ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನೆರವು/ದಾನದ ತಂತ್ರಗಾರಿಕಾ ಬಳಕೆಯ ಮೂಲಕ ಫಲಾನುಭವಿಯ ನಂಬಿಕೆಯ ಮೇಲೆ ಪ್ರಭಾವ ಬೀರುವಿಕೆಯು ಪ್ರಜಾಪ್ರಭುತ್ವದಲ್ಲಿ ಗಂಭೀರ ಪರಿಣಾಮ ಉಂಟು ಮಾಡಬಲ್ಲದು – ಉಪರಾಷ್ಟ್ರಪತಿ ಜಗದೀಪ್ ಧನಕರ್


ನಿರ್ಗತಿಕರಿಗೆ, ದುರ್ಬಲರಿಗೆ ಮತ್ತು ಅಶಕ್ತರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೆರವು ನೀಡಬೇಕು – ಉಪರಾಷ್ಟ್ರಪತಿ 

ನಂಬಿಕೆಯ ಸ್ವಾತಂತ್ರ್ಯವನ್ನು ಸೆರೆಯಾಗಿಸುವ ನೆರವು ಕಳವಳಕಾರಿ ಸಂಗತಿ - ಉಪರಾಷ್ಟ್ರಪತಿ 

ಭಾರತದ 5,000 ವರ್ಷಗಳ ಒಳಗೊಳ್ಳುವಿಕೆಯ ತತ್ವಶಾಸ್ತ್ರಕ್ಕೆ ಯಾವುದೇ ಪಾಠಗಳ ಅಗತ್ಯವಿಲ್ಲ ಎಂಬುದು ಉಪರಾಷ್ಟ್ರಪತಿಗಳ ಅಭಿಮತ 

ಕರ್ನಾಟಕದ ಮಂಡ್ಯದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದಲ್ಲಿ ಇಂದು ಉಪಾಧ್ಯಕ್ಷರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

Posted On: 25 OCT 2024 6:50PM by PIB Bengaluru

ಸಹಾಯ/ ದಾನದ ತಂತ್ರಗಾರಿಕಾ ಬಳಕೆಯು ಫಲಾನುಭವಿಯ ನಂಬಿಕೆಯ ಮೇಲೆ ಪ್ರಭಾವ ಬೀರಬಲ್ಲದಾಗಿದ್ದು ಪ್ರಜಾಪ್ರಭುತ್ವದಲ್ಲಿ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಹೇಳಿದ್ದಾರೆ. ಅಗತ್ಯವಿರುವವರಿಗೆ, ದುರ್ಬಲರಿಗೆ ಮತ್ತು ಅಶಕ್ತರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೇ ಸಹಾಯ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. 

ಭಾರತದ ನಾಗರಿಕತೆಯ ನೀತಿಯ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಅವರು, ದಾನ, ಸಹಾಯ ಅಥವಾ ಅಂತಹ ಯಾವುದೇ ನೆರವಿನ ಹಸ್ತವು ಯಾವುದೇ ಫಲಾಪೇಕ್ಷೆಯನ್ನು ಹೊಂದಿರಬಾರದು. ನಮ್ಮ ನಾಗರಿಕತೆಯ ನೀತಿಯು ಎಂದಿಗೂ ದಾನ ಮಾಡಿದ ಬಗ್ಗೆ ಹೇಳಿಕೊಳ್ಳಬಾರದು ಎಂದು ತಿಳಿಸುತ್ತದೆ. ದಾನಕ್ಕೆ ಎಂದಿಗೂ ಹೆಸರಿಸುವ ಹಕ್ಕಿಲ್ಲ. ಸಹಾಯ ಅಥವಾ ದಾನ ಮಾಡಿದ ನಂತರ ಅದನ್ನು ಮರೆತುಬಿಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಮಂಡ್ಯದಲ್ಲಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಂಬಿಕೆಯ ಸ್ವಾತಂತ್ರ್ಯವನ್ನು ಸೆರೆಯಾಗಿಸುವ ನೆರವು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು. ನಿರ್ಗತಿಕರು, ಅಶಕ್ತರು, ದುರ್ಬಲರ ನಂಬಿಕೆಯ ಮೇಲೆ ಪ್ರಭಾವ ಬೀರಿದಾಗ, ಅದು ನಿರ್ಣಾಯಕವಾಗುತ್ತವೆ. ಅಂತಹ ನಡೆಯು ರಾಷ್ಟ್ರೀಯತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಮುನ್ನೆಚ್ಚರಿಕೆ ನೀಡಿದರು.

