ಸಂಪುಟ
azadi ka amrit mahotsav

ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಉನ್ನತೀಕರಣಕ್ಕೆ ರಾಷ್ಟ್ರೀಯ ಯೋಜನೆ ಮತ್ತು ಕೌಶಲ್ಯಕ್ಕಾಗಿ ಐದು ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 07 MAY 2025 12:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ವೃತ್ತಿಪರ ಶಿಕ್ಷಣವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಮೇಲ್ದರ್ಜೆಗೇರಿಸುವ ರಾಷ್ಟ್ರೀಯ ಯೋಜನೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಕೌಶಲಕ್ಕಾಗಿ ಐದು (5) ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.

2024-25 ಮತ್ತು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿರುವ  60,000 ಕೋಟಿ ರೂ.ಗಳ (ಕೇಂದ್ರ ಪಾಲು: 30,000 ಕೋಟಿ ರೂ., ರಾಜ್ಯ ಪಾಲು 20,000 ಕೋಟಿ ರೂ. ಮತ್ತು ಕೈಗಾರಿಕಾ ಪಾಲು 10,000 ಕೋಟಿ ರೂ.ಗಳ) ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.) ಮೇಲ್ದರ್ಜೆಗೆ ಏರಿಸುವ ಮತ್ತು ಕೌಶಲ್ಯಕ್ಕಾಗಿ ಐದು (5) ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು (ಎನ್‌ಸಿಒಇ) ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು. ಇದರಲ್ಲಿ ಕೇಂದ್ರದ ಪಾಲನ್ನು 50% ವರೆಗೆ  ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಗಳು ಸಮಾನವಾಗಿ ಭರಿಸಲಿವೆ.  

ಈ ಯೋಜನೆಯು 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಉದ್ಯಮಕ್ಕೆ ಹೊಂದಿಕೆಯಾಗುವ ಪರಿಷ್ಕೃತ ಟ್ರೇಡ್ ಗಳು (ಕೋರ್ಸ್ ಗಳು) ಮತ್ತು ಐದು (5) ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳ (ಎನ್‌ಎಸ್‌ಟಿಐ) ಸಾಮರ್ಥ್ಯವನ್ನು ಹೆಚ್ಚಿಸಲು ಗಮನ ಹರಿಸುತ್ತದೆ.

ಈ ಯೋಜನೆಯು ಅಸ್ತಿತ್ವದಲ್ಲಿರುವ ಐಟಿಐಗಳನ್ನು ರಾಜ್ಯ ಸರ್ಕಾರಗಳು ಮತ್ತು ಉದ್ಯಮದ ಸಹಯೋಗದೊಂದಿಗೆ ಸರ್ಕಾರಿ ಸ್ವಾಮ್ಯದ, ಉದ್ಯಮ-ನಿರ್ವಹಿಸುವ ಮಹತ್ವಾಕಾಂಕ್ಷೆಯ ಕೌಶಲ್ಯ ಸಂಸ್ಥೆಗಳಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಐದು ವರ್ಷಗಳ ಅವಧಿಯಲ್ಲಿ, ಕೈಗಾರಿಕೆಗಳ ಮಾನವ ಬಂಡವಾಳದ ಅಗತ್ಯಗಳನ್ನು ಪೂರೈಸುವ ಕೋರ್ಸ್ ಗಳ ಮೂಲಕ 20 ಲಕ್ಷ ಯುವಜನರಿಗೆ ಕೌಶಲ್ಯ ನೀಡಲಾಗುವುದು. ಈ ಯೋಜನೆಯು ಸ್ಥಳೀಯ ಕಾರ್ಮಿಕರ ಪೂರೈಕೆ ಮತ್ತು ಉದ್ಯಮದ ಬೇಡಿಕೆಯ ನಡುವೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಗಮನ ಹರಿಸುತ್ತದೆ, ಆ ಮೂಲಕ ಎಂಎಸ್ಎಂಇಗಳು ಸೇರಿದಂತೆ ಕೈಗಾರಿಕೆಗಳಿಗೆ ಉದ್ಯೋಗ-ಸಿದ್ಧ ಕಾರ್ಮಿಕರು  ಲಭ್ಯವಾಗುವಂತೆ   ಮಾಡುತ್ತದೆ.

