ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ʻಕೇಂದ್ರ ವಲಯ ಮಂಡಳಿʼಯ 25ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ʻವಲಯ ಮಂಡಳಿʼಗಳು ತಮ್ಮ ಸಲಹಾ ಪಾತ್ರವನ್ನು ಮೀರಿ ಮುಂದುವರಿದಿವೆ, ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಆರೋಗ್ಯಕರ ಬಂಧಗಳನ್ನು ಉತ್ತೇಜಿಸುವಲ್ಲಿ ಪ್ರಧಾನ ಪಾತ್ರ ವಹಿಸಿವೆ

ಬಲವಾದ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಬಲ್ಲವು ಎಂಬ ನಂಬಿಕೆಯೊಂದಿಗೆ, ಎರಡು ಅಥವಾ ಹೆಚ್ಚು ರಾಜ್ಯಗಳ ಮೇಲೆ ಪ್ರಭಾವ ಬೀರುವ  ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ರಚನಾತ್ಮಕ ಕಾರ್ಯವಿಧಾನ ಹಾಗೂ ಪ್ರಮುಖ ವೇದಿಕೆಯನ್ನು ʻವಲಯ ಮಂಡಳಿʼಗಳು ಒದಗಿಸುತ್ತವೆ

Posted On: 23 JUN 2025 2:49PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಜೂನ್ 24ರ ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ `ಕೇಂದ್ರ ವಲಯ ಮಂಡಳಿ’ಯ 25ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸದಸ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿ ರಾಜ್ಯದ ಇಬ್ಬರು ಹಿರಿಯ ಸಚಿವರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ʻಕೇಂದ್ರ ವಲಯ ಮಂಡಳಿʼಯು ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಅಂತರ-ರಾಜ್ಯ ಮಂಡಳಿ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಸಭೆಯನ್ನು ಆಯೋಜಿಸಿದೆ.

ʻರಾಜ್ಯಗಳ ಪುನರ್‌ಸಂಘಟನೆ ಕಾಯ್ದೆ-1956ʼರ ಸೆಕ್ಷನ್ 15 ರಿಂದ 22ರ ಅಡಿಯಲ್ಲಿ, ಐದು ವಲಯ ಮಂಡಳಿಗಳನ್ನು ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವರು ಐದು ವಲಯ ಮಂಡಳಿಗಳ ಅಧ್ಯಕ್ಷರಾಗಿದ್ದಾರೆ. ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು / ಲೆಫ್ಟಿನೆಂಟ್ ಗವರ್ನರ್ಗಳು / ಆಡಳಿತಗಾರರು ಇದರ ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ, ಒಂದು ಸದಸ್ಯ ರಾಜ್ಯದ ಮುಖ್ಯಮಂತ್ರಿ (ಪ್ರತಿ ವರ್ಷ ಆವರ್ತನೆ) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಸದಸ್ಯ ರಾಜ್ಯದಿಂದ, ರಾಜ್ಯಪಾಲರು ಇಬ್ಬರು ಮಂತ್ರಿಗಳನ್ನು ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ. ಪ್ರತಿ ʻವಲಯ ಮಂಡಳಿʼಯು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಶಾಶ್ವತ ಸಮಿತಿಯನ್ನು ರಚಿಸಿದೆ. ರಾಜ್ಯಗಳು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಮೊದಲಿಗೆ ಚರ್ಚೆಗಾಗಿ ಸಂಬಂಧಪಟ್ಟ ವಲಯ ಮಂಡಳಿಯ ಶಾಶ್ವತ ಸಮಿತಿಯ ಮುಂದಿಡಲಾಗುತ್ತದೆ. ಶಾಶ್ವತ ಸಮಿತಿಯ ಪರಿಶೀಲನೆಯ ನಂತರ, ಉಳಿದ ಸಮಸ್ಯೆಗಳನ್ನು ಹೆಚ್ಚಿನ ಚರ್ಚೆಗಾಗಿ ವಲಯ ಮಂಡಳಿ ಸಭೆಯ ಮುಂದಿಡಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಬಲವಾದ ರಾಜ್ಯಗಳು ಬಲವಾದ ರಾಷ್ಟ್ರವನ್ನು ನಿರ್ಮಿಸಬಲ್ಲವು ಎಂಬ ನಂಬಿಕೆಯೊಂದಿಗೆ, ʻವಲಯ ಮಂಡಳಿʼಗಳು ಎರಡು ಅಥವಾ ಹೆಚ್ಚು ರಾಜ್ಯಗಳ ಮೇಲೆ ಪರಿಣಾಮ ಬೀರುವ ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ರಚನಾತ್ಮಕ ಕಾರ್ಯವಿಧಾನವನ್ನು ಒದಗಿಸುತ್ತವೆ.  ಈ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.

ʻವಲಯ ಮಂಡಳಿʼಗಳು ಸಲಹೆದಾರನ ಪಾತ್ರವನ್ನು ವಹಿಸುತ್ತದೆ; ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಈ ಮಂಡಳಿಗಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಆರೋಗ್ಯಕರ ಬಂಧಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಕಾಣಬಹುದು. ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ, ಕಳೆದ ಹನ್ನೊಂದು ವರ್ಷಗಳಲ್ಲಿ ವಿವಿಧ ವಲಯ ಮಂಡಳಿಗಳು ಮತ್ತು ಅವುಗಳ ಶಾಶ್ವತ ಸಮಿತಿಗಳ ಒಟ್ಟು 61 ಸಭೆಗಳು ನಡೆದಿವೆ.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಪ್ರಕರಣಗಳ ತ್ವರಿತ ತನಿಖೆ ಮತ್ತು ಅವುಗಳ ತ್ವರಿತ ವಿಲೇವಾರಿಗಾಗಿ ತ್ವರಿತ ವಿಶೇಷ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಅನುಷ್ಠಾನ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ವಿಶಾಲ ವಿಷಯಗಳ ಬಗ್ಗೆಯೂ ವಲಯ ಮಂಡಳಿಗಳು ಚರ್ಚಿಸುತ್ತವೆ. ಪ್ರತಿ ಹಳ್ಳಿಯ ಗೊತ್ತುಪಡಿಸಿದ ಪ್ರದೇಶದಲ್ಲಿ ಶಾಶ್ವತ ಬ್ಯಾಂಕಿಂಗ್ ಶಾಖೆಯ ಸೌಲಭ್ಯಗಳನ್ನು ಒದಗಿಸುವುದು; ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ಇಆರ್‌ಎಸ್ಎಸ್ -112) ಅನುಷ್ಠಾನ; ಪೌಷ್ಠಿಕಾಂಶ, ಶಿಕ್ಷಣ, ಆರೋಗ್ಯ, ವಿದ್ಯುತ್, ನಗರ ಯೋಜನೆ ಮತ್ತು ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವಂತಹ ವಿವಿಧ ಪ್ರಾದೇಶಿಕ ಮಟ್ಟದ ಸಾಮಾನ್ಯ ಹಿತಾಸಕ್ತಿಯ ವಿಷಯಗಳೂ ಸಹ ಚರ್ಚೆಯ ಅಂಶಗಳಲ್ಲಿ ಸೇರಿವೆ.

 

*****


(Release ID: 2138928)