ಭಾರತವು ಒಂದು ರಾಷ್ಟ್ರವಾಗಿ ಭೂಮಿಯ ಮೇಲಿನ ಯಾರಿಗಾದರೂ ಮತ್ತು ಪ್ರತಿಯೊಬ್ಬರಿಗೂ ಒಳಗೊಳ್ಳುವಿಕೆಯ ಬಗ್ಗೆ ಮಾರ್ಗದರ್ಶನ ನೀಡಬಲ್ಲದು ಎಂದು ಉಪರಾಷ್ಟ್ರಪತಿ ಒತ್ತಿ ಹೇಳಿದರು. ನಿಶ್ಚಯವಾಗಿಯೂ, ನಾವು 5,000 ವರ್ಷಗಳಿಗಿಂತ ಹೆಚ್ಚು ಕಾಲ ಜೀವಿಸಿರುವುದರಲ್ಲಿ ಪಾಠದ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಈ ತತ್ತ್ವಶಾಸ್ತ್ರವೊಂದೇ ಸ್ಥಿರವಾಗಿದೆ ಹಾಗೂ ಜಾಗತಿಕ ಶಾಂತಿ ಮತ್ತು ಸೌಹಾರ್ದತೆಯನ್ನು ತರಬಲ್ಲದಾಗಿದೆ. ಆದರೆ ಕೆಲವರು ವಿನಾಶಕಾರಿಯಾದ ಒಳಗೊಳ್ಳುವಿಕೆಯ ವಿಭಿನ್ನ ಪರಿಕಲ್ಪನೆಯನ್ನು ಹೊಂದಿದ್ದಾರೆ. ನಾವು ಅತ್ಯಂತ ಎಚ್ಚರಿಕೆಯಿಂದಿರಬೇಕು ಮತ್ತು ಜಾಗರೂಕರಾಗಿರಬೇಕು ಎಂದು ಅವರು ತಿಳಿಸಿದರು.

ಪ್ರಪಂಚದಾದ್ಯಂತ 26 ಶಾಖಾ ಮಠಗಳು ಮತ್ತು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ದೃಷ್ಟಿಮಾಂದ್ಯ, ಶ್ರವಣಮಾಂದ್ಯ ಮತ್ತು ಮೂಕ ಶಾಲೆಗಳು ಸೇರಿದಂತೆ 500 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯ ಸೇವೆಯು ದುರ್ಬಲ ವರ್ಗದವರಿಗೆ ಅನನ್ಯವಾಗಿದೆ. ವಾಸ್ತವವಾಗಿ, ಇದು ಸನಾತನ ಧರ್ಮದ ಟೀಕಾಕಾರರಿಗೆ ತಕ್ಕ ಪ್ರತ್ಯುತ್ತರವನ್ನೂ ನೀಡಿದೆ ಎಂದು ಶ್ರೀ ಧನಕರ್ ಹೇಳಿದ್ದಾರೆ. 

ಬಿಕ್ಕಟ್ಟಿನ ಸಂದರ್ಭದಲ್ಲಿ ಧಾರ್ಮಿಕ ಸಂಸ್ಥೆಗಳ ಪಾತ್ರದ ಬಗ್ಗೆ ಉಪರಾಷ್ಟ್ರಪತಿಯವರು ಹೇಳಿದರು ಸಾಮಾಜಿಕ ವಲಯದಲ್ಲಿ, ನೈಸರ್ಗಿಕ ವಿಕೋಪಗಳು ಮತ್ತು ಅಂತಹ ಸಂಕಷ್ಟದ ಸಮಯದಲ್ಲಿ ಧಾರ್ಮಿಕ ಸಂಸ್ಥೆಗಳ ಹೆಜ್ಜೆಗುರುತುಗಳು ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ಇದಕ್ಕೆ ಇತ್ತೀಚಿನ ಕೋವಿಡ್ ಹೊರತಾಗಿ ಬೇರೆ ಯಾವುದೇ ಉಲ್ಲೇಖವನ್ನು ನೀಡುವ ಅಗತ್ಯವಿಲ್ಲ. ಕೋವಿಡ್ ಸಮಯದಲ್ಲಿ ಇದು ಸಂಪೂರ್ಣವಾಗಿ ಅಭಿವ್ಯಕ್ತಗೊಂಡಿದೆ. ಸರ್ಕಾರ ಮತ್ತು ಇಂತಹ ಸಂಸ್ಥೆಗಳು ಎರಡೂ ಜನರ ಒಳಿತಿಗಾಗಿ ಕೈಜೋಡಿಸಿ ಕಾರ್ಯನಿರ್ವಹಿಸಿದವು ಎಂದು ಅವರು ವಿವರಿಸಿದರು. 