ಈ ಹಿಂದೆ ವಿವಿಧ ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಹಣಕಾಸಿನ ನೆರವು ಐಟಿಐಗಳ ಸಂಪೂರ್ಣ ಉನ್ನತೀಕರಣ ಅಗತ್ಯಗಳನ್ನು ಪೂರೈಸಲು, ವಿಶೇಷವಾಗಿ ಮೂಲಸೌಕರ್ಯ ನಿರ್ವಹಣೆ, ಸಾಮರ್ಥ್ಯ ವಿಸ್ತರಣೆ ಮತ್ತು ಹೆಚ್ಚು ಬಂಡವಾಳ-ಅವಶ್ಯಕವಾದ, ಹೊಸ-ಯುಗದ ಕೋರ್ಸ್ ಗಳನ್ನು ಪರಿಚಯಿಸಲು ಹೆಚ್ಚುತ್ತಿರುವ ಹೂಡಿಕೆ ಅಗತ್ಯಗಳನ್ನು ಪೂರೈಸಲು ಸಾಲುವಂತಿರಲಿಲ್ಲ. ಇದನ್ನು ನಿವಾರಿಸಲು, ಉದ್ದೇಶಿತ ಯೋಜನೆಯಡಿ ಅವಶ್ಯಕತೆ ಆಧಾರಿತ ಹೂಡಿಕೆ ನಿಬಂಧನೆಯನ್ನು ಅಳವಡಿಸಲಾಗಿದೆ, ಪ್ರತಿ ಸಂಸ್ಥೆಯ ನಿರ್ದಿಷ್ಟ ಮೂಲಸೌಕರ್ಯ, ಸಾಮರ್ಥ್ಯ ಮತ್ತು ಕೋರ್ಸ್  ಸಂಬಂಧಿತ ಅವಶ್ಯಕತೆಗಳ ಆಧಾರದ ಮೇಲೆ ನಿಧಿ ಹಂಚಿಕೆಯಲ್ಲಿ ಸ್ಥಿತಿಸ್ಥಾಪಕತ್ವವನ್ನು/ನಮ್ಯತೆಯನ್ನು ಇದು ಅನುಮತಿಸುತ್ತದೆ. ಮೊದಲ ಬಾರಿಗೆ, ಈ ಯೋಜನೆಯು ಐಟಿಐ ಉನ್ನತೀಕರಣದ ಯೋಜನೆ ಮತ್ತು ನಿರ್ವಹಣೆಯಲ್ಲಿ ಆಳವಾದ ಉದ್ಯಮ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ. ಈ ಯೋಜನೆಯು ಫಲಿತಾಂಶ-ಚಾಲಿತ ಅನುಷ್ಠಾನ ಕಾರ್ಯತಂತ್ರಕ್ಕಾಗಿ ಉದ್ಯಮ ನೇತೃತ್ವದ ವಿಶೇಷ ಉದ್ದೇಶದ ವಾಹಕ (ಎಸ್ ಪಿ ವಿ) ಮಾದರಿಯನ್ನು ಅಳವಡಿಸಿಕೊಳ್ಳುತ್ತದೆ, ಇದು ಐಟಿಐ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಹಿಂದಿನ ಪ್ರಯತ್ನಗಳಿಗಿಂತ ಭಿನ್ನವಾಗಿದೆ.

ಈ ಯೋಜನೆಯಡಿ, ಐದು ರಾಷ್ಟ್ರೀಯ ಕೌಶಲ್ಯಗಳಲ್ಲಿ ತರಬೇತುದಾರರ (ToT) ಸುಧಾರಿತ ತರಬೇತಿ ಸೌಲಭ್ಯಗಳಿಗಾಗಿ ಮೂಲಸೌಕರ್ಯ ಉನ್ನತೀಕರಣವನ್ನು ಕೈಗೊಳ್ಳಲಾಗುವುದು. ಆ ತರಬೇತಿ ಸಂಸ್ಥೆಗಳು (ಎನ್‌ಎಸ್‌ಟಿಐ ಗಳು), ಯಾವುವೆಂದರೆ- ಭುವನೇಶ್ವರ, ಚೆನ್ನೈ, ಹೈದರಾಬಾದ್, ಕಾನ್ಪುರ ಮತ್ತು ಲುಧಿಯಾನ. ಹೆಚ್ಚುವರಿಯಾಗಿ, 50,000 ತರಬೇತುದಾರರಿಗೆ ಸೇವಾಪೂರ್ವ ಮತ್ತು ಸೇವಾ ಅವಧಿಯಲ್ಲಿ ತರಬೇತಿ ನೀಡಲಾಗುವುದು.

