಳನ್ನು ಪರೀಕ್ಷಿಸುವುದನ್ನು ಒಳಗೊಂಡಿರುತ್ತದೆ. ಬಾಹ್ಯಾಕಾಶ ಕೃಷಿಯನ್ನು ಮುನ್ನಡೆಸುವ ಮತ್ತು ಭೂಮಿಯ ಮೇಲೆ ಹಾಗು ಅದರಾಚೆಗೆ  ಕೃಷಿಗೆ ಸೂಕ್ತವಾದ ಹವಾಮಾನ-ಸ್ಥಿತಿಸ್ಥಾಪಕ ಸಸ್ಯ ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಬೀಜಗಳ ಮೇಲೆ ಬಾಹ್ಯಾಕಾಶ ಪರಿಸ್ಥಿತಿಗಳ ಪ್ರಭಾವವನ್ನು ನಿರ್ಣಯಿಸುವುದು ಉದ್ದೇಶವಾಗಿದೆ  

ಈ ಪ್ರಥಮಾನ್ವೇಷಕ  ಪ್ರಯತ್ನಗಳು ಬಾಹ್ಯಾಕಾಶ ಜೈವಿಕ ವಿಜ್ಞಾನದಲ್ಲಿ ಜಾಗತಿಕ ನಾಯಕನಾಗಿ ಭಾರತದ ಹೊರಹೊಮ್ಮುವಿಕೆಯನ್ನು ಪ್ರತಿನಿಧಿಸುತ್ತವೆ ಎಂದು ಡಾ. ಜಿತೇಂದ್ರ ಸಿಂಗ್ ಒತ್ತಿ ಹೇಳಿದರು, ಇದು ಬಾಹ್ಯಾಕಾಶ ಪ್ರಯಾಣ ರಾಷ್ಟ್ರದಿಂದ ಬಾಹ್ಯಾಕಾಶ ವಿಜ್ಞಾನ ನಾವೀನ್ಯಕಾರನಾಗಿ ದೇಶದ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಪ್ರತಿಧ್ವನಿಸುತ್ತದೆ.

“ಭಾರತ ಇನ್ನು ಮುಂದೆ ಒಂದು ಅನುಯಾಯಿಯಲ್ಲ; ನಾವು ಗ್ರಹಗಳ ಪ್ರಸ್ತುತತೆಯ ಕಾರ್ಯಗಳನ್ನು ಮುನ್ನಡೆಸುತ್ತಿದ್ದೇವೆ. ಈ ಪ್ರಯೋಗಗಳು ಬಾಹ್ಯಾಕಾಶದಲ್ಲಿ ಸುಸ್ಥಿರ ಜೀವನ ಮತ್ತು ಭೂಮಿಯ ಮೇಲಿನ ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಗಳಿಗೆ ಹೊಸ ಗಡಿಗಳನ್ನು ತೆರೆಯುತ್ತವೆ” ಎಂದು ಅವರು ಹೇಳಿದರು.

 

*****


(Release ID: 2140641)