ಶ್ರೀ ಧನಕರ್ ಅವರು ಮಾತನಾಡುತ್ತಾ, “ನಾನು ಒಂದು ವಿಷಯವನ್ನು  ನಿಮಗೆ ಹೇಳಲೇಬೇಕು. ನಿಮ್ಮ ಅವಕಾಶಗಳ ಬುಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀವು ಏಕತಾನತೆಯಿಂದ ಹೊರಬರುವಿರಿ ಎಂದು ನಾನು ಆಶಿಸುತ್ತೇನೆ. ನಿಮ್ಮಲ್ಲಿ ಕೆಲವರು ಸರ್ಕಾರಿ ಸೇವೆಯೊಂದೇ ಮಾರ್ಗ ಎಂದು ಭಾವಿಸುವಿರಿ. ಇಲ್ಲ. ನಿಮ್ಮ ಸುತ್ತಲೂ ನೋಡಿ ಮತ್ತು ಭಾರತ ಉದಯಿಸುತ್ತಿರುವಂತೆ ನೀವು ಸಮುದ್ರ, ಭೂಮಿ, ಆಕಾಶ ಅಷ್ಟೇ ಏಕೆ ಬಾಹ್ಯಾಕಾಶದಲ್ಲೂ ಅವಕಾಶಗಳನ್ನು ಕಂಡುಕೊಳ್ಳಬಹುದಾಗಿದೆ” ಎಂದು ಕಿವಿಮಾತು ಹೇಳಿದರು. 

ತಪ್ಪು ಮಾಹಿತಿ, ಅಪಪ್ರಚಾರ ಪ್ರಸರಣದಲ್ಲಿ ವ್ಯಾಪಕವಾಗಿ ತೊಡಗಿಕೊಂಡಿರುವವರಿದ್ದು ಇದು ರಾಷ್ಟ್ರ ಹಿತಕ್ಕೆ ತೀವ್ರ ಅಪಾಯಕಾರಿಯಾಗಿದೆ ಎಂದು ಉಪರಾಷ್ಟ್ರಪತಿಗಳು ಯುವಜನರಿಗೆ ಎಚ್ಚರಿಕೆ ನೀಡಿದರು.

ಆದಿಚುಂಚನಗಿರಿ ಮಠದ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಆಧುನಿಕ ಕಾಲದ ಕಲಿಕಾಸಕ್ತರಿಗೆ, ದಾರ್ಶನಿಕರಿಗೆ ಮತ್ತು ಅನ್ವೇಷಕರಿಗೆ ಆದರ್ಶ ಅರಣ್ಯಕವಾಗಿ ಹಸಿರು ಭೂದೃಶ್ಯದ ತಪ್ಪಲಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿರುವುದು ನಿಜವಾಗಿಯೂ ದೂರದೃಷ್ಟಿಯ ಹೆಜ್ಜೆಯಾಗಿದ್ದು ಮಾನವ ಸಂಪನ್ಮೂಲ, ಪ್ರತಿಭೆ, ಶಕ್ತಿ ಮತ್ತು ಆಯ್ದ ಅನ್ವೇಷಣೆಗಳಿಗೆ ಇದು ತಾಣವಾಗಿದೆ ಎಂದರು.

ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ; ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ; ಪರಮ ಪೂಜ್ಯ ಜಗದ್ಗುರು ಸ್ವಾಮಿ ಪರಮಾತ್ಮಾನಂದ ಸರಸ್ವತಿ , ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎ. ಶೇಖರ್ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೂರ್ಣ ಪಠ್ಯವನ್ನು ಇಲ್ಲಿ ಓದಿhttps://pib.gov.in/PressReleasePage.aspx?PRID=2068185

 

*****




(Release ID: 2068321) Visitor Counter : 10


Read this release in: English , Urdu , Hindi