ಮೂಲಸೌಕರ್ಯ, ಕೋರ್ಸ್ ಪ್ರಸ್ತುತತೆ, ಉದ್ಯೋಗಾರ್ಹತೆ ಮತ್ತು ವೃತ್ತಿಪರ ತರಬೇತಿಯ ಗ್ರಹಿಕೆಯಲ್ಲಿ ದೀರ್ಘಕಾಲದ ಸವಾಲುಗಳನ್ನು ಎದುರಿಸುವ ಮೂಲಕ, ಈ ಯೋಜನೆಯು ನುರಿತ ಮಾನವಶಕ್ತಿಯ ಅಗತ್ಯವನ್ನು ಪೂರೈಸಲು ಐಟಿಐಗಳನ್ನು ಮುಂಚೂಣಿಯಲ್ಲಿರಿಸುವ ಗುರಿಯನ್ನು ಹೊಂದಿದೆ, ಇದು ಜಾಗತಿಕ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗುವ ರಾಷ್ಟ್ರದ ಪ್ರಯಾಣಕ್ಕೆ ಅನುಗುಣವಾಗಿದೆ. ಇದು ಉದ್ಯಮದ ಬೇಡಿಕೆಗೆ ಅನುಗುಣವಾಗಿ ನುರಿತ ಕಾರ್ಮಿಕರ ಸಮೂಹವನ್ನು ರಚಿಸುತ್ತದೆ, ಆ ಮೂಲಕ ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಮತ್ತು ನವೀಕರಿಸಬಹುದಾದ ಇಂಧನದಂತಹ ಹೆಚ್ಚಿನ ಬೆಳವಣಿಗೆಯ ಕ್ಷೇತ್ರಗಳಲ್ಲಿ ಕೌಶಲ್ಯದ ಕೊರತೆಯನ್ನು ಪರಿಹರಿಸುತ್ತದೆ. ಒಟ್ಟಾರೆಯಾಗಿ, ಪ್ರಸ್ತಾವಿತ ಯೋಜನೆಯು ಪ್ರಧಾನಮಂತ್ರಿಯವರ ವಿಕಸಿತ ಭಾರತ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ, ಪ್ರಸ್ತುತ ಮತ್ತು ಭವಿಷ್ಯದ ಉದ್ಯಮದ ಅಗತ್ಯಗಳನ್ನು ಪೂರೈಸಲು ಕೌಶಲ್ಯವು ಪ್ರಮುಖ ಶಕ್ತಿಯಾಗಿ ಒದಗಿ ಬರುತ್ತದೆ. 

ಹಿನ್ನೆಲೆ:

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದತ್ತ ತನ್ನ ಮಹತ್ವಾಕಾಂಕ್ಷೆಯ ಪ್ರಯಾಣವನ್ನು ಪ್ರಾರಂಭಿಸುತ್ತಿರುವುದರಿಂದ ವೃತ್ತಿಪರ ಶಿಕ್ಷಣ ಮತ್ತು ತರಬೇತಿಯು ಆರ್ಥಿಕ ಬೆಳವಣಿಗೆ ಮತ್ತು ಉತ್ಪಾದಕತೆಯ ಪ್ರಮುಖ ಚಾಲಕ ಶಕ್ತಿಯಾಗಬಹುದು. ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) 1950 ರ ದಶಕದಿಂದ ಭಾರತದಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ ಬೆನ್ನೆಲುಬಾಗಿದ್ದು, ರಾಜ್ಯ ಸರ್ಕಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಐಟಿಐ ನೆಟ್ವರ್ಕ್ 2014 ರಿಂದ ಸುಮಾರು 47% ರಷ್ಟು ವಿಸ್ತರಿಸಿದೆ, 14.40 ಲಕ್ಷ ದಾಖಲಾತಿಯೊಂದಿಗೆ 14,615 ಕ್ಕೆ ತಲುಪಿದೆ, ಐಟಿಐಗಳ ಮೂಲಕ ವೃತ್ತಿಪರ ತರಬೇತಿ ಹೆಚ್ಚಿನ  ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಮತ್ತು ಇದರಿಂದಾಗಿ ಅವುಗಳ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಹಾಗು ಅವುಗಳ ಘನತೆಯನ್ನು ಎತ್ತರಿಸುವಲ್ಲಿ ವ್ಯವಸ್ಥಿತ ಮಧ್ಯಸ್ಥಿಕೆಗಳ ಕೊರತೆಯಿಂದ ಬಳಲುತ್ತಿದೆ.

ಈ ಹಿಂದೆ ಐಟಿಐಗಳ ಉನ್ನತೀಕರಣವನ್ನು ಬೆಂಬಲಿಸುವ ಯೋಜನೆಗಳು ಇದ್ದರೂ, ಕೋರ್ಸ್ ವಿಷಯ ಮತ್ತು ಉದ್ಯಮಕ್ಕೆ ಹೊಂದಿಕೆಯಾಗುವ ವಿನ್ಯಾಸದೊಂದಿಗೆ ಐಟಿಐ ಮರು-ಕಲ್ಪನೆಗಾಗಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಮೂಲಕ ಕಳೆದ ದಶಕದಿಂದ ಹೆಚ್ಚುತ್ತಿರುವ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸಲು ಇದು ಸಕಾಲ ಯಾಕೆಂದರೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಕೌಶಲ್ಯಯುಕ್ತ ಕಾರ್ಮಿಕ ಪಡೆ ಒಂದು ಪ್ರಮುಖ ಸಾಧನ.

 

*****


(Release ID: 2